Sunday, May 31, 2009

ನಾಗೇಶ್ ಹೆಗ್ಡೆ ಯವರೊಂದಿಗೆ some-ವಾದ !


ಸುಮಾರು ಐದು ವರ್ಷಗಳ ಹಿಂದಿನ ಮಾತು.ರಾಜೀವ್ ದೀಕ್ಷಿತ್ ರ ಲೇಖನಗಳು ನನ್ನ ಮೇಲೆ ತೀವ್ರ ಪ್ರಭಾವ ಬೀರಿದ್ದವು.ಸ್ವದೇಶಿ ಚಿಂತನೆಗಳ ಬಗೆಗಿನ ವಿಚಾರಧಾರೆ ನನ್ನನ್ನು ತೀವ್ರವಾಗಿ ಕಾಡಿದ್ದವು.ಅದರಿಂದ ಎಷ್ಟು ತೊಂದರೆ ಅನುಭವಿಸಿದ್ದೆ ಅಂದರೆ ಅಪ್ರೆಂಟಿಶ್ ಶಿಪ್ ಮುಗಿದ ತಕ್ಷಣ ಅಮೆರಿಕಾ ಮೂಲದ ಕಂಪೆನಿಯೊಂದು ಕೆಲಸದ ಆಫರ್ ನೀಡಿದಾಗ ತಗೊಳ್ಳೋದೋ ಬಿಡೋದೋ ಅನ್ನೋ ಗೊಂದಲ!ಕಡೆಗೂ ಗೆಳತಿಯೊಬ್ಬಳ ಸಮಯೋಚಿತ ಉಪದೇಶದಿಂದ ’ಹಣವೇ ಜೀವನದಲ್ಲಿ ಮುಖ್ಯ ,ಉಳಿದ ವಿಷಯಗಳು ಹೊಟ್ಟೆ ತುಂಬಿದ ಮೇಲೆ ’ ಅನ್ನೋ ನಿರ್ಧಾರಕ್ಕೆ ಬಂದು ಸ್ವದೇಶಿ ಚಿಂತನೆಗಳಿಗೆ ತಿಲಾಂಜಲಿ ನೀಡಿದ್ದೆ!

ನಿನ್ನೆ ಮೇ ಫ್ಲವರ್ ನ ’ಫಿಶ್ ಮಾರ್ಕೆಟ್’ ಕಾರ್ಯಕ್ರಮದಲ್ಲಿ ಶ್ರೀ ನಾಗೇಶ್ ಹೆಗಡೆಯವರೊಂದಿಗಿನ ಸಂವಾದ ಮುಗಿದ ಮೇಲೆ ಬಹಳ ಸಮಯದ ನಂತರ ಮನಸ್ಸು ಮತ್ತೆ ಒಂಥರಾ ಗೊಂದಲದ ಗೂಡಾಗಿದೆ.ಜಿ ಎನ್ ಮೋಹನ್ ರವರು ’ಫಿಶ್ ಮಾರ್ಕೆಟ್ ನಲ್ಲಿ ಬರುವವರು ತಮ್ಮ ತಮ್ಮ ಅಭಿಪ್ರಾಯಗಳೊಂದಿಗೆ ಬಂದು,ತಮ್ಮ ಅಭಿಪ್ರಾಯಗಳೊಂದಿಗೇ ವಾಪಾಸ್ ಆಗಬೇಕು/ಆಗುತ್ತಾರೆ ’ ಅನ್ನೋ ಮಾತನ್ನು ಯಾವಾಗಲೂ ಹೇಳ್ತಿರ್ತಾರೆ.ಆದರೆ ಈ ಸಲ ನನ್ನ ಅಭಿಪ್ರಾಯಗಳು ನಾಗೇಶ್ ಹೆಗಡೆಯವರ ವಿಚಾರಧಾರೆಯಿಂದಾಗಿ ಸ್ವಲ್ಪ ವಿಚಲಿತಗೊಂಡಿರೋ ಹಾಗಿದೆ.

ಇಡೀ ಸಂವಾದ ಪರಿಸರ,ವಿಜ್ಞಾನ,ವಿಜ್ಞಾನದ ಅವೈಜ್ಞಾನಿಕ ಉಪಯೋಗ ಇಂಥದ್ದೇ ವಿಚಾರಗಳ ಸುತ್ತ ಸುತ್ತುತ್ತಿತ್ತು.ವೈಯುಕ್ತಿಕವಾಗಿ ನಾನು ಪರಿಸರವಾದಿಯಲ್ಲ.ನನಗೆ ಆ ಕುರಿತು ಆಸಕ್ತಿಯೂ ಇಲ್ಲ.ಬಹುಷ ನನ್ನ ತಂದೆಯವರಿಗೆ ಮರದ ಸಾ ಮಿಲ್ ಇದ್ದಿದ್ದೇ ಅದಕ್ಕೆ ಕಾರಣ ಇದ್ದಿರಬಹುದು ಅನಿಸುತ್ತದೆ! ಯಾರಾದರೂ ಹಸಿ ಹಸಿ ಮರ ಕತ್ತರಿಸಿ ನಮ್ಮ ಮಿಲ್ ಗೆ ತಂದು ಹಾಕಿದರೆ ಮಾತ್ರ ನಮ್ಮ ಬಿಸ್ ನೆಸ್ ಚೆನ್ನಾಗಿ ನಡೀತಾ ಇದ್ದಿದ್ದು.ಅದೂ ಅಲ್ಲದೆ ಪರಿಸರ ಸಂರಕ್ಷಣೆ ಬಗ್ಗೆ ಗಂಟೆ ಗಟ್ಟಲೆ ಮಾತಾಡಿ ’ತಮ್ಮ ಮನೆಗೆ ಮಾತ್ರ ತೇಗದ ಮರದ ಬಾಗಿಲೇ ಬೇಕು,ಅದರಲ್ಲಿ ದಶಾವತಾರದ ಕೆತ್ತನೆ ಇರಬೇಕು ’ ಅನ್ನೋ ಮನೋಭಾವನೆಯ ಜನರನ್ನ;ಜಾಗತೀಕರಣದ ,ಸಮಾಜವಾದದ ಬಗ್ಗೆ ಉಪದೇಶ ಕೊಟ್ಟು ಮರ್ಸಿಡಿಸ್ ಬೆಂಜ್ ನಲ್ಲಿ ಪುರ್ರನೆ ಹಾರಿ ಹೋಗುವ ಜನರನ್ನು ಕಂಡ ಮೇಲೆ ನನಗ್ಯಾಕೋ ’ದೊಡ್ಡವರ’ ಮಾತನ್ನು ಕೇಳುವುದೇ ಸ್ವಲ್ಪ ಕಷ್ಟ.

ಆದರೆ ನಾಗೇಶ್ ಹೆಗಡೆಯವರು ಮಾತ್ರ ಹಾಗಿರಲಿಲ್ಲ.ಗೆಳತಿ ಮಾಲತಿ ಶೆಣೈ ಅವರು ಹೇಳಿದ ಹಾಗೆ He is gem of a person !ಅವರ ಒಂದೊಂದು ಮಾತೂ ಬಹಳ ಪ್ರಭಾವಿಯಾಗಿತ್ತು.ಅವರು ತಮ್ಮ ಮಾತನ್ನು ಸಮರ್ಥಿಸಿಕೊಂಡ ರೀತಿಯೂ ಇಷ್ಟವಾಯಿತು.

ಹೇಳಿ ಕೇಳಿ ನಾನು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುವವನು.ನಿಮಗೆ ಈ ವರ್ಷ ಒಂದು ಟಿ.ವಿ ತೋರಿಸಿ ’ಅದ್ಭುತವಾಗಿದೆ ಕಣ್ರಿ ಅತ್ಯುತ್ತಮ ಟೆಕ್ನಾಲಜಿ ತಗೊಳ್ಳಿ ಅಂತ ಹೇಳಿ ,ಮುಂದಿನ ವರ್ಷ ಬೇರೆ ಮಾಡೆಲ್ ತೋರಿಸಿ ನಿಮ್ಮ ಬಳಿ ಈಗಿರೋದು ಸರಿ ಇಲ್ಲ ! ಇದು ಅದಕ್ಕಿಂತ ಸೂಪರ್ ’ ಅಂತ ಹೇಳಿ ಟೋಪಿ ಹಾಕುವಂಥ ಕಂಪೆನಿಗಳಿಗೆ ಕೆಲಸ ಮಾಡುತ್ತಿರುವವನು. ’ ವೈಜ್ಞಾನಿಕ ಆವಿಷ್ಕಾರಗಳೆಲ್ಲಾ ಹಣ ಉಳ್ಳವರು ತಮ್ಮ ಹಣದ ಥೈಲಿಯನ್ನು ಇನ್ನೂ ಭಾರಗೊಳಿಸುವ ಕೆಲಸ ಮಾಡುತ್ತಿವೆ ’ ಅನ್ನೋ ನಾಗೇಶ್ ಹೆಗಡೆಯವರ ಆರೋಪಕ್ಕೆ ಪುಷ್ಟಿ ನೀಡುವಂಥ ಕೆಲಸ ಮಾಡುತ್ತಿರುವವನು.ಹೆಗ್ಡೆಯವರ ಮಾತಿನಿಂದಾಗಿ ಒಮ್ಮೆ ಹೆಗಲು ಮುಟ್ಟಿ ನೋಡಿಕೊಳ್ಳುವಂತಾಗಿದೆ.

ಆದರೆ ಸಧ್ಯ ಜಾಸ್ತಿ ಹೊತ್ತು ನಾಗೇಶ್ ಹೆಗಡೆಯವರ ಜೊತೆ ಮಾತಾಡಿಲ್ಲವಾದ್ದರಿಂದ ನಾನಿನ್ನೂ ನನ್ನ ಅಭಿಪ್ರಾಯಗಳಿಂದಲೇ ಬದುಕಬಹುದಾಗಿದೆ.
ನಮಗೆ ಯಾವ ರೀತಿಯ ವಿಜ್ಞಾನ ಬೇಕು ,ಯಾವ ರೀತಿಯ ತಂತ್ರಜ್ಞಾನ ಬೇಕು ಅನ್ನೋದು ತುಂಬಾ ಚರ್ಚಾಸ್ಪದ ವಿಷಯ.ಹೆಗ್ಡೆಯವರು ತುಂಬಾ ಚೆನ್ನಾಗಿ ಒಂದು ಉದಾಹರಣೆ ಕೊಟ್ರು. ’ ನಮಗೆ ಪ್ಲ್ಯಾಸ್ಟಿಕ್ ಬೇಡ - ಈ ಭೂಮಿಯಲ್ಲಿ ಸುಲಭವಾಗಿ ಕರಗುವಂಥ ಪ್ಲ್ಯಾಸ್ಟಿಕ್ ಬೇಕು. ನ್ಯಾನೋ ಕಾರ್ ಬೇಡ, ನ್ಯಾನೋ ಕಾರ್ ನಷ್ಟೆ ಚೆನ್ನಾಗಿರುವ ಪರಿಸರ ಸ್ನೇಹಿ ನ್ಯಾನೋ ಬಸ್ ಬೇಕು .ಆದರೆ ಬಸ್ ನಿಂದಾಗಿ ಜಾಸ್ತಿ ಹಣ ಗಳಿಸೋಕಾಗಲ್ಲ ಅನ್ನೋ ಕಾರಣಕ್ಕೆ ಕಂಪೆನಿಯವರು ನ್ಯಾನೋ ಕಾರ್ ಮಾಡ್ತಾರೆ ವಿನಃ ಬಸ್ ಅಲ್ಲ ’ ಅಂತ.ತುಂಬಾನೇ ನಿಜ ಅಲ್ವಾ ಇದು?

ನನಗೂ ಪದೇ ಪದೇ ಇಂಥ ಜಿಜ್ಞಾಸೆ ಮೂಡೋದುಂಟು. ನಮಗೆ ಪಕ್ಕದ ಮನೆಯಲ್ಲಿರೋ ಸುರೇಶನ ಹತ್ತಿರ ಮಾತಾಡೋ ಅಷ್ಟು ವ್ಯವಧಾನ ಇಲ್ಲ .ಆದರೆ ದೂರದಲ್ಲಿರೋ ಯಾವನೋ ಅಪರಿಚಿತನ ಜೊತೆ ಯಾಹೂ ಚಾಟ್, ಆರ್ಕುಟ್ ಚಾಟ್ ಮಾಡೋದು ಇಷ್ಟ ! ಇಲ್ಲೇ ಮಲ್ಲೇಶ್ವರಂ ಮೈದಾನದಲ್ಲಿ ಆಗೋ ಕ್ರಿಕೆಟ್ ಮ್ಯಾಚ್ ನೋಡೋದಿಕ್ಕೆ ನಾವು ಮನೆ ಬಿಟ್ಟು ಹೊರ ಬರಲ್ಲ ಆದ್ರೆ ದೂರದ ಸೌತ್ ಆಫ್ರಿಕಾದಲ್ಲಿ ನಡೆಯೋ ಮ್ಯಾಚ್ ನ ಲೈವ್ ನೋಡೋದಿಕ್ಕೆ ಎಲ್ಲಿಲ್ಲದ ಉತ್ಸಾಹ!ದೂರದ ಪಾರ್ಕ್ ಗೆ ಬೈಕ್ ನಲ್ಲಿ ಹೋಗಿ ಅಲ್ಲಿ ವಾಕಿಂಗ್ ಮಾಡೋ ಜನ ನಾವು !ಸ್ವಂತದ ಬಟ್ಟೆ ಕೈಯಲ್ಲಿ ಒಗೆಯಲಾಗದೆ ಬೊಜ್ಜು ಬೆಳೆಸಿ ಆಮೇಲೆ ಟ್ರೇಡ್ ಮಿಲ್ ನಲ್ಲಿ ಕಿಲೋಮೀಟರ್ಗಳಷ್ಟು ದೂರ ವಾಕಿಂಗ್ ಮಾಡೋ ಜನ ನಾವು!

ನಮಗೆ ತಂತ್ರಜ್ಞಾನ ಬೇಕಿದೆ ಆದರೆ ಯಾತಕ್ಕೆ ಅನ್ನೋ ಪ್ರಶ್ನೆಗೆ ಉತ್ತರ ನಮ್ಮ ಬಳಿ ಇಲ್ಲ!ನಮಗೆ ವಿಜ್ಞಾನ ಬೇಕಾಗಿದೆ ಹೇಗೆ ಅನ್ನೋ ಪ್ರಶ್ನೆಗೆ ಉತ್ತರವಿಲ್ಲ !

ಭಾರತದಲ್ಲಿ ವೈಜ್ಞಾನಿಕ ಬರಹಗಳೇಕೆ ಅಷ್ಟು ಬರುತ್ತಿಲ್ಲ.ವಿದ್ಯಾರ್ಥಿಗಳ್ಯಾಕೆ ವಿಜ್ಞಾನದ ಕಲಿಕೆಗೆ ಆಸಕ್ತಿ ತೋರುತ್ತಿಲ್ಲ ಅನ್ನೋ ವಿಷಯದ ಬಗ್ಗೆಯೂ ಅಲ್ಲಿ ಚರ್ಚೆ ನಡೆಯಿತು.ಅದೃಷ್ಟವಶಾತ್ ಹಾಲ್ದೋಡ್ಡೇರಿ ಸುಧೀಂದ್ರ ಅಲ್ಲಿದ್ದರಿಂದ ಅದಕ್ಕೆ ಸಮರ್ಪಕ ಉತ್ತರ ದೊರೆಯಿತು.

ಪ್ರತಿಭಾ ಪಲಾಯನದ ಬಗೆಯೂ ಪ್ರಸ್ತಾವವಾದರೂ ಅದರ ಬಗ್ಗೆ ಹೆಚ್ಚಿನ ಚರ್ಚೆ ನಡೆಯಲಿಲ್ಲ.ವೈಯುಕ್ತಿಕವಾಗಿ ಪ್ರತಿಭಾ ಪಲಾಯನದ ಬಗ್ಗೆ ನನ್ನ ನಿಲುವೇ ಬೇರೆ .ಮಂಗಳೂರಿನಿಂದ ನಾನು ಬೆಂಗಳೂರಿಗೆ ಬಂದರೆ ಅದು ಹೊಟ್ಟೆ ಪಾಡು !ಆದರೆ ಪಾಪ ಯಾರೋ ಹೊಟ್ಟೆಪಾಡಿಗೆ ಅಮೆರಿಕಾಗೆ ಹೋದರೆ ಅದನ್ಯಾಕೆ ಪ್ರತಿಭಾ ಪಲಾಯನ ಅಂತಾರೋ ದೇವರಿಗೇ ಗೊತ್ತು.ಆದರೆ ಇಂಥ ವಿಷಯಗಳ ಹಣೆಬರಹವೇ ಇಷ್ಟು.ಎಲ್ಲಾ ಅವರವರ ಭಾವಕ್ಕೆ.

ಬಹಳ ದಿನಗಳ ನಂತರ ಹಾಸ್ಯ ಬಿಟ್ಟು ಗಂಭೀರವಾದ ಚಿಂತನೆಗೆ ತೊಡಗಿದ್ದಲ್ಲಿ ಅದಕ್ಕೆ ನಾಗೇಶ್ ಹೆಗಡೆಯವರೇ ನೇರ ಹೊಣೆ!

Sunday, May 24, 2009

ಚಿಟ್ಟೆ ಹೆಜ್ಜೆ ಜಾಡು....



ಕನ್ನಡ ಸಾಹಿತ್ಯ ಲೋಕಕ್ಕೊಂದು ಕಾದಂಬರಿಯ ಸೇರ್ಪಡೆಯಾಗಿದೆ .ಹಾಗೆಯೇ ಕನ್ನಡಕ್ಕೊಂದು ಹೊಸ ’ಟಂಗ್ ಟ್ವಿಸ್ಟರ್ ’ ಕೂಡಾ!
ಜೋಗಿಯವರ ಹೊಸ ಕಾದಂಬರಿ ’ಚಿಟ್ಟೆ ಹೆಜ್ಜೆ ಜಾಡು ’ ಇವತ್ತು ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಕಾದಂಬರಿಯ ಹೆಸರೇ ತುಂಬಾ ಆಕರ್ಷಕವಾಗಿದೆ ,ಹಾಗೇ ಅದೊಂದು ರೀತಿಯ ಟಂಗ್ ಟ್ವಿಸ್ಟರ್ ಕೂಡಾ! ನೀವು ಬಿಡದೆ ಕಾದಂಬರಿಯ ಹೆಸರನ್ನು ಹತ್ತು ಬಾರಿ ಹೇಳಿ ನೋಡಿ.ಒಂದೋ ಅದು ’ಚಿಟ್ಟೆ ಹೆಜ್ಜೆಯ ಹಾಡು ’ ಆಗುತ್ತೆ(ಈ ಸಾಧ್ಯತೆ ಹೆಚ್ಚು) ಅಥವಾ ’ಚಿಟ್ಟೆ ಜೆಜ್ಜೆ ಜಾಡು ’ ಆಗುತ್ತೆ(ಸಾಧ್ಯತೆ ಕಮ್ಮಿ ಆದರೂ ಅಲ್ಲಗಳೆಯುವ ಹಾಗಿಲ್ಲ!).ಇದ್ಯಾವುದೂ ಆಗದೇ ನೀವು ಹತ್ತು ಬಾರಿಯೂ ’ಚಿಟ್ಟೆ ಹೆಜ್ಜೆ ಜಾಡು ’ ಅಂತ ಸರಿಯಾಗಿ ಹೇಳಿದರೆ ನಿಮಗೆ ಕಾದಂಬರಿಯ ಒಂದು ಪ್ರತಿಯನ್ನು ಬಹುಮಾನವಾಗಿ ಕಳಿಸಿಕೊಡಲಾಗುತ್ತದೆ !(ರೂ.80ರ ಚೆಕ್ ಅನ್ನು ಅಂಕಿತ ಪ್ರಕಾಶನದ ಹೆಸರಲ್ಲಿ ಪ್ರಕಾಶ್ ಕಂಬತ್ತಳ್ಳಿಯವರಿಗೆ ಕಳಿಸಿದರಾಯಿತು ಅಷ್ಟೇ!)

ತೋಚಿದ್ದೆಲ್ಲಾ ಬ್ಲಾಗಿಗೆ ಬರೆಯುತ್ತಾನೆ ಕ್ಷೌರವನ್ನೂ,ಮೊದಲ ರಾತ್ರಿಯನ್ನೂ ಕೂಡಾ ಬಿಡಲ್ಲ ಅನ್ನೋ ಗಂಭೀರ ಆರೋಪ ನನ್ನ ಮೇಲಿದೆ !ಆದರೆ ಇಂಥ ಕಾರ್ಯಕ್ರಮದ ಬಗ್ಗೆ ನಾನು ಬರೆಯೋದು ಸುನಾಥ್ ಜಿಯಂಥ ಪ್ರೀತಿಯ ಓದುಗರಿಗೆ .ದೂರದ ಊರಲ್ಲಿದ್ದು ನನ್ನಂಥವರ ಬ್ಲಾಗ್ ಬರಹದ ಮೂಲಕ ಕಾರ್ಯಕ್ರಮದ ಬಗ್ಗೆ ಕಿಂಚಿತ್ ವಿವರ ತಿಳಿದುಕೊಳ್ಳುವ ಆಸಕ್ತಿ ಇರುವವರಿಗೆ ಅಷ್ಟೇ.

ಇತ್ತೀಚೆಗೆ ಪುಸ್ತಕ ಬಿಡುಗಡೆಯ ಕಾರ್ಯಕ್ರಮಗಳಿಗೆ ಜನರಂತೂ ಕಿಕ್ಕಿರಿದು ತುಂಬಿರ್ತಾರೆ.ಕಾರ್ಯಕ್ರಮ ಮುಗಿದ ನಂತರ ಜನ ಮುಗಿಬಿದ್ದು ಪುಸ್ತಕ ತಗೊಳ್ಳೋದು ಅಷ್ಟೇ ನಿಜ !ಆದರೆ ಕಾರ್ಯಕ್ರಮ ಮುಗಿದ ನಂತರದ ದಿನಗಳಲ್ಲಿ ಪಾಪ ’ಪ್ರಕಾಶ’ಕರು ಪುಸ್ತಕಗಳನ್ನು ಮಾರಲು ಅದೆಷ್ಟು ಕಷ್ಟ ಪಡ್ತಾರೋ ಆ ದೇವರೇ ಬಲ್ಲ.ಆದರೆ ಇಂಥಾ ಸಮಾರಂಭ ನೋಡಿದ ಮೇಲೆ ,ಕನ್ನಡ ಪುಸ್ತಕಗಳಿಗೆ ಮಾರುಕಟ್ಟೆಯಿಲ್ಲ ಅನ್ನೋ ಅಪವಾದ ಕಿಂಚಿತ್ ಕಮ್ಮಿ ಆಗ್ತಾ ಇದೆ ಅನ್ನೋ ಅನಿಸಿಕೆ ನನ್ನದು .
ನಾನೂ ಅಷ್ಟೆ ಓದ್ತೀನೋ ಬಿಡ್ತೀನೋ ಪುಸ್ತಕ ತಗೊಳ್ಳೋದು ಬಿಟ್ಟಿಲ್ಲ.

ಇವತ್ತಿನ ಕಾರ್ಯಕ್ರಮದಲ್ಲಿ ನನಗೆ ಖುಷಿ ಕೊಟ್ಟಿದ್ದು ಜೋಗಿ ಗೆಳೆಯ ಕುಂಟಿನಿಯವರ ಮಾತುಗಳು.ಯಾಕೋ ನನಗೆ ಹಾಸ್ಯ ಪ್ರಜ್ಞೆಯುಳ್ಳವರ ಮಾತುಗಳನ್ನು ಕೇಳೋದು ತುಂಬಾ ಖುಷಿ ಕೊಡುತ್ತೆ.ಮಂಗಳೂರಿನ ಟ್ರೇಡ್ ಮಾರ್ಕ್ ಆದ ಹಾಸ್ಯ ಪ್ರಜ್ಞೆಯನ್ನು ತಮ್ಮ ಮಾತಿನುದ್ದಕ್ಕೂ ಕುಂಟಿನಿಯವರು ತೋರಿಸಿದರು.ಈ ಮೂಲಕ ಅವರೇ ಹೇಳುವಂತೆ ಜೋಗಿಯ ಮಾನ ಹರಾಜಿಗೆ ಹಾಕಿದರು !

ಜೋಗಿಯ ಬಾಲ್ಯದ ಗೆಳೆಯ ಕುಂಟಿನಿ ಸಹಜವಾಗಿಯೇ ಕೆಲವು ’ಮಂಗಳೂರಿನ ಭಾಗದ ರಹಸ್ಯ ರಾತ್ರಿ’ಯ ಕಥೆಗಳನ್ನು ಬಹಿರಂಗಗೊಳಿಸಿದರು.ಜೋಗಿಯ ತುಂಟತನ ,ಅವರ ಅನ್ಯೋನ್ಯ ಸ್ನೇಹ,ಬಾಲ್ಯದ ನೆನಪುಗಳು ಸರಾಗವಾಗಿ ಹರಿದು ಬಂದವು ಕುಂಟಿನಿಯವರ ಮಾತಿನಲ್ಲಿ.

ಅವರು ಬಯಲುಗೊಳಿಸಿದ ರಹಸ್ಯಗಳಲ್ಲಿ ನನಗೆ ತುಂಬಾ ಖುಶಿ ಕೊಟ್ಟಿದ್ದು ಜೋಗಿಯವ ಪ್ರೇಮಾಂಕುರದ ರಹಸ್ಯ!ಕಾಲೇಜಿನ ಸಮಯದಲ್ಲಿ ಯಾವುದೋ ಒಂದು ಪಠ್ಯವಾಗಿದ್ದ ಇಂಗ್ಲೀಷ್ ಕಾದಂಬರಿ ಗೆಳತಿ ಜ್ಯೋತಿಯವರಿಗೆ ಅರ್ಥವಾಗಿಲ್ಲ ಅನ್ನೋ ಕಾರಣಕ್ಕೆ ಜೋಗಿಯವರು ಎರಡೇ ದಿನದಲ್ಲಿ ಅದನ್ನು ಕನ್ನಡಕ್ಕೆ ಅನುವಾದ ಮಾಡಿದ್ದೇ ಗಿರೀಶ್ ರಾವ್ ಜೋಗಿ ಆಗೋದಕ್ಕೆ ಮೊದಲ ಕಾರಣ ಅನ್ನೋ ರಹಸ್ಯವನ್ನು ಕುಂಟಿನಿಯವರು ಬಯಲು ಮಾಡಿದರು.ಜೋಗಿಯವರ ಬರವಣಿಗೆಯ ದೈತ್ಯ ಶಕ್ತಿಯನ್ನು ನಾವು ಇದನ್ನು ಕೇಳಿಯೇ ಕಲ್ಪಿಸಬಹುದು.

ಆದರೆ ಪಾಪ ಕುಂಟಿನಿಯವರಿಗೆ ಬೆಂಗಳೂರಿನ ಯಾವನೋ ಆಸಾಮಿ ಸರಿಯಾಗಿ ದ್ರೋಹ ಬಗೆದಿರೋದಂತೂ ನಿಜ .ಅವರ ಮಾತುಗಳಲ್ಲಿ ಬೆಂಗಳೂರಿನ ಜನರ ಆಶಾಢಭೂತಿತನದ ಬಗ್ಗೆ ಅಸಮಧಾನ ಪದೇ ಪದೇ ಕಂಡು ಬರುತ್ತಿತ್ತು.ಆದರೆ ಜೋಗಿ ಹೇಳಿದ ಹಾಗೆ ’ಮಗಳನ್ನು ಗಂಡನ ಮನೆಗೆ ಕಳಿಸಿಕೊಟ್ಟಂಥ ಪರಿಸ್ಥಿಯನ್ನು ಬಹುಷ ಕುಂಟಿನಿಯವರು ಜೋಗಿಯವರನ್ನು ಬೆಂಗಳೂರಿಗೆ ಕಳಿಸಿಕೊಟ್ಟಾಗ ಅನುಭವಿಸಿರಬೇಕು .ಅದಕ್ಕೇ ಆ ರೀತಿಯ ಅಸಮಾಧಾನ ಕುಂಟಿನಿಯವರಿಗೆ.

ಮತ್ತೊಂದು ಮಜವಾದ ಘಟನೆ , ಪೇಜಾವರ ಮಠದವರು ಆಯೋಜಿಸಿದ ಪ್ರಬಂಧ ಸ್ಪರ್ಧೆಯದ್ದು ! ’ಸಮಾಜ ನಿರ್ಮಾಣದಲ್ಲಿ ಯುವಜನರ ಪಾತ್ರ’ ಅನ್ನೋ ವಿಷಯದ ಮೇಲೆ ಪ್ರಬಂಧ ಸ್ಪರ್ಧೆಗೆ ಜೋಗಿಯವರು ತಮ್ಮ ಪ್ರಬಂಧವನ್ನು ಕಳಿಸಿದ್ದರಂತೆ.ಒಂಭತ್ತನೇ ತರಗತಿಯಲ್ಲಿದ್ದ ಜೋಗಿ ಆಗ ನಲವತ್ತು ಪುಟಗಳ ಪ್ರಬಂಧ ಬರೆದಿದ್ದರಂತೆ !ಅದೂ ಪ್ರಬಂಧದ ನಡು ನಡುವೆ ಜರ್ಮನ್ ದೇಶದ ಮನಶಾಸ್ತ್ರಜ್ಞ ಈ ರೀತಿ ಬರೆದಿದ್ದಾರೆ ,ಚೈನಾದ ವಿಜ್ಞಾನಿ ಟಿಂಗ್-ಲಿ ಅನ್ನೋರು ಈ ಬಗ್ಗೆ ಈ ರೀತಿ ಬರೆದಿದ್ದಾರೆ ಅನ್ನೋ ಸುಳ್ಳು ಸುಳ್ಳೂ ವ್ಯಾಖ್ಯಾನಗಳಿಂದಲೇ ಪ್ರಬಂಧದ ತೂಕ ಹೆಚ್ಚಿ ಅದು ಪ್ರಥಮ ಬಹುಮಾನ ಪಡೆದಿದ್ದು ,ಜೋಗಿ ಹಾಗೂ ಕುಂಟಿನಿ ಆ ಬಹುಮಾನವನ್ನು ಪಡೆಯಲು ಉಡುಪಿಗೆ ಹೋಗಿದ್ದು ,ಬಹುಮಾನದ ಹಣದಲ್ಲಿ ಉಷಾ ಹೋಟೇಲಿನಲ್ಲಿ ಒಂದೊಂದು ಬಿಯರ್ ಹೊಡೆದಿದ್ದು ಹೀಗೆ ರಸವತ್ತಾದ ಅನುಭವಗಳನ್ನು ಹಂಚಿಕೊಂಡರು ಕುಂಟಿನಿ.

ಜಿ. ಎನ್ ಮೋಹನ್ ರವರು ರಿಯಾಲಿಟಿ ಶೋಗಳ ಮನಸ್ಥಿಯಲ್ಲಿ ಬದುಕುತ್ತಿರುವ ಜನರ ಬದುಕಿನಲ್ಲಿ ಸಾಹಿತ್ಯಿಕ ಔಚಿತ್ಯದ ಬಗ್ಗೆ ಮಾತಾಡಿದರು.ಯಾವಾಗಲೂ ಹಾಸ್ಯಮಯವಾಗಿ ಮಾತಾಡುವ ಮೋಹನ್ ರವರು ಈ ರಿಯಾಲಿಟಿ ಮನಸ್ಥಿತಿಯಿಂದ ನಿಜಕ್ಕೂ ತಲ್ಲಣಗೊಂಡಿದ್ದ ಹಾಗೆ ಕಾಣಿಸಿತು.

ನಾಗತಿಹಳ್ಳಿಯವರು ಅಲ್ಲೇ ಪುಸ್ತಕದ ಕಿರು ವಿಮರ್ಶೆಯನ್ನೂ ಮಾಡಿದ್ರು .ಪುಸ್ತಕದ ಬಗ್ಗೆ ಸೊಗಸಾಗಿ ಮಾತಾಡಿದ ನಾಗತಿಹಳ್ಳಿ ಅವರ ಹೊಸ ಚಿತ್ರಕ್ಕೆ ’ಒಲವೇ ಜೀವನ ಲೆಕ್ಕಾಚಾರ ’ ಅನ್ನೋ ಹೆಸರಿಟ್ಟ ಜೋಗಿಗೆ ಕೃತಜ್ಞತೆ ಸಲ್ಲಿಸಿದರು.ನಾಗತಿಹಳ್ಳಿಯವರ ವಿಮರ್ಶೆ ನಾನಿಲ್ಲಿ ಬರೆದರೆ ಅದು ಬೇರೊಂದು ಅರ್ಥ ನೀಡುವ ಅಪಾಯವಿರೋದ್ರಿಂದ ಬರೀತಾ ಇಲ್ಲ ಕ್ಷಮಿಸಿ.

ಹಂಸಲೇಖಾ ರವರೂ ಪುಸ್ತಕದ ಬಗ್ಗೆ ,ಜೋಗಿಯ ಬಗ್ಗೆ ನಾಲ್ಕು ಮೆಚ್ಚುಗೆಯ ಮಾತನ್ನಾಡಿದರು.ಅವರು ತುರ್ತಾಗಿ ಬೇರೊಂದು ಕಾರ್ಯಕ್ರಮಕ್ಕೆ ಭಾಗವಹಿಸಲು ಇದ್ದರಿಂದ ಚಿಕ್ಕದಾಗಿ ಚೊಕ್ಕದಾಗಿ ಮಾತಾಡಿ ಜೋಗಿಗೆ ಶುಭ ಕೋರಿ ಹೊರ‍ಟರು ಅವರು.

ಕೊನೆಯದಾಗಿ ಮಾತಾಡಿದ ಜೋಗಿ ಗೆಳೆಯ ಕುಂಟಿನಿಯ ಬಗ್ಗೆ ಮೆಚ್ಚುಗೆಯ ಮಾತಾಡಿದರು.ಗೆಳೆಯ ಆತಂಕ ಪಟ್ಟಷ್ಟು ಬೆಂಗಳೂರೇನೂ ತಮ್ಮನ್ನು ಬದಲಿಸಿಲ್ಲ.ತಾನು ಬೆಂಗಳೂರಿನಲ್ಲಿ ಅತ್ಯಂತ ನೆಮ್ಮದಿಯಿಂದಿದ್ದೇನೆ ಅನ್ನೋ ಮಾತನ್ನೂ ಹೇಳಿದರು ಜೋಗಿ.

ಜೋಗಿಯವರ ಬಗ್ಗೆ ಮತ್ತಷ್ಟು ಓದಬೇಕಾದಲ್ಲಿ ಸಿಂಧು ಭಟ್ ರವರ ಅಮೃತಸಿಂಧು ನೋಡಿ.ಅವರು ಜೋಗಿಯ ಕೃತಿಗಳ ಬಗ್ಗೆ ಥೀಸೀಸ್ ಬರೀತಾ ಇದ್ದಾರೆ.ಅವರಿಗೆ ಆಲ್ ದಿ ಬೆಸ್ಟ್ !

Sunday, May 17, 2009

ಕೇವಲ ನೊರೆ ಇನ್ನೇನೂ ಇಲ್ಲ .......

ಶೀರ್ಶಿಕೆ ಅರ್ಥವಾಗದವರಿಗೊಂದು quick recap!
ಪಿಯುಸಿಯಲ್ಲಿದ್ದಾಗ "Just Lather, That's All" ಅನ್ನೋ ಹೆಸರಿನ ಪಾಠ ಒಂದಿತ್ತು.ಕ್ಷೌರಿಕನೊಬ್ಬನ ಮಾನಸಿಕ ತುಮುಲವನ್ನು ಸಮರ್ಪಕವಾಗಿ ಚಿತ್ರಿಸಿದ ಪಾಠ ಅದು .ಆ ದಿನಗಳಲ್ಲಿ ತುಂಬಾ ಖುಷಿ ಕೊಟ್ಟಿತು ಆ ಪಾಠ.ನಮ್ಮ ಇಂಗ್ಲೀಷ್ ಸರ್ ದತ್ತಾತ್ರೇಯ ಅನ್ನೋರು ಬಹಳ ಅದ್ಭುತವಾಗಿ ಆ ಪಾಠ ಮಾಡಿದ್ರು .ಈಗಲೂ ಸೆಲೂನ್ ಗೆ ಹೋದಾಗ ಕ್ಷೌರಿಕ ಗಡ್ಡಕ್ಕೆ ನೊರೆ ಹಚ್ಚುವಾಗ ನನಗೆ ಆ ಕತೆ ನೆನಪಿಗೆ ಬರುತ್ತೆ.

ನಾನು ಸೆಲೂನ್ ಗೆ ಹೋದಾಗ ಮೂಲಥ ನಿರುಪದ್ರವಿ.ಯಾವುದೇ ಎಕ್ಸ್ಪೆಕ್ಟೇಶನ್ ಇಲ್ಲ ಕ್ಷೌರಿಕನಿಂದ. ಅವನು ಮೊದಲು ಏನು ಹೇಳುತ್ತಾನೆ ಅದೇ ಫೈನಲ್ ! ’ಸಾರ್ ಮೀಡಿಯಂ ಇಡ್ಲಾ ’ ಅಂದ್ರೆ ’ಹೂಂ’ ! ’ಸಾರ್ ಶಾರ್ಟ್ ಇಡ್ಲಾ’ ಅಂದ್ರೆ ಅದಕ್ಕೂ ’ಹೂಂ’ !ಸಧ್ಯ ಯಾವುದೇ ಕ್ಷೌರಿಕ ’ಸಾರ್ ಬೋಳು ಮಾಡ್ಲಾ ?’ ಅಂತ ಕೇಳಲ್ಲ.

ಚಿಕ್ಕಂದಿನಿಂದಲೇ ನನಗೆ ಈ ಅಭ್ಯಾಸ .ಕಾರಣ ಏನಂದ್ರೆ ಚಿಕ್ಕಂದಿನಲ್ಲಿ ನಮ್ಮ ಊರಲ್ಲಿ ನಾನು ಸಲೂನ್ ಗೆ ಹೋದರೆ ನಾನು ಏನೇ ಹೇಳಿದ್ರೂ ಕ್ಷೌರಿಕ ಕೇಳ್ತಾನೇ ಇರಲಿಲ್ಲ.ಕೇಳೋದಿಕ್ಕೆ ಪಾಪ ಅವನಿಗೆ ಕಿವಿ ಕೇಳಿಸ್ತಾ ಇರಲಿಲ್ಲ ಮಾತೂ ಬರ್ತಾ ಇರಲಿಲ್ಲ! ನಾನು ಹೋದ ತಕ್ಷಣ ಒಂದು ಹಲಗೆಯನ್ನು ಖುರ್ಚಿಯ ಎರಡೂ ಕೈಗಳ ಮೇಲೆ ಇಟ್ಟು ನನ್ನ ಎತ್ತಿ ಅದರ ಮೇಲೆ ಕೂರಿಸಿ ಬಟ್ಟೆ ಹೊದಿಸ್ತಾ ಇದ್ದ.
ನನಗೆ ನನ್ನ ಅಣ್ಣಂದಿರೆಲ್ಲ ಭಯ ಹುಟ್ಟಿಸಿದ್ದರು ಆಗ ,ಸರಿಯಾಗಿ ಯಾವ ಸ್ಟೈಲ್ ಬೇಕು ಅಂತ ಮೊದಲೇ ಹೇಳದಿದ್ದರೆ ತಲೆ ಬೋಳು ಮಾಡಿ ಬಿಡ್ತಾರೆ ಅಂತ!
ಆ ಭಯದಿಂದ ನಾನು ಆ ಮೂಕ ಕ್ಷೌರಿಕ ಇರದೆ ಇದ್ದ ಸಮಯ ನೋಡೀನೆ ಸಲೂನ್ ಗೆ ನುಗ್ತಾ ಇದ್ದಿದ್ದು.ಆದರೆ ನಾನು ಹೋದ ತಕ್ಷಣ ಅದೆಲ್ಲಿಂದ ಪ್ರತ್ಯಕ್ಷ ಆಗ್ತಿದ್ನೋ ಅವನು ,ನನಗೆ ಮಾತ್ರ ಯಾವಾಗ್ಲೂ ಅವನೇ ತಗುಲಿ ಹಾಕ್ಕೊಳ್ತಾ ಇದ್ದ!

ಅವನು ಒಳ್ಳೆ ಕ್ಷೌರಿಕ.ಎರಡು ಸಲ ಕತ್ತರಿ ನನ್ನ ತಲೆಯ ಮೇಲಾಡಿಸಿದರೆ ಎಂಟು ಸಲ ಗಾಳಿಯಲ್ಲೇ ಕಚ ಕಚ ಅಂತ ಕತ್ತರಿಯ ಸದ್ದು ಮಾಡ್ತಾ ಇದ್ದ.ಒಳ್ಳೆ ಸಂಗೀತದ ಹಾಗೆ ಕೇಳ್ತಾ ಇತ್ತು ಅದು.ಬಹುಷ ಅದಕ್ಕೇ ಏನೋ ನನಗೆ ಕೂತಲ್ಲೇ ನಿದ್ದೆ ಬರ್ತಾ ಇತ್ತು.ಅವನಿಗೆ ಮಾತು ಬರದಿದ್ದರಿಂದ ಭಂಗಿ ಬದಲಾಯಿಸಬೇಕಾದರೆ ಕತ್ತರಿಯ ಹಿಡಿಕೆಯಿಂದಲೇ ನನ್ನ ತಲೆಗೆ ಟಕ್ ಅಂತ ಮೊಟಕುತ್ತಿದ್ದ ಅವನು.ನಾನು ಎದ್ದ ತಕ್ಷಣ ನನ್ನ ತಲೆಯನ್ನು ಹೇಗೇಗೋ ತಿರುಗಿಸಿ ಕೆಲಸ ಮುಂದುವರೆಸುತ್ತಿದ್ದ.ನಾನು ಯಥಾ ಪ್ರಕಾರ ಮತ್ತೆ ನಿದ್ದೆಗೆ ಜಾರುತ್ತಾ ಇದ್ದೆ.ಅವನು ಮತ್ತೆ ಹೊಡೆದಾಗ ವಿಪರೀತ ಸಿಟ್ಟು ಬರ್ತಾ ಇತ್ತು ನನಗೆ. ’ ಒಮ್ಮೆ ದೊಡ್ಡವನಾಗಿ ಬಿಡಲಿ ನಿನ್ನ ಕಡೆಗೆ ಬರೋದೆ ಇಲ್ಲ .ಒಳ್ಳೆ ಸಲೂನ್ ಗೆ ಹೋಗಿ ಸಕ್ಕತ್ ಆಗಿರೋ ಹೇರ್ ಸ್ಟೈಲ್ ಮಾಡಿಸಿಕೊಳ್ತೀನಿ ’ ಅಂತ ಮನಸಿನಲ್ಲೇ ಬಯ್ಕೊಳ್ತಾ ಇದ್ದೆ .

ನಾನು ಎಷ್ಟೇ ಸನ್ನೆ ಮಾಡಿ ಅವನಿಗೆ ಹೇಳಿದ್ರೂ ಅವನು ಲಾನ್ ಮೂವರ್ ನ ಹಾಗೆ ಕೆಲಸ ಮಾಡಿ ತುಂಬಾ ಚಿಕ್ಕದಾಗಿ ಇಡ್ತಾ ಇದ್ದ ಕೂದಲನ್ನು.ಅವನ ಬಳಿ ಹೋದ್ರೆ ಒಂದು ತಿಂಗಳು ಬಾಚಣಿಗೆಗೆ ಕೆಲಸವೇ ಇರ್ತಾ ಇರ್ಲಿಲ್ಲ.ನನ್ಗೆ ಆ ಹೇರ್ ಸ್ಟೈಲ್ ಇಷ್ಟ ಇರದಿದ್ದರೂ ಬೇರೆ ದಾರಿ ಇರಲಿಲ್ಲ. ಅವನು ನನ್ನ ಮೇಲೆ ಕರುಣೆ ತೋರಿಸಿ ಏನಾದರೂ ಸ್ಟೈಲ್ ಆಗಿರೋದನ್ನು ಮಾಡಿದ್ರೆ ತಂದೆ ಹೋಗಿ ದಬಾಯಿಸ್ತಾ ಇದ್ರು ಅವನಿಗೆ.

ಒಂದು ದಿನ ಹೀಗೆ ಅವನು ಇರದ ಸಮಯ ನೋಡಿ ಸಲೂನ್ ಗೆ ನುಗ್ಗಿದ್ದೆ.ಅವನ ಬದಲು ಬೇರೆಯವರ್ಯಾರೋ ಇದ್ರು.ತುಂಬಾನೇ ಖುಷಿ ಆಯ್ತು.ಸಧ್ಯ ಬಚಾವಾದೆ ಅಂದುಕೊಂಡೆ .ಅರ್ಧ ಗಂಟೆ ಆದ್ರೂ ಅವ್ನು ಬರದೇ ಇದ್ದದ್ದು ನೋಡಿ ನನಗೆ ಕಟ್ಟಿಂಗ್ ಮಾಡೋನ ಹತ್ರ ಕೇಳಿದೆ ’ಎಲ್ಲಿ ಪೊಟ್ಟಣ್ಣ ?(ಬಾಯಿ ಬರದವ್ರಿಗೆ ತುಳುವಿನಲ್ಲಿ ಪೊಟ್ಟ ಅಂತಾರೆ)’.

ಅದಕ್ಕೆ ಅವನು ’ಪೊಟ್ಟಣ್ಣ ನಿನ್ನೆ ಸತ್ತು ಹೋದ್ರು ಇನ್ನು ಮೇಲೆ ನಾನೆ ಇಲ್ಲಿ ಕೆಲಸಕ್ಕೆ ’ ಅಂದ.

ಅವನು ಇಲ್ಲದ್ದಕ್ಕೆ ಪಟ್ಟ ಖುಷಿ ಹೆಚ್ಚು ಹೊತ್ತು ಇರಲೇ ಇಲ್ಲ !

Monday, May 11, 2009

ಪಿಯುಸಿ - ಹೆಲ್ಪ್ ಲೈನ್ !

ಪ್ರತಿ ಸಲದ ಹಾಗೆ ನಮ್ಮೂರು ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದಿದೆ -ಸಂತೋಷದ ವಿಚಾರ ! ಆದರೆ ಈ ಸಲ ಹಿಂದಿನಂತೆ ಪಿ.ಯು.ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡವರು ಆತ್ಮಹತ್ಯೆಯ ಹಾದಿ ಹಿಡಿಯದ ಹಾಗೆ ಎಚ್ಚರ ವಹಿಸಿ ನಮ್ಮ ಸರಕಾರ ವಿಶೇಷ ಹೆಲ್ಪ್ ಲೈನ್ ಗಳನ್ನು ರಚಿಸಿ ಅದರ ಬಗ್ಗೆ ಪ್ರಚಾರವನ್ನೂ ಮಾಡಿದ್ರು.

ಆ ಹೆಲ್ಪ್ ಲೈನ್ ಗೆ ಕೆಲ ಹುಡುಗಿಯರು ಕಾಲ್ ಮಾಡಿ ತಾವು ಅನುತ್ತೀರ್ಣರಾಗೋ ಭಯವನ್ನು ವ್ಯಕ್ತಪಡಿಸಿದ್ದು ಹೆಲ್ಪ್ ಲೈನ್ ನಲ್ಲಿದ್ದ ತಜ್ಞರು ತಮ್ಮ ಬುದ್ಧಿ ಉಪಯೋಗಿಸಿ ಆ ಹುಡುಗಿಯರ ಮನ ಒಲಿಸಿದ್ದೂ ಆಯಿತು !

ಇವತ್ತು ಬೆಳಿಗ್ಗೆ ಎದ್ದು ಪೇಪರ್ ನೋಡಿದ್ರೆ ಕಾದಿತ್ತು ಸುದ್ದಿ .

ಪಿ.ಯು.ಸಿ ಯಲ್ಲಿ ಮಗಳು ಫೇಲ್ ಆಗಿದ್ದಕ್ಕೆ ತಂದೆ ಆತ್ಮಹತ್ಯೆ !!!

Sunday, May 10, 2009

ಮೊದಲ ರಾತ್ರಿಯ ಅನುಭವ !

ಈ ಲೇಖನದ ಶೀರ್ಷಿಕೆಯ ಸೆಳೆತದಿಂದ ನೀವು ಬಂದಿದ್ದರೆ ಮೊದಲೇ ಒಂದು ಸ್ಪಷ್ಟೀಕರಣ ಕೊಟ್ಟು ಬಿಡುವುದು ಒಳ್ಳೆಯದು! ಇಲ್ಲಾಂದ್ರೆ ನೀವು ನನಗೆ ಹಿಡಿ ಶಾಪ ಹಾಕೋದಂತೂ ಖಚಿತ.
ಮೊದಲನೆಯದಾಗಿ ನನಗಿನ್ನೂ ಮದುವೆಯಾಗಿಲ್ಲ,ಹಾಗಾಗಿ ನನ್ನ ಮೊದಲ ರಾತ್ರಿಯ ಬಗ್ಗೆ ಬರೆದಿಲ್ಲ(ಬರೆಯೋದೂ ಇಲ್ಲ ಬಿಡಿ!).ಇನ್ನು ಬೇರೆಯವರ ಮೊದಲ ರಾತ್ರಿಯ ರೋಚಕ(!?) ಕಥೆಯನ್ನೂ ನನಗೆ ಯಾರೂ ಹೇಳಿಲ್ಲ.

ಈ ಲೇಖನದ ಶೀರ್ಶಿಕೆ ’ಮೊದಲ ರಾತ್ರಿಯ ಕೊಠಡಿಯನ್ನು ಸಿಂಗರಿಸುವ ಅನುಭವ ' ! ಯಾಕೋ ತೀರಾ ಉದ್ದ ಅನಿಸಿತು ಅದಕ್ಕೆ ಸ್ವಲ್ಪ ಶಾರ್ಟ್ ಮತ್ತೆ ಸ್ವೀಟ್ ಆಗಿ ’ಮೊದಲ ರಾತ್ರಿಯ ಅನುಭವ’ ಅಂತ ಮಾಡಿದ್ದೀನಿ.ಯಾರಿಗಾದರೂ ಬೇಜಾರಾಗಿದ್ರೆ ದಯವಿಟ್ಟು ಕ್ಷಮಿಸಿ.

ಕೆಲವು ತಿಂಗಳ ಹಿಂದೆ ನನ್ನ ಸ್ನೇಹಿತನೊಬ್ಬನ ಮದುವೆ ನಡೆದಿತ್ತು ಬೆಂಗಳೂರಿನಲ್ಲೇ.ಸ್ನೇಹಿತ ಮಂಗಳೂರಿನವನೇ ಆದರೂ ಮದುವೆ ಬೆಂಗಳೂರಿನಲ್ಲೇ ಆಗಿತ್ತು.ಹುಡುಗ ಮನೆಯವರ ಇಚ್ಛೆಗೆ ವಿರುದ್ಧವಾಗಿ ಮದುವೆ ಆಗಿದ್ದ.ಮನೆಯವರು ಬೇಸರದಿಂದಲೇ ಮದುವೆಗೆ ಒಪ್ಪಿ ಬಂದಿದ್ದರು.ಸ್ವಥ ಮದುಮಗನ ಮನೆಯವರೇ ಅಥಿತಿಗಳ ಹಾಗೆ ಸುಮ್ಮನೆ ಕೂತಿದ್ದರು ಮೂಲೆಯಲ್ಲಿ.

ಹಾಗೂ ಹೀಗೂ ಮದುವೆ ಸಾಂಗವಾಗಿ ನೆರೆವೇರಿತು ಅನ್ನಿ .ಆದ್ರೆ ಸಮಾರಂಭದ ಮಧ್ಯೆ ಸ್ನೇಹಿತ ನಮ್ಮನ್ನು ಕರೆದು ’ಏಯ್ ಬೆಡ್ ಸ್ವಲ್ಪ ರೆಡಿ ಮಾಡ್ರೋ ’ ಅಂದುಬಿಟ್ಟ.ನಾವು ಮೂರು ಜನ ಸ್ನೇಹಿತರು ಅವನ ಮನೆಗೆ ಧಾವಿಸಿದೆವು.ಅಲ್ಲಿ ಹೋಗಿ ನೋಡಿದ್ರೆ ಒಂದು ಮಂಚ ಅದರ ಮೇಲೆ ಒಂದು ಕರ್ಲಾನ್ ಮ್ಯಾಟ್ರೆಸ್ ಅಷ್ಟೇ ಇದೆ! ಒಂದು ಬೆಡ್ ಶೀಟ್ ಕೂಡಾ ಹಾಕಿರಲಿಲ್ಲ.ಮನಸ್ಸು ಪಿಚ್ಚೆನಿಸಿ ಹತ್ತಿರದಲ್ಲೇ ಇದ್ದ ಒಂದು ಅಂಗಡಿಗೆ ಹೋಗಿ ಹೊಸ ಬೆಡ್ ಶೀಟ್ ತಗೊಂಡು ಹೊದಿಸಿದೆವು.ಇನ್ನೊಬ್ಬ ಸ್ನೇಹಿತ ’ನಾನು ಮತ್ತೆ ಕಲ್ಯಾಣ ಮಂಟಪಕ್ಕೆ ಹೋಗಿ ಹೂ ತಗೊಂಡು ಬರ್ತೀನಿ ’ ಅಂತ ಹೋದ .ಹತ್ತು ನಿಮಿಷದಲ್ಲಿ ಹೂವಿನೊಂದಿಗೆ ಬಂದಿದ್ದ.’ಏನೋ ಇದು ಬರೀ ಗೊಂಡೆ ಹೂವು ತಂದಿದ್ದೀಯಾ ಬೇರೆ ಯಾವುದೂ ಇರ್ಲಿಲ್ವ ?’ ಅಂದಿದ್ದಕ್ಕೆ ’ಇಲ್ಲ ಕಣ್ರೋ ಇದೊಂದೇ ಸಿಕ್ಕಿದ್ದು ಏನ್ ಮಾಡ್ಲಿ ’ ಅಂದ .

ನಮಗೆ ತೋಚಿದ ಹಾಗೆ ಗೊಂಡೆ ಹೂವಿನ ದಳಗಳನ್ನು ಬಿಡಿಸಿ ಬಿಡಿಸಿ ಹಾಸಿಗೆಯ ಮೇಲೆ ಸುರಿದೆವು.ನಮ್ಮ ಡೆಕೋರೇಶನ್ ಮುಗಿದು ಇನ್ನೇನು ಬೀಗ ಹಾಕಿ ಮತ್ತೆ ಕಲ್ಯಾಣ ಮಂಟಪಕ್ಕೆ ಹೊರಡಬೇಕು ಅನ್ನೋ ಅಷ್ಟರಲ್ಲಿ ಮದುಮಗನ ಅಕ್ಕ ಬಂದುಬಿಟ್ರು ಅವರ ಪುಟ್ಟ ಮಗಳೊಂದಿಗೆ!

ನಾವು ’ಆಂಟಿ ನಾವೆಲ್ಲಾ ಸಿಂಗಾರ ಮಾಡಿದ್ದೀವಿ ಬನ್ನಿ ವಾಪಾಸ್ ಹೋಗೋಣ ’ ಅಂದಿದ್ದಕ್ಕೆ ’ನೋಡೋಣ ಏನ್ ಮಾಡಿದ್ದೀರಿ ’ ಅನ್ನುತ್ತಾ ಬೆಡ್ ರೂಮ್ ಗೆ ಹೋಗಿ ನೋಡಿದ್ರು.ನಾವು ಮಾಡಿದ ಸಿಂಗಾರ ನೋಡಿ ಬಿದ್ದೂ ಬಿದ್ದು ನಗತೊಡಗಿದರು ಅವರು.’ಥೂ ಯಾರಾದ್ರೂ ಗೊಂಡೆ ಹೂ ಹಾಕ್ತಾರೇನ್ರೋ ? ಪಾಪ ಅವರ ಮೈ ಇಡೀ ಕೆಟ್ಟ ವಾಸನೆ ಬರಲ್ವೇನ್ರೋ ’ ಅಂದ್ರು.

ನಾವು ’ಆಂಟಿ ನೀವು ಹಾಗೆಲ್ಲ ನಗಬೇಡಿ ನಮಗೆ ಈ ರೀತಿ ಫಸ್ಟ್ ನೈಟ್ ರೂಮ್ ಅಲಂಕಾರ ಮಾಡಿ ಅಭ್ಯಾಸ ಇಲ್ಲ ’ ಅಂದ್ವಿ ಸಿಟ್ಟಿನಿಂದ.

ಅದಕ್ಕೆ ಆಂಟಿ ’ ಓಹ್ ಹಾಗಾ ಹಾಗಿದ್ರೆ ಇರಿ ನನ್ನ ಪುಟ್ಟಿ ಆರನೇ ಕ್ಲಾಸ್ ನಲ್ಲಿ ಓದೋದು ಅವಳು ನಿಮಗೆ ಹೇಳಿ ಕೊಡ್ತಾಳೆ ಕಲ್ತು ಕೊಳ್ಳಿ ’ ಅನ್ನೋದಾ.
ಅವರ ಮಗಳೂ ’ಬನ್ನಿ ನನ್ನ ಹಿಂದೆ ’ ಅಂತ ಆರ್ಡರ್ ಕೊಟ್ಟೇ ಬಿಟ್ಲು.ಅವರು ಬರುವಾಗಲೇ ಬೇರೆ ಬೇರೆ ರೀತಿಯ ಹೂಗಳನ್ನು ತಗೊಂಡು ಬಂದಿದ್ರು .
ಪುಟ್ಟಿ ’ ಛೇ ರೋಸ್ ಇಲ್ಲಾಂದ್ರೆ ಅದು ಹೇಗೆ ಫಸ್ಟ್ ನೈಟ್ ರೂಮ್ ಆಗುತ್ತೆ ಅಷ್ಟೂ ಗೊತ್ತಿಲ್ಲ ’ ಅನ್ನುತ್ತಾ ಗುರಾಯಿಸಿದಳು ನಮ್ಮನ್ನು ನೋಡಿ.

’ಅಮ್ಮಾ ತಾಯಿ ನೀನು ಎಷ್ಟನೇ ಕ್ಲಾಸು ’ ಅಂದಿದ್ದಕ್ಕೆ ’ ಆರನೇ ಕ್ಲಾಸ್ ’ ಅಂದ್ಲು ಸೀರಿಯಸ್ ಆಗಿ .

’ಆರನೇ ಕ್ಲಾಸಾ ಮತ್ತೆ ನಿನಗೆ ಹೇಗೆ ಇದೆಲ್ಲಾ ಗೊತ್ತು?’ ಅಂದಿದ್ದಕ್ಕೆ ’ ನಾನು ನನ್ನ ಎಲ್ಲಾ ಕಸಿನ್ ಗಳ ಫಸ್ಟ್ ನೈಟ್ ಗಳಲ್ಲಿ ಬೆಡ್ ರೂಮ್ ನ ಸಿಂಗರಿಸಿದ್ದೀನಿ ಅಮ್ಮನ ಜೊತೆ ’ ಅಂದ್ಲು.

ಅದಾದ ಮೇಲೆ ಅರ್ಧ ಗಂಟೆ ಅವಳು ಬಾಸ್ ನಾವು ಅವಳ ಅಸಿಸ್ಟೆಂಟ್ ! ಅವಳ ಅಮ್ಮ ದೂರದಲ್ಲಿ ಕೂತು ಮುಸಿ ಮುಸಿ ನಗೋದು ನಮ್ಮನ್ನು ನೋಡಿ.

ಎಲ್ಲಾ ಆದ ಮೇಲೆ ನನ್ನತ್ತ ನೋಡಿ ಆ ಹುಡುಗಿ ’ ಹೋಗಿ ಒಂದು ಪ್ಯಾಕ್ ಚಾಕಲೇಟ್ ತಗೊಂಡು ಬನ್ನಿ ,ಅದು ಹಾರ್ಟ್ ಶೇಪ್ ಚಾಕಲೇಟೇ ಆಗಿರ್ಬೇಕು ’ ಅಂತ ಆರ್ಡರ್ ಕೊಟ್ಟಳು .

ಅವಳ ಆಜ್ಞೆಯನ್ನು ಶಿರಸಾವಹಿಸಿ ಎಲ್ಲೋ ಹೋಗಿ ಚಾಕಲೇಟ್ ತಂದಿದ್ದೂ ಆಯ್ತು.

ಚಾಕಲೇಟ್ನ ಹಣ್ಣುಗಳ ಜೊತೆ ಒಂದು ಚಿಕ್ಕ ಟೇಬಲ್ ಮೇಲಿಟ್ಟು ಅದರ ಪಕ್ಕದಲ್ಲೇ ಒಂದು ಅಗರ ಬತ್ತಿ ಹೊತ್ತಿಸಿಟ್ಟಳು ’ಬನ್ನಿ ಹೊರಗೆ ಹೋಗೋಣ ರೂಮ್ ತುಂಬಾ ಈಗ ಅಗರಬತ್ತಿ ಸುವಾಸನೆ ತುಂಬಿರುತ್ತೆ ,ಯಾರೂ ಬಾಗಿಲು ತೆಗೆಯಬೇಡಿ ’ ಅನ್ನುತ್ತಾ ನಮ್ಮನ್ನೆಲ್ಲಾ ಹೊರಗೆ ಎಳೆದುಕೊಂಡು ಹೋದಳು.
ಹೊರಗೆ ಕೂತಿದ್ದ ಅವಳ ಅಮ್ಮ ’ ಏನು ಅನುಭವ ಇಲ್ಲ ಅಂದ್ರಲ್ಲ ? ನಮ್ಮ ಪುಟ್ಟಿ ನೋಡಿ ಎಷ್ಟು ಚೆನ್ನಾಗಿ ಮಾಡಿದ್ಲು ? ’ ಅನ್ನುತ್ತಾ ಪುಟ್ಟಿಯ ಹಣೆಗೊಂದು ಮುತ್ತು ಕೊಟ್ಟಳು ಆಂಟಿ !

ಅಮ್ಮ-ಮಗಳ ಫ್ರೆಂಡ್ ಶಿಪ್ ನೋಡಿ ತುಂಬಾ ಖುಷಿಯಾಗಿತ್ತು ಆ ದಿನ .ಇವತ್ತು ಅಮ್ಮಂದಿರ ದಿನದಂದು ಅವರ ನೆನಪಾಯ್ತು!

Wednesday, May 6, 2009

ರೈಟ್ ಪೋಯಿ....

ಕಳೆದ ವಾರಾಂತ್ಯದಲ್ಲಿ ಮಂಗಳೂರಿನಲ್ಲಿದ್ದೆ.ಧರ್ಮಸ್ಥಳ ಗಲಬೆಯಲ್ಲಿ ನನ್ನದೇನೂ ಕೈವಾಡವಿಲ್ಲ ಸ್ವಾಮಿ ,ನಾನು ಹೋಗಿದ್ದು ಗೆಳೆಯನ ಮದುವೆಗೆ!

ಮಂಗಳೂರಿನಲ್ಲಿದ್ದಷ್ಟೂ ದಿನ ನನಗೆ ಬಹಳಷ್ಟು ಖುಷಿ ಕೊಡೋದು ಅಲ್ಲಿನ ಬಸ್ ಪ್ರಯಾಣ !ಯಾರಾದ್ರೂ ’ಎಷ್ಟು ಘಂಟೆಗೆ ಸಿಗುತ್ತೀರಾ ?’ ಅನ್ನೋ ಪ್ರಶ್ನೆ ಕೇಳಿದ್ರೆ ಇಂತಿಷ್ಟೇ ಘಂಟೆಗೆ ಅಲ್ಲಿರುತ್ತೇನೆ ಅಂತ ಖಚಿತವಾಗಿ ಹೇಳಲು ಸಾಧ್ಯವಾಗೋದು ಬಹುಷಃ ಮಂಗಳೂರಿನಲ್ಲಿ ಮಾತ್ರ.
ಬಸ್ ಸ್ಟ್ಯಾಂಡ್ ನಲ್ಲಿ ನಿಂತಿರೋ ವ್ಯಕ್ತಿಯ ಬಳಿ ಸುಮ್ಮನೆ ’ಸುರತ್ಕಲ್ ಗೆ ಬಸ್ ಎಷ್ಟು ಘಂಟೆಗೆ ?’ ಅಂತ ಕೇಳಿ ನೋಡೀದ್ರೆ ’8.35 ಕ್ಕೆ ಗಣೇಶ್ ಪ್ರಸಾದ್ 8.45 ಕ್ಕೆ ದುರ್ಗಾಂಬಾ ,8.58 ಕ್ಕೆ ನವದುರ್ಗಾ ಹೀಗೆ ನೀವು ನಿಲ್ಲಿಸಿ ಅನ್ನೋ ತನಕ ಅವನ ಲಿಸ್ಟು ಮುಂದುವರೆಯುತ್ತದೆ.

ಆ ಬಸ್ಸುಗಳೂ ಹರಕೆ ಹೊತ್ತವರ ಹಾಗೆ ಅದೇ ಸಮಯಕ್ಕೆ ಬಂದೂ ಬಿಡುತ್ತವೆ .

ಈಗಂತೂ ಪ್ರತಿ ಬಸ್ ಸ್ಟ್ಯಾಂಡ್ ನಲ್ಲಿ ಟೈಂ ಕೀಪರ್ ಗಳ ಹಾವಳಿ ಬೇರೆ.ಹಿಂದೆ ಒಂದು ಬಸ್ ಏನಾದ್ರೂ ಒಂದೆರಡು ನಿಮಿಷ ಹೆಚ್ಚಿನ ಕಾಲ ಬಸ್ ಸ್ಟ್ಯಾಂಡ್ ನಲ್ಲಿ ನಿಂತು ಪ್ರಯಾಣಿಕರನ್ನು ಸೆಳೆಯಲು ಪ್ರಯತ್ನ ಮಾಡ್ತಾ ಇದ್ರೆ ಹಿಂದಿನಿಂದ ಬರುವ ಮತ್ತೊಂದು ಬಸ್ಸಿನವ ಮೊದಲ ಬಸ್ಸಿನವನ ಕೊರಳ ಪಟ್ಟಿ ಹಿಡಿದು ಜಗಳಕ್ಕೇ ನಿಲ್ಲುತ್ತಿದ್ದ.ಇದನ್ನು ತಪ್ಪಿಸಲೆಂದೇ ಈಗ ಟೈಂ ಕೀಪರ್ ಗಳನ್ನು ಇರಿಸಲಾಗಿದೆ.

ಮಂಗಳೂರಿನ ಬಸ್ಸುಗಳೀಗ ವಿಡೀಯೋ ಕೋಚ್ ಗಳಾಗಿವೆ.ಬಸ್ ಹತ್ತಿ ಒಂದೆರಡು ಸೀನ್ ನೋಡುವಷ್ಟರಲ್ಲೇ ನಮ್ಮ ಸ್ಟಾಪ್ ಬಂದಿರುತ್ತೆ ಅಲ್ಲಿ ಅದ್ಯಾವ ಮನರಂಜನೆಗೆ ವಿಡಿಯೋ ಹಾಕುತ್ತಾರೋ ದೇವರಿಗೇ ಗೊತ್ತು.ಮೂಲ್ಕಿಯಿಂದ ಉಡುಪಿಗೆ ಅರ್ಧ ಗಂಟೆಯ ಪ್ರಯಾಣ .ಅಂಥ ಸಮಯದಲ್ಲಿ ವಿಡಿಯೋ ಸ್ವಲ್ಪ ಮನರಂಜನೆ ಕೊಡುತ್ತೆ ಅಂತ ಅಂದುಕೊಂಡ್ರೆ ಅದು ನಿಮ್ಮ ತಪ್ಪು !
ಮೊನ್ನೆ ಹಾಗೇ ಆಯ್ತು.’ದಾಸ’ ಸಿನೆಮಾ ಹಾಕಿದ್ದರು ಬಸ್ ನಲ್ಲಿ, ಒಳ್ಳೆ ಇಂಟರೆಸ್ಟಿಂಗ್ ಸೀನ್ ಬರುವಾಗಲೇ ನನ್ನ ಸ್ಟಾಪ್ ಬರೋದಾ! ಆಗಿದ್ದಾಗಲಿ ಅಂದುಕೊಂಡು ಸೀನ್ ಮುಗಿದ ಮೇಲೇನೆ ನಾನು ಮುಂದಿನ ಸ್ಟಾಪ್ ನಲ್ಲಿ ಇಳಿದದ್ದು.ಸಧ್ಯ ಕಂಡಕ್ಟರ್ ಗೆ ಗೊತ್ತಾಗಲಿಲ್ಲ,ಇಲ್ಲಾಂದ್ರೆ ಮಂಗಳಾರತಿ ಗ್ಯಾರಂಟಿ.

ಶಾಲೆಗೆ ಹೋಗುತ್ತಿದ್ದಾಗ ಐದು ನಿಮಿಷಕ್ಕೊಂದು ಬಸ್ ಇದ್ದರೂ ದಿನಾ ಒಂದೇ ಬಸ್ ನಲ್ಲಿ ಹೋಗುತ್ತಿದ್ದೆ ನಾನು.ಬಹುತೇಕ ಮಂಗಳೂರಿನ ಎಲ್ಲರೂ ಹೀಗೆ ’ಏಕ ಬಸ್ ವೃತರು’.ಶಾಲೆಗೆ,ಕೆಲಸಕ್ಕೆ ಹೋಗುವ ಎಲ್ಲರೂ ಯಾವುದಾದರೂ ಒಂದೇ ಬಸ್ ನಲ್ಲಿ ಹೋಗುವ ಅಭ್ಯಾಸ ಮಾಡಿಕೊಂಡಿರುತ್ತಾರೆ.

ನನ್ನ ಬಸ್ ಬೆಳಿಗ್ಗೆ 8.35ಕ್ಕೆ .ಮನೆಯಿಂದ ಕಾಲು ಹೊರಕ್ಕಿಟ್ಟರೆ ಅಲ್ಲೇ ಬಸ್ ಸ್ಟಾಪ್ .ಆದರೂ ನಾನು ಮಾತ್ರ ಎಂಟು ಘಂಟೆಗೇ ಹೋಗಿ ಬಸ್ ಸ್ಟಾಪ್ ನಲ್ಲಿ ಕೂರುತ್ತಿದ್ದೆ.ಎಂಟು ಘಂಟೆಯಿಂದ 8.35 ರ ತನಕ ಬರುವ ಎಲ್ಲಾ ಬಸ್ ನಲ್ಲಿ ,ಕಿಟಕಿಯ ಪಕ್ಕ ಕುಳಿತುಕೊಳ್ಳುವ ಹುಡುಗಿಯರು ಅಕಸ್ಮಾತ್ ಆಗಿ ತಲೆ ಹೊರ ಹಾಕಿ ನಕ್ಕರೆ ಅದು ’ನನ್ನನ್ನೇ ನೋಡಿ ನಕ್ಕಿದ್ದು ’ ಅಂತ ಸುಳ್ಳು ಸುಳ್ಳೇ ಸಂಭ್ರಮಿಸುತ್ತಿದ್ದೆ!

ಕಾಲೇಜು ದಿನಗಳಲ್ಲಂತೂ ಶಿಲ್ಪಾ ಸಿಗುತ್ತಾಳೆ ಅನ್ನೋ ಒಂದೇ ಒಂದು ಕಾರಣಕ್ಕೆ ಮೂರು ವರ್ಷ ಒಂದೇ ಬಸ್ ನಲ್ಲಿ ಪ್ರಯಾಣಿಸಿದ್ದೆ.ಆ ಶಿಲ್ಪಾ ಈಗ ಯಾವ ಮನೆಯ ಅಂದವನ್ನು ಹೆಚ್ಚಿಸಿದ್ದಾಳೋ ದೇವರಿಗೇ ಗೊತ್ತು !

ಕಾಲೇಜಿನಲ್ಲಿರುವಾಗ ಕೂರಲು ಸೀಟ್ ಇದ್ದರೂ ಫುಟ್ ಬೋರ್ಡ್ ನಲ್ಲಿ ನೇತಾಡಿಕೊಂಡು ಹೋಗೋದು ನಮ್ಮೆಲ್ಲರ ಹವ್ಯಾಸ.ಹೀಗೇ ಹೋದರೇನೆ ಹುಡುಗಿಯರ ಮುಂದೆ ನಾವೆಲ್ಲಾ ಮ್ಯಾಚೋಮ್ಯಾನ್ ಗಳಾಗಿ ಕಾಣಿಸೋದು ಅನ್ನೊ ಭಾವನೆ ಇತ್ತು ನಮಗೆ.ಅವತ್ತಿಗೆ AXN TV ಇರಲಿಲ್ಲ ಇದ್ದಿದ್ದರೆ ನಮ್ಮ ಸಾಹಸ ಪುಟಗೋಸಿ ಅನ್ನೋದು ಆವಾಗಲೇ ತಿಳಿಯುತ್ತಿತ್ತು ಬಹುಷ !

ಚಿಕ್ಕಂದಿನಲ್ಲಿ ನಮ್ಮನ್ನೆಲ್ಲಾ ಬೆರಗು ಮೂಡಿಸುತ್ತಿದ್ದ ವಿಷಯ ಅಂದ್ರೆ ಹತ್ತಾರು ಊರುಗಳ ಹೆಸರನ್ನು ಕಂಡಕ್ಟರ್ ಸಹಸ್ರನಾಮದ ಹಾಗೆ ಹೇಳುತ್ತಿದ್ದದ್ದು !

ಕಾಪು,ಎರ್ಮಾಳ್,ಉಚ್ಚಿಲ,ಪಡುಬಿದ್ರಿ,ಹೆಜಮಾಡಿ,ಮುಲ್ಕಿ,ಕಾರ್ನಾಡ್,ಕೊಲ್ನಾಡ್,ಮುಕ್ಕ,ಹಳೆಯಂಗಡಿ,ಸುರತ್ಕಲ್ ಹೀಗೆ ಉದ್ದಕ್ಕೆ ನಾನ್ ಸ್ಟಾಪ್ ಆಗಿ ಊರಿನ ಹೆಸರು ಹೇಳಿ ಜನರೆಲ್ಲ ಹತ್ತಿದ ಮೇಲೆ ಬಾಯಿಗೆ ಒಂದೇ ಒಂದು ಬೆರಳು ತೂರಿಸಿ ಸೀಟಿ ಊದಿ ರೈಟ್ ಪೋಯಿ ಅನ್ನೋದನ್ನು
ಬಲು ಮಜ ಕೊಡುತ್ತಿತ್ತು .

ಬಾಲ್ಯದಲ್ಲಂತೂ ಯಾವ ಹುಡುಗನನ್ನೂ ’ನೀನು ದೊಡ್ಡವನಾದ ಮೆಲೆ ಏನಾಗ್ತೀಯ?’ ಅಂತ ಕೇಳಿದ್ರೆ ’ಡ್ರೈವರ್ ’ ಅನ್ನೋ ಉತ್ತರ ಸಿಗುತ್ತಿತ್ತು.

’ಯಮಲೋಕದ ದರ್ಶನವನ್ನೇ ಮಾಡಿಸುತ್ತಾರೆ ’ ಅನ್ನೋ ಆರೋಪ ಒಂದು ಬಿಟ್ಟರೆ ಮಂಗಳೂರಿನ ಬಸ್ಸುಗಳಲ್ಲಿ ಪ್ರಯಾಣಿಸೋದೆ ಒಂದು ಮಜಾ.