Sunday, February 14, 2010

ಸಂಸ್ಕೃತಿ ,ಸಭ್ಯತೆ....

ವ್ಯಾಲೆಂಟೈನ್ಸ್ ದಿನದ ಆಚರಣೆಯ ಪರ ವಿರೋಧದ ಚರ್ಚೆಯನ್ನು ನೋಡುತ್ತಾ ಇದ್ರೆ ತಲೆ ಕೆಟ್ಟೇ ಹೋಯ್ತು!ವ್ಯಾಲೆಂಟೈನ್ಸ್ ದಿನದ ಆಚರಣೆ ನಮ್ಮ ಭಾರತೀಯ ಸಂಸ್ಕೃತಿ ಅಲ್ಲ ಅನ್ನೋದು ತಡವಾಗಿ ಜನರ ಗಮನಕ್ಕೆ ಬಂದ ಹಾಗಿದೆ.ವ್ಯಾಲೆಂಟೈನ್ಸ್ ದಿನದಂಥ ಕ್ಷುಲ್ಲಕ ವಿಷಯದ ಬಗ್ಗೆ ತಲೆ ಕೆಡಿಸಿಕೊಳ್ಳೋದಕ್ಕಿಂತ ನೈಸ್ ರೋಡ್ ನಿಂದಾಗಿ ರೈತರಿಗಾದ ಅನ್ಯಾಯದ ಬಗ್ಗೆ ದನಿ ಎತ್ತಿದ್ರೆ ಯಾರಿಗಾದ್ರೂ ಅಲ್ಪ ಸ್ವಲ್ಪ ಸಹಾಯವಾದ್ರೂ ಅಗ್ತಿತ್ತು.

ಅದ್ರೆ ಇದು ಸಾಧ್ಯ ಇಲ್ಲ ! ಛೇ ದೇವೇಗೌಡ್ರಿಗೆ ಸಪೋರ್ಟ್ ಮಾಡೋದಾ? (ವಿಶ್ವೇಶ್ವರ ಭಟ್ರಿಗೆ ಮಂಡೆ ಸಮ ಇಲ್ಲ!)

ಪ್ರೀತಿಯನ್ನು ಒಪ್ಪದೇ ಇದ್ದದ್ದಕ್ಕೆ acid ದಾಳಿಗೆ ತುತ್ತಾದ ಯುವತಿಯರ ಬೆಂಬಲ ನೀಡಲು ಈ ಸಂಘಟನೆಗಳಿಗೆ ಪುರುಸೊತ್ತಿದೆಯಾ ಅದೂ ಇಲ್ಲ.
ಇವರಿಗೆ ಸಿಕ್ಕಿದ್ದು ವರ್ಷಕ್ಕೊಂದು ದಿನ ಆಚರಿಸೋ ವ್ಯಾಲೆಂಟೈನ್ಸ್ ದಿನ.

ವ್ಯಾಲೆಂಟೈನ್ಸ್ ದಿನದ ಆಚರಣೆಯಿಂದ ಭಾರತೀಯ ಸಂಸ್ಕೃತಿಗೆ ಹೇಗೆ ಧಕ್ಕೆ ಉಂಟಾಗ್ತಿದೆಯೋ ಗೊತ್ತಾಗ್ತಿಲ್ಲ.ಗ್ರೀಟಿಂಗ್ಸ್ ಕಾರ್ಡ್ ಕಂಪೆನಿಗಳದ್ದೇ ಶಡ್ಯಂತ್ರ ಈ ವ್ಯಾಲೆಂಟೈನ್ಸ್ ಡೇ ಅನ್ನೋದು ಕೆಲವರ ಅಭಿಪ್ರಾಯ.ಅದನ್ನು ಒಪ್ಪಿದರೂ ಭಾರತೀಯ ಸಂಸೃತಿಗೆ ಧಕ್ಕೆ ಅಗೋ ಅಂಥದ್ದು ಏನೂ ಕಾಣಲ್ಲ.ನಾಳೆ ದೀಪಾವಳಿಗೆ ಗ್ರೀಟಿಂಗ್ಸ್ ಹೆಚ್ಚಾಗಿ ಖರ್ಚಾಗುತ್ತೆ ಅನ್ನೋ ರಿಪೋರ್ಟ್ ಬಂದ್ರೆ ಅದನ್ನೂ ಗ್ರೀಟಿಂಗ್ಸ್ ಕಾರ್ಡ್ ಮಾಫಿಯಾ ಅನ್ನೋಕಾಗುತ್ತಾ?ನಾಳೆ ಯಾರಾದ್ರೂ ಸತ್ತರೆ ಅವರ ಮನೆಯವರಿಗೆ ಶೋಕ ವ್ಯಕ್ತಪಡಿಸೋ ಅಂಥ ಗ್ರೀಟಿಂಗ್ಸ್(ಗ್ರೀಟ್ ಅನ್ನೋದು ತಪ್ಪಾಗುತ್ತೆ!)ಕಾರ್ಡ್ ಏನಾದ್ರೂ ಬಂದ್ರೆ ಅದನ್ನೂ ಮಾರ್ತಾರೆ ಈ ಕಂಪೆನಿಯವರು.

ಕೆಲವೊಂದು ಸಲ ಈ ವ್ಯಾಲೆಂಟೈನ್ಸ್ ಡೇ ಹಿಂದೆ ಗುಲಾಬಿ ತೋಟದವರ ಕೈವಾಡ ಇದ್ರೂ ಇರಬಹುದು ಅನ್ಸುತ್ತೆ ! ಯಾಕಂದ್ರೆ ತಮ್ಮ ಗುಲಾಬಿಗಳು ಖರ್ಚಾಗ್ಲಿ ಅನ್ನೋ ಕಾರಣಕ್ಕೇನಾದ್ರೂ ಈ ರೈತರು ಇಂಥ ದಿನವನ್ನು ಹುಟ್ಟು ಹಾಕಿರಬಹುದೇ? ’ಮುಕ್ತ ಮುಕ್ತದ’ ಶಶಿಯಂಥವರು ಹಾರಿಕಲ್ಚರ್ ಶುರು ಮಾಡಿದ ಹಾಗೆ,ಲಾಭ ಗಳಿಸೋದಕ್ಕೋಸ್ಕರ ಆಧುನಿಕ ರೈತರು ಇಂಥ ಗಿಮಿಕ್ ಏನಾದ್ರೂ ಶುರು ಮಾಡಿರಬಹುದೇ ? ಹಾಗಿದ್ರೆ ಅಂತ ರೈತರ ಹೊಟ್ಟೆ ತಣ್ಣಗಿರಲಿ ಪಾಪ.ಯಾವಾಗ್ಲೂ ರೈತರು ನಷ್ಟದಲ್ಲೇ ಇರೋದು.ಈ ವ್ಯಾಲೆಂಟೈನ್ಸ್ ಡೇ ನೆಪದಲ್ಲಾದ್ರೂ ಲಾಭ ಮಾಡಿಕೊಳ್ಳಲಿ ಬಿಡಿ.

ವ್ಯಾಲೆಂಟೈನ್ಸ್ ಡೇ ದಿನ ಸ್ವೇಚ್ಛೆ ಸಿಗುತ್ತೆ ಅನ್ನೋದು ಬಹಳಷ್ಟು ಜನರ ಕಂಪ್ಲೇಂಟು.ಆದರೆ ಹೆಬ್ಬಾಳ ಪಾರ್ಕ್ ,ಕಬ್ಬನ್ ಪಾರ್ಕ್ ಅಥವಾ ಬೆಂಗಳೂರಿನ ಯಾವುದೇ ಪಾರ್ಕ್ ಗೆ ಹೋದ್ರೂ ನಿತ್ಯ ಇಂಥ ಸ್ವೇಚ್ಛಾಚಾರಗಳೇ ನೋಡೋದಕ್ಕೆ ಸಿಗುತ್ತೆ.ಈ ಒಂದು ದಿನ ಅಂಥ ಅನಾಹುತ ಏನಾಗುತ್ತೋ ದೇವರೇ ಬಲ್ಲ.ಬಹುಷಃ ’ವ್ಯಾಲೆಂಟೈನ್ಸ್ ಡೇ ಆದ ಒಂಬತ್ತು ತಿಂಗಳ ನಂತರ ಚಿಲ್ಡ್ರನ್ಸ್ ಡೇ ಬರುತ್ತೆ’ ಅನ್ನೋ ಜೋಕನ್ನೇ ಪಾಪ ಇವರು ಸೀರಿಯಸ್ ಆಗಿ ತಗೊಂಡ್ರೋ ಏನೋ?

ನಮ್ಮ ಊರಲ್ಲೊಬ್ಬ ಸ್ನೆಹಿತರಿದ್ದಾರೆ.ಅವರಿಗೆ ರಕ್ಷಾಬಂಧನ ಮಾಡೋ ಬಿಸಿನೆಸ್!RSS ನವರೇ ಹೆಚ್ಚಾಗಿ ಬಳಸುವ ಕೇಸರಿ ಬಣ್ಣದ ರಕ್ಷಾಬಂಧನ ಅದು.ವರ್ಷಕ್ಕೆ ಒಂದು ದಿನ ಬರೋ ಈ ರಕ್ಷಾಬಂಧನ ಹಬ್ಬಕ್ಕೆ ಪಾಪ ಅವರು ವರ್ಷಪೂರ್ತಿ ತಯಾರಿ ನಡೆಸ್ತಾರೆ.
ನಮಗೆ ರಕ್ಷಾಬಂಧನ ಸಂಸ್ಕೃತಿ .ಆದರೆ ಪಾಪ ಅವರಿಗೆ ಅದು ಹೊಟ್ಟೆಪಾಡು,ಬಿಸಿನೆಸ್ ! ನಮಗೆ ದೇವಸ್ಥಾನಕ್ಕೆ ಹೋಗೋದು ಸಂಸ್ಕೃತಿ ಆದರೆ ಅರ್ಚಕರಿಗೆ ಅದು ಹೊಟ್ಟೆಪಾಡು.ಚಪ್ಪಲಿ ಹೊರಬಿಟ್ಟು ದೇವಸ್ಥಾನದ ಒಳಗೆ ಹೋಗೋದು ನಮ್ಮ ಸಂಸ್ಕೃತಿ ಆದ್ರೆ ಹೊರಗೆ ಚಪ್ಪಲಿ ಕಾಯೋ ಬಡ ಹುಡುಗನಿಗೆ ಅದು ಹೊಟ್ಟೆ ಪಾಡು.ಒಳಗೆ ಹಣ್ಣು ಕಾಯಿ ಮಾಡಿಸೋದು ನಮಗೆ ಸಂಸ್ಕೃತಿ ಆದರೆ ಹೊರಗೆ ಅದನ್ನು ಮಾರೋನಿಗೆ ಅದು ಹೊಟ್ಟೆಪಾಡು.ಮದುವೆಗೆ ವಾಲಗ ಊದಿಸೋದು ನಮ್ಮ ಸಂಸ್ಕೃತಿ,ವಾಲಗ ಊದೋನಿಗೆ ಅದು ಹೊಟ್ಟೆಪಾಡು.

ಹಿಂದೆ ಗ್ರಾಮಾಫೋನ್ ತಟ್ಟೆಯ ಭಕ್ತಿ ಗೀತೆ ಹಾಕುತ್ತಿದ್ದ ದೇವಸ್ಥಾನಗಳಿಗೆ ಇವತ್ತು MP3 ಪ್ಲೇಯರ್ ಗಳು ಬಂದಿವೆ.ನಗಾರಿ ಬಾರಿಸಲು ಜನ ಸಿಗದೆ(?) ಮೋಟರೈಸ್ಡ್ ನಗಾರಿ,ಜಾಗಟೆ ಬಂದಿದೆ.ಅರ್ಚಕರು ತಮ್ಮದೇ ಆದ ಮೊಬೈಲ್ ನೆಟ್ ವರ್ಕ್ ಇಟ್ಟುಕೊಂಡಿದ್ದಾರೆ.ದೇವಸ್ಥಾನಗಳೂ ISO certified ಆಗಿವೆ!

ಯಾವುದೇ ದೇಶದ ಸಂಸ್ಕೃತಿಯೂ ಒಂದು ದಿನದಲ್ಲಿ ಉದಯವಾಗಿಲ್ಲ,ಹಾಗೆಯೇ ಒಂದು ದಿನದಲ್ಲಿ ಹಾಳೂ ಆಗಿಲ್ಲ.ಕಾಲ ಕಾಲಕ್ಕೆ ಸಂಸ್ಕೃತಿ ಬದಲಾಗಿದೆ,ಬದಲಾಗುತ್ತೆ ಅಷ್ಟೇ.ನಮಗೆ ಇಷ್ಟ ಇರಲಿ ಇಲ್ಲದೇ ಇರಲಿ!

ಪರಸ್ಪರ ಇಷ್ಟ ಇದ್ದು ತಬ್ಬಿಕೊಳ್ಳೋ ಪ್ರೇಮಿಗಳಿಂದ ಸಂಸ್ಕೃತಿ ಹಾಳಾಗ್ತಾ ಇದೆ ಅನ್ನೋ ನಮಗೆ ಅದೆಷ್ಟೊ ಹೆಂಗಸರು ಗಾರ್ಮೆಂಟ್ ಮತ್ತಿತರ ಕಂಪೆನಿಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೀಡಾಗೋದು ಅರಿವಾಗೋದೇ ಇಲ್ಲ!ಮುಂಬೈನ ಕಾಮಾಟಿಪುರದಲ್ಲಿ ’ಇಷ್ಟ ಇಲ್ಲದೇ ಇದ್ರೂ’ ಮೈ ಮಾರಿ ಕೊಳ್ಳೋ ಹೆಂಗಸರು ಕಾಣಿಸೋದೇ ಇಲ್ಲ!

ಯಾಕಂದ್ರೆ ಅಂಥ ಸಮಸ್ಯೆಗಳು ದಿನಾ ಇರುತ್ತೆ.ವ್ಯಾಲೆಂಟೈನ್ಸ್ ಡೇ ಥರ ವರ್ಷಕ್ಕೊಂದು ಸಲ ಅಲ್ವಲ್ಲ!

16 comments:

ತೇಜಸ್ವಿನಿ ಹೆಗಡೆ said...

Well Said. ಹೀಗೆಲ್ಲಾ ಯೋಚನೆ ಮಾಡಲು ಅವರು ಸಾಮಾನ್ಯರಲ್ಲ. ಅಸಾಮಾನ್ಯರು. ಹಾಗಾಗಿ ಈ ಡೇ ಯ ಪರ/ವಿರೋಧ ಇಷ್ಟೊಂದು ಬಾಜಾ ಬಜಂತ್ರಿಯೊಡನೆ ಆಗುತ್ತಿರುವುದು.

ಸುಧೇಶ್ ಶೆಟ್ಟಿ said...

ಭಲೇ ಸ೦ದೀಪ್....

ವಿಜಯ ಕರ್ನಾಟಕದಲ್ಲಿ ನೈಸ್ ರಸ್ತೆಯಿ೦ದ ದೌರ್ಜನ್ಯಕ್ಕೊಳಗಾದ ಜನರ ಕಥೆಯನ್ನು ಓದುತ್ತಿದ್ದರೆ ಮನಸಿಗೆ ನೋವಾಯಿತು.... ಮಸಿಬಳಿಸಿಕೊ೦ಡವರಿಗೆ ಇದೆಲ್ಲಾ ಯಾಕೆ ಕಾಣಿಸುವುದಿಲ್ಲವೋ....

ಸುಧೇಶ್ ಶೆಟ್ಟಿ said...

ಭಲೇ ಸ೦ದೀಪ್....

ವಿಜಯ ಕರ್ನಾಟಕದಲ್ಲಿ ನೈಸ್ ರಸ್ತೆಯಿ೦ದ ದೌರ್ಜನ್ಯಕ್ಕೊಳಗಾದ ಜನರ ಕಥೆಯನ್ನು ಓದುತ್ತಿದ್ದರೆ ಮನಸಿಗೆ ನೋವಾಯಿತು.... ಮಸಿಬಳಿಸಿಕೊ೦ಡವರಿಗೆ ಇದೆಲ್ಲಾ ಯಾಕೆ ಕಾಣಿಸುವುದಿಲ್ಲವೋ....

ಸುಧೇಶ್ ಶೆಟ್ಟಿ said...
This comment has been removed by the author.
Pramod said...

ನಿಮ್ಮ ಅಭಿಪ್ರಾಯಕ್ಕೆ ನಮ್ಮ ಸಹಮತವಿದೆ

sunaath said...

ಹೆಣ್ಣುಮಕ್ಕಳ ಬಗೆಗೆ ನಿಜವಾಗಿ ಕಳಕಳಿ ಇದ್ದವರು, ವೇಶ್ಯಾವೃತ್ತಿ, ದೇವದಾಸಿ ಪದ್ಧತಿ ಇವುಗಳನ್ನು ನಿಲ್ಲಿಸಲು ಪ್ರಯತ್ನಿಸಬೇಕು. ನಿಮ್ಮ ಅಭಿಪ್ರಾಯಗಳು ಅತ್ಯಂತ ಯೋಗ್ಯವಾಗಿವೆ.

ದಿವ್ಯಾ ಮಲ್ಯ ಕಾಮತ್ said...

Well justified points! Good write-up Sandeep...

Anonymous said...

good one Sandeep!!

:-)

malathi S

ವಿನಾಯಕ ಕೆ.ಎಸ್ said...

ಕಾಣೆಯಾಗಿದ್ದ ಕಾಮತ್‌ರಿಂದ ಒಂದೊಳ್ಳೆ ಬರಹ ಬಂದಿದೆ...ಚೆನ್ನಾಗಿದೆ ನಿನ್ನ ವಿಶ್ಲೇಷಣೆ....

Me, Myself & I said...

"ಪ್ರೇಮಿಗಳ ದಿನ" ನಮ್ಮ ಸಂಸ್ ಕೃತಿಯೋ ಅಲ್ ವೋ?
"ನಮ್ಮ" ಅಂದ್ರೆ ಯಾರು? " ಸಮಸ್ತ ಭಾರತೀಯರ?" ಅಥ್ವ "ಹದಿ ಹರೆಯದ ಯುವ ಪ್ರೇಮಿಗಳು" ಮಾತ್ರನಾ?

ಮದುವೆ ಆದವರಿಗೆ ಅಂತ "ಕುಟುಂಬ ದಿನಾಚಾರಣೆ" ಅಂತ್ ನೂ ಒಂದಿನ ಆಚರಣೆ ಜಾರಿಗೆ ಬಂದ್ರೆ ಸರಿ ಹೋಗ್ತಿತ್ತೇನೋ?

ಬೇಕು ಬೇಡ ಅಂದ್ರೂ, ನಾವ್ ಮನೇಲ್ ಇದ್ರೂ ಇಲ್ದಿದ್ರೂ, ನಮ್ಮ್ ನಮ್ ಮನೇಲಿ, ನಮ್ ನಮ್ ದೇವ್ರಗಳಿಗೆ ತಿಂಗಳಿಗೊಂದ್ ಹಬ್ಬ ಮಾಡ್ತೀವಲ್ವಾ?

ನನಗನಿಸುತ್ತೆ, ಈ ತಿಂಗಳಿಗೊಂದು ತಪ್ಪದೇ ಬರುವ ಹಬ್ಬಗಳಲ್ಲಿ ಕುತುಂಬದ ಎಲ್ಲರೂ ಭಾಗವಹಿಸಿದ್ರೆ, ಈ ಪ್ರೇಮಿಗಳ ದಿನ ದ ಬಗ್ಗೆ ವಿರೋದ ಮಾಡೋಕ್ಕೂ ನಮ್ಮತ್ರ್ ಸಮಯ ಉಳಿಲಿಕ್ಕಿಲ್ಲ.

ಹೂಂ!

Mohan Hegade said...

ಸಂದೀಪಜಿ,
ನಿಮ್ಮ ಬರಹ ಸುಂದರ (ನೀವು ?) ಹಾಗೆ ನಾ ಮೊನ್ನೆ ವಿ ಕ ದಲ್ಲಿ ಬಂದಂತೆ ನೈಸ್ ಬಗ್ಗೆ ವಿವರಣೆ ಇದೆ, ಅದು ಹೇಗೆ ಬಟ್ಟರು ಗೌಡರಿಗೆ ಸಹಾಯ ಎಂದು ತಿಳಿಯಲಿಲ್ಲ. ಅಲ್ಲದೆ ತುಂಬ ದಿನದಿಂದ ನೈಸ್ ಬಗ್ಗೆ ಗೌಡರ ಗದ್ದಲ ಕೇಳಿ ಏನು ರಾದಂತ ಎಂದು ವಿ ಕ ಓದಿದ ಮೇಲೆ ತಿಳೀತು.
ಇನ್ನು ಪ್ರೇಮಿಗಳ ದಿನ ನೀನು ಹೇಳಿದಂತೆ ಅನಾವಶ್ಯಕ ಗಲಾಟೆಗಳು ಅಷ್ಟೇ. ಆದರೆ ಕೇಲವರ ಪ್ರೀತಿ ಉಕ್ಕಿ ಹರಿಯುವುದು ಅಂದು ಮಾತ್ರವಾದ ಕಾರಣ ಪ್ರಚಾರ ಜಾಸ್ತಿ ಆಗಿದೆ. ಇಲ್ಲದಿದ್ದರೆ ಕಾಯಾ, ವಾಚಾ, ಮನಸಾ ಪ್ರೀತಿಸುವನಿಗೆ ಪ್ರತಿದಿನ ಕೂಡ ಪ್ರೇಮಿಗಳ ದಿನ ಅಲ್ಲವೇ?!.
ನಿಮ್ಮ ಎಲ್ಲ ಬರಹ ಓದುವ,

ಮೋಹನ್ ಹೆಗಡೆ,
ಮಣಿಪಾಲ

vivekbhat said...

Hats UP!!! Good writing.

Rajesh S said...

GOOD ONE....

Chaithrika said...

I too agree.
ಎಷ್ಟೋ ಸಲ ನಾನು ನನ್ನ ಪತಿರಾಯರಿಗೆ "ನೀನೆಂದರೆ ನನಗೆ ತುಂಬಾ ಇಷ್ಟ. ನೀನಿಲ್ಲದ ಹೊತ್ತು ಬರೀ ಬೋರು" ಅಂತ ಹೇಳಬೇಕೆನಿಸುತ್ತದೆ. sudden ಆಗಿ ಹೀಗೆಲ್ಲ ಹೇಳಿದರೆ ನಾಟಕೀಯವಾಗಬಹುದೆಂದು ಹೇಳಹೋಗುವುದಿಲ್ಲ. ಕೆಲವೊಮ್ಮೆ ಎಂದೋ ಮಾಡಿದ ಜಗಳಕ್ಕೆ sorry ಕೇಳಬೇಕೆನಿಸುತ್ತದೆ. Birthday, Valentines day ಎಲ್ಲ ಬಂದರೆ ನನಗಂತೂ ಇಂಥದಕ್ಕೆಲ್ಲ ಅವಕಾಶಸಿಗುವುದೆಂದು ಬಲು ಸಂತೋಷ! :-)
ಮುಂಚಿನ ದಿನ ತಂದು ಕಷ್ಟಪಟ್ಟು ಅಡಗಿಸಿಟ್ಟ ಹೂವನ್ನು ಬೆಳಬೆಳಗ್ಗೆ ಕೊಟ್ಟು ಮುಖದ expression ನೋಡಲು ನನಗೆ ಬಲು ಖುಷಿ. ನಿತ್ಯ ಜೀವನದಲ್ಲಿ ಇದಕ್ಕೆ ಸರಿಯಾದ ಸಂದರ್ಭ ಸಿಗುವುದಿಲ್ಲ. ಹಾಗಾಗಿ ಕೆಲವು "ಡೇ" ಗಳನ್ನು ಅವರವರ ಇಷ್ಟದ ರೀತಿಯಲ್ಲಿ ಆಚರಿಸುವುದರಲ್ಲಿ ನನಗೇನೂ ತಪ್ಪು ಕಾಣುವುದಿಲ್ಲ.

Prabhuraj Moogi said...

ಸೂಪರ್. ವಾಸ್ತವವನ್ನೂ ಇದ್ದದ್ದು ಇದ್ದ ಹಾಗೆ ಚೆನ್ನಾಗಿ ಹೇಳ್ತೀರಾ... ಒಟ್ಟಿನಲ್ಲಿ ಪಬ್ಲಿಸಿಟಿ ಸರ್, ಪಿಂಕ್ ಚಡ್ಡಿ ಅಂತಾನೊ, ಇಲ್ಲ ಪಿಂಕ ಸ್ಲಿಪ್ ಅಂತಾನೋ ಏನೊ ಒಂದು...

ಸಂದೀಪ್ ಕಾಮತ್ said...

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು :)