Thursday, December 31, 2009

ಶೃದ್ಧಾಂಜಲಿ

Photobucket

Photo Courtesy : http://www.daijiworld.com/ and http://www.caswath.com/

Animation created by Me.

Saturday, December 26, 2009

ಶಿಶಿರದ ಜೊತೆಯಲಿ ತ್ರೀ ಈಡಿಯಟ್ಸ್...


ಈ ಶುಕ್ರವಾರ ಮೂರು ಚಲನಚಿತ್ರ ನೋಡಿದೆ !

ಬೆಳಗಿನ ಶೋ ’ಶಿಶಿರ’.ಮ್ಯಾಟನಿ ಶೋ ’ಮಳೆಯಲಿ ಜೊತೆಯಲಿ’ ರಾತ್ರಿ ಶೋ ’ತ್ರೀ ಈಡಿಯಟ್ಸ್’!!!

’ಶಿಶಿರ’ ತುಂಬಾ ಉತ್ತಮ ಪ್ರಯತ್ನ.ಛಾಯಾಗ್ರಹಣ,ನಿರ್ದೇಶನ,ಸಂಗೀತ, ನಾಯಕ ಯಶಸ್ ನ ನಟನೆ ಎಲ್ಲವೂ ಚೆನ್ನಾಗಿತ್ತು.ಚಿತ್ರಕಥೆಯೊಂದನ್ನು ಬಿಟ್ಟು:( ಸಸ್ಪೆನ್ಸ್ ಚಿತ್ರಕ್ಕಿರಬೇಕಾದ ಕೆಲವು ಅಂಶಗಳು ಕಡಿಮೆ ಆಗಿದ್ದೇ ಎಡವಟ್ಟು.ನಿರ್ದೇಶಕರು ಮುಂದಿನ ಪ್ರಯತ್ನದಲ್ಲಿ ಖಂಡಿತ ಯಶಸ್ವಿಯಾಗ್ತಾರೆ ಅನ್ನೋ ಭರವಸೆ ನನಗಿದೆ.

ಬಹುನಿರೀಕ್ಷಿತ ’ತ್ರೀ ಈಡಿಯಟ್ಸ್ ’ ಮಾತ್ರ ನಿರೀಕ್ಷೆಗೆ ಮೀರಿ ಚೆನ್ನಾಗಿದೆ.ತುಂಬಾನೇ ಖುಷಿ ಕೊಟ್ಟಿತು ಇಡೀ ಚಿತ್ರ.ಒಂದೇ ಒಂದು ನಿಮಿಷ ಬೋರ್ ಹೊಡೆಸಿಲ್ಲ.ಅದ್ಭುತ ನಿರ್ದೇಶನ,ಅದ್ಭುತ ಕಥೆ,ಅದ್ಭುತ ಹಾಡುಗಳು ಹಾಗೆಯೇ ತುಂಬಾ ಒಳ್ಳೆಯ ಸಂದೇಶ.

ಬೊಮನ್ ಇರಾನಿ ಸಂಪೂರ್ಣ ವಿಭಿನ್ನವಾಗಿ ನಟಿಸಿದ್ದಾರೆ.ಬಾಡಿ ಲ್ಯಾಂಗ್ವೇಜ್ ಆಗಲಿ,ಡೈಲಾಗ್ ಡೆಲಿವರಿಯಾಗಲಿ ಎಲ್ಲವೂ ಸೂಪರ್! ಬೊಮನ್ ರ ನಟನೆ ’ಮುನ್ನಾಭಾಯಿಯ’ ಥರದ್ದೇ ಇರಬಹುದೇನೊ ಅಂದುಕೊಂಡವರಿಗೆ ದೊಡ್ಡ ಅಚ್ಚರಿ ಕೊಡ್ತಾರೆ ಅವರು.

ಚೇತನ್ ಭಗತ್ ರ ಕಾದಂಬರಿಯ ಎಳೆಯನ್ನಷ್ಟೇ ಹಿಡಿದು ಚಿತ್ರ ಮಾಡಿದರೂ ಕಾದಂಬರಿಯ ಆಶಯಕ್ಕೆ ಒಂದಿಷ್ಟೂ ಚ್ಯುತಿ ಬಂದಿಲ್ಲ ಬದಲಾಗಿ ಸರಿಯಾದ ನ್ಯಾಯ ದೊರಕಿದೆ.ಭಾರತದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಎಲ್ಲರೂ ಮತ್ತೊಮ್ಮೆ ಯೋಚಿಸುವಂತೆ ಮಾಡುತ್ತೆ ಈ ಚಿತ್ರ.

ಆಮೀರ್ ,ಶರ್ಮನ್ ಜೋಷಿ,ಮಾಧವನ್,ಬೊಮನ್,ಕರೀನಾ ಗೆ ಸರಿ ಸಾಟಿಯಾಗಿ ಓಮಿ ಅನ್ನೊ ನಟ ಅದ್ಭುತವಾಗಿ ನಟಿಸಿದ್ದಾನೆ.ಚಿತ್ರದುದ್ದಕ್ಕೂ ನಕ್ಕು ನಲಿಸುವ ಸಂಭಾಷಣೆಗಳು.

ಶಿಕ್ಷಣ ಬರೀ ಮಾರ್ಕ್ಸ್ ಗಳಿಸೋದಷ್ಟೇ ಕಲಿಸುತ್ತೆ ,ಬದುಕುವುದನ್ನಲ್ಲ!

Sunday, December 20, 2009

ತ್ರೀ ಈಡಿಯಟ್ಸ್...



Five Point Some One-What not to do at IIT ಇದು ಚೇತನ್ ಭಗತ್ ರ ಚೊಚ್ಚಲ ಕೃತಿ.ಇದರ ಕಥಾವಸ್ತು ದೇಶದಲ್ಲೇ ಅತ್ತ್ಯುತ್ತಮ ಇಂಜಿನಿಯರಿಂಗ್ ಕಾಲೇಜ್ ಅನಿಸಿಕೊಂಡಿರುವ ಐಐಟಿ ದಿಲ್ಲಿಯ ಮೂರು ಹುಡುಗರು.ಲೇಖಕರೇ ಹೇಳುವಂತೆ ಈ ಕೃತಿ ಐಐಟಿಗೆ ಯಾವ ರೀತಿ ಸೇರಬಹುದು ಅನ್ನೋದರ ಬಗ್ಗೆ ಖಂಡಿತ ಅಲ್ಲ.ಈ ಕೃತಿ ಆ ಮೂರು ಹುಡುಗರು ಐಐಟಿಯಲ್ಲಿ ತಮ್ಮ ಜೀವನದ ಪ್ರಮುಖ ಘಟ್ಟವೊಂದನ್ನು ದಾಟಲು ಯಾವ ರೀತಿ ಹೆಣಗಿದರು ,ನಮ್ಮ ದೇಶದ ಶೈಕ್ಷಣಿಕ ಪದ್ದತಿ ಯಾವ ರೀತಿ ವಿದ್ಯಾರ್ಥಿಗಳ ಜೀವನವನ್ನು ರೂಪಿಸುವುರಲ್ಲಿ ಎಡವುತ್ತಿದೆ ಅನ್ನೋದರ ಬಗ್ಗೆ ಬೆಳಕು ಚೆಲ್ಲುತ್ತದೆ.ಇಡೀ ಕಥಾವಸ್ತು ನವಿರಾದ ಹಾಸ್ಯವನ್ನೊಳಗೋಂಡಿರುವುದರಿಂದ ಯುವ ಜನರ ಮನಸ್ಸನ್ನು ಗೆಲ್ಲುವುದರಲ್ಲಿ ಯಶಸ್ವಿಯಾಗಿದೆ.ಐಐಟಿಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಮರ್ಥ್ಯವನ್ನು GPA ಗಳಲ್ಲಿ ಅಳೆಯುತ್ತಾರೆ .ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯ GPA ಒಂಭತ್ತು ಮತ್ತೆ ಹತ್ತರ ಮಧ್ಯೆ ಇರುತ್ತದೆ.ನಮ್ಮ ಕಥಾನಾಯಕರ GPA ಯಾವತ್ತೂ ಐದರ ಆಸು ಪಾಸಿರುವುದರಿಂದ ಅವರು ಐಐಟಿಗಳಲ್ಲಿ five pointers ಅನ್ನಿಸಿಕೊಳ್ಳುತ್ತಾರೆ.

ಐಐಟಿಗಳಿಗೆ ದಾಖಲಾಗುವ ಪ್ರತಿ ವಿದ್ಯಾರ್ಥಿಯೂ ಅತ್ಯಂತ ಪ್ರತಿಭಾವಂತರಾಗಿರುತ್ತಾನೆ.ಅದಾಗ್ಯೂ ಈ ವಿದ್ಯಾರ್ಥಿಗಳು ಅಷ್ಟು ಕಷ್ಟ ಪಡಲು ಕಾರಣವೇನು ಅನ್ನೋದೇ ಕಥೆಯ ತಿರುಳು.ಈ ಕಥೆ ಹರಿ ,ಆಲೋಕ್ ಹಾಗೂ ರಯಾನ್ ಒಬೆರಾಯ್ ಅನ್ನೋ ಮೂವರು ಹುಡುಗರ ಸುತ್ತಲೇ ಸುತ್ತುತ್ತದೆ.ಹರಿ ಈ ಕಥೆಯ ಸೂತ್ರಧಾರ,ನೋಡೋದಕ್ಕೆ ಡುಮ್ಮನೆ ಅಷ್ಟೇನೂ ಚೆನ್ನಾಗಿರೋದಿಲ್ಲ.ಇವನಿಗೆ ಯಾವಾಗಲೂ ತನ್ನ ಬಗ್ಗೆ ಕೀಳರಿಮೆ .ಗೆಳೆಯ ರಯಾನ್ ಥರ ಧೈರ್ಯಶಾಲಿಯಾಗ್ಬೇಕು ,ಅವನೆ ರೀತಿ ಪರ್ಸನಾಲಿಟಿ ಬೆಳೆಸಿಕೊಳ್ಳಬೇಕು ಅನ್ನೋ ಆಸೆ!ರಯಾನ್ ಒಬೆರಾಯ್ ಶ್ರೀಮಂತರ ಮಗ.ಸಾಂಪ್ರದಾಯಿಕ ಶಿಕ್ಷಣ ಪದ್ದತಿಯ ಬಗ್ಗೆ ಯಾವಗಲೂ ಇವನಿಗೆ ಅಸಮಧಾನ.ಅವನದ್ದೇ ಶೈಲಿಯಲ್ಲಿ ಬದುಕುವವನು.ಗೆಳೆತನದ ವಿಷಯಕ್ಕೆ ಬಂದರೆ ಮಾತ್ರ ಜೀವಕ್ಕೆ ಜೀವ ಕೊಡುವಂಥ ಗೆಳೆಯ .ಯಾವತ್ತೂ ಗೆಳೆಯರಾದ ಹರಿ ಮತ್ತೆ ಆಲೋಕ್ ಕಷ್ಟದಲ್ಲಿದ್ದರೆ ಇವನು ಅಲ್ಲಿ ಹಾಜರ್!ಆಲೋಕ್ ತುಂಬಾ ಬುದ್ಧಿವಂತ ಹುಡುಗ.ಬಡ ಕುಟುಂಬದಿಂದ ಬಂದಿರುತ್ತಾನೆ.ಇವನ ತಂದೆ ಪಾರ್ಶ್ವವಾಯು ಪೀಡಿತರಾಗಿದ್ದರಿಂದ ಕುಟುಂಬದ ಹೊಣೆಯನ್ನು ಆಲೋಕ್ ನ ತಾಯಿ ನೋಡಿಕೊಳ್ಳುತ್ತಿರುತ್ತಾರೆ.ಆಲೋಕ್ ಬೇಗ ಐಐಟಿಯಿಂದ ಡಿಗ್ರಿ ಮುಗಿಸಿ ಕೆಲಸಕ್ಕೆ ಸೇರಿಕೊಂಡು ತನ್ನ ತಂಗಿಯ ಮದುವೆ ನಡೆಸಿಕೊಡಲಿ,ತಂದೆ ಆರೋಗ್ಯದ ಖರ್ಚು ನೋಡಿಕೊಳ್ಳಲಿ ಅನ್ನೋದು ಅವನ ತಾಯಿಯ ಆಸೆ.
ಈ ಮೂವರು ವಿದ್ಯಾರ್ಥಿಗಳು ತಮ್ಮ GPA ಉತ್ತಮಪಡಿಸಲು ಹೆಣಗಾಡೋದು,ಹಾಸ್ಟೆಲ್ ಜಗತ್ತಿನ ರೋಚಕ ಘಟನೆಗಳು.ಹರಿ ತನ್ನ ಪ್ರೊಫೆಸರ್ ಚೆರಿಯನ್ ರ ಮಗಳನ್ನು ಪ್ರೀತಿಸೋದು,ಪ್ರಶ್ನೆ ಪತ್ರಿಕೆ ಕದಿಯಲು ಹೋಗಿ ಸಿಕ್ಕಿ ಬೀಳೋದು ಮುಂತಾವುದನ್ನು ಚೇತನ್ ಭಗತ್ ನವಿರಾದ ಹಾಸ್ಯದೊಂದಿಗೆ ಚಿತ್ರಿಸಿದ್ದಾರೆ.

ಈ ಪುಸ್ತಕ ಈಗ ಹಿಂದಿಯಲ್ಲಿ ಚಲನಚಿತ್ರವಾಗಿ ಬರ್ತಾ ಇದೆ ’ತ್ರೀ ಈಡಿಯಟ್ಸ್ ’ ಅನ್ನೋ ಹೆಸರಲ್ಲಿ .ಆಮೀರ್ ಖಾನ್ ನಟನೆಯ ಈ ಚಿತ್ರ ಬೆಂಗಳೂರಿನ ಐಐಎಮ್ ನಲ್ಲಿ ಚಿತ್ರೀಕರಣಗೊಂಡಿದೆ.

ಈ ಪುಸ್ತಕ ನಾನು ಫುಟ್ ಪಾತ್ ನಲ್ಲಿ ತಗೊಂಡಿದ್ದೆ.ಪೈರೇಟೆಡ್ ಪುಸ್ತಕಗಳ ಬಗ್ಗೆ ನನಗೆ ಅಷ್ಟಾಗಿ ಗೊತ್ತಿರಲಿಲ್ಲ.ಎಲ್ಲರೂ ತಮ್ಮ ಆರ್ಕುಟ್ ಪ್ರೊಫೈಲ್ ನಲ್ಲಿ ಚೇತನ್ ಭಗತ್ ರ ಈ ಪುಸ್ತಕದ ಉಲ್ಲೇಖ ಮಾಡಿದ್ದರಿಂದ ನಾನೂ ಈ ಪುಸ್ತಕ ಕೊಳ್ಳಲು ಉತ್ಸುಕನಾಗಿದ್ದೆ.ಬೆಲೆ ಎಷ್ಟು ಅಂತ ಕೇಳಿದ್ದಕ್ಕೆ 300Rs ಅಂದಿದ್ದ ಮಾರುವವ.ಬಹಳ ಚರ್ಚೆ ಮಾಡಿ 150Rs ಗೆ ತಗೊಂಡಿದ್ದೆ ಪುಸ್ತಕವನ್ನು(ಅದೂ ಪೈರೇಟೆಡ್).

ಚೇತನ್ ಭಗತ್ ರ ಎರಡನೇ ಪುಸ್ತಕ ಕೊಂಡ ಮೇಲಷ್ಟೇ ನನಗೆ ಗೊತ್ತಾಗಿದ್ದು ಚೇತನ್ ರ ಎಲ್ಲಾ ಪುಸ್ತಕಗಳ ಬೆಲೆ 95Rs ಅನ್ನೋದು!

ಕುತೂಹಲದಿಂದ ಕಾಯ್ತಾ ಇದ್ದೇನೆ ಚಿತ್ರ ಬಿಡುಗಡೆಗೆ.

Saturday, October 31, 2009

ಇದು ಎಂಥ ಮಾರಾಯ್ರೇ...



ಜನ ಯಾರನ್ನಾದರೂ ಹೇಗೆ ನೆನಪಿಟ್ಟುಕೋತಾರೆ?ನನಗೆ ಗೊತ್ತಿರೋ ಪ್ರಕಾರ ಜನರು ಯಾರದಾದರೂ ಮುಖವನ್ನು ನೋಡಿ ನೆನಪಿಟ್ಟುಕೋತಾರೆ.ಹಾಗಾಗಿ ’ನನಗೆ ಅವರ ಮುಖ ಪರಿಚಯವಿದೆ’ ಅನ್ನೋ ಮಾತು ಬಂದಿದೆ.

ಇತ್ತೀಚೆಗೆ ರಾತ್ರಿ ಟಿ.ವಿ ನೋಡುತ್ತಿದ್ದಾಗ ಒಂದು ಕಾರ್ಯಕ್ರಮ ನೋಡಿದೆ.ಅದು ಸೆಲೆಬ್ರಿಟಿಯೊಬ್ಬರನ್ನು ಗುರುತಿಸುವ ಸ್ಪರ್ಧೆ.ಮಾಮೂಲಿಯಾಗಿ ಇಂಥ ಸ್ಪರ್ಧೆಗಳಲ್ಲಿ ಅಮಿತಾಬ್ ಬಚ್ಚನ್ ,ಅಕ್ಷಯ್ ಕುಮಾರ್ ಇಂಥ ಖ್ಯಾತ ನಾಮರ ಮುಖವನ್ನು ಮಬ್ಬುಗೊಳಿಸಿ -’ಗುರುತಿಸಿ ಹಣ ಗೆಲ್ಲಿ ’ ಅನ್ನೋದು ಮಾಮೂಲಿಯಾಗಿ ಬರ್ತಾ ಇತ್ತು.

ಆದರೆ ಇತ್ತೀಚೆಗೆ ಟ್ರೆಂಡ್ ಬದಲಾಗಿದೆ!

ಮೇಲಿನ ಚಿತ್ರ ನೋಡಿ.ಇಂಥ ಕಾರ್ಯಕ್ರಮ ಪ್ರಸಾರ ಮಾಡುತ್ತಿರೋರ ’ಎದೆ’ಗಾರಿಕೆ ಮೆಚ್ಚಬೇಕಾದದ್ದೇ!

ಏನೋ ಪಮೇಲಾ ಅಂಡರ್ಸನ್,ಶಕೀಲಾ ಅಂಥವರನ್ನು ತೋರಿಸಿದ್ರೆ ಗುರುತು ಹಿಡಿಯಬಹುದು .ಎಲ್ಲರನ್ನೂ ಗುರುತಿಸೋ ಬಗೆ ಏನೋ??

ಈ ಸೆಲೆಬ್ರಿಟಿಯ ಗುರುತು ಸಿಕ್ಕಿದರೆ ನನಗೂ ತಿಳಿಸಿ ಪ್ಲೀಸ್(ಯಾವುದೇ ಬಹುಮಾನವಿರುವುದಿಲ್ಲ!)

Friday, September 18, 2009

ಸೀಟ್ ಬೇಕಾ ಸೀಟ್....?

ಬೆಂಗಳೂರಿನ ಜನರಿಗೆ ಯಾವಾಗ ತುಂಬಾ ಖುಷಿಯಾಗುತ್ತೆ ಅಂತ ಒಮ್ಮೆ ಕೇಳಿ ನೋಡಿ.ಎಲ್ಲರ ಉತ್ತರ ಒಂದೇ ಆಗಿರುತ್ತೆ.’ ಬಿ.ಎಂ.ಟಿ.ಸಿ ಬಸ್ ನಲ್ಲಿ ಸೀಟ್ ಸಿಕ್ಕಾಗ !’ ನೀವು ಮಂಗಳೂರಿನವರೋ ಅಥವ ಗದಗದವರೋ ಆಗಿದ್ರೆ ಈ ಮಾತು ಕೇಳಿ ಒಮ್ಮೆ ಪುಸಕ್ಕನೆ ನಕ್ಕರೂ ನಗಬಹುದು.ಆದರೆ ಬೆಂಗಳೂರಿನ ಬಸ್ ಗಳಲ್ಲಿ ಪ್ರಯಾಣಿಸಿ ಅಭ್ಯಾಸ ಇದ್ದರೆ ನೀವು ನಗೋದು ಸಾಧ್ಯವೇ ಇಲ್ಲ ಅಂತ ನನಗೆ ಗೊತ್ತು.

ಬಹುಷ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಸೀಟ್ ಸಿಕ್ಕಿದಾಗ ಕೂಡಾ ಅಷ್ಟು ಖುಷಿಯಾಗಿರಲ್ಲ,ಅಷ್ಟು ಖುಷಿ ಬಿ.ಎಮ್.ಟಿ.ಸಿ ಬಸ್ ನಲ್ಲಿ ಸೀಟ್ ಸಿಕ್ಕಾಗ ಆಗುತ್ತೆ.ನೀವು ಧಡೂತಿ ವ್ಯಕ್ತಿ ಆಗಿದ್ದಲ್ಲಿ ಬಹುಷ ಮೀಸೆ ಅಡಿಯಲ್ಲಿ ನಗುತ್ತಿರಬಹುದು ,’ನನ್ನಂಥ ಧಡೂತಿ ವ್ಯಕ್ತಿಗೆ ಸೀಟ್ ಸಿಗೋದು ಏನ್ ಮಹಾ ಕಷ್ಟ .ನಾಲ್ಕು ಜನರನ್ನು ಒಂದೇ ಕೈಯಲ್ಲಿ ಎತ್ತಿ ಬಿಸಾಕಿ ಸೀಟ್ ಪಡ್ಕೊಳ್ತೀನಿ ’ ಅಂತ.ಆದ್ರೆ ತಮಾಷೆ ಇರೋದು ಅಲ್ಲೇ ಸ್ವಾಮಿ ! ಜನ ನಿಮ್ಮ ಕೈಗೆ ಸಿಕ್ಕಿದ್ರೆ ತಾನೇ ಬಿಸಾಕೋದು ?ಅವರು ಪುಸಕ್ಕನೆ ನಿಮ್ಮ ಕಾಲ ಕೆಳಗಿಂದ ತೂರಿ ಸೀಟ್ ಪಡೆದಿಲ್ಲ ಅಂದ್ರೆ ಆಮೇಲೆ ಹೇಳಿ.

ಸುಮಾರು ಏಳು ವರ್ಷಗಳಿಂದ ಬೆಂಗಳೂರಿನಲ್ಲಿ ಸೀಟ್ ಗಾಗಿ(ಬಸ್ ನಲ್ಲಿ!) ಯಡಿಯೂರಪ್ಪನವರಷ್ಟೇ ಕಷ್ಟ ಪಟ್ಟಿರೋದ್ರಿಂದ ಬಹುಷ ನನ್ನ ಅನುಭವ ಹಂಚಿಕೊಂಡರೆ ನಿಮಗೆ ಸಹಾಯವಾಗಬಹುದೇನೋ?ಆದರೆ ಒಂದೇ ಒಂದು ಕಂಡೀಶನ್ ! ಬಸ್ ನಲ್ಲಿ ನಾನೇನಾದ್ರೊ ನಿಮಗೆ ಸಿಕ್ಕರೆ ನನಗೆ ಸೀಟು ಬಿಟ್ಟುಕೊಡಬೇಕು.ನನ್ನ ಮೇಲೆ ನನ್ನ ತಂತ್ರಗಳನ್ನು ಪ್ರಯೋಗಿಸಬಾರದು!

ಮೊದಲೇ ಹೇಳಿದ ಹಾಗೆ ತೆಳ್ಳಗಿದ್ದರೆ ಮಾತ್ರ ಇಲ್ಲಿರುವ ತಂತ್ರಗಳನ್ನು ಉಪಯೋಗಿಸಬಹುದು.ಹಾಗಾಗಿ ನೀವೇನಾದ್ರೂ ಸ್ಥೂಲಕಾಯಿಯಾಗಿದ್ದಲ್ಲಿ ದಯವಿಟ್ಟು ಈ ಲೇಖನದ ಬದಲು ’ತೆಳ್ಳಗಾಗೋದು ಹೇಗೆ ?’ ಅನ್ನೋ ಲೇಖನವನ್ನು ಮೊದಲು ಓದಿ.ಸೀಟ್ ನಲ್ಲಿ ಆರಾಮಾಗಿ ಕುಳಿತು ಪ್ರಯಾಣ ಮಾಡಬೇಕೆಂದರೆ ತುಸು ತಯಾರಿ ಬೇಕಾಗುತ್ತೆ.ಬಸ್ ಸ್ಟ್ಯಾಂಡ್ ನಲ್ಲಿ ಕಲ್ಲುಬೆಂಚು ಹಾಕಿದ್ದಾರೆ ಅಂತ ನೀವೇನಾದ್ರೂ ಅದರಲ್ಲಿ ಕುಳಿತು ಹೋಗೋ ಬರೋ ಹುಡುಗಿಯರ ಅಂದ ಸವೀತಾ ಇದ್ರೆ ರಾತ್ರಿ ಇಡೀ ಬಸ್ ಸ್ಟ್ಯಾಂಡ್ ನಲ್ಲೇ ಕೂತಿರ್ಬೇಕಾದೀತು ಹುಷಾರ್ !

ನಿಮ್ಮ ಬಸ್ಸು 22ನೇ ಪ್ಲ್ಯಾಟ್ ಫಾರ್ಮ್ ಬರೋದಾದ್ರೆ ನೀವು ಅದಕ್ಕಿಂತ ಎರಡು ಪ್ಲ್ಯಾಟ್ ಫಾರ್ಮ್ ಮುಂಚೆ ನಿಂತಿರ್ಬೇಕು.ಬಸ್ ಮೆಜೆಸ್ಟಿಕ್ ಆ ಪ್ಲ್ಯಾಟ್ ಫಾರ್ಮ್ ಮುಂದೆ ಬಂದ ತಕ್ಷಣ ನಿಮ್ಮ ದೃಷ್ಟಿ ಕೇವಲ ಬಾಗಿಲಿನ ಮೇಲಿಟ್ಟು ಅದರ ಹಿಂದೆಯೇ ಓಡೋಡಿ ಬನ್ನಿ.ಬಸ್ ನೋಡುವ ಅಗತ್ಯವೇ ಇಲ್ಲ.ಯಾಕಂದ್ರೆ ಬಾಗಿಲಿನ ಜೊತೆ ಬಸ್ ಬಂದೇ ಬರುತ್ತೆ ಅಲ್ವೇ? ಬಸ್ ಸಂಪೂರ್ಣ ನಿಂತ ತಕ್ಷಣ ಥಟ್ ಅಂತ ಹತ್ತೋಕೆ ಹೋಗಬೇಡಿ.ಮೊದಲು ಇಳಿಯುವವರಿಗೆ ಜಾಗ ಮಾಡಿ ಕೊಡಿ.ಇಳಿಯುವವರ ಶಾಪ ಏನಾದ್ರೂ ತಗುಲಿ ಬಿಟ್ರೆ ನೀವು ಜೀವನ ಪರ್ಯಂತ ಬಸ್ ನಲ್ಲಿ ನಿಂತುಕೊಂಡೇ ಹೋಗುವ ಪರಿಸ್ಥಿತಿ ಬರಬಹುದು!ಹಾಗಂತ ಆರಾಮಾಗಿದ್ದಲ್ಲಿ ನಿಮ್ಮನ್ನೂ ಅವರು ಎಳೆದುಕೊಂಡು ಹೋಗುವ ಸಂಭವವಿದೆ.ಯಾವ ಕಾರಣಕ್ಕೂ ಬಾಗಿಲ ಕಂಬಿ ಬಿಡಕೂಡದು.ಎಲ್ಲರೂ ಇಳಿದ ತಕ್ಷಣ ಚಕ್ ಅಂತ ಹತ್ತಿ ಓಡಿ ಹೋಗಿ ಸೀಟ್ ಹಿಡಿದುಕೊಳ್ಳಿ.ನಾನೇ ಮೊದಲಿರುವುದರಿಂದ ಸೀಟ್ ಸಿಕ್ಕೇ ಸಿಗುತ್ತೆ ಅನ್ನೋ ಅಹಂ ಬೇಡ.ಹೆಂಗಸರ ಹಾಗೇ ಕಾಣಿಸುವ ಕೆಲವು ಗಂಡಸರು ಹೆಂಗಸರಿಗಾಗಿ ಮೀಸಲಿರುವ ಮುಂಬಾಗಿಲಿನಿಂದ ಹತ್ತಿ ನಿಮಗಿಂತ ಮುಂಚೆ ಸೀಟ್ ಆಕ್ರಮಿಸುವ ಸಾಧ್ಯತೆಗಳೂ ಇವೆ.ಹಾಗಾಗಿ ಮೊದಲು ನೀವೇ ಹತ್ತಿದರೂ ಸೀಟ್ ಸಿಗುವ ತನಕ ವಿರಮಿಸಬೇಡಿ.ಕೆಲವರಿಗೆ ಖಾಲಿ ಸೀಟ್ ನೋಡಿದ ತಕ್ಷಣ ತಮ್ಮನ್ನು ತಾವು ನಂಬಲೇ ಆಗದೇ ,ತಮ್ಮ ಕೈಯನ್ನು ಚಿವುಟಿ ನೋಡಿ,ಆನಂದಭಾಷ್ಪ ಸುರಿಸುವಷ್ಟರಲ್ಲಿ ಸೀಟ್ ಬೇರೊಬ್ಬರ ಪಾಲಾಗಿರುವ ನಿದರ್ಶನಗಳೂ ಇವೆ!

ಖಾಲಿ ಸೀಟ್ ನೋಡಿ ಖುಶಿಯಾದರೂ ಸ್ಥಿತಪ್ರಜ್ಞರಾಗಿದ್ದರೆ ಸ್ವಲ್ಪ ಒಳ್ಳೆಯದು.

ಇಷ್ಟೆಲ್ಲಾ ಸರ್ಕಸ್ ಮಾಡಿದರೂ ಕೆಲವೊಮ್ಮೆ ಸೀಟ್ ತಪ್ಪೋದುಂಟು.ಕಾರಣ - ಈ ಉತ್ತರಭಾರತದ ಕೆಲವು ಕಾರ್ಮಿಕರು ನಮಗಿಂತ ತೆಳ್ಳಗಿರೋದ್ರಿಂದ ಮಾಮೂಲಿ ಬಾಗಿಲು ಬಿಟ್ಟು ಬಸ್ ನ ಕಿಟಕಿಯಿಂದಲೇ ತೂರಿ ಸೀಟ್ ಹಿಡಿಯೋದುಂಟು.ಆದರೆ ನೀವು ಈ ರೀತಿ ಮಾಡೋದು ಬೇಡ.ಕರ್ನಾಟಕದ ಘನತೆ ಗೌರವ ಕಾಪಾಡೋದು ನಮ್ಮ ಆದ್ಯ ಕರ್ತವ್ಯ.ಈ ರೀತಿ ಏನಾದ್ರೂ ಆಗಿ ಸೀಟ್ ಮಿಸ್ ಆದ್ರೆ ನೀವು ಕೊರಗೋದೇನೂ ಬೇಡ.ಇನ್ನೊಂದು ಉಪಾಯ ಇದೆ,ಅದೇನಂದ್ರೆ ಬಸ್ ನಲ್ಲಿ ಮುಂದಿನ ಒಂದೆರಡು ಸ್ಟಾಪ್ ನಲ್ಲಿ ಇಳಿಯುವವರನ್ನು ಗುರುತಿಸೋದು!ಒಂದೆರಡು ವಾರ ಗಮನಿಸಿದರೆ ಇಂಥ ಪ್ರಯಾಣಿಕರನ್ನು ಗುರುತಿಸುವುದು ಕಷ್ಟ ಏನಲ್ಲ.ಬಸ್ ಒಳಗೆ ಒಂದು ಸಲ ಕಣ್ಣು ಹಾಯಿಸಿ ನೋಡಿ.ಯಾವಾನಾದ್ರೂ ತನ್ನ ಕಿಸೆಯಿಂದ ಏನನ್ನಾದ್ರೂ ಹುಡುಕ್ತಾ ಇದ್ದಾನೆ ಅಂದ್ರೆ ಅವನ ಬಳಿ ನಿಲ್ಲಲೇ ಬೇಡಿ.ಭಯ ಪಡಬೇಡಿ ಅವನೇನೂ ಬಾಂಬ್ ಹುಡುಕ್ತಾ ಇಲ್ಲ,ಅವನು ಇಯರ್ ಫೋನ್ ಹುಡುಕ್ತಾ ಇರ್ತಾನೆ ಅಷ್ಟೆ.ಅದನ್ನು ಒಮ್ಮೆ ಕಿವಿಗೆ ಹಾಕಿ ಮೊಬೈಲ್ ನಲ್ಲಿ ಎಫ್.ಎಮ್ ರೇಡಿಯೋ ಕೇಳ್ತಾ ಕೂತರೆ ಸ್ಟಾಪ್ ಬಂದ ಮೇಲಷ್ಟೇ ತೆಗೆಯೋದು ಅವನು.ಇದು ದೂ.ಪ್ರ(ದೂರ ಪ್ರಯಾಣಿಕ)ರ ಲಕ್ಷಣ.

ಹೀಗೆ ಬಸ್ ಒಳಗಡೆ ಕಣ್ಣು ಹಾಯಿಸ್ಬೇಕಾದ್ರೆ ಯಾರಾದ್ರೂ ಹಾಯ್ ಬೆಂಗಳೂರು,ಲಂಕೇಶ್ ,ಗೃಹಶೋಭ(ಗಂಡಸರೂ ಓದ್ತಾರೆ!)ಥರ ಪತ್ರಿಕೆ ಏನಾದ್ರೂ ಬಿಚ್ಚತೊಡಗಿದರೆ ಅವರೂ ದೂ.ಪ್ರಗಳು ಅಂದುಕೋಬೇಕು.ಕೆಲವು ಸಾಹಿತ್ಯಾಭಿಮಾನಿಗಳು ಮುಂದಿನ ಸ್ಟಾಪ್ ನಲ್ಲಿ ಇಳಿಯುವುದಾದರೂ ಒಂದೇ ಒಂದು ಪುಟ ಓದಿ ಮುಗಿಸೋಣ ಅನ್ನಿಸಿ ಪತ್ರಿಕೆ ಓದೋದೂ ಉಂಟು! ಆದ್ರೆ ಅಂತವರ ಸಂತತಿ ಕಡಿಮೆ.

ಬಸ್ ನಲ್ಲಿ ಯಾರಾದ್ರೂ ಸೀಟ್ ನ ತುದಿಯಲ್ಲಿ ಕುಳಿತು ಪದೇ ಪದೇ ಕಿಟಕಿಯಿಂದ ಹೊರಗೆ ನೋಡ್ತಾ ಇದ್ರೆ ಅವರು ಮುಂದಿನ ಸ್ಟಾಪ್ ನಲ್ಲಿ ಇಳಿಯುವ ಸಾಧ್ಯತೆಗಳು ಹೆಚ್ಚು.ಅಂಥವರ ಪಕ್ಕ ನಿಂತುಕೊಂಡರೆ ನಿಮಗೆ ಸೀಟ್ ಸಿಗೋ ಅವಕಾಶಗಳು ಹೆಚ್ಚು.ಆದರೆ ಒಮ್ಮೆ ಏನಾಯ್ತು ಅಂದ್ರೆ ಒಬ್ಬ ಸೀಟ್ ತುದಿಯಲ್ಲಿ ಕೂತು ಪದೇ ಪದೇ ಕಿಟಕಿಯ ಹೊರಗೆ ನೋಡ್ತಾ ಇದ್ದ.ಅದೂ ಸಾಲದು ಅನ್ನೋ ಹಾಗೆ ಪದೇ ಪದೇ ನಿಂತುಕೊಳ್ತಾ ಇದ್ದ.ನಾನು ಇವನೇನೋ ಈಗ ಇಳಿತಾನೆ ಅಂದುಕೊಂಡು ಕಾದಿದ್ದೇ ಬಂತು.ಅವನು ಇಳಿದದ್ದು ನನ್ನದೇ ಸ್ಟಾಪ್ ನಲ್ಲಿ ಮುಕ್ಕಾಲು ಘಂಟೆ ಪ್ರಯಾಣದ ನಂತರ!.ನನಗೂ ತಲೆ ಕೆಟ್ಟು ಹೋಗಿ ಕೇಳೇ ಬಿಟ್ಟೆ ’ಏನ್ ಸಾರ್ ಪದೇ ಪದೇ ಸ್ಟಾಪ್ ಬಂತಾ ಅಂತ ನೋಡ್ತಾ ಇದ್ರಲ್ವ ಬೆಂಗಳೂರಿಗೆ ಹೊಸಬರಾ ?’ ಅಂತ.ಅದಕ್ಕೆ ಆಸಾಮಿ ’ಇಲ್ಲ ಸಾರ್ ಇಪ್ಪತ್ತು ವರ್ಷದಿಂದ ಇಲ್ಲೇ ಇದ್ದೀನಿ ನನಗೆ ಜಾಸ್ತಿ ಹೊತ್ತು ಕೂತ್ಕೊಳ್ಳೋಕೆ ಆಗಲ್ಲ ಸ್ವಲ್ಪ ಪರ್ಸನಲ್ ಪ್ರಾಬ್ಲೆಮ್ ಇದೆ ’ ಅನ್ನೋದಾ!

ಒಂದೆರಡು ಸಲ ಎಡವಟ್ಟಾದ್ರೂ ಬಹುತೇಕ ಸಂದರ್ಭಗಳಲ್ಲಿ ಸೀಟ್ ಸಿಗೋದು ಗ್ಯಾರಂಟಿ ಕಣ್ರಿ.ಆದ್ರೆ ಬಸ್ ಹಿಂದೆ ಓಡ್ಬೇಕಾದ್ರೆ ಸ್ವಲ್ಪ ಹುಶಾರಾಗಿ ಓಡಿ.ಚಕ್ರದ ಕೆಳಗೇನಾದ್ರೂ ಬಿದ್ದು ಗಿದ್ದು ಆಮೇಲೇ ಯಮಲೋಕದಲ್ಲಿ ಸೀಟ್ ಸಿಗೋ ಥರ ಆಗಬಾರದು ನೋಡಿ.

Tuesday, September 8, 2009

ರಿಯಾಲಿಟಿ ಷೋಗೆ ಟಿಪ್ಸ್ ಗಳು !

ಈಗ ಯಾವ ಚ್ಯಾನಲ್ ನೋಡಿದ್ರೂ ರಿಯಾಲಿಟಿ ಷೋಗಳು.ರಿಯಾಲಿಟಿ ಶೋ ಅಂದ ಮಾತ್ರಕ್ಕೆ ಇಲ್ಲಿ ತೋರಿಸೋದೆಲ್ಲಾ ರಿಯಲ್ ಅಂದುಕೊಂಡ್ರೆ ನಮ್ಮಂಥ ಮೂರ್ಖರು ಬೇರೊಬ್ಬರಿಲ್ಲ!

ಬಹಳಷ್ಟು ಜನರಿಗೆ ಇಂಥ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಬೇಕು ಅಂತ ಆಸೆ ,ಆದ್ರೆ ಹೇಗೆ ಅನ್ನೋದು ಗೊತ್ತಿಲ್ಲ.

ನನ್ನ ಬಳಿ ಕೆಲವು ಟಿಪ್ಸ್ ಗಳಿವೆ ! ನೋಡಿ ಉಪಯೋಗಕ್ಕೆ ಬಂದ್ರೂ ಬರಬಹುದು .ಯೋಚನೆ ಮಾಡ್ಬೇಡಿ ಕಾಸೇನೂ ಕೇಳಲ್ಲ ಇದಕ್ಕೆಲ್ಲ.

ರಿಯಾಲಿಟಿ ಶೋಗಳಲ್ಲಿ ಭಾಗವಸೋದಕ್ಕೆ ಮಿನಿಮಮ್ ಯೋಗ್ಯತೆ ಅಂದ್ರೆ ನಿಮಗೊಂದಿಷ್ಟು ಟ್ಯಾಲೆಂಟ್ ಇರ್ಬೇಕು.ಟ್ಯಾಲೆಂಟ್ ಇರದಿದ್ದೂ ನಡೆಯುತ್ತೆ ಅಂದುಕೊಂಡಿದ್ರೆ ತಪ್ಪು ಕಣ್ರಿ.ಆ ಮಟ್ಟಿಗೇನೂ ಇಳಿದಿಲ್ಲ ರಿಯಾಲಿಟಿ ಶೋಗಳ ಕ್ವಾಲಿಟಿ!

ನಿಮಗೆ ಹಾಡೋದು ಅಥವಾ ಕುಣಿಯೋದು ಗೊತ್ತಿದ್ರೆ ಒಳ್ಳೇದು.ಎರಡೂ ಗೊತ್ತು ಅಂದ್ರೆ ಇನ್ನೂ ಒಳ್ಳೇದು. ಎರಡೂ ಗೊತ್ತಿಲ್ಲ ಅಂದ್ರೆ ನಿಮಗೆ ಏನು ಗೊತ್ತಿದೆ ಹೇಳಿ ಆಮೇಲೆ ನಿರ್ಧಾರ ಮಾಡೋಣ ಯಾವುದರಲ್ಲಿ ಭಾಗವಹಿಸೋದು ಅಂತ.

ನಿಮಗೆ ಚೆನ್ನಾಗಿ ಹಾಡೋದಕ್ಕೆ ಗೊತ್ತಿದ್ದು ಚೆನ್ನಾಗಿರೋ ಮನೆಯಲ್ಲಿ ನೀವೇನಾದ್ರೂ ವಾಸವಾಗಿದ್ರೆ ನಿಮ್ಮ ಬ್ಯಾಡ್ ಲಕ್ ಕಣ್ರಿ.ಯಾಕಂದ್ರೆ ಟಿ.ವಿ ನವ್ರು ಕಾರ್ಯಕ್ರಮದ ಮಧ್ಯೆ ತೋರ್ಸೋದಕ್ಕೆ ಒಂದು ಹಳೆ ಮನೆ ,ಅದರಲ್ಲಿ ಒಲೆ ಹಚ್ಚುತ್ತಿರೋ ನಿಮ್ಮ ತಾಯಿ ,ನೀವು ಪಕ್ಕದ ಹಳ್ಳಿಯಿಂದ ಕೊಡದಲ್ಲಿ ನೀರು ತುಂಬಿಸಿ ತರೋ ದೃಶ್ಯ ಇವೆಲ್ಲಾ ಬೇಕು.ಹೀಗೆ ನಿಮ್ಮ ಬಡತನವನ್ನು ತೋರಿಸ್ತಾ ಇದ್ದಾಗ ಹಿನ್ನೆಲೆಯಲ್ಲಿ ಒಂದು ಪಿಟೀಲಿನ ಕುಂಯ್ ಕುಂಯ್ ಅನ್ನೋ ಟ್ಯೂನ್ ಹಾಕಿದ್ರಂತೂ SMS ಗಳ ಮಹಾಪೂರ ಗ್ಯಾರಂಟಿ.

ಬದಲಾಗಿ ಮಲ್ಲೇಶ್ವರಂ ನ ಚೆನ್ನಾಗಿರೋ ಅಪಾರ್ಟ್ಮೆಂಟ್ ನಲ್ಲಿ ನೀವು ಸಂಗೀತ ಅಭ್ಯಾಸ ಮಾಡ್ತಾ ಇರೋದು ,ನಿಮ್ಮ ತಾಯಿ ನಿಮಗೆ ಹಾರ್ಲಿಕ್ಸ್ ತಂದು ಕೊಡೋದು ಇದೆಲ್ಲಾ ತೋರ್ಸಿದ್ರೆ ನಿಮಗ್ಯಾರ್ರಿ SMS ಕಳಿಸ್ತಾರೆ?

ಇನ್ನು ನೀವು ಚೆನ್ನಾಗಿ ಡ್ಯಾನ್ಸ್ ಮಾಡೋರಾದ್ರೆ ಒಳ್ಳೇ ವಿಚಾರ.ಆದ್ರೆ ನೀವು ಮಾಮೂಲಿ ಸ್ಟೆಪ್ಸ್ ಜೊತೆ ಒಂದು ಎಕ್ಸ್ಟ್ರಾ ಸ್ಟೆಪ್ ಕಲೀಬೇಕಾಗುತ್ತೆ.ಅದೇನಂದ್ರೆ ಮೇಲಿಂದ ಹಾರಿ ಲ್ಯಾಂಡ್ ಆಗ್ಬೇಕಾದ್ರೆ ಎಡವಟ್ಟಾಗಿ ಬಿದ್ದು ಕಾಲು ತಿರುಚಿಕೊಳ್ಳೋದು!
ನೋಡಿ ಸರಿಯಾಗಿ ಅಭ್ಯಾಸ ಮಾಡ್ಬೇಕು ಈ ಸ್ಟೆಪ್ ನ.ಅಪ್ಪಿ ತಪ್ಪಿ ನಿಜವಾಗ್ಲೂ ಕಾಲು ತಿರುಚಿಕೊಂಡ್ರೆ ನನ್ನನ್ನ ಬಯ್ಬೇಡಿ ಮತ್ತೆ.ನೀವು ಕಾಲು ತಿರುಚಿ ಬಿದ್ದಾಗ ಬೇಜಾರಲ್ಲಿ ಸುಮ್ನೆ ಬಿದ್ದುಕೊಳ್ಳಿ.ಆ ದೃಶ್ಯವನ್ನು ಕಪ್ಪು ಬಿಳುಪಿನಲ್ಲಿ ಒಂದು ಸಲ ,ಸಿಡಿಲು ಬಡಿದ ಹಾಗೆ ಲೈಟ್ ಎಫೆಕ್ಟ್ ಹಾಕಿ ಒಂದು ಸಲ ತೋರ್ಸೋ ಕೆಲಸ ಟಿ.ವಿ ಯವರಿಗೆ ಬಿಟ್ಟು ಬಿಡಿ.ನೀವೇನೂ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ ಈ ಬಗ್ಗೆ.

ಸತ್ಯವಂತರಿಗಿದು ಕಾಲವಲ್ಲ ಅಂತ ದಾಸರು ತಪ್ಪಿ ಹೇಳಿರೋದು.ಅವರು ’ಸಚ್ ಕಾ ಸಾಮ್ನಾ’ ನೋಡಿಲ್ವಲ್ಲ ಪಾಪ.ಸತ್ಯವಂತರಿಗಿದು ದುಡ್ಡು ಮಾಡೋ ಕಾಲ.ಆದ್ರೆ ಈ ಶೋ ಗೆ ಎಂಟ್ರಿ ಸಿಗೋದು ಸ್ವಲ್ಪ ಕಷ್ಟ.ನಿಮಗೆ ಒಂದೆರಡು ಅನೈತಿಕ ಸಂಬಂಧಗಳಿದ್ರೆ ಆರಾಮಾಗಿ ಭಾಗವಹಿಸಬಹುದು.ಎರಡಕ್ಕಿಂತ ಜಾಸ್ತಿ ಇದ್ರೆ ನಿಮ್ಮನ್ನು ಮನೆಗೆ ಬಂದು ಕರ್ಕೊಂಡು ಹೋಗ್ತಾರೆ ಬಿಡಿ ಚ್ಯಾನೆಲ್ ನವರು!ಯಾವುದಕ್ಕೂ ನೀವು ಯಾರ್ಯಾರ ಜೊತೆ ಮಲಗಿದ್ರಿ ,ಎಷ್ಟು ಜನ ವೇಶ್ಯೆಯವರ ಜೊತೆ ಮಜಾ ಉಡಾಯಿಸಿದ್ರಿ ಇದೆಲ್ಲ ಒಂದು ಪುಟ್ಟ ಡೈರಿಯಲ್ಲಿ ಬರೆದಿಟ್ಟು ಆಗಾಗ ನೆನಪು ಮಾಡಿಕೊಳ್ತಾ ಇದ್ರೆ ಜಾಸ್ತಿ ಹಣ ಬಹುಮಾನವಾಗಿ ಗೆಲ್ಲಲು ಸಹಕಾರಿಯಾಗುತ್ತೆ .

ನಿಮ್ಮದು ತೀರಾ ಸಪ್ಪೆ ಜೀವನವಾದ್ರೆ ಏನೂ ಮಾಡೋದಕ್ಕಾಗಲ್ಲ ಸಾರಿ.ನಿಮಗೆ ಅಲ್ಲಿ ಪ್ರವೇಶವಿಲ್ಲ :(

ನಿಮಗೆ ಇಂಗ್ಲೀಶ್ ಅಥವ ಹಿಂದಿ ಬೈಗುಳ ಚೆನ್ನಾಗಿ ಗೊತ್ತಿದ್ರೆ ನೀವು ಎಂ.ಟಿ.ವಿ ರೋಡೀಸ್ ಥರದ ಶೋಗಳಿಗೆ ಪ್ರಯತ್ನಿಸಬಹುದು ನೋಡಿ.ಬರೀ ಕನ್ನಡ ಬೈಗುಳ ಗೊತ್ತಿದ್ರೆ once again sorry! ಕನ್ನಡದಲ್ಲಿ ’ಇನ್ನೂ’ ಆ ಥರದ ಶೋ ಶುರು ಆಗಿಲ್ಲ!

ಇನ್ನು ಜಾಸ್ತಿ ಜಾಸ್ತಿ SMS ಗಳನ್ನು ಬಾಚಿಕೊಳ್ಳೋದು ಅನ್ನೋದರ ರಹಸ್ಯ ಗೊತ್ತಾಗ್ಬೇಕಾ ನಿಮಗೆ ? !

ತುಂಬಾ ಸಿಂಪಲ್ ! ನೀವು ಕರ್ನಾಟಕದಲ್ಲೇ ಹುಟ್ಟಿ ಬೆಳೆದರೂ , ’ನಾನು ಹುಟ್ಟಿದ್ದು ದೆಹಲಿಯಲ್ಲಿ,ನಮ್ಮ ಅಪ್ಪ ಕರ್ನಾಟಕದವರು,ಅಮ್ಮ ತಮಿಳುನಾಡಿನವರು ಆದ್ರೆ ಈಗ ನಾವು ರಾಜಸ್ತಾನದಲ್ಲಿ ಮನೆ ಮಾಡಿಕೊಂದಿದ್ದೀವಿ ’ ಅನ್ನಿ !

ಕರ್ನಾಟಕ ,ದೆಹಲಿ,ತಮಿಳುನಾಡು,ರಾಜಸ್ತಾನದವರೆಲ್ಲರೂ ’ಇಂವ ನಮ್ಮವ ಇಂವ ನಮ್ಮವ ’ ಅಂದುಕೊಂಡು SMS ಮಾಡೇ ಮಾಡ್ತಾರೆ!

Sunday, August 30, 2009

ರೇಡಿಯೋ ಮೋಡಿ..

ಬೆಂಗಳೂರಿಗೆ ಬಂದ ಹೊಸದರಲ್ಲಿ ನಾನು ತೆಗೆದುಕೊಂಡ ಮೊದಲ ವಸ್ತು ಅಂದ್ರೆ FM Radio.ಮೈಸೂರು ಬ್ಯಾಂಕ್ ಸಿಗ್ನಲ್ ನಲ್ಲಿ ಗೋಡೆಗೆ ನೇತು ಹಾಕಿರುತ್ತಿದ್ದ ಉದ್ಯೋಗ ಜಾಹೀರಾತುಗಳನ್ನು ನೋಡುತ್ತಾ ಇರ್ಬೇಕಾದ್ರೆ ಅಲ್ಲೇ ಒಬ್ಬ ರೇಡಿಯೋ ಮಾರ್ತಾ ಇದ್ದ.ಚಿಕ್ಕದಾಗಿ ಪೆನ್ ಟಾರ್ಚ್ ಥರ ಇದ್ದ ರೇಡಿಯೋ ಇಯರ್ ಫೋನ್ ನ ಅವನು ನನ್ನ ಕಿವಿಗೆ ಬಲವಂತವಾಗಿ ತುರುಕಿರದೇ ಇದ್ದರೆ ಬಹುಷ ನಾನು ಆ ದಿನ ಅದನ್ನು ತಗೊಳ್ತಾ ಇರ್ಲಿಲ್ಲ.ನನಗೆ ಎಫ್.ಎಮ್ ರೇಡಿಯೋ ಸಿಗ್ನಲ್ ಕ್ವಾಲಿಟಿ ಅಷ್ಟೊಂದು ಚೆನ್ನಾಗಿರುತ್ತೆ ಅಂತ ಅದೇ ಮೊದಲ ಸಲ ಗೊತ್ತಾಗಿದ್ದು.ಊರಲ್ಲಿದ್ದಾಗ ಮನೆಯಲ್ಲಿ ಟು ಇನ್ ಒನ್ ಟೇಪ್ ರೆಕಾರ್ಡರ್ ಇದ್ದರೂ ಅಷ್ಟಾಗಿ ರೇಡಿಯೋ ಕೇಳ್ತಾ ಇರ್ಲಿಲ್ಲ.ಅದರಲ್ಲೂ ರೇಡಿಯೋ ಅನ್ನು ಎಫ್.ಎಮ್ ಮೋಡ್ ಗೆ ಹಾಕಿದಾಗಲಂತೂ ಬರೀ ಪುಸ್ ಅಂತ ಗಾಳಿಯ ಶಬ್ದವಷ್ಟೇ ಕೇಳಿ ಬರ್ತಾ ಇತ್ತು. ಆಮೇಲೆ ಒಂದು ದಿನ ಯಾರೋ ಹೇಳಿದ್ರು ಎಫ್.ಎಮ್ ಟ್ರಾನ್ಸ್ಮಿಶನ್ ಮಂಗಳೂರಿನಲ್ಲಿಲ್ಲ ಅದಿಕ್ಕೇ ಏನೂ ಕೇಳ್ಸಲ್ಲ ಅಂತ!

ಮೈಸೂರು ಬ್ಯಾಂಕ್ ಸಿಗ್ನಲ್ ನ ಆ ವ್ಯಾಪಾರಿ ನೂರು ರೂ ಕೇಳಿದ್ದ ಆ ರೇಡಿಯೋ ಗೆ.ಆದ್ರೆ ಬೆಂಗಳೂರಿನಲ್ಲಿ ಯಾವ ವಸ್ತುವನ್ನೂ ಚೌಕಾಶಿ ಮಾಡದೇ ತಗೋಬೇಡ ಅನ್ನೋ ಹಿತವಚನ ಬಹಳಷ್ಟು ಜನ ನೀಡಿದ್ದರಿಂದ ಅವನ ಬಳಿ ’ಬೆಲೆ ಕಡಿಮೆ ಮಾಡು’ ಅಂತ ವಾದಕ್ಕೆ ನಿಂತಿದ್ದೆ.ಕೊನೆಗೆ ಐವತ್ತು ರೂಗೆ ಡೀಲ್ ಕುದುರಿಸಿ ಅದಕ್ಕೆ ಚೈನಾ ಸೆಲ್ ಹಾಕಿ ಹಾಡು ಕೇಳಿದಾಗಲಂತೂ ಸಕ್ಕತ್ ಖುಷಿಯಾಗಿತ್ತು.

ಅಂದಿನಿಂದ ರೇಡಿಯೋ ಜೊತೆ ಲವ್ ಶುರು ಆಯ್ತು.

ಆಗ (೨೦೦೨) ಇದ್ದಿದ್ದೇ ಎರಡು ಎಫ್.ಎಂ ಸ್ಟೇಶನ್ .ಒಂದು ರೇಡಿಯೋ ಸಿಟಿ ಇನ್ನೊಂದು ಎಫ್.ಎಮ್ ರೇನ್ಬೋ.ಎಫ್.ಎಮ್ ರೇನ್ಬೋ ದ RJ ಗಳು ಹಳೇ ಶೈಲಿಯಲ್ಲೇ ಮಾತಾಡ್ತಾ ಇದ್ದಿದ್ದರಿಂದ ಅಷ್ಟೊಂದು ಇಷ್ಟವಾಗಿರಲಿಲ್ಲ.ಬದಲಾಗಿ ಚಟಪಟನೆ ಮಾತಾಡೋ ರೇಡಿಯೋ ಸಿಟಿ ತುಂಬಾನೇ ಇಷ್ಟ ಆಗಿತ್ತು.ಅದರಲ್ಲಿ ಬರೋ ಜಾಹೀರಾತುಗಳೂ ತುಂಬಾ ವಿಭಿನ್ನವಾಗಿದ್ದರಿಂದ ಸಂಪೂರ್ಣವಾಗಿ ಮನಸೋತು ಹೋಗಿದ್ದೆ ರೇಡಿಯೋ ಸಿಟಿಗೆ.ರಘು ದೀಕ್ಷಿತ್ ರ ಸ್ಪೈಸ್ ಟೆಲಿಕಾಮ್ ನ ’ಲೈಫಿನಲ್ಲಿ ಆಪರ್ಚುನಿಟಿ’ ಮುಂತಾದ ಜಾಹಿರಾತುಗಳು ಕೇಳಿ ರೇಡಿಯೋದಲ್ಲಿ ಕೂಡ ಇಷ್ಟೊಂದು ಕ್ರಿಯೇಟಿವಿಟಿ ಬಳಸಬಹುದು ಅನ್ನೋದು ಗೊತ್ತಾಗಿ ಬೆರಗಾಗಿತ್ತು.

ನನಗೆ ಇಷ್ಟವಾಗ್ತಾ ಇದ್ದಿದ್ದು ಚೈತನ್ಯಾ ಹೆಗ್ಡೆಯ ’ಚೌ ಚೌ ಬಾತ್’ ಕಾರ್ಯಕ್ರಮ.ಭಾನುವಾರ ಹನ್ನೊಂದು ಘಂಟೆಗೆ ಮುಂಚೆ ಯಾವತ್ತೂ ಏಳದ ನಾನು ಅವನ ಧ್ವನಿ ಕೇಳಲೆಂದೇ ಬೇಗ ಏಳ್ತಾ ಇದ್ದೆ.(ಕಿವಿಗೆ ರೇಡಿಯೋ ಇಯರ್ ಫೋನ್ ಸಿಕ್ಕಿಸಿ ಮತ್ತೆ ಬಿದ್ದುಕೋತಾ ಇದ್ದೆ ಆ ವಿಷಯ ಬೇರೆ!).ಒಂಥರಾ ಮಾಂತ್ರಿಕ ಶಕ್ತಿ ಇತ್ತು ಚೈತನ್ಯಾ ಹೆಗ್ಡೆಯ ಮಾತಿಗೆ.ಗಡುಸಾದರೂ ಮಾತಿನ ಮಧ್ಯೆ ಚೆಂದನೆಯ ನಗು, ಸಕ್ಕತ್ ಹಾಸ್ಯ ಪ್ರಜ್ಜ್ಞೆ,ಕನ್ನಡ ಇಂಗ್ಲೀಷ್ ಎರಡೂ ಮಿಕ್ಸ್ ಮಾಡಿ ಮಾತಾಡೋ ಅವನ ಭಾಷೆ ತುಂಬಾನೇ ಇಷ್ಟ ಆಗಿತ್ತು.ರೇಡಿಯೋದಲ್ಲಿ ಬರೀ ಧ್ವನಿ ಮಾತ್ರ ಕೇಳಿಸೋದ್ರಿಂದ ಚೈತನ್ಯಾ ಹೆಗ್ಡೆ ಅನಿಲ್ ಕುಂಬ್ಳೆ ಥರ ದಪ್ಪ ಮೀಸೆ ಇಟ್ಕೊಂಡಿರ್ತಾನೆ,ಹೀಗಿರ್ತಾನೆ ಹಾಗಿರ್ತಾನೆ ಅಂತೆಲ್ಲ ಮನಸಲ್ಲೇ ಕಲ್ಪಿಸಿಕೊಂಡಿದ್ದೆ.ಚೈತನ್ಯಾ ಹೆಗ್ಡೆ ರೇಡಿಯೋ ಸಿಟಿ ಬಿಟ್ಟು ಹೋದ ಮೇಲಂತೂ ರೇಡಿಯೋ ಕೇಳೋದೇ ಬಿಟ್ಟಿದ್ದೆ ನಾನು.

ಮತ್ತೆ ರೇಡಿಯೋ ಕೇಳೋಕೆ ಶುರು ಮಾಡಿದಾಗ ವಾಸಂತಿ ಇಷ್ಟವಾಗತೊಡಗಿದಳು.ತುಂಬಾ ಸ್ಪಷ್ಟವಾದ ಧ್ವನಿ,ಎನರ್ಜೆಟಿಕ್ ಆಗಿ ಮಾತಾಡೋ ವಿಭಿನ್ನ ಶೈಲಿ ಇಷ್ಟವಾಗಿತ್ತು.ಯಥಾಪ್ರಕಾರ ವಾಸಂತಿ ರೇಡಿಯೋ ಸಿಟಿ ಬಿಟ್ಟಾಗ ಮತ್ತೆ ರೇಡಿಯೋ ಕೇಳೋದು ಬಿಟ್ಟು ಬಿಟ್ಟೆ.

ತೀರಾ ಈಚೆಗೆ ಮತ್ತೆ ರೇಡಿಯೊ ಕೇಳೋಕೆ ಶುರು ಮಾಡಿದ ಮೇಲೆ ಬಿಗ್ ಎಫ್ ನ ’ದೀಪು -ನಾನು ನಿಮ್ಮ ಟೈಪು ’ತುಂಬಾ ಇಷ್ಟವಾಗಿದ್ದ.ಸಕ್ಕತ್ ತರಲೆ ಮಾಡೋ ಅವನು ಶೋ ನಲ್ಲಿ ಕಾಂಟೆಸ್ಟ್ ಕೂಡಾ ಇಡ್ತಾ ಇದ್ದ.ಒಂದು ದಿನ ’ಯಾವುದಾದರೂ ತರಕಾರಿ ಇಟ್ಕೊಂಡು ಯವುದಾದರೂ ಹುಡುಗೀನ ಪ್ರಪೋಸ್ ಮಾಡೋದಾದ್ರೆ ಹೇಗೆ ಪ್ರಪೋಸ್ ಮಾಡ್ತೀರಾ? ’ ಅಂತ ಕೇಳಿದ್ದ.ಅದಕ್ಕೆ ನಾನು ಬದನೆಕಾಯಿ ಇಟ್ಕೊಂಡು ಉಪೇಂದ್ರ ಶೈಲಿಯಲ್ಲಿ ಪ್ರಪೋಸ್ ಮಾಡ್ತೀನಿ ಅಂತ ದೊಡ್ಡ SMS ಕಂಪೋಸ್ ಮಾಡಿ ಕಳಿಸಿದ್ದೆ.

ಹೀಗಿತ್ತು ಆ SMS :- " ಚಾಂದಿನಿ ನೋಡು ಈ ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ ಅಂತ ಯಾರೋ ತಲೆ ಕೆಟ್ಟೋನು ಹೇಳಿದ್ದಾನೆ.ಅವನ ಮಾತು ಕೇಳ್ಬೇಡ ನೀನು.ಆ ರೀತಿ ಹೇಳೋರೆಲ್ಲಾ ’ಹೇಳೋದು ಶಾಸ್ತ್ರ ತಿನ್ನೋದು ಬದನೆಕಾಯಿ’ ಅನ್ನೋ ರೀತಿಯ ಜನ.ನೀನು ಚೆನ್ನಾಗಿರ್ಬೇಕು ಆಗ್ಲೇ ನಾನು ನಿನ್ನನ್ನು ಪ್ರೀತಿಸೋಕಾಗೊದು.ಮನೆಗೆ ಹೋಗಿ ಈ ಬದನೆಕಾಯಿ ಸಾಂಬಾರ್ ಮಾಡಿ ಊಟ ಮಾಡು. ಚಾಂದಿನಿ ನೀನು ಚೆನ್ನಾಗಿರ್ಬೆಕು,ನೀನು ಚೆನ್ನಾಗಿದ್ರೇನೇ ನಾನೂ ಚೆನ್ನಾಗಿರೋದು " ಅಂತ ಉಪೇಂದ್ರನಿಗೇ ಡೋಸ್ ಇಟ್ಟು ಬರೆದಿದ್ದೆ.

ಯಾಕೋ ದೀಪು ಗೆ ಈ ಉತ್ತರ ಸಕ್ಕತ್ ಇಷ್ಟ ಆಗಿ ನನಗೆ ಕಾಲ್ ಮಾಡಿ ನನ್ನನ್ನು On Air ಹಾಕಿಬಿಟ್ಟ.ಯಾಕೋ ಇಡೀ ಬೆಂಗಳೂರು ಕೇಳಿಸ್ಕೊಳ್ಳುತ್ತೆ ಅನ್ನೋದು ಗೊತ್ತಾಗಿ ತುಂಬಾ ನರ್ವಸ್ ಆಗಿ ಸರಿಯಾಗಿ ಮಾತಾಡೋಕೇ ಆಗಿರ್ಲಿಲ್ಲ ನಂಗೆ.ಆದರೆ ಆ ದಿನ ದೀಪು ನನಗೆ ಸಾವರಿಯಾ ಸಿ.ಡಿ ಬಹುಮಾನವಾಗಿ ಕೊಟ್ಟಿದ್ದ .
ಇನ್ನೊಂದು ದಿನ ದೀಪು ಗೋಲ್ ಅನ್ನೊ ಶಬ್ದಕ್ಕೆ ಕನ್ನಡ ಶಬ್ದ ನೀಡಿ ಅಂತ ಕೇಳಿದ್ದ.ಎಲ್ಲರೂ ಧ್ಯೇಯ ,ಗುರಿ ಅಂತೆಲ್ಲಾ ಮೆಸೇಜ್ ಮಾಡಿದ್ರು.ಆದ್ರೆ ಅವನು ಕೇಳಿದ್ದು ಫುಟ್ಬಾಲ್ ಗೋಲ್ ಬಗ್ಗೆ!
ನಾನು ಅದಕ್ಕೆ ’ಚೆಂಡ್ಜಾಲ ಪ್ರವೇಶ’ ಅಂತ ಉತ್ತರ ಕಳಿಸಿದ್ದಕ್ಕೆ ’ಗೋಲ್’ ಸಿನೆಮಾದ ಕಪಲ್ ಪಾಸ್ ಕೊಟ್ಟಿದ್ದ.ನಾನು ಕಪಲ್ ಆಗಿರದೇ ಇದ್ದಿದ್ರಿಂದ(ನಿಜ ಹೇಳ್ಬೇಕೂಂದ್ರೆ ಸಿನೆಮಾ ಪಿ.ವಿ.ಆರ್ ನಲ್ಲಿ ರಾತ್ರಿ ಏಳಕ್ಕೆ ಇದ್ದದ್ದರಿಂದ!)ಸಿನೆಮಾಗೆ ಹೋಗೋಕೆ ಆಗಿರ್ಲಿಲ್ಲ ನನಗೆ.

ದೀಪು ಬಿಗ್ ಎಫ್ ಎಮ್ ಬಿಟ್ಟ ಮೇಲೆ ನಾನು ಮತ್ತೆ ರೇಡಿಯೋ ಕೇಳೋದು ಬಿಟ್ಟು ಬಿಟ್ಟೆ.

Sunday, August 2, 2009

ಕಲ್ಪವೃಕ್ಷದ ನೆನಪಿನ ಸುತ್ತ....

ಬೆಂಗಳೂರಿನಲ್ಲಿ ಬಹಳ ದಿನದಿಂದ ತಣ್ಣನೆಯ ವಾತಾವರಣ.ಈ ತಂಪಾದ ವಾತಾವರಣದಲ್ಲೂ ಕೆಲ ಜನರು ಎಳನೀರು ಹೀರುತ್ತಿದ್ದಿದ್ದು ನೋಡಿ ವಿಚಿತ್ರ ಅನ್ನಿಸಿತ್ತು.ಆದರೆ ಆಮೇಲೆ ಗೊತ್ತಾಯ್ತು ,ಬೆಂಗಳೂರಿನಲ್ಲಿ ಜನರು ಎಳನೀರು ಕುಡಿಯೋದು ಆರೋಗ್ಯಕ್ಕಾಗಿ ಅಂತ!ಹಾಗೆ ನೋಡಿದ್ರೆ ನಾನು ಕೂಡ ಅಪರೂಪಕ್ಕೊಮ್ಮೆ ಎಳನೀರು ಕುಡಿಯೋದು ಆರೋಗ್ಯದ ದೃಷ್ಟಿಯಿಂದಲೇ.

ಪ್ರತಿ ಸಲ ಎಳನೀರು ಕುಡಿಯುವಾಗಲೂ ಊರಿನ ನೆನಪು ಕಿತ್ತು ತಿನ್ನುವಂತೆ ಕಾಡುತ್ತದೆ.ಎಳನೀರು ಕೀಳಲೆಂದೇ ನಾನು ತೆಂಗಿನ ಮರ ಹತ್ತಲು ಕಲಿತಿದ್ದು ನೆನಪಾಗುತ್ತದೆ.ಮಂಗಳೂರಿನಲ್ಲಿದ್ದಷ್ಟು ದಿನ ಒಂದು ದಿನವೂ ಕಾಸು ಕೊಟ್ಟು ಎಳನೀರು ಕುಡಿದದ್ದು ನನಗೆ ನೆನಪಿಲ್ಲ.ಹಾಗಂತ ಬಿಟ್ಟಿ ಕುಡಿದೆ ಅಂದುಕೋಬೇಡಿ.ನಾನು ಯಾವತ್ತೂ ಕುಡೀತಾ ಇದ್ದಿದ್ದು ನಮ್ಮದೇ ತೋಟದ ,ನಾನೇ ಕಿತ್ತ ಹಚ್ಚ ಹಸುರು ಬಣ್ಣದ ತಂಪನೆಯ ಎಳನೀರು.

ನಮ್ಮ ತೋಟದಲ್ಲಿರೋ ತೆಂಗಿನ ಮರದಿಂದ ತೆಂಗಿನಕಾಯಿಗಳನ್ನು ಕೀಳಲು ಕರಿಯ ಅನ್ನೋನು ಬರ್ತಿದ್ದ. ’ದುನಿಯಾ’ ಸಿನೆಮಾಗೂ ಅವನಿಗೂ ಏನೂ ಸಂಬಂದವಿಲ್ಲ ಬಿಡಿ .ಇದು ಹನ್ನೆರಡು ವರ್ಷ ಹಿಂದಿನ ಕಥೆ!ಆಗೆಲ್ಲ ನಮಗೆ ಅವನೇ ಜೀವಂತ ಸೂಪರ್ ಮ್ಯಾನ್ .ಕೈಗೊಂದು ಹಗ್ಗ,ಕಾಲಿಗೊಂದು ಹಗ್ಗ ಕಟ್ಟಿ ಕುಪ್ಪಳಿಸುತ್ತ ಮರ ಹತ್ತುತ್ತಿದ್ದರೆ ಅದನ್ನು ನೋಡೋದೆ ದೊಡ್ಡ ಬೆರಗು ನಮಗೆ.ಆದ್ರೆ ಅವನು ತೋಟದ ಎಲ್ಲಾ ಮರಗಳಿಂದ ಕಾಯಿಗಳನ್ನು ಕಿತ್ತಾದ ಮೇಲೆ ಮಾತ್ರ ಅವನ ಮೇಲೆ ಅವನ ಪ್ರಾಣ ತೆಗ್ಯೋ ಅಷ್ಟು ಸಿಟ್ಟು ಬರ್ತಿತ್ತು ನನಗೆ.
ನಮ್ಮ ತೋಟದ ಕಂಪೌಂಡ್ ಸುತ್ತಲೂ ಹೆಂಚಿನ ಮನೆಗಳಿದ್ದವು.ಈ ಪಾಪಿ ಕರಿಯ.ಪ್ರತಿ ಮನೆಯ ಮೇಲೂ ಕನಿಷ್ಟ ಎರಡು ತೆಂಗಿನ ಕಾಯಿ ಬೀಳಿಸದೆ ಕೆಳಗೆ ಇಳೀತಿರಲಿಲ್ಲ.

ಹೀಗಾಗು ಕಾಯಿ ಕೀಳಲು ಕರಿಯ ಬಂದ ದಿನ ಸುತ್ತ ಮುತ್ತಲಿರುವ ಅಷ್ಟೂ ಮನೆಯವರಿಗೆ ’ಎಚ್ಚರಿಕೆ’ ನೀಡಿ ಬರ್ಬೇಕಿತ್ತು ನಾನು.ಅದಕ್ಕಿಂತ ದೊಡ್ಡ ತಲೆನೋವಿನ ಕೆಲಸ ಅಂದ್ರೆ ಅವರ ಮನೆಯ ಎಷ್ಟು ಹಂಚುಗಳು ಮುರಿದಿದೆ ಅನ್ನೋ ಲೆಕ್ಕ ಹಾಕಿ ಹಣ ಪಾವತಿ ಮಾಡೋ ಕೆಲಸ.ಹಲವು ಸಲ ಈ ಕರಿಯ ಬೇಕೂಂತ್ಲೇ ಆ ಮನೆಗಳ ಮೇಲೆ ಕಾಯಿ ಬೀಳಿಸ್ತಿದ್ದ ಅನ್ನೋ ಅನುಮಾನ ನನಗಿತ್ತು.ಯಾಕಂದ್ರೆ ಎಲ್ಲಾ ಮನೆಯವರೂ ಹಂಚಿನ ಮೂಲ ಬೆಲೆಗಿಂತ ಜಾಸ್ತಿ ಹಣ ಕೀಳುತ್ತಿದ್ದರು ನಮ್ಮಿಂದ!ಈ ಕರಿಯ ಆ ಮನೆಯವರ ಜೊತೆ ಸೇರಿ ’ಹಂಚು ಫಿಕ್ಸಿಂಗ್’ ಏನಾದ್ರೂ ಮಾಡಿರಬಹುದಾ ಅನ್ನೋ ಅನುಮಾನ ಯಾವಾಗ್ಲೂ ಕಾಡ್ತಾ ಇತ್ತು ನನಗೆ .

ಅವನು ತೋಟವಿಡೀ ಕಿತ್ತು ಬಿಸಾಕಿದ ಕಾಯಿಗಳನ್ನೆಲ್ಲ ಒಟ್ಟುಗೂಡಿಸಿ ಒಂದು ಕಡೆ ರಾಶಿ ಹಾಕೋ ಅಷ್ಟರಲ್ಲಿ ಪ್ರಾಣ ಹೋಗ್ತಿತ್ತು.ಆದರೆ ಎಲ್ಲಾ ಕೆಲಸ ಆದ ಮೇಲೆ ನಮಗೆಂದೇ ಕಿತ್ತ ಎಳನೀರು ಕುಡಿಯುವಾಗ ಮಾತ್ರ ಹೋದ ಪ್ರಾಣ ವಾಪಾಸ್ ಬರ್ತಿತ್ತು.

ಎಳನೀರಿನ ಅದ್ಭುತ ರುಚಿ ಸಿಕ್ಕಿದ ನನಗೆ ಕರಿಯನಿಗೋಸ್ಕರ ತಿಂಗಳು ಕಾಯೋದು ದೊಡ್ಡ ತಲೆ ನೋವಾಗಿತ್ತು.ಅದಕ್ಕಾಗೆ ತೆಂಗಿನ ಮರ ಹತ್ತಲು ಕಲಿಯೋದು ನನಗೆ ಅನಿವಾರ್ಯವಾಗಿತ್ತು .ತೆಂಗಿನ ಮರ ಹತ್ತಲು ಕಲಿಸುವ ಯಾವ ಕೋರ್ಸೂ ಇರದ ಕಾರಣ ನಾವೇ ಸ್ವಥ ಕಲೀಬೇಕಾಗಿತ್ತು ಅದನ್ನು.ಕರಿಯನ ಹಾಗೆ ಚಕ ಚಕನೆ ಹತ್ತಲು ಕಲಿಯಬೇಕು ಅನ್ನೋದು ನನ್ನ ಓರಗೆಯ ಹುಡುಗರ ದೊಡ್ಡ ಆಸೆಯಾಗಿತ್ತು ಆ ಕಾಲದಲ್ಲಿ!
ಆದರೆ ಎಷ್ಟು ಪ್ರಯತ್ನಿಸಿದರೂ ಅವನ ಕಲೆ ನಮಗೆ ಸಿದ್ಧಿಸಲೇ ಇಲ್ಲ!

ಅವನ ಆ ಚಾತುರ್ಯಕ್ಕೆ ಕಾರಣ ೭ ರೂಪಾಯಿಯ ಸಾರಾಯಿ ಪಾಕೀಟು(ನನಗೆ ರೇಟ್ ಹೇಗೆ ಗೊತ್ತು ಅಂತ ಆಶ್ಚರ್ಯ ಪಡಬೇಡಿ ಅದು ಜನರಲ್ ನಾಲೆಡ್ಜ್!) ಅಂತ ನಾವೆಲ್ಲಾ ಬಲವಾಗಿ ನಂಬಿದ್ವಿ!ಅದು ಒಂದು ರೀತಿಯಲ್ಲಿ ನಿಜವೂ ಆಗಿತ್ತು.

ದೂರದಲ್ಲಿ ನಿಂತು ನೋಡೋರಿಗೆ ತೆಂಗಿನ ಮರ ಹತ್ತೋದು ಒಂದು ಸುಲಭದ ಕೆಲಸ.ಆದರೆ ಬಲ್ಲವನೇ ಬಲ್ಲ ತೆಂಗಿನ ಮರ ಹತ್ತೋ ಕಷ್ಟವನ್ನು!
ತೆಂಗಿನ ಮರ ಹತ್ತೋದಕ್ಕೆ ಸಿಕ್ಕಾಪಟ್ಟೆ ಸ್ಟ್ಯಾಮಿನಾ ಬೇಕು.ಅದಕ್ಕಾಗೇ ಪಾಪ ಕರಿಯ ಎನರ್ಜಿ ಡ್ರಿಂಕ್ ಕುಡಿದೇ ಕೆಲಸ ಶುರು ಮಾಡ್ತಿದ್ದಿದ್ದು.

ಒಂದು ದಿನ ಅದು ಹೇಗೋ ಕಷ್ಟ ಪಟ್ಟು ಮರವನ್ನು ಅಪ್ಪಿ ಹಿಡಿದು ಒಂದೋಂದೇ ಇಂಚು ಹತ್ತಿ ಹತ್ತಿ ಅರ್ಧದಷ್ಟು ಹೋಗಿದ್ದೆ ನಾನು.ಅರ್ಧ ಮರ ಹತ್ತಿದ ಮೇಲೆ ಸುಸ್ತಾಗಿ ಹೋಗಿತ್ತು.ಸುಸ್ತಾಗಿದೆ ಅಂತ ಕೂರಲು ಸೀಟ್ ಬೇರೆ ಇರಲ್ವಲ್ಲ ಮರದಲ್ಲಿ! ಹಾಗೇ ಸುಧಾರಿಸಿ ಮುಂದುವರಿಸೋಣ ಅಂದುಕೊಂಡು ಹಾಗೇ ಮರವನ್ನು ಅಪ್ಪಿಕೊಂಡೇ ಸ್ವಲ್ಪ ಸಮಯ ಕಳೆದೆ.

ದುರಾದೃಷ್ಟವಶಾತ್ ಸುಸ್ತು ಕಡಿಮೆ ಆಗೋ ಬದಲು ಜಾಸ್ತಿ ಆಗ್ತಿತ್ತು.ಒಂದು ಹಂತದಲ್ಲಂತೂ ಕೈ ಬಿಟ್ಟೇ ಬಿಡೋಣ ಅಂತ ಕೂಡಾ ಅನ್ನಿಸಿತ್ತು !

ಕೈ ಬಿಟ್ಟಿದ್ದೆನಾ ಅಂತ ಕೇಳಬೇಡಿ.ಬಿಟ್ಟಿದ್ರೆ ನಾನೆಲ್ಲಿ ಇರ್ತಾ ಇದ್ದೆ ಈ ಬ್ಲಾಗ್ ಬರೆಯಲು !ಪ್ರಾಣ ಭಯದಿಂದ ಹಾಗೆ ಒಂದೊಂದೆ ಇಂಚು ಜಾರುತ್ತಾ ಜಾರುತ್ತಾ ನೆಲದ ಮೇಲೆ ಲ್ಯಾಂಡ್ ಆಗಿದ್ದೆ ಆ ದಿನ.ಆದರೂ ತೆಂಗಿನ ಮರ ಹತ್ತೋದನ್ನು ಕಲಿಯಲೇ ಬೇಕು ಅನ್ನೋ ಛಲ ಮೂಡಿತ್ತು ನನಗೆ.

ಅದು ಹೇಗೋ ಸತತ ಪ್ರಯತ್ನದಿಂದ ಆ ಕಲೆ ನನಗೂ ಸಿದ್ಧಿಸಿತು!(ಪಾಕೀಟಿನ ಸಹಾಯ ಇಲ್ಲದೆ!)

ಪ್ರೊಫೆಶನಲ್ ಆಗಿ ತೆಂಗಿನ ಮರ ಹತ್ತೋರು ಮರದ ತುದಿಯ ತನಕ ಹೋಗಲ್ಲ.ಮರದಲ್ಲೇ ಉದ್ದುದ್ದಕ್ಕೆ ನಿಂತು ಕಾಯಿಗಳನ್ನೆಲ್ಲಾ ಕತ್ತಿಯಿಂದ ಕಡಿದು ಕಡಿದು ಬೀಳಿಸುತ್ತಾರೆ.ಆದರೆ ನಮಗೆ ಪಾಕೀಟು ಇಲ್ಲದೇ ಇದ್ದದ್ದರಿಂದ -ಕ್ಷಮಿಸಿ ಅಷ್ಟೊಂದು ಸ್ಟ್ಯಾಮಿನಾ ಇಲ್ಲದೆ ಇದ್ದುದರಿಂದ ನಾವು ಮರದ ತುದಿ ತಲುಪಿದ ತಕ್ಷಣ ಮರದ ತುತ್ತ ತುದಿಗೆ ಹೋಗಿ ರೆಸ್ಟ್ ತಗೋತಾ ಇದ್ವಿ.ಸುಸ್ತೆಲ್ಲಾ ಕಡಿಮೆ ಆದ ಮೇಲೆ ಎಳನೀರನ್ನು ಕಿತ್ತು ಹುಷಾರಾಗಿ ನೆಲಕ್ಕೆಸೀಬೇಕು.ಸ್ವಲ್ಪ ಎಡವಟ್ಟಾದ್ರೂ ಎಳನೀರು ಒಡೆದು ಹೋಗ್ತಾ ಇತ್ತು.

ಮರ ಹತ್ತೋದೇ ದೊಡ್ಡ ಸಮಸ್ಯೆ ಅಂತ ಭಾವಿಸಿದ್ದ ನನಗೆ ಮರ ಹತ್ತಿದ ಮೇಲೆ ಒಳ್ಳೆಯ ಎಳನೀರನ್ನು ಗುರುತಿಸೋದೂ ಕಲೆ ಅಂತ ಗೊತ್ತಾಗಿದ್ದು ನಾನೂ ಮರ ಹತ್ತಲು ಕಲಿತ ಮೇಲೆ.ಕರಿಯ ಮಾತ್ರ ಕಾಯಿಗೆ ಬೆರಳಿನಿಂದ ಬಡಿದೇ ಯಾವುದು ಚೆನ್ನಾಗಿರೋ ಕಾಯಿ ಅಂತ ಗುರುತಿಸ್ತಾ ಇದ್ದ.ಅದನ್ನು ಗುರುತಿಸೋ ರಹಸ್ಯ ಹೇಳಿಕೊಡು ಅಂತ ಕೇಳಿದ್ರೆ ’ದಣಿ ಡಬ್ ಡಬ್ ಶಬ್ದ ಬಂದ್ರೆ ಚೆನ್ನಾಗಿರುತ್ತೆ ಟಕ್ ಟಕ್ ಅಂತ ಶಬ್ದ ಬಂದ್ರೆ ಅದು ಆಲ್ ಮೋಸ್ಟ್ ತೆಂಗಿನಕಾಯಿ ಅಂತ ಅರ್ಥ’ ಅಂತ ಹೇಳಿದ್ದ ಕರಿಯ.ಅದೆಷ್ಟು ಬಡಿದರೂ ನಮಗೆ ಏನೋ ಒಂದು ಶಬ್ದ ಕೇಳಿಸುತ್ತಿತ್ತೇ ವಿನಹ ಅದು ಡಬ್ ಡಬ್ ಆ ಅಥವ ಟಕ್ ಟಕ್ ಆ ಅನ್ನೋದು ಗೊತ್ತಾಗ್ತಾ ಇರ್ಲಿಲ್ಲ !ನಾನು ಹಾಗೇ ಸುಮ್ಮನೆ ನೋಡೋದಕ್ಕೆ ಗುಂಡಗಿರೋ ,ಹಸಿರಾಗಿರೋ ಎಳನೀರನ್ನು ಕಿತ್ತು ಬಿಸಾಕಿ ವಾಪಾಸ್ ಇಳಿದು ಬರ್ತಾ ಇದ್ದೆ.ಅದನ್ನು ಕುಡಿದು ನೋಡಿದ ಮೇಲೇನೇ ಗೊತ್ತಾಗೋದು ಅದು ಚೆನ್ನಾಗಿದೆಯೋ ಇಲ್ವೋ ಅನ್ನೋದು.

ಈ ತೆಂಗಿನ ಮರ ಹತ್ತೋ ವಿದ್ಯೆ ಕಲಿತ ಮೇಲೆ ನನಗೆ ಅದು ಬಹುತೇಕ ಉಪಯೋಗ ಬಿದ್ದಿದ್ದು ಪರೀಕ್ಷೆಯ ಸಮಯದಲ್ಲಿ.ಪರೀಕ್ಷೆಗೆ ಓದಲೆಂದು ಹುಡುಗರು ಕೆರೆ ದಡಕ್ಕೆ ,ಮರದ ಕೆಳಕ್ಕೆ ಅಂತ ಹೋಗ್ತಿದ್ರೆ ನಾನು ಮಾತ್ರ ಸೀದಾ ತೆಂಗಿನ ಮರ ಹತ್ತಿ ಅಲ್ಲೇ ಕೂತು ಓದ್ತಾ ಇದ್ದೆ.ಐದನೆಯ ತರಗತಿಯ ಎಲ್ಲಾ ಪರೀಕ್ಷೆಗೆ ಬಹುಷಃ ಅಲ್ಲೇ ಕೂತು ತಯಾರಿ ನಡೆಸಿದ್ದೆ.

ಬೆಂಗಳೂರಿನಲ್ಲಿ ತೆಂಗಿನ ಮರಗಳೇ ಅಪರೂಪ.ಅದೃಷ್ಟವಶಾತ್ ನಾವಿರುವ ರೂಮ್ ಹಿಂದೆ ಎರಡು ತೆಂಗಿನ ಮರಗಳಿವೆ.ಒಂದು ಮಧ್ಯರಾತ್ರಿ ಈ ಮರದ ತೆಂಗಿನಗರಿ ಕರೆಂಟ್ ವೈರ್ ಮೇಲೆ ಬಿದ್ದು ಸುಮಾರು ಎರಡು ನಿಮಿಷ ಟಪ್ ಟಪ್ ಅನ್ನೋ ಶಬ್ದ ಬಂದಿತ್ತು.ನಾವು ಎಲ್ಲೋ ಬಾಂಬ್ ಸ್ಫೋಟ ಆಗಿರ್ಬೇಕೇನೋ ಅನ್ನೋ ಆತಂಕದಿಂದ ಹೊರಗೆ ಬಂದು ನೋಡಿದಾಗಲೇ ಗೊತ್ತಾಗಿದ್ದು ನಮಗೆ ನಮ್ಮ ಕಂಪೌಂಡ್ ನಲ್ಲೇ ತೆಂಗಿನ ಮರ ಇದೆ ಅನ್ನೋದು!

ಈ ತೆಂಗಿನ ಮರ ಹತ್ತೋದಕ್ಕೆ ಮಾತ್ರ ಟ್ರೈ ಮಾಡಿಲ್ಲ ನಾನು !ಈಗ ಅಷ್ಟೊಂದು ಸ್ಟ್ಯಾಮಿನಾ ಇಲ್ಲ!(ಸರಕಾರದವರು ಮಾಡಿರೋ ಪಾಕೀಟು ಸಾರಾಯಿ ನಿಶೇಧಕ್ಕೂ ಸ್ಟ್ಯಾಮಿನಾಗೂ ಯಾವುದೇ ಸಂಬಂಧ ಕಲ್ಪಿಸಬೇಡಿ ಪ್ಲೀಸ್!)

Sunday, July 26, 2009

ಇನ್ನಾದರೂ ಎದ್ದೇಳಿ!

’ಎದ್ದೇಳು ಮಂಜುನಾಥ’ ಚಿತ್ರ ನೋಡಿದೆ.ಚಿತ್ರದ ವಿಮರ್ಶೆ ಬರೆಯಲು ನನಗೆ ಬರಲ್ಲ.ಬರಲ್ಲ ಅನ್ನೋದಕ್ಕಿಂತ ಬರೆಯಲು ಮನಸ್ಸಿಲ್ಲ ಅನ್ನೋದೇ ಸೂಕ್ತ.
ನಾನು ಚಿತ್ರ ಚೆನ್ನಾಗಿದೆ ಅನ್ನೋದು ಅದಕ್ಕೆ ಇನ್ನೊಬ್ಬ(ಳು) ’ಥೂ ನಿನ್ನ ಏನ್ ಕಚಡಾ ಟೇಸ್ಟ್ ನಿನ್ನದು’ ಅನ್ನೋದು.ನಾನೂ ಸೋಲೊಪ್ಪಲಾರದೆ ಸಮರ್ಥನೆ ನೀಡೋದು ,ಇಂಥ ಕಿರಿಕ್ ಗಳು ಬಹಳಷ್ಟು ಸಲ ಆಗಿವೆ.ಅದಿಕ್ಕೆ ಚಿತ್ರ ನೋಡಿ ಅಂತ ಹೇಳೋದು ತುಂಬಾ ಕಡಿಮೆ.

’ಎದ್ದೇಳು ಮಂಜುನಾಥ’ ಕೂಡಾ ನೋಡಿ ಅಂತ ಯಾರಿಗೂ ಹೇಳಲ್ಲ ನಾನು.ನಿಮ್ ದುಡ್ಡು ನೀವು ಅದನ್ನು ಯಾವ ರೀತಿ ಬೇಕಾದ್ರೂ ಖರ್ಚು ಮಾಡಿ ಸ್ವಾಮಿ ,ನಾನ್ಯಾರು ಸಲಹೆ ಕೊಡೋಕೆ ಅಲ್ವ?

ಅಷ್ಟಕ್ಕೂ ನನಗೆ ಈ ಚಿತ್ರದ ಬಗ್ಗೆ ಬರೀಬೇಕು ಅನಿಸಿದ್ದು ಯಾಕಂದ್ರೆ ಇದೊಂದು ವಿಭಿನ್ನ ರೀತಿಯ ಸಿನೆಮಾ. ಕಡಿಮೆ ಬಜೆಟ್ ನ(ಎಷ್ಟು ಅಂತ ಗೊತ್ತಿಲ್ಲ!) ಬರೀ ಸಂಭಾಷಣೆ ಮತ್ತು ಜಗ್ಗೇಶ್ ಅಭಿನಯವನ್ನು ನಂಬಿಕೊಂಡು ಮಾಡಿದ ಒಂದು ಚಿತ್ರ.ಬರೀ ಸಂಭಾಷಣೆಯಿಂದಲೂ ಚಿತ್ರ ಗೆಲ್ಲಿಸಬಹುದು ಅಂತ ನಿರೂಪಿಸಿದ ಚಿತ್ರ.

ಚಿತ್ರ ಬರೀ ಒಂದು ಲಾಡ್ಜ್ ರೂಮ್ ,ಅಥವಾ ಒಂದು ಪುಟ್ಟ ಮನೆಯಲ್ಲಿ ಮುಗಿದು ಬಿಡುತ್ತೆ.ಅದ್ಯಾಕೆ ಕೆಲವು ನಿರ್ದೇಶಕರಿಗೆ ಬ್ಯಾಂಕಾಕ್ ,ಸ್ವಿಟ್ಜರ್ಲ್ಯಾಂಡ್ ನಂಥ ಊರಿನ ಮೇಲೆ ’ಪ್ರೇಮ್’ ವೋ ಗೊತ್ತಿಲ್ಲ.ಅನಾವಶ್ಯಕ ಕೋಟಿಗಟ್ಟಲೆ ಖರ್ಚು ಮಾಡ್ತಾರೆ.ಕೇಳಿದ್ರೆ ’ ತಮಿಳು ,ತೆಲುಗಿನವರು ಮಾಡ್ತಾರೆ ಅದಕ್ಕೆ ನಾವೇನ್ ಕಮ್ಮಿ ’ ಅಂತಾರೆ.

ಅಲ್ಲಾ ನಮ್ ಶಿವಣ್ಣ ಹಳ್ಳಿಯಲ್ಲಿ ಹಾಕೋ ಅಂಥ ಪಟ್ಟಾಪಟ್ಟಿ ಚಡ್ಡಿ ಹಾಕ್ಕೊಂಡು ವಿದೇಶದಲ್ಲಿ ಹೋಗಿ ಕುಣೀತಾರೆ.ಇದರಿಂದ ಅದೇನು ಸಾಧಿಸ್ತಾರೋ ದೇವರಿಗೆ ಗೊತ್ತು.ಪಟ್ಟಾಪಟ್ಟಿ ಚಡ್ಡಿ ಡ್ಯಾನ್ಸ್ ಮಾಡ್ಲೇ ಬೇಕೂಂದ್ರೆ ಇಲ್ಲೆ ಕೆ.ಆರ್ ಮಾರ್ಕೆಟ್ ನಲ್ಲೂ ಮಾಡಬಹುದಲ್ಲ.ಅದಕ್ಕ್ಯಾಕೆ ವಿದೇಶಕ್ಕೆ ಹೋಗ್ಬೇಕು.

ಹೀಗೇನಾದ್ರೂ ಕೇಳಿದ್ರೆ ’ನಿಂಗೇನಪ್ಪ ಗೊತ್ತು ಸಿನೆಮಾ ಬಗ್ಗೆ ’ ಅಂತಾರೆ.ನಂಗೆ ಗೊತ್ತಾಗೋದೂ ಬೇಡ ಬಿಡಿ.

ಸಿದ್ಧಸೂತ್ರಗಳನ್ನು ಬಳಸದೆ ತಯಾರಿಸಿದ್ದಕ್ಕೆ ನನಗೆ ’ಎದ್ದೇಳು ’ ಇಷ್ಟ ಆಗಿದ್ದು.ಸಿನೆಮಾ ಅಂದ್ರೆ ಐದು ಸಾಂಗ್,ನಾಲ್ಕು ಫೈಟ್ ಎರಡು ರೇಪ್ ಅನ್ನೋ ಅಂಥ ರೆಡಿಮೇಡ್ ಫಾರ್ಮುಲಾಗಳನ್ನು ಬಿಟ್ಟು ರಿಸ್ಕ್ ತಗೊಂಡಿದ್ದಕ್ಕೆ ಗುರುಪ್ರಸಾದ್ ಗೆ ಅಭಿನಂದನೆಗಳು.

ನನ್ನ ಗೆಳೆಯನೊಬ್ಬನ ಬಳಿ ’ನಾನು ಜಬ್ ವಿ ಮೆಟ್ ನೋಡಿದೆ ’ ಅಂದಿದ್ದಕ್ಕೆ ’ಥೂ ನಿನ್ನಂಥವರಿರೋದ್ರಿಂದಾ ಕಣೋ ಕನ್ನಡ ಚಿತ್ರರಂಗ ಬೆಳೀತಾ ಇಲ್ಲ.ಯಾವಾಗ ನೊಡಿದ್ರೂ ಹಿಂದಿ,ತಮಿಳು ಹೀಗೇ ಬೇರೆ ಭಾಷೆಯ ಚಿತ್ರ ನೋಡ್ತೀರಾ ’ ಅಂತ ಉದ್ದುದ್ದ ಲೆಕ್ಚರ್ ಕೊಟ್ಟಿದ್ದ.

ಅವನು ಹೇಳಿದ್ದೆಲ್ಲಾ ಕೇಳಿಸ್ಕೊಂಡೆ.

ಆಮೇಲೆ ಅವನ ಹತ್ತಿರ ’ನಿನಗೆ ಪರಾಮರ್ಶಿಸು ಅನ್ನೋ ಶಬ್ದದ ಅರ್ಥ ಗೊತ್ತಾ?’ ಕೇಳಿದೆ. ’ಇಲ್ಲ ’ ಅಂದ .ಇರಲಿ ಅವಲೋಕನ ಅಂದ್ರೆ ಗೊತ್ತಾ ಅಂದೆ ’ಗೊತ್ತಿಲ್ಲ ’ ಅಂದ.

ನೋಡು ನಿನಗೆ ಕನ್ನಡದ ಎರಡೇ ಎರಡು ಶಬ್ದದ ಬಗ್ಗೆ ಕೇಳೀದೆ.ಅದನ್ನು ನೀನು ಕೇಳಿಯೇ ಇಲ್ಲ. ನಾನು ನಿನ್ನಷ್ಟು ಕನ್ನಡ ಸಿನೆಮಾ ನೋಡಿಲ್ಲ ಆದ್ರೂ ನನ್ನ ಕನ್ನಡ ಚೆನ್ನಾಗೆ ಇದೆ ’ನಿನ್ನ ಕನ್ನಡ ಪ್ರೇಮಕ್ಕೆ ನನ್ನ ಅಭಿನಂದನೆ ’ ಅಂದೆ.

ಕನ್ನಡ ಸಿನಿಮಾ ನೋಡೋದ್ರಿಂದ ಕನ್ನಡದ ಸೇವೆ ಮಾಡ್ತೀನಿ ಅಂತ ನನಗೆ ಯಾವತ್ತೂ ಅನಿಸಿಲ್ಲ.ಸಿನಿಮಾ ಗೆದ್ರೆ ಅದರಿಂದ ಆ ಸಿನೆಮಾದ ನಿರ್ದೇಶಕ ,ನಿರ್ಮಾಪಕರು ಹಣ ಮಾಡ್ತಾರಷ್ಟೇ.ಅವರು ಕನ್ನಡಕ್ಕೆ ಯಾವುದೇ ರೀತಿಯ ಕಾಣಿಕೆ ನೀಡೋದು ಸಂಶಯವೇ.ಕಾಣಿಕೆ ನೀಡಿಲ್ಲ ಅಂದ್ರೂ ಪರ್ವಾಗಿಲ್ಲ.ಅದು ಬಿಟ್ಟು ಕನ್ನಡದ ಆಸ್ತಿ ಮಾಸ್ತಿಯ ಹೆಸರಿನಲ್ಲಿ ರೌಡಿಯೊಬ್ಬನ ಸಿನೆಮಾ ತೆಗೆಯೋದಕ್ಕೆ ಹೊರಡ್ತಾರೆ.

ಬೇರೆ ಭಾಷೆಯ ಸರಕನ್ನು ಕದ್ದು ತರೋರಿಗಿಂತ ಇಲ್ಲೇ ಇದ್ದು ವಿಭಿನ್ನವಾಗಿ ಯೋಚಿಸಿ ಸಿನೆಮಾ ತೆಗೆಯೋ ಗುರುಪ್ರಸಾದ್ ಜಾಸ್ತಿ ಇಷ್ಟ ಆಗ್ತಾರೆ ನನಗೆ.

ಪತ್ರಿಕೆಗಳಲ್ಲಿ ಕೆಲವೊಮ್ಮೆ ಬರೋ ಹಾಗೆ ’ಮನೆಮಂದಿಯೆಲ್ಲಾ ಕೂತು ನೋಡೋ ಚಿತ್ರ’ ಅನ್ನೋ ಮಾತಿನ ಬಗ್ಗೆ ನನಗೆ ಅಷ್ಟೊಂದು ವಿಶ್ವಾಸವಿಲ್ಲ.ಅಂತ ಚಿತ್ರಗಳು ಹಿಂದೆ ದೂರದರ್ಶನದಲ್ಲಷ್ಟೆ ಬರ್ತಾ ಇತ್ತು.ಹಿಂದೆ ಅಂತ ಯಾಕೆ ಹೇಳಿದೆ ಗೊತ್ತಾ? ಹಿಂದೆ ಇದ್ದಿದ್ದೇ ದೂರದರ್ಶನ ಒಂದೇ.ಮನೆಮಂದಿಯೆಲ್ಲ ಇಷ್ಟ ಇಲ್ಲ ಅಂದ್ರೂ ಆ ಸಿನೆಮಾನ ಜೊತೆಯಲ್ಲಿ ಕೂತು ನೋಡಲೇ ಬೇಕಾದ ಅನಿವಾರ್ಯತೆ ಇತ್ತು.
ಚಿತ್ರದಲ್ಲಿ ರೇಪ್ ಸೀನ್ ಬಂದ್ರೂ ಪಾಪ ಮನೆಮಂದಿಯೆಲ್ಲಾ ಮುಜುಗರದಿಂದಲೇ ಅದನ್ನು ಸಹಿಸಿಕೊಳ್ಳಬೇಕಿತ್ತು.ಹಾಗಾಗಿ ಆ ಚಿತ್ರ ಹೇಗೇ ಇದ್ರೂ ಅದು ’ಮನೆಮಂದಿ ಎಲ್ಲಾ ಜೊತೆಯಾಗಿ ಕೂತು ನೋಡೋ ಚಿತ್ರ’ !

ಆದ್ರೆ ಇವತ್ತು ಅಮ್ಮ ಉದಯದಲ್ಲಿ ’ಶಾಂತಿನಿವಾಸ ’ ನೋಡ್ತಾ ಇದ್ರೆ ಮಗ ರಿಮೋಟ್ ಕಿತ್ಕೊಂಡು ’ಕಸ್ತೂರಿ’ ಯಲ್ಲಿ ಬರೋ ’ಹೊಂಗನಸು’ ನೋಡ್ತಾನೆ.

ಕನ್ನಡದ ಬಗ್ಗೆ ಅಷ್ಟೊಂದು ಅಭಿಮಾನ ಇರೋ ನಿರ್ದೇಶಕರು ಸಿನೆಮಾಗಳಿಗೆ ಹಾಡಲು ಮಾತ್ರ ಅದ್ಯಾಕೆ ಹಿಂದಿ ಗಾಯಕರನ್ನೇ ಹಾಕ್ತಾರೆ ಅನ್ನೋದು ಇನ್ನೂ ಅರ್ಥ ಆಗದ ವಿಷಯ.ಬಹುಷ ಕನ್ನಡೇತರ ಗಾಯಕರಿಗೆ ಕನ್ನಡ ಕಲಿಸುವಂಥ ’ಪುಣ್ಯ’ದ ಕೆಲಸವನ್ನು ಮಾಡ್ತಾ ಇದ್ದಾರೇನೋ ಅವರು.ಪಾಪ ನಾನೇ ಅವರನ್ನು ತಪ್ಪು ತಿಳಿದಿದ್ದೇನೆ ಅನ್ಸುತ್ತೆ!

ಕನ್ನಡದ ನಿರ್ದೇಶಕರೇ ಇನ್ನಾದರೂ ಎದ್ದೇಳಿ!

Thursday, June 18, 2009

ಈ ಸಾಫ್ಟ್ ವೇರ್ ಅಂದ್ರೆ ಏನಣ್ಣಾ ...?

ಬಹಳಷ್ಟು ಜನರಿಗೆ ’ಆಗಾಗ’ ಕಾಡುವ ಪ್ರಶ್ನೆ ಅಂದ್ರೆ ಈ ಸಾಫ್ಟ್ವೇರ್ ಇಂಜಿನಿಯರ್ ಗಳು ಏನ್ ಕೆಲಸ ಮಾಡ್ತಾರೆ ? ಅನ್ನೋದು.ನಿಜವಾಗಿ ನೋಡೋದಕ್ಕೆ ಹೋದ್ರೆ ಅವರಿಗೆಲ್ಲಾ ಕಾಡೋದು ’ಅಷ್ಟೊಂದು ಜಾಸ್ತಿ ಸಂಬಳ ಕೊಡೋ ಅಂಥ ಘನಂದಾರಿ ಕೆಲಸ ಏನ್ ಮಾಡ್ತಾರೆ? ’ ಅಂತ ! ಆದ್ರೆ ಕೆಲವರು ಸ್ವಲ್ಪ ಜಾಣತನ ಉಪಯೋಗಿಸಿ ಮೊದಲನೇ ಪ್ರಶ್ನೆ ಕೇಳಿ ಬಿಡ್ತಾರೆ !

ಎರಡನೇ ಪ್ರಶ್ನೆಗೆ ಉತ್ತರ ಸ್ವಲ್ಪ ಸರಳವಾಗಿದೆ.ಚಿಕ್ಕ ದರ್ಶಿನಿ ಹೋಟೇಲಿನಲ್ಲಿ ತಟ್ಟೆ ಎತ್ತೋನಿಗೆ ತಿಂಗಳಿಗೆ ಎರಡು ಸಾವಿರ ಕೊಡ್ತಾರೆ ಅದೇ ಪಂಚತಾರಾ ಹೋಟೇಲಿನಲ್ಲಿ ತಟ್ಟೆ ಎತ್ತಿದ್ರೆ ’ಸ್ವಲ್ಪ’ ಜಾಸ್ತಿ ಸಂಬಳ ಕೊಡಲ್ವ ಹಾಗೇ ಇದು .ಅದರ ಬಗ್ಗೆ ಜಾಸ್ತಿ ತಲೆ ಕೆಡಿಸ್ಕೊಳ್ಳಬೇಡಿ ನೀವು.

ಅಲ್ಪ ಸ್ವಲ್ಪ ಸಾಫ್ಟ್ವೇರ್ ಬಗ್ಗೆ ತಿಳ್ಕೊಂಡಿದ್ರೆ ಎಲ್ಲರಿಗೂ ಉಪಯೋಗವಾಗುತ್ತೆ ಅನ್ನೋ ಕಾರಣಕ್ಕೆ ಈ ಲೇಖನ(ಬರೆಯೋಕೆ ನನಗೆ ಬೇರೆ ವಿಷಯ ಸಿಕ್ಕಿಲ್ಲ ಅಂತ ನೀವು ತಪ್ಪು ತಿಳ್ಕೊಂಡ್ರೆ ನಾನೇನೂ ಮಾಡೋಕಾಗಲ್ಲ ಬಿಡಿ!) ಬರೀತಾ ಇದ್ದೀನಿ.

ಇಂಥ ಲೇಖನವನ್ನು ಗೆಳೆಯ ವಿಜಯ್ ರಾಜ್ ಕನ್ನಂತರವರು ಈಗಾಗಲೇ ಬರೆದಿದ್ದಾರೆ.ಅದನ್ನು ಓದದೆ ಇರೋರು,ಓದಿದ್ದರೂ ಮರೆತು ಹೋದವರು ಮತ್ತೊಮ್ಮೆ ಓದಲಿ ಅಂತ ಅಷ್ಟೆ .

ನಾನು ಸಾಫ್ಟ್ವೇರ್ ಇಂಜಿನಿಯರ್ ಅಲ್ಲ ! ನಾನು ಹಾರ್ಡ್ವೇರ್ ಇಂಜಿನಿಯರ್ ,ನಾವುಗಳು ತಯಾರಿಸಿದ ಹಾರ್ಡ್ವೇರ್ ನಲ್ಲಿ ನಮ್ಮ ಗೆಳೆಯ/ಗೆಳತಿಯರು ಬರೆದ ಸಾಫ್ಟ್ವೇರ್ ಕೆಲಸ ಮಾಡೋದು .ಇದರಿಂದ ತಿಳಿಯೋದೇನೆಂದರೆ ಹಾರ್ಡ್ವೇರ್ ಇಲ್ಲದೆ ಸಾಫ್ಟ್ವೇರ್ ಕೆಲಸ ನಡೆಯಲ್ಲ ಅಂತ.ಹಾರ್ಡ್ವೇರ್ ಅಂದ ತಕ್ಷಣ ಬಹಳಷ್ಟು ಜನರಿಗೆ ತಲೆಗೆ ಹೊಳೆಯೋದು ನಟ್ಟು ಬೋಲ್ಟು ,ಪೇಂಯ್ಟು!

ಆ ಹಾರ್ಡ್ವೇರ್ ಬೇರೆ ಸ್ವಾಮಿ .ಒಬ್ಬ ಇಂಜಿನಿಯರ್ ಗೆ ಹಾರ್ಡ್ವೇರ್ ಅಂದರೆ ಕಂಪ್ಯೂಟರ್ ಮದರ್ ಬೋರ್ಡ್ ಥರದ್ದು.ಹಾಗೆ ನೋಡೋದಕ್ಕೆ ಹೋದರೆ ಬಹಳಷ್ಟು ವಸ್ತುಗಳು ಕಂಪ್ಯೂಟರ್ ಗಳೆ.ಕಂಪ್ಯೂಟರ್ ಅನ್ನು ನಮಗೆ ಬೇಕಾದ ಕೆಲಸಕ್ಕೆ ಬಹಳ ಸುಲಭವಾಗಿ ಬಗ್ಗಿಸಬಹುದು.ಅಂದರೆ ಹಾಡು ಕೇಳಬಹುದು ಅಥವಾ ಅದೇ ಕಂಪ್ಯೂಟರ್ ನಲ್ಲಿ ಕಡತಗಳನ್ನು ಟೈಪಿಸಿ ಮುದ್ರಿಸಲೂ ಬಹುದು.

ಅದೇ ಒಂದು MP3 Player ಆದ್ರೆ ಬರೀ ಹಾಡನ್ನಷ್ಟೇ ಕೇಳಬಹುದು.ಅದರಲ್ಲೂ ಕಂಪ್ಯೂಟರ್ನಲ್ಲಿರೋ ಅಂಥದ್ದೇ ಒಂದು ಶಕ್ತಿಶಾಲಿ ಪ್ರಾಸೆಸರ್ ಇದೆ.ಆದರೆ ಅದಕ್ಕೆ ಬರೀ ಹಾಡು ಹಾಡಿಸೋದಷ್ಟೆ ಗೊತ್ತು!ಅದು ಬರೀ ಒಂದು ರೀತಿಯ ಕೆಲಸವನ್ನು ಮಾತ್ರ ಮಾಡೋದರಿಂದ ಅದರಲ್ಲಿ ಉಪಯೋಗಿಸೋ ಪ್ರಾಸೆಸರ್ ಬೆಲೆ ತುಂಬಾ ಕಮ್ಮಿ ಇರುತ್ತೆ.ಹಾಗಾಗಿ MP3 Player ಬೆಲೆ ಕಡಿಮೆ.ಕಂಪ್ಯೂಟರ್ ಬೆಲೆ ತೀರಾ ಜಾಸ್ತಿ.

ಅದೇ ರೀತಿ ವಾಷಿಂಗ್ ಮೆಶಿನ್ ನಲ್ಲೂ ಒಂದು ಪ್ರಾಸೆಸರ್ ಇದೆ.ಆದರೆ ಪಾಪ ಅದಕ್ಕೆ ಬಟ್ಟೆ ಒಗೆಯೊದು ಬಿಟ್ಟು ಬೇರೇನೂ ಗೊತ್ತಿಲ್ಲ! ಈಗೀಗ ಅದರ ಬುದ್ಧಿ ಸ್ವಲ್ಪ ಬೆಳೆದಿದೆ ಅನ್ನಿ.ಬಟ್ಟೆ ಒಗೆಯೋದಲ್ಲದೆ ಒಣಗಿಸಿಯೂ ಕೊಡುತ್ತೆ.ಟಿ.ವಿ ಯಲ್ಲೂ ಪ್ರಾಸೆಸರ್ ಇದೆ ಆದರೆ ಅದಕ್ಕೆ ವಿಡೀಯೋ ತೋರಿಸೋದು ಬಿಟ್ಟರೆ ಬೇರೇನೂ ಗೊತ್ತಿಲ್ಲ.

ಸಾರಾಂಶ ಇಷ್ಟೇ .ಈ ಎಲ್ಲಾ ವಸ್ತುಗಳೂ ಒಂದು ಮಿನಿ ಕಂಪ್ಯೂಟರ್ ಇದ್ದ ಹಾಗೆ .ಹಾಗಾಗಿ ಈ ಎಲ್ಲಾ ವಸ್ತುಗಳಲ್ಲೂ ಸಾಫ್ಟ್ವೆರ್ ಇದ್ದೇ ಇದೆ.ಕಂಪ್ಯೂಟರ್ ನಲ್ಲಿರೋ ಹಾಗೇನೇ ಈ ಟಿ.ವಿ ,ವಾಷಿಂಗ್ ಮೆಶಿನ್,ಸೆಟ್ ಟಾಪ್ ಬಾಕ್ಸ್ ,ಶೇವಿಂಗ್ ಮೆಶಿನ್,ಮಿಕ್ಸಿ ಎಲ್ಲಾದರಲ್ಲೂ ಪ್ರಾಸೆಸರ್ ,ಸಾಫ್ಟ್ವೇರ್ ಎರಡೂ ಇದ್ದೇ ಇರುತ್ತೆ .

ನಮಗೆ ಗೊತ್ತಿಲ್ಲ ಅಷ್ಟೇ !

ಮನುಷ್ಯನ ಉದಾಹರಣೆ ತಗೊಳ್ಳೋದಾದ್ರೆ ಕೈ ಒಂದು ಹಾರ್ಡ್ವೇರ್ ಅದೇ ಮೆದುಳು ಪ್ರಾಸೆಸರ್. ನಿಮಗೆ ಯಾರಿಗಾದರೂ ಹೊಡೆಯಬೇಕೆಂದರೆ.....ಬೇಡ ಬಿಡಿ ನೆಗೆಟಿವ್ ಥಿಂಕಿಂಗ್ ಬೇಡ! ನಿಮಗೆ ಯಾರನ್ನಾದರೂ ಮುಟ್ಟಬೇಕೆನಿಸಿದ ತಕ್ಷಣ ಏನಾಗುತ್ತೆ ಅಂದರೆ ಪ್ರಾಸೆಸರ್ ಆದ ಮೆದುಳಿಗೆ ಸಂಕೇತಗಳು ಹೋಗಿ ನಿಮ್ಮ ಕೈ ಯಾರನ್ನು ಮುಟ್ಟಬೇಕೋ ಅವರನ್ನು ಮುಟ್ಟುತ್ತೆ.ಇಲ್ಲಿ ಕೈ ಹಾರ್ಡ್ವೇರ್, ಮೆದುಳು ಪ್ರಾಸೆಸರ್ ,ಆದರೆ ಯಾರನ್ನು ಮುಟ್ಟಬೇಕು ,ಹೇಗೆ ಮುಟ್ಟಬೇಕು ,ಎಲ್ಲಿ ಮುಟ್ಟಬೇಕು ಅನ್ನೋ ಸಂಕೇತಗಳು ಕೊಡೋದಕ್ಕೆ ಒಂದು ಸಾಫ್ಟ್ವೇರ್ ಇದೆ.ದುರ್ದೈವವಶಾತ್ ಮಾಮೂಲಿನಂತೆ ಇಲ್ಲೂ ಸಾಫ್ಟ್ವೇರ್ ಕಣ್ಣಿಗೆ ಕಾಣಿಸಲ್ಲ!ಇಂಥ ಒಂದು ಅದ್ಭುತ ಸಾಫ್ಟ್ವೇರ್ ಬರೆದ ಇಂಜಿನಿಯರ್ ಹೆಸರು ’ದೇವರು’!

ಯಾರ್ಯಾರನ್ನೋ ಮುಟ್ಟೋದಕ್ಕೆ ನಿಮಗೆ ನಿಮ್ಮ ಪ್ರಾಸೆಸರ್ ಹೇಳಿದ್ರೆ ನಿಮ್ಮ ಸಾಫ್ಟ್ವೇರ್ ಹಾಳಾಗಿದೆ ಅಂತ ಅರ್ಥ!

ವಾಶಿಂಗ್ ಮೆಶಿನ್ ಉದಾಹರಣೆ ತಗೊಂಡ್ರೆ ಮೋಟರ್ ಎಷ್ಟು ಹೊತ್ತು ತಿರುಗಬೇಕು ,ಯಾವಾಗ ತಿರುಗೋದನ್ನು ನಿಲ್ಲಿಸಬೇಕು,ಯಾವಾಗ ಬಿಸಿಗಾಳಿ ಊದಬೇಕು ಎಲ್ಲಾದನ್ನು ನಿರ್ಧರಿಸೋದು ಸಾಫ್ಟ್ಟ್ವೇರ್ ಕೆಲಸ.

ಅದೇ ರೀತಿ ಟಿ.ವಿ ಯಲ್ಲಿ ರಿಮೋಟ್ ನಲ್ಲಿ ಬಟನ್ ಒತ್ತಿದ ತಕ್ಷಣ ಯಾವ ಚಾನೆಲ್ ಬದಲಾಯಿಸಬೇಕು ಅನ್ನೋದನ್ನು ನಿರ್ಧರಿಸೋದು ಸಾಫ್ಟ್ವೇರ್ .ಬದಲಾಯಿಸೋದು ಮಾತ್ರ ಪ್ರಾಸೆಸರ್ !ಈ ಹಾರ್ಡ್ವೇರ್ ಒಂಥರಾ ಗುಲಾಮ ಕಣ್ರಿ ಅದಕ್ಕೆ ಸಾಫ್ಟ್ವೇರ್ ಇಂಜಿನಿಯರ್ಗಳಿಗೆ ಸ್ವಲ್ಪ ಕೊಬ್ಬು ಜಾಸ್ತಿ,ಎಲ್ಲಾ ನಮ್ಮಿಂದಲೇ ಅಂತ .ಏನ್ ಮಾಡೋದು ಎಲ್ಲ ಪಡೆದು ಬಂದಿರಬೇಕು.

ಇನ್ನೊಂದು ಉದಾಹರಣೆ ತಗೊಳ್ಳೋಣ ATM ದು .ಹಣದ ವಿಚಾರ ಬಂದಾಗ ಎಲ್ಲರ ಕಿವಿಯೂ ನಿಮಿರುತ್ತೆ .ಇದು ಬರೀ ಉದಾಹರಣೆ ಮಾತ್ರ ಜಾಸ್ತಿ excite ಆಗ್ಬೇಡಿ.

ATM ನಿಂದ ನಿಮಗೆ ಒಂದು ಲಕ್ಷ ರೂಪಾಯಿ ಡ್ರಾ ಮಾಡಬೇಕು ಅಂದುಕೊಳ್ಳಿ (ಅದಕ್ಕೆ ಮೊದಲೇ ಹೇಳಿದ್ದು ಉದಾಹರಣೆ ಅಂತ)! ನೀವು ಕಾರ್ಡ್ ತುರುಕಿಸಿದ ತಕ್ಷಣ ನಿಮ್ಮ ಕಾರ್ಡ್ ನಲ್ಲಿರೋ ಮಾಹಿತಿಯನ್ನು ಓದೋದು ಹಾರ್ಡ್ವೇರ್ .ಮಾಹಿತಿ ಯನ್ನು ಹಾರ್ಡ್ವೇರ್ ಸಹಾಯದಿಂದ ಪಡೆದ ನಂತರ ಸಾಫ್ಟ್ವೇರ್ ಏನೇನೋ ಲೆಕ್ಕಾಚಾರ ಮಾಡಿ ದೂರದಲ್ಲೆಲ್ಲೋ ಇರೋ ಬ್ಯಾಂಕ್ ನ ಸರ್ವರ್ ಗೆ ಇಂಟರ್ನೆಟ್ ಮೂಲಕ ಸಂಪರ್ಕಿಸಿ ನಿಮ್ಮ ಖಾತೆಯಲ್ಲಿ ಎಷ್ಟು ಹಣ ಇದೆ,ನಿಮಗೆ ಒಂದು ಲಕ್ಷ ನೀಡಬಹುದೋ(ನಿಮ್ಮದೇ ಹಣ ಆಗಿದ್ರೂ!)ಅಂತ ನಿರ್ಧರಿಸೋದು ,ಕೊಡೋ ಹಣದಲ್ಲಿ ಸಾವಿರದ ನೋಟು ಎಷ್ಟಿರ್ಬೇಕು,ಐನೂರರ ನೋಟು ಎಷ್ಟಿರಬೇಕು ಅಂತೆಲ್ಲಾ ಲೆಕ್ಕಾಚಾರ ಮಾಡೋದು ಸಾಫ್ಟ್ವೇರ್ .ಎಲ್ಲಾ ಲೆಕ್ಕಾಚಾರ ಮಾಡಿದ ನಂತರ ಒಂದೊಂದೇ ನೋಟನ್ನು ಒಳಗಿರೋ ಒಂದು ಡಬ್ಬಿಯಿಂದ ಎತ್ತಿ ಎತ್ತಿ ಹೊರಗೆ ತಳ್ಳೋದು ಹಾರ್ಡ್ವೇರ್.

ಕಂಪ್ಯೂಟರ್ ಮೌಸ್ ಉದಾಹರಣೆ ತೊಗೊಂಡ್ರೆ ಆ ಪುಟ್ಟ ಮೌಸ್ ಒಳಗೂ ಒಂದು ಪುಟ್ಟ ಪ್ರಾಸೆಸರ್ ಇದೆ.ನೀವು ಎಡಗಡೆ ಬಟನ್ ಒತ್ತಿದ್ದೋ ಬಲಗಡೆ ಬಟನ್ ಒತ್ತಿದ್ದೋ ಅನ್ನೋದನ್ನು ಈ ಪ್ರಾಸೆಸರ್ ಗೊತ್ತು ಮಾಡಿಕೊಳ್ಳುತ್ತೆ ಮೊದಲು(ಎರಡೂ ಬಟನ್ ಒಮ್ಮೆಗೆ ಒತ್ತಿ ಪ್ರಾಸೆಸರ್ ತಲೆ ಕೆಡಿಸಬೇಡಿ ಪ್ಲೀಸ್),ಗೊತ್ತು ಮಾಡಿದ ನಂತರ ’ಈ ವ್ಯಕ್ತಿ ಎಡಗಡೆ ಮೌಸ್ ಒತ್ತಿದ್ದಾನೆ ’ ಅಂತ ಮಾಹಿತಿಯನ್ನು ಸಾಫ್ಟ್ವೇರ್ ಗೆ ವರ್ಗಾಯಿಸುತ್ತದೆ.ಯಾವ ಬಟನ್ ಒತ್ತಿದ್ದಾನೆ ಅಂತ ಗೊತ್ತಾದ ಮೇಲೆ ಸಾಫ್ಟ್ವೇರ್ ಏನೇನೋ ಲೆಕ್ಕಾಚಾರ ಹಾಕಿ ಮುಂದಿನ ಕಾರ್ಯಾಚಾರಣೆಯನ್ನು ನಿರೂಪಿಸುತ್ತದೆ.ನೀವಂದುಕೊಂಡಷ್ಟು ಸುಲಭ ಇಲ್ಲ ಬಿಡಿ ಲೆಕ್ಕಾಚಾರ! ಬ್ಲಾಗ್ ಬರೆಯುವಾಗಲೆ ನೋಡಿ ನೀವು ಎಡಗಡೆ ಬಟನ್ ಒತ್ತುತ್ತೀರ,ಆದರೆ ಆಗ ಮೌಸ್ ಪಾಯಿಂಟರ್ Publish Post ಮೇಲಿತ್ತಾ ಅಥವಾ Save Now ಮೇಲಿತ್ತಾ ಅನ್ನೋದನ್ನು ನಿರ್ಧರಿಸೋದಕ್ಕೆ ಸಾಫ್ಟ್ವೇರ್ ಸ್ವಲ್ಪ ತಲೆ ಕೆಡಿಸ್ಕೋಬೇಕಾಗುತ್ತೆ .

ಅಂದ ಹಾಗೆ ಟಾಯ್ಲೆಟ್ನಲ್ಲೂ ಈ ಹಾರ್ಡ್ವೇರ್ ಸಾಫ್ಟ್ವೇರ್ ಬಳಕೆಯಾಗುತ್ತೆ .ಟಾಯ್ಲೆಟ್ ಬೇಸಿನ್ ಮುಂದೆ ನಿಂತ ತಕ್ಷಣ ಅದರಲ್ಲಿ ಅಳವಡಿಸಿರೋ ಸೆನ್ಸರ್ ಸಾಫ್ಟ್ವೇರ್ ಗೆ ತಿಳಿಸುತ್ತೆ ’ಯಾರೋ ಟಾಯ್ಲೆಟ್ ಗಲೀಜು ಮಾಡಲು ಬಂದಿದ್ದಾನೆ ’ ಅಂತ ! ಹಾಗೆಯೇ ನೀವು ಹೋದ ತಕ್ಷಣ ’ಪಾಪಿ ನೀರು ಹಾಕದೆ ಹೋಗ್ತಿದ್ದಾನೆ ನೀರು ಹಾಕು ’ ಅಂತ ಹಾರ್ಡ್ವೇರ್ ಗೆ ತಿಳಿಸುತ್ತೆ .ಆಗ ಹಾರ್ಡ್ವೇರ್ ಸ್ವಿಚ್ ರಿಲೀಸ್ ಮಾಡಿ ನೀರು ಹೊರ ಹಾಕುತ್ತೆ.ಆದರೆ ’ಟಾಯ್ಲೆಟ್ ನಲ್ಲಿ ಉಚ್ಚೆ ಹೊಯ್ದ ಮೇಲೆ ನೀರು ಹಾಕೋ ಅಂಥ ಸಾಫ್ಟ್ವೇರ್ ಬರೆದಿದ್ದೀನಿ ನಾನು ’ ಅಂತ ಯಾವ ಸಾಫ್ಟ್ವೇರ್ ಇಂಜಿನಿಯರೂ ಹೇಳದ ಕಾರಣ ಬಹಳಷ್ಟು ಜನರಿಗೆ ಇಲ್ಲೂ ಸಾಫ್ಟ್ವೇರ್ ಬಳಕೆಯಾಗುತ್ತೆ ಅನ್ನೋ ಸತ್ಯ ಗೊತ್ತಿರಲ್ಲ !

ಇಸ್ರೋ ಉಪಗ್ರಹ ಉಡಾವಣೆ ಮಾಡೋ ಸಂದರ್ಭದಲ್ಲಂತೂ ಬಹಳಷ್ಟು ಕೆಲಸವನ್ನು ಮಾಡೋದು ಸಾಫ್ಟ್ವೇರ್.ಉಡಾವಣೆಯ ಒಂದೊಂದೇ ಹಂತವನ್ನು ಪರಿಶೀಲಿಸಿ ಎಲ್ಲಾ ಸರಿ ಇದ್ರೆ ರಾಕೆಟ್ ಬುಡಕ್ಕೆ ಬೆಂಕಿ ಹಚ್ಚುತ್ತೆ ಇಲ್ಲದಿದ್ದಲ್ಲಿ ಅಲ್ಲೆ STOP ಅನ್ನುತ್ತೆ.

ಈ ಪ್ರಾಸೆಸರ್ ಗಳಿಗೆ ಕನ್ನಡ ಅರ್ಥ ಆಗಲ್ಲ(ಇಂಗ್ಲೀಷೂ ಅರ್ಥ ಆಗಲ್ಲ ಬಿಡಿ)! ಅದರಿಂದಲೇ ಬಹಳಷ್ಟು ಜನ ಸಾಫ್ಟ್ವೇರ್ ಇಂಜಿನಿಯರ್ ಗಳು ತಮ್ಮ ಹೊಟ್ಟೆಪಾಡನ್ನು ನೋಡ್ಕೋತಾ ಇದ್ದಾರೆ! ಪ್ರಾಸೆಸರ್ ಅರ್ಥ ಆಗೋ ಭಾಷೆಯಲ್ಲಿ ಅದಕ್ಕೆ ಕೆಲಸ ಮಾಡಲು ಅಪ್ಪಣೆ ನೀಡೋದೇ ಸಾಫ್ಟ್ವೇರ್ ಕೆಲಸ.ಅಂಥ ಭಾಷೆಗಳೇ ಈ C ,C++,Java ಗಳು.ಈ ಭಾಷೆಯನ್ನು ಸಮರ್ಪಕವಾಗಿ ಬಳಸಬಲ್ಲವನೇ ಸಾಫ್ಟ್ವೇರ್ ಇಂಜಿನಿಯರ್.


ನಮಗೆಲ್ಲರಿಗೂ ಕನ್ನಡ ಬರುತ್ತೆ ಆದರೆ ಎಲ್ಲರೂ ಕನ್ನಡ ಪಂಡಿತರಾಗಲು ಸಾಧ್ಯ ಇಲ್ಲ ಅಲ್ಲವೇ? ಹಾಗೆಯೇ ಇದೂ !

Sunday, June 7, 2009

ಗೇರ್ ಗೇರ್ ಗೇರಣ್ಣ.....

ಇವತ್ತು ಬೆಳಿಗ್ಗೆ ಬಿ.ಇ.ಎಲ್ ಕಾಲೋನಿಯ ಒಳಗೆ ಹಾಗೆ ನಡೆದು ಹೋಗ್ತಾ ಇದ್ದೆ .ನಮ್ಮ ಮನೆ ಬಿ.ಇ.ಎಲ್ ಕಾಲೋನಿಯ ಆಸು ಪಾಸಿನಲ್ಲೇ ಇರೋದ್ರಿಂದ ಆಗಾಗ ಕಾಲೋನಿಯ ಒಳಗಿರುವ ಗಣಪತಿ ದೇವಸ್ಥಾನಕ್ಕೆ ಭೇಟಿ ಕೊಡೋದು ಹವ್ಯಾಸ.ಸಕ್ಕತ್ ಕೂಲ್ ಕಾಲೋನಿ ಇದು.ಹೀಗೆ ಕಾಲೊನಿಯ ಒಳಗಡೆ ನಡೆದುಕೊಂಡು ಹೋಗ್ತಾ ಇರ್ಬೇಕಾದ್ರೆ ಟಪಕ್ ಅಂತ ಒಂದು ಗೇರು ಹಣ್ಣು ಬಿತ್ತು.ಸ್ವಲ್ಪ ಟೈಮಿಂಗ್ ಹೆಚ್ಚು ಕಮ್ಮಿ ಆಗಿದ್ದಿದ್ರೆ ನನ್ ತಲೆ ಮೇಲೇ ಬೀಳ್ತಾ ಇತ್ತು ! ಸಧ್ಯ ತಪ್ಪಿಸಿಕೊಂಡೆ.

’ ಗೇರು ಹಣ್ಣು ತಲೆ ಮೇಲೆ ಬಿದ್ರೆ ಸಾಯ್ತಾರಾ ? ಏನೀ ಹುಡುಗ ವಿಪರೀತ ಆಡ್ತಾನೆ ’ ಅಂದುಕೋಬೇಡಿ .ಸಾಯಲ್ಲ ಆದ್ರೆ ಅದು ಶರ್ಟ್ ಮೇಲೇನಾದ್ರೂ ಬಿದ್ರೆ ಅದರ ಕಲೆ ಸರ್ಫ್ ಎಕ್ಸೆಲ್ ಮತ್ತೆ ಏರಿಯಲ್ ಎರಡೂ ಮಿಕ್ಸ್ ಮಾಡಿ ಒಗೆದರೂ ಹೋಗಲ್ಲ! ಅದಕ್ಕೆ ಭಯ .

ಗೇರು ಹಣ್ಣು ಬಿದ್ದಿದ್ದೆ ತಡ ನಾನು ಯೋಚಿಸೋದಕ್ಕೆ ಶುರು ಮಾಡಿದೆ.

ಅದು ಮೇಲೆ ಹೋಗದೆ ಕೆಳಗೇ ಯಾಕೆ ಬಿತ್ತು ಅಂತ ಅಲ್ಲ ಮಾರಾಯ್ರೇ ! ಅದೆಲ್ಲ ಆ ಪಾಪಿ ನ್ಯೂಟನ್ ಮೊದಲೇ ಎಲ್ಲಾ ಸಂಶೋಧನೆ ಮಾಡಿ ಮುಗಿಸಿದ್ದಾನೆ .ನನ್ನಂಥ ಬಡಪಾಯಿಗಳಿಗೆ ಏನೂ ಉಳಿಸಿಲ್ಲ ಈ ವಿಜ್ಞಾನಿಗಳು !ನಾನು ಯೋಚಿಸತೊಡಗಿದ್ದು ಬೆಂಗಳೂರಿನಂಥ ಮಹಾನಗರಿಯಲ್ಲಿ ಗೇರು ಹಣ್ಣು ಎಲ್ಲಿಂದ ಬಿತ್ತು ಅಂತ .

ತಲೆ ಎತ್ತಿ ನೋಡಿದ್ರೆ ಗೇರು ಹಣ್ಣಿನ ಮರ.’ನೀನು ತಲೆ ಎತ್ತಿ ನೋಡೋ ಅಗತ್ಯವೇ ಇರಲಿಲ್ಲ .ಒಂದು ವೇಳೆ ಗೇರು ಹಣ್ಣು ಬಿದ್ದಿದ್ದೇ ಅದ್ರೆ ಅದು ಗೇರು ಹಣ್ಣಿನ ಮರದಿಂದಲೇ ಆಗಿರುತ್ತೆ’ ಅಂತೆಲ್ಲಾ ನೀವು ನನ್ನ ಹತ್ತಿರ ವಾದಿಸಲು ಹೊರಟಿದ್ರೆ ಸ್ವಲ್ಪ ನಿಲ್ಲಿ. ಮಹಾಸ್ವಾಮಿ ಇದು ಬೆಂಗಳೂರು .ಐಟಿ-ಬಿಟಿ ನಗರ !ಯಾರಿಗೆ ಗೊತ್ತು ಎಲ್ಲೆಲ್ಲಿಂದ ಏನೇನು ಬೀಳುತ್ತೆ ಅಂತ ! ಅದಕ್ಕೆ ಸ್ವಲ್ಪ ತಲೆ ಎತ್ತಲು ಕಷ್ಟವಾದ್ರೂ ಪರ್ವಾಗಿಲ್ಲ ಕನ್ಫರ್ಮ್ ಮಾಡೋದೇ ಒಳ್ಳೆಯದು ಅನಿಸಿತು ನನಗೆ.

ಗೇರು ಹಣ್ಣು ಬಿದ್ದಿದ್ದು ನಿಜವಾದ ಗೇರು ಮರದಿಂದಲೇ.ಅದೆಷ್ಟು ಬಾರಿ ಬಿ.ಇ.ಎಲ್ ಕಾಲೋನಿಯ ಒಳಗಡೆ ಸುತ್ತು ಹಾಕಿದ್ದೇನೋ .ಒಂದು ದಿನವೂ ಗೇರುಮರ ಗಮನಿಸಿರಲಿಲ್ಲ ನಾನು !ಗೇರು ಮರವೇನು ಇಲ್ಲಿ ಎಲ್ಲಾ ಥರದ ಮರಗಳೂ ಕಾಣ ಸಿಗುತ್ತವೆ.ಪ್ರತಿ ಮನೆಯಲ್ಲೂ ಒಂದು ಗೇರು ಅಥವ ಹಲಸು ಅಥವ ಮಾವಿನ ಮರ ಇದ್ದೇ ಇದೆ.ತುಂಬಾ ಅದೃಷ್ಟಶಾಲಿಗಳು ಈ ಕಾಲೋನಿಯವರು.ಪಾಪ ಈ ಮರಗಳನ್ನು ನೆಟ್ಟವರು ರಿಟೈರ್ಡ್ ಆಗಿ ಎಲ್ಲಿದ್ದಾರೋ ? ಆದ್ರೆ ಅದರ ಫಲ ಮಾತ್ರ ತುಂಬಾ ಈಗ ಅಲ್ಲಿರೋ ಜನರಿಗೆ ಸಿಗುತ್ತಾ ಇದೆ.ಮರಗಳ ವಿಷಯದಲ್ಲಂತೂ ಇದೇ ಗೋಳು.ನಾವು ಗಿಡ ನೆಟ್ಟರೆ ನಮಗೆ ಫಲ ಸಿಗೋದು ಅಷ್ಟರಲ್ಲೇ ಇದೆ ಅಂತೇನಾದ್ರೂ ನಮ್ಮ ಪೂರ್ವಜರು ಸುಮ್ಮನಿದ್ದರೆ ನಮಗೆ ಚಿಪ್ಪೇ ಗತಿಯಾಗ್ತಾ ಇತ್ತು(ಅಯ್ಯೋ ಚಿಪ್ಪು ಸಿಗಲೂ ತೆಂಗಿನಮರ ನೆಟ್ಟಿರಬೇಕು ಅಲ್ವಾ!).

ನನಗೆ ಗೇರು ಹಣ್ಣೆಂದ್ರೆ ತುಂಬಾ ಇಷ್ಟ.ಈ ಹಣ್ಣನ್ನು ನೋಡಿದ ತಕ್ಷಣ ಬಾಲ್ಯಕ್ಕೆ ರಿವೈಂಡ್ ಆಗುತ್ತೆ ನೆನಪುಗಳು.ಗೇರು ಹಣ್ಣು ಅಂದ್ರೆ ಇಷ್ಟ ಅಂದ ತಕ್ಷಣ ಕೆಲವರು ತಲ ಕೆರ್ಕೋತಾ ಇರಬಹುದು .’ ಏನ್ ಟೇಸ್ಟ್ ಮಾರಾಯ ಈ ಹುಡುಗನದ್ದು ’ ಅಂತ! ನಿಜ ಹೇಳಬೇಕೂಂದ್ರೆ ಆ ಹಣ್ಣಿನ ಟೇಸ್ಟೇ ನೆನಪಿಲ್ಲ ನನಗೆ .ತಿಂದ್ರೆ ತಾನೇ ನೆನಪಿರೋದು .

ನಮ್ಮನ್ನು ಚಿಕ್ಕಂದಿನಲ್ಲೇ ಬಿಸಿನೆಸ್ ಮ್ಯಾನ್ ಗಳನ್ನಾಗಿ ಮಾಡಿದ್ದಕ್ಕಷ್ಟೇ ನನಗೆ ಆ ಹಣ್ಣಿನ ಬಗ್ಗೆ ವಿಪರೀತ ಪ್ರೀತಿ ,ಗೌರವ .ಗೇರು ಹಣ್ಣು ಕಾಣಿಸಿದ ತಕ್ಷಣ ಹುಡುಗರು ಮಾಡುವ ಮೊದಲ ಕೆಲಸ ಅಂದ್ರೆ ಆ ಹಣ್ಣನ್ನು ಕಾಲಿನಿಂದ ಒತ್ತಿ ಹಿಡಿದು ಅದರ ಬೀಜವನ್ನು ಕೀಳುವುದು !ಅಲ್ಲಿಯವರೆಗೆ ಫಳ ಫಳ ಹೊಳೀತಾ ಇದ್ದ ಗೇರು ಹಣ್ಣು ಮಾತ್ರ ಈಗ ವಿಲ ವಿಲ ಒದ್ದಾಡ್ತಿರೋ ಹಾಗೆ ಕಾಣ್ಸುತ್ತೆ ! ಅಪ್ಪಿತಪ್ಪಿ ಕೂಡಾ ಆ ಹಣ್ಣಿನ ರುಚಿ ನೋಡೋದಕ್ಕೂ ಹೋಗಲ್ಲ ಯಾರೂ .ಅಷ್ಟಕ್ಕೂ ಆ ಗೋಡಂಬಿ ಬೀಜ ತರೋ ಕಾಸಿನ ರುಚಿ ಮುಂದೆ ಹಣ್ಣಿನ ರುಚಿ ಯಾರಿಗೆ ಬೇಕು ಹೇಳಿ . ಬೇರೆ ಯಾವ ಹಣ್ಣೂ ಈ ಪರಿ ಕಾಸು ತಂದು ಕೊಟ್ಟಿರಲಿಕ್ಕಿಲ್ಲ ಹುಡುಗರಿಗೆ.

ನಮ್ಮ ಮನೆಯ ಹಿಂದೆಯೇ ಒಂದು ಗೇರು ಹಣ್ಣಿನ ಮರವಿತ್ತು.ನನ್ನ ಸ್ನೇಹಿತರೆಲ್ಲ ಊರಲ್ಲಿರೋ ಯಾವ ಗೇರು ಹಣ್ಣಿನ ಮರವನ್ನೂ ಬಿಡ್ತಾ ಇರಲಿಲ್ಲ.ಆದ್ರೆ ನನಗೆ ಅವರ ಥರ ಏಟು ತಿಂದುಕೊಂಡು ಗೇರು ಬೀಜ ಸಂಗ್ರಹ ಮಾಡೋ ಹುಚ್ಚಿರಲಿಲ್ಲ(ಪರ್ಯಾಯ ಶಬ್ದ ಧೈರ್ಯ!).ಹಾಗಾಗಿ ನಾನು ನನ್ನ ಮನೆಯ ಹಿಂದಿರುವ ಗೇರು ಮರಕ್ಕಷ್ಟೇ ನಿಷ್ಠಾವಂತ ನಾಗಿ ’ಏಕ ಗೇರು ಮರ ವೃತಸ್ಥ ’ ಅನಿಸಿಕೊಂಡಿದ್ದೆ.ನನ್ನ ಕೆಲಸವೇನೂ ಸುಲಭದ್ದಾಗಿತ್ತು ಅಂದುಕೊಳ್ಳಬೇಡಿ.ಎರಡು ಬಲಿಷ್ಟ ನಾಯಿಗಳು ಆ ಗೇರುಮರದ ವಾಚ್ ಮ್ಯಾನ್(ವುಮನ್??)ಆಗಿ ನೇಮಕವಾಗಿತ್ತು.ಹಾಗಾಗಿ ಅಲ್ಲಿಂದ ಗೇರು ಹಣ್ಣನ್ನು ಎತ್ತಿ(ಕದ್ದು!) ತರೋದು ತುಂಬಾ ಚ್ಯಾಲೆಂಜಿಗ್ ಆಗಿರ್ತಾ ಇತ್ತು .

ಗೇರು ಹಣ್ಣನ್ನು ಬೀಳಿಸಲು ಕಲ್ಲೆಸೆಯಬೇಕಾದರೆ ನಮಗೆ ಬರೀ ಗೇರು ಹಣ್ಣಷ್ಟೆ ಕಾಣಿಸ್ತಾ ಇತ್ತು ! ಬೇರೇನೂ ಕಾಣಿಸ್ತಾ ಇರಲಿಲ್ಲ .ಅರ್ಜುನನಿಗಿದ್ದ ಏಕಾಗ್ರತೆ ನಮಗಿತ್ತು ಅಂತ ನೀವೇನಾದರೂ ಅಂದುಕೊಂಡಿದ್ದರೆ ಅದು ತಪ್ಪು !ನಮ್ಮ ಮನೆಯ ಕಂಪೌಂಡ್ ನಮಗಿಂತ ಎತ್ತರವಿತ್ತು .ಹಾಗಾಗಿ ಈ ಕಡೆಯಿಂದ ನಮಗೆ ಬರೀ ಮರದಲ್ಲಿರೋ ಗೇರು ಹಣ್ಣಷ್ಟೇ ಕಾಣಿಸ್ತಾ ಇತ್ತು ,ಬೇರೇನೂ ಕಾಣಿಸ್ತಾ ಇರಲಿಲ್ಲ!

’ದೇವರೇ ಮರದ ಕೆಳಗೆ ಯಾರೂ ನಡೆಯದಿರಲಿ ’ ಅಂತ ದೇವರಲ್ಲಿ ಪ್ರಾರ್ಥಿಸಿಯೇ ನಾವು ಕಲ್ಲೆಸೀತಾ ಇದ್ದಿದ್ದು.ಕೆಲವೊಂದು ಸಲ ನಾವು ಬೀಳಿಸಿದ ಗೇರು ಹಣ್ಣನ್ನು ನಮಗಿಂತ ಮೊದಲು ಆ ಹಾದಿಯಲ್ಲಿ ನಡೆದು ಹೋಗುವವರು ಎತ್ತಿ ಹೋಗೋದೂ ಇತ್ತು.Practice makes man/woman perfect ಅನ್ನೋ ಮಾತಿನ ಅರ್ಥ ನಮಗೆ ಆಗಲೇ ತಿಳಿದಿದ್ದು.ಯಾಕಂದ್ರೆ ದಿನಾ ಕಲ್ಲು ಎಸೆದು ಎಸೆದು ಗೇರು ಹಣ್ಣನ್ನು ಕೇವಲ ಒಂದೇ ಕಲ್ಲಲ್ಲಿ ಬೀಳಿಸುವ ವಿದ್ಯೆ ನಮಗೆ ಕರಗತವಾಗಿತ್ತು.ಅದೆಷ್ಟೇ ಪ್ರಯತ್ನಿಸಿದರೂ ಒಂದು ಕಲ್ಲಲ್ಲಿ ಎರಡು ಹಣ್ಣನ್ನು ಬೀಳಿಸುವ ಕಲೆ ಕರಗತವಾಗಲೇ ಇಲ್ಲ.

ನಮಗೆ ಹಣ್ಣನ್ನು ಬೀಳಿಸೋದು ದೊಡ್ಡ ಸಮಸ್ಯೆಯೇ ಆಗಿರಲಿಲ್ಲ .ಸಮಸ್ಯೆ ಇರ್ತಾ ಇದ್ದಿದ್ದೇ ಹಣ್ಣನ್ನು ಬೀಳಿಸಿದ ಮೇಲೆ ಅದನ್ನು ತರೋದ್ರಲ್ಲಿ!ಕಂಪೌಂಡ್ ನಮಗಿಂತ ಎತ್ತರವಾಗಿದ್ದರಿಂದ ದೂರದಿಂದ ಪೋಲ್ ವಾಲ್ಟ್ ಅಥ್ಲೀಟ್ ಥರ ಓಡಿ ಬಂದು ಕಂಪೌಂಡ್ ಮೇಲೆ ಲ್ಯಾಂಡ್ ಆಗ್ಬೇಕು.ಅದಾದ ಮೇಲೆ ಆ ಎರಡು ನಾಯಿಗಳು ಎಲ್ಲಿವೆ ಅನ್ನೋದನ್ನು ನೋಡಬೇಕು.ಯಾರೂ ಇಲ್ಲವೆಂದು ಖಚಿತವಾದ ಮೇಲೆ ಬಿದ್ದ ಗೇರು ಹಣ್ಣು ಎಲ್ಲಿದೆ ಅಂತ ಇಲ್ಲಿಂದಲೇ ಪತ್ತೆ ಮಾಡಬೇಕು.ಎಲ್ಲಾ ಸರಿ ಇದೆ ಅನ್ನೋದು ಖಾತ್ರಿಯಾದರೆ ಮಾತ್ರ ಚಂಗನೆ ಹಾರಿ ಗೇರು ಹಣ್ಣನ್ನು ಎತ್ತಿ ಜೋಬಿನೊಳಗೆ ಹಾಕಿ ಅದೇ ಸ್ಪೀಡಿನಲ್ಲಿ ಮತ್ತೆ ಅಥ್ಲೀಟ್ ಥರ ಚಂಗನೆ ಕಂಪೌಂಡ್ ಹಾರಿ ವಾಪಸ್ ಬರಬೇಕು.ಮೊದಲೇ ತಯಾರಿ ನಡೆಸದೆ ಅಲ್ಲಿ ಹೋಗಿ ಗೇರು ಹಣ್ಣು ಎಲ್ಲಿ ಬಿದ್ದಿದೆ ಅಂತ ಹುಡುಕ್ತಾ ಇದ್ರೆ ನಾಯಿಗಳು ಬಂದು ಚಡ್ಡಿ ಹರಿಯುತ್ತಿದ್ದವು ಅಷ್ಟೆ!

ಅಲ್ಲಿ ಎರಡು ನಾಯಿಗಳಿದ್ರೂ ಒಂದು ಮಜ ಥರೋ ಸಂಗತಿ ಇತ್ತು.ಎರಡೂ ನಾಯಿಗಳು ಸ್ನೇಹಿತರಾಗಿದ್ದರಿಂದ ಅವು ಎಲ್ಲೇ ಹೋದರೂ ಜೊತೆ ಜೊತೆಗೆ ಹೋಗುತ್ತಿದ್ದವು.ಹಾಗಾಗಿ ಅಸಲಿಗೆ ಅವು ಎರಡಾಗಿದ್ದರೂ ನಾವು ಒಂದರ ಮೇಲಷ್ಟೆ ನಿಗಾ ಇಟ್ಟರೆ ಸಾಕಾಗ್ತಾ ಇತ್ತು.ಅಷ್ಟರ ಮಟ್ಟಿಗೆ ಅವುಗಳ ಸ್ನೇಹ ನಮಗೆ ಸಹಕಾರಿಯಾಗಿತ್ತು.

ಹೀಗೆ ಬಹಳ ಕಷ್ಟಪಟ್ಟು ತಂದ ಗೇರು ಹಣ್ಣನ್ನು ಯಥಾ ಪ್ರಕಾರ ಕಾಲ ಕೆಳಗೆ ಇಟ್ಟು ಗೇರು ಬೀಜವನ್ನು ಎಳೆದು ಪಾಲೀಥೀನ್ ಚೀಲದೊಳಗೆ ಹಾಕಿ ಆ ಚೀಲದ ತೂಕವನ್ನೊಮ್ಮೆ ಕೈಯಲ್ಲೇ ತೂಗಿದಾಗಲೇ ನಮಗೆ ಸಮಾಧಾನ.ಹೀಗೆ ಎಲ್ಲಾ ಹುಡುಗರ ಆಸಕ್ತಿ ಗೇರು ಬೀಜವನ್ನು ಸಂಗ್ರಹಿಸೋದರಲ್ಲೇ ಇದ್ದಿದ್ದರಿಂದ ಮಂಗಳೂರಿನ ಹುಡುಗರಿಗೆ ಗೇರು ಹಣ್ಣಿನ ರುಚಿ ಗೊತ್ತಿರುವುದು ಸ್ವಲ್ಪ ಸಂಶಯ.ಮೊನ್ನೆ ಗೋವಾಗೆ ಹೋಗಿದ್ದಾಗ ಫೆನ್ನಿ ಕುಡಿದಾಗಲೇ ಗೇರು ಹಣ್ಣಿನ ನಿಜವಾದ ರುಚಿ ಗೊತ್ತಾಗಿದ್ದು ನನಗೆ !

ಕೆಲವು ಹುಡುಗರು ಹೀಗೆ ಕಂಡವರ ಮನೆಯ ಗೇರುಬೀಜವನ್ನು ಕದ್ದು ತಮ್ಮ ಥೈಲಿ ಭಾರ ಮಾಡುವುದಲ್ಲದೇ ಇನ್ನೊಂದು ವಿಧಾನದಿಂದಲೂ ತಮ್ಮ ಥೈಲಿಯ ಭಾರವನ್ನು ಹೆಚ್ಚಿಸುತ್ತಿದ್ದರು(ಕೆಲವೊಮ್ಮೆ ಇಳಿಸುತ್ತಿದ್ದರು!)

ಆ ಇನ್ನೊಂದು ವಿಧಾನವೇ ಗೇರು ಬೀಜದಾಟ! ಈ ಆಟದ ಬಗ್ಗೆ ಬರೆದರೆ ಅದೇ ಒಂದು ಲೇಖನವಾಗುತ್ತೆ.ತಮ್ಮಲ್ಲಿರೋ ಗೇರು ಬೀಜಗಳನ್ನು ಪ್ರತಿಸ್ಪರ್ಧಿಯ ಗೇರು ಬೀಜದೊಂದಿಗೆ ಮಣ್ಣಿನಲ್ಲಿ ನೇರ ನಿಲ್ಲಿಸಿ ಕಲ್ಲಿನಿಂದ ಅದಕ್ಕೆ ಗುರಿ ಇಟ್ಟು ಎಸೆದು...... ಹೀಗೆ ಆ ಆಟಕ್ಕೇ ದೊಡ್ಡ ನೀತಿ,ನಿಯಮಗಳಿವೆ.ಒಟ್ಟಿನಲ್ಲಿ ಆಟದ ಕೊನೆಗೆ ಒಂದೋ ನಿಮಗೆ ಪ್ರತಿಸ್ಪರ್ಧಿಯ ಗೇರು ಬೀಜಗಳು ದೊರೆಯುತ್ತವೆ ,ಅಥವಾ ನೀವು ನಿಮ್ಮ ಗೇರು ಬೀಜಗಳನ್ನು ಪ್ರತಿಸ್ಪರ್ಧಿಗೆ ಒಲ್ಲದ ಮನಸ್ಸಿನಿಂದ ವರ್ಗಾಯಿಸಬೇಕು !

ಹೀಗೆ ಇಡೀ ಗೇರು ಹಣ್ಣಿನ ಸೀಸನ್ ನಲ್ಲಿ ಗೇರು ಬೀಜಗಳನ್ನು ಸಂಗ್ರಹಿಸಿ ಅದನ್ನು ಅಂಗಡಿಗೆ ಹೊಗಿ ಮಾರಿದಾಗ ಅವನು ಕೊಡುವ ಗರಿ ಗರಿ ನೋಟು ಎಣಿಸಿದಾಗಲೇ ಹುಡುಗರಿಗೆ ಸಮಾಧಾನ.ಅವನು ನೂರು ರುಪಾಯಿಯ ಒಂದೇ ಒಂದು ನೋಟು ಕೊಟ್ರೆ ಅದಕ್ಕೂ ಸಿಟ್ಟು ಹುಡುಗರಿಗೆ! ಅದರ ಬದಲು ಹತ್ತು ರೂ ನ ಹತ್ತು ನೋಟು ಕೊಟ್ರೆ ಅದನ್ನು ಮತ್ತೆ ಮತ್ತೆ ಎಣಿಸಿ ಜೇಬಿಗಿಳಿಸೋದರಲ್ಲೇ ಮಜಾ ಇರೋದು.

ಈಗ ಬಿಡಿ ’ನಿಮ್ಮ ಸಂಬಳ ನಿಮ್ಮ ಅಕೌಂಟ್ ಗೆ ಜಮೆಯಾಗಿದೆ’ ಅಂತ ಒಂದೇ ಒಂದು SMS ಬರುತ್ತೆ ಅಷ್ಟೆ !

Sunday, May 31, 2009

ನಾಗೇಶ್ ಹೆಗ್ಡೆ ಯವರೊಂದಿಗೆ some-ವಾದ !


ಸುಮಾರು ಐದು ವರ್ಷಗಳ ಹಿಂದಿನ ಮಾತು.ರಾಜೀವ್ ದೀಕ್ಷಿತ್ ರ ಲೇಖನಗಳು ನನ್ನ ಮೇಲೆ ತೀವ್ರ ಪ್ರಭಾವ ಬೀರಿದ್ದವು.ಸ್ವದೇಶಿ ಚಿಂತನೆಗಳ ಬಗೆಗಿನ ವಿಚಾರಧಾರೆ ನನ್ನನ್ನು ತೀವ್ರವಾಗಿ ಕಾಡಿದ್ದವು.ಅದರಿಂದ ಎಷ್ಟು ತೊಂದರೆ ಅನುಭವಿಸಿದ್ದೆ ಅಂದರೆ ಅಪ್ರೆಂಟಿಶ್ ಶಿಪ್ ಮುಗಿದ ತಕ್ಷಣ ಅಮೆರಿಕಾ ಮೂಲದ ಕಂಪೆನಿಯೊಂದು ಕೆಲಸದ ಆಫರ್ ನೀಡಿದಾಗ ತಗೊಳ್ಳೋದೋ ಬಿಡೋದೋ ಅನ್ನೋ ಗೊಂದಲ!ಕಡೆಗೂ ಗೆಳತಿಯೊಬ್ಬಳ ಸಮಯೋಚಿತ ಉಪದೇಶದಿಂದ ’ಹಣವೇ ಜೀವನದಲ್ಲಿ ಮುಖ್ಯ ,ಉಳಿದ ವಿಷಯಗಳು ಹೊಟ್ಟೆ ತುಂಬಿದ ಮೇಲೆ ’ ಅನ್ನೋ ನಿರ್ಧಾರಕ್ಕೆ ಬಂದು ಸ್ವದೇಶಿ ಚಿಂತನೆಗಳಿಗೆ ತಿಲಾಂಜಲಿ ನೀಡಿದ್ದೆ!

ನಿನ್ನೆ ಮೇ ಫ್ಲವರ್ ನ ’ಫಿಶ್ ಮಾರ್ಕೆಟ್’ ಕಾರ್ಯಕ್ರಮದಲ್ಲಿ ಶ್ರೀ ನಾಗೇಶ್ ಹೆಗಡೆಯವರೊಂದಿಗಿನ ಸಂವಾದ ಮುಗಿದ ಮೇಲೆ ಬಹಳ ಸಮಯದ ನಂತರ ಮನಸ್ಸು ಮತ್ತೆ ಒಂಥರಾ ಗೊಂದಲದ ಗೂಡಾಗಿದೆ.ಜಿ ಎನ್ ಮೋಹನ್ ರವರು ’ಫಿಶ್ ಮಾರ್ಕೆಟ್ ನಲ್ಲಿ ಬರುವವರು ತಮ್ಮ ತಮ್ಮ ಅಭಿಪ್ರಾಯಗಳೊಂದಿಗೆ ಬಂದು,ತಮ್ಮ ಅಭಿಪ್ರಾಯಗಳೊಂದಿಗೇ ವಾಪಾಸ್ ಆಗಬೇಕು/ಆಗುತ್ತಾರೆ ’ ಅನ್ನೋ ಮಾತನ್ನು ಯಾವಾಗಲೂ ಹೇಳ್ತಿರ್ತಾರೆ.ಆದರೆ ಈ ಸಲ ನನ್ನ ಅಭಿಪ್ರಾಯಗಳು ನಾಗೇಶ್ ಹೆಗಡೆಯವರ ವಿಚಾರಧಾರೆಯಿಂದಾಗಿ ಸ್ವಲ್ಪ ವಿಚಲಿತಗೊಂಡಿರೋ ಹಾಗಿದೆ.

ಇಡೀ ಸಂವಾದ ಪರಿಸರ,ವಿಜ್ಞಾನ,ವಿಜ್ಞಾನದ ಅವೈಜ್ಞಾನಿಕ ಉಪಯೋಗ ಇಂಥದ್ದೇ ವಿಚಾರಗಳ ಸುತ್ತ ಸುತ್ತುತ್ತಿತ್ತು.ವೈಯುಕ್ತಿಕವಾಗಿ ನಾನು ಪರಿಸರವಾದಿಯಲ್ಲ.ನನಗೆ ಆ ಕುರಿತು ಆಸಕ್ತಿಯೂ ಇಲ್ಲ.ಬಹುಷ ನನ್ನ ತಂದೆಯವರಿಗೆ ಮರದ ಸಾ ಮಿಲ್ ಇದ್ದಿದ್ದೇ ಅದಕ್ಕೆ ಕಾರಣ ಇದ್ದಿರಬಹುದು ಅನಿಸುತ್ತದೆ! ಯಾರಾದರೂ ಹಸಿ ಹಸಿ ಮರ ಕತ್ತರಿಸಿ ನಮ್ಮ ಮಿಲ್ ಗೆ ತಂದು ಹಾಕಿದರೆ ಮಾತ್ರ ನಮ್ಮ ಬಿಸ್ ನೆಸ್ ಚೆನ್ನಾಗಿ ನಡೀತಾ ಇದ್ದಿದ್ದು.ಅದೂ ಅಲ್ಲದೆ ಪರಿಸರ ಸಂರಕ್ಷಣೆ ಬಗ್ಗೆ ಗಂಟೆ ಗಟ್ಟಲೆ ಮಾತಾಡಿ ’ತಮ್ಮ ಮನೆಗೆ ಮಾತ್ರ ತೇಗದ ಮರದ ಬಾಗಿಲೇ ಬೇಕು,ಅದರಲ್ಲಿ ದಶಾವತಾರದ ಕೆತ್ತನೆ ಇರಬೇಕು ’ ಅನ್ನೋ ಮನೋಭಾವನೆಯ ಜನರನ್ನ;ಜಾಗತೀಕರಣದ ,ಸಮಾಜವಾದದ ಬಗ್ಗೆ ಉಪದೇಶ ಕೊಟ್ಟು ಮರ್ಸಿಡಿಸ್ ಬೆಂಜ್ ನಲ್ಲಿ ಪುರ್ರನೆ ಹಾರಿ ಹೋಗುವ ಜನರನ್ನು ಕಂಡ ಮೇಲೆ ನನಗ್ಯಾಕೋ ’ದೊಡ್ಡವರ’ ಮಾತನ್ನು ಕೇಳುವುದೇ ಸ್ವಲ್ಪ ಕಷ್ಟ.

ಆದರೆ ನಾಗೇಶ್ ಹೆಗಡೆಯವರು ಮಾತ್ರ ಹಾಗಿರಲಿಲ್ಲ.ಗೆಳತಿ ಮಾಲತಿ ಶೆಣೈ ಅವರು ಹೇಳಿದ ಹಾಗೆ He is gem of a person !ಅವರ ಒಂದೊಂದು ಮಾತೂ ಬಹಳ ಪ್ರಭಾವಿಯಾಗಿತ್ತು.ಅವರು ತಮ್ಮ ಮಾತನ್ನು ಸಮರ್ಥಿಸಿಕೊಂಡ ರೀತಿಯೂ ಇಷ್ಟವಾಯಿತು.

ಹೇಳಿ ಕೇಳಿ ನಾನು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುವವನು.ನಿಮಗೆ ಈ ವರ್ಷ ಒಂದು ಟಿ.ವಿ ತೋರಿಸಿ ’ಅದ್ಭುತವಾಗಿದೆ ಕಣ್ರಿ ಅತ್ಯುತ್ತಮ ಟೆಕ್ನಾಲಜಿ ತಗೊಳ್ಳಿ ಅಂತ ಹೇಳಿ ,ಮುಂದಿನ ವರ್ಷ ಬೇರೆ ಮಾಡೆಲ್ ತೋರಿಸಿ ನಿಮ್ಮ ಬಳಿ ಈಗಿರೋದು ಸರಿ ಇಲ್ಲ ! ಇದು ಅದಕ್ಕಿಂತ ಸೂಪರ್ ’ ಅಂತ ಹೇಳಿ ಟೋಪಿ ಹಾಕುವಂಥ ಕಂಪೆನಿಗಳಿಗೆ ಕೆಲಸ ಮಾಡುತ್ತಿರುವವನು. ’ ವೈಜ್ಞಾನಿಕ ಆವಿಷ್ಕಾರಗಳೆಲ್ಲಾ ಹಣ ಉಳ್ಳವರು ತಮ್ಮ ಹಣದ ಥೈಲಿಯನ್ನು ಇನ್ನೂ ಭಾರಗೊಳಿಸುವ ಕೆಲಸ ಮಾಡುತ್ತಿವೆ ’ ಅನ್ನೋ ನಾಗೇಶ್ ಹೆಗಡೆಯವರ ಆರೋಪಕ್ಕೆ ಪುಷ್ಟಿ ನೀಡುವಂಥ ಕೆಲಸ ಮಾಡುತ್ತಿರುವವನು.ಹೆಗ್ಡೆಯವರ ಮಾತಿನಿಂದಾಗಿ ಒಮ್ಮೆ ಹೆಗಲು ಮುಟ್ಟಿ ನೋಡಿಕೊಳ್ಳುವಂತಾಗಿದೆ.

ಆದರೆ ಸಧ್ಯ ಜಾಸ್ತಿ ಹೊತ್ತು ನಾಗೇಶ್ ಹೆಗಡೆಯವರ ಜೊತೆ ಮಾತಾಡಿಲ್ಲವಾದ್ದರಿಂದ ನಾನಿನ್ನೂ ನನ್ನ ಅಭಿಪ್ರಾಯಗಳಿಂದಲೇ ಬದುಕಬಹುದಾಗಿದೆ.
ನಮಗೆ ಯಾವ ರೀತಿಯ ವಿಜ್ಞಾನ ಬೇಕು ,ಯಾವ ರೀತಿಯ ತಂತ್ರಜ್ಞಾನ ಬೇಕು ಅನ್ನೋದು ತುಂಬಾ ಚರ್ಚಾಸ್ಪದ ವಿಷಯ.ಹೆಗ್ಡೆಯವರು ತುಂಬಾ ಚೆನ್ನಾಗಿ ಒಂದು ಉದಾಹರಣೆ ಕೊಟ್ರು. ’ ನಮಗೆ ಪ್ಲ್ಯಾಸ್ಟಿಕ್ ಬೇಡ - ಈ ಭೂಮಿಯಲ್ಲಿ ಸುಲಭವಾಗಿ ಕರಗುವಂಥ ಪ್ಲ್ಯಾಸ್ಟಿಕ್ ಬೇಕು. ನ್ಯಾನೋ ಕಾರ್ ಬೇಡ, ನ್ಯಾನೋ ಕಾರ್ ನಷ್ಟೆ ಚೆನ್ನಾಗಿರುವ ಪರಿಸರ ಸ್ನೇಹಿ ನ್ಯಾನೋ ಬಸ್ ಬೇಕು .ಆದರೆ ಬಸ್ ನಿಂದಾಗಿ ಜಾಸ್ತಿ ಹಣ ಗಳಿಸೋಕಾಗಲ್ಲ ಅನ್ನೋ ಕಾರಣಕ್ಕೆ ಕಂಪೆನಿಯವರು ನ್ಯಾನೋ ಕಾರ್ ಮಾಡ್ತಾರೆ ವಿನಃ ಬಸ್ ಅಲ್ಲ ’ ಅಂತ.ತುಂಬಾನೇ ನಿಜ ಅಲ್ವಾ ಇದು?

ನನಗೂ ಪದೇ ಪದೇ ಇಂಥ ಜಿಜ್ಞಾಸೆ ಮೂಡೋದುಂಟು. ನಮಗೆ ಪಕ್ಕದ ಮನೆಯಲ್ಲಿರೋ ಸುರೇಶನ ಹತ್ತಿರ ಮಾತಾಡೋ ಅಷ್ಟು ವ್ಯವಧಾನ ಇಲ್ಲ .ಆದರೆ ದೂರದಲ್ಲಿರೋ ಯಾವನೋ ಅಪರಿಚಿತನ ಜೊತೆ ಯಾಹೂ ಚಾಟ್, ಆರ್ಕುಟ್ ಚಾಟ್ ಮಾಡೋದು ಇಷ್ಟ ! ಇಲ್ಲೇ ಮಲ್ಲೇಶ್ವರಂ ಮೈದಾನದಲ್ಲಿ ಆಗೋ ಕ್ರಿಕೆಟ್ ಮ್ಯಾಚ್ ನೋಡೋದಿಕ್ಕೆ ನಾವು ಮನೆ ಬಿಟ್ಟು ಹೊರ ಬರಲ್ಲ ಆದ್ರೆ ದೂರದ ಸೌತ್ ಆಫ್ರಿಕಾದಲ್ಲಿ ನಡೆಯೋ ಮ್ಯಾಚ್ ನ ಲೈವ್ ನೋಡೋದಿಕ್ಕೆ ಎಲ್ಲಿಲ್ಲದ ಉತ್ಸಾಹ!ದೂರದ ಪಾರ್ಕ್ ಗೆ ಬೈಕ್ ನಲ್ಲಿ ಹೋಗಿ ಅಲ್ಲಿ ವಾಕಿಂಗ್ ಮಾಡೋ ಜನ ನಾವು !ಸ್ವಂತದ ಬಟ್ಟೆ ಕೈಯಲ್ಲಿ ಒಗೆಯಲಾಗದೆ ಬೊಜ್ಜು ಬೆಳೆಸಿ ಆಮೇಲೆ ಟ್ರೇಡ್ ಮಿಲ್ ನಲ್ಲಿ ಕಿಲೋಮೀಟರ್ಗಳಷ್ಟು ದೂರ ವಾಕಿಂಗ್ ಮಾಡೋ ಜನ ನಾವು!

ನಮಗೆ ತಂತ್ರಜ್ಞಾನ ಬೇಕಿದೆ ಆದರೆ ಯಾತಕ್ಕೆ ಅನ್ನೋ ಪ್ರಶ್ನೆಗೆ ಉತ್ತರ ನಮ್ಮ ಬಳಿ ಇಲ್ಲ!ನಮಗೆ ವಿಜ್ಞಾನ ಬೇಕಾಗಿದೆ ಹೇಗೆ ಅನ್ನೋ ಪ್ರಶ್ನೆಗೆ ಉತ್ತರವಿಲ್ಲ !

ಭಾರತದಲ್ಲಿ ವೈಜ್ಞಾನಿಕ ಬರಹಗಳೇಕೆ ಅಷ್ಟು ಬರುತ್ತಿಲ್ಲ.ವಿದ್ಯಾರ್ಥಿಗಳ್ಯಾಕೆ ವಿಜ್ಞಾನದ ಕಲಿಕೆಗೆ ಆಸಕ್ತಿ ತೋರುತ್ತಿಲ್ಲ ಅನ್ನೋ ವಿಷಯದ ಬಗ್ಗೆಯೂ ಅಲ್ಲಿ ಚರ್ಚೆ ನಡೆಯಿತು.ಅದೃಷ್ಟವಶಾತ್ ಹಾಲ್ದೋಡ್ಡೇರಿ ಸುಧೀಂದ್ರ ಅಲ್ಲಿದ್ದರಿಂದ ಅದಕ್ಕೆ ಸಮರ್ಪಕ ಉತ್ತರ ದೊರೆಯಿತು.

ಪ್ರತಿಭಾ ಪಲಾಯನದ ಬಗೆಯೂ ಪ್ರಸ್ತಾವವಾದರೂ ಅದರ ಬಗ್ಗೆ ಹೆಚ್ಚಿನ ಚರ್ಚೆ ನಡೆಯಲಿಲ್ಲ.ವೈಯುಕ್ತಿಕವಾಗಿ ಪ್ರತಿಭಾ ಪಲಾಯನದ ಬಗ್ಗೆ ನನ್ನ ನಿಲುವೇ ಬೇರೆ .ಮಂಗಳೂರಿನಿಂದ ನಾನು ಬೆಂಗಳೂರಿಗೆ ಬಂದರೆ ಅದು ಹೊಟ್ಟೆ ಪಾಡು !ಆದರೆ ಪಾಪ ಯಾರೋ ಹೊಟ್ಟೆಪಾಡಿಗೆ ಅಮೆರಿಕಾಗೆ ಹೋದರೆ ಅದನ್ಯಾಕೆ ಪ್ರತಿಭಾ ಪಲಾಯನ ಅಂತಾರೋ ದೇವರಿಗೇ ಗೊತ್ತು.ಆದರೆ ಇಂಥ ವಿಷಯಗಳ ಹಣೆಬರಹವೇ ಇಷ್ಟು.ಎಲ್ಲಾ ಅವರವರ ಭಾವಕ್ಕೆ.

ಬಹಳ ದಿನಗಳ ನಂತರ ಹಾಸ್ಯ ಬಿಟ್ಟು ಗಂಭೀರವಾದ ಚಿಂತನೆಗೆ ತೊಡಗಿದ್ದಲ್ಲಿ ಅದಕ್ಕೆ ನಾಗೇಶ್ ಹೆಗಡೆಯವರೇ ನೇರ ಹೊಣೆ!

Sunday, May 24, 2009

ಚಿಟ್ಟೆ ಹೆಜ್ಜೆ ಜಾಡು....



ಕನ್ನಡ ಸಾಹಿತ್ಯ ಲೋಕಕ್ಕೊಂದು ಕಾದಂಬರಿಯ ಸೇರ್ಪಡೆಯಾಗಿದೆ .ಹಾಗೆಯೇ ಕನ್ನಡಕ್ಕೊಂದು ಹೊಸ ’ಟಂಗ್ ಟ್ವಿಸ್ಟರ್ ’ ಕೂಡಾ!
ಜೋಗಿಯವರ ಹೊಸ ಕಾದಂಬರಿ ’ಚಿಟ್ಟೆ ಹೆಜ್ಜೆ ಜಾಡು ’ ಇವತ್ತು ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಕಾದಂಬರಿಯ ಹೆಸರೇ ತುಂಬಾ ಆಕರ್ಷಕವಾಗಿದೆ ,ಹಾಗೇ ಅದೊಂದು ರೀತಿಯ ಟಂಗ್ ಟ್ವಿಸ್ಟರ್ ಕೂಡಾ! ನೀವು ಬಿಡದೆ ಕಾದಂಬರಿಯ ಹೆಸರನ್ನು ಹತ್ತು ಬಾರಿ ಹೇಳಿ ನೋಡಿ.ಒಂದೋ ಅದು ’ಚಿಟ್ಟೆ ಹೆಜ್ಜೆಯ ಹಾಡು ’ ಆಗುತ್ತೆ(ಈ ಸಾಧ್ಯತೆ ಹೆಚ್ಚು) ಅಥವಾ ’ಚಿಟ್ಟೆ ಜೆಜ್ಜೆ ಜಾಡು ’ ಆಗುತ್ತೆ(ಸಾಧ್ಯತೆ ಕಮ್ಮಿ ಆದರೂ ಅಲ್ಲಗಳೆಯುವ ಹಾಗಿಲ್ಲ!).ಇದ್ಯಾವುದೂ ಆಗದೇ ನೀವು ಹತ್ತು ಬಾರಿಯೂ ’ಚಿಟ್ಟೆ ಹೆಜ್ಜೆ ಜಾಡು ’ ಅಂತ ಸರಿಯಾಗಿ ಹೇಳಿದರೆ ನಿಮಗೆ ಕಾದಂಬರಿಯ ಒಂದು ಪ್ರತಿಯನ್ನು ಬಹುಮಾನವಾಗಿ ಕಳಿಸಿಕೊಡಲಾಗುತ್ತದೆ !(ರೂ.80ರ ಚೆಕ್ ಅನ್ನು ಅಂಕಿತ ಪ್ರಕಾಶನದ ಹೆಸರಲ್ಲಿ ಪ್ರಕಾಶ್ ಕಂಬತ್ತಳ್ಳಿಯವರಿಗೆ ಕಳಿಸಿದರಾಯಿತು ಅಷ್ಟೇ!)

ತೋಚಿದ್ದೆಲ್ಲಾ ಬ್ಲಾಗಿಗೆ ಬರೆಯುತ್ತಾನೆ ಕ್ಷೌರವನ್ನೂ,ಮೊದಲ ರಾತ್ರಿಯನ್ನೂ ಕೂಡಾ ಬಿಡಲ್ಲ ಅನ್ನೋ ಗಂಭೀರ ಆರೋಪ ನನ್ನ ಮೇಲಿದೆ !ಆದರೆ ಇಂಥ ಕಾರ್ಯಕ್ರಮದ ಬಗ್ಗೆ ನಾನು ಬರೆಯೋದು ಸುನಾಥ್ ಜಿಯಂಥ ಪ್ರೀತಿಯ ಓದುಗರಿಗೆ .ದೂರದ ಊರಲ್ಲಿದ್ದು ನನ್ನಂಥವರ ಬ್ಲಾಗ್ ಬರಹದ ಮೂಲಕ ಕಾರ್ಯಕ್ರಮದ ಬಗ್ಗೆ ಕಿಂಚಿತ್ ವಿವರ ತಿಳಿದುಕೊಳ್ಳುವ ಆಸಕ್ತಿ ಇರುವವರಿಗೆ ಅಷ್ಟೇ.

ಇತ್ತೀಚೆಗೆ ಪುಸ್ತಕ ಬಿಡುಗಡೆಯ ಕಾರ್ಯಕ್ರಮಗಳಿಗೆ ಜನರಂತೂ ಕಿಕ್ಕಿರಿದು ತುಂಬಿರ್ತಾರೆ.ಕಾರ್ಯಕ್ರಮ ಮುಗಿದ ನಂತರ ಜನ ಮುಗಿಬಿದ್ದು ಪುಸ್ತಕ ತಗೊಳ್ಳೋದು ಅಷ್ಟೇ ನಿಜ !ಆದರೆ ಕಾರ್ಯಕ್ರಮ ಮುಗಿದ ನಂತರದ ದಿನಗಳಲ್ಲಿ ಪಾಪ ’ಪ್ರಕಾಶ’ಕರು ಪುಸ್ತಕಗಳನ್ನು ಮಾರಲು ಅದೆಷ್ಟು ಕಷ್ಟ ಪಡ್ತಾರೋ ಆ ದೇವರೇ ಬಲ್ಲ.ಆದರೆ ಇಂಥಾ ಸಮಾರಂಭ ನೋಡಿದ ಮೇಲೆ ,ಕನ್ನಡ ಪುಸ್ತಕಗಳಿಗೆ ಮಾರುಕಟ್ಟೆಯಿಲ್ಲ ಅನ್ನೋ ಅಪವಾದ ಕಿಂಚಿತ್ ಕಮ್ಮಿ ಆಗ್ತಾ ಇದೆ ಅನ್ನೋ ಅನಿಸಿಕೆ ನನ್ನದು .
ನಾನೂ ಅಷ್ಟೆ ಓದ್ತೀನೋ ಬಿಡ್ತೀನೋ ಪುಸ್ತಕ ತಗೊಳ್ಳೋದು ಬಿಟ್ಟಿಲ್ಲ.

ಇವತ್ತಿನ ಕಾರ್ಯಕ್ರಮದಲ್ಲಿ ನನಗೆ ಖುಷಿ ಕೊಟ್ಟಿದ್ದು ಜೋಗಿ ಗೆಳೆಯ ಕುಂಟಿನಿಯವರ ಮಾತುಗಳು.ಯಾಕೋ ನನಗೆ ಹಾಸ್ಯ ಪ್ರಜ್ಞೆಯುಳ್ಳವರ ಮಾತುಗಳನ್ನು ಕೇಳೋದು ತುಂಬಾ ಖುಷಿ ಕೊಡುತ್ತೆ.ಮಂಗಳೂರಿನ ಟ್ರೇಡ್ ಮಾರ್ಕ್ ಆದ ಹಾಸ್ಯ ಪ್ರಜ್ಞೆಯನ್ನು ತಮ್ಮ ಮಾತಿನುದ್ದಕ್ಕೂ ಕುಂಟಿನಿಯವರು ತೋರಿಸಿದರು.ಈ ಮೂಲಕ ಅವರೇ ಹೇಳುವಂತೆ ಜೋಗಿಯ ಮಾನ ಹರಾಜಿಗೆ ಹಾಕಿದರು !

ಜೋಗಿಯ ಬಾಲ್ಯದ ಗೆಳೆಯ ಕುಂಟಿನಿ ಸಹಜವಾಗಿಯೇ ಕೆಲವು ’ಮಂಗಳೂರಿನ ಭಾಗದ ರಹಸ್ಯ ರಾತ್ರಿ’ಯ ಕಥೆಗಳನ್ನು ಬಹಿರಂಗಗೊಳಿಸಿದರು.ಜೋಗಿಯ ತುಂಟತನ ,ಅವರ ಅನ್ಯೋನ್ಯ ಸ್ನೇಹ,ಬಾಲ್ಯದ ನೆನಪುಗಳು ಸರಾಗವಾಗಿ ಹರಿದು ಬಂದವು ಕುಂಟಿನಿಯವರ ಮಾತಿನಲ್ಲಿ.

ಅವರು ಬಯಲುಗೊಳಿಸಿದ ರಹಸ್ಯಗಳಲ್ಲಿ ನನಗೆ ತುಂಬಾ ಖುಶಿ ಕೊಟ್ಟಿದ್ದು ಜೋಗಿಯವ ಪ್ರೇಮಾಂಕುರದ ರಹಸ್ಯ!ಕಾಲೇಜಿನ ಸಮಯದಲ್ಲಿ ಯಾವುದೋ ಒಂದು ಪಠ್ಯವಾಗಿದ್ದ ಇಂಗ್ಲೀಷ್ ಕಾದಂಬರಿ ಗೆಳತಿ ಜ್ಯೋತಿಯವರಿಗೆ ಅರ್ಥವಾಗಿಲ್ಲ ಅನ್ನೋ ಕಾರಣಕ್ಕೆ ಜೋಗಿಯವರು ಎರಡೇ ದಿನದಲ್ಲಿ ಅದನ್ನು ಕನ್ನಡಕ್ಕೆ ಅನುವಾದ ಮಾಡಿದ್ದೇ ಗಿರೀಶ್ ರಾವ್ ಜೋಗಿ ಆಗೋದಕ್ಕೆ ಮೊದಲ ಕಾರಣ ಅನ್ನೋ ರಹಸ್ಯವನ್ನು ಕುಂಟಿನಿಯವರು ಬಯಲು ಮಾಡಿದರು.ಜೋಗಿಯವರ ಬರವಣಿಗೆಯ ದೈತ್ಯ ಶಕ್ತಿಯನ್ನು ನಾವು ಇದನ್ನು ಕೇಳಿಯೇ ಕಲ್ಪಿಸಬಹುದು.

ಆದರೆ ಪಾಪ ಕುಂಟಿನಿಯವರಿಗೆ ಬೆಂಗಳೂರಿನ ಯಾವನೋ ಆಸಾಮಿ ಸರಿಯಾಗಿ ದ್ರೋಹ ಬಗೆದಿರೋದಂತೂ ನಿಜ .ಅವರ ಮಾತುಗಳಲ್ಲಿ ಬೆಂಗಳೂರಿನ ಜನರ ಆಶಾಢಭೂತಿತನದ ಬಗ್ಗೆ ಅಸಮಧಾನ ಪದೇ ಪದೇ ಕಂಡು ಬರುತ್ತಿತ್ತು.ಆದರೆ ಜೋಗಿ ಹೇಳಿದ ಹಾಗೆ ’ಮಗಳನ್ನು ಗಂಡನ ಮನೆಗೆ ಕಳಿಸಿಕೊಟ್ಟಂಥ ಪರಿಸ್ಥಿಯನ್ನು ಬಹುಷ ಕುಂಟಿನಿಯವರು ಜೋಗಿಯವರನ್ನು ಬೆಂಗಳೂರಿಗೆ ಕಳಿಸಿಕೊಟ್ಟಾಗ ಅನುಭವಿಸಿರಬೇಕು .ಅದಕ್ಕೇ ಆ ರೀತಿಯ ಅಸಮಾಧಾನ ಕುಂಟಿನಿಯವರಿಗೆ.

ಮತ್ತೊಂದು ಮಜವಾದ ಘಟನೆ , ಪೇಜಾವರ ಮಠದವರು ಆಯೋಜಿಸಿದ ಪ್ರಬಂಧ ಸ್ಪರ್ಧೆಯದ್ದು ! ’ಸಮಾಜ ನಿರ್ಮಾಣದಲ್ಲಿ ಯುವಜನರ ಪಾತ್ರ’ ಅನ್ನೋ ವಿಷಯದ ಮೇಲೆ ಪ್ರಬಂಧ ಸ್ಪರ್ಧೆಗೆ ಜೋಗಿಯವರು ತಮ್ಮ ಪ್ರಬಂಧವನ್ನು ಕಳಿಸಿದ್ದರಂತೆ.ಒಂಭತ್ತನೇ ತರಗತಿಯಲ್ಲಿದ್ದ ಜೋಗಿ ಆಗ ನಲವತ್ತು ಪುಟಗಳ ಪ್ರಬಂಧ ಬರೆದಿದ್ದರಂತೆ !ಅದೂ ಪ್ರಬಂಧದ ನಡು ನಡುವೆ ಜರ್ಮನ್ ದೇಶದ ಮನಶಾಸ್ತ್ರಜ್ಞ ಈ ರೀತಿ ಬರೆದಿದ್ದಾರೆ ,ಚೈನಾದ ವಿಜ್ಞಾನಿ ಟಿಂಗ್-ಲಿ ಅನ್ನೋರು ಈ ಬಗ್ಗೆ ಈ ರೀತಿ ಬರೆದಿದ್ದಾರೆ ಅನ್ನೋ ಸುಳ್ಳು ಸುಳ್ಳೂ ವ್ಯಾಖ್ಯಾನಗಳಿಂದಲೇ ಪ್ರಬಂಧದ ತೂಕ ಹೆಚ್ಚಿ ಅದು ಪ್ರಥಮ ಬಹುಮಾನ ಪಡೆದಿದ್ದು ,ಜೋಗಿ ಹಾಗೂ ಕುಂಟಿನಿ ಆ ಬಹುಮಾನವನ್ನು ಪಡೆಯಲು ಉಡುಪಿಗೆ ಹೋಗಿದ್ದು ,ಬಹುಮಾನದ ಹಣದಲ್ಲಿ ಉಷಾ ಹೋಟೇಲಿನಲ್ಲಿ ಒಂದೊಂದು ಬಿಯರ್ ಹೊಡೆದಿದ್ದು ಹೀಗೆ ರಸವತ್ತಾದ ಅನುಭವಗಳನ್ನು ಹಂಚಿಕೊಂಡರು ಕುಂಟಿನಿ.

ಜಿ. ಎನ್ ಮೋಹನ್ ರವರು ರಿಯಾಲಿಟಿ ಶೋಗಳ ಮನಸ್ಥಿಯಲ್ಲಿ ಬದುಕುತ್ತಿರುವ ಜನರ ಬದುಕಿನಲ್ಲಿ ಸಾಹಿತ್ಯಿಕ ಔಚಿತ್ಯದ ಬಗ್ಗೆ ಮಾತಾಡಿದರು.ಯಾವಾಗಲೂ ಹಾಸ್ಯಮಯವಾಗಿ ಮಾತಾಡುವ ಮೋಹನ್ ರವರು ಈ ರಿಯಾಲಿಟಿ ಮನಸ್ಥಿತಿಯಿಂದ ನಿಜಕ್ಕೂ ತಲ್ಲಣಗೊಂಡಿದ್ದ ಹಾಗೆ ಕಾಣಿಸಿತು.

ನಾಗತಿಹಳ್ಳಿಯವರು ಅಲ್ಲೇ ಪುಸ್ತಕದ ಕಿರು ವಿಮರ್ಶೆಯನ್ನೂ ಮಾಡಿದ್ರು .ಪುಸ್ತಕದ ಬಗ್ಗೆ ಸೊಗಸಾಗಿ ಮಾತಾಡಿದ ನಾಗತಿಹಳ್ಳಿ ಅವರ ಹೊಸ ಚಿತ್ರಕ್ಕೆ ’ಒಲವೇ ಜೀವನ ಲೆಕ್ಕಾಚಾರ ’ ಅನ್ನೋ ಹೆಸರಿಟ್ಟ ಜೋಗಿಗೆ ಕೃತಜ್ಞತೆ ಸಲ್ಲಿಸಿದರು.ನಾಗತಿಹಳ್ಳಿಯವರ ವಿಮರ್ಶೆ ನಾನಿಲ್ಲಿ ಬರೆದರೆ ಅದು ಬೇರೊಂದು ಅರ್ಥ ನೀಡುವ ಅಪಾಯವಿರೋದ್ರಿಂದ ಬರೀತಾ ಇಲ್ಲ ಕ್ಷಮಿಸಿ.

ಹಂಸಲೇಖಾ ರವರೂ ಪುಸ್ತಕದ ಬಗ್ಗೆ ,ಜೋಗಿಯ ಬಗ್ಗೆ ನಾಲ್ಕು ಮೆಚ್ಚುಗೆಯ ಮಾತನ್ನಾಡಿದರು.ಅವರು ತುರ್ತಾಗಿ ಬೇರೊಂದು ಕಾರ್ಯಕ್ರಮಕ್ಕೆ ಭಾಗವಹಿಸಲು ಇದ್ದರಿಂದ ಚಿಕ್ಕದಾಗಿ ಚೊಕ್ಕದಾಗಿ ಮಾತಾಡಿ ಜೋಗಿಗೆ ಶುಭ ಕೋರಿ ಹೊರ‍ಟರು ಅವರು.

ಕೊನೆಯದಾಗಿ ಮಾತಾಡಿದ ಜೋಗಿ ಗೆಳೆಯ ಕುಂಟಿನಿಯ ಬಗ್ಗೆ ಮೆಚ್ಚುಗೆಯ ಮಾತಾಡಿದರು.ಗೆಳೆಯ ಆತಂಕ ಪಟ್ಟಷ್ಟು ಬೆಂಗಳೂರೇನೂ ತಮ್ಮನ್ನು ಬದಲಿಸಿಲ್ಲ.ತಾನು ಬೆಂಗಳೂರಿನಲ್ಲಿ ಅತ್ಯಂತ ನೆಮ್ಮದಿಯಿಂದಿದ್ದೇನೆ ಅನ್ನೋ ಮಾತನ್ನೂ ಹೇಳಿದರು ಜೋಗಿ.

ಜೋಗಿಯವರ ಬಗ್ಗೆ ಮತ್ತಷ್ಟು ಓದಬೇಕಾದಲ್ಲಿ ಸಿಂಧು ಭಟ್ ರವರ ಅಮೃತಸಿಂಧು ನೋಡಿ.ಅವರು ಜೋಗಿಯ ಕೃತಿಗಳ ಬಗ್ಗೆ ಥೀಸೀಸ್ ಬರೀತಾ ಇದ್ದಾರೆ.ಅವರಿಗೆ ಆಲ್ ದಿ ಬೆಸ್ಟ್ !

Sunday, May 17, 2009

ಕೇವಲ ನೊರೆ ಇನ್ನೇನೂ ಇಲ್ಲ .......

ಶೀರ್ಶಿಕೆ ಅರ್ಥವಾಗದವರಿಗೊಂದು quick recap!
ಪಿಯುಸಿಯಲ್ಲಿದ್ದಾಗ "Just Lather, That's All" ಅನ್ನೋ ಹೆಸರಿನ ಪಾಠ ಒಂದಿತ್ತು.ಕ್ಷೌರಿಕನೊಬ್ಬನ ಮಾನಸಿಕ ತುಮುಲವನ್ನು ಸಮರ್ಪಕವಾಗಿ ಚಿತ್ರಿಸಿದ ಪಾಠ ಅದು .ಆ ದಿನಗಳಲ್ಲಿ ತುಂಬಾ ಖುಷಿ ಕೊಟ್ಟಿತು ಆ ಪಾಠ.ನಮ್ಮ ಇಂಗ್ಲೀಷ್ ಸರ್ ದತ್ತಾತ್ರೇಯ ಅನ್ನೋರು ಬಹಳ ಅದ್ಭುತವಾಗಿ ಆ ಪಾಠ ಮಾಡಿದ್ರು .ಈಗಲೂ ಸೆಲೂನ್ ಗೆ ಹೋದಾಗ ಕ್ಷೌರಿಕ ಗಡ್ಡಕ್ಕೆ ನೊರೆ ಹಚ್ಚುವಾಗ ನನಗೆ ಆ ಕತೆ ನೆನಪಿಗೆ ಬರುತ್ತೆ.

ನಾನು ಸೆಲೂನ್ ಗೆ ಹೋದಾಗ ಮೂಲಥ ನಿರುಪದ್ರವಿ.ಯಾವುದೇ ಎಕ್ಸ್ಪೆಕ್ಟೇಶನ್ ಇಲ್ಲ ಕ್ಷೌರಿಕನಿಂದ. ಅವನು ಮೊದಲು ಏನು ಹೇಳುತ್ತಾನೆ ಅದೇ ಫೈನಲ್ ! ’ಸಾರ್ ಮೀಡಿಯಂ ಇಡ್ಲಾ ’ ಅಂದ್ರೆ ’ಹೂಂ’ ! ’ಸಾರ್ ಶಾರ್ಟ್ ಇಡ್ಲಾ’ ಅಂದ್ರೆ ಅದಕ್ಕೂ ’ಹೂಂ’ !ಸಧ್ಯ ಯಾವುದೇ ಕ್ಷೌರಿಕ ’ಸಾರ್ ಬೋಳು ಮಾಡ್ಲಾ ?’ ಅಂತ ಕೇಳಲ್ಲ.

ಚಿಕ್ಕಂದಿನಿಂದಲೇ ನನಗೆ ಈ ಅಭ್ಯಾಸ .ಕಾರಣ ಏನಂದ್ರೆ ಚಿಕ್ಕಂದಿನಲ್ಲಿ ನಮ್ಮ ಊರಲ್ಲಿ ನಾನು ಸಲೂನ್ ಗೆ ಹೋದರೆ ನಾನು ಏನೇ ಹೇಳಿದ್ರೂ ಕ್ಷೌರಿಕ ಕೇಳ್ತಾನೇ ಇರಲಿಲ್ಲ.ಕೇಳೋದಿಕ್ಕೆ ಪಾಪ ಅವನಿಗೆ ಕಿವಿ ಕೇಳಿಸ್ತಾ ಇರಲಿಲ್ಲ ಮಾತೂ ಬರ್ತಾ ಇರಲಿಲ್ಲ! ನಾನು ಹೋದ ತಕ್ಷಣ ಒಂದು ಹಲಗೆಯನ್ನು ಖುರ್ಚಿಯ ಎರಡೂ ಕೈಗಳ ಮೇಲೆ ಇಟ್ಟು ನನ್ನ ಎತ್ತಿ ಅದರ ಮೇಲೆ ಕೂರಿಸಿ ಬಟ್ಟೆ ಹೊದಿಸ್ತಾ ಇದ್ದ.
ನನಗೆ ನನ್ನ ಅಣ್ಣಂದಿರೆಲ್ಲ ಭಯ ಹುಟ್ಟಿಸಿದ್ದರು ಆಗ ,ಸರಿಯಾಗಿ ಯಾವ ಸ್ಟೈಲ್ ಬೇಕು ಅಂತ ಮೊದಲೇ ಹೇಳದಿದ್ದರೆ ತಲೆ ಬೋಳು ಮಾಡಿ ಬಿಡ್ತಾರೆ ಅಂತ!
ಆ ಭಯದಿಂದ ನಾನು ಆ ಮೂಕ ಕ್ಷೌರಿಕ ಇರದೆ ಇದ್ದ ಸಮಯ ನೋಡೀನೆ ಸಲೂನ್ ಗೆ ನುಗ್ತಾ ಇದ್ದಿದ್ದು.ಆದರೆ ನಾನು ಹೋದ ತಕ್ಷಣ ಅದೆಲ್ಲಿಂದ ಪ್ರತ್ಯಕ್ಷ ಆಗ್ತಿದ್ನೋ ಅವನು ,ನನಗೆ ಮಾತ್ರ ಯಾವಾಗ್ಲೂ ಅವನೇ ತಗುಲಿ ಹಾಕ್ಕೊಳ್ತಾ ಇದ್ದ!

ಅವನು ಒಳ್ಳೆ ಕ್ಷೌರಿಕ.ಎರಡು ಸಲ ಕತ್ತರಿ ನನ್ನ ತಲೆಯ ಮೇಲಾಡಿಸಿದರೆ ಎಂಟು ಸಲ ಗಾಳಿಯಲ್ಲೇ ಕಚ ಕಚ ಅಂತ ಕತ್ತರಿಯ ಸದ್ದು ಮಾಡ್ತಾ ಇದ್ದ.ಒಳ್ಳೆ ಸಂಗೀತದ ಹಾಗೆ ಕೇಳ್ತಾ ಇತ್ತು ಅದು.ಬಹುಷ ಅದಕ್ಕೇ ಏನೋ ನನಗೆ ಕೂತಲ್ಲೇ ನಿದ್ದೆ ಬರ್ತಾ ಇತ್ತು.ಅವನಿಗೆ ಮಾತು ಬರದಿದ್ದರಿಂದ ಭಂಗಿ ಬದಲಾಯಿಸಬೇಕಾದರೆ ಕತ್ತರಿಯ ಹಿಡಿಕೆಯಿಂದಲೇ ನನ್ನ ತಲೆಗೆ ಟಕ್ ಅಂತ ಮೊಟಕುತ್ತಿದ್ದ ಅವನು.ನಾನು ಎದ್ದ ತಕ್ಷಣ ನನ್ನ ತಲೆಯನ್ನು ಹೇಗೇಗೋ ತಿರುಗಿಸಿ ಕೆಲಸ ಮುಂದುವರೆಸುತ್ತಿದ್ದ.ನಾನು ಯಥಾ ಪ್ರಕಾರ ಮತ್ತೆ ನಿದ್ದೆಗೆ ಜಾರುತ್ತಾ ಇದ್ದೆ.ಅವನು ಮತ್ತೆ ಹೊಡೆದಾಗ ವಿಪರೀತ ಸಿಟ್ಟು ಬರ್ತಾ ಇತ್ತು ನನಗೆ. ’ ಒಮ್ಮೆ ದೊಡ್ಡವನಾಗಿ ಬಿಡಲಿ ನಿನ್ನ ಕಡೆಗೆ ಬರೋದೆ ಇಲ್ಲ .ಒಳ್ಳೆ ಸಲೂನ್ ಗೆ ಹೋಗಿ ಸಕ್ಕತ್ ಆಗಿರೋ ಹೇರ್ ಸ್ಟೈಲ್ ಮಾಡಿಸಿಕೊಳ್ತೀನಿ ’ ಅಂತ ಮನಸಿನಲ್ಲೇ ಬಯ್ಕೊಳ್ತಾ ಇದ್ದೆ .

ನಾನು ಎಷ್ಟೇ ಸನ್ನೆ ಮಾಡಿ ಅವನಿಗೆ ಹೇಳಿದ್ರೂ ಅವನು ಲಾನ್ ಮೂವರ್ ನ ಹಾಗೆ ಕೆಲಸ ಮಾಡಿ ತುಂಬಾ ಚಿಕ್ಕದಾಗಿ ಇಡ್ತಾ ಇದ್ದ ಕೂದಲನ್ನು.ಅವನ ಬಳಿ ಹೋದ್ರೆ ಒಂದು ತಿಂಗಳು ಬಾಚಣಿಗೆಗೆ ಕೆಲಸವೇ ಇರ್ತಾ ಇರ್ಲಿಲ್ಲ.ನನ್ಗೆ ಆ ಹೇರ್ ಸ್ಟೈಲ್ ಇಷ್ಟ ಇರದಿದ್ದರೂ ಬೇರೆ ದಾರಿ ಇರಲಿಲ್ಲ. ಅವನು ನನ್ನ ಮೇಲೆ ಕರುಣೆ ತೋರಿಸಿ ಏನಾದರೂ ಸ್ಟೈಲ್ ಆಗಿರೋದನ್ನು ಮಾಡಿದ್ರೆ ತಂದೆ ಹೋಗಿ ದಬಾಯಿಸ್ತಾ ಇದ್ರು ಅವನಿಗೆ.

ಒಂದು ದಿನ ಹೀಗೆ ಅವನು ಇರದ ಸಮಯ ನೋಡಿ ಸಲೂನ್ ಗೆ ನುಗ್ಗಿದ್ದೆ.ಅವನ ಬದಲು ಬೇರೆಯವರ್ಯಾರೋ ಇದ್ರು.ತುಂಬಾನೇ ಖುಷಿ ಆಯ್ತು.ಸಧ್ಯ ಬಚಾವಾದೆ ಅಂದುಕೊಂಡೆ .ಅರ್ಧ ಗಂಟೆ ಆದ್ರೂ ಅವ್ನು ಬರದೇ ಇದ್ದದ್ದು ನೋಡಿ ನನಗೆ ಕಟ್ಟಿಂಗ್ ಮಾಡೋನ ಹತ್ರ ಕೇಳಿದೆ ’ಎಲ್ಲಿ ಪೊಟ್ಟಣ್ಣ ?(ಬಾಯಿ ಬರದವ್ರಿಗೆ ತುಳುವಿನಲ್ಲಿ ಪೊಟ್ಟ ಅಂತಾರೆ)’.

ಅದಕ್ಕೆ ಅವನು ’ಪೊಟ್ಟಣ್ಣ ನಿನ್ನೆ ಸತ್ತು ಹೋದ್ರು ಇನ್ನು ಮೇಲೆ ನಾನೆ ಇಲ್ಲಿ ಕೆಲಸಕ್ಕೆ ’ ಅಂದ.

ಅವನು ಇಲ್ಲದ್ದಕ್ಕೆ ಪಟ್ಟ ಖುಷಿ ಹೆಚ್ಚು ಹೊತ್ತು ಇರಲೇ ಇಲ್ಲ !

Monday, May 11, 2009

ಪಿಯುಸಿ - ಹೆಲ್ಪ್ ಲೈನ್ !

ಪ್ರತಿ ಸಲದ ಹಾಗೆ ನಮ್ಮೂರು ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದಿದೆ -ಸಂತೋಷದ ವಿಚಾರ ! ಆದರೆ ಈ ಸಲ ಹಿಂದಿನಂತೆ ಪಿ.ಯು.ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡವರು ಆತ್ಮಹತ್ಯೆಯ ಹಾದಿ ಹಿಡಿಯದ ಹಾಗೆ ಎಚ್ಚರ ವಹಿಸಿ ನಮ್ಮ ಸರಕಾರ ವಿಶೇಷ ಹೆಲ್ಪ್ ಲೈನ್ ಗಳನ್ನು ರಚಿಸಿ ಅದರ ಬಗ್ಗೆ ಪ್ರಚಾರವನ್ನೂ ಮಾಡಿದ್ರು.

ಆ ಹೆಲ್ಪ್ ಲೈನ್ ಗೆ ಕೆಲ ಹುಡುಗಿಯರು ಕಾಲ್ ಮಾಡಿ ತಾವು ಅನುತ್ತೀರ್ಣರಾಗೋ ಭಯವನ್ನು ವ್ಯಕ್ತಪಡಿಸಿದ್ದು ಹೆಲ್ಪ್ ಲೈನ್ ನಲ್ಲಿದ್ದ ತಜ್ಞರು ತಮ್ಮ ಬುದ್ಧಿ ಉಪಯೋಗಿಸಿ ಆ ಹುಡುಗಿಯರ ಮನ ಒಲಿಸಿದ್ದೂ ಆಯಿತು !

ಇವತ್ತು ಬೆಳಿಗ್ಗೆ ಎದ್ದು ಪೇಪರ್ ನೋಡಿದ್ರೆ ಕಾದಿತ್ತು ಸುದ್ದಿ .

ಪಿ.ಯು.ಸಿ ಯಲ್ಲಿ ಮಗಳು ಫೇಲ್ ಆಗಿದ್ದಕ್ಕೆ ತಂದೆ ಆತ್ಮಹತ್ಯೆ !!!

Sunday, May 10, 2009

ಮೊದಲ ರಾತ್ರಿಯ ಅನುಭವ !

ಈ ಲೇಖನದ ಶೀರ್ಷಿಕೆಯ ಸೆಳೆತದಿಂದ ನೀವು ಬಂದಿದ್ದರೆ ಮೊದಲೇ ಒಂದು ಸ್ಪಷ್ಟೀಕರಣ ಕೊಟ್ಟು ಬಿಡುವುದು ಒಳ್ಳೆಯದು! ಇಲ್ಲಾಂದ್ರೆ ನೀವು ನನಗೆ ಹಿಡಿ ಶಾಪ ಹಾಕೋದಂತೂ ಖಚಿತ.
ಮೊದಲನೆಯದಾಗಿ ನನಗಿನ್ನೂ ಮದುವೆಯಾಗಿಲ್ಲ,ಹಾಗಾಗಿ ನನ್ನ ಮೊದಲ ರಾತ್ರಿಯ ಬಗ್ಗೆ ಬರೆದಿಲ್ಲ(ಬರೆಯೋದೂ ಇಲ್ಲ ಬಿಡಿ!).ಇನ್ನು ಬೇರೆಯವರ ಮೊದಲ ರಾತ್ರಿಯ ರೋಚಕ(!?) ಕಥೆಯನ್ನೂ ನನಗೆ ಯಾರೂ ಹೇಳಿಲ್ಲ.

ಈ ಲೇಖನದ ಶೀರ್ಶಿಕೆ ’ಮೊದಲ ರಾತ್ರಿಯ ಕೊಠಡಿಯನ್ನು ಸಿಂಗರಿಸುವ ಅನುಭವ ' ! ಯಾಕೋ ತೀರಾ ಉದ್ದ ಅನಿಸಿತು ಅದಕ್ಕೆ ಸ್ವಲ್ಪ ಶಾರ್ಟ್ ಮತ್ತೆ ಸ್ವೀಟ್ ಆಗಿ ’ಮೊದಲ ರಾತ್ರಿಯ ಅನುಭವ’ ಅಂತ ಮಾಡಿದ್ದೀನಿ.ಯಾರಿಗಾದರೂ ಬೇಜಾರಾಗಿದ್ರೆ ದಯವಿಟ್ಟು ಕ್ಷಮಿಸಿ.

ಕೆಲವು ತಿಂಗಳ ಹಿಂದೆ ನನ್ನ ಸ್ನೇಹಿತನೊಬ್ಬನ ಮದುವೆ ನಡೆದಿತ್ತು ಬೆಂಗಳೂರಿನಲ್ಲೇ.ಸ್ನೇಹಿತ ಮಂಗಳೂರಿನವನೇ ಆದರೂ ಮದುವೆ ಬೆಂಗಳೂರಿನಲ್ಲೇ ಆಗಿತ್ತು.ಹುಡುಗ ಮನೆಯವರ ಇಚ್ಛೆಗೆ ವಿರುದ್ಧವಾಗಿ ಮದುವೆ ಆಗಿದ್ದ.ಮನೆಯವರು ಬೇಸರದಿಂದಲೇ ಮದುವೆಗೆ ಒಪ್ಪಿ ಬಂದಿದ್ದರು.ಸ್ವಥ ಮದುಮಗನ ಮನೆಯವರೇ ಅಥಿತಿಗಳ ಹಾಗೆ ಸುಮ್ಮನೆ ಕೂತಿದ್ದರು ಮೂಲೆಯಲ್ಲಿ.

ಹಾಗೂ ಹೀಗೂ ಮದುವೆ ಸಾಂಗವಾಗಿ ನೆರೆವೇರಿತು ಅನ್ನಿ .ಆದ್ರೆ ಸಮಾರಂಭದ ಮಧ್ಯೆ ಸ್ನೇಹಿತ ನಮ್ಮನ್ನು ಕರೆದು ’ಏಯ್ ಬೆಡ್ ಸ್ವಲ್ಪ ರೆಡಿ ಮಾಡ್ರೋ ’ ಅಂದುಬಿಟ್ಟ.ನಾವು ಮೂರು ಜನ ಸ್ನೇಹಿತರು ಅವನ ಮನೆಗೆ ಧಾವಿಸಿದೆವು.ಅಲ್ಲಿ ಹೋಗಿ ನೋಡಿದ್ರೆ ಒಂದು ಮಂಚ ಅದರ ಮೇಲೆ ಒಂದು ಕರ್ಲಾನ್ ಮ್ಯಾಟ್ರೆಸ್ ಅಷ್ಟೇ ಇದೆ! ಒಂದು ಬೆಡ್ ಶೀಟ್ ಕೂಡಾ ಹಾಕಿರಲಿಲ್ಲ.ಮನಸ್ಸು ಪಿಚ್ಚೆನಿಸಿ ಹತ್ತಿರದಲ್ಲೇ ಇದ್ದ ಒಂದು ಅಂಗಡಿಗೆ ಹೋಗಿ ಹೊಸ ಬೆಡ್ ಶೀಟ್ ತಗೊಂಡು ಹೊದಿಸಿದೆವು.ಇನ್ನೊಬ್ಬ ಸ್ನೇಹಿತ ’ನಾನು ಮತ್ತೆ ಕಲ್ಯಾಣ ಮಂಟಪಕ್ಕೆ ಹೋಗಿ ಹೂ ತಗೊಂಡು ಬರ್ತೀನಿ ’ ಅಂತ ಹೋದ .ಹತ್ತು ನಿಮಿಷದಲ್ಲಿ ಹೂವಿನೊಂದಿಗೆ ಬಂದಿದ್ದ.’ಏನೋ ಇದು ಬರೀ ಗೊಂಡೆ ಹೂವು ತಂದಿದ್ದೀಯಾ ಬೇರೆ ಯಾವುದೂ ಇರ್ಲಿಲ್ವ ?’ ಅಂದಿದ್ದಕ್ಕೆ ’ಇಲ್ಲ ಕಣ್ರೋ ಇದೊಂದೇ ಸಿಕ್ಕಿದ್ದು ಏನ್ ಮಾಡ್ಲಿ ’ ಅಂದ .

ನಮಗೆ ತೋಚಿದ ಹಾಗೆ ಗೊಂಡೆ ಹೂವಿನ ದಳಗಳನ್ನು ಬಿಡಿಸಿ ಬಿಡಿಸಿ ಹಾಸಿಗೆಯ ಮೇಲೆ ಸುರಿದೆವು.ನಮ್ಮ ಡೆಕೋರೇಶನ್ ಮುಗಿದು ಇನ್ನೇನು ಬೀಗ ಹಾಕಿ ಮತ್ತೆ ಕಲ್ಯಾಣ ಮಂಟಪಕ್ಕೆ ಹೊರಡಬೇಕು ಅನ್ನೋ ಅಷ್ಟರಲ್ಲಿ ಮದುಮಗನ ಅಕ್ಕ ಬಂದುಬಿಟ್ರು ಅವರ ಪುಟ್ಟ ಮಗಳೊಂದಿಗೆ!

ನಾವು ’ಆಂಟಿ ನಾವೆಲ್ಲಾ ಸಿಂಗಾರ ಮಾಡಿದ್ದೀವಿ ಬನ್ನಿ ವಾಪಾಸ್ ಹೋಗೋಣ ’ ಅಂದಿದ್ದಕ್ಕೆ ’ನೋಡೋಣ ಏನ್ ಮಾಡಿದ್ದೀರಿ ’ ಅನ್ನುತ್ತಾ ಬೆಡ್ ರೂಮ್ ಗೆ ಹೋಗಿ ನೋಡಿದ್ರು.ನಾವು ಮಾಡಿದ ಸಿಂಗಾರ ನೋಡಿ ಬಿದ್ದೂ ಬಿದ್ದು ನಗತೊಡಗಿದರು ಅವರು.’ಥೂ ಯಾರಾದ್ರೂ ಗೊಂಡೆ ಹೂ ಹಾಕ್ತಾರೇನ್ರೋ ? ಪಾಪ ಅವರ ಮೈ ಇಡೀ ಕೆಟ್ಟ ವಾಸನೆ ಬರಲ್ವೇನ್ರೋ ’ ಅಂದ್ರು.

ನಾವು ’ಆಂಟಿ ನೀವು ಹಾಗೆಲ್ಲ ನಗಬೇಡಿ ನಮಗೆ ಈ ರೀತಿ ಫಸ್ಟ್ ನೈಟ್ ರೂಮ್ ಅಲಂಕಾರ ಮಾಡಿ ಅಭ್ಯಾಸ ಇಲ್ಲ ’ ಅಂದ್ವಿ ಸಿಟ್ಟಿನಿಂದ.

ಅದಕ್ಕೆ ಆಂಟಿ ’ ಓಹ್ ಹಾಗಾ ಹಾಗಿದ್ರೆ ಇರಿ ನನ್ನ ಪುಟ್ಟಿ ಆರನೇ ಕ್ಲಾಸ್ ನಲ್ಲಿ ಓದೋದು ಅವಳು ನಿಮಗೆ ಹೇಳಿ ಕೊಡ್ತಾಳೆ ಕಲ್ತು ಕೊಳ್ಳಿ ’ ಅನ್ನೋದಾ.
ಅವರ ಮಗಳೂ ’ಬನ್ನಿ ನನ್ನ ಹಿಂದೆ ’ ಅಂತ ಆರ್ಡರ್ ಕೊಟ್ಟೇ ಬಿಟ್ಲು.ಅವರು ಬರುವಾಗಲೇ ಬೇರೆ ಬೇರೆ ರೀತಿಯ ಹೂಗಳನ್ನು ತಗೊಂಡು ಬಂದಿದ್ರು .
ಪುಟ್ಟಿ ’ ಛೇ ರೋಸ್ ಇಲ್ಲಾಂದ್ರೆ ಅದು ಹೇಗೆ ಫಸ್ಟ್ ನೈಟ್ ರೂಮ್ ಆಗುತ್ತೆ ಅಷ್ಟೂ ಗೊತ್ತಿಲ್ಲ ’ ಅನ್ನುತ್ತಾ ಗುರಾಯಿಸಿದಳು ನಮ್ಮನ್ನು ನೋಡಿ.

’ಅಮ್ಮಾ ತಾಯಿ ನೀನು ಎಷ್ಟನೇ ಕ್ಲಾಸು ’ ಅಂದಿದ್ದಕ್ಕೆ ’ ಆರನೇ ಕ್ಲಾಸ್ ’ ಅಂದ್ಲು ಸೀರಿಯಸ್ ಆಗಿ .

’ಆರನೇ ಕ್ಲಾಸಾ ಮತ್ತೆ ನಿನಗೆ ಹೇಗೆ ಇದೆಲ್ಲಾ ಗೊತ್ತು?’ ಅಂದಿದ್ದಕ್ಕೆ ’ ನಾನು ನನ್ನ ಎಲ್ಲಾ ಕಸಿನ್ ಗಳ ಫಸ್ಟ್ ನೈಟ್ ಗಳಲ್ಲಿ ಬೆಡ್ ರೂಮ್ ನ ಸಿಂಗರಿಸಿದ್ದೀನಿ ಅಮ್ಮನ ಜೊತೆ ’ ಅಂದ್ಲು.

ಅದಾದ ಮೇಲೆ ಅರ್ಧ ಗಂಟೆ ಅವಳು ಬಾಸ್ ನಾವು ಅವಳ ಅಸಿಸ್ಟೆಂಟ್ ! ಅವಳ ಅಮ್ಮ ದೂರದಲ್ಲಿ ಕೂತು ಮುಸಿ ಮುಸಿ ನಗೋದು ನಮ್ಮನ್ನು ನೋಡಿ.

ಎಲ್ಲಾ ಆದ ಮೇಲೆ ನನ್ನತ್ತ ನೋಡಿ ಆ ಹುಡುಗಿ ’ ಹೋಗಿ ಒಂದು ಪ್ಯಾಕ್ ಚಾಕಲೇಟ್ ತಗೊಂಡು ಬನ್ನಿ ,ಅದು ಹಾರ್ಟ್ ಶೇಪ್ ಚಾಕಲೇಟೇ ಆಗಿರ್ಬೇಕು ’ ಅಂತ ಆರ್ಡರ್ ಕೊಟ್ಟಳು .

ಅವಳ ಆಜ್ಞೆಯನ್ನು ಶಿರಸಾವಹಿಸಿ ಎಲ್ಲೋ ಹೋಗಿ ಚಾಕಲೇಟ್ ತಂದಿದ್ದೂ ಆಯ್ತು.

ಚಾಕಲೇಟ್ನ ಹಣ್ಣುಗಳ ಜೊತೆ ಒಂದು ಚಿಕ್ಕ ಟೇಬಲ್ ಮೇಲಿಟ್ಟು ಅದರ ಪಕ್ಕದಲ್ಲೇ ಒಂದು ಅಗರ ಬತ್ತಿ ಹೊತ್ತಿಸಿಟ್ಟಳು ’ಬನ್ನಿ ಹೊರಗೆ ಹೋಗೋಣ ರೂಮ್ ತುಂಬಾ ಈಗ ಅಗರಬತ್ತಿ ಸುವಾಸನೆ ತುಂಬಿರುತ್ತೆ ,ಯಾರೂ ಬಾಗಿಲು ತೆಗೆಯಬೇಡಿ ’ ಅನ್ನುತ್ತಾ ನಮ್ಮನ್ನೆಲ್ಲಾ ಹೊರಗೆ ಎಳೆದುಕೊಂಡು ಹೋದಳು.
ಹೊರಗೆ ಕೂತಿದ್ದ ಅವಳ ಅಮ್ಮ ’ ಏನು ಅನುಭವ ಇಲ್ಲ ಅಂದ್ರಲ್ಲ ? ನಮ್ಮ ಪುಟ್ಟಿ ನೋಡಿ ಎಷ್ಟು ಚೆನ್ನಾಗಿ ಮಾಡಿದ್ಲು ? ’ ಅನ್ನುತ್ತಾ ಪುಟ್ಟಿಯ ಹಣೆಗೊಂದು ಮುತ್ತು ಕೊಟ್ಟಳು ಆಂಟಿ !

ಅಮ್ಮ-ಮಗಳ ಫ್ರೆಂಡ್ ಶಿಪ್ ನೋಡಿ ತುಂಬಾ ಖುಷಿಯಾಗಿತ್ತು ಆ ದಿನ .ಇವತ್ತು ಅಮ್ಮಂದಿರ ದಿನದಂದು ಅವರ ನೆನಪಾಯ್ತು!

Wednesday, May 6, 2009

ರೈಟ್ ಪೋಯಿ....

ಕಳೆದ ವಾರಾಂತ್ಯದಲ್ಲಿ ಮಂಗಳೂರಿನಲ್ಲಿದ್ದೆ.ಧರ್ಮಸ್ಥಳ ಗಲಬೆಯಲ್ಲಿ ನನ್ನದೇನೂ ಕೈವಾಡವಿಲ್ಲ ಸ್ವಾಮಿ ,ನಾನು ಹೋಗಿದ್ದು ಗೆಳೆಯನ ಮದುವೆಗೆ!

ಮಂಗಳೂರಿನಲ್ಲಿದ್ದಷ್ಟೂ ದಿನ ನನಗೆ ಬಹಳಷ್ಟು ಖುಷಿ ಕೊಡೋದು ಅಲ್ಲಿನ ಬಸ್ ಪ್ರಯಾಣ !ಯಾರಾದ್ರೂ ’ಎಷ್ಟು ಘಂಟೆಗೆ ಸಿಗುತ್ತೀರಾ ?’ ಅನ್ನೋ ಪ್ರಶ್ನೆ ಕೇಳಿದ್ರೆ ಇಂತಿಷ್ಟೇ ಘಂಟೆಗೆ ಅಲ್ಲಿರುತ್ತೇನೆ ಅಂತ ಖಚಿತವಾಗಿ ಹೇಳಲು ಸಾಧ್ಯವಾಗೋದು ಬಹುಷಃ ಮಂಗಳೂರಿನಲ್ಲಿ ಮಾತ್ರ.
ಬಸ್ ಸ್ಟ್ಯಾಂಡ್ ನಲ್ಲಿ ನಿಂತಿರೋ ವ್ಯಕ್ತಿಯ ಬಳಿ ಸುಮ್ಮನೆ ’ಸುರತ್ಕಲ್ ಗೆ ಬಸ್ ಎಷ್ಟು ಘಂಟೆಗೆ ?’ ಅಂತ ಕೇಳಿ ನೋಡೀದ್ರೆ ’8.35 ಕ್ಕೆ ಗಣೇಶ್ ಪ್ರಸಾದ್ 8.45 ಕ್ಕೆ ದುರ್ಗಾಂಬಾ ,8.58 ಕ್ಕೆ ನವದುರ್ಗಾ ಹೀಗೆ ನೀವು ನಿಲ್ಲಿಸಿ ಅನ್ನೋ ತನಕ ಅವನ ಲಿಸ್ಟು ಮುಂದುವರೆಯುತ್ತದೆ.

ಆ ಬಸ್ಸುಗಳೂ ಹರಕೆ ಹೊತ್ತವರ ಹಾಗೆ ಅದೇ ಸಮಯಕ್ಕೆ ಬಂದೂ ಬಿಡುತ್ತವೆ .

ಈಗಂತೂ ಪ್ರತಿ ಬಸ್ ಸ್ಟ್ಯಾಂಡ್ ನಲ್ಲಿ ಟೈಂ ಕೀಪರ್ ಗಳ ಹಾವಳಿ ಬೇರೆ.ಹಿಂದೆ ಒಂದು ಬಸ್ ಏನಾದ್ರೂ ಒಂದೆರಡು ನಿಮಿಷ ಹೆಚ್ಚಿನ ಕಾಲ ಬಸ್ ಸ್ಟ್ಯಾಂಡ್ ನಲ್ಲಿ ನಿಂತು ಪ್ರಯಾಣಿಕರನ್ನು ಸೆಳೆಯಲು ಪ್ರಯತ್ನ ಮಾಡ್ತಾ ಇದ್ರೆ ಹಿಂದಿನಿಂದ ಬರುವ ಮತ್ತೊಂದು ಬಸ್ಸಿನವ ಮೊದಲ ಬಸ್ಸಿನವನ ಕೊರಳ ಪಟ್ಟಿ ಹಿಡಿದು ಜಗಳಕ್ಕೇ ನಿಲ್ಲುತ್ತಿದ್ದ.ಇದನ್ನು ತಪ್ಪಿಸಲೆಂದೇ ಈಗ ಟೈಂ ಕೀಪರ್ ಗಳನ್ನು ಇರಿಸಲಾಗಿದೆ.

ಮಂಗಳೂರಿನ ಬಸ್ಸುಗಳೀಗ ವಿಡೀಯೋ ಕೋಚ್ ಗಳಾಗಿವೆ.ಬಸ್ ಹತ್ತಿ ಒಂದೆರಡು ಸೀನ್ ನೋಡುವಷ್ಟರಲ್ಲೇ ನಮ್ಮ ಸ್ಟಾಪ್ ಬಂದಿರುತ್ತೆ ಅಲ್ಲಿ ಅದ್ಯಾವ ಮನರಂಜನೆಗೆ ವಿಡಿಯೋ ಹಾಕುತ್ತಾರೋ ದೇವರಿಗೇ ಗೊತ್ತು.ಮೂಲ್ಕಿಯಿಂದ ಉಡುಪಿಗೆ ಅರ್ಧ ಗಂಟೆಯ ಪ್ರಯಾಣ .ಅಂಥ ಸಮಯದಲ್ಲಿ ವಿಡಿಯೋ ಸ್ವಲ್ಪ ಮನರಂಜನೆ ಕೊಡುತ್ತೆ ಅಂತ ಅಂದುಕೊಂಡ್ರೆ ಅದು ನಿಮ್ಮ ತಪ್ಪು !
ಮೊನ್ನೆ ಹಾಗೇ ಆಯ್ತು.’ದಾಸ’ ಸಿನೆಮಾ ಹಾಕಿದ್ದರು ಬಸ್ ನಲ್ಲಿ, ಒಳ್ಳೆ ಇಂಟರೆಸ್ಟಿಂಗ್ ಸೀನ್ ಬರುವಾಗಲೇ ನನ್ನ ಸ್ಟಾಪ್ ಬರೋದಾ! ಆಗಿದ್ದಾಗಲಿ ಅಂದುಕೊಂಡು ಸೀನ್ ಮುಗಿದ ಮೇಲೇನೆ ನಾನು ಮುಂದಿನ ಸ್ಟಾಪ್ ನಲ್ಲಿ ಇಳಿದದ್ದು.ಸಧ್ಯ ಕಂಡಕ್ಟರ್ ಗೆ ಗೊತ್ತಾಗಲಿಲ್ಲ,ಇಲ್ಲಾಂದ್ರೆ ಮಂಗಳಾರತಿ ಗ್ಯಾರಂಟಿ.

ಶಾಲೆಗೆ ಹೋಗುತ್ತಿದ್ದಾಗ ಐದು ನಿಮಿಷಕ್ಕೊಂದು ಬಸ್ ಇದ್ದರೂ ದಿನಾ ಒಂದೇ ಬಸ್ ನಲ್ಲಿ ಹೋಗುತ್ತಿದ್ದೆ ನಾನು.ಬಹುತೇಕ ಮಂಗಳೂರಿನ ಎಲ್ಲರೂ ಹೀಗೆ ’ಏಕ ಬಸ್ ವೃತರು’.ಶಾಲೆಗೆ,ಕೆಲಸಕ್ಕೆ ಹೋಗುವ ಎಲ್ಲರೂ ಯಾವುದಾದರೂ ಒಂದೇ ಬಸ್ ನಲ್ಲಿ ಹೋಗುವ ಅಭ್ಯಾಸ ಮಾಡಿಕೊಂಡಿರುತ್ತಾರೆ.

ನನ್ನ ಬಸ್ ಬೆಳಿಗ್ಗೆ 8.35ಕ್ಕೆ .ಮನೆಯಿಂದ ಕಾಲು ಹೊರಕ್ಕಿಟ್ಟರೆ ಅಲ್ಲೇ ಬಸ್ ಸ್ಟಾಪ್ .ಆದರೂ ನಾನು ಮಾತ್ರ ಎಂಟು ಘಂಟೆಗೇ ಹೋಗಿ ಬಸ್ ಸ್ಟಾಪ್ ನಲ್ಲಿ ಕೂರುತ್ತಿದ್ದೆ.ಎಂಟು ಘಂಟೆಯಿಂದ 8.35 ರ ತನಕ ಬರುವ ಎಲ್ಲಾ ಬಸ್ ನಲ್ಲಿ ,ಕಿಟಕಿಯ ಪಕ್ಕ ಕುಳಿತುಕೊಳ್ಳುವ ಹುಡುಗಿಯರು ಅಕಸ್ಮಾತ್ ಆಗಿ ತಲೆ ಹೊರ ಹಾಕಿ ನಕ್ಕರೆ ಅದು ’ನನ್ನನ್ನೇ ನೋಡಿ ನಕ್ಕಿದ್ದು ’ ಅಂತ ಸುಳ್ಳು ಸುಳ್ಳೇ ಸಂಭ್ರಮಿಸುತ್ತಿದ್ದೆ!

ಕಾಲೇಜು ದಿನಗಳಲ್ಲಂತೂ ಶಿಲ್ಪಾ ಸಿಗುತ್ತಾಳೆ ಅನ್ನೋ ಒಂದೇ ಒಂದು ಕಾರಣಕ್ಕೆ ಮೂರು ವರ್ಷ ಒಂದೇ ಬಸ್ ನಲ್ಲಿ ಪ್ರಯಾಣಿಸಿದ್ದೆ.ಆ ಶಿಲ್ಪಾ ಈಗ ಯಾವ ಮನೆಯ ಅಂದವನ್ನು ಹೆಚ್ಚಿಸಿದ್ದಾಳೋ ದೇವರಿಗೇ ಗೊತ್ತು !

ಕಾಲೇಜಿನಲ್ಲಿರುವಾಗ ಕೂರಲು ಸೀಟ್ ಇದ್ದರೂ ಫುಟ್ ಬೋರ್ಡ್ ನಲ್ಲಿ ನೇತಾಡಿಕೊಂಡು ಹೋಗೋದು ನಮ್ಮೆಲ್ಲರ ಹವ್ಯಾಸ.ಹೀಗೇ ಹೋದರೇನೆ ಹುಡುಗಿಯರ ಮುಂದೆ ನಾವೆಲ್ಲಾ ಮ್ಯಾಚೋಮ್ಯಾನ್ ಗಳಾಗಿ ಕಾಣಿಸೋದು ಅನ್ನೊ ಭಾವನೆ ಇತ್ತು ನಮಗೆ.ಅವತ್ತಿಗೆ AXN TV ಇರಲಿಲ್ಲ ಇದ್ದಿದ್ದರೆ ನಮ್ಮ ಸಾಹಸ ಪುಟಗೋಸಿ ಅನ್ನೋದು ಆವಾಗಲೇ ತಿಳಿಯುತ್ತಿತ್ತು ಬಹುಷ !

ಚಿಕ್ಕಂದಿನಲ್ಲಿ ನಮ್ಮನ್ನೆಲ್ಲಾ ಬೆರಗು ಮೂಡಿಸುತ್ತಿದ್ದ ವಿಷಯ ಅಂದ್ರೆ ಹತ್ತಾರು ಊರುಗಳ ಹೆಸರನ್ನು ಕಂಡಕ್ಟರ್ ಸಹಸ್ರನಾಮದ ಹಾಗೆ ಹೇಳುತ್ತಿದ್ದದ್ದು !

ಕಾಪು,ಎರ್ಮಾಳ್,ಉಚ್ಚಿಲ,ಪಡುಬಿದ್ರಿ,ಹೆಜಮಾಡಿ,ಮುಲ್ಕಿ,ಕಾರ್ನಾಡ್,ಕೊಲ್ನಾಡ್,ಮುಕ್ಕ,ಹಳೆಯಂಗಡಿ,ಸುರತ್ಕಲ್ ಹೀಗೆ ಉದ್ದಕ್ಕೆ ನಾನ್ ಸ್ಟಾಪ್ ಆಗಿ ಊರಿನ ಹೆಸರು ಹೇಳಿ ಜನರೆಲ್ಲ ಹತ್ತಿದ ಮೇಲೆ ಬಾಯಿಗೆ ಒಂದೇ ಒಂದು ಬೆರಳು ತೂರಿಸಿ ಸೀಟಿ ಊದಿ ರೈಟ್ ಪೋಯಿ ಅನ್ನೋದನ್ನು
ಬಲು ಮಜ ಕೊಡುತ್ತಿತ್ತು .

ಬಾಲ್ಯದಲ್ಲಂತೂ ಯಾವ ಹುಡುಗನನ್ನೂ ’ನೀನು ದೊಡ್ಡವನಾದ ಮೆಲೆ ಏನಾಗ್ತೀಯ?’ ಅಂತ ಕೇಳಿದ್ರೆ ’ಡ್ರೈವರ್ ’ ಅನ್ನೋ ಉತ್ತರ ಸಿಗುತ್ತಿತ್ತು.

’ಯಮಲೋಕದ ದರ್ಶನವನ್ನೇ ಮಾಡಿಸುತ್ತಾರೆ ’ ಅನ್ನೋ ಆರೋಪ ಒಂದು ಬಿಟ್ಟರೆ ಮಂಗಳೂರಿನ ಬಸ್ಸುಗಳಲ್ಲಿ ಪ್ರಯಾಣಿಸೋದೆ ಒಂದು ಮಜಾ.

Sunday, April 26, 2009

ಕಲಾಕ್ಷೇತ್ರದಲ್ಲಿ ಪ್ರಕಾಶ್ ರೈ.

ಪ್ರೀತಿಯ ಮಣಿಕಾಂತ್ ಗೆ ಒಂದು ಥ್ಯಾಂಕ್ಸ್ ಹೇಳಲೇ ಬೇಕು. ’ಅಮ್ಮ ಹೇಳಿದ ಎಂಟು ಸುಳ್ಳುಗಳು’ ಪುಸ್ತಕದ ಬಿಡುಗಡೆಯ ನೆಪದಲ್ಲಿ ಅಷ್ಟೊಂದು ಚೆಂದನೆಯ ಕಾರ್ಯಕ್ರಮ ಆಯೋಜಿಸಿದ್ದಕ್ಕೆ.

ದೈತ್ಯ ಬರಹಗಾರ ರವಿ ಬೆಳಗೆರೆ ಅದ್ಭುತವಾಗಿ ಮಾತಾಡುತ್ತರಾದರೂ ಅವರ ಮಾತನ್ನು ನಾವು ಆಗಾಗ್ಗೆ ಕೇಳಲು ಅವರದ್ದೇ ಪುಸ್ತಕ ಬಿಡುಗಡೆಯ ಸಮಾರಂಭಗಳು ಅನುವು ಮಾಡಿ ಕೊಡುತ್ತೆ.ಹಾಗೆ ವಿಶ್ವೇಶ್ವರ ಭಟ್ರೂ ಬರೆಯುವಷ್ಟೇ ಚೆನ್ನಾಗಿ ಮಾತಾಡುತ್ತರಾದರೂ ಅವರ ಮಾತುಗಳನ್ನು ಕೇಳಲು ಬಹಳಷ್ಟು ಅವಕಾಶಗಳು ಸಿಗುತ್ತವೆ ನಮಗೆ.ಕೃಷ್ಣೇಗೌಡರ ಅದ್ಭುತ ಮಾತಿನ ವೈಖರಿಯನ್ನು ನಾನು ಮೊದಲ ಬಾರಿಗೆ ಕೇಳಿದೆನಾದರೂ ಅವರು ನಮ್ಮವರೇ.

ಅದರೆ ನನಗೆ ಕಾರ್ಯಕ್ರಮ ವೈಯುಕ್ತಿಕವಾಗಿ ಖುಷಿ ಕೊಟ್ಟಿದ್ದು ಪ್ರಕಾಶ್ ರೈ ಉಪಸ್ಥಿತಿ.ಪ್ರಕಾಶ್ ರೈ ಅವರನ್ನು ಈ ಕಾರ್ಯಕ್ರಮದ ನೆಪದಲ್ಲಿ ಭೇಟಿ ಮಾಡಿಸಿದ ಮಣಿಕಾಂತ್ (ಹಾಗೂ ಬಿ.ಸುರೇಶ್) ಅವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು !

ರವಿ ಬೆಳಗೆರೆ ಹೇಳಿದ ಹಾಗೆ ಕನ್ನಡ ಚಿತ್ರ ರಂಗವೊಂದನ್ನು ಬಿಟ್ಟು ದಕ್ಷಿಣ ಭಾರತದಲ್ಲಿ ಅತ್ಯಂತ ಜನಪ್ರಿಯರಾದ ನಟ ಪ್ರಕಾಶ್ ರೈ .ವಿಶ್ವೇಶ್ವರ ಭಟ್ರ ಮಾತಲ್ಲಿ ಹೇಳುವುದಾದರೆ ’ಎಲ್ಲಾ ಥರದ ಒಳ್ಳೆಯ ಪಾತ್ರಕ್ಕೆ ಸೈ -ಪ್ರಕಾಶ್ ರೈ ’!

ಪ್ರಕಾಶ್ ರೈ ಯನ್ನು ನೋಡುತ್ತಿದ್ರೆ ಕನ್ನಡ ಚಿತ್ರರಂಗ ಎಷ್ಟು ಒಳ್ಳೆಯ ನಟನನ್ನು ಕಳಕೊಂಡಿದೆ ಅನ್ನೋ ದುಖಃ ಯಾವಾಗಲೂ ಕಾಡುತ್ತೆ.ಎಷ್ಟಾದರೂ ಆ ಪುಸ್ತಕ ಬಿಡುಗಡೆಯ ಕಾರ್ಯಕ್ರಮವೇ ಭಾವುಕವಾದ್ದರಿಂದ ಈ ನೋವೂ ನಮ್ಮ ಕಣ್ಣನ್ನು ತೇವಗೊಳಿಸಲಿ ಬಿಡಿ.
ಪ್ರಕಾಶ್ ರ ಅತ್ಯಂತ ಸ್ವಚ್ಛ ಕನ್ನಡ ನನಗೆ ತುಂಬಾ ಖುಷಿ ಕೊಡ್ತು.ಅವರು ಹೇಳಿದ ಒಂದೊಂದು ಮಾತು ಕೂಡಾ!

ಕೃಷ್ಣೇಗೌಡ್ರ ಮಾತನ್ನು ನಾನು ಮೊದಲ ಬಾರಿಗೆ ಕೇಳಿದ್ದು ನಿನ್ನೆ ! ಅದ್ಭುತವಾಗಿ ಮಾತಾಡಿದ್ರು ಕೃಷ್ಣೇಗೌಡ್ರು.ಅವರ ಮಾತುಗಳನ್ನು ಕೇಳಿ ’ನಮಗೂ ಇಂಥ ಒಂದು ಮೇಷ್ಟ್ರು ಇದ್ದಿದ್ರೆ!’ ಅನ್ನೋ ಭಾವನೆ ನನಗೆ ಮೂಡಿದ್ದು ಸುಳ್ಳಲ್ಲ.ಕೃಷ್ಣೇಗೌಡ್ರು ಯಾವ ಸಬ್ಜೆಕ್ಟ್ ಕಲಿಸುತ್ತಾರೆ ಅನ್ನೋದೂ ನನಗೆ ಗೊತ್ತಿಲ್ಲ .ಆದ್ರೂ ಕೃಷ್ಣೇಗೌಡ್ರೇ ನೀವು ನಮಗೆ ಮೇಷ್ಟ್ರಾಗಬೇಕಿತ್ತು ಕಣ್ರಿ !

ಮಣಿಕಾಂತ್ ಪುಸ್ತಕದ ಬಗ್ಗೆ ,ಅದರಲ್ಲಿರೋ ಬರಹಗಳ ಬಗ್ಗೆ ,ಅಮ್ಮಂದಿರ ಬಗ್ಗೆ ,ಮಕ್ಕಳ ಬಗ್ಗೆ ತುಂಬಾ ಚೆನ್ನಾಗಿ ಮಾತಾಡಿದ್ರೂ ಕೃಷ್ಣೇಗೌಡ್ರು. ಅವರ ಸಾಮಾಜಿಕ ಕಳಕಳಿ ತುಂಬಾನೇ ಇಷ್ಟವಾಯ್ತು ನನಗೆ.ಅದರಲ್ಲೂ ಈಗಿನ ಸಮಾಜ ವೇಗದೋಟದಲ್ಲಿ ಬಿದ್ದು ವ್ಯವಧಾನದಿಂದ ಬದುಕುವುದನ್ನೇ ಮರೆತಿರೋದರ ಬಗ್ಗೆ ಅವರ ಕಾಳಜಿ ತುಂಬಾ ಅಭಿನಂದನೀಯ.

ರವಿ ಬೆಳಗೆರೆ ಮಾತಾಡೋದನ್ನೇ ಕಾಯುತ್ತಾ ಕುಳಿತಿದ್ದವರು ಅದೆಷ್ಟೋ ಜನ.ಸಮಾರಂಭಕ್ಕೆ ಅಷ್ಟೊಂದು ಜನರು ಬಂದಿರೋದಕ್ಕೆ ರವಿ ಬೆಳಗೆರೆಯ ಆಕರ್ಷಣೆಯೂ ಪ್ರಮುಖ ಕಾರಣ ಅಂದರೂ ತಪ್ಪಾಗಲಾರದು.ರವಿ ತಮ್ಮ ಎಂದಿನ ಧಾಟಿಯಲ್ಲಿ ಅಪ್ಪ-ಮಕ್ಕಳು(+ಸೊಸೆ+ಮೊಮ್ಮಕ್ಕಳನ್ನು)ಅದೆಲ್ಲಿಂದಲೋ ಎಳೆ ತಂದು ,ಮಾಮೂಲಿನಂತೆ ಜನರನ್ನು ನಗೆ ಗಡಲಲ್ಲಿ ತೇಲಿಸಿದರು.ಅದೇನು ಹೇಳಿದರು ಅಂತ ಇಲ್ಲಿ ಬರೆಯೋದು ಸ್ವಲ್ಪ ಕಷ್ಟ ! ಅವರ ಮೇಲೆ ಅಪ್ಪ-ಮಕ್ಕಳು ಕೇಸ್ ಹಾಕಿದ್ರೆ ಅವರು ಅದನ್ನು ನಿಭಾಯಿಸಬಹುದು ,ಆದರೆ ನನ್ನಂತ ಬಡಪಾಯಿಗೆ ಅದು ಸಾಧ್ಯ ಇಲ್ಲ.ಹಾಗಾಗಿ ರವಿ ಬೆಳಗೆರೆ ಸಿಡಿಸಿದ ಅಪ್ಪ-ಮಕ್ಕಳ ರೋಚಕ ಜೋಕ್ ಗಳಿಗೆ ನೀವು ನನ್ನನ್ನು ಅಥವಾ ಕಾರ್ಯಕ್ರಮದಲ್ಲಿ ಭಾಗಿಯಾದ ಇನ್ನಿತರರನ್ನು ಖುದ್ದಾಗಿ ಕೇಳೋದೇ ವಾಸಿ ಅನ್ನಿಸುತ್ತೆ!

ಪ್ರಕಾಶ್ ರೈ ತುಂಬಾ ಭಾವುಕರಾಗಿ ಮಾತಾಡಿದರು.ಕಲಾಕ್ಷೇತ್ರದೊಂದಿಗೆ ಅವರಿರುವ ನಂಟನ್ನು,ರಂಗಭೂಮಿಯಿಂದ ದೊರೆತ ಕಲಿಕೆಯನ್ನು ಅವರು ನೆನೆಸಿಕೊಂಡರು. ’ಕನ್ನಡ ರಂಗಭೂಮಿ/ಚಿತ್ರರಂಗದಲ್ಲಿ ಪಳಗಿಸಿಕೊಂಡ ಕಲೆಯ ಫಲವನ್ನು ತಮಿಳು,ತೆಲುಗಿನ ಜನ ಈಗ ನೋಡುತ್ತಿದ್ದಾರೆ ’ ಅನ್ನೋ ಮಾತು ನನ್ನನ್ನಂತೂ ತುಂಬಾ ಕಲಕಿತು.ನನಗೆ ಪ್ರಕಾಶ್ ರೈ ಯ ಧ್ವನಿಯೇ ತುಂಬಾ ಇಷ್ಟ .ಆ ಗಡಸು ಧ್ವನಿಯಲ್ಲಿ ಮಾತಾಡೋದು ಕೇಳೋದಂತೂ ಇನ್ನೂ ಇಷ್ಟ .ಜೊತೆಗೆ ಆ ಮಾತುಗಳು ಹೃದಯಕ್ಕೆ ತಟ್ಟುವಂತದ್ದಾಗಿದ್ದರೆ ಕೇಳಬೇಕೇ?

ಮಣಿಕಾಂತ್ ಬರಹದಲ್ಲಿ ಮಾತ್ರ ಭಾವುಕರಲ್ಲ ಮಾತಲ್ಲೂ ,ಕೃತಿಯಲ್ಲೂ ತುಂಬಾ ಭಾವುಕರು ಅನ್ನೋದು ಅವರ ಮಾತಿನಿಂದಲೇ ತಿಳಿಯುತ್ತಿತ್ತು.ತಮಗೆ ಕನ್ನಡ ಹೇಳಿಕೊಟ್ಟ ಟೀಚರ್ ಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿದ್ದು ನಿಜಕ್ಕೂ ಅಭಿನಂದನೀಯ.

ವಿಶ್ವೇಶ್ವರ ಭಟ್ರೂ ತಮ್ಮ ಎಂದಿನ ಧಾಟಿಯಲ್ಲಿ ಜೋಕುಗಳನ್ನು ಸಿಡಿಸುತ್ತಾ ,ಜನರನ್ನು ನಗಿಸುತ್ತಾ ಮಣಿಕಾಂತ್ ಬಗ್ಗೆ ಚೆನ್ನಾಗಿರೋ ನಾಲಕ್ಕು ಮಾತನ್ನಾಡಿದರು.ಮಣಿಕಾಂತ್ ತಮಗೆ ಬರಿದಿರೋ ಒಂದು ಕಾಗದವನ್ನು ಇವತ್ತಿಗೂ ಎತ್ತಿಟ್ಟಿರೋದರ ಬಗ್ಗೆ ಭಾವುಕರಾಗಿ ವಿವರಿಸಿದರು ಭಟ್ರು.

ಈ ಎಲ್ಲಾ ಕಾರ್ಯಕ್ರಮಕ್ಕೆ ಇನ್ನಷ್ಟು ಸೊಬಗು ತಂದದ್ದು ಉಪಾಸನಾ ತಂಡ. ಕಾರ್ಯಕ್ರಮದ ಶುರುವಿನಲ್ಲೇ ಬಹಳಷ್ಟು ಒಳ್ಳೆಯ ,ಸುಮಧುರ ಭಾವಗೀತೆಗಳನ್ನು ನಮಗೆಲ್ಲಾ ಕೇಳಪಡಿಸಿದ್ದು ಉಪಾಸನಾ ತಂಡ.ನಾಡಗೀತೆ ’ಜಯ ಭಾರತ ಜನನಿಯ ತನುಜಾತೆ’ ಕೇಳುವಾಗಲಂತೂ ರೋಮಾಂಚನಗೊಂಡಿದ್ದು ಸುಳ್ಳಲ್ಲ. ಅಷ್ಟು ಅದ್ಭುತವಾಗಿ ಹಾಡಿದ್ರು ಉಪಾಸನಾ ಮೋಹನ್ ತಂಡ.

ಮತ್ತೊಂದು ಗೀತೆ ’ಜಾಲಿ ಬಾರಿನಲ್ಲಿ ಕೂತು ಪೋಲಿ ಗೆಳೆಯರು ’ ಹಾಡೂ ಫ್ರೀ ಯಾಗಿ ಒಂದಿಷ್ಟು ಕಿಕ್ ನೀಡಿತ್ತು!ಆದರೆ ಇಂಥ ಸಭೆಯಲ್ಲಿ ’ಅತ್ತಿತ್ತ ನೋಡದಿರು ’ಅನ್ನೋ ಜೋಗುಳ ಹಾಡಿದ್ರೆ ಸುಧಾರಿಸೋದು ಸ್ವಲ್ಪ ಕಷ್ಟ .ತಾಯಿಯ ಮಡಿಲಲ್ಲಿದ್ದ ಕಂದಮ್ಮಗಳೇನೋ ಹಾಗೇ ನಿದ್ದೆಗೆ ಜಾರಿದವು ! ಬಡಪಾಯಿಗಳಾದ ನಾವು ಏನ್ ಮಾಡೋದು ಸ್ವಾಮಿ?

’ಕಾರ್ಯಕ್ರಮ ಮುಗಿದ ಮೇಲೆ ಹಾಡಿನ ದಿಬ್ಬಣ ಮುಂದುವರೆಯುತ್ತೆ’ ಅಂತ ನಿರೂಪಕರು ಹೇಳಿದ್ದರೂ ಹಸಿದ ಸಭಿಕರು ಆಗಲೇ ಎದ್ದೇಳತೊಡಗಿದ್ದರಿಂದ ದಿಬ್ಬಣ ಹೊರಡಲೇ ಇಲ್ಲ! ಕಾರ್ಯಕ್ರಮ ಸ್ವಲ್ಪ ಬೇಗನೆ ಶುರುವಾಗಿದ್ದರೆ ಈ ತೊಂದರೆ ತಪ್ಪುತ್ತಿತ್ತೇನೋ .ಆದರೆ ಏನು ಮಾಡೋದು ? ಕಾರ್ಯಕ್ರಮ ಬೇಗನೆ ಇಟ್ರೆ ಭಾನುವಾರ ಲೇಟ್ ಆಗಿ ಏಳೋ ನನ್ನಂಥವರಿಗೆ ತೊಂದರೆ ಆಗುತ್ತೆ ಅನ್ನೋ ಕಾಳಜಿ ಇರಬೇಕು ಮಣಿಕಾಂತ್ ಗೆ!

ಪುಸ್ತಕದ ಜೊತೆಗೆ ಉಪಾಸನಾದ ಕೆಲವು ಸಿ.ಡಿ ಗಳನ್ನೂ ಕೊಂಡು ತಂದೆ ನಾನು.ಇನ್ನು ಮೇಲೆ ದಿನಾ ಜಾಲಿ ಬಾರಿನಲ್ಲಿ ಕೂತು ಹಾಡು ಕೇಳಬಹುದು!

Saturday, April 25, 2009

ಬಾತ್ ರೂಮ್ ಸಿಂಗರ್ಸ್.....

ನನ್ನನ್ನೂ ಸೇರಿದಂತೆ ಬಹುತೇಕ ಜನರಿಗೆ ಸಂಗೀತವೆಂದರೆ ಪ್ರಾಣ.ಬಹಳಷ್ಟು ಜನರು ಒಳ್ಳೆಯ ಹಾಡುಗಾರರಾದರೂ ಅವಕಾಶದ ಕೊರತೆಯಿಂದ ತಮ್ಮ ಪ್ರತಿಭೆಯನ್ನು ಹೊರ ಜಗತ್ತಿಗೆ ತೋರಿಸಲು ಅವರಿಗೆ ಸಾಧ್ಯವಾಗುವುದಿಲ್ಲ.ಇದೇ ಕಾರಣಕ್ಕಾಗಿ ’ನನಗಂತೂ ಅವಕಾಶ ಸಿಗಲಿಲ್ಲ ,ನನ್ನ ಮಗ/ಮಗಳಿಗೆ ಈ ರೀತಿ ಆಗಬಾರದು ’ ಅನ್ನೋ ಒಂದೇ ಕಾರಣಕ್ಕೆ ಪಾಪ ತಮ್ಮ ಪುಟ್ಟ ಮಕ್ಕಳನ್ನು ಬೆಳ್ಳಂಬೆಳಿಗ್ಗೆ ಸಂಗೀತ ಕ್ಲಾಸ್ ಗೆ ಅಟ್ಟುತ್ತಾರೆ ಕೆಲ ಪೋಷಕರು!

ಅದಷ್ಟವಶಾತ್ ಈಗಿನ ಮಕ್ಕಳಿಗೆ ಬಹಳಷ್ಟು ಅವಕಾಶಗಳು ದೊರೆಯುತ್ತಿವೆ ಹಾಗಾಗಿ ನಾವು ಅಷ್ಟೊಂದು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ.ಆದರೆ ನಾವು ದೊಡ್ಡವರೇನು ಮಾಡೋದು ಅಂತೀರಾ ? ಹಿಂದಾದರೇ ಇದೇ ರೀತಿಯ ಹಾಡುವ ಚಟವನ್ನು ಬಾತ್ ರೂಮ್ ನಲ್ಲಿ ತೀರಿಸಿಕೊಳ್ಳಬಹುದಿತ್ತು.
ಆದರೆ ಬೆಂಗಳೂರಿನಲ್ಲಿ ಮನೆಗಳು ಒಂದಕ್ಕೊಂದು ತಾಗಿಕೊಂಡೇ ಇರೋದರಿಂದ ಹಿಂದಿನಂತೆ ಬಾತ್ ರೂಮ್ ನಲ್ಲೂ ಹಾಡೋ ಹಾಗಿಲ್ಲ.ಹಾಗೇನಾದರೂ ಹಾಡಿದರೆ ಮಾರನೇ ದಿನ ಮನೆ ಓನರ್ ವಾರ್ನಿಂಗ್ ಕೊಡಲು ಬಂದ್ರೂ ಬರಬಹುದು.ನೀವು ಬ್ಯಾಚುಲರ್ ಆಗಿದ್ದರಂತೂ extra precaution ತಗೊಳ್ಳಿ .ಪಕ್ಕದ ಮನೆಯ ಹುಡುಗಿಯನ್ನು ಪಟಾಯಿಸಲೇ ನೀವು ಜೋರಾಗಿ ಹಾಡುತ್ತೀರಿ ಅಂತ ನಿಮ್ಮ ಮೇಲೆ ವೃಥಾ ಆರೋಪ ಬರಬಹುದು!

ಆ ಉಸಾಬರಿಯೇ ಬೇಡ ಅನ್ನೋರಿಗೆ ಈ Muziboo ವರದಾನ.ಹಾಡನ್ನು ತಮ್ಮ ಪಾಡಿಗೆ ರೆಕಾರ್ಡ್ ಮಾಡಿ ಅಪ್ ಲೋಡ್ ಮಾಡಿದ್ರೆ ಸಾಕು.ನಿಜವಾಗಿಯೂ ಪ್ರತಿಭೆ ಇದ್ರೆ ಬಹಳಷ್ಟು ಜನರು ನಿಮ್ಮ ಹಾಡನ್ನು ಮೆಚ್ಚಿ ಪ್ರತಿಕ್ರಿಯಿಸುತ್ತಾರೆ.

ಇಲ್ಲಿ ಹಳೆಯ ,ಹೊಸ ಗೀತೆಗಳನ್ನು ಹವ್ಯಾಸಿ ಹಾಡುಗಾರರ ಧ್ವನಿಯಲ್ಲಿ ನೀವು ಕೇಳಬಹುದು .ನಿಮ್ಮ ಬಳಿ ಯಾವುದಾದರೂ ಹಾಡಿನ ಕರೋಕೆ ಇದ್ದರೆ ನೀವೂ ಒಂದು ಕೈ/ಬಾಯಿ ನೋಡಬಹುದು.ಯಾವಾಗಲೂ ಅದೇ ಸೋನು ನಿಗಮ್,ಕುನಾಲ್ ಗಾಂಜಾವಾಲಾ ಧ್ವನಿಯಲ್ಲಿ ಹಾಡುಗಳನ್ನು ಕೇಳಿ ಕೇಳಿ ಬೋರ್ ಆದವರಿಗೆ ಇದೊಂದು ರೀತಿಯ ಹೊಸ ಅನುಭವ .


ಹೀಗೆ ನೀವು ಅಪ್ ಲೋಡ್ ಮಾಡಿದ ಹಾಡನ್ನು ಅಪ್ಪಿ ತಪ್ಪಿ ಗುರುಕಿರಣ್ ಏನಾದ್ರೂ ಕೇಳಿ ಖುಷಿಯಾದರೆ ನಿಮಗೆ ಮುಂದಿನ ಸಿನೆಮಾದಲ್ಲಿ ಚಾನ್ಸ್ ಕೊಟ್ಟರೂ ಕೊಡಬಹುದು(ಅವರಿಗೆ ಮುಂದಿನ ಸಿನೆಮಾ ಸಿಗಬೇಕಷ್ಟೇ!)

ಜಾಸ್ತಿ ಹಗಲು ಕನಸು ಕಾಣಬೇಡಿ ,ಸುಮ್ಮನೆ ಮಾತಿಗೆ ಹೇಳಿದೆ!

ಸೂಚನೆ ೧ : ನೀವು ಕ್ಲಿಕ್ ಮಾಡಿದ ತಕ್ಷಣ ಹೋಮ್ ಪೇಜ್ ಗೆ ಹೋಗ್ತೀರಿ ಅಲ್ಲಿ ಸುಮ್ಮನೆ ಯಾವುದಾದರೂ ಹಾಡನ್ನು ಹುಡುಕಿ.ಉದಾ:anisutide
ಸೂಚನೆ ೨ : ಬಹಳಷ್ಟು ಜನರಿಗೆ ಈ ಸೈಟ್ ಈಗಾಗಲೇ ಪರಿಚಿತ.ಇದು ಗೊತ್ತಿಲ್ಲದವರಿಗೆ ಗೊತ್ತು ಮಾಡುವ ,ಹಾಗೆಯೆ ಈ ಮೂಲಕ ಭಾರತೀಯ Start Up ಕಂಪೆನಿಗಳಿಗೆ ಪ್ರೋತ್ಸಾಹ ನೀಡುವ ಒಂದು ಪುಟ್ಟ ಪ್ರಯತ್ನ.

Monday, April 20, 2009

ಕಾರ್ಪೋರೇಟ್ ಶೈಲಿ ..

ದೂರದಲ್ಲಿ ಪುಟ್ನಂಜ ಬರೋದು ಕಾಣಿಸಿತು.ಪಾಪ ಪ್ರತಿ ವರ್ಷ ಎಲೆಕ್ಶನ್ ಬಂದ್ರೆ ಹಬ್ಬ ಪುಟ್ನಂಜನಿಗೆ.ಇರೋ ಬರೋ ಅಭ್ಯರ್ಥಿಗಳ ಎಲೆಕ್ಷನ್ ಬ್ಯಾನರ್ ಗಳೆಲ್ಲಾ ನಮ್ ಪುಟ್ನಂಜನೇ ಹಾಕೋದು.ಆದ್ರೆ ಈ ಸಲ ಚುನಾವಣಾ ನೀತಿ ಸಂಹಿತೆಯ ಗುಮ್ಮ !

ಪಾಪ ನಾವು ಐಟಿಯವರಿಗೆಲ್ಲ ರಿಸೆಶನ್ ಬಂದ್ರೆ ಈ ಪುಟ್ನಂಜಂಗೂ ರಿಸೆಶನ್ ಬರೋದಾ ಅಂತ ನಾನು ಮನಸಲ್ಲೇ ಕೊರಗ್ತಾ ಇದ್ದೆ.

’ನಮಸ್ಕಾರ ಸಾರ್ ’ ಅಂದ ಪುಟ್ನಂಜ .

’ಪರ್ವಾಗಿಲ್ಲ ಪುಟ್ನಂಜ ಈ ಚುನಾವಣಾ ನೀತಿ ಸಂಹಿತೆಯಿಂದ ನಿನಗೆ ತುಂಬಾ ಪ್ರಾಬ್ಲೆಮ್ ಆಗಿದೆ ಅಂತ ನಾನಂದುಕೊಂಡಿದ್ರೆ ನೀನು ಮಾತ್ರ ನಗ್ ನಗ್ತಾ ಇದ್ದೀಯಾ ಏನ್ ಸಮಾಚಾರ ಆರ್ಟ್ ಆಫ್ ಲಿವಿಂಗ್ ಏನಾದ್ರೂ ಸೇರ್ಕೊಂಡಿಯಾ ’

’ಹೆ ಹೆ ಹಾಗೇನಿಲ್ಲ ಸಾರ್ ವ್ಯಾಪಾರ ಜೋರಾಗೇ ಐತೆ .ನನಗೇನೂ ಪ್ರಾಬ್ಲೆಮ್ ಆಗಿಲ್ಲ ’

’ಏನೋ ಪುಟ್ನಂಜ ಈ ನೀತಿ ಸಂಹಿತೆ ಅಂತ ಎಲ್ಲಾ ರಾಜಕೀಯ ಪಕ್ಷದವರೂ ತಲೆ ಕೆಡಿಸ್ಕೊಂಡಿದ್ರೆ ನೀನು ವ್ಯಾಪಾರ ಜೋರಾಗೇ ಇದೆ ಅಂತಿಯಲ್ಲ ಏನ್ ಸಮಾಚಾರ ? ’

’ಏನಿಲ್ಲ ಸಾರ್ ಈ ಸಲ ಸ್ವಲ್ಪ ಕಾರ್ಪೋರೇಟ್ ಸ್ಟೈಲ್ ನಲ್ಲಿ ಬಿಸಿನೆಸ್ ಮಾಡ್ತಾ ಇದ್ದೀನಿ . ಎರಡು ಟೀಮ್ ಮಾಡಿದ್ದೀನಿ ಸಾರ್ ,ಬೇರೆ ಬೇರೆ ಹೆಸರಿನಲ್ಲಿ . ಒಂದು ಟೀಮ್ ರಾಜಕೀಯ ಪಕ್ಷದವ್ರ ಹಿಂದೆ ಸುತ್ತಾಡುತ್ತೆ ,ಅವರು ಹೇಳಿದ ಕಡೆ ಬ್ಯಾನರ್ ಗಳನ್ನ ಹಾಕುತ್ತೆ . ಇನ್ನೊಂದು ಟೀಮ್ ಬಿ.ಬಿ.ಎಂ.ಪಿ ಗೋಸ್ಕರ ಕೆಲಸ ಮಾಡುತ್ತೆ .ಯಾರ್ಯಾರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸ್ತಾ ಇದ್ದಾರೆ ಅನ್ನೋದನ್ನು ಪತ್ತೆ ಹಚ್ಚಿ (ನಾವೇ ಹಾಕಿದ್ದಲ್ವ!) ಅವರು ಹಾಕಿದ ಬ್ಯಾನರ್ ಕಿತ್ತುಕೊಂಡು ಹೋಗುತ್ತೆ . ಬ್ಯಾನರ್ ಹಾಕಿದ್ದಕ್ಕೆ ಇನ್ನೂರು ,ಬ್ಯಾನರ್ ಕಿತ್ತು ಹಾಕಿದ್ದಕ್ಕೆ ನೂರು !’

Thursday, April 16, 2009

ಹಳೆ ಪಾತ್ರೆ,ಹಳೆ ಕಬ್ಬಿಣ .....

ಬೆಳಿಗ್ಗೆ ಬೆಳಿಗ್ಗೆ ಮನೆಯ ಕರೆಗಂಟೆ ಟ್ರಿಣ್ ಅಂದಿತು .ಶಪಿಸುತ್ತಾ ಎದ್ದು ನೋಡಿದ್ರೆ ಮಾದೇಶ.ಮಾದೇಶ ಹಳೇ ಪಾತ್ರೆ,ಪೇಪರ್ ತಗೊಳ್ಳೋನು.

"ಏನ್ ಮಾದೇಶ ಯಾವಾಗ್ಲೂ ದಾರೀಲಿ ಕಿರುಚಿ ನಿದ್ದೆ ಹಾಳು ಮಾಡೋನು ಇವತ್ತು ಸೀದಾ ಮನೆಯೊಳಗೆ ಬಂದು ನಿದ್ದೆ ಕೆಡಿಸಿದೆಯಲ್ಲಾ ,ಹೆಂಗೈತೆ ಮೈಗೆ " ಅಂದೆ ಸಿಟ್ಟಿನಿಂದ.

"ಏನಿಲ್ಲಾ ಸ್ವಾಮಿ ಒಂದು ಸಹಾಯ ಆಗಬೇಕಿತ್ತು ನಿಮ್ಮಿಂದ "

"ಏಯ್ ಕಾಸೆಲ್ಲಾ ಕೊಡಕ್ಕಾಗಲ್ಲ .ತಿಂಗಳ ಕೊನೆ ಬೇರೆ " ಗದರಿಸಿದೆ ನಾನು .

"ಕಾಸೇನೂ ಬೇಡ ಸ್ವಾಮಿ.ನಿಮಗೆ ಸಿನೆಮಾದವರೆಲ್ಲ ಗೊತ್ತಲ್ವ ಹಂಗೆ ಒಂದು ಸಹಾಯ ಆಗ್ಬೇಕಿತ್ತು ದಣಿ "

"ಏನೋ ಸಿನೆಮಾ ಹೀರೋ ಆಗ್ತಿಯೇನೋ " ಅಂದೆ ತಮಾಷೆಗೆ .

"ಇಲ್ಲಾ ಬುದ್ದಿ ’ಜಂಗ್ಲಿ ’ ಸಿನೆಮಾ ನೋಡಿದ್ದೀರಲ್ವ ಅದರಲ್ಲಿ ಒಂದು ಹಾಡು ಬರುತ್ತಲ್ವ ’ಹಳೇ ಪಾತ್ರೆ ,ಹಳೆ ಕಬ್ಬಿಣ ’ ಅದನ್ನು ಬರೆದೋರ ನಂಬರ್ ಬೇಕಿತ್ತು ಸ್ವಾಮಿ "

"ಅಯ್ಯೋ ದೇವ್ರೆ ಅದು ಯೋಗರಾಜ್ ಭಟ್ರು ಬರೆದಿರೋದು ಕಣ್ಲಾ .ನಿನಗ್ಯಾಕೆ ಅವರ ನಂಬರು ?"

"ಬುದ್ದಿ ಏನಿಲ್ಲ ಆ ಹಾಡು ಸ್ವಲ್ಪ ಬದಲಾಯಿಸಿ ಕೊಡ್ಬೇಕಿತ್ತು.ನಾನು ಎಂಗೂ ಹಳೆ ಪಾತ್ರೆ ,ಹಲೆ ಕಬ್ಬಿಣ ತಗೊಳ್ಳೋನಲ್ವ ನನಗೂ ದಿನಾ ರಸ್ತೆಯಲ್ಲಿ ’ಹಳೆ ಪಾತ್ರೆ ,ಕಬ್ಬಿಣ ಅಂತ ಕಿರುಚಿ ಕಿರುಚಿ ಸುಸ್ತಾಗಿ ಬಿಟ್ಟಿದೆ. ಅವರು ಸ್ವಲ್ಪ ಹಾಡು ಬದಲಾಯಿಸಿ ಬರೆದ್ರೆ ,ನಾನು ಅದನ್ನೆ ಮತ್ತೆ ಹಾಡಿಸಿ ಕ್ಯಾಸೆಟ್ ನ ನನ್ ಗಾಡಿನಲ್ಲಿ ಜೋರಾಗಿ ಹಾಕ್ಕೊಂಡು ಹೋಗ್ತೀನಿ. ಒಸಿ ವ್ಯಾಪಾರನೂ ಜೋರಾಗುತ್ತೆ ಅಲ್ವ ಬುದ್ದಿ ?"

"ಐಡಿಯಾ ಏನೋ ಜೋರಾಗಯ್ತೆ ಮಾದೇಶ ,ಆದ್ರೆ ಹಾಡು ಯಾಕೆ ಬದಲಾಯಿಸ್ಬೇಕು .ಹಂಗೆ ಚೆನ್ನಾಗಿದೆಯಲ್ಲ ? "

"ಚೆನ್ನಾಗೇನೋ ಬುದ್ದಿ ! ಆದ್ರೆ ಪ್ರೀತಿ ಗೀತಿ ಎಲ್ಲ ಬೇಡ ಇನ್ನೂ ಸ್ವಲ್ಪ ನಮ್ಮವೇ ಐಟಂಗಳನ್ನು ಸೇರಿಸ್ಬೇಕಿತ್ತು.ಹಳೇ ಪಾತ್ರೆ,ಕಬ್ಬಿಣ,ಸೀಸ ,ಬಟ್ಟೆ ,ಚಪ್ಪಲಿ,ಚೊಂಬು ,ಕೊಡ ,ಬಾಲ್ಟಿ ಹೀಗೆ .ಸ್ವಲ್ಪ ಚೆನ್ನಾಗಿ ಬರ್ ಕೊಟ್ರೆ ನಂಗೂ ಒಸಿ ಸಹಾಯ ಆಗ್ತಿತ್ತು.ಮತ್ತೆ ಆ ಹಾಡು ಹಾಡಿರೋರ್ ನಂಬರೂ ಕೊಡಿ ಬುದ್ದಿ ಸಕ್ಕತ್ತಾಗಿ ಹೊಂದುತ್ತೆ ನಂ ಬಿಸ್ನೆಸ್ ಗೆ ,ಅವರಿಂದಾನೇ ಹಾಡಿಸ್ಬೆಕು ಅಂತಿವ್ನಿ .ಬುದ್ದಿ ಇದೇನಾದ್ರೂ ಐಡಿಯಾ ಕಿಲಿಕ್ ಆಗ್ಬುಟ್ರೆ ನಮ್ಮ ಸಿದ್ದೇಶಂಗೂ ಒಂದು ಹಾಡು ಮಾಡಿ ಬೇಕಾಗುತ್ತೆ .ಅವನು ತರಕಾರಿ ಮಾರ್ತಾನಲ್ವ ..."

ಸೂಚನೆ:ಇದೊಂದು ಕಾಲ್ಪನಿಕ ಹಾಸ್ಯ ಲೇಖನ .

Wednesday, April 15, 2009

ಕಳ್ಳ - ಪೋಲಿಸ್ !

ಈ ಲೇಖನದ ಹೆಸರು ಕಳ್ಳ-ಪೋಲಿಸ್ ಅಂತ ಇಟ್ಟಿದ್ದು ನೋಡಿ ನಿಮಗೆಲ್ಲರಿಗೂ ಬಾಲ್ಯದ ನೆನಪು ಬಂದಿರುತ್ತೆ ಬಹುಷ! ಆದ್ರೆ ಚಿಕ್ಕಂದಿನಲ್ಲಿ ಆಡುತ್ತಿದ್ದ ಕಳ್ಳ-ಪೋಲೀಸ್ ಆಟದ ಬಗ್ಗೆ ಅಲ್ಲ ಸ್ವಾಮಿ ಈ ಲೇಖನ !ನಿಮ್ಮ ಬಾಲ್ಯದ ನೆನಪನ್ನು ಅನಗತ್ಯವಾಗಿ ಮೆಲುಕು ಹಾಕಿಸಿದ್ದರೆ ಕ್ಷಮೆ ಇರಲಿ .

ಇದೊಂದು ನಿಮ್ಮ ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವಂಥ ಲೇಖನ.ಆದರೆ ಯಾರಾದ್ರೂ ಹಿಂದಿ ಸಿನೆಮಾ ಹಾಡುಗಳ ’ಕಟ್ಟಾ’ ಅಭಿಮಾನಿಗಳು,ಸಂಗೀತ ನಿರ್ದೇಶಕರ ಫೋಟೋ ಇಟ್ಟು ಪೂಜಿಸುವಂಥವರಿದ್ರೆ ದಯವಿಟ್ಟು ಮುಂದೆ ಓದಬೇಡೀ .ಹಂಗೇ ಬಂದ ದಾರಿಗೆ ಸುಂಕವಿಲ್ಲ ಅಂತ ನನಗೆ ಶಪಿಸಿ ವಾಪಾಸ್ ಹೋಗಿ ಬಿಡಿ!

ಈಗ ವಿಷಯಕ್ಕೆ ಬರೋಣ.ನಾವೆಲ್ಲ ಹಿಂದಿ ಸಿನೆಮಾ ನೋಡಿರ್ತೀವಿ ಹಾಗೇ ಹಾಡುಗಳನ್ನೂ ಕೇಳೇ ಕೇಳಿರ್ತೀವಿ . ಸಿನೆಮಾ ನಿರ್ದೇಶಕರು ಕಥೆಗಳನ್ನು ಕದಿಯೋದು ಮಾಮೂಲಿ.ಹಾಗೆ ಸಂಗೀತ ನಿರ್ದೇಶಕರೂ ಕೂಡಾ ತಮ್ಮ ಹಾಡಿನ ಟ್ಯೂನ್ ಗಳನ್ನು ಎಲ್ಲೆಲ್ಲೆಂದಲೋ ಕಷ್ಟ ಪಟ್ಟು ಕದ್ದಿರ್ತಾರೆ. ಓಹ್ ಸಾರಿ ಎಲ್ಲಿಂದಲೋ ಪ್ರೇರಿತರಾಗಿ ಹಾಡಿನ ಟ್ಯೂನ್ ರಚಿಸಿರ್ತಾರೆ.

ಇಂಥ ಕದ್ದಿರೋ ,ಓಹ್ ಕ್ಷಮಿಸಿ ಎಲ್ಲಿಂದಲೋ ಪ್ರೇರಿತರಾಗಿರೋ ಟ್ಯೂನ್ ಗಳ ಮೂಲ ಹುಡುಕುವುದಕ್ಕೆಂದೇ ಒಂದು ವೆಬ್ ಸೈಟ್ ಇದೆ .ಈ ಲೇಖನ ಆ ನಿಮ್ಮನ್ನು ಆ ವೆಬ್ ಸೈಟ್ ಗೆ ಪರಿಚಯಿಸೋದು.

ಅಂಥ ಒಂದು ವೆಬ್ ಸೈಟ್ ನ ಹೆಸರೇ.... ಹೀಗೂ ಉಂಟೆ . ಓಹ್ ಸಾರಿ ಎಲ್ಲಾ TV 9 ಪ್ರಭಾವ.

ಅಂಥ ಒಂದು ವೆಬ್ ಸೈಟ್ ನ ಹೆಸರು ItwoFS

ಈ ವೆಬ್ ಸೈಟ್ ಗೆ ItwoFS ಅಂಥ ಹೆಸರು ಯಾಕೆ ಬಂತು ಅಂತೀರಾ ? ItwoFS ಅಂದ್ರೆ Inspirations in Indian Film Songs!

ಈ ವೆಬ್ ಸೈಟ್ ನಲ್ಲಿ ಯಾವ್ಯಾವ ಸಂಗೀತ ನಿರ್ದೇಶಕರು ಯಾವ್ಯಾವ ಭಾಷೆಯ ಹಾಡನ್ನು ಕದ್ದು ಟ್ಯೂನ್ ಕೊಟ್ಟಿದ್ದಾರೆ ಅನ್ನೋದನ್ನ ಸಾಕ್ಷಿ ಸಮೇತ ಕೊಟ್ಟಿದ್ದಾರೆ.ಅದಕ್ಕೆ ಈ ಲೇಖನದ ಹೆಸರು ಕಳ್ಳ ಪೋಲಿಸ್ ಅಂತ ಇಟ್ಟಿರೋದು!

ಆ ವೆಬ್ ಸೈಟ್ ನಲ್ಲಿ ಬಹುತೇಕ ಎಲ್ಲಾ ಹಿಂದಿ ಸಂಗೀತ ನಿರ್ದೇಶಕರ ಕದಿಯುವಿಕೆಯನ್ನು ಸಾಕ್ಷಿ ಸಮೇತ ಕೊಟ್ಟಿದ್ದಾರೆ.ಕೆಲವೊಮ್ಮೆ ನಮ್ಮ ನೆಚ್ಚಿನ ಹಾಡು ಎಲ್ಲಿಂದಲೋ ಕದ್ದಿರೋದು ಅನ್ನೋದು ಗೊತ್ತಾದಾಗ ತುಂಬಾನೇ ಬೇಜಾರಾಗುತ್ತೆ.ಆದ್ರೆ ಹಾಗಂತ ಸತ್ಯವನ್ನು ಅಲ್ಲಗಳೆಯಲಾಗದು ಅಲ್ವೆ?

ಈ ಪ್ರಪಂಚದಲ್ಲಿ ಯಾರೂ ಕಳ್ಳರಲ್ಲ ...... ಸಿಕ್ಕಿ ಬೀಳದ ಹೊರತು!

Friday, April 10, 2009

ಡಿಜಿಟಲ್ ತಂತ್ರಜ್ಞಾನ - ಏನಿದು ?

ಈಗ ಡಿಜಿಟಲ್ ಯುಗ .ಎಲ್ಲಿ ನೋಡಿದರೂ ಡಿಜಿಟಲ್ ತಂತ್ರಜ್ಞಾನದ ಬಗ್ಗೆ ಮಾತು.ಸಿನೆಮಾ ಆಗಲಿ,ಪತ್ರಿಕೋದ್ಯಮ ಆಗಲಿ ಎಲ್ಲಾ ಉದ್ಯಮದಲ್ಲೂ ಡಿಜಿಟಲ್ ತಂತ್ರಜ್ಞಾನದ ಬಗ್ಗೆ ಮಾತು ಬಂದೇ ಬರುತ್ತೆ .

ಆದರೆ ಬಹುತೇಕ ಜನರಿಗೆ ಈ ಡಿಜಿಟಲ್ ತಂತ್ರಜ್ಞಾನ ಏನು ಅನ್ನೋದು ಗೊತ್ತಿಲ್ಲ! ಗೊತ್ತಿರದೇ ಇರೋದು ತಪ್ಪೇನಲ್ಲ ಬಿಡಿ.ನಮ್ಮದಲ್ಲದ ಕೆಲಸದ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಲ್ಲ.ಆದರೆ ಈ ಡಿಜಿಟಲ್ ತಂತ್ರಜ್ಞಾನ ಏನು ಅನ್ನೋದು ಸ್ವಲ್ಪ ಗೊತ್ತಿದ್ರೆ ಒಳ್ಳೆಯದು .ಏನಂತೀರಿ?

ಹೆಸರೇ ಸೂಚಿಸುವ ಹಾಗೆ ಡಿಜಿಟಲ್ ಅಂದ್ರೆ ’ಸಂಖ್ಯೆ’ಗಳಿಗೆ ಸಂಬಂಧ ಪಟ್ಟದ್ದು ಅಂತ.ಅದರ ಅರ್ಥ ಇಷ್ಟೇ .ಯಾವುದೇ ಒಂದು ಮಾಹಿತಿಯನ್ನು ಸಂಖ್ಯೆಗಳಾಗಿ ಪರಿವರ್ತಿಸಿದರೆ ಅದೇ ಡಿಜಿಟಲ್ ತಂತ್ರಜ್ಞಾನ .

ಡಿಜಿಟಲ್ ತಂತ್ರಜ್ಞಾನ ಅಷ್ಟೊಂದು ಉಪಯುಕ್ತನಾ ಅಂತ ನಿಮಗೆಲ್ಲಾ ಸಂಶಯ ಬರಬಹುದು !

ಉತ್ತರ ’ಹೌದು’ ! ಖಂಡಿತ ಡಿಜಿಟಲ್ ತಂತ್ರಜ್ಞಾನ ತುಂಬಾನೇ ಉಪಯುಕ್ತ.ಅದಿಲ್ಲದೆ ಹೋಗಿದ್ರೆ ನಾವು ಈಗ ಅನುಭವಿಸುತ್ತಿರೋ ಎಲ್ಲಾ ಸೌಲಭ್ಯಗಳು ಮರೀಚಿಕೆಯಾಗೇ ಉಳಿಯುತ್ತಿತ್ತು.

ಡಿಜಿಟಲ್ ಬಗ್ಗೆ ಅರಿಯಬೇಕಾದ್ರೆ ಅದರ ವಿರುದ್ಧವಾದ ತಂತ್ರಜ್ಞಾನದ ಬಗ್ಗೆಯೂ ತಿಳಿಯಬೇಲ್ಲವೇ? ಆ ತಂತ್ರಜ್ಞಾನದ ಕೊರತೆಗಳ ಬಗ್ಗೆ ಅರಿವಿದ್ದರಷ್ಟೇ ಅಲ್ಲವೇ ಡಿಜಿಟಲ್ ತಂತ್ರಜ್ಞಾನದ ಉಪಯುಕ್ತತೆ ಬಗ್ಗೆ ಹೆಮ್ಮೆ ಮೂಡೋದು?

ಡಿಜಿಟಲ್ ತಂತ್ರಜ್ಞಾನಕ್ಕಿಂತ ಮುಂಚೆ ಇದ್ದ ತಂತ್ರಜ್ಞಾನ ಅಂದ್ರೆ ಅದೇ Analog ತಂತ್ರಜ್ಞಾನ.ನಮ್ಮ ತಾತ ಮುತ್ತಾತರು ಉಪಯೋಗಿಸ್ತಾ ಇದ್ದಿದ್ದು !ಡಿಜಿಟಲ್ ಇದರ ಮುಂದುವರಿದ ,ಸುಧಾರಿತ ತಂತ್ರಜ್ಞಾನ ಅಷ್ಟೇ!

ಏನು ಕನ್ಫ್ಯೂಸ್ ಮಾಡ್ತಾ ಇದ್ದೀನಾ ನಾನು? ಏನ್ ಮಾಡೋದು ಈ ವಿಷಯಾನೇ ಹಾಗೆ ! ಸ್ವಲ್ಪ ಎಡವಟ್ಟು!

ಹಿಂದೆ ಆಡಿಯೋ ಕ್ಯಾಸೆಟ್ ಇತ್ತಲ್ವ ಅದು ಅನಲಾಗ್ .ಈಗ ಐ-ಪಾಡ್ ಬಂದಿದೆ ಯಲ್ವ ಅದು ಡಿಜಿಟಲ್ ಅಷ್ಟೆ!

ಅನಾಲಾಗ್ ಸಂಕೇತಗಳನ್ನೇ ಡಿಜಿಟಲ್ ಆಗಿ ಪರಿವರ್ತಿಸೋದು ಅಷ್ಟೇ ಬೇರೆ ಇನ್ನೇನಿಲ್ಲ!

ಮೊದಲೇ ಹೇಳಿದ ಹಾಗೆ ಡಿಜಿಟಲ್ ಅಂದ್ರೆ ಸಂಖ್ಯೆಗಳಿಗೆ ಸಂಬಂಧಪಟ್ಟದ್ದು.ಅಂದ್ರೆ ಎಲ್ಲಾ ಸಂಕೇತಗಳನ್ನೂ ಸಂಖ್ಯೆಗಳಾಗಿ ಪರಿವರ್ತಿಸಿ ಶೇಖರಿಸಿಡೋದು ಅಷ್ಟೇ!

ಈ ಕಂಪ್ಯೂಟರ್ ಡಿಜಿಟಲ್ ತಂತ್ರಜ್ಞಾನಕ್ಕೆ ಅತ್ಯುತ್ತಮ ಉದಾಹರಣೆ.ಈ ಕಂಪ್ಯೂಟರ್ ನಲ್ಲಿ ಏನೇ ಶೇಖರಿಸಬೇಕಾದ್ರೂ ಅದು ಸಂಖ್ಯಾರೂಪದಲ್ಲಿರುತ್ತೆ.ನೀವೇನಾದ್ರೂ ಒಂದು MP3 ಹಾಡನ್ನು ಶೇಖರಿಸಬೇಕಾದ್ರೆ ಅದು ಸಂಖ್ಯಾರೂಪದಲ್ಲೇ ಹಾರ್ಡ್ ಡಿಸ್ಕ್ ನಲ್ಲಿ ಕೂತಿರುತ್ತೆ.ಅದನ್ನು ಸಂಖ್ಯಾರೂಪದಿಂದ ಮತ್ತೆ ಅನಲಾಗ್ ಗೆ ಪರಿವರ್ತಿಸಬೇಕು ಕೇಳಬೇಕಾದರೆ!ಹಾಗೆಯೇ ಸಿನೆಮಾನೂ ಸಂಖ್ಯಾರೂಪದಲ್ಲೇ ಇರುತ್ತೆ. ನೋಡಬೇಕಾದ್ರೆ ಅದನ್ನು ಮತ್ತೆ ಅನಲಾಗ್ ಆಗಿ ಪರಿವರ್ತಿಸಿ ನೋಡ್ತೀವಿ ಅಷ್ಟೇ !

ಹಾಗಿದ್ರೆ ಏನು ಪ್ರಯೋಜನ ಅಂತೀರಾ? ಅಲ್ಲೇ ಇರೋದು ಮಜಾ!

ಪ್ರಯೋಜನ ಅಂದ್ರೆ ತುಂಬಾ ಮಾಹಿತಿಯನ್ನು ಶೇಖರಿಸಿಡಬಹುದು.ಮತ್ತೆ ಸಂಖ್ಯಾರೂಪದಲ್ಲಿರೋ ಸಂಕೇತಗಳನ್ನು ಬೇರೆ ಬೇರೆ ರೂಪಕ್ಕೆ ಪರಿವರ್ತಿಸಬಹುದು,ಅದನ್ನು ಕುಗ್ಗಿಸಿ ಶೇಖರಿಸಿಡಬಹುದು .ಇನ್ನೂ ಏನೇನೂ ಪ್ರಯೋಜನಗಳಿವೆ.

ಈಗ ಹಾಡಿನ ಬಗ್ಗೆಯೇ ನೋಡೋಣ .ಹಾಡಂದ್ರೆ ಏನು ? ಅದು ಶಬ್ದ ಇನ್ನೇನೂ ವಿಶೇಷವಿಲ್ಲ ಹಾಡಲ್ಲಿ.

ಹೀಗಂದ್ರೆ ಸಂಗೀತಗಾರರು ಚಪ್ಪಲ್ಲಿ ಹುಡುಕ್ತಾ ಇರಬಹುದು ನನಗೆ ಹೊಡಿಯಲು!

ಆದರೆ ಶಾಂತವಾಗಿ ಯೋಚಿಸಿ ನೋಡಿ.ಹಾಂಡೆಂದರೆ ಏನು ?

ಅದು ಶಬ್ದ ! ಆದರೆ ಕ್ರಮಬದ್ಧವಾದ ಶಬ್ದ ಅಷ್ಟೇ. ಲಯವಿಲ್ಲದ ಶಬ್ದ ಕರ್ಕಶವಾಗಿರುತ್ತೆ.ಆದರೆ ಕ್ರಮಬದ್ಧವಾದ ಶಬ್ದ ಅದು ಶಬ್ದವೇ ಆಗಿದ್ದರೂ ಸಂಗೀತ ಅನ್ನಿಸಿಕೊಳ್ಳುತ್ತೆ.

ಹಳೆಯ ಕಾಲದಲ್ಲಿ ಈ ಶಬ್ದ/ಸಂಗೀತವನ್ನು ಕ್ಯಾಸೆಟ್ ಗಳಲ್ಲಿ ಶೇಖರಿಸಿಡ್ತಾ ಇದ್ದರು .ಈ ಸಂಗೀತ - ಅಂದ್ರೆ ಶಬ್ದದ ಏರಿಳಿತವನ್ನು ಹಾಗೇಯೇ ಶೇಖರಿಸಿಡ್ತಾ ಇದ್ರು ರೀಲ್ ನಲ್ಲಿ.ಹಾಗಾಗಿ ಬಹಳಷ್ಟು ಕ್ಯಾಸೆಟ್ ರೀಲ್ ಬೇಕಾಗ್ತಾ ಇತ್ತು ಶೇಖರಿಸೋದಕ್ಕೆ.ಇದೇ ಅನಲಾಗ್ ತಂತ್ರಜ್ಞಾನದ ಸಮಸ್ಯೆ.

ಆದ್ರೆ ಅದೇ ಅನಲಾಗ್ ಸಂಕೇತಗಳನ್ನು ಸಂಖ್ಯೆಗಳನ್ನಾಗಿ ಪರಿವರ್ತಿಸಿದ್ರೆ ಏನುಪಯೋಗ ತಿಳಿಯೋಣ ಬನ್ನಿ.

ನಿಮಗೆ ಒಂದು ದಿನದ ತಾಪಮಾನವನ್ನು ಅಳತೆ ಮಾಡಿ ಬರೆದಿಡಲು ನಿಮ್ಮ ಮೇಷ್ಟ್ರು ಹೇಳಿದ್ದಾರೆ ಅಂದುಕೊಳ್ಳಿ.ಆಗ ನೀವೇನು ಮಾಡಬಹುದು?

ಒಂದು ಲೇಖಕ್ ನೋಟ್ ಬುಕ್ ಹಾಗೂ ರೆನಾಲ್ಡ್ಸ್ ಪೆನ್ ತಗೊಳ್ತೀರಿ.ತಾಪಮಾನ ಬರೆಯಲು ಕೂತ್ಕೋತೀರಿ ಅಷ್ಟೇ!

ಆದ್ರೆ ಸಮಸ್ಯೆ ಅಂದ್ರೆ ತಾಪಮಾನ ಯಾವಾಗ ನೋಡಿ ಬರೆಯಬೇಕು ? ಪ್ರತಿ ಕ್ಷಣವೂ ಸೂರ್ಯನ ಶಾಖ ಬದಲಾಗುತ್ತಲೇ ಇರುತ್ತೆ.ಹಾಗಾಗಿ ನೀವು ಪ್ರತಿ ಸೆಕೆಂಡ್ ಗೆ ಒಂದು ಸಲ ಥರ್ಮೋ ಮೀಟರ್ ನೋಡಿ ತಾಪ ಮಾನ ಬರೆಯಬಹುದು.ಆದರೆ ಇಲ್ಲಿ ಒಂದು ಸಮಸ್ಯೆ ಇದೆ.ಹೀಗೆ ಪ್ರತಿ ಸೆಕೆಂಡ್ ನ ತಾಪಮಾನ ಬರೀತಾ ಇದ್ರೆ ನಿಮ್ಮ ಬಳಿ ಇರೋ ಲೇಖಕ್ ನೋಟ್ ಪುಸ್ತಕ ಹಾಗೂ ರಿಫೀಲ್ ಎರಡೂ ಒಂದೆರಡು ಘಂಟೆಯಲ್ಲಿ ಖಾಲಿಯಾಗೋದು ನಿಶ್ಚಿತ!

ಆಗ ನಿಮ್ಮ ತಲೆಗೊಂದು ಐಡಿಯಾ ಹೊಳೆಯುತ್ತೆ ! ಹೇಗೂ ಸೂರ್ಯನ ಶಾಖ ಪ್ರತಿ ಸೆಕೆಂಡ್ ಗೆ ಅಷ್ಟೊಂದು ಬದಲಾಗುವುದಿಲ್ಲ.ಹಾಗಾಗಿ ಸುಮಾರು ಒಂದು ಘಂಟೆಗೊಂದು ಸಲ ತಾಪಮಾನ ನೋಡಿ ಬರೆದುಕೊಂಡ್ರೂ ಅಷ್ಟೇನೂ ವ್ಯತ್ಯಾಸ ಬೀಳುವುದಿಲ್ಲ ಅನ್ನೋದು !

ಇದೇ ನೋಡಿ ಡಿಜಿಟಲ್ ತಲೆ !

ಅನಲಾಗ್ ಸಂಕೇತಗಳನ್ನು ಡಿಜಿಟಲ್ ಆಗಿ ಪರಿವರ್ತಿಸೋದರಲ್ಲಿ ಇಂಥದ್ದೇ ಒಂದು ಲಾಜಿಕ್ ಅಡಗಿದೆ.

ಸಂಗೀತವನ್ನು ಡಿಜಿಟಲ್ ಸಂಕೇತಗಳಾಗಿ ಹೇಗೆ ಪರಿವರ್ತಿಸಬಹುದು ಅಂತೀರಾ? ಸಿಂಪಲ್ ! ನೀವು ಸುಮ್ಮನಿದ್ದರೆ ಅದು ಸೊನ್ನೆ ಅಂದುಕೊಳ್ಳಿ. ಅದೇ ಜೋರಾಗಿ ಕಿರುಚಿದ್ರೆ ೨೦೦ ಅಂದುಕೊಳ್ಳಿ .

ಈಗ ಸೊನ್ನೆ ಮತ್ತೆ ಇನ್ನೂರರ ಮಧ್ಯೆ ಬರೋ ಸಂಖ್ಯೆಗಳೂ ಒಂದೊಂದು ಶಬ್ದದ ಏರಿಳಿತವನ್ನು ಪ್ರತಿನಿಧಿಸುತ್ತೆ. ಅಂದ್ರೆ ಸಲ್ಪ ಮೆಲ್ಲನೆ ಕಿರುಚಿದ್ರೆ ೨೦ ಅಂದುಕೊಂಡ್ರೆ ,ಅದಕ್ಕಿಂತ ತುಸು ಜೋರಾಗಿ ಕೂಗಾಡಿದ್ರೆ ೩೫ ಅಷ್ಟೇ!

ಸಂಗೀತವೂ ಇದೇ ರೀತಿ ಶಬ್ದದ ಏರಿಳಿತ.ಹಾಗಾಗಿ ಎಲ್ಲಾ ಪ್ರಕಾರದ ಸಂಗೀತವನ್ನೂ ಡಿಜಿಟಲ್ ಆಗಿ ಮಾರ್ಪಡಿಸಿ ಮೆಮೊರಿಯಲ್ಲಿ ಶೇಖರಿಸಿಡ್ತಾರೆ ಅಷ್ಟೇ.ನಿಮ್ಮ ಬಳಿ 32MB ಮೆಮೊರಿ ಇದ್ರೆ ಸುಮಾರು 3,20,00,000 ಸಂಖ್ಯೆಗಳನ್ನು ಶೇಖರಿಸಬಹುದು.

ಡಿಜಿಟಲ್ ತಂತ್ರಜ್ಞಾನದ ದೊಡ್ಡ ಲಾಭ ಅಂದ್ರೆ ಕಂಪ್ರೆಶನ್ . ಅಂದ್ರೆ ಒಂದು ದೊಡ್ಡ ಹಾಡನ್ನು ಡಿಜಿಟಲ್ ಸಂಕೇತಗಳಾಗಿ ಮಾರ್ಪಡಿಸಿದ ಮೇಲೆ ಅದರ ಸೈಜ್ ಅನ್ನು ಇನ್ನೂ ಕುಗ್ಗಿಸಬಹುದು!

ಅಸಲಿಗೆ MP3 ಅನ್ನೋದೇ ಒಂದು ಕಂಪ್ರೆಶನ್ ಟೆಕ್ನಾಲಜಿ !

ಹಾಗಿದ್ರೆ MP3 ಯ uncompressed format ಯಾವುದು ?

ಅದೇ ವೇವ್ (Wav) format.ಒಂದು ಹಾಡನ್ನು ಸಂಗೀತಗಾರ ಹಾಡುತ್ತಾ ಇರಬೇಕಾದ್ರೆ ಅದನ್ನು ಡಿಜಿಟಲ್ ಆಗಿ ಮಾರ್ಪಡಿಸಿ ಶೇಖರಿಸಿಟ್ಟಿದ್ರೆ ಅದು ವೇವ್ format ನಲ್ಲಿರುತ್ತೆ.ಅದನ್ನು ಕಂಪ್ರೆಸ್ ಮಾಡಿದ್ರೆ ಸಿಗೋದೇ MP3 Format.

ಒಂದು ಹಾಡು ವೇವ್ format ನಲ್ಲಿ 32MB memory ತಗೊಂಡ್ರೆ ಅದೇ ಹಾಡು MP3 Format ನಲ್ಲಿ ಬರೀ 5 MB ತಗೊಳ್ಳುತ್ತೆ ಆಷ್ಟೊಂದು ಕುಗ್ಗಿಸಬಹುದು ಡಿಜಿಟಲ್ ಸಂಕೇತಗಳನ್ನು !

ಹೇಗೆ ಅಂತೀರಾ? ನಿಮ್ಮ ಬಳಿ ಒಂದು ಆರು ಗಜದ ಸೀರೆ ಇದೆ ಅಂದುಕೊಳ್ಳಿ .ಅದನ್ನು ಒಣಗಿಸಬೆಕಾದ್ರೆ ತಂತಿಯಲ್ಲಿ ಹಾಕ್ತೀರಿ.ಆಗ ಬರೋಬ್ಬರಿ ಆರು ಗಜವೇ ಬೇಕಾಗುತ್ತೆ ಅದನ್ನು ಒಣಗಿಸಲು(ಇದು ವೇವ್ format)!
ಆದ್ರೆ ಅದನ್ನು ಕಪಾಟಿನಲ್ಲೀದಬೇಕಾದ್ರೆ ಚೆನ್ನಾಗಿ ಮಡಿಸಿ ಇಡ್ತೀರಾ ಅಲ್ವಾ? ಇದೇ ಡಿಜಿಟಲ್ ಕಂಪ್ರೆಶನ್ .ಈಗ ನೋಡಿ ಮಡಚಿ ಇಟ್ರೆ ಅದೆಷ್ಟು ಆರು ಗಜದ ಸೀರೆಗಳನ್ನು ಒಂದೇ ಕಪಾಟಿನಲ್ಲಿ ಶೇಖರಿಸಿಡಬಹುದು ! ಅಲ್ಲವೇ ?

ಇಂಥದ್ದೇ ಒಂದು ಕಂಪ್ರೆಶನ್ ತಂತ್ರಜ್ಞಾನವನ್ನು ಉಪಯೋಗಿಸೋದು MP3 ನಲ್ಲಿ.

ಸುಲಭವಾಗಿ ಹೇಳೋದಾದ್ರೆ ಹಾಡುಗಾರರ ಹಾಡು ರೆಕಾರ್ಡ್ ಮಾಡಬೇಕಾದ್ರೆ ಬಹಳಷ್ಟು ಅನಗತ್ಯಮಾಹಿತಿ ಅಂದರೆ ಮನುಷ್ಯರಿಗೆ ಕೇಳಿಸದ, ಉಪಯುಕ್ತವಲ್ಲದ ಮಾಹಿತಿಯೂ ರೆಕಾರ್ಡ್ ಆಗಿರುತ್ತೆ .ಈ ರೆಕಾರ್ಡ್ ಮಾಡಲ್ಪಟ್ಟ ಸಂಕೇತಗಳಿಂದ ಅನುಪಯುಕ್ತ ಮಾಹಿತಿಯನ್ನು ಅಳಿಸಿ ಬರೀ ಮನುಷ್ಯರಿಗೆ ಕೇಳಿಸುವಂಥ ಮಾಹಿತಿಯನ್ನಷ್ಟೇ ಶೇಖರಿಸಿಡೋದು MP3 ತಂತ್ರಜ್ಞಾನದ ಕೆಲಸ .

ಇದೇ ರೀತಿ ಎಲ್ಲವನ್ನೂ ಡಿಜಿಟಲ್ ಸಂಕೇತಗಳಾಗಿ ಶೇಖರಿಸಿಟ್ರೆ ಅದನ್ನು Process ಮಾಡೋದು ಸುಲಭ .ಅದೇ ಕಾರಣಕ್ಕೆ ಡಿಜಿಟಲ್ ಮಾಹಿತಿ ಅಷ್ಟೊಂದು ಪ್ರಸಿದ್ಧಿ ಆಗ್ತಾ ಇರೋದು.

ನಾವು ಬರೆಯವ ಬ್ಲಾಗ್ ,ಹಾಡು ,ಹಾಗೂ ಕಂಪ್ಯೂಟರ್ ನಲ್ಲಿರೋ ಎಲ್ಲವೂ ಕೊನೆಗೆ ಡಿಜಿಟಲ್ ಸಂಕೇತಗಳಾಗೇ ಶೇಖರಿಸಲ್ಪಡೋದು.

ಸುಮ್ಮನೆ ಒಂದು ಉದಾಹರಣೆ : ಯಾವುದೋ ಒಂದು ಶಬ್ದ ದೊಡ್ಡದಾಗಿ ಕಾಣಬೇಕಾದ್ರೆ ನೀವೇನ್ ಮಾಡ್ತೀರ ? Font Size ಹೆಚ್ಚು ಮಾಡ್ತೀರಾ ಅಲ್ವಾ?

ಅಂದರೆ ಮೊದಲಿಗೆ font size 10 ಇದ್ದು ಈಗ ನೀವು ಅದನ್ನು 15 ಮಾಡಬೇಕಾದ್ರೆ ಸುಮ್ಮನೆ 5 ಅನ್ನು add ಮಾಡಿದ್ರಾಯ್ತು ! ಇದೇ ಡಿಜಿಟಲ್ ಮಾಹಿತಿಯ ಉಪಯೋಗ.

ಮುಂಚೆ ಬರೀ ಆರು ಹಾಡುಗಳಿದ್ದ ಕ್ಯಾಸೆಟ್ ಎಷ್ಟು ದೊಡ್ಡದಾಗಿತ್ತು ಅಲ್ವಾ? ಆದ್ರೆ ಇವತ್ತು ಅದೇ ಕ್ಯಾಸೆಟ್ ಗಿಂತ ಚಿಕ್ಕದಾಗಿರೋ ಐ-ಪಾಡ್ ನಲ್ಲಿ ಸಾವಿರಾರು ಹಾಡು ಹಿಡಿಸುತ್ತೆ.

ಇದು ಸಾಧ್ಯವಾಗಿದ್ದು ಡಿಜಿಟಲ್ ತಂತ್ರಜ್ಞಾನದಿಂದ.ಇಂಥ ತಂತ್ರಜ್ಞಾನಕ್ಕೊದು ಸಲಾಂ ಹೇಳೋಣ !


ಸೂಚನೆ:ಇಲ್ಲಿ ಬರೆದಿರೋದು ಸಾಮಾನ್ಯ ಜನರಿಗೆ ಅರ್ಥವಾಗೋದಕ್ಕಷ್ಟೇ ! ಒಂದು MP3 Format ನ ಹಿಂದೆ Physics,Maths,ಹಾಗೆಯೇ ಬಹಳಷ್ಟು ವಿಜ್ಞಾನಿಗಳ,ಇಂಜಿನಿಯರ್ ಗಳ ಪರಿಶ್ರಮ ಅಡಗಿದೆ. ,ಮಾನವನ ಕಿವಿಯ ಸಾಮರ್ಥ್ಯ,ದೌರ್ಬಲ್ಯ ಗಳನ್ನೆಲ್ಲ ಅರಿತು ಈ MP3 Format ಅನ್ನು ಕಂಡು ಹುಡುಕಲಾಗಿದೆ !ಓದುಗರಿಗೆ ಅರ್ಥ ಮಾಡಿಸಲೆಂದೇ ಆದಷ್ಟು ಸರಳಗೊಳಿಸಲಾಗಿದೆ.

Sunday, April 5, 2009

ಒಂದು ಸಂತೋಷದ ಸುದ್ದಿ !

ಆರಂಭಿಕ ಎಚ್ಚರಿಕೆ : ನೀವು ತೀರಾ ಮಡಿವಂತ ಹುಡುಗಿ/ಮಹಿಳೆಯಾಗಿದ್ದಲ್ಲಿ ಈ ಲೇಖನ ಓದದೇ ಇರುವುದು ಒಳ್ಳೆಯದು.ಹಾಗೆಯೇ ತೀರಾ ಮಡಿವಂತ ಹುಡುಗರು/ಗಂಡಸರು ಬ್ಲಾಗ್ ಲೋಕದಲ್ಲಿಲ್ಲ ಅನ್ನೋ ಸತ್ಯ ನನಗೆ ಅರಿವಾಗಿರೋದರಿಂದ ಗಂಡಸರಿಗೆ ಈ ಎಚ್ಚರಿಕೆ ಅನ್ವಯಿಸುವುದಿಲ್ಲ.

ನಾನು ಈಗ ಬರೆಯ ಹೊರಟಿರುವುದು ತೀರಾ ಗಂಭೀರವಾದ ವಿಚಾರವೇನೋ ಅಲ್ಲ.ಆದರೂ ಕೆಲವರಿಗೆ ,ಕೆಲವು ಸಲ ಈ ವಿಚಾರ ತೀರಾ ಗಂಭೀರ ಪ್ರಮಾಣದಲ್ಲಿ ಕಾಡಿರುವ ನಿದರ್ಶನಗಳಿವೆ!

ಹುಡುಗಿಯರು ತೀರಾ ಸಾಮಾನ್ಯವಾಗಿ ಗಂಡಸರ ಬಗ್ಗೆ ಆಕ್ಷೇಪ ಎತ್ತೋದು ಗಂಡಸರ ತೀರಾ ಸಾಮಾನ್ಯವಾದ ಒಂದು ಅಭ್ಯಾಸದ ಬಗ್ಗೆ.

ರಸ್ತೆ ಬದಿಯಲ್ಲಿ,ತೆರೆದ ಬಯಲಲ್ಲಿ,ಲೈಟು ಕಂಬದ ಹಿಂದೆ ,ಮನೆಯ ಗೋಡೆಯ ಮುಂದೆ -ಇನ್ನೂ ನೇರವಾಗಿ ಆರೋಪಿಸೋದಾದರೆ ’ಎಲ್ಲೆಂದರಲ್ಲಿ ’ ಸೂಸು ಮಾಡುವ ’ಕೆಟ್ಟ(?) ಅಭ್ಯಾಸ ಗಂಡಸರಿಗಿದೆ ಅನ್ನೋದು ಜಗತ್ತಿನಲ್ಲಿರುವ ಎಲ್ಲಾ ಮಹಿಳೆಯರು ಬಡಪಾಯಿ ಗಂಡಸರ ಮೇಲೆ ಹಾಕುವ ಆರೋಪ.

’ಗಂಡಸರಿಗಿರುವಂಥ ಅನುಕೂಲಕರ ಸೌಲಭ್ಯ ಒಂದು ವೇಳೆ ನೀವು ಹೆಂಗಸರಿಗಿದ್ದಿದ್ದರೆ , ನೀವೂ ನಮ್ಮ ಹಾಗೆಯೇ ವರ್ತಿಸ್ತಾ ಇದ್ರಿ.ನಿಮಗೆ ಆ ಸ್ವಾತಂತ್ರ್ಯ ,ದೈಹಿಕ ಅನುಕೂಲ ಇಲ್ಲದೇ ಇದ್ದದ್ದರಿಂದ ನೀವು ತುಂಬಾ ಒಳ್ಳೆಯವರಾಗಿದ್ದೀರಿ ! ’ ಅನ್ನೋದು ನನ್ನ ಯಾವತ್ತಿನ ವಾದ .ಅದಕ್ಕಾಗಿ ಬಹಳಷ್ಟು ಜನ ಕೋಪಿಸಿಕೊಂಡಿದ್ದೂ ಇದೆ.Honesty is lack of opportunity ಅನ್ನೋ ಮಾತು ಬೇರೆ ಇದೆಯಲ್ವ ಅದೇ ರೀತಿ ! ಇರಲಿ ಬಿಡಿ ಹೆಂಗಸರನ್ನು ತೀರಾ ಕೆರಳಿಸೋದು ಅಪಾಯ ಅನ್ನೋ ಅರಿವಿದ್ದಿದ್ದರಿಂದ ’ಸರಿ ಮ್ಯಾಡಂ ನಾವು ಗಂಡಸ್ರು ಪರಮ ಕೊಳಕರು ಸರಿ ನಾ ?’ ಅನ್ನೋ ಅರ್ಥದ ಮಾತಾಡಿ ಯಾವಾಗಲೂ ವಾದಕ್ಕೆ ಮಂಗಳ ಹಾಡೋದು ನನ್ನ ಅಭ್ಯಾಸ.

ಈಗ ನನಗೆ ಒಂದು ಖುಷಿಯಾದ ಸುದ್ದಿ ಗೊತ್ತಾಗಿದೆ ! ಈ ಸುದ್ದಿ ಪಾಪ ಹುಡುಗಿಯರಿಗೆ/ಮಹಿಳೆಯರಿಗೆ ಖುಶಿ ಥರೋದಾಗಬೇಕಿತ್ತು .ಆದರೆ ಕಾರಣಾಂತರಗಳಿಂದ ಪಾಪ ನಮ್ಮ ಭಾರತೀಯ ನಾರಿಯರಿಗೆ ಇದು ಅಷ್ಟೊಂದು ಸಂತಸದ ಸುದ್ದಿ ಅಲ್ಲ! ಆದರೂ ಬಹಳಷ್ಟು ಪಾಶ್ಚಾತ್ಯ ಹುಡುಗಿಯರಿಗೆ ಇದು ಸಂತೋಷದ ಸುದ್ದಿಯಂತೆ (?)!

ಸುದ್ದಿ ಏನಂದ್ರೆ ಇನ್ನು ಮುಂದೆ ಹುಡುಗಿಯರೂ ನಮ್ಮ ಹಾಗೆ ಎಲ್ಲೆಂದರಲ್ಲಿ ನಿಂತು ಸೂಸು ಮಾಡುವಂಥ ಒಂದು ವಸ್ತುವನ್ನು ಪಾಶ್ಚಾತ್ಯರು ಕಂಡು ಹುಡುಕಿದ್ದಾರೆ. P-Mate ಅನ್ನೋ ಈ ಸಾಧನದಿಂದ ಇನ್ನು ಮುಂದೆ ಹುಡುಗಿಯರೂ ನಮ್ಮಂಥ ಕೊಳಕು ಹುಡುಗರಿಗೆ ಸಡ್ಡು ಹೊಡೆಯಬಹುದು!

ಇಲ್ಲಿ ತನಕ ’ನೀವು ಹುಡುಗಿಯರು ಯಾವುದರಲ್ಲಿ ಬೇಕಾದರೂ ಗಂಡಸರನ್ನು ಅನುಕರಿಸಬಲ್ಲಿರಿ ,ಆದರೆ ’ಒಂದ’ನ್ನು ಬಿಟ್ಟು !’ ಅನ್ನೋ ಗರ್ವದ ಮಾತು ಆಡಿಕೊಳ್ಳುತ್ತಾ ಇದ್ವಿ.

ಇನ್ನು ಮುಂದೆ ಆ ಮಾತು ಆಡೋ ಹಾಗಿಲ್ಲ :(

ಆದರೆ ಖುಶಿಯಾಗೋ ಸಂಗತಿ ಅಂದ್ರೆ ಇನ್ನು ಮುಂದೆ ’ಬರೀ ಗಂಡಸರಷ್ಟೇ ಕೊಳಕರು ’ ಅನ್ನೋ ಹೆಂಗಸರ ತಪ್ಪು ತಿಳುವಳಿಕೆ ಹೋಗಲಿದೆ.ಹಾಗೆಯೇ ’ರಸ್ತೆ ಬದಿಯಲ್ಲಿ ಸೂಸೂ ಮಾಡುವವರ ಸಂಘ’(ರ.ಬ.ಸೂ.ಮಾ.ಸಂ)ಕ್ಕೆ ಇನ್ನು ಮುಂದೆ ಹುಡುಗಿಯರಿಗೂ ಅರ್ಜಿ ಗುಜರಾಯಿಸಬಹುದು !

ಇಂಥ ಒಂದು ವಸ್ತು ಭಾರತೀಯ ಮಹಿಳೆಯರಿಗೆ ಉಪಯೋಗಿಯಾಗೋದು ಸಂಶಯವೇ .ಆದರೆ ಪ್ರಪಂಚದಾದ್ಯಂತ ಜನರು ಎಷ್ಟು ಕ್ರಿಯೇಟಿವ್ ಆಗಿ ಯೋಚಿಸ್ತಾರೆ ಅನ್ನೋದಕ್ಕೆ ಇದೊಂದು ಒಳ್ಳೆಯ ನಿದರ್ಶನ.

ಮಹಿಳಾ ಸ್ವಾತಂತ್ರ್ಯಕ್ಕೆ ಜೈ ಹೋ .....

Wednesday, April 1, 2009

ತಪ್ಪು ಮಾಡದವರು ಯಾರವ್ರೇ !

" ನಿನ್ನೆ ರಾತ್ರಿ ನನ್ನಿಂದ ಒಂದು ತಪ್ಪು ನಡೆದು ಹೋಯ್ತು ...." ಹೀಗೆ ಶುರುವಾಗುತ್ತೆ ಆ ಜಾಹೀರಾತು .ಏನಪ್ಪಾ ಅಂಥ ಮಾಡಬಾರದ ತಪ್ಪು ಅಂತ ಕುತೂಹಲದಿಂದ ಮುಂದೆ ನೋಡಿದರೆ ... " ನಿನ್ನೆ ರಾತ್ರಿ ನಾನು ಪ್ರಿಕಾಶನ್ ತಗೊಳ್ಳೋದು ಮರೆತು ಹೋದೆ .... " ಅಂತಾಳೆ ಹೆಂಡತಿ(!?) .

"ರೀ ನಾನು ಅಡಿಗೆಗೆ ಉಪ್ಪು ಹಾಕೋದು ಮರೆತು ಹೋದೆ " ಅಷ್ಟೇ ಸಲೀಸಾಗಿ "ನಾನು ಪ್ರಿಕಾಶನ್ ತಗೊಳ್ಳೋದು ಮರೆತು ಹೋದೆ " ಅನ್ನೋ ಕಾಲ ಬಂತಾ? ಅಯ್ಯೋ ವಿಧಿಯೆ !

ಇಲ್ಲಿ ಒಂದು ಕುತೂಹಲಕರವಾದ ಸಂಗತಿ ಅಂದರೆ ಆ ಜಾಹೀರಾತಿನಲ್ಲಿ ಹೆಂಡತಿ ಅಂತ ಬರ್ತಾಳಾದ್ರೂ ಅದು ಹೆಂಡತಿಯರಿಗಲ್ಲ !

ಗೆಳತಿ ,ಗರ್ಲ್ ಫ್ರೆಂಡ್ ಆ ಮಾತು ಹೇಳೋ ಥರ ಜಾಹೀರಾತು ಬರುವಷ್ಟು ಭಾರತ ಇನ್ನೂ ಮುಂದುವರೆದಿಲ್ಲ (ಕಡೆ ಪಕ್ಷ ಟಿ.ವಿ ಯಲ್ಲಿ!).ಹೆಂಡತಿಯರು ಅಂಥಾ ವಿಷಯದಲ್ಲಿ ಎಡವುತ್ತಾರೆ ಅನ್ನೋದು ನನಗಂತೂ ನಂಬಲಾರದ ವಿಷಯ .ನಾನು ಇನ್ನೂ ಮದುವೆ ಆಗದ ಕಾರಣ ನನಗಿನ್ನೂ ಆ ಬಗ್ಗೆ ಜಾಸ್ತಿ ಗೊತ್ತಿಲ್ಲ!

ಈ Unwanted-72 ,Mistake ಥರದ ಮಾತ್ರೆಗಳು ಯುವ ಜನತೆಯನ್ನೇ ಗಮನದಲ್ಲಿಟ್ಟುಕೊಂಡು ಮಾಡಿರೋದು ಅನ್ನೋದಂತೂ ಸತ್ಯ.ಇಂಥ ಮಾತ್ರೆಗಳ ಬಗ್ಗೆ ಅರಿವಿರದ ಯುವ ಜನತೆ ಈ ಥರದ ಮಾತ್ರೆಗಳನ್ನು ಗರ್ಭನಿರೋಧಕ ಮಾತ್ರೆಗಳಿಗೆ ಪರ್ಯಾಯವಾಗಿ ತೆಗೆದುಕೊಳ್ಳುತ್ತಾ ಇರೋದೂ ಅಷ್ಟೇ ನಿಜ.ಕಾಲೇಜು ಮೆಟ್ಟಿಲೇರಿದ ಯುವ ಜನತೆ ಇಂಥ ದುಸ್ಸಾಹಸಕ್ಕೆ ತೊಡಗೋದು ಸಾಮಾನ್ಯ .ಇದಕ್ಕೂ ಭಾರತೀಯ ಸಂಸ್ಕೃತಿಗೂ ಥಳುಕು ಹಾಕೋದೂ ಕಷ್ಟಸಾಧ್ಯ . ಅದೇ ಕಾರಣಕ್ಕೆ ನನಗೆ ನಟಿ ಖುಷ್ಬೂ ಹೇಳಿಕೆ ಕೊಂಚ ಮಟ್ಟಿಗೆ ವಾಸ್ತವಕ್ಕೆ ಹತ್ತಿರ ಅನ್ನಿಸುತ್ತೆ.

ಇಂಥ ಮಾತ್ರೆಗಳಿಂದಾಗೋ ದುಷ್ಪರಿಣಾಮಗಳನ್ನೂ ಹೇಳಿಕೊಡುವ ಪ್ರಯತ್ನ ಎಲ್ಲೂ ಆಗ್ತಾ ಇಲ್ಲ.ಬಹುಷಃ ಇಂಥ ಮಾತ್ರೆಗಳನ್ನು ಮಾರುತ್ತಿರುವ ಬಹುರಾಷ್ಟ್ರೀಯ ಕಂಪೆನಿಗಳಿಗೂ ಈ ಮಾತ್ರೆಗಳ ದುಷ್ಪರಿಣಾಮಗಳನ್ನು ಹೇಳುವ ಅಗತ್ಯ ಕಾಣಿಸ್ತಾ ಇಲ್ಲ.ಎಲ್ಲಾ ಕುರುಡು ಕಾಂಚಾಣದ ಮಹಿಮೆ.ಈ ಕುರುಡು ಕಾಂಚಾಣ ಬರೀ ಸಾಫ್ಟ್ವೇರ್ ಮಂದಿಯನ್ನಷ್ಟೇ ಹಾಳು ಮಾಡಿರುವುದು ಅಂದುಕೊಂಡಿದ್ದೆ ನಾನು !

ಈ ವಿಷಯ ಹೇಗೆ ನೆನಪಾಯ್ತು ಅಂದರೆ ,ಮೊನ್ನೆ ಹುಡುಗರಿಬ್ಬರು ಮಾತಾಡಿಕೊಳ್ತಾ ಇದ್ರು ’ಮಜಾ ಮಾಡೋದು ಮಗಾ ,ಎಡವಟ್ಟಾದ್ರೆ ಇದ್ದೇ ಇದೆಯಲ್ಲ Unwanted -72 ಅಂಥ ’ !

ತಪ್ಪು ಮಾಡುವುದೇ ಆದರೆ ತೊಂದರೆಗೀಡಾಗದ ಹಾಗೆ ತಪ್ಪು ಮಾಡಿ ಎಂದು ಬಹುಷ: ಯುವಜನತೆಗೆ ಹೇಳುವ ಕಾಲ ಬಂದಿದೆ.

ಅಂದ ಹಾಗೆ ನೀವು ತಪ್ಪು ಮಾಡಬೇಡಿ !

ಅಷ್ಟಕ್ಕೂ ಅಪ್ಪಿ ತಪ್ಪಿ ತಪ್ಪು ಮಾಡಿದರೆ ಇದ್ದೇ ಇದೆಯಲ್ಲ ................

Unwanted-72 ಅಲ್ಲ !

’ಮಠ’ ಚಿತ್ರದ ಹಾಡು ‘ತಪ್ಪು ಮಾಡದವರು ಯಾರವ್ರೇ, ತಪ್ಪೇ ಮಾಡದವರು ಎಲ್ಲವ್ರೇ ...’ !

Saturday, March 28, 2009

ಹೇ ಕ್ಯಾಸೆಟ್, ನಿನಗೊಂದು ಭಾವಪೂರ್ಣ ಶ್ರದ್ಧಾಂಜಲಿ.....



ಬಹಳ ಸಮಯದ ನಂತರ ರೂಮ್ ಕ್ಲೀನ್ ಮಾಡುವ ಅನಿವಾರ್ಯತೆ ಉಂಟಾಯಿತು!ಕಳೆದ ಏಳು ವರ್ಷಗಳಿಂದ ಬೆಂಗಳೂರಿನಲ್ಲಿದ್ದು ಒಂದು ದೊಡ್ಡ ಡಬ್ಬಿ ಸಾಮಗ್ರಿಗಳನ್ನು ಬಹಳ ಜೋಪಾನಾವಾಗಿ ಕಾಪಾಡಿಕೊಂಡು ಬಂದಿದ್ದೆವು ನಾವೆಲ್ಲ ಗೆಳೆಯರು.ಈಗ ಅನಿವಾರ್ಯವಾಗಿ ಕೆಲವು ವಸ್ತುಗಳನ್ನು ತ್ಯಾಗ ಮಾಡಬೇಕಾದ ಪರಿಸ್ಥಿತಿ ಒದಗಿ ಬಂದಿದೆ.
ಅದರಲ್ಲಿ ಒಂದು ಚಿಕ್ಕ ಡಬ್ಬಿ ಬರೀ ಕ್ಯಾಸೆಟ್ ಗಳದ್ದೆ ಇದೆ.ಈ ಸಿ.ಡಿ ಹಾವಳಿ ಶುರು ಆಗೋ ಮೊದಲು ಕೊಂಡ ಕ್ಯಾಸೆಟ್ ಗಳು ಬಹಳಷ್ಟು ಹಾಗೆ ಇವೆ.ಮೊನ್ನೆ ಊರಿಗೆ ಹೋದಾಗ ಮನೆಯಲ್ಲಿನ ಕಪಾಟು ತೆರೆದರೆ ಸುಮಾರು ಐನೂರರಷ್ಟು ಕ್ಯಾಸೆಟ್ ಗಳನ್ನು ನೋಡಿ ತಲೆ ಸುತ್ತೇ ಬಂದಿತ್ತು!ಅದರಲ್ಲಿ ಬಹುತೆಕ ಕ್ಯಾಸೆಟ್ ಗಳು ಭಜನೆಯವು.ಪುತ್ತೂರು ನರಸಿಂಹ ನಾಯಕ್,ವಿದ್ಯಾಭೂಷಣ,ಬೀಮಸೇನ ಜೋಷಿ,ವೆಂಕಟೀಶ ಕುಮಾರ್,ಶೇಷಗಿರಿ ದಾಸ್ ,ಸುರೆಶ್ ವಾಡೇಕರ್ ಹೀಗೆ ಹತ್ತು ಹಲವು ಪ್ರಖ್ಯಾತರು ಹಾಡಿರುವ ಹಾಡುಗಳ ಕ್ಯಾಸೆಟ್ ಗಳು!ಹಾಗೆ ಕಪಾಟಿನ ಬಾಗಿಲು ಮುಚ್ಚಿ ಮತ್ತೆ ಬೆಂಗಳೂರಿಗೆ ವಾಪಸ್ ಆಗಿದ್ದೆ.

ಆದರೆ ಬೆಂಗಳೂರಿಗೆ ಬಂದ ಮೇಲೆ ರೂಮ್ ಕ್ಲೀನ್ ಮಾಡುವಾಗ ಮತ್ತೆ ಈ ಕ್ಯಾಸೆಟ್ ಗಳೇ ಸಿಗಬೇಕಾ?

ಊರಲ್ಲಿರಬೇಕಾದ್ರೆ ನನ್ನ ಅಣ್ಣನಿಗೆ ಕ್ಯಾಸೆಟ್ ಹುಚ್ಚಿತ್ತು.ಎಲ್ಲಾ ಥರದ ಕ್ಯಾಸೆಟ್ ಗಳು ,ಅಂದರೆ ಭಜನೆ ,ನಾಟಕ,ಗಝಲ್,ಹಿಂದಿ ,ಕನ್ನಡಚಿತ್ರಗಳ ಕ್ಯಾಸೆಟ್ ಹೀಗೆ ಎಲ್ಲಾ ಬಗೆಯ ಕ್ಯಾಸೆಟ್ ಗಳೂ ನಮ್ಮ ಬಳಿ ಇದ್ದವು.
ಒಂದು ದಿನ ಅಣ್ಣ ಬಹಳ ಇಷ್ಟ ಪಡುತ್ತಿದ್ದ ’ಇಮ್ತಿಹಾನ್’ ಅನ್ನೋ ಹಿಂದಿ ಕ್ಯಾಸೆಟ್ ಒಂದನ್ನು ಪಕ್ಕ ಮನೆಯ ಹುಡುಗನಿಗೆ ಕೊಟ್ಟಿದ್ದೆ.ಬೆಳಿಗ್ಗೆಯೊಳಗೆ ಕ್ಯಾಸೆಟ್ ಅನ್ನು ಹಿಂದಿಗುರಿಸುತ್ತಾನೆ ಅನ್ನೋ ಭರವಸೆಯೊಂದಿಗೇ ಕೊಟ್ಟಿದ್ದೆ.ಆದ್ರೆ ಆ ಪಾಪಿ ಅದನ್ನು ಕಳಕೊಂಡಿದ್ದ!ಕಳಕೊಂಡಿದ್ದ ಅನ್ನೋದಕ್ಕಿಂತ ಆ ಕಳ್ಳ ಅದನ್ನು ವಾಪಸ್ ಕೊಡದೇ ’ಕಳಕೊಂಡಿದ್ದೀನಿ ’ ಅಂತ ಸುಮ್ಮನೆ ಹೇಳಿದ್ದ ಅನ್ನೋದೆ ಸರಿ ಅನ್ನಿಸುತ್ತೆ.
ಆ ಕ್ಯಾಸೆಟ್ ಅಣ್ಣನಿಗೆ ವಾಪಾಸ್ ಕೊಡಲು ನಾನು ಬಹಳಷ್ಟು ಒದ್ದಾಡಿದ್ದೆ.ಇಡೀ ಮಂಗಳೂರು ,ಉಡುಪಿ,ಮಣಿಪಾಲ ಹುಡುಕಿದ್ರೂ ನನಗೆ ಆ ಕ್ಯಾಸೆಟ್ ಸಿಕ್ಕಿರಲಿಲ್ಲ.ಬದಲಾಗಿ ಅದೇ ಸಿನೆಮಾದ ಹಾಡಿನ ಜೊತೆ ಬೆರೆ ಸಿನೆಮಾದ ಹಾಡುಗಳಿರುವ combination ಕ್ಯಾಸೆಟ್ ಸಿಕ್ಕಿತ್ತು.ಆದರೆ ಆ ಕ್ಯಾಸೆಟ್ ವಾಪಾಸ್ ಕೊಟ್ಟಿಲ್ಲ ಅಂದ್ರೆ ನನ್ನಣ್ಣ ನನ್ನನ್ನು ಅಡ್ಡಡ್ಡ ಸಿಗಿದು ತೋರಣ ಕಟ್ಟೋದು ಖಂಡಿತ ಅನ್ನೋ ಭಯ ನನಗಿತ್ತು.

ಸಧ್ಯ ಮನೆಯಲ್ಲಿದ್ದ ಕೆಲವು ಪ್ರಭಾವಿ ಜನರ ಕೃಪೆಯಿಂದ ನಾನು ಅಣ್ಣನ ಕೈಯಿಂದ ಆ ದಿನ ಬಚಾವಾಗಿದ್ದೆ.

ಈಗ ಅದೇ ಕ್ಯಾಸೆಟ್ ಗಳನ್ನು ಕೈಯಾರೆ ಬಿಸಾಕುವ ಅನಿವಾರ್ಯತೆ ಉಂಟಾಗಿದೆ.ಉಚಿತವಾಗಿ ಕೊಟ್ಟರೂ ಈ ಕ್ಯಾಸೆಟ್ ಅನ್ನೋ ವಸ್ತುವನ್ನು ತಗೊಳ್ಳಲು ಪೌರಕಾರ್ಮಿಕರೂ ತಯಾರಿಲ್ಲ.

ಯಾಕಂದ್ರೆ ಅವರ ಮನೆಗಳಲ್ಲೂ ಈಗ ಸಿ.ಡಿ ಪ್ಲೇಯರ್ ಗಳು ರಾರಾಜಿಸುತ್ತಿವೆ!

ಕಾಲಕ್ಕೆ ತಕ್ಕಂತೆ ನಾವೂ ಬದಲಾಗಬೆಕು .ಈಗಿರುವ MP3 Player ಹಳೆಯ ಕ್ಯಾಸೆಟ್ ಗಳಿಗಿಂತ ಎಷ್ಟೋ ಪಾಲು ಉತ್ತಮ.ಹಾಗಾಗಿ ಹಳೆಯ ಕ್ಯಾಸೆಟ್ ಗಳು ಮಾಯವಾಗಿರುವುದರಲ್ಲಿ ಯಾವುದೇ ಆಶ್ಚರ್ಯ ಇಲ್ಲ.

ಆದರೆ ಈ ಕ್ಯಾಸೆಟ್ ಗಳು ಬಹಳಷ್ಟು ವರ್ಷ ನಮ್ಮ ಮನ ತಣಿಸಿರುವುದರಿಂದ ಅದಕ್ಕೊಂದು ಗೌರವಯುತ ಬೀಳ್ಕೊಡುಗೆ ನೀಡುವುದು ಅನಿವಾರ್ಯ ಆನಿಸ್ತಾ ಇದೆ.

ಆಗಿನ ಕಾಲದಲ್ಲಿ ಕ್ಯಾಸೆಟ್ ಅನ್ನೋದೇ ಒಂದು ಲಕ್ಸುರಿ.ಬಹಳಷ್ಟು ಜನ ಹೊಟ್ಟೆ ಬಟ್ಟೆಗೇ ಕಷ್ಟಪಡುವುವರಾಗಿದ್ದರಿಂದ ಟೇಪ್ ರೆಕಾರ್ರ್ಡರ್, ಕ್ಯಾಸೆಟ್ ಹೊಂದಿರುವವರಿಗೆ ತಕ್ಕ ಮಟ್ಟಿನ ಗೌರವ ಇತ್ತು.

ಒಂದು ದಿನ ನಾನು ನಮ್ಮ ಪರಿಚಿತ RSS ಧುರೀಣರೊಬ್ಬರಿಂದ ’ಭಾರತ ದರ್ಶನ’ ಕ್ಯಾಸೆಟ್ ತಂದಿದ್ದೆ.ಮಾಮೂಲಿಯಂತೆ ಕ್ರಿಕೆಟ್ ಆಡಿ ಮನೆಗೆ ವಾಪಾಸ್ ಆಗಿ ಸುಸ್ತಾಗಿ ಫ್ಯಾನ್ ಹಾಕಿ ಹಾಸಿಗೆಯಲ್ಲಿ ಮಲಗಬೇಕೆನ್ನಿಸಿ ಟೇಪ್ ರೆಕಾರ್ಡರ್ ಆನ್ ಮಾಡಿದ್ದೆ.ಅಸಡ್ಡೆಯಿಂದ ಕೈಯ್ಯಲ್ಲಿರೊ ಬ್ಯಾಟ್ ನಿಂದಲೇ ಟೇಪ್ ರೆಕಾರ್ಡರ್ ಅನ್ನು ಆನ್ ಮಾಡಿ ಹಾಸಿಗೆಯಲ್ಲಿ ಬಿದ್ದುಕೊಂಡಿದ್ದೆ ನಾನು.
ಐದು ನಿಮಿಷವಾದರೂ ವಿದ್ಯಾನಂದ ಶೆಣೈಯವರ ಸದ್ದಿಲ್ಲದಾಗ ಸಂಶಯ ಬಂದು ಟೇಪ್ ರೆಕಾರ್ಡರ್ ಬಳಿ ಹೋಗಿ ನೋಡಿದ್ರೆ ನನ್ನ ಗ್ರಹಚಾರಕ್ಕೆ ನಾನು ರೆಕಾರ್ಡ್ ಬಟನ್ ಅನ್ನು ಒತ್ತಿದ್ದೆ .ಪ್ಲೇ ಹಾಗೂ ರೆಕಾರ್ಡ್ ಎರಡೂ ಬಟನ್ ಗಳು ಒಟ್ಟಿಗೆ ಅದುಮಿದ್ದರಿಂದ ಕ್ಯಾಸೆಟ್ ರೆಕಾರ್ಡ್ ಮೋಡ್ ಗೆ ಹೋಗಿತ್ತು.’ಭಾರತ ದರ್ಶನ’ ದ ಶುರುವಿಗೆ ಬರುವ ಅದ್ಭುತ ಹಾಡೊಂದು ನನ್ನ ಎಡವಟ್ಟಿನಿಂದಾಗಿ ಅಳಿಸಿ ಹೋಗಿತ್ತು.ಆ RSS ಧುರೀಣರು ನನಗೆ ಬಿಟ್ಟಿ ’ಪಾತಾಳ ದರ್ಶನ’ ಮಾಡಿಸುತ್ತಾರೇನೋ ಅನ್ನೋ ಭಯ ನನಗೆ ಆಗ ಕಾಡಿತ್ತು.ಸಧ್ಯ ಅವರು ಅಷ್ಟು ದುಷ್ಟರಾಗಿರಲಿಲ್ಲ.ಬದಲಾಗಿ ನನಗೆ ಇನ್ನೊಂದು ಕ್ಯಾಸೆಟ್ ಕೇಳಲು ಕೊಟ್ರು!

ಕ್ಯಾಸೆಟ್ ನ ಇನ್ನೊಂದು ಸಮಸ್ಯೆ ರೀಲ್ ಕಚ್ಚಿಕೊಳ್ಳೋದು! ಚೆನ್ನಾಗಿ ಹಾಡುತ್ತಿದ್ದ ಕ್ಯಾಸೆಟ್ ಅಚಾನಕ್ ಆಗಿ ನಾಯಿ ಮರಿ ಕೂಗಿದ ಹಾಗೆ ಕೂಗತೊಡಗಿತು ಅಂದರೆ ಅದರ ರೀಲ್ ಸಿಕ್ಕಿ ಕೊಂಡಿತು ಅಂತಲೇ ಲೆಕ್ಕ.ಕೂಡಲೇ ಏನಾದ್ರೂ ಟೇಪ್ ರೆಕಾರ್ಡರ್ ಅನ್ನು off ಮಾಡಿಲ್ಲ ಅಂದ್ರೆ ಆ ಕ್ಯಾಸೆಟ್ ಅನ್ನು ಮರೆತು ಬಿಡುವುದೇ ಸೂಕ್ತ ನೀವು .
ರೀಲ್ ಸಿಕ್ಕಿಕೊಂಡಾಗ ಅದನ್ನು ಬಿಡಿಸುವುದೇ ಒಂದು ಕಲೆ!ಹುಷಾರಾಗಿ ರೀಲ್ ಬಿಡಿಸಿ ಅದನ್ನು ಮತ್ತೆ ಸುರುಳಿ ಸುತ್ತುವುದರೊಳಗೆ ಕೆಲವೊಮ್ಮೆ ರೀಲ್ ತಿರುಚಿ ಹೋಗೋದುಂಟು.ಒಮ್ಮೆ ರೀಲ್ ತಿರುಚಿ ಏನಾದ್ರೂ ಒಳಗೆ ಹೋಗಿ ಬಿಟ್ರೆ ಮತ್ತೆ ಹಾಡುಗಳೆಲ್ಲಾ ಅರಬಿಕ್ ಸ್ಟೈಲ್ ನಲ್ಲ್ ಕೇಳಿಸುವುದು!ಅದನ್ನು ಮತ್ತೆ ಸರಿ ಪಡಿಸಲು ಕ್ಯಾಸೆಟ್ ಬಿಚ್ಚಬೇಕು.
ಚೆನ್ನಾಗಿರುತ್ತೆ ಅಂತ ಯಾವಾಗಲೂ ಮಹಮ್ಮದ್ ರಫಿ ,ಲತಾ ಮಂಗೇಶ್ಕರ್ ರ ಹಳೆಯ ಕ್ಯಾಸೆಟ್ ಗಳನ್ನು ಕೇಳ್ತಾ ಇದ್ರೆ ಹೆಡ್ ಮೇಲೆ ಅಷ್ಟು ಕೊಳೆ ಕೂರೋದಂತೂ ಸಾಮಾನ್ಯ.ಅದನ್ನು ಕ್ಲೀನ್ ಮಾಡಿಲ್ಲ ಅಂದ್ರೆ ಲತಾ ಮಂಗೇಷ್ಕರ್ ಹಾಡಿರೋ ಹಾಡುಗಳು ಉಶಾ ಉತ್ತಪ್ ಹಾಡಿದ ಹಾಗೆ ಕೇಳಿಸೋದುಂಟು.

ಅಪ್ಪನ ಬಿಳಿ ಪಂಚೆಯ ಅಂಚಿನಲ್ಲಿ ಅದನ್ನು ಕ್ಲೀನ್ ಮಾಡಿದರಷ್ಟೇ ಹೆಡ್ ನಲ್ಲಿ ಎಷ್ಟು ಧೂಳು ಕೂತಿತ್ತು ಅಂತ ಗೊತ್ತಾಗೋದು!ಕೆಲವರು ಅದಕ್ಕೆಂದೇ ಹೆಡ್ ಕ್ಲೀನರ್ ಗಳನ್ನು ತರುತ್ತಿದ್ದದ್ದುಂಟು.ಆದರೆ ನಮಗೆ ದೈವದತ್ತವಾದ ಎಂಜಲು ಹಾಗೂ ಅಪ್ಪನ ಬಿಳಿ ಪಂಚೆ ಇರಬೇಕಾದ್ರೆ ಹೆಡ್ ಕ್ಲೀನರ್ ಯಾಕೆ ಅಲ್ವಾ?

ಈಗಿನ MP3 Player ಗಳಲ್ಲಾದ್ರೆ ಇಷ್ಟ ಪಟ್ಟ ಹಾಡನ್ನು ಆರಾಮಾಗಿ ಕೇಳಬಹುದು.ಕ್ಯಾಸೆಟ್ ಗಳ ಒಂದು ದೊಡ್ಡ ಸಮಸ್ಯೆ ಅಂದ್ರೆ ಯಾವುದಾದರೂ ನಿಶ್ಚಿತ ಹಾಡು ಕೇಳಬೇಕಾದ್ರೆ ಇಡೀ ಕ್ಯಾಸೆಟ್ forward ಮಾಡಬೇಕು!ಆ ಹಾಡನ್ನು ಹುಡುಕುವುದೇ ದೊಡ್ಡ ಸಮಸ್ಯೆ!ಹಾಡನ್ನು ಪೂರ್ತಿ ಕೇಳಿಯಾದ ಮೇಲೆ ಮತ್ತೆ ಕೇಳಬೇಕೆಂದರೆ ಮತ್ತೆ ಅದೇ ರಿವೈಂಡ್ ಬಟನ್ನೇ ಗತಿ.

ಲವ್ ಫೇಲ್ ಆಗಿ ಮುಖೇಶ್ ನ ಯಾವುದಾದರೂ ಹಾಡು ಕೇಳ್ತಾ ಇದ್ರೆ ಈ ರಿವೈಂಡ್ ,ಫಾರ್ವರ್ಡ್ ದೇ ಒಂದು ದೊಡ್ಡ ಸಮಸ್ಯೆ.ಒಮ್ಮೆ ಹಾಡು ಕೇಳಿದ ಮೇಲೆ ಮತ್ತೆ ಕೇಳಲು ರಿವೈಂಡ್ ಮಾಡಬೇಕು.ಈ ರಿವೈಂಡ್ ಫಾರ್ವರ್ಡ್ ಗೋಳಿನಿಂದ ಲವ್ವೇ ಬೇಡ ಅನ್ನಿಸೋದೂ ಉಂಟು ಒಮ್ಮೊಮ್ಮೆ.ಅಪ್ಪಿ ತಪ್ಪಿ ಏನಾದ್ರೂ ಬಹಳ ಸಾರಿ ರಿವೈಂಡ್ ಫಾರ್ವರ್ಡ್ ಮಾಡಿದ್ರಂತೂ ಕ್ಯಾಸೆಟ್ ರೀಲ್ ತುಂಡಾಗಿ ಪುಳಕ್ಕನೆ ಕ್ಯಾಸೆಟ್ ಒಳಗೆ ಸೇರೋದುಂಟು .ಅದನ್ನು ಮತ್ತೆ ಸ್ಕ್ರೂ ಬಿಚ್ಚಿ ರೀಲ್ ಗೆ ಒಂದಿಷ್ಟು ಅಂಟು ಹಚ್ಚಿ ಜೋಡಿಸಿಬೇಕು.

ಈಗ ಕ್ಯಾಸೆಟ್ ನ ಅರ್ಧ ಭಾಗದಷ್ಟಿರೋ Apple iPod ಅದರ ಜಾಗ ಆಕ್ರಮಿಸಿದೆ.ಕ್ಯಾಸೆಟ್ ಗಳಿಗಿಂತ ಉತ್ಕೃಷ್ಟ ಮಟ್ಟದ ಸಂಗೀತ ಈ iPod ನಲ್ಲಿ ಕೇಳಬಹುದು.

ಆದರೆ ನಮ್ಮನ್ನು ಬಹಳಷ್ಟು ವರ್ಷ ರಂಜಿಸಿದ ,ನಮ್ಮ ದುಖ ದುಮ್ಮಾನಗಳಿಗೆ ಸಾಥ್ ನೀಡಿದ ಈ ಕ್ಯಾಸೆಟ್ ಗಂತೂ ಒಂದು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸದೇ ಇರಲಾಗುವುದಿಲ್ಲ.

ಹೇ ಕ್ಯಾಸೆಟ್ ನಿನ್ನನ್ನು ದೂರಮಾಡುತ್ತಿರುವುದಕ್ಕೆ ಕ್ಷಮಿಸಿಬಿಡು.

ಫೋಟೋ ಕೃಪೆ: ಸ್ವಾಮಿ ಈ ಫೋಟೋ ನಾವೇ ತೆಗಿದಿರೋದು ಹಾಗಾಗಿ ಯಾರ ಕೃಪೆಯೂ ಬೇಕಿಲ್ಲ ! .....

Tuesday, March 24, 2009

ಮಕ್ಕಳಿರಬೇಕಮ್ಮ ಚ್ಯಾನೆಲ್ ತುಂಬಾ....


ನಾನು ಎರಡನೇ ಕ್ಲಾಸಿನಲ್ಲಿದ್ದಾಗ ಸರಿಯಾಗಿ ಚಡ್ಡಿ ಹಾಕಿ ಕೊಳ್ಳಲೂ ಬರುತ್ತಿರಲಿಲ್ಲ(ಈಗ ಬರುತ್ತಾ ಅಂತ ಕೇಳಬೇಡಿ ಪ್ಲೀಸ್..)! ಯಾರಾದ್ರೂ ನೆಂಟರು ಮನೆಗೆ ಬಂದವರು ’ಸಂದೀಪ ಯಾವುದಾದರೂ ಹಾಡು ಹೇಳಪ್ಪ ’ ಅಂದ್ರೆ ಕೈ ಕಾಲೆಲ್ಲ ನಡುಗುತ್ತಿತ್ತು.ಆದರೂ ಕಷ್ಟಪಟ್ಟು ’ನಾಯಿ ಮರಿ ನಾಯಿ ಮರೀ ತಿಂಡಿ ಬೇಕೇ ’ ಅನ್ನೋ ಹಾಡನ್ನು ನೆಂಟರು ತಂದಿರುವ ತಿಂಡಿಯನ್ನೇ ಆಸೆಯಿಂದ ದಿಟ್ಟಿಸುತ್ತಾ ನೋಡಿ ಹಾಡಿ ಮುಗಿಸಿದರೆ ಅದೇ ದೊಡ್ಡ ಸಾಧನೆ ಅವತ್ತಿಗೆ. A B C D ಕಲಿತಿದ್ದೇ ಐದನೇ ಕ್ಲಾಸಿನಲ್ಲಾದ್ದರಿಂದ ಇಂಗ್ಲೀಷ್ ರೈಮ್ಸ್ ಅನ್ನೋದೊಂದು ಇದೆ ಅನ್ನೋದೆ ಗೊತ್ತಿರಲಿಲ್ಲ(ಸಧ್ಯ ಬದುಕಿದೆ ಅವತ್ತು).

ಆದರೆ ಮೇಲಿನ ಫೋಟೋದಲ್ಲಿರುವ ಪುಟ್ಟಿ ಸಲೋನಿ ಅನ್ನೋ ಹುಡುಗಿಗೆ ಏಳು ವರ್ಷ ವಯಸ್ಸು ! ಆದರೆ ಈಗಾಗಲೇ ಹನ್ನೊಂದು ಲಕ್ಷದ ಒಡತಿ!

ಕಲರ್ಸ್ ಚಾನಲ್ ನಲ್ಲಿ ಬರುತ್ತಿದ್ದ ’ಛೋಟೇ ಮಿಯಾ’ ಅನ್ನೋ ಹಾಸ್ಯ ಕಾರ್ಯಕ್ರಮದ ವಿಜೇತೆ ಈಕೆ.

ಒಂದು ದಿನ ನಾನು ಹೀಗೆ ರಿಮೋಟ್ ನಿಂದ ಚ್ಯಾನೆಲ್ ಬದಲಾಯಿಸುವಾಗ ಈ ಕಲರ್ಸ್ ಚ್ಯಾನೆಲ್ ನಲ್ಲಿ ಬರುತ್ತಿದ್ದ ’ಛೋಟೆ ಮಿಯಾನ್ ’ ಕಾರ್ಯಕ್ರಮಕ್ಕೆ ಅಚಾನಕ್ ಆಗಿ ಬಂದು ಲ್ಯಾಂಡ್ ಆದೆ . ನಾನು ಈಗಾಗಲೇ ಸ್ಟಾರ್ ಒನ್ ನಲ್ಲಿ ಬರುತ್ತಿದ್ದ ಲಾಫ್ಟರ್ ಚ್ಯಾಲೆಂಜ್ ಗೆ ಅಡಿಕ್ಟ್ ಆಗಿದ್ದರಿಂದ ಬೇರೆ ಹಾಸ್ಯ ಕಾರ್ಯಕ್ರಮಗಳು ಅಷ್ಟೊಂದು ರುಚಿಸುತ್ತಿರಲಿಲ್ಲ.ಆದರೂ ಕಾರ್ಯಕ್ರಮ ಕೊಡುತ್ತಿದ್ದ ಪುಟ್ಟ ಹುಡುಗಿಯ ಮುಂದಿನ ಎರಡು ಹಲ್ಲು ಮುರಿದು ತುಂಬಾ ಮುದ್ದಾಗಿ ಕಾಣುತ್ತಿದ್ದರಿಂದ ಹಾಗೆ ಕುತೂಹಲ ತಡೆಯಲಾಗದೆ ಪೂರ್ತಿ ಕಾರ್ಯಕ್ರಮ ವೀಕ್ಷಿಸಿದೆ.

ಆಮೇಲಂತೂ ಆ ಕಾರ್ಯಕ್ರಮದ ರೆಗುಲರ್ ಗಿರಾಕಿಯಾದೆ ನಾನು.(ಈಗ ಅದೇ ಮಕ್ಕಳು ದೊಡ್ಡವರೊಂದಿಗೆ ಅದೇ ಕಲರ್ಸ್ ಚ್ಯಾನೆಲ್ ನಲ್ಲಿ ಶನಿವಾರ ರಾತ್ರಿ 9.00 ಕ್ಕೆ ’ಛೋಟೇ ಮಿಯಾ-ಬಡೆ ಮಿಯಾ ’ ಅನ್ನೋ ಕಾರ್ಯಕ್ರಮ ಕೊಡ್ತಾ ಇದ್ದಾರೆ ,ಆಸಕ್ತರು ವೀಕ್ಷಿಸಬಹುದು)

ಪುಟ್ಟ ಸಲೋನಿ ಆ ಕಾರ್ಯಕ್ರಮದಲ್ಲಿ ಭಾಗವಸಿದ ಪೈಕಿ ಅತ್ಯಂತ ಚಿಕ್ಕವಳು.ಬರೇ ಏಳು ವರ್ಷ ವಯಸ್ಸು ! ಉಳಿದ ಮಕ್ಕಳೂ ಅದ್ಭುತ ಪ್ರತಿಭಾವಂತರು.ಆದರೆ ವಯಸ್ಸು ಪ್ರತಿಭೆ ಎರಡನ್ನೂ ಗಣನೆಗೆ ತಗೊಂದ್ರೆ ಗೆಲ್ಲೋದು ’ನಮ್ಮ’(ಎಲ್ಲರೂ ಗೆದ್ದೆತ್ತಿನ ಬಾಲ ಹಿಡಿಯೋರೇ!) ಸಲೋನಿನೇ.ಅಂತ ಅದ್ಭುತವಾದ ಪ್ರತಿಭೆ ಅವಳದ್ದು.ಆದರೆ ಕಾರ್ಯಕ್ರಮ ಕೊಟ್ಟಾದ ಮೇಲೆ ಮಾತ್ರ ಈ ಹುಡುಗಿ ಇದರ ಮುದ್ದು ಮಕ್ಕಳ ಹಾಗೆ ಮುದ್ದು ಮುದ್ದಾಗಿ ಆಡ್ತಾಳೆ.ಆದರೆ ಕಾರ್ಯಕ್ರಮ ಕೊಡುವಷ್ಟು ಹೊತ್ತು ಪಾತ್ರದೊಳಗೆ ಪರಕಾಯ ಪ್ರವೆಶ ಮಾಡಿದ ಹಾಗೆ ಅದ್ಭುತವಾಗಿ ಅಭಿನಯಿಸ್ತಾಳೆ!

ಅವಳ ಗಂಗೂಬಾಯಿ ಪಾತ್ರ ಮಾತ್ರ ಅತ್ಯಂತ ದೇಶದಾದ್ಯಂತ ಜನ ಮೆಚ್ಚುಗೆ ಗಳಿಸಿದೆ .ಗಂಗೂಬಾಯಿ ಅಂದ್ರೆ ಮುಂಬೈ ಯ ಮರಾಠಿ ಹೆಣ್ಣುಮಗಳೊಬ್ಬಳ ಪಾತ್ರ.ಆಕೆ ಬೇರೆ ಬೇರೆ ಪಾತ್ರಗಳನ್ನು ಗಂಗೂಬಾಯಿಯ ಮರಾಠಿ ಆಕ್ಸೆಂಟ್ ನಲ್ಲಿ ಅತ್ಯಂತ ಸುಂದರವಾಗಿ ನಿರ್ವಹಿಸಿದ್ದಳು.

ಗಂಗೂಬಾಯಿ ನರ್ಸ್ ಆಗಿ,ಪೋಲಿಸ್ ಕಾನ್ಸ್ಟೇಬಲ್ ಆಗಿ ,ಗಗನಸಖಿ ಆಗಿ ಹೀಗೇ ಬೇರೆ ಬೇರೆ ಪಾತ್ರದಲ್ಲಿ ತುಂಬಾನೆ ಚೆನ್ನಾಗಿ ಜನರನ್ನು ನಗಿಸಿದ್ಲು.

ಇಷ್ಟು ಚಿಕ್ಕ ಮಕ್ಕಳಲ್ಲಿ ಅದು ಹೇಗೆ ಅಷ್ಟು ಪ್ರತಿಭೆ ಅಡಗಿದೆಯೋ ದೇವರಿಗೇ ಗೊತ್ತು.ನಮ್ಮ ಕನ್ನಡದ ಕಂದಮ್ಮಗಳಾದ ಸಹನಾ ,ಮನೋಜವಂ,ಓಹಿಲೇಶ್ವರಿ,ರಕ್ಷಿತಾ ಭಾಸ್ಕರ್ ಮುಂತಾದ ಮುದ್ದು ಮಕ್ಕಳದ್ದೂ ಅದ್ಭುತ ಪ್ರತಿಭೆ.ಈ ವಯಸ್ಸಿನಲ್ಲೆ ಮಕ್ಕಳು ಈ ಪರಿ ಪ್ರತಿಭಾವಂತರಾದರೆ ದೊಡ್ಡವರಾದ ಮೇಲೆ ಹೇಗೋ?

ಆದರೆ ಇಂಥ ಮಕ್ಕಳ ಹೆತ್ತವರು ಹೆಸರು ,ಹಣ ಗಳಿಸುವ ಪ್ರಯತ್ನದಲ್ಲಿ ತಮ್ಮ ಮಕ್ಕಳ ಬಾಲ್ಯವನ್ನು ಹಾಳುಗೆಡವುತ್ತಿದ್ದಾರೆ ಅನ್ನೋ ಆರೋಪವೂ ಇದೆ.

ಈಗಿನ ಮಕ್ಕಳು ಎಷ್ಟೇ ಖುಷಿ ಕೊಟ್ಟರೂ ನನ್ನ ಆಲ್ ಟೈಮ್ ಫೇವರೇಟ್ ಮಾತ್ರ ಮಾಸ್ಟರ್ ಮಂಜುನಾಥ್ !

ನನ್ನಂಥವರಿಗೆ ಹಾಸ್ಯದ/ಸಂಗೀತದ ರಸದೌತಣ ಉಣಿಸಿದ ಮಕ್ಕಳಿಗೆ ಹಾಗೂ ಅವರನ್ನು ಸೃಷ್ಟಿಸಿದ ಅವರ ಹೆತ್ತವರಿಗೆ ನನ್ನದೊಂದು ಥ್ಯಾಂಕ್ಸ್ !

ಫೋಟೋ ಕೃಪೆ :’ಕಲರ್ಸ್ ಟಿ.ವಿ’

Tuesday, March 17, 2009

ತೂತಿರುವ ದೋಸೆಗೆ ಡಿಮಾಂಡಪ್ಪೋ ಡಿಮಾಂಡು !



ಮೊನ್ನೆ ಸಹೋದ್ಯೋಗಿಯೊಬ್ಬ (ಡೆಲ್ಲಿಯವನು) ’ಅಬೇ ತೇರೇ ಮ್ಯಾಂಗಲೋರ್ ಮೇಂ ಲಡ್ಕಿಯೋಂ ಕೋ ಮಾರ್ತೆ ಹೇಂ ನಾ ’ ಅಂತ ಕಿಚಾಯಿಸಿದ್ದ .ಅವನ ಕುತ್ತಿಗೆ ಹಿಚುಕುವಷ್ಟು ಸಿಟ್ಟು ಬಂದಿದ್ರೂ ತಡ್ಕೊಂಡು ’ನಹೀಂ ಯಾರ್ ಸಬ್ ನೇ ಜೀನ್ಸ್ ಪೆಹನಾ ಥಾ ನಾ ಇಸೀ ಲಿಯೆ ಲಡ್ಕೇ ಕೋನ್ ,ಲಡ್ಕಿಯಾಂ ಕೋನ್ ಮಾಲೂಂ ನಹಿ ಪಡಾ ಶಾಯದ್ ’ ಅಂತ ಹೇಳಿ ಹಾಗೆ ತಳ್ಳಿ ಬಿಟ್ಟಿದ್ದೆ ವಿಷಯವನ್ನು .

ಈಗ ಮತ್ತೆ ಚಾರ್ಲಿ ಚಾಪ್ಲಿನ್ ನಗಿಸುವ ಬದಲು ಅಳಿಸ್ತಾ ಇದ್ದಾನೆ !

ಕಳೆದ ವಾರಾಂತ್ಯದಲ್ಲಿ ನಾನು ಮಂಗಳೂರಲ್ಲೇ ಇದ್ದೆ .ಹಿಂದೂ ಸಮಾಜೋತ್ಸವಕ್ಕೆ ಹೋಗಿದ್ದಲ್ಲ ನನ್ನನ್ನು ನಂಬಿ ಪ್ಲೀಸ್ .ನಾನು ಹಿಂದು ಸಮಾಜೋತ್ಸವಕ್ಕೆ ಹೋಗಿಲ್ಲ ,ನನ್ನನ್ನು ಯಾರೂ ದೂರ ಮಾಡಬೇಡಿ ಪ್ಲೀಸ್ .. ಬೇಕಾದ್ರೆ ನನ್ನ ಸ್ನೇಹಿತರನ್ನೇ ಕೇಳಿ.ನಾನು ಹೋಗಿದ್ದು ಗೃಹಪ್ರವೇಶಕ್ಕೆ .ಅವನೊಬ್ಬ ಹಿಂದು ,ಆದ್ರೆ ಅವನು ಕ್ರಿಸ್ಚಿಯನ್ ಅಥವ ಮುಸ್ಲಿಂ ಆಗಿದ್ರೂ ನಾನು ಹೋಗ್ತಾ ಇದ್ದೆ ಯಾರೂ ದಯವಿಟ್ಟು ನನ್ನನ್ನು ತಪ್ಪು ತಿಳ್ಕೋಬಾರ್ದು .

ನನಗೂ ಮಂಗಳೂರು ಹೆಸರು ದಿನಾ ಪೇಪರ್ ನಲ್ಲಿ ಕಾಣೋದು ನೋಡಿ ಬೇಜಾರಾಗಿ ಬಿಟ್ಟಿತ್ತು. ಕೇರಳದ ಒಬ್ಬ ಸ್ನೇಹಿತನ ಬಳಿ ಹಾಗೆ ಹೇಳಿದೆ.ಅದಕ್ಕೆ ಆ ಮಹಾನುಭಾವ ’ಏನ್ ಹೇಳ್ತೀಯಾ ಸಂದೀಪ್ ನಮ್ಮ ಕಣ್ಣೂರಿನಲ್ಲಿ ದಿನಕ್ಕೊಂದು ಮರ್ಡರ್ ಆಗುತ್ತೆ ,ವರ್ಷದಲ್ಲಿ ೩೦೦ ದಿನ ಏನಾದ್ರೂ ಪ್ರತಿಭಟನೆ ಸ್ಟ್ರೈಕ್ ,ಇನ್ನು ನಿಮ್ಮಲ್ಲಿ ಆದ ಪಬ್ ದಾಳಿ ಏನೂ ಅಲ್ಲ ಅದಕ್ಕಿಂತ ಕೆಟ್ಟ ಸಂಗತಿಗಳ ಅಲ್ಲಿ ಆಗುತ್ತೆ' ಅಂದ.

ಪಕ್ಕದಲ್ಲೇ ಕೂತಿದ್ರೂ ತಮಿಳುನಾಡಿನವನ ಬಳಿ ನನ್ನ ದುಃಖ ಹೇಳಿಕೊಳ್ಳುವ ಅಗತ್ಯ ನನಗೆ ಕಾಣಿಸಲೇ ಇಲ್ಲ!

ಸ್ವಲ್ಪ ದಿನದ ಹಿಂದೆ ತಮಿಳುನಾಡಿನ ಒಂದು ಕಾಲೇಜಿನಲ್ಲಾದ ಗಲಬೆಯ ವೀಡಿಯೋ ನೋಡಿದ್ದೆ.ಅದರಲ್ಲಿ ಪೋಲಿಸರ ಮುಂದೆಯೇ ಒಬ್ಬ ಹುಡುಗನನ್ನು ಸಾಯುವ ಹಾಗೆ ಹೊಡೆದದ್ದು ನೋಡಿ ’ನಮ್ಮ ಕುಡ್ಲ’ ಎಷ್ಟೋ ವಾಸಿ ಅನ್ನಿಸಿತು.

ಪಕ್ಕದಲ್ಲೇ ಬಿಹಾರದವನೊಬ್ಬ ದೀಪಿಕಾ ಪಡುಕೋಣೆಯ ವಾಲ್ ಪೇಪರ್ ನೋಡಿ ಜೊಲ್ಲು ಸುರಿಸ್ತಾ ಇದ್ದ (ಸಂದೀಪಿಕಾಳ ಮೇಲೆ ಮಾತ್ರ ಬೇರೆಯವರು ಕಣ್ಣು ಹಾಕಿದ್ರೆ ಕೆಟ್ಟ ಸಿಟ್ಟು ಬರುತ್ತೆ ನನಗೆ).

ಅವನ ಬಳಿ ನನ್ನ ಗೋಳು ತೋಡಿಕೊಂಡೆ.

"ನೋಡಪ್ಪಾ ಗುರುವೆ ನನ್ನೂರು ’ತಲ್ಲಣ’ಗೊಂಡಿದೆ ,ಏನಾದ್ರೂ ಪರಿಹಾರ ಹೇಳು " ಅಂತ.

"ಅಬೇ ಸಾಲೆ ಹಮಾರ್ ಬಿಹಾರ್ ಮೆ ಪಚಾಸ್ ರುಪಯೇ ಮೇ ತೋ ಮರ್ಡರ್ ವಾ ಕರ್ತೇ ಹೇಂ .ತುಮ್ಹಾರ್ ಗಾಂವ್ ತೋ ಬಹುತ್ ಬಡಿಯಾ ಹೇ ರೇ .ಲಡ್ಕಿಯಾಂ ಬಿ ಮಸ್ತ್ ಹೇ ’( "ನನ್ನ ಬಿಹಾರದಲ್ಲಿ ಐವತ್ತು ರೂಪಾಯಿಗೆ ಸುಪಾರಿ ತಗೊಂಡು ಕೊಲೆ ಮಾಡ್ತಾರೆ ,ನಿನ್ನೂರೇ ಪರ್ವಾಗಿಲ್ಲ .ಅದೂ ಅಲ್ಲದೆ ನಿಮ್ಮೂರ ಹುಡ್ಗೀರು ಮಾತ್ರ ಸೂಪರ್ ! " ಅಂದ !

ಆಂದ್ರದ ರೆಡ್ಡಿ ಆಂದ್ರ ಮೆಸ್ ನಲ್ಲಿ ಭರ್ಜರಿ ಭೋಜನಂ ಮುಗಿಸಿ ನಿದ್ದೆ ಮಾಡಲು ತಯಾರಿ ನಡೆಸ್ತಾ ಇದ್ದ.ಅವನ ಬಳಿಯೂ ಕೇಳಿ ನೋಡೋಣ ಪರಿಹಾರ ಸಿಕ್ಕರೂ ಸಿಗಬಹುದು ಅಂದು ಕೊಂಡು ಕೇಳಿದೆ.

"ರೆಡ್ಡಿಗಾರು ನಮ್ಮ ಮಂಗಳೂರು ಹೀಗೆ ಬೇಡದ ಕಾರಣಗಳಿಗಾಗಿ ಪ್ರಖ್ಯಾತಿ ಹೊಂದುತ್ತಾ ಇದೆ ,ಏನಾದ್ರೂ ಸಜೆಶನ್ ಸಿಗಬಹುದಾ ?"

" ಮಂಗಳೂರಾ ಅದಿ ಎಕ್ಕಡ ಉನ್ನಾವು ? " ಅಂದ ಭೂಪ . " ನಿನ್ನಜ್ಜಿ ನ್ಯೂಸ್ ನೋಡಲ್ವಾ ಆ ಪರಿ ಬರುತ್ತೆ ದಿನಾಲೂ " ಅಂದೆ ಸಿಟ್ಟಿನಿಂದ.

’ಓಹ್ ಅದಾ ಅದೆಲ್ಲಾ ನಮಗೆ ಮಾಮೂಲಿ ಮಾರಾಯ .ನಮ್ಮೂರಲ್ಲಿ ಅದಕ್ಕಿಂತ ಭಯಂಕರ ಘಟನೆಗಳು ಆಗ್ತಾ ಇರ್ತಾವೆ .ಈ ಬಡ್ಡಿಮಕ್ಕಳು ನಮ್ಮೂರಿನ ಬಗ್ಗೆ ನ್ಯೂಸ್ ನಲ್ಲಿ ತೋರಿಸೋದೆ ಇಲ್ಲ .ಅದೇನ್ ಮೀಡಿಯಾ ನೋ ’ ಅಂತ ಮೀಡಿಯಾಗೆ ಬಯ್ಯೋದಕ್ಕೆ ಶುರು ಹಚ್ಚಿಕೊಂಡ.

ಎಲ್ಲರ ಮನೆ ದೋಸೆ ತೂತೆ ಆದ್ರೆ ನಮ್ಮ ’ತೂತಿರುವ ದೋಸೆ’ಗೆ ಈಗ ಎಲ್ಲೆಡೆ ಸಿಕ್ಕಾಪಟ್ಟೆ ಬೇಡಿಕೆ ಬಂದಿರಬೇಕು ಅಂತ ನನಗೆ ನಾನೇ ಸಮಾಧಾನ ಮಾಡಿಕೊಂಡು ಗೆಳೆಯ ರಮೇಶನ ಜೊತೆ ಊಟಕ್ಕೆ ಹೋದೆ.

ನೋಡಿ ರಮೇಶ ಹಿಂದೂ ಅನ್ನೋ ಕಾರಣಕ್ಕೆ ಅವನ ಜೊತೆ ಊಟಕ್ಕೆ ಹೋದದ್ದಲ್ಲ .ಪ್ಲೀಸ್ ನೀವೆಲ್ಲಾ ತಪ್ಪು ತಿಳ್ಕೋಬಾರ್ದು.ನಾನೊಬ್ಬ ಜಾತ್ಯಾತೀತ ವ್ಯಕ್ತಿ . ನನಗೆ ಮರಿಯಾ ಜೊತೆ ಊಟಕ್ಕೆ ಕೂರ್ಬೇಕು ಅಂತ ಭಾರಿ ಆಸೆ ಆದ್ರೆ ಏನ್ ಮಾಡೋದು ಅವಳು ಒಪ್ಪಲ್ಲ!


ಏನ್ ಮಾಡೋದು ಸಾರ್ ! ಈಗ ಏನೆ ಮಾಡಿದ್ರೂ ಅದಕ್ಕೆ ಹಿಂದುತ್ವದ ಟಚ್ ಕೊಡ್ತಾರೆ ಜನ .ಅದಕ್ಕೆ ಪದೇ ಪದೆ ಸ್ಪಷ್ಟೀಕರಣ ನೀಡ್ತಾ ಇದ್ದೀನಿ ತಾವ್ಯಾರೂ ಬೇಜಾರು ಮಾಡ್ಕೋಬಾರ್ದು .

ಯಾರೋ ಚಾರ್ಲಿ ಚಾಪ್ಲಿನ್ ಮೂರ್ತಿ ಮಾಡೋಕೆ ಮಂಗಳೂರಿಗೆ ಹೋಗಿದ್ನಂತೆ.ಅಲ್ಲಿನ ಜನ ಬಿಟ್ಟಿಲ್ಲ ಅಂತೆ .ಅದಕ್ಕೂ ಹಿಂದುತ್ವದ ಟಚ್ ಕೊಡಬಹುದು ಅಂತ ನನಗೆ ಈಗ್ಲೇ ಗೊತ್ತಾಗಿದ್ದು !

ಪಡುಬಿದ್ರಿಯಲ್ಲಿ ಸುಝ್ಲಾನ್ ,ನಾಗಾರ್ಜುನ ಆಗಬಾರದು ಅಂತ ಪಾಪ ರೈತರು ಯಾವತ್ತಿನಿಂದಲೋ ಪ್ರತಿಭಟನೆ ನಡೆಸ್ತಾ ಇದ್ದಾರೆ.ಸುಝ್ಲಾನ್ ಕಂಪನಿ ತಗೊಂಡ ಜಾಗದಲ್ಲಿ ಬಬ್ಬರ್ಯ ದೈವದ ವಾಸ್ತವ್ಯವಿದ್ದು ,’ಇದು ನನ್ನ ಜಾಗ ನನ್ನನ್ನು ಯಾರು ಇಲ್ಲಿಂದ ಓಡಿಸ್ತಾರೋ ನೋಡೋಣ ’ ಅಂತ ಮೊನ್ನೆ ನಡೆದ ಭೂತದ ಕೋಲ ದಲ್ಲಿ ದೈವನುಡಿಯಾಗಿದೆಯಂತೆ .

ಇಲ್ಲೂ ಹಿಂದುತ್ವದ ಟಚ್ ಮಾರಾಯ್ರೇ !

ಹೋಗಿ ಹೋಗಿ ಆ ಹೇಮಂತ್ ಹೆಗಡೆಗೆ ಬೇರೆ ಜಾಗವೇ ಸಿಗಲಿಲ್ಲವೇನೋ ? ಹಂಪನಕಟ್ಟೆ ಸರ್ಕಲ್ ನಲ್ಲೇ ನಿಲ್ಲಿಸಿದ್ರೆ ಆಗ್ತಿತ್ತಪ್ಪ .ಹೋಗಿ ಹೋಗಿ ಕಡಲತೀರವೇ ಬೇಕಿತ್ತಾ?

ಹಿಂದೆ ಮನಸ್ಸಿಗೆ ಬೇಜಾರಾದಗ ಕಡಲ ತೀರಕ್ಕೇ ಹೋಗ್ತಾ ಇದ್ದಿದ್ದು ನಾನು .ಆ ತೆರೆಗಗಳು ಅಪ್ಪಳಿಸುವಾಗ ಮಾಡುವ ಸದ್ದೇ ಒಂದು ಥರಾ ಸಾಂತ್ವಾನ ನೀಡುತ್ತೆ.ಕಡಲು ಆ ಪರಿ ಭೋರ್ಗರೆದರೂ ನೆಮ್ಮದಿ ಇರುತ್ತೆ .ನಮ್ಮ ಪಾಡಿಗೆ ನಾವು ನಮ್ಮದೇ ಲೋಕದಲ್ಲಿ ಕಳೆದು ಹೋಗಬಹುದು.

ಅಂಥ ಕಡಲತೀರದಲ್ಲಿ ಚಾರ್ಲಿ ಚಾಪ್ಲಿನ್ ಮೂರ್ತಿ ಹಾಕಿದ್ರೆ ಜನರಿಗೆ ಚಾರ್ಲಿ ಚಾಪ್ಲಿನ್ ಸಿನೆಮಾ ನೋಡಿದಷ್ಟೇ ಖುಷಿ ಸಿಗುತ್ತಾ ? ಗೊತ್ತಿಲ್ಲ !

ಆದ್ರೆ ಅದನ್ನು ನೋಡೋದಿಕ್ಕೆ ದಿನಾಲೂ ಡಜನ್ ಗಟ್ಟಲೆ ಹುಡುಗ-ಹುಡುಗಿಯರು ಬರೋದಂತೂ ನಿಜ.ಪ್ರಶಾಂತವಾದ ಕಡಲತೀರದಲ್ಲಿ ನೂರಾರು ಜನ ಗಿಜಿಗುಡುತ್ತಾರೆ.ಪಾಪ್ ಕಾರ್ನ್,ಐಸ್ ಕ್ರೀಮ್ ಮಾರೋರಿಗಂತೂ ಸುಗ್ಗಿ.ಅಲ್ಲೇ ಒಬ್ಬ ಬೋಟಿಂಗ್ ಅಂತ ಒಂದು ಅಂಗಡಿ ಓಪನ್ ಮಾಡ್ತಾನೆ.ಅದಕ್ಕೆ ನೂರು ರುಪಾಯಿ ಚಾರ್ಜ್ ಮಾಡ್ತಾನೆ .ಪ್ರಶಾಂತವಾದ ಕಡಲತೀರದಲ್ಲಿ ಕುಳಿತು ಖುಷಿ ಪಡ್ತಾ ಇದ್ದ ’ನನ್ನಂತವನು’ ಸಮುದ್ರ ತೀರಕ್ಕೆ ಬಂದವರಲ್ಲಿ ಯಾವ ಹುಡುಗಿ ನೀರಿಗೆ ಇಳೀತಾಳೋ ,ಯಾವಾಗ (~~~ಸೆನ್ಸಾರ್~~~ ) ಅಂತ ಕಾಯೋದಕ್ಕೆ ಶುರು ಮಾಡ್ತಾನೆ.’ಛೇ ನನಗೂ ಈ ರೀತಿ ಒಂದು ಗರ್ಲ್ ಫ್ರೆಂಡ್ ಇದ್ರೆ ಚೆನ್ನಾಗಿರ್ತಾ ಇತ್ತು ’ ಅಂತ ಕರುಬೋದಕ್ಕೆ ಶುರು ಮಾಡ್ತಾನೆ.ಜನಜಂಗುಳಿಯಲ್ಲಿ ಮಗು ನೀರಿಗೆ ಇಳಿದದ್ದು ತಾಯಿಗೆ ಗೊತ್ತೇ ಆಗಲ್ಲ ! ತಂದೆಗಾದ್ರೂ ಗೊತ್ತಾಗಲ್ವ ಅಂತ ಕೇಳ್ಬೇಡಿ .ತಂದೆಗೆ ನೋಡೋದಕ್ಕೆ ಬಹಳಷ್ಟು ವಿಷಯಗಳಿವೆ .

ಉದಾ: ಹುಡುಗಿಯರಲ್ಲ ಕಣ್ರಿ .........ಚಾರ್ಲಿ ಚಾಪ್ಲಿನ್ ನ ಬೃಹತ್ ಮೂರ್ತಿ !

ಆಟೋದವರಿಗಂತೂ ಹಬ್ಬ .ಕಡಲ ತೀರಕ್ಕಾ ? ಅಂತ ಯಾರೂ ಕೇಳಲ್ಲ ! ’ಓಹ್ ಚಾರ್ಲಿ ಚಾಪ್ಲಿನ್ ಗಾ ಐವತ್ತು ರುಪಾಯಿ ಆಗುತ್ತೆ ’ ! ’ಬರ್ಬೇಕಾದ್ರೆ ಬಾಡಿಗೆ ಸಿಗಲ್ಲ ನೋಡಿ ಅದಕ್ಕೆ ’ ಅಂತಾನೆ . ಮೂರ್ತಿ ನೋಡೊದಕ್ಕೆ ಹೋದವರು ಅಲ್ಲೇ ನೀರಿಗೆ ಬಿದ್ದು ಸಾಯ್ತಾರೆ ಅನ್ನೋ ಅಭಿಪ್ರಾಯವಿರಬಹುದೇ ಆಟೋದವನದ್ದು ? ಅದೂ ಗೊತ್ತಿಲ್ಲ !

ಕಾಲ ಕಳೆದಂತೆ ’ಕಡಲತೀರ’ ಚಾರ್ಲಿ ಚಾಪ್ಲಿನ್ ಆಗಿ ಬಿಡುತ್ತೆ !

’ನನ್ನ ಕಡಲತೀರ’ ಚಾರ್ಲಿ ಚಾಪ್ಲಿನ್ ಅಗೋದು ನನಗ್ಯಾಕೋ ಇಷ್ಟ ಆಗ್ತಾ ಇಲ್ಲ - Sorry !

Monday, March 9, 2009

ವಿಜಯ್ ಮಲ್ಯ -ಜೈ ಹೋ .....



ಪರ್ವಾಗಿಲ್ಲ ಕಣ್ರಿ ! ಇಷ್ಟು ವರ್ಷ ಮಲ್ಯರ ಜೋಬು ತುಂಬಿಸಿದ್ದಕ್ಕೂ ಸಾರ್ಥಕ ಆಯ್ತು .ಹಿಂದೆ ಟಿಪ್ಪು ಸುಲ್ತಾನನ ಖಡ್ಗ ತಂದಿದ್ರು .ಈಗ ಗಾಂಧೀಜಿಯ ಕನ್ನಡಕ ಮುಂತಾದ ವಸ್ತುಗಳನ್ನು ಹರಾಜಿನಲ್ಲಿ ಖರೀದಿಸಿ ಭಾರತಕ್ಕೆ ತರ್ತಾ ಇದ್ದಾರಂತೆ ವಿಜಯ್ ಮಲ್ಯ.

ಒಂದೇ ಬೇಜಾರಿನ ಸಂಗತಿ ಅಂದ್ರೆ ಮತ್ತೆ ಬಿಯರ್ ಬೆಲೆ ಏರಿಸಿದ್ರು ನೆನ್ನೆಯಿಂದ .ಥೂ ಈ ಐಟಿ ಮಂದಿಯಿಂದ ಎಲ್ಲದರ ಬೆಲೆ ಏರಿತು !

ಇರ್ಲಿ ಬಿಡಿ ಕೆರೆಯ ನೀರನು ಕೆರೆಗೆ ಚೆಲ್ಲಿ ಅಂದ ಹಾಗೆ ನಾವು ಮಲ್ಯರ ಜೇಬು ತುಂಬಿಸಿದ್ರೂ ಮೋಸ ಇಲ್ಲ. ಅವರ ಶೋಕಿ ಜೊತೆ ಜೊತೆಗೆ ಇಂಥ ಮೆಚ್ಚುವಂಥ ಕೆಲಸಾನೂ ಮಾಡ್ತಾರೆ ನಮ್ಮ ಬಂಟ್ವಾಳ ವಿಜಯ ಮಲ್ಯ .

ಮದ್ಯವಿರೋಧಿ ಗಾಂಧೀಜಿಯ ವಸ್ತುಗಳನ್ನು ತರಲು ಮದ್ಯದ ದೊರೆ ಬೇಕಾಗಿದ್ದು ವಿಪರ್ಯಾಸ ಅಂತೆಲ್ಲ ಕೆಲವರು ಬೇಜಾರು ಮಾಡ್ಕೋತಾ ಇದ್ದಾರೆ.

ಏನು ಮಾಡೋದು ಬದುಕಿನಲ್ಲಿ ಎಲ್ಲ ನಮಗೆ ಬೇಕಾಗಿರೋ ಹಾಗೆ ಆಗಲ್ವಲ್ಲ ! (ಛೇ ಬಿಯರ್ ಗೆ ತೀರಾ ಇಷ್ಟು ಏರಿಸ್ಬಾರ್ದಿತ್ತು:( )

ವಿಜಯ್ ಮಲ್ಯರಿಗೆ ಜೈ ಹೋ........

ವಿಶೇಷ ಸೂಚನೆ : ಮದ್ಯಪಾನ ಆರೋಗ್ಯಕ್ಕೆ ಹಾನಿಕರ.ಹಾಗೆಯೇ ಬಿಯರ್ ವಿಸ್ಕಿಗಿಂತ ಕಮ್ಮಿ ಹಾನಿಕರ .

Photo Courtesy :http://www.singaporegp.org

Wednesday, March 4, 2009

ಪ್ರೀತಿಯಿಂದ ರವಿ ಬೆಳಗೆರೆಗೆ......



ಸುಮಾರು ಒಂದು ವರ್ಷ ಹಿಂದಿನ ಮಾತು.ಆಗಿನ್ನೂ ನಾನು ಬ್ಲಾಗ್ ಲೋಕದಲ್ಲಿ ಕಾಲಿಟ್ಟಿರಲಿಲ್ಲ.ನನ್ನ ಕಾಗೆ ಕಾಲಿನಂಥ ಅಕ್ಷರದಲ್ಲಿ ಒಂದು ದೊಡ್ಡ ಲೇಖನ ಬರೆದಿದ್ದೆ ! ಸ್ಟೀಫನ್ ಹಾಕಿಂಗ್ ಬಗ್ಗೆ.ಅದನ್ನು ಬರೆದಿದ್ದು ’ಓ ಮನಸೇ’ ಅನ್ನೋ ಪತ್ರಿಕೆಗಾಗಿ.ಬರೆಯುವ ಮುನ್ನವೇ ರವಿ ಅಜ್ಜಿಪುರ ರ ಬಳಿ ’ಹೀಗೆ ಬರೀತಾ ಇದ್ದೀನಿ ಕಳಿಸ್ಲಾ ?’ ಅಂತ ಹೇಳಿ ,ಇಂಟರ್ನೆಟ್ ನಲ್ಲಿ ಸಾಮಗ್ರಿಗಳನ್ನೆಲ್ಲ ಹೊಂದಿಸಿ A4 sizeನ ಪೇಪರ್ ನ ಒಂದೇ ಮಗ್ಗುಲಲ್ಲಿ ಬರೆದು ಅದಕ್ಕೆ ೨೦ ರೂ ಕೊರಿಯರ್ ಚಾರ್ಜ್ ತೆತ್ತು ಪೋಸ್ಟ್ ಮಾಡಿದ್ದೂ ಆಯ್ತು.

ಹೀಗೆ ಪೋಸ್ಟ್ ಮಾಡಿದ್ದೀನಿ ಬಂದಿರುತ್ತೆ ನೋಡಿ ಅಂತ ರವಿ ಅಜ್ಜಿಪುರರಿಗೆ ಯಾಹೂನಿಂದ ಮೇಲ್ ಕೂಡಾ ಮಾಡಿದ್ದೆ!

ಮುಂದಿನ ಸಂಚಿಕೆಯಲ್ಲಿ ನನ್ನ ಲೇಖನ ಬಂದೇ ಬರುತ್ತೆ ಅನ್ನೋ ಅಪಾರವಾದ ವಿಶ್ವಾಸ ನನಗಿತ್ತು .ಆದರೆ ಮುಂದಿನ ಸಂಚಿಕೆಯಲ್ಲಿ ಅದು ಬರಲೇ ಇಲ್ಲ !ನನ್ನ ಲೇಖನ ಬರಲಿಲ್ಲ ಅನ್ನೋ ಬೇಸರಕ್ಕಿಂತ ಆ ಪತ್ರಿಕೆಯೇ ಬರಲಿಲ್ಲ ನಾನು ಲೇಖನ ಕಳಿಸಿದ ಮೇಲೆ .ಬಹುಷ ನನ್ನ ಲೇಖನ ಓದಿದ ಮೇಲೆ ಪತ್ರಿಕೆ ಪ್ರಕಟಿಸೋದೆ ಬೇಜಾರಾಗಿರ್ಬೇಕು ಬೆಳಗೆರೆಗೆ.

ಹಾಗೇ ಒಂದು ಸಲ ’ಕೆಂಡಸಂಪಿಗೆ’ಗೂ ಒಂದು ಲೇಖನ ಬರೆದಿದ್ದೆ .ಆದ್ರೆ ಈಗ ಹೈಟೆಕ್ ಸ್ಟೈಲ್ ನಲ್ಲಿ ಯೂನಿಕೋಡ್ ಬಳಸಿ ! ಅದೂ ಪ್ರಕಟ ಆಗ್ಲಿಲ್ಲ .ಕಡೇ ಪಕ್ಷ ನಿಮ್ಮ ಲೇಖನ ಪ್ರಕಟಿಸಲು ಯೋಗ್ಯ ಅಲ್ಲ ಅನ್ನೋ ಉತ್ತರವಾದ್ರೂ ಬರುತ್ತೆ ಅನ್ನೋ ಆಸೆ ನನ್ನದಾಗಿತ್ತು .ಯಾಕಂದ್ರೆ ಮೇಲ್ ಮಾಡಲು ಐದು ರೂಪಾಯಿ ಸ್ಟ್ಯಾಂಪ್ ಹಾಕೋ ಅಗತ್ಯವಿಲ್ಲವಾದ್ದರಿಂದ ಮೇಲ್ ಆದ್ರೂ ಮಾಡ್ತಾರೆ ಅನ್ನೋ ಜೊಳ್ಳು ವಾದ ನನ್ನದು.

ಆ ನಿರಾಸೆಯೇ ನನ್ನ ಬ್ಲಾಗ್ ಶುರು ಮಾಡಲು ನನ್ನನ್ನು ಪ್ರೇರೇಪಿಸಿತು.

ಆದರೆ ಈ ಬ್ಲಾಗ್ ಶುರು ಮಾಡಿದ ಮೇಲೆ ಜನರ ಪ್ರೀತಿ ಕಾಳಜಿ ನೋಡಿ ಅಮೇಲೆ ಪೇಪರ್ ಗಳಿಗೆ ಬರೆಯುವ ಅಗತ್ಯವೇ ನನಗೆ ಅನಿಸಿಲ್ಲ.ಹಾಗಾಗಿ ನಾನು ಪೇಪರ್ಗಳಿಗೆ ಬರೆಯುವ ಸಾಹಸವನ್ನೇ ಮಾಡಲು ಮುಂದಾಗಲಿಲ್ಲ!

ಆದರೂ ಕಳೆದ ವಾರ ನನ್ನದೊಂದು ಲೇಖನ ಪತ್ರಿಕೆಯಲ್ಲಿ ಬಂತು. ’ಹಾಯ್ ಬೆಂಗಳೂರು’ ಪತ್ರಿಕೆಯಲ್ಲಿ ನನ್ನ ’ಪ್ರೀತಿಯಿಂದ ಪ್ರತಾಪ್ ಗೆ’ ಲೇಖನವನ್ನು ಪ್ರಕಟಿಸಿದ್ರು .
ಆದ್ರೆ ನನಗೆ ಖಂಡಿತ ಖುಷಿ ಆಗಿಲ್ಲ .ಕಾರಣ ನನ್ನ ಅನುಮತಿಯನ್ನೇ ಪಡೆದಿರಲಿಲ್ಲ ಪ್ರಕಟಿಸೋದಕ್ಕೆ ! ನಾನು ಯಾವತ್ತೂ ಕಾಪಿ ರೈಟ್ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಂಡಿಲ್ಲ.ಆದ್ರೆ ನಾನು ತಲೆ ಕೆಡಿಸಿಕೊಂಡಿದ್ದು ಯಾಕಂದ್ರೆ ನನ್ನ ಬರಹದ ಆಶಯ ಬೇರೇನೆ ಆಗಿತ್ತು , ಆದ್ರೆ ಅದು ಪ್ರಕಟವಾಗಿರೋ ಉದ್ದೇಶವೇ ಬೇರೆ ಆಗಿತ್ತು !

ನನ್ನ ಬರಹದ ತಲೆ ಬರಹವೇ ’ಪ್ರೀತಿಯಿಂದ ಪ್ರತಾಪ್ ಗೆ ’ .ನಾನು ಅದನ್ನು ಬರೆದಿದ್ದೂ ಪ್ರೀತಿಯಿಂದಲೇ ,ಆದರೆ ಅದರ ಶೀರ್ಷಿಕೆಯನ್ನು ’ಮತ್ತೆ ಕೆಡವಿ ದರೋ ’ ಅಂತೆಲ್ಲ ಬದಲಾಯಿಸಿ ಪ್ರಕಟಿಸಿದ್ರು .

’ಹಾಯ್’ ನಂಥ ಪ್ರಖ್ಯಾತ ಪೇಪರ್ ನಲ್ಲಿ ಪ್ರಕಟವಾಗಿದ್ದಕ್ಕೆ ನಾನು ಖುಷಿ ಆಗ್ತೀನಿ ಅನ್ನೋ ಅನಿಸಿಕೆ ಇದ್ದಿರಬಹುದು ಬೆಳಗೆರಯವರದ್ದು .

ಆದ್ರೆ ನನಗೆ ಖುಷಿ ಆಗಿಲ್ಲ .ಯಾಕಂದ್ರೆ ಅದನ್ನು ಸ್ವಥ ನನ್ನ ರೂಂ ಮೇಟ್ ಗಳೇ ಓದಿಲ್ಲ/ಓದಲ್ಲ .ಯಾರಾದ್ರೂ ಪ್ರತಾಪ್ ಗೆ ಬಯ್ದು ಬರೆದ್ರೆ ಅವರು ಅದನ್ನು ಓದೋದಕ್ಕೇ ಹೋಗಲ್ಲ.ಪ್ರತಾಪ್ ಪಕ್ಕಾ ಅಭಿಮಾನಿಗಳು ಅವರು !

ಅದೂ ಅಲ್ಲದೆ ’ನನ್ನ ಲೇಖನ ಪ್ರಕಟ ಆಗಿದೆ ಅದನ್ನು ಓದಿ’ ಅಂತ ಹೇಳೋದಿಕ್ಕೆ ಆ ಪರಿ ಸ್ನೇಹಿತರೂ ನನಗಿಲ್ಲ,ನನ್ನ ಯಾವ ಸ್ನೇಹಿತರಿಗೂ ನನ್ನದೊಂದು ಬ್ಲಾಗ್ ಇದೆ ಅನ್ನೋದೂ ಗೊತ್ತಿಲ್ಲ .ಅಂಥ ಪ್ರಚಾರವೂ ನನಗೆ ಬೇಕಿಲ್ಲ.

ನನ್ನ ಬಹುತೇಕ ಕಮೆಂಟ್ ಗಳಲ್ಲಿ ರವಿ ಹಾಗೊ ನಾಗತಿಹಳ್ಳಿಯವರು ಸಾಫ್ಟ್ವೇರ್ ಬಗ್ಗೆ ಮಾಡಿದ ಕಮೆಂಟ್ ಗಳ ಬಗ್ಗೇನೂ ಬರೆದಿದ್ದೆ .ಆದ್ರೆ ಅದನ್ನು ಅವರು ಓದೇ ಇಲ್ಲ.

ಬಹುಷ ಪ್ರತಾಪ್ ಸಿಂಹರನ್ನು ವಿರೋಧಿಸಿ ಬರೆದ್ರೆ ಅದನ್ನು ಇಂಟರ್ನೆಟ್ ನಲ್ಲಿ ಹುಡುಕುವ ಸಾಫ್ಟ್ವೇರ್ ಅವರಿಗೆ ಸಿಕ್ಕಿರಬೇಕು !

ರವಿ ಬೆಳಗೆರೆಯವರೇ ಹಾಗೂ ಪ್ರತಾಪ್ ಸಿಂಹರವರೇ ನಿಮ್ಮಿಬ್ಬರನ್ನೂ ಸಮನಾಗಿ ಪ್ರೀತಿಸುವ ನನ್ನಂಥ ಓದುಗರು ಸಾವಿರಾರು ಜನ ಇದ್ದಾರೆ.ಆದ್ದರಿಂದ ಇಂಥ ದ್ವೇಷಪೂರಿತ ಬರಹಗಳಿಗೆ ಆಸ್ಪದ ಕೊಡಬೇಡಿ ಪ್ಲೀಸ್ .......

ನನ್ನ ಬರಹ ಯಾವುದೇ ವ್ಯಕ್ತಿ ಅಥವ ಪತ್ರಿಕೆಯನ್ನು ಕುರಿತು ಅಲ್ಲ .ನನ್ನ ನೆಚ್ಚಿನ ಪತ್ರಿಕೆಯ ಪತ್ರಕರ್ತರು ತಪ್ಪು ಬರೆದಾಗ ಅದನ್ನು ಅವರ ಗಮನಕ್ಕೆ ತರುವ ಉದ್ದೇಶವಷ್ಟೆ ನನ್ನದಾಗಿತ್ತು.ಹಾಗಾಗಿ ಈ ಸ್ಪಷ್ಟೀಕರಣ ಅಗತ್ಯವೆಂದು ನನಗೆ ಅನ್ನಿಸಿತು .