Monday, March 1, 2010

ಬಡವನ ಗುಡಿಸಲಲಿ...

ಒಬ್ಬ ಕನ್ನಡದ ದೈತ್ಯ ಬರಹಗಾರರರು! ಅವರ ಬರಹಗಳನ್ನು ನಾನು ಬಹಳಷ್ಟು ಮೆಚ್ಚಿ ಓದ್ತಾ ಇದ್ದೆ.ಲೇಖಕರು ಹಿಂದೆ ಪಟ್ಟಿದ್ದ ಪಾಡು,ಬಡತನದಲ್ಲಿ ಬೆಂದು ಮೇಲೆ ಬಂದ ಬಗೆ ಇದೆಲ್ಲಾ ತುಂಬ ಹೃದಯಸ್ಪರ್ಶಿ,ಆಪ್ಯಾಯಮಾನವಾಗಿತ್ತು ಆಗ ನನಗೆ.ಬಹಳಷ್ಟು ಸಲ ಪ್ರೇರಣಾ ಶಕ್ತಿಯೂ ಆಗಿತ್ತು.

ಆದ್ರೆ ಈಗೀಗ ಹಿಡಿಸ್ತಾ ಇಲ್ಲ!ಕಾರಣ ಗೊತ್ತಿಲ್ಲ.

ನಾವು ಬಹುಷಃ ಬಡತನವನ್ನು ಇಷ್ಟಪಡದಿದ್ದರೂ ಬಡತನದ ಬಗ್ಗೆ ಕಥೆ,ಕವನಗಳನ್ನ ತುಂಬಾ ಇಷ್ಟ ಪಡ್ತೀವೇನೋ ಅನ್ಸುತ್ತೆ.ಒಬ್ಬ ಲೇಖಕ ತಾನು ಕೊಂಡ ದುಬಾರಿ ಕಾರಿನ ಬಗ್ಗೆ ಏನಾದ್ರೂ ಬರೆದ್ರೆ ನಮಗೆ ಬಹುಷಃ ಹಿಡಿಸದೆ ಹೋದೀತೇನೋ.ಆದ್ರೆ ಅದೇ ಲೇಖಕ ತಾನು ಹೊಟ್ಟೆಗಿಲ್ಲದೆ,ಕೆಲಸ ಇಲ್ಲದೆ, ಪಟ್ಟ ಪಾಡೇನಾದ್ರೂ ಬರೆದ್ರೆ ತುಂಬಾ ಇಷ್ಟ ಪಟ್ಟು ಓದ್ತೀವಿ.

ನಾವು ಬಡವರಾಗಿರಲು ಖಂಡಿತ ಇಷ್ಟಪಡದಿದ್ದರೂ ’ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು ’ ಕವಿತೆ ಇಷ್ಟ ಪಡ್ತೀವಿ( ಕವಿತೆಯ ಆಶಯ ಅದಲ್ಲ ಅಂತ ಬಯ್ಯಬೇಡಿ ದಯವಿಟ್ಟು!)

ಲೇಖಕ ಊಟಕ್ಕೆ ಕಾಸಿಲ್ಲದೆ ಇದ್ದಾಗ ಕಮ್ಮಿ ಖರ್ಚಿಗೆ ಜಾಸ್ತಿ ತಿನ್ನೋಕೆ ಸಿಗುತ್ತೆ ಅನ್ನೋ ಕಾರಣಕ್ಕೆ ಶಿವಾಜಿನಗರಕ್ಕೆ ಹೋಗಿ ದನದ ಮಾಂಸ ತಿಂದ ಘಟನೆಯನ್ನು ಬರೆದಾಗ ಓದೋ ಖುಷಿ(ಖುಷಿ ಅಂದ್ರೆ ಬಹುಷಃ ಸರಿ ಆಗಲ್ಲ!) ’ನನ್ನ ಅಳಿಯ ಒಂದು ಕೋಟಿ ಖರ್ಚಿ ಮಾಡಿ ಜಿಮ್ ಮಾಡಿದ್ದಾನೆ ’ ಅನ್ನೋದನ್ನು ಬರೆದಾಗ ಯಾಕೆ ಆಗಲ್ಲ ?

ಹೊಸ ಫ್ರಾಕ್ ಕೊಡಿಸಲು ಅಪ್ಪನ ಬಳಿ ಕಾಸಿಲ್ಲದೇ ಇದ್ದಾಗ ಮಗಳು ಹಳೇ ಫ್ರಾಕ್ ಹಾಕ್ಕೊಂಡು ಹೋಗ್ತೀನಿ ಅಂತ ಹೇಳಿದ್ದನ್ನು ಬರೆದಾಗ ಓದಿದಷ್ಟು ಇಂಟೆನ್ಸ್ ಆಗಿ ’ಮಗಳಿಗೆ ಈಗ ಐದಂಕಿ ಸಂಬಳ ’ ಅಂತ ಲೇಖಕ ಹೆಮ್ಮೆಯಿಂದ ಬರೆದಾಗ ಯಾಕೆ ಓದಿಸಿಕೊಂಡು ಹೋಗಲ್ಲ?

ಕಾಸಿಲ್ಲದೆ ಇದ್ದದ್ದಕ್ಕೆ ಸಣ್ಣ ಸಣ್ಣ ಪುಸ್ತಕಗಳನ್ನು ಅಂಗಡಿಯಲ್ಲೇ ಓದ್ತಿದ್ದೆ ಅನ್ನೋದನ್ನು ಲೇಖಕ ಬರೆದಾಗ ಆಗೋ ಖುಷಿ ’ನಾನು ಕಾದಂಬರಿಗಳನ್ನು ಅಮೆಝಾನ್ ಕಿಂಡಲ್ ನಲ್ಲೇ ಓದೋದು ’ ಅಂತ ಹೇಳಿದಾಗ ಯಾಕೆ ಆಗಲ್ಲ?

’ಮುಕ್ತ ಮುಕ್ತ ’ದ ಪೆದ್ದು ಪೆದ್ದಾಗಿ ಮಾತಾಡೋ ಶಾರದತ್ತೆ ಇಷ್ಟ ಆದಷ್ಟು ’ಕ್ಯೋಂಕಿ ಸಾಸ್ ಭಿ ’ ಸೀರಿಯಲ್ ನ ಜರತಾರಿ ಸೀರೆಯ ಆಂಟಿಯರು ಯಾಕೆ ಇಷ್ಟ ಆಗಲ್ಲ?

ಎಲ್ಲೋ ನಮಗೆ ಶ್ರೀಮಂತರು ಅಂದ್ರೆ ಸರಿ ಇಲ್ಲ,ಅವರಿಗೆ ಸಂವೇದನೆಗಳೇ ಇಲ್ಲ ಅನ್ನೋ ಭಾವನೆ ಮೂಡಿದೆ ಅನ್ಸುತ್ತೆ.ಅಥವಾ ನಮಗೆ ಬೆರೆಯವರ ಉನ್ನತಿ,ಶ್ರೀಮಂತಿಕೆ ಮೆಚ್ಚೋದಕ್ಕೆ ಆಗಲ್ವೇನೋ!

ನಾನೂ ಶ್ರೀಮಂತ,ಅವಳೂ ಶ್ರೀಮಂತೆ , ಮರ್ಸಿಡಿಸ್ ನಲ್ಲೇ ನಮ್ಮ ಓಡಾಟ ಅನ್ನೋ ಥರ ಕವಿತೆಗಳು ನಮಗೆ ಇಷ್ಟವಾಗೋದೇ ಇಲ್ವೇನೋ?

ಗುಲಾಬಿ ಟಾಕೀಸ್ ನ ಗುಲಾಬಿ ಒಂದು ವೇಳೆ ಶ್ರೀಮಂತೆ ಆಗಿದ್ರೆ ನಾವು ಅವಳನ್ನು ಈಗ ಇಷ್ಟ ಪಟ್ಟಷ್ಟೇ ಇಷ್ಟ ಪಡ್ತಿದ್ವಾ?ಬಡತನದಲ್ಲಿ ಬೆಂದದ್ದಕ್ಕೇ ಉಮಾಶ್ರೀಯವರಿಗೆ ಅಂಥ ಮನೋಜ್ಞ ಅಭಿನಯ ನೀಡೋದಕ್ಕೆ ಸಾಧ್ಯ ಆಯ್ತಾ?

ಇದು ಹ್ಯೂಮನ್ ಸೈಕಾಲಜಿ ಗೆ ಸಂಬಂಧ ಪಟ್ಟಿದ್ದಾ?

16 comments:

  1. ಸಕತ್.
    ಆದರೂ...?????
    ನನಗೇನೋ ನಿಮ್ಮ ಇಂದಿನ ಬರಹದ ಕೊನೆಯ ವಾಕ್ಯವನ್ನ ಓದಿ ಮುಗಿಸಿದ ನಂತರ ಒಂದು ಸಾಮಾನ್ಯ ಪ್ರಶ್ನೆ ತಲೆಗೆ ಬಂದು ಬಿಡ್ತು. ಮೋಸ್ಟ್ಳೀ ಅದನ್ನ ನೀವು ನೀಡಿರುವ ಕೆಟಗರಿಗೆ ನೀವು ಸೇರಿಸ್ಕೋಳ್ಳಲ್ಲ ಅನ್ಸುತ್ತೆ. ಇರಲಿ ನನ್ನ ಕಾಡಿದ ಆ ಪ್ರಶ್ನೆ ಏನೆಂದು ಇಲ್ಲಿ ಉಲಿದು ಬಿಡ್ತೀನಿ.
    ಹಾಲಿವುಡ್, ಬಾಲಿವುಡ್, ಕಾಲಿವುಡ್, ಹೀಗೇ ಬೇರೆ ಇನ್ನೂ ಅನೇಕ ಚಲನಚಿತ್ರ ಕ್ಷೇತ್ರಗಳಲ್ಲಿ ನಮ್ಮ ಸ್ಯಾಂಡಲ್‌ವುಡ್‌ಗಿಂತ ಹೆಚ್ಚೆಚ್ಚು ಹಣ ಖರ್ಚು ಮಾಡಿ(?), ಬಹುಕೋಟಿ (?) ವೆಚ್ಚದಲ್ಲಿ ಚಿತ್ರಗಳನ್ನ ನಿರ್ಮಿಸುತ್ತಾರೆ. ಆದರೂ ನಮ್ಮದೇ ಕನ್ನಡನಾಡಿನ ರಾಜಧಾನಿ(ಬೆಂಗಳೂರಿನಲ್ಲಿ) ಕನ್ನಡಕ್ಕಿಂತಲೂ ಹೆಚ್ಚು ಯಶಸ್ಸು ಗಳಿಸುವಲ್ಲಿ ಅನ್ಯ ಭಾಷೆಯ ಚಿತ್ರಗಳು ಹಿಂದೆ ಬಿದ್ದಿಲ್ಲ. ಬೆಂಗಳೂರಿನಲ್ಲಿ ವಾಸವಾಗಿರೋ ಕೇವಲ ಅನ್ಯಭಾಷಿಕರು ಕನ್ನಡೇತರ ಚಿತ್ರಗಳ ಯಶಸ್ಸಿಗೆ ಕಾರಣವಾಗ್ತಾರೆ ಅಂತಲ್ಲ. ಕನ್ನಡಿಗರ ಕೊಡುಗೆಯು ಅಲ್ಲಿ ಕಂಡು ಬರುತ್ತೆ. ಇಲ್ಲಿ ಕೇವಲ ನಿರ್ಮಾಣಕ್ಕೆ ತಗುಲಿದ ವೆಚ್ಚವೊಂದೇ ಅಂತಿಮ ಅಲ್ಲವಲ್ಲ!!
    ಇಲ್ಲಿ ರಿಚ್ ಚಿತ್ರಗಳು ವಾಣಿಜ್ಯ ದೃಷ್ಟಿಯಲ್ಲಿ ಹೆಚ್ಚು ಯಶಸ್ಸು ಗಳಿಸುತ್ತವೆ, ಎನ್ನುವುದು ನನ್ನ ಅಭಿಪ್ರಾಯ.
    ಕೆಲವೊಮ್ಮೆ ತೀರಾ ನೀರಾಶಾದಾಯಕ ಪ್ರತಿಕ್ರಿಯೆಯೂ ಸಿಗಬಹುದು. ಆದರೂ ಮೇಲೆ ನೀವು ನೀಡಿರೋ ಉದಾಹರಣೆಗಳಿಗೆ ಇದು ವ್ಯತಿರಿಕ್ತವೆನ್ನಿಸಿತು. ಅದಕ್ಕೇ ಪ್ರತಿಕ್ರಿಯೆ ಬರೆದೆ.

    ಪ್ರತಿಕ್ರಿಯೆ ಉದ್ದವಾಯಿತು. ಕ್ಷಮೆ ಇರಲಿ. ನಿಮ್ಮ ಕಾಲೆಳೆಯಲೇಂದೇ ಪ್ರತಿಕ್ರಿಯಿಸಿದ್ದಲ್ಲ. ಹಾಗೇ ಸುಮ್ಮನೇ..ಬರೆದದ್ದು.

    ನಿಮ್ಮ ಆಲೋಚನೆಯ ದೃಷ್ಟಿ ಏನಿರ ಬಹುದೆಂದು ನಾನೂ ಊಹಿಸಿಕೊಳ್ಳ ಬಲ್ಲೆ. :)

    ReplyDelete
  2. I think this is mainly related to 'EGO',..and doesnot have relation to poverty or being rich!!

    ReplyDelete
  3. ಪ್ರತಿ ಶ್ರ‍ೀಮಂತಿಕೆಯ ಹಿಂದೆ ಒಂದು ಕ್ರೈಮ್ ಇರುತ್ತದಂತೆ, ಹಾಗೆಂದು ಕ್ಯಾಪಿಟಲಿಸಂನಲ್ಲಿ ಮಿಂದು ಮೇಯುತ್ತಿರುವ ಅಮೇರಿಕದ ಲೇಖಕನ ಮಾತುಗಳಿವು. ಇನ್ನು ಕಮ್ಯುನಿಸಂ ಮತ್ತು ಸೋಷಿಯಲಿಸಂನಲ್ಲಿ ನಮ್ಮ ಬದುಕನ್ನು ನೋಡಲು ಹವಣಿಸುತ್ತಿರುವ ನಮಗೆ ಬಡತನವೇ ಪ್ರೀತಿಯ ವಸ್ತು, ಮತ್ತು ಪ್ರಾಮಾಣಿಕತೆಯ ಸಂಕೇತ.

    ಇದೆಲ್ಲ ಮನಸಿನ ಮಾತಾಯಿತು.

    ಆದರೆ ವಾಸ್ತವವಿರುವುದು ಬಂಡವಾಳಶಾಹಿತ್ವ ಮತ್ತು ಶ್ರೀಮಂತಿಕೆ ನಮ್ಮ ಬದುಕಿನ ಸೂಕ್ಷ್ಮಗಳನ್ನೆಲ್ಲ ಒಂದು ಕಡೆಯಿಂದ ತಿನ್ನುತ್ತ ಬರುತ್ತಿರುವುದು. ನಿಮ್ಮ ಪ್ರಶ್ನೆಯಲ್ಲೇ ಉತ್ತರವಿದೆ ಎಂದು ನಿಮಗೂ ಗೊತ್ತಿದೆಯಲ್ವೇ?

    ReplyDelete
  4. ಎಲ್ಲೋ ಓದಿದ ನೆನಪು. ನಾವು ಭಾರತೀಯರದ್ದು ಎರಡೇ ಕಥೆಯನ್ನು ಮೆಚ್ಚುತ್ತೇವೆ. ಒ೦ದು ಆಗರ್ಭ ಶ್ರೀಮ೦ತ ಎಲ್ಲಾ ದುಡ್ಡೆಲ್ಲ ದಾನ ಮಾಡಿ ಒಳ್ಳೆಯವನನಿಸಿಕೊಳ್ಳೋದು, ಇನ್ನೊ೦ದು ತೀರ ಬಡವ ಕಷ್ಟಪಟ್ಟು ದೊಡ್ಡ ಶ್ರೀಮ೦ತನಾಗೋದು.

    ReplyDelete
  5. ನೀವು ಹೇಳುತ್ತಿರುವುದು ನಿಜ.

    ಇದು ಸೋಶಿಯಲ್ ಸೈಕಾಲಜಿ ಅನ್ನಿಸುತ್ತೆ.

    ReplyDelete
  6. ಸ೦ದೀಪ್, ನೀವು ಹೇಳಿದ್ದು ಸರಿ. ಬಡತನಕ್ಕಿರುವ ಸ೦-ವೇದನೆ ಶ್ರೀಮ೦ತಿಕೆಗೆ ಇಲ್ಲವೆನಿಸುತ್ತದೆ. ನಾನು ನಿಮ್ಮ೦ತೆಯೇ ಆ ದೈತ್ಯ ಬರಹಗಾರರನ್ನು ಮೆಚ್ಚಿ ಓದುತ್ತಿದ್ದೆ, ಯಾಕೋ ಇತ್ತೀಚಿಗೆ ನಿಮ್ಮ ಹಾಗೆ ನನಗೂ ಅನಿಸಿದೆ. ನನ್ನ ಮನಸಿನ ಭಾವನೆ ನಿಮ್ಮ ಮೂಲಕ ಅಭಿವ್ಯಕ್ತವಾದ೦ತಾಯ್ತು.

    ReplyDelete
  7. ಮತ್ತೊಬ್ಬ ನನಗಿಂತ ಜಾಸ್ತಿ ಶ್ರೀಮಂತನೋ, powerfullಓ ಆದರೆ, ಅಸೂಯೆ ಆಗೋದು ಸಹಜ ಅಲ್ಲವೆ? ಯಾಕೆಂದರೆ,ಆಗ compared to him ನಾನು less secure!

    ReplyDelete
  8. ತುಂಬಾ ಒಳ್ಳೆಯ ಬರಹ
    ಅಭಿನಂದನೆಗಳು

    ReplyDelete
  9. ನಿಮ್ಮ ಬರಹದ ಶೈಲಿ ತುಂಬಾ ಚೆನ್ನಾಗಿದೆ.

    ReplyDelete
  10. ಇದೊಂಥರಾ ಸೊಶಿಯಲ್ ಸೈಕಾಲಜಿಯೇ !. ಶ್ರೀಮಂತಿಕೆಯನ್ನು ಅನುಭವಿಸುವಷ್ಟು ಸುಲಭವಾಗಿ ಬಡತನವನ್ನು ಅರಗಿಸಿಕೊಳ್ಳಲಾಗುವುದಿಲ್ಲ. kelavarige..

    ReplyDelete
  11. ತುಂಬಾ ಚೆನ್ನಾಗಿ ಬರೆದಿದ್ದೀರಾ.
    ಕಷ್ಟದಲ್ಲಿರುವರು ಕಷ್ಟದ ವಿರುದ್ಧ ಹೋರಾಡಿ ಒಂದು ಸುಖಾಂತ್ಯ ಕಾಣುವುದು ಅಥವಾ ಒಂದು "positive note" ಇಂದ ಕೊನೆಯಾಗುವುದು ಎಲ್ಲರೂ ಇಷ್ಟಪಡುವ ಕಥಾವಸ್ತು. World cinema-ನೂ ತೊಗೊಳ್ಳಿ. slumdog millionaire, Shawshank Redemption, forrest gump - ಸುಮಾರು ಸಿನೆಮಾಗಳ ಕಥಾವಸ್ತು ಇದೇನೆ. ಶ್ರೀಮಂತರು ಆರಾಮದ ಜೀವನ ಒಂದು ಕಟು ವಾಸ್ತವವಾದ್ದರಿಂದ ಬಹುಶಃ ಇದು ನಮ್ಮಲ್ಲಿ ಯಾವ ಭಾವನೆಗಳನ್ನು ಸ್ಪುರಿಸಲಾರವು.

    ReplyDelete
  12. ತುಂಬಾ ಚೆನ್ನಾಗಿ ಬರೆದಿದ್ದೀರ...
    ಹೌದು ಇದು ಒಂದು ತರ ಸೊಶಿಯಲ್ ಸೈಕಾಲಜಿಯೇ, ಅದಕ್ಕೆ ಅಲ್ವ,,, ಇಂತಹ ಬಡತನದ,, ಸೆಂಟಿಮೆಂಟ್ ನ ಚಿತ್ರಗಳನ್ನ,,,, ಬೇಡ ಬೇಡ ಅಂದರು ತೋರಿಸುವುದು.... ಹಾಗೆ ಅದರಲ್ಲಿ ದುಡ್ಡು ಮಾಡಿಕೊಳ್ಳುವುದು , ಹಾಗೆ ಇದು serial ಗಳಲ್ಲಿ ಕೂಡ common ಆಗಿ ಬಿಟ್ ಇದೆ.... ಯಾಕೋ ಗೊತ್ತಿಲ್ಲ,,, ನೀವು ಹೇಳಿದ ಹಾಗೆ ಬಡತನದ ಹಿಂದಿನಿಂದ ಬಂದ ಕತೆಗಳನ್ನೇ ಎಲ್ಲರೂ ಜಾಸ್ತಿ ಫೀಲ್ ಮಾಡಿಕೊಂಡು ನೋಡುವುದು ಹಾಗು ಕೇಳುವುದು,,,
    ಒಳ್ಳೆಯ ವಿಚಾರವಂತ ಲೇಖನಕ್ಕೆ ಧನ್ಯವಾದಗಳು.....

    ReplyDelete
  13. ನನಗೂ ಅನಿಸಿದೆ ಅನೇಕ ಸಲ. ನಮ್ಮಲ್ಲಿ "ನಾನು ಬಡತನದಲ್ಲಿ ಹುಟ್ಟಿ ಬೆಳೆದವನು, ಹಳ್ಳಿಯಿಂದ ಬಂದವನು, ಬಾಲ್ಯದಲ್ಲಿ ತುಂಬ ಕಷ್ಟಪಟ್ಟವನು" ಎಂದು ಹೇಳಿಕೊಳ್ಳುವುದೇ ಒಂದು ರೀತಿ certificate ಥರ, ಅದರಲ್ಲೂ ರಾಜಕಾರಣಿ, ಮತ್ತು ಸಾಹಿತಿಗಳಿಗೆ. ಯಾವ ರಾಜಕಾರಣಿ, ಬುದ್ಧಿಜೀವಿಯಾದರೂ ತಾನು ಶ್ರೀಮಂತರ ಮನೆತನದಲ್ಲಿ, ಸುಖಸಂಪತ್ತಿನಲ್ಲಿ ಹುಟ್ಟಿಬೆಳೆದವನು ಎಂದು ಎಲ್ಲಿಯಾದರೂ ಹೇಳಿಕೊಂಡಿದ್ದಾರೆಯೆ? ನಮ್ಮ ದೇಶದಲ್ಲಿ ಇದು ಒಂದು ಥರ medal ಇದ್ದಹಾಗೆ

    ReplyDelete