Saturday, March 28, 2009

ಹೇ ಕ್ಯಾಸೆಟ್, ನಿನಗೊಂದು ಭಾವಪೂರ್ಣ ಶ್ರದ್ಧಾಂಜಲಿ.....



ಬಹಳ ಸಮಯದ ನಂತರ ರೂಮ್ ಕ್ಲೀನ್ ಮಾಡುವ ಅನಿವಾರ್ಯತೆ ಉಂಟಾಯಿತು!ಕಳೆದ ಏಳು ವರ್ಷಗಳಿಂದ ಬೆಂಗಳೂರಿನಲ್ಲಿದ್ದು ಒಂದು ದೊಡ್ಡ ಡಬ್ಬಿ ಸಾಮಗ್ರಿಗಳನ್ನು ಬಹಳ ಜೋಪಾನಾವಾಗಿ ಕಾಪಾಡಿಕೊಂಡು ಬಂದಿದ್ದೆವು ನಾವೆಲ್ಲ ಗೆಳೆಯರು.ಈಗ ಅನಿವಾರ್ಯವಾಗಿ ಕೆಲವು ವಸ್ತುಗಳನ್ನು ತ್ಯಾಗ ಮಾಡಬೇಕಾದ ಪರಿಸ್ಥಿತಿ ಒದಗಿ ಬಂದಿದೆ.
ಅದರಲ್ಲಿ ಒಂದು ಚಿಕ್ಕ ಡಬ್ಬಿ ಬರೀ ಕ್ಯಾಸೆಟ್ ಗಳದ್ದೆ ಇದೆ.ಈ ಸಿ.ಡಿ ಹಾವಳಿ ಶುರು ಆಗೋ ಮೊದಲು ಕೊಂಡ ಕ್ಯಾಸೆಟ್ ಗಳು ಬಹಳಷ್ಟು ಹಾಗೆ ಇವೆ.ಮೊನ್ನೆ ಊರಿಗೆ ಹೋದಾಗ ಮನೆಯಲ್ಲಿನ ಕಪಾಟು ತೆರೆದರೆ ಸುಮಾರು ಐನೂರರಷ್ಟು ಕ್ಯಾಸೆಟ್ ಗಳನ್ನು ನೋಡಿ ತಲೆ ಸುತ್ತೇ ಬಂದಿತ್ತು!ಅದರಲ್ಲಿ ಬಹುತೆಕ ಕ್ಯಾಸೆಟ್ ಗಳು ಭಜನೆಯವು.ಪುತ್ತೂರು ನರಸಿಂಹ ನಾಯಕ್,ವಿದ್ಯಾಭೂಷಣ,ಬೀಮಸೇನ ಜೋಷಿ,ವೆಂಕಟೀಶ ಕುಮಾರ್,ಶೇಷಗಿರಿ ದಾಸ್ ,ಸುರೆಶ್ ವಾಡೇಕರ್ ಹೀಗೆ ಹತ್ತು ಹಲವು ಪ್ರಖ್ಯಾತರು ಹಾಡಿರುವ ಹಾಡುಗಳ ಕ್ಯಾಸೆಟ್ ಗಳು!ಹಾಗೆ ಕಪಾಟಿನ ಬಾಗಿಲು ಮುಚ್ಚಿ ಮತ್ತೆ ಬೆಂಗಳೂರಿಗೆ ವಾಪಸ್ ಆಗಿದ್ದೆ.

ಆದರೆ ಬೆಂಗಳೂರಿಗೆ ಬಂದ ಮೇಲೆ ರೂಮ್ ಕ್ಲೀನ್ ಮಾಡುವಾಗ ಮತ್ತೆ ಈ ಕ್ಯಾಸೆಟ್ ಗಳೇ ಸಿಗಬೇಕಾ?

ಊರಲ್ಲಿರಬೇಕಾದ್ರೆ ನನ್ನ ಅಣ್ಣನಿಗೆ ಕ್ಯಾಸೆಟ್ ಹುಚ್ಚಿತ್ತು.ಎಲ್ಲಾ ಥರದ ಕ್ಯಾಸೆಟ್ ಗಳು ,ಅಂದರೆ ಭಜನೆ ,ನಾಟಕ,ಗಝಲ್,ಹಿಂದಿ ,ಕನ್ನಡಚಿತ್ರಗಳ ಕ್ಯಾಸೆಟ್ ಹೀಗೆ ಎಲ್ಲಾ ಬಗೆಯ ಕ್ಯಾಸೆಟ್ ಗಳೂ ನಮ್ಮ ಬಳಿ ಇದ್ದವು.
ಒಂದು ದಿನ ಅಣ್ಣ ಬಹಳ ಇಷ್ಟ ಪಡುತ್ತಿದ್ದ ’ಇಮ್ತಿಹಾನ್’ ಅನ್ನೋ ಹಿಂದಿ ಕ್ಯಾಸೆಟ್ ಒಂದನ್ನು ಪಕ್ಕ ಮನೆಯ ಹುಡುಗನಿಗೆ ಕೊಟ್ಟಿದ್ದೆ.ಬೆಳಿಗ್ಗೆಯೊಳಗೆ ಕ್ಯಾಸೆಟ್ ಅನ್ನು ಹಿಂದಿಗುರಿಸುತ್ತಾನೆ ಅನ್ನೋ ಭರವಸೆಯೊಂದಿಗೇ ಕೊಟ್ಟಿದ್ದೆ.ಆದ್ರೆ ಆ ಪಾಪಿ ಅದನ್ನು ಕಳಕೊಂಡಿದ್ದ!ಕಳಕೊಂಡಿದ್ದ ಅನ್ನೋದಕ್ಕಿಂತ ಆ ಕಳ್ಳ ಅದನ್ನು ವಾಪಸ್ ಕೊಡದೇ ’ಕಳಕೊಂಡಿದ್ದೀನಿ ’ ಅಂತ ಸುಮ್ಮನೆ ಹೇಳಿದ್ದ ಅನ್ನೋದೆ ಸರಿ ಅನ್ನಿಸುತ್ತೆ.
ಆ ಕ್ಯಾಸೆಟ್ ಅಣ್ಣನಿಗೆ ವಾಪಾಸ್ ಕೊಡಲು ನಾನು ಬಹಳಷ್ಟು ಒದ್ದಾಡಿದ್ದೆ.ಇಡೀ ಮಂಗಳೂರು ,ಉಡುಪಿ,ಮಣಿಪಾಲ ಹುಡುಕಿದ್ರೂ ನನಗೆ ಆ ಕ್ಯಾಸೆಟ್ ಸಿಕ್ಕಿರಲಿಲ್ಲ.ಬದಲಾಗಿ ಅದೇ ಸಿನೆಮಾದ ಹಾಡಿನ ಜೊತೆ ಬೆರೆ ಸಿನೆಮಾದ ಹಾಡುಗಳಿರುವ combination ಕ್ಯಾಸೆಟ್ ಸಿಕ್ಕಿತ್ತು.ಆದರೆ ಆ ಕ್ಯಾಸೆಟ್ ವಾಪಾಸ್ ಕೊಟ್ಟಿಲ್ಲ ಅಂದ್ರೆ ನನ್ನಣ್ಣ ನನ್ನನ್ನು ಅಡ್ಡಡ್ಡ ಸಿಗಿದು ತೋರಣ ಕಟ್ಟೋದು ಖಂಡಿತ ಅನ್ನೋ ಭಯ ನನಗಿತ್ತು.

ಸಧ್ಯ ಮನೆಯಲ್ಲಿದ್ದ ಕೆಲವು ಪ್ರಭಾವಿ ಜನರ ಕೃಪೆಯಿಂದ ನಾನು ಅಣ್ಣನ ಕೈಯಿಂದ ಆ ದಿನ ಬಚಾವಾಗಿದ್ದೆ.

ಈಗ ಅದೇ ಕ್ಯಾಸೆಟ್ ಗಳನ್ನು ಕೈಯಾರೆ ಬಿಸಾಕುವ ಅನಿವಾರ್ಯತೆ ಉಂಟಾಗಿದೆ.ಉಚಿತವಾಗಿ ಕೊಟ್ಟರೂ ಈ ಕ್ಯಾಸೆಟ್ ಅನ್ನೋ ವಸ್ತುವನ್ನು ತಗೊಳ್ಳಲು ಪೌರಕಾರ್ಮಿಕರೂ ತಯಾರಿಲ್ಲ.

ಯಾಕಂದ್ರೆ ಅವರ ಮನೆಗಳಲ್ಲೂ ಈಗ ಸಿ.ಡಿ ಪ್ಲೇಯರ್ ಗಳು ರಾರಾಜಿಸುತ್ತಿವೆ!

ಕಾಲಕ್ಕೆ ತಕ್ಕಂತೆ ನಾವೂ ಬದಲಾಗಬೆಕು .ಈಗಿರುವ MP3 Player ಹಳೆಯ ಕ್ಯಾಸೆಟ್ ಗಳಿಗಿಂತ ಎಷ್ಟೋ ಪಾಲು ಉತ್ತಮ.ಹಾಗಾಗಿ ಹಳೆಯ ಕ್ಯಾಸೆಟ್ ಗಳು ಮಾಯವಾಗಿರುವುದರಲ್ಲಿ ಯಾವುದೇ ಆಶ್ಚರ್ಯ ಇಲ್ಲ.

ಆದರೆ ಈ ಕ್ಯಾಸೆಟ್ ಗಳು ಬಹಳಷ್ಟು ವರ್ಷ ನಮ್ಮ ಮನ ತಣಿಸಿರುವುದರಿಂದ ಅದಕ್ಕೊಂದು ಗೌರವಯುತ ಬೀಳ್ಕೊಡುಗೆ ನೀಡುವುದು ಅನಿವಾರ್ಯ ಆನಿಸ್ತಾ ಇದೆ.

ಆಗಿನ ಕಾಲದಲ್ಲಿ ಕ್ಯಾಸೆಟ್ ಅನ್ನೋದೇ ಒಂದು ಲಕ್ಸುರಿ.ಬಹಳಷ್ಟು ಜನ ಹೊಟ್ಟೆ ಬಟ್ಟೆಗೇ ಕಷ್ಟಪಡುವುವರಾಗಿದ್ದರಿಂದ ಟೇಪ್ ರೆಕಾರ್ರ್ಡರ್, ಕ್ಯಾಸೆಟ್ ಹೊಂದಿರುವವರಿಗೆ ತಕ್ಕ ಮಟ್ಟಿನ ಗೌರವ ಇತ್ತು.

ಒಂದು ದಿನ ನಾನು ನಮ್ಮ ಪರಿಚಿತ RSS ಧುರೀಣರೊಬ್ಬರಿಂದ ’ಭಾರತ ದರ್ಶನ’ ಕ್ಯಾಸೆಟ್ ತಂದಿದ್ದೆ.ಮಾಮೂಲಿಯಂತೆ ಕ್ರಿಕೆಟ್ ಆಡಿ ಮನೆಗೆ ವಾಪಾಸ್ ಆಗಿ ಸುಸ್ತಾಗಿ ಫ್ಯಾನ್ ಹಾಕಿ ಹಾಸಿಗೆಯಲ್ಲಿ ಮಲಗಬೇಕೆನ್ನಿಸಿ ಟೇಪ್ ರೆಕಾರ್ಡರ್ ಆನ್ ಮಾಡಿದ್ದೆ.ಅಸಡ್ಡೆಯಿಂದ ಕೈಯ್ಯಲ್ಲಿರೊ ಬ್ಯಾಟ್ ನಿಂದಲೇ ಟೇಪ್ ರೆಕಾರ್ಡರ್ ಅನ್ನು ಆನ್ ಮಾಡಿ ಹಾಸಿಗೆಯಲ್ಲಿ ಬಿದ್ದುಕೊಂಡಿದ್ದೆ ನಾನು.
ಐದು ನಿಮಿಷವಾದರೂ ವಿದ್ಯಾನಂದ ಶೆಣೈಯವರ ಸದ್ದಿಲ್ಲದಾಗ ಸಂಶಯ ಬಂದು ಟೇಪ್ ರೆಕಾರ್ಡರ್ ಬಳಿ ಹೋಗಿ ನೋಡಿದ್ರೆ ನನ್ನ ಗ್ರಹಚಾರಕ್ಕೆ ನಾನು ರೆಕಾರ್ಡ್ ಬಟನ್ ಅನ್ನು ಒತ್ತಿದ್ದೆ .ಪ್ಲೇ ಹಾಗೂ ರೆಕಾರ್ಡ್ ಎರಡೂ ಬಟನ್ ಗಳು ಒಟ್ಟಿಗೆ ಅದುಮಿದ್ದರಿಂದ ಕ್ಯಾಸೆಟ್ ರೆಕಾರ್ಡ್ ಮೋಡ್ ಗೆ ಹೋಗಿತ್ತು.’ಭಾರತ ದರ್ಶನ’ ದ ಶುರುವಿಗೆ ಬರುವ ಅದ್ಭುತ ಹಾಡೊಂದು ನನ್ನ ಎಡವಟ್ಟಿನಿಂದಾಗಿ ಅಳಿಸಿ ಹೋಗಿತ್ತು.ಆ RSS ಧುರೀಣರು ನನಗೆ ಬಿಟ್ಟಿ ’ಪಾತಾಳ ದರ್ಶನ’ ಮಾಡಿಸುತ್ತಾರೇನೋ ಅನ್ನೋ ಭಯ ನನಗೆ ಆಗ ಕಾಡಿತ್ತು.ಸಧ್ಯ ಅವರು ಅಷ್ಟು ದುಷ್ಟರಾಗಿರಲಿಲ್ಲ.ಬದಲಾಗಿ ನನಗೆ ಇನ್ನೊಂದು ಕ್ಯಾಸೆಟ್ ಕೇಳಲು ಕೊಟ್ರು!

ಕ್ಯಾಸೆಟ್ ನ ಇನ್ನೊಂದು ಸಮಸ್ಯೆ ರೀಲ್ ಕಚ್ಚಿಕೊಳ್ಳೋದು! ಚೆನ್ನಾಗಿ ಹಾಡುತ್ತಿದ್ದ ಕ್ಯಾಸೆಟ್ ಅಚಾನಕ್ ಆಗಿ ನಾಯಿ ಮರಿ ಕೂಗಿದ ಹಾಗೆ ಕೂಗತೊಡಗಿತು ಅಂದರೆ ಅದರ ರೀಲ್ ಸಿಕ್ಕಿ ಕೊಂಡಿತು ಅಂತಲೇ ಲೆಕ್ಕ.ಕೂಡಲೇ ಏನಾದ್ರೂ ಟೇಪ್ ರೆಕಾರ್ಡರ್ ಅನ್ನು off ಮಾಡಿಲ್ಲ ಅಂದ್ರೆ ಆ ಕ್ಯಾಸೆಟ್ ಅನ್ನು ಮರೆತು ಬಿಡುವುದೇ ಸೂಕ್ತ ನೀವು .
ರೀಲ್ ಸಿಕ್ಕಿಕೊಂಡಾಗ ಅದನ್ನು ಬಿಡಿಸುವುದೇ ಒಂದು ಕಲೆ!ಹುಷಾರಾಗಿ ರೀಲ್ ಬಿಡಿಸಿ ಅದನ್ನು ಮತ್ತೆ ಸುರುಳಿ ಸುತ್ತುವುದರೊಳಗೆ ಕೆಲವೊಮ್ಮೆ ರೀಲ್ ತಿರುಚಿ ಹೋಗೋದುಂಟು.ಒಮ್ಮೆ ರೀಲ್ ತಿರುಚಿ ಏನಾದ್ರೂ ಒಳಗೆ ಹೋಗಿ ಬಿಟ್ರೆ ಮತ್ತೆ ಹಾಡುಗಳೆಲ್ಲಾ ಅರಬಿಕ್ ಸ್ಟೈಲ್ ನಲ್ಲ್ ಕೇಳಿಸುವುದು!ಅದನ್ನು ಮತ್ತೆ ಸರಿ ಪಡಿಸಲು ಕ್ಯಾಸೆಟ್ ಬಿಚ್ಚಬೇಕು.
ಚೆನ್ನಾಗಿರುತ್ತೆ ಅಂತ ಯಾವಾಗಲೂ ಮಹಮ್ಮದ್ ರಫಿ ,ಲತಾ ಮಂಗೇಶ್ಕರ್ ರ ಹಳೆಯ ಕ್ಯಾಸೆಟ್ ಗಳನ್ನು ಕೇಳ್ತಾ ಇದ್ರೆ ಹೆಡ್ ಮೇಲೆ ಅಷ್ಟು ಕೊಳೆ ಕೂರೋದಂತೂ ಸಾಮಾನ್ಯ.ಅದನ್ನು ಕ್ಲೀನ್ ಮಾಡಿಲ್ಲ ಅಂದ್ರೆ ಲತಾ ಮಂಗೇಷ್ಕರ್ ಹಾಡಿರೋ ಹಾಡುಗಳು ಉಶಾ ಉತ್ತಪ್ ಹಾಡಿದ ಹಾಗೆ ಕೇಳಿಸೋದುಂಟು.

ಅಪ್ಪನ ಬಿಳಿ ಪಂಚೆಯ ಅಂಚಿನಲ್ಲಿ ಅದನ್ನು ಕ್ಲೀನ್ ಮಾಡಿದರಷ್ಟೇ ಹೆಡ್ ನಲ್ಲಿ ಎಷ್ಟು ಧೂಳು ಕೂತಿತ್ತು ಅಂತ ಗೊತ್ತಾಗೋದು!ಕೆಲವರು ಅದಕ್ಕೆಂದೇ ಹೆಡ್ ಕ್ಲೀನರ್ ಗಳನ್ನು ತರುತ್ತಿದ್ದದ್ದುಂಟು.ಆದರೆ ನಮಗೆ ದೈವದತ್ತವಾದ ಎಂಜಲು ಹಾಗೂ ಅಪ್ಪನ ಬಿಳಿ ಪಂಚೆ ಇರಬೇಕಾದ್ರೆ ಹೆಡ್ ಕ್ಲೀನರ್ ಯಾಕೆ ಅಲ್ವಾ?

ಈಗಿನ MP3 Player ಗಳಲ್ಲಾದ್ರೆ ಇಷ್ಟ ಪಟ್ಟ ಹಾಡನ್ನು ಆರಾಮಾಗಿ ಕೇಳಬಹುದು.ಕ್ಯಾಸೆಟ್ ಗಳ ಒಂದು ದೊಡ್ಡ ಸಮಸ್ಯೆ ಅಂದ್ರೆ ಯಾವುದಾದರೂ ನಿಶ್ಚಿತ ಹಾಡು ಕೇಳಬೇಕಾದ್ರೆ ಇಡೀ ಕ್ಯಾಸೆಟ್ forward ಮಾಡಬೇಕು!ಆ ಹಾಡನ್ನು ಹುಡುಕುವುದೇ ದೊಡ್ಡ ಸಮಸ್ಯೆ!ಹಾಡನ್ನು ಪೂರ್ತಿ ಕೇಳಿಯಾದ ಮೇಲೆ ಮತ್ತೆ ಕೇಳಬೇಕೆಂದರೆ ಮತ್ತೆ ಅದೇ ರಿವೈಂಡ್ ಬಟನ್ನೇ ಗತಿ.

ಲವ್ ಫೇಲ್ ಆಗಿ ಮುಖೇಶ್ ನ ಯಾವುದಾದರೂ ಹಾಡು ಕೇಳ್ತಾ ಇದ್ರೆ ಈ ರಿವೈಂಡ್ ,ಫಾರ್ವರ್ಡ್ ದೇ ಒಂದು ದೊಡ್ಡ ಸಮಸ್ಯೆ.ಒಮ್ಮೆ ಹಾಡು ಕೇಳಿದ ಮೇಲೆ ಮತ್ತೆ ಕೇಳಲು ರಿವೈಂಡ್ ಮಾಡಬೇಕು.ಈ ರಿವೈಂಡ್ ಫಾರ್ವರ್ಡ್ ಗೋಳಿನಿಂದ ಲವ್ವೇ ಬೇಡ ಅನ್ನಿಸೋದೂ ಉಂಟು ಒಮ್ಮೊಮ್ಮೆ.ಅಪ್ಪಿ ತಪ್ಪಿ ಏನಾದ್ರೂ ಬಹಳ ಸಾರಿ ರಿವೈಂಡ್ ಫಾರ್ವರ್ಡ್ ಮಾಡಿದ್ರಂತೂ ಕ್ಯಾಸೆಟ್ ರೀಲ್ ತುಂಡಾಗಿ ಪುಳಕ್ಕನೆ ಕ್ಯಾಸೆಟ್ ಒಳಗೆ ಸೇರೋದುಂಟು .ಅದನ್ನು ಮತ್ತೆ ಸ್ಕ್ರೂ ಬಿಚ್ಚಿ ರೀಲ್ ಗೆ ಒಂದಿಷ್ಟು ಅಂಟು ಹಚ್ಚಿ ಜೋಡಿಸಿಬೇಕು.

ಈಗ ಕ್ಯಾಸೆಟ್ ನ ಅರ್ಧ ಭಾಗದಷ್ಟಿರೋ Apple iPod ಅದರ ಜಾಗ ಆಕ್ರಮಿಸಿದೆ.ಕ್ಯಾಸೆಟ್ ಗಳಿಗಿಂತ ಉತ್ಕೃಷ್ಟ ಮಟ್ಟದ ಸಂಗೀತ ಈ iPod ನಲ್ಲಿ ಕೇಳಬಹುದು.

ಆದರೆ ನಮ್ಮನ್ನು ಬಹಳಷ್ಟು ವರ್ಷ ರಂಜಿಸಿದ ,ನಮ್ಮ ದುಖ ದುಮ್ಮಾನಗಳಿಗೆ ಸಾಥ್ ನೀಡಿದ ಈ ಕ್ಯಾಸೆಟ್ ಗಂತೂ ಒಂದು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸದೇ ಇರಲಾಗುವುದಿಲ್ಲ.

ಹೇ ಕ್ಯಾಸೆಟ್ ನಿನ್ನನ್ನು ದೂರಮಾಡುತ್ತಿರುವುದಕ್ಕೆ ಕ್ಷಮಿಸಿಬಿಡು.

ಫೋಟೋ ಕೃಪೆ: ಸ್ವಾಮಿ ಈ ಫೋಟೋ ನಾವೇ ತೆಗಿದಿರೋದು ಹಾಗಾಗಿ ಯಾರ ಕೃಪೆಯೂ ಬೇಕಿಲ್ಲ ! .....

Tuesday, March 24, 2009

ಮಕ್ಕಳಿರಬೇಕಮ್ಮ ಚ್ಯಾನೆಲ್ ತುಂಬಾ....


ನಾನು ಎರಡನೇ ಕ್ಲಾಸಿನಲ್ಲಿದ್ದಾಗ ಸರಿಯಾಗಿ ಚಡ್ಡಿ ಹಾಕಿ ಕೊಳ್ಳಲೂ ಬರುತ್ತಿರಲಿಲ್ಲ(ಈಗ ಬರುತ್ತಾ ಅಂತ ಕೇಳಬೇಡಿ ಪ್ಲೀಸ್..)! ಯಾರಾದ್ರೂ ನೆಂಟರು ಮನೆಗೆ ಬಂದವರು ’ಸಂದೀಪ ಯಾವುದಾದರೂ ಹಾಡು ಹೇಳಪ್ಪ ’ ಅಂದ್ರೆ ಕೈ ಕಾಲೆಲ್ಲ ನಡುಗುತ್ತಿತ್ತು.ಆದರೂ ಕಷ್ಟಪಟ್ಟು ’ನಾಯಿ ಮರಿ ನಾಯಿ ಮರೀ ತಿಂಡಿ ಬೇಕೇ ’ ಅನ್ನೋ ಹಾಡನ್ನು ನೆಂಟರು ತಂದಿರುವ ತಿಂಡಿಯನ್ನೇ ಆಸೆಯಿಂದ ದಿಟ್ಟಿಸುತ್ತಾ ನೋಡಿ ಹಾಡಿ ಮುಗಿಸಿದರೆ ಅದೇ ದೊಡ್ಡ ಸಾಧನೆ ಅವತ್ತಿಗೆ. A B C D ಕಲಿತಿದ್ದೇ ಐದನೇ ಕ್ಲಾಸಿನಲ್ಲಾದ್ದರಿಂದ ಇಂಗ್ಲೀಷ್ ರೈಮ್ಸ್ ಅನ್ನೋದೊಂದು ಇದೆ ಅನ್ನೋದೆ ಗೊತ್ತಿರಲಿಲ್ಲ(ಸಧ್ಯ ಬದುಕಿದೆ ಅವತ್ತು).

ಆದರೆ ಮೇಲಿನ ಫೋಟೋದಲ್ಲಿರುವ ಪುಟ್ಟಿ ಸಲೋನಿ ಅನ್ನೋ ಹುಡುಗಿಗೆ ಏಳು ವರ್ಷ ವಯಸ್ಸು ! ಆದರೆ ಈಗಾಗಲೇ ಹನ್ನೊಂದು ಲಕ್ಷದ ಒಡತಿ!

ಕಲರ್ಸ್ ಚಾನಲ್ ನಲ್ಲಿ ಬರುತ್ತಿದ್ದ ’ಛೋಟೇ ಮಿಯಾ’ ಅನ್ನೋ ಹಾಸ್ಯ ಕಾರ್ಯಕ್ರಮದ ವಿಜೇತೆ ಈಕೆ.

ಒಂದು ದಿನ ನಾನು ಹೀಗೆ ರಿಮೋಟ್ ನಿಂದ ಚ್ಯಾನೆಲ್ ಬದಲಾಯಿಸುವಾಗ ಈ ಕಲರ್ಸ್ ಚ್ಯಾನೆಲ್ ನಲ್ಲಿ ಬರುತ್ತಿದ್ದ ’ಛೋಟೆ ಮಿಯಾನ್ ’ ಕಾರ್ಯಕ್ರಮಕ್ಕೆ ಅಚಾನಕ್ ಆಗಿ ಬಂದು ಲ್ಯಾಂಡ್ ಆದೆ . ನಾನು ಈಗಾಗಲೇ ಸ್ಟಾರ್ ಒನ್ ನಲ್ಲಿ ಬರುತ್ತಿದ್ದ ಲಾಫ್ಟರ್ ಚ್ಯಾಲೆಂಜ್ ಗೆ ಅಡಿಕ್ಟ್ ಆಗಿದ್ದರಿಂದ ಬೇರೆ ಹಾಸ್ಯ ಕಾರ್ಯಕ್ರಮಗಳು ಅಷ್ಟೊಂದು ರುಚಿಸುತ್ತಿರಲಿಲ್ಲ.ಆದರೂ ಕಾರ್ಯಕ್ರಮ ಕೊಡುತ್ತಿದ್ದ ಪುಟ್ಟ ಹುಡುಗಿಯ ಮುಂದಿನ ಎರಡು ಹಲ್ಲು ಮುರಿದು ತುಂಬಾ ಮುದ್ದಾಗಿ ಕಾಣುತ್ತಿದ್ದರಿಂದ ಹಾಗೆ ಕುತೂಹಲ ತಡೆಯಲಾಗದೆ ಪೂರ್ತಿ ಕಾರ್ಯಕ್ರಮ ವೀಕ್ಷಿಸಿದೆ.

ಆಮೇಲಂತೂ ಆ ಕಾರ್ಯಕ್ರಮದ ರೆಗುಲರ್ ಗಿರಾಕಿಯಾದೆ ನಾನು.(ಈಗ ಅದೇ ಮಕ್ಕಳು ದೊಡ್ಡವರೊಂದಿಗೆ ಅದೇ ಕಲರ್ಸ್ ಚ್ಯಾನೆಲ್ ನಲ್ಲಿ ಶನಿವಾರ ರಾತ್ರಿ 9.00 ಕ್ಕೆ ’ಛೋಟೇ ಮಿಯಾ-ಬಡೆ ಮಿಯಾ ’ ಅನ್ನೋ ಕಾರ್ಯಕ್ರಮ ಕೊಡ್ತಾ ಇದ್ದಾರೆ ,ಆಸಕ್ತರು ವೀಕ್ಷಿಸಬಹುದು)

ಪುಟ್ಟ ಸಲೋನಿ ಆ ಕಾರ್ಯಕ್ರಮದಲ್ಲಿ ಭಾಗವಸಿದ ಪೈಕಿ ಅತ್ಯಂತ ಚಿಕ್ಕವಳು.ಬರೇ ಏಳು ವರ್ಷ ವಯಸ್ಸು ! ಉಳಿದ ಮಕ್ಕಳೂ ಅದ್ಭುತ ಪ್ರತಿಭಾವಂತರು.ಆದರೆ ವಯಸ್ಸು ಪ್ರತಿಭೆ ಎರಡನ್ನೂ ಗಣನೆಗೆ ತಗೊಂದ್ರೆ ಗೆಲ್ಲೋದು ’ನಮ್ಮ’(ಎಲ್ಲರೂ ಗೆದ್ದೆತ್ತಿನ ಬಾಲ ಹಿಡಿಯೋರೇ!) ಸಲೋನಿನೇ.ಅಂತ ಅದ್ಭುತವಾದ ಪ್ರತಿಭೆ ಅವಳದ್ದು.ಆದರೆ ಕಾರ್ಯಕ್ರಮ ಕೊಟ್ಟಾದ ಮೇಲೆ ಮಾತ್ರ ಈ ಹುಡುಗಿ ಇದರ ಮುದ್ದು ಮಕ್ಕಳ ಹಾಗೆ ಮುದ್ದು ಮುದ್ದಾಗಿ ಆಡ್ತಾಳೆ.ಆದರೆ ಕಾರ್ಯಕ್ರಮ ಕೊಡುವಷ್ಟು ಹೊತ್ತು ಪಾತ್ರದೊಳಗೆ ಪರಕಾಯ ಪ್ರವೆಶ ಮಾಡಿದ ಹಾಗೆ ಅದ್ಭುತವಾಗಿ ಅಭಿನಯಿಸ್ತಾಳೆ!

ಅವಳ ಗಂಗೂಬಾಯಿ ಪಾತ್ರ ಮಾತ್ರ ಅತ್ಯಂತ ದೇಶದಾದ್ಯಂತ ಜನ ಮೆಚ್ಚುಗೆ ಗಳಿಸಿದೆ .ಗಂಗೂಬಾಯಿ ಅಂದ್ರೆ ಮುಂಬೈ ಯ ಮರಾಠಿ ಹೆಣ್ಣುಮಗಳೊಬ್ಬಳ ಪಾತ್ರ.ಆಕೆ ಬೇರೆ ಬೇರೆ ಪಾತ್ರಗಳನ್ನು ಗಂಗೂಬಾಯಿಯ ಮರಾಠಿ ಆಕ್ಸೆಂಟ್ ನಲ್ಲಿ ಅತ್ಯಂತ ಸುಂದರವಾಗಿ ನಿರ್ವಹಿಸಿದ್ದಳು.

ಗಂಗೂಬಾಯಿ ನರ್ಸ್ ಆಗಿ,ಪೋಲಿಸ್ ಕಾನ್ಸ್ಟೇಬಲ್ ಆಗಿ ,ಗಗನಸಖಿ ಆಗಿ ಹೀಗೇ ಬೇರೆ ಬೇರೆ ಪಾತ್ರದಲ್ಲಿ ತುಂಬಾನೆ ಚೆನ್ನಾಗಿ ಜನರನ್ನು ನಗಿಸಿದ್ಲು.

ಇಷ್ಟು ಚಿಕ್ಕ ಮಕ್ಕಳಲ್ಲಿ ಅದು ಹೇಗೆ ಅಷ್ಟು ಪ್ರತಿಭೆ ಅಡಗಿದೆಯೋ ದೇವರಿಗೇ ಗೊತ್ತು.ನಮ್ಮ ಕನ್ನಡದ ಕಂದಮ್ಮಗಳಾದ ಸಹನಾ ,ಮನೋಜವಂ,ಓಹಿಲೇಶ್ವರಿ,ರಕ್ಷಿತಾ ಭಾಸ್ಕರ್ ಮುಂತಾದ ಮುದ್ದು ಮಕ್ಕಳದ್ದೂ ಅದ್ಭುತ ಪ್ರತಿಭೆ.ಈ ವಯಸ್ಸಿನಲ್ಲೆ ಮಕ್ಕಳು ಈ ಪರಿ ಪ್ರತಿಭಾವಂತರಾದರೆ ದೊಡ್ಡವರಾದ ಮೇಲೆ ಹೇಗೋ?

ಆದರೆ ಇಂಥ ಮಕ್ಕಳ ಹೆತ್ತವರು ಹೆಸರು ,ಹಣ ಗಳಿಸುವ ಪ್ರಯತ್ನದಲ್ಲಿ ತಮ್ಮ ಮಕ್ಕಳ ಬಾಲ್ಯವನ್ನು ಹಾಳುಗೆಡವುತ್ತಿದ್ದಾರೆ ಅನ್ನೋ ಆರೋಪವೂ ಇದೆ.

ಈಗಿನ ಮಕ್ಕಳು ಎಷ್ಟೇ ಖುಷಿ ಕೊಟ್ಟರೂ ನನ್ನ ಆಲ್ ಟೈಮ್ ಫೇವರೇಟ್ ಮಾತ್ರ ಮಾಸ್ಟರ್ ಮಂಜುನಾಥ್ !

ನನ್ನಂಥವರಿಗೆ ಹಾಸ್ಯದ/ಸಂಗೀತದ ರಸದೌತಣ ಉಣಿಸಿದ ಮಕ್ಕಳಿಗೆ ಹಾಗೂ ಅವರನ್ನು ಸೃಷ್ಟಿಸಿದ ಅವರ ಹೆತ್ತವರಿಗೆ ನನ್ನದೊಂದು ಥ್ಯಾಂಕ್ಸ್ !

ಫೋಟೋ ಕೃಪೆ :’ಕಲರ್ಸ್ ಟಿ.ವಿ’

Tuesday, March 17, 2009

ತೂತಿರುವ ದೋಸೆಗೆ ಡಿಮಾಂಡಪ್ಪೋ ಡಿಮಾಂಡು !



ಮೊನ್ನೆ ಸಹೋದ್ಯೋಗಿಯೊಬ್ಬ (ಡೆಲ್ಲಿಯವನು) ’ಅಬೇ ತೇರೇ ಮ್ಯಾಂಗಲೋರ್ ಮೇಂ ಲಡ್ಕಿಯೋಂ ಕೋ ಮಾರ್ತೆ ಹೇಂ ನಾ ’ ಅಂತ ಕಿಚಾಯಿಸಿದ್ದ .ಅವನ ಕುತ್ತಿಗೆ ಹಿಚುಕುವಷ್ಟು ಸಿಟ್ಟು ಬಂದಿದ್ರೂ ತಡ್ಕೊಂಡು ’ನಹೀಂ ಯಾರ್ ಸಬ್ ನೇ ಜೀನ್ಸ್ ಪೆಹನಾ ಥಾ ನಾ ಇಸೀ ಲಿಯೆ ಲಡ್ಕೇ ಕೋನ್ ,ಲಡ್ಕಿಯಾಂ ಕೋನ್ ಮಾಲೂಂ ನಹಿ ಪಡಾ ಶಾಯದ್ ’ ಅಂತ ಹೇಳಿ ಹಾಗೆ ತಳ್ಳಿ ಬಿಟ್ಟಿದ್ದೆ ವಿಷಯವನ್ನು .

ಈಗ ಮತ್ತೆ ಚಾರ್ಲಿ ಚಾಪ್ಲಿನ್ ನಗಿಸುವ ಬದಲು ಅಳಿಸ್ತಾ ಇದ್ದಾನೆ !

ಕಳೆದ ವಾರಾಂತ್ಯದಲ್ಲಿ ನಾನು ಮಂಗಳೂರಲ್ಲೇ ಇದ್ದೆ .ಹಿಂದೂ ಸಮಾಜೋತ್ಸವಕ್ಕೆ ಹೋಗಿದ್ದಲ್ಲ ನನ್ನನ್ನು ನಂಬಿ ಪ್ಲೀಸ್ .ನಾನು ಹಿಂದು ಸಮಾಜೋತ್ಸವಕ್ಕೆ ಹೋಗಿಲ್ಲ ,ನನ್ನನ್ನು ಯಾರೂ ದೂರ ಮಾಡಬೇಡಿ ಪ್ಲೀಸ್ .. ಬೇಕಾದ್ರೆ ನನ್ನ ಸ್ನೇಹಿತರನ್ನೇ ಕೇಳಿ.ನಾನು ಹೋಗಿದ್ದು ಗೃಹಪ್ರವೇಶಕ್ಕೆ .ಅವನೊಬ್ಬ ಹಿಂದು ,ಆದ್ರೆ ಅವನು ಕ್ರಿಸ್ಚಿಯನ್ ಅಥವ ಮುಸ್ಲಿಂ ಆಗಿದ್ರೂ ನಾನು ಹೋಗ್ತಾ ಇದ್ದೆ ಯಾರೂ ದಯವಿಟ್ಟು ನನ್ನನ್ನು ತಪ್ಪು ತಿಳ್ಕೋಬಾರ್ದು .

ನನಗೂ ಮಂಗಳೂರು ಹೆಸರು ದಿನಾ ಪೇಪರ್ ನಲ್ಲಿ ಕಾಣೋದು ನೋಡಿ ಬೇಜಾರಾಗಿ ಬಿಟ್ಟಿತ್ತು. ಕೇರಳದ ಒಬ್ಬ ಸ್ನೇಹಿತನ ಬಳಿ ಹಾಗೆ ಹೇಳಿದೆ.ಅದಕ್ಕೆ ಆ ಮಹಾನುಭಾವ ’ಏನ್ ಹೇಳ್ತೀಯಾ ಸಂದೀಪ್ ನಮ್ಮ ಕಣ್ಣೂರಿನಲ್ಲಿ ದಿನಕ್ಕೊಂದು ಮರ್ಡರ್ ಆಗುತ್ತೆ ,ವರ್ಷದಲ್ಲಿ ೩೦೦ ದಿನ ಏನಾದ್ರೂ ಪ್ರತಿಭಟನೆ ಸ್ಟ್ರೈಕ್ ,ಇನ್ನು ನಿಮ್ಮಲ್ಲಿ ಆದ ಪಬ್ ದಾಳಿ ಏನೂ ಅಲ್ಲ ಅದಕ್ಕಿಂತ ಕೆಟ್ಟ ಸಂಗತಿಗಳ ಅಲ್ಲಿ ಆಗುತ್ತೆ' ಅಂದ.

ಪಕ್ಕದಲ್ಲೇ ಕೂತಿದ್ರೂ ತಮಿಳುನಾಡಿನವನ ಬಳಿ ನನ್ನ ದುಃಖ ಹೇಳಿಕೊಳ್ಳುವ ಅಗತ್ಯ ನನಗೆ ಕಾಣಿಸಲೇ ಇಲ್ಲ!

ಸ್ವಲ್ಪ ದಿನದ ಹಿಂದೆ ತಮಿಳುನಾಡಿನ ಒಂದು ಕಾಲೇಜಿನಲ್ಲಾದ ಗಲಬೆಯ ವೀಡಿಯೋ ನೋಡಿದ್ದೆ.ಅದರಲ್ಲಿ ಪೋಲಿಸರ ಮುಂದೆಯೇ ಒಬ್ಬ ಹುಡುಗನನ್ನು ಸಾಯುವ ಹಾಗೆ ಹೊಡೆದದ್ದು ನೋಡಿ ’ನಮ್ಮ ಕುಡ್ಲ’ ಎಷ್ಟೋ ವಾಸಿ ಅನ್ನಿಸಿತು.

ಪಕ್ಕದಲ್ಲೇ ಬಿಹಾರದವನೊಬ್ಬ ದೀಪಿಕಾ ಪಡುಕೋಣೆಯ ವಾಲ್ ಪೇಪರ್ ನೋಡಿ ಜೊಲ್ಲು ಸುರಿಸ್ತಾ ಇದ್ದ (ಸಂದೀಪಿಕಾಳ ಮೇಲೆ ಮಾತ್ರ ಬೇರೆಯವರು ಕಣ್ಣು ಹಾಕಿದ್ರೆ ಕೆಟ್ಟ ಸಿಟ್ಟು ಬರುತ್ತೆ ನನಗೆ).

ಅವನ ಬಳಿ ನನ್ನ ಗೋಳು ತೋಡಿಕೊಂಡೆ.

"ನೋಡಪ್ಪಾ ಗುರುವೆ ನನ್ನೂರು ’ತಲ್ಲಣ’ಗೊಂಡಿದೆ ,ಏನಾದ್ರೂ ಪರಿಹಾರ ಹೇಳು " ಅಂತ.

"ಅಬೇ ಸಾಲೆ ಹಮಾರ್ ಬಿಹಾರ್ ಮೆ ಪಚಾಸ್ ರುಪಯೇ ಮೇ ತೋ ಮರ್ಡರ್ ವಾ ಕರ್ತೇ ಹೇಂ .ತುಮ್ಹಾರ್ ಗಾಂವ್ ತೋ ಬಹುತ್ ಬಡಿಯಾ ಹೇ ರೇ .ಲಡ್ಕಿಯಾಂ ಬಿ ಮಸ್ತ್ ಹೇ ’( "ನನ್ನ ಬಿಹಾರದಲ್ಲಿ ಐವತ್ತು ರೂಪಾಯಿಗೆ ಸುಪಾರಿ ತಗೊಂಡು ಕೊಲೆ ಮಾಡ್ತಾರೆ ,ನಿನ್ನೂರೇ ಪರ್ವಾಗಿಲ್ಲ .ಅದೂ ಅಲ್ಲದೆ ನಿಮ್ಮೂರ ಹುಡ್ಗೀರು ಮಾತ್ರ ಸೂಪರ್ ! " ಅಂದ !

ಆಂದ್ರದ ರೆಡ್ಡಿ ಆಂದ್ರ ಮೆಸ್ ನಲ್ಲಿ ಭರ್ಜರಿ ಭೋಜನಂ ಮುಗಿಸಿ ನಿದ್ದೆ ಮಾಡಲು ತಯಾರಿ ನಡೆಸ್ತಾ ಇದ್ದ.ಅವನ ಬಳಿಯೂ ಕೇಳಿ ನೋಡೋಣ ಪರಿಹಾರ ಸಿಕ್ಕರೂ ಸಿಗಬಹುದು ಅಂದು ಕೊಂಡು ಕೇಳಿದೆ.

"ರೆಡ್ಡಿಗಾರು ನಮ್ಮ ಮಂಗಳೂರು ಹೀಗೆ ಬೇಡದ ಕಾರಣಗಳಿಗಾಗಿ ಪ್ರಖ್ಯಾತಿ ಹೊಂದುತ್ತಾ ಇದೆ ,ಏನಾದ್ರೂ ಸಜೆಶನ್ ಸಿಗಬಹುದಾ ?"

" ಮಂಗಳೂರಾ ಅದಿ ಎಕ್ಕಡ ಉನ್ನಾವು ? " ಅಂದ ಭೂಪ . " ನಿನ್ನಜ್ಜಿ ನ್ಯೂಸ್ ನೋಡಲ್ವಾ ಆ ಪರಿ ಬರುತ್ತೆ ದಿನಾಲೂ " ಅಂದೆ ಸಿಟ್ಟಿನಿಂದ.

’ಓಹ್ ಅದಾ ಅದೆಲ್ಲಾ ನಮಗೆ ಮಾಮೂಲಿ ಮಾರಾಯ .ನಮ್ಮೂರಲ್ಲಿ ಅದಕ್ಕಿಂತ ಭಯಂಕರ ಘಟನೆಗಳು ಆಗ್ತಾ ಇರ್ತಾವೆ .ಈ ಬಡ್ಡಿಮಕ್ಕಳು ನಮ್ಮೂರಿನ ಬಗ್ಗೆ ನ್ಯೂಸ್ ನಲ್ಲಿ ತೋರಿಸೋದೆ ಇಲ್ಲ .ಅದೇನ್ ಮೀಡಿಯಾ ನೋ ’ ಅಂತ ಮೀಡಿಯಾಗೆ ಬಯ್ಯೋದಕ್ಕೆ ಶುರು ಹಚ್ಚಿಕೊಂಡ.

ಎಲ್ಲರ ಮನೆ ದೋಸೆ ತೂತೆ ಆದ್ರೆ ನಮ್ಮ ’ತೂತಿರುವ ದೋಸೆ’ಗೆ ಈಗ ಎಲ್ಲೆಡೆ ಸಿಕ್ಕಾಪಟ್ಟೆ ಬೇಡಿಕೆ ಬಂದಿರಬೇಕು ಅಂತ ನನಗೆ ನಾನೇ ಸಮಾಧಾನ ಮಾಡಿಕೊಂಡು ಗೆಳೆಯ ರಮೇಶನ ಜೊತೆ ಊಟಕ್ಕೆ ಹೋದೆ.

ನೋಡಿ ರಮೇಶ ಹಿಂದೂ ಅನ್ನೋ ಕಾರಣಕ್ಕೆ ಅವನ ಜೊತೆ ಊಟಕ್ಕೆ ಹೋದದ್ದಲ್ಲ .ಪ್ಲೀಸ್ ನೀವೆಲ್ಲಾ ತಪ್ಪು ತಿಳ್ಕೋಬಾರ್ದು.ನಾನೊಬ್ಬ ಜಾತ್ಯಾತೀತ ವ್ಯಕ್ತಿ . ನನಗೆ ಮರಿಯಾ ಜೊತೆ ಊಟಕ್ಕೆ ಕೂರ್ಬೇಕು ಅಂತ ಭಾರಿ ಆಸೆ ಆದ್ರೆ ಏನ್ ಮಾಡೋದು ಅವಳು ಒಪ್ಪಲ್ಲ!


ಏನ್ ಮಾಡೋದು ಸಾರ್ ! ಈಗ ಏನೆ ಮಾಡಿದ್ರೂ ಅದಕ್ಕೆ ಹಿಂದುತ್ವದ ಟಚ್ ಕೊಡ್ತಾರೆ ಜನ .ಅದಕ್ಕೆ ಪದೇ ಪದೆ ಸ್ಪಷ್ಟೀಕರಣ ನೀಡ್ತಾ ಇದ್ದೀನಿ ತಾವ್ಯಾರೂ ಬೇಜಾರು ಮಾಡ್ಕೋಬಾರ್ದು .

ಯಾರೋ ಚಾರ್ಲಿ ಚಾಪ್ಲಿನ್ ಮೂರ್ತಿ ಮಾಡೋಕೆ ಮಂಗಳೂರಿಗೆ ಹೋಗಿದ್ನಂತೆ.ಅಲ್ಲಿನ ಜನ ಬಿಟ್ಟಿಲ್ಲ ಅಂತೆ .ಅದಕ್ಕೂ ಹಿಂದುತ್ವದ ಟಚ್ ಕೊಡಬಹುದು ಅಂತ ನನಗೆ ಈಗ್ಲೇ ಗೊತ್ತಾಗಿದ್ದು !

ಪಡುಬಿದ್ರಿಯಲ್ಲಿ ಸುಝ್ಲಾನ್ ,ನಾಗಾರ್ಜುನ ಆಗಬಾರದು ಅಂತ ಪಾಪ ರೈತರು ಯಾವತ್ತಿನಿಂದಲೋ ಪ್ರತಿಭಟನೆ ನಡೆಸ್ತಾ ಇದ್ದಾರೆ.ಸುಝ್ಲಾನ್ ಕಂಪನಿ ತಗೊಂಡ ಜಾಗದಲ್ಲಿ ಬಬ್ಬರ್ಯ ದೈವದ ವಾಸ್ತವ್ಯವಿದ್ದು ,’ಇದು ನನ್ನ ಜಾಗ ನನ್ನನ್ನು ಯಾರು ಇಲ್ಲಿಂದ ಓಡಿಸ್ತಾರೋ ನೋಡೋಣ ’ ಅಂತ ಮೊನ್ನೆ ನಡೆದ ಭೂತದ ಕೋಲ ದಲ್ಲಿ ದೈವನುಡಿಯಾಗಿದೆಯಂತೆ .

ಇಲ್ಲೂ ಹಿಂದುತ್ವದ ಟಚ್ ಮಾರಾಯ್ರೇ !

ಹೋಗಿ ಹೋಗಿ ಆ ಹೇಮಂತ್ ಹೆಗಡೆಗೆ ಬೇರೆ ಜಾಗವೇ ಸಿಗಲಿಲ್ಲವೇನೋ ? ಹಂಪನಕಟ್ಟೆ ಸರ್ಕಲ್ ನಲ್ಲೇ ನಿಲ್ಲಿಸಿದ್ರೆ ಆಗ್ತಿತ್ತಪ್ಪ .ಹೋಗಿ ಹೋಗಿ ಕಡಲತೀರವೇ ಬೇಕಿತ್ತಾ?

ಹಿಂದೆ ಮನಸ್ಸಿಗೆ ಬೇಜಾರಾದಗ ಕಡಲ ತೀರಕ್ಕೇ ಹೋಗ್ತಾ ಇದ್ದಿದ್ದು ನಾನು .ಆ ತೆರೆಗಗಳು ಅಪ್ಪಳಿಸುವಾಗ ಮಾಡುವ ಸದ್ದೇ ಒಂದು ಥರಾ ಸಾಂತ್ವಾನ ನೀಡುತ್ತೆ.ಕಡಲು ಆ ಪರಿ ಭೋರ್ಗರೆದರೂ ನೆಮ್ಮದಿ ಇರುತ್ತೆ .ನಮ್ಮ ಪಾಡಿಗೆ ನಾವು ನಮ್ಮದೇ ಲೋಕದಲ್ಲಿ ಕಳೆದು ಹೋಗಬಹುದು.

ಅಂಥ ಕಡಲತೀರದಲ್ಲಿ ಚಾರ್ಲಿ ಚಾಪ್ಲಿನ್ ಮೂರ್ತಿ ಹಾಕಿದ್ರೆ ಜನರಿಗೆ ಚಾರ್ಲಿ ಚಾಪ್ಲಿನ್ ಸಿನೆಮಾ ನೋಡಿದಷ್ಟೇ ಖುಷಿ ಸಿಗುತ್ತಾ ? ಗೊತ್ತಿಲ್ಲ !

ಆದ್ರೆ ಅದನ್ನು ನೋಡೋದಿಕ್ಕೆ ದಿನಾಲೂ ಡಜನ್ ಗಟ್ಟಲೆ ಹುಡುಗ-ಹುಡುಗಿಯರು ಬರೋದಂತೂ ನಿಜ.ಪ್ರಶಾಂತವಾದ ಕಡಲತೀರದಲ್ಲಿ ನೂರಾರು ಜನ ಗಿಜಿಗುಡುತ್ತಾರೆ.ಪಾಪ್ ಕಾರ್ನ್,ಐಸ್ ಕ್ರೀಮ್ ಮಾರೋರಿಗಂತೂ ಸುಗ್ಗಿ.ಅಲ್ಲೇ ಒಬ್ಬ ಬೋಟಿಂಗ್ ಅಂತ ಒಂದು ಅಂಗಡಿ ಓಪನ್ ಮಾಡ್ತಾನೆ.ಅದಕ್ಕೆ ನೂರು ರುಪಾಯಿ ಚಾರ್ಜ್ ಮಾಡ್ತಾನೆ .ಪ್ರಶಾಂತವಾದ ಕಡಲತೀರದಲ್ಲಿ ಕುಳಿತು ಖುಷಿ ಪಡ್ತಾ ಇದ್ದ ’ನನ್ನಂತವನು’ ಸಮುದ್ರ ತೀರಕ್ಕೆ ಬಂದವರಲ್ಲಿ ಯಾವ ಹುಡುಗಿ ನೀರಿಗೆ ಇಳೀತಾಳೋ ,ಯಾವಾಗ (~~~ಸೆನ್ಸಾರ್~~~ ) ಅಂತ ಕಾಯೋದಕ್ಕೆ ಶುರು ಮಾಡ್ತಾನೆ.’ಛೇ ನನಗೂ ಈ ರೀತಿ ಒಂದು ಗರ್ಲ್ ಫ್ರೆಂಡ್ ಇದ್ರೆ ಚೆನ್ನಾಗಿರ್ತಾ ಇತ್ತು ’ ಅಂತ ಕರುಬೋದಕ್ಕೆ ಶುರು ಮಾಡ್ತಾನೆ.ಜನಜಂಗುಳಿಯಲ್ಲಿ ಮಗು ನೀರಿಗೆ ಇಳಿದದ್ದು ತಾಯಿಗೆ ಗೊತ್ತೇ ಆಗಲ್ಲ ! ತಂದೆಗಾದ್ರೂ ಗೊತ್ತಾಗಲ್ವ ಅಂತ ಕೇಳ್ಬೇಡಿ .ತಂದೆಗೆ ನೋಡೋದಕ್ಕೆ ಬಹಳಷ್ಟು ವಿಷಯಗಳಿವೆ .

ಉದಾ: ಹುಡುಗಿಯರಲ್ಲ ಕಣ್ರಿ .........ಚಾರ್ಲಿ ಚಾಪ್ಲಿನ್ ನ ಬೃಹತ್ ಮೂರ್ತಿ !

ಆಟೋದವರಿಗಂತೂ ಹಬ್ಬ .ಕಡಲ ತೀರಕ್ಕಾ ? ಅಂತ ಯಾರೂ ಕೇಳಲ್ಲ ! ’ಓಹ್ ಚಾರ್ಲಿ ಚಾಪ್ಲಿನ್ ಗಾ ಐವತ್ತು ರುಪಾಯಿ ಆಗುತ್ತೆ ’ ! ’ಬರ್ಬೇಕಾದ್ರೆ ಬಾಡಿಗೆ ಸಿಗಲ್ಲ ನೋಡಿ ಅದಕ್ಕೆ ’ ಅಂತಾನೆ . ಮೂರ್ತಿ ನೋಡೊದಕ್ಕೆ ಹೋದವರು ಅಲ್ಲೇ ನೀರಿಗೆ ಬಿದ್ದು ಸಾಯ್ತಾರೆ ಅನ್ನೋ ಅಭಿಪ್ರಾಯವಿರಬಹುದೇ ಆಟೋದವನದ್ದು ? ಅದೂ ಗೊತ್ತಿಲ್ಲ !

ಕಾಲ ಕಳೆದಂತೆ ’ಕಡಲತೀರ’ ಚಾರ್ಲಿ ಚಾಪ್ಲಿನ್ ಆಗಿ ಬಿಡುತ್ತೆ !

’ನನ್ನ ಕಡಲತೀರ’ ಚಾರ್ಲಿ ಚಾಪ್ಲಿನ್ ಅಗೋದು ನನಗ್ಯಾಕೋ ಇಷ್ಟ ಆಗ್ತಾ ಇಲ್ಲ - Sorry !

Monday, March 9, 2009

ವಿಜಯ್ ಮಲ್ಯ -ಜೈ ಹೋ .....



ಪರ್ವಾಗಿಲ್ಲ ಕಣ್ರಿ ! ಇಷ್ಟು ವರ್ಷ ಮಲ್ಯರ ಜೋಬು ತುಂಬಿಸಿದ್ದಕ್ಕೂ ಸಾರ್ಥಕ ಆಯ್ತು .ಹಿಂದೆ ಟಿಪ್ಪು ಸುಲ್ತಾನನ ಖಡ್ಗ ತಂದಿದ್ರು .ಈಗ ಗಾಂಧೀಜಿಯ ಕನ್ನಡಕ ಮುಂತಾದ ವಸ್ತುಗಳನ್ನು ಹರಾಜಿನಲ್ಲಿ ಖರೀದಿಸಿ ಭಾರತಕ್ಕೆ ತರ್ತಾ ಇದ್ದಾರಂತೆ ವಿಜಯ್ ಮಲ್ಯ.

ಒಂದೇ ಬೇಜಾರಿನ ಸಂಗತಿ ಅಂದ್ರೆ ಮತ್ತೆ ಬಿಯರ್ ಬೆಲೆ ಏರಿಸಿದ್ರು ನೆನ್ನೆಯಿಂದ .ಥೂ ಈ ಐಟಿ ಮಂದಿಯಿಂದ ಎಲ್ಲದರ ಬೆಲೆ ಏರಿತು !

ಇರ್ಲಿ ಬಿಡಿ ಕೆರೆಯ ನೀರನು ಕೆರೆಗೆ ಚೆಲ್ಲಿ ಅಂದ ಹಾಗೆ ನಾವು ಮಲ್ಯರ ಜೇಬು ತುಂಬಿಸಿದ್ರೂ ಮೋಸ ಇಲ್ಲ. ಅವರ ಶೋಕಿ ಜೊತೆ ಜೊತೆಗೆ ಇಂಥ ಮೆಚ್ಚುವಂಥ ಕೆಲಸಾನೂ ಮಾಡ್ತಾರೆ ನಮ್ಮ ಬಂಟ್ವಾಳ ವಿಜಯ ಮಲ್ಯ .

ಮದ್ಯವಿರೋಧಿ ಗಾಂಧೀಜಿಯ ವಸ್ತುಗಳನ್ನು ತರಲು ಮದ್ಯದ ದೊರೆ ಬೇಕಾಗಿದ್ದು ವಿಪರ್ಯಾಸ ಅಂತೆಲ್ಲ ಕೆಲವರು ಬೇಜಾರು ಮಾಡ್ಕೋತಾ ಇದ್ದಾರೆ.

ಏನು ಮಾಡೋದು ಬದುಕಿನಲ್ಲಿ ಎಲ್ಲ ನಮಗೆ ಬೇಕಾಗಿರೋ ಹಾಗೆ ಆಗಲ್ವಲ್ಲ ! (ಛೇ ಬಿಯರ್ ಗೆ ತೀರಾ ಇಷ್ಟು ಏರಿಸ್ಬಾರ್ದಿತ್ತು:( )

ವಿಜಯ್ ಮಲ್ಯರಿಗೆ ಜೈ ಹೋ........

ವಿಶೇಷ ಸೂಚನೆ : ಮದ್ಯಪಾನ ಆರೋಗ್ಯಕ್ಕೆ ಹಾನಿಕರ.ಹಾಗೆಯೇ ಬಿಯರ್ ವಿಸ್ಕಿಗಿಂತ ಕಮ್ಮಿ ಹಾನಿಕರ .

Photo Courtesy :http://www.singaporegp.org

Wednesday, March 4, 2009

ಪ್ರೀತಿಯಿಂದ ರವಿ ಬೆಳಗೆರೆಗೆ......



ಸುಮಾರು ಒಂದು ವರ್ಷ ಹಿಂದಿನ ಮಾತು.ಆಗಿನ್ನೂ ನಾನು ಬ್ಲಾಗ್ ಲೋಕದಲ್ಲಿ ಕಾಲಿಟ್ಟಿರಲಿಲ್ಲ.ನನ್ನ ಕಾಗೆ ಕಾಲಿನಂಥ ಅಕ್ಷರದಲ್ಲಿ ಒಂದು ದೊಡ್ಡ ಲೇಖನ ಬರೆದಿದ್ದೆ ! ಸ್ಟೀಫನ್ ಹಾಕಿಂಗ್ ಬಗ್ಗೆ.ಅದನ್ನು ಬರೆದಿದ್ದು ’ಓ ಮನಸೇ’ ಅನ್ನೋ ಪತ್ರಿಕೆಗಾಗಿ.ಬರೆಯುವ ಮುನ್ನವೇ ರವಿ ಅಜ್ಜಿಪುರ ರ ಬಳಿ ’ಹೀಗೆ ಬರೀತಾ ಇದ್ದೀನಿ ಕಳಿಸ್ಲಾ ?’ ಅಂತ ಹೇಳಿ ,ಇಂಟರ್ನೆಟ್ ನಲ್ಲಿ ಸಾಮಗ್ರಿಗಳನ್ನೆಲ್ಲ ಹೊಂದಿಸಿ A4 sizeನ ಪೇಪರ್ ನ ಒಂದೇ ಮಗ್ಗುಲಲ್ಲಿ ಬರೆದು ಅದಕ್ಕೆ ೨೦ ರೂ ಕೊರಿಯರ್ ಚಾರ್ಜ್ ತೆತ್ತು ಪೋಸ್ಟ್ ಮಾಡಿದ್ದೂ ಆಯ್ತು.

ಹೀಗೆ ಪೋಸ್ಟ್ ಮಾಡಿದ್ದೀನಿ ಬಂದಿರುತ್ತೆ ನೋಡಿ ಅಂತ ರವಿ ಅಜ್ಜಿಪುರರಿಗೆ ಯಾಹೂನಿಂದ ಮೇಲ್ ಕೂಡಾ ಮಾಡಿದ್ದೆ!

ಮುಂದಿನ ಸಂಚಿಕೆಯಲ್ಲಿ ನನ್ನ ಲೇಖನ ಬಂದೇ ಬರುತ್ತೆ ಅನ್ನೋ ಅಪಾರವಾದ ವಿಶ್ವಾಸ ನನಗಿತ್ತು .ಆದರೆ ಮುಂದಿನ ಸಂಚಿಕೆಯಲ್ಲಿ ಅದು ಬರಲೇ ಇಲ್ಲ !ನನ್ನ ಲೇಖನ ಬರಲಿಲ್ಲ ಅನ್ನೋ ಬೇಸರಕ್ಕಿಂತ ಆ ಪತ್ರಿಕೆಯೇ ಬರಲಿಲ್ಲ ನಾನು ಲೇಖನ ಕಳಿಸಿದ ಮೇಲೆ .ಬಹುಷ ನನ್ನ ಲೇಖನ ಓದಿದ ಮೇಲೆ ಪತ್ರಿಕೆ ಪ್ರಕಟಿಸೋದೆ ಬೇಜಾರಾಗಿರ್ಬೇಕು ಬೆಳಗೆರೆಗೆ.

ಹಾಗೇ ಒಂದು ಸಲ ’ಕೆಂಡಸಂಪಿಗೆ’ಗೂ ಒಂದು ಲೇಖನ ಬರೆದಿದ್ದೆ .ಆದ್ರೆ ಈಗ ಹೈಟೆಕ್ ಸ್ಟೈಲ್ ನಲ್ಲಿ ಯೂನಿಕೋಡ್ ಬಳಸಿ ! ಅದೂ ಪ್ರಕಟ ಆಗ್ಲಿಲ್ಲ .ಕಡೇ ಪಕ್ಷ ನಿಮ್ಮ ಲೇಖನ ಪ್ರಕಟಿಸಲು ಯೋಗ್ಯ ಅಲ್ಲ ಅನ್ನೋ ಉತ್ತರವಾದ್ರೂ ಬರುತ್ತೆ ಅನ್ನೋ ಆಸೆ ನನ್ನದಾಗಿತ್ತು .ಯಾಕಂದ್ರೆ ಮೇಲ್ ಮಾಡಲು ಐದು ರೂಪಾಯಿ ಸ್ಟ್ಯಾಂಪ್ ಹಾಕೋ ಅಗತ್ಯವಿಲ್ಲವಾದ್ದರಿಂದ ಮೇಲ್ ಆದ್ರೂ ಮಾಡ್ತಾರೆ ಅನ್ನೋ ಜೊಳ್ಳು ವಾದ ನನ್ನದು.

ಆ ನಿರಾಸೆಯೇ ನನ್ನ ಬ್ಲಾಗ್ ಶುರು ಮಾಡಲು ನನ್ನನ್ನು ಪ್ರೇರೇಪಿಸಿತು.

ಆದರೆ ಈ ಬ್ಲಾಗ್ ಶುರು ಮಾಡಿದ ಮೇಲೆ ಜನರ ಪ್ರೀತಿ ಕಾಳಜಿ ನೋಡಿ ಅಮೇಲೆ ಪೇಪರ್ ಗಳಿಗೆ ಬರೆಯುವ ಅಗತ್ಯವೇ ನನಗೆ ಅನಿಸಿಲ್ಲ.ಹಾಗಾಗಿ ನಾನು ಪೇಪರ್ಗಳಿಗೆ ಬರೆಯುವ ಸಾಹಸವನ್ನೇ ಮಾಡಲು ಮುಂದಾಗಲಿಲ್ಲ!

ಆದರೂ ಕಳೆದ ವಾರ ನನ್ನದೊಂದು ಲೇಖನ ಪತ್ರಿಕೆಯಲ್ಲಿ ಬಂತು. ’ಹಾಯ್ ಬೆಂಗಳೂರು’ ಪತ್ರಿಕೆಯಲ್ಲಿ ನನ್ನ ’ಪ್ರೀತಿಯಿಂದ ಪ್ರತಾಪ್ ಗೆ’ ಲೇಖನವನ್ನು ಪ್ರಕಟಿಸಿದ್ರು .
ಆದ್ರೆ ನನಗೆ ಖಂಡಿತ ಖುಷಿ ಆಗಿಲ್ಲ .ಕಾರಣ ನನ್ನ ಅನುಮತಿಯನ್ನೇ ಪಡೆದಿರಲಿಲ್ಲ ಪ್ರಕಟಿಸೋದಕ್ಕೆ ! ನಾನು ಯಾವತ್ತೂ ಕಾಪಿ ರೈಟ್ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಂಡಿಲ್ಲ.ಆದ್ರೆ ನಾನು ತಲೆ ಕೆಡಿಸಿಕೊಂಡಿದ್ದು ಯಾಕಂದ್ರೆ ನನ್ನ ಬರಹದ ಆಶಯ ಬೇರೇನೆ ಆಗಿತ್ತು , ಆದ್ರೆ ಅದು ಪ್ರಕಟವಾಗಿರೋ ಉದ್ದೇಶವೇ ಬೇರೆ ಆಗಿತ್ತು !

ನನ್ನ ಬರಹದ ತಲೆ ಬರಹವೇ ’ಪ್ರೀತಿಯಿಂದ ಪ್ರತಾಪ್ ಗೆ ’ .ನಾನು ಅದನ್ನು ಬರೆದಿದ್ದೂ ಪ್ರೀತಿಯಿಂದಲೇ ,ಆದರೆ ಅದರ ಶೀರ್ಷಿಕೆಯನ್ನು ’ಮತ್ತೆ ಕೆಡವಿ ದರೋ ’ ಅಂತೆಲ್ಲ ಬದಲಾಯಿಸಿ ಪ್ರಕಟಿಸಿದ್ರು .

’ಹಾಯ್’ ನಂಥ ಪ್ರಖ್ಯಾತ ಪೇಪರ್ ನಲ್ಲಿ ಪ್ರಕಟವಾಗಿದ್ದಕ್ಕೆ ನಾನು ಖುಷಿ ಆಗ್ತೀನಿ ಅನ್ನೋ ಅನಿಸಿಕೆ ಇದ್ದಿರಬಹುದು ಬೆಳಗೆರಯವರದ್ದು .

ಆದ್ರೆ ನನಗೆ ಖುಷಿ ಆಗಿಲ್ಲ .ಯಾಕಂದ್ರೆ ಅದನ್ನು ಸ್ವಥ ನನ್ನ ರೂಂ ಮೇಟ್ ಗಳೇ ಓದಿಲ್ಲ/ಓದಲ್ಲ .ಯಾರಾದ್ರೂ ಪ್ರತಾಪ್ ಗೆ ಬಯ್ದು ಬರೆದ್ರೆ ಅವರು ಅದನ್ನು ಓದೋದಕ್ಕೇ ಹೋಗಲ್ಲ.ಪ್ರತಾಪ್ ಪಕ್ಕಾ ಅಭಿಮಾನಿಗಳು ಅವರು !

ಅದೂ ಅಲ್ಲದೆ ’ನನ್ನ ಲೇಖನ ಪ್ರಕಟ ಆಗಿದೆ ಅದನ್ನು ಓದಿ’ ಅಂತ ಹೇಳೋದಿಕ್ಕೆ ಆ ಪರಿ ಸ್ನೇಹಿತರೂ ನನಗಿಲ್ಲ,ನನ್ನ ಯಾವ ಸ್ನೇಹಿತರಿಗೂ ನನ್ನದೊಂದು ಬ್ಲಾಗ್ ಇದೆ ಅನ್ನೋದೂ ಗೊತ್ತಿಲ್ಲ .ಅಂಥ ಪ್ರಚಾರವೂ ನನಗೆ ಬೇಕಿಲ್ಲ.

ನನ್ನ ಬಹುತೇಕ ಕಮೆಂಟ್ ಗಳಲ್ಲಿ ರವಿ ಹಾಗೊ ನಾಗತಿಹಳ್ಳಿಯವರು ಸಾಫ್ಟ್ವೇರ್ ಬಗ್ಗೆ ಮಾಡಿದ ಕಮೆಂಟ್ ಗಳ ಬಗ್ಗೇನೂ ಬರೆದಿದ್ದೆ .ಆದ್ರೆ ಅದನ್ನು ಅವರು ಓದೇ ಇಲ್ಲ.

ಬಹುಷ ಪ್ರತಾಪ್ ಸಿಂಹರನ್ನು ವಿರೋಧಿಸಿ ಬರೆದ್ರೆ ಅದನ್ನು ಇಂಟರ್ನೆಟ್ ನಲ್ಲಿ ಹುಡುಕುವ ಸಾಫ್ಟ್ವೇರ್ ಅವರಿಗೆ ಸಿಕ್ಕಿರಬೇಕು !

ರವಿ ಬೆಳಗೆರೆಯವರೇ ಹಾಗೂ ಪ್ರತಾಪ್ ಸಿಂಹರವರೇ ನಿಮ್ಮಿಬ್ಬರನ್ನೂ ಸಮನಾಗಿ ಪ್ರೀತಿಸುವ ನನ್ನಂಥ ಓದುಗರು ಸಾವಿರಾರು ಜನ ಇದ್ದಾರೆ.ಆದ್ದರಿಂದ ಇಂಥ ದ್ವೇಷಪೂರಿತ ಬರಹಗಳಿಗೆ ಆಸ್ಪದ ಕೊಡಬೇಡಿ ಪ್ಲೀಸ್ .......

ನನ್ನ ಬರಹ ಯಾವುದೇ ವ್ಯಕ್ತಿ ಅಥವ ಪತ್ರಿಕೆಯನ್ನು ಕುರಿತು ಅಲ್ಲ .ನನ್ನ ನೆಚ್ಚಿನ ಪತ್ರಿಕೆಯ ಪತ್ರಕರ್ತರು ತಪ್ಪು ಬರೆದಾಗ ಅದನ್ನು ಅವರ ಗಮನಕ್ಕೆ ತರುವ ಉದ್ದೇಶವಷ್ಟೆ ನನ್ನದಾಗಿತ್ತು.ಹಾಗಾಗಿ ಈ ಸ್ಪಷ್ಟೀಕರಣ ಅಗತ್ಯವೆಂದು ನನಗೆ ಅನ್ನಿಸಿತು .