Saturday, May 12, 2012

ಉದರನಿಮಿತ್ತಂ...



ಅದೊಂದು ಪುಟ್ಟ ಊರು. ಊರಂದ ಮೇಲೆ ಅಲ್ಲಿ ಸಲೂನು, ಹಾಲಿನ ಅಂಗಡಿ, ಜಿನಸಿ ಅಂಗಡಿ, ಹೋಟಲ್ ಇತ್ಯಾದಿ ಇದ್ದೇ ಇರುತ್ತೆ ಅಲ್ವ. ಈ ಊರಲ್ಲೂ ಪುಟ್ಟ ಹೋಟಲ್ ಒಂದಿತ್ತು. ಬಹುಷಃ ಉಡುಪಿಯ ಯಾವುದೊ ಹಳ್ಳಿಯಿಂದ ಬಂದು ಈ ಊರಲ್ಲಿ ಹೋಟಲ್ ಮಾಡಿದ್ರು ಅನ್ಸುತ್ತೆ.

ಬೆಳಿಗ್ಗೆ ಬೆಳಿಗ್ಗೆ ಬಿಸಿ ಬಿಸಿ ಇಡ್ಲಿ, ವಡಾ, ನೀರ್ ದೋಸೆ, ಮಸಾಲೆ ದೋಸೆ ಎಲ್ಲವೂ ಸಿಗುತ್ತಿತ್ತು. ಹಾಗಾಗಿ ವ್ಯಾಪಾರವೂ ಚೆನ್ನಾಗೇ ಇತ್ತು.

ಆಲ್ ಇಸ್ ವೆಲ್!

ಅದ್ಯಾವುದೋ ನಡು ರಾತ್ರಿ ಪಕ್ಕದ ಕೇರಳದಿಂದ ಮಲಯಾಳಿಯೊಬ್ಬ ಆ ಊರಿಗೆ ಕಾಲಿಟ್ಟ. ಅವನದೂ ಹೊಟ್ಟೆ ಪಾಡು ನಡೆಯಬೇಕಲ್ಲ ಅವನಿಗೆ ಗೊತ್ತಿದ್ದಿದ್ದೇ ಹೋಟಲ್ ಬಿಸಿನೆಸ್. ಸಹಜವಾಗೇ ಅವನು ಆ ಊರಲ್ಲಿ ಹೋಟಲ್ ಶುರು ಮಾಡಿದ. ಅವನು ಬೆಳಿಗ್ಗೆ ಬಿಸಿ ಬಿಸಿ ಪುಟ್ಟು, ಆಪಂ ಇತ್ಯಾದಿ ಮಲಯಾಳಿ ತಿನಿಸುಗಳನ್ನು ಮಾಡತೊಡಗಿದ. ಕೆಲವು ವಾರಗಳು ವ್ಯಾಪಾರವೇ ಇರಲಿಲ್ಲ. ಎಲ್ಲರೂ ಉಡುಪಿ ಹೋಟಲ್ ಗೆ ಹೋಗುತ್ತಿದ್ದರಿಂದ ಇವನ ಹೋಟಲ್ ಗೆ ಯಾರೂ ಬರುತ್ತಿರಲಿಲ್ಲ. ಅದೂ ಅಲ್ಲದೇ ಮಲಯಾಳಿ ತಿನಿಸು ಬೇರೆ. ಹೇಗಿರುತ್ತೆ ಅನ್ನೋ ಕಲ್ಪನೆ ಕೂಡಾ ಅಲ್ಲಿನ ಜನರಿಗಿರಲಿಲ್ಲ! ಅದ್ಯಾವುದೋ ಘಳಿಗೆಯಲ್ಲಿ ಊರಿನ ಒಬ್ಬ, ಆ ಮಲಯಾಳಿ ಹೋಟಲ್ ಗೆ ಹೋಗಿ ತಿಂಡಿ ತಿಂದ. ತಿಂದವನಿಗೆ ಬಹಳ ಇಷ್ಟವಾಗಿ ಊರಿನ ಜನರಿಗೆಲ್ಲ ತಿಳಿಸಿದ. ಊರವರೆಲ್ಲಾ ಮಲಯಾಳಿ ಹೋಟಲ್ ಗೂ ಹೋಗತೊಡಗಿದರು.

ಉಡುಪಿ ಹೋಟಲ್ ನವನು ಕಂಗಾಲಾದ.ಚೆನ್ನಾಗೇ ನಡೆಯುತ್ತಿದ್ದ ಬದುಕಿನಲ್ಲಿ ಅಚಾಕ್ ಆಗಿ ತಿರುವೊಂದು ಬಂದಿತ್ತು.

ಕಂಗಾಲಾದವನೇ ಬೇರೆ ಬೇರೆ ಸಂಘ ಸಂಸ್ಥೆಗಳ ಮೊರೆ ಹೊಕ್ಕ. ನಮ್ಮದು ಮಲಯಾಳಿ ಸಂಸ್ಕೃತಿ ಅಲ್ಲ. ಪುಟ್ಟು ನಮಗೆ ಆಗಿ ಬರಲ್ಲ. ನಮ್ಮದೇನಿದ್ದರೂ ಇಡ್ಲಿ ವಡಾ ಸಂಸ್ಕೃತಿ. ಅದೂ ಅಲ್ಲದೆ ನನ್ನದು ಸೀಮಿತ ಮಾರುಕಟ್ಟೆ. ದಯವಿಟ್ಟು ಆ ಮಲಯಾಳಿ ಹೋಟಲ್ ನವನನ್ನು ಇಲ್ಲಿಂದ ಒದ್ದೋಡಿಸಿ ಅಂತ ಎಲ್ಲರಲ್ಲೂ ಮನವಿ ಮಾಡಿದ.

ಅವನ ಮನವಿಗೆ ಸ್ಪಂದಿಸಿದ ಸಂಘ ಸಂಸ್ಥೆಯವರು ಆ ಮಲಯಾಳಿಗೆ ನೋಟಿಸ್ ಕಳಿಸಿದರು. ನೋಟಿಸ್ ಗೆ ಹೆದರಿದ ಮಲಯಾಳಿ ಹೋಟಲ್ ಮುಚ್ಚಿದ.

ಮತ್ತೆ ಉಡುಪಿ ಹೋಟಲ್ ಬಿಸಿನೆಸ್ ಭರ್ಜರಿಯಾಗಿ ನಡೆಯತೊಡಗಿತು.

ಇಲ್ಲಿಗೆ ಕಥೆ ಮುಗಿಯಲಿಲ್ಲ! ಈಗ ಇಂಟರ್ವಲ್ ............

ಕಂಗಾಲಾದ ಮಲಯಾಳಿಗೆ ಏನು ಮಾಡುವುದೆಂದೇ ತೋಚಲಿಲ್ಲ. ಅದೇ ಊರಿನ ಬಾರ್ ಒಂದರಲ್ಲಿ ಝೀರೋ ವ್ಯಾಟ್ ನ ಬಲ್ಬ್ ನ ಕೆಳಗೆ ಕಿಂಗ್ ಫಿಷರ್ ಬೀರ್ ಹೀರುವಾಗ ಅವನಿಗೆ ಏನೋ ಹೊಳೆಯಿತು. ಥಟ್ಟನೆ ಅದೇ ರಾತ್ರಿ ಬಸ್ ಹಿಡಿದು ಉಡುಪಿಗೆ ಹೋಗಿ ಅಡುಗೆ ಭಟ್ಟರೊಬ್ಬರನ್ನು ಹುಡುಕಿ ತನ್ನೊಂದಿಗೆ ಕರೆ ತಂದ.

ಮಾರನೇ ದಿನದಿಂದ ಮಲಯಾಳಿ ಹೋಟಲ್ ಮತ್ತೆ ಶುರು! ಉಡುಪಿಯ ಅಡುಗೆ ಭಟ್ಟರು ಇಡ್ಲಿ, ವಡಾ, ನೀರ್ ದೋಸೆ, ಮಸಾಲೆ ದೊಸೆ ಮಾಡಿದ್ರೆ ಮಲಯಾಳಿ ತಾನೇ ಸ್ವಥ ಪುಟ್ಟು, ಆಪಂ ಥರದ ಮಲಯಾಳಿ ತಿನಿಸು ಮಾಡತೊಡಗಿದ.

ಜನರ ಬಳಿ ಈಗ ಹೆಚ್ಚಿನ ಆಯ್ಕೆ ಇತ್ತು. ಮಲಯಾಳಿ ಹೋಟಲ್ ಗೆ ಹೋದರೆ ಎಲ್ಲವೂ ಸಿಗುತ್ತಿದ್ದರಿಂದ ಎಲ್ಲರೂ ಅಲ್ಲಿಗೇ ಹೋಗತೊಡಗಿದರು.

ಓಕೆ. ಈಗ ಕಥೆ ಮುಗಿಯಿತು. ತಾವಿನ್ನು ಹೊರಡಬಹುದು.

ಕಥೆಯ ನೀತಿ?

ಇದು ಈಸೋಪನ ಅಥವ ಪಂಚತಂತ್ರದ ಕಥೆಯಲ್ಲ ನೀತಿ ಇರಲು! ಇದು ಬಿಸಿನೆಸ್!

4 comments:

sunaath said...

ಕತೆಯ ನೀತಿಪಾಠ ಏನೆಂದರೆ, ಬಿಜಿನೆಸ್ಸಿನಲ್ಲಿ ನೀತಿ ಇರೋದಿಲ್ಲ!

nayna birur said...

superb channagidhe katheeee:)

minchulli said...

ಸೂಊಊಊಊಊಊಊಊಊಊಊಊಊಊಊ ಪರ್

BASAVARAJA D said...
This comment has been removed by the author.