Saturday, February 28, 2009

ನಾನ್ಯಾಕೆ ಬಿಲ್ ಗೇಟ್ಸ್ ಆಗಿಲ್ಲ .......?



ಐದೂವರೆ ಲಕ್ಷ ಇಂಜಿನಿಯರ್ ಗಳಲ್ಲಿ ಯಾಕೆ ಒಬ್ಬರೂ ಬಿಲ್ ಗೇಟ್ಸ್ ,ಮೈಕಲ್ ಡೆಲ್ ,ಅಥವ ಸ್ಟೀವ್ ಜಾಬ್ ಆಗಿಲ್ಲ ಅನ್ನೋ ಅರ್ಥಪೂರ್ಣ ಪ್ರಶ್ನೆಯನ್ನು ಪ್ರೀತಿಯ ಪ್ರತಾಪ್ ಕೇಳಿದ್ದಾರೆ .ಕಳೆದ ವಾರ ಬರೆದದ್ದಕ್ಕಿಂತ ಉತ್ತಮವಾಗಿ ,ಅಧ್ಯಯನವನ್ನು ಮಾಡಿ ಬರೆದಿದ್ದಾರೆ ಪ್ರತಾಪ್ ಅದನ್ನು ಮೆಚ್ಚಬೇಕು.
ನನಗೂ ಈ ಪ್ರಶ್ನೆ ಆಗಾಗ ಕಾಡುತ್ತಿರುತ್ತದೆ .ನನಗೆ ನಾನೇ ಕೇಳಿಕೊಂಡಾಗ ಕಾಡುವ ಪ್ರಶ್ನೆ ಬಿಲ್ ಗೇಟ್ಸ್ ,ಮೈಕಲ್ ಡೆಲ್, ಅಥವಾ ಸ್ಟೀವ್ ಜಾಬ್ ರನ್ನು ಹುಟ್ಟು ಹಾಕುವ ಸಾಮರ್ಥ್ಯ ನಮಗಿದೆಯಾ?
ಧೀರೂಭಾಯಿ ಅಂಬಾನಿ,ಟಾಟಾ,ಬಿರ್ಲಾ ಗಳು ಹುಟ್ಟಿರೋ ದೇಶದಲ್ಲಿ ಬಿಲ್ ಗೇಟ್ಸ್ ತಯಾರಾಗೋದು ಕಷ್ಟವೇನಿಲ್ಲಬಿಡಿ.ಆದರೆ ನಮಗ್ಯಾಕೆ ನಾರಾಯಣ ಮೂರ್ತಿಗಳು,ಅಜೀಮ್ ಪ್ರೇಮ್ ಜಿ, ಅಥವ ರತನ್ ಟಾಟಾ ಬಿಲ್ ಗೇಟ್ಸ್ ರಷ್ಟೇ ಅಥವಾ ಅವರಿಗಿಂತ ಶ್ರೇಷ್ಟ ಅನ್ನಿಸಲ್ಲ? ನಾರಾಯಣ ಮೂರ್ತಿಗಳಿಂದ ಸಾಧ್ಯವಾಗದ್ದೇನನ್ನು ಬಿಲ್ ಗೇಟ್ಸ್ ಸಾಧಿಸಿದ?
ಬಿಲ್ ಗೇಟ್ಸ್ ಸಂಪಾದಿಸಿದಷ್ಟು ಹಣ ಸಂಪಾದಿಸಿಲ್ಲ ಅನ್ನೋದಷ್ಟೇ ಅಲ್ವ ಕೊರತೆ? ವಿಂಡೋಸ್ 98 ಗಿಂತ ವಿಂಡೋಸ್ ವಿಸ್ತಾ ಹೇಗೆ ಶ್ರೇಷ್ಠ ? ಯಾವ ಸೀಮೆಯ R&D ಯನ್ನು ಬಿಲ್ ಗೇಟ್ಸ್ ಮಾಡಿ ತೋರಿಸಿದ ?ತೋರಿಸಿದರೂ ಬೆಂಗಳೂರಿನ ಮೈಕ್ರೋಸಾಫ್ಟ್ ನ ಹುಡುಗ ಹುಡುಗಿಯರ ಶ್ರಮವೂ ಇದೆಯಲ್ಲ ಅಲ್ಲಿ?
ಖಂಡಿತ ನಾವು ಇನ್ನೂ ಕಾಂಪಿಟೀಟಿವ್ ಆಗೋದರ ಬಗ್ಗೆ ಯೋಚಿಸಬೇಕು .ಆದರೆ ಈ ಬಗ್ಗೆ ಚಿಂತನೆ ನಡೆಸಬೇಕಾದವರು ಯಾರು?
ಬೇರೆ ಯಾವ ಕ್ಷೇತ್ರದಲ್ಲಿ ಆ ಪರಿಯ R&D ಆಗಿದೆ ಹೇಳಿ ನೋಡೋಣ?

ಐದೂವರೆ ಲಕ್ಷ ಇಂಜಿನಿಯರ್ ಗಳಲ್ಲಿ ಒಬ್ಬನೂ ಬಿಲ್ ಗೇಟ್ಸ್ ಆಗಿಲ್ಲ ಒಪ್ಪೋಣ .ಭಾರತದಲ್ಲಿರೋ ಸಾವಿರಾರು ಹಿನ್ನೆಲೆ ಗಾಯಕಿಯರಲ್ಲ್ಯಾಕೆ ಒಬ್ಬರೂ ಲತಾ ಮಂಗೇಶ್ಕರ್ ಆಗಿಲ್ಲ?ಕನ್ನಡದಲ್ಲಿ ನೂರಾರು ನಿರ್ದೇಶಕರಿದ್ದಾರೆ ಯಾಕೆ ಇನ್ನೊಬ್ಬ ಪುಟ್ಟಣ್ಣ ಕಣಗಾಲ್ ನಮಗೆ ದೊರೆತಿಲ್ಲ?
ಬೆಂಗಳೂರಿನಲ್ಲಿ ಸಾವಿರಾರು ಹೋಟೆಲ್ ಗಳಿವೆ ಯಾಕೆ ಎಲ್ಲವೂ MTR ಆಗಿಲ್ಲ?

ಒಬ್ಬ ಬಿಲ್ ಗೇಟ್ಸ್ ಆಗಲು ಬೇಕಾದಷ್ಟು ತಾಳ್ಮೆ,ಧೈರ್ಯ,ಪ್ರೋತ್ಸಾಹ ನಮ್ಮ ಭಾರತೀಯರಲ್ಲಿಲ್ಲ ಅನ್ನೋದು ಒಂದು ಬೇಸರದ ಸಂಗತಿ.ಅಮೆರಿಕಾ ದಲ್ಲಿ ಒಬ್ಬ ಯುವಕ/ಯುವತಿ ವಯಸ್ಸಿಗೆ ಬಂದ ಕೂಡಲೇ ತಮ್ಮ ತಮ್ಮ ದಾರಿಯನ್ನು ನೋಡಿಕೊಳ್ಳುವ ಸ್ವಾತಂತ್ರ್ಯ ಅವರಿಗೆದೆ .ಭಾರತದಲ್ಲಿ ಆ ಸ್ವಾತಂತ್ರ್ಯ ಇದೆಯಾ? ಐದೂವರೆ ಲಕ್ಷ ಇಂಜಿನಿಯರ್ ಗಳಲ್ಲಿ ಅದೆಷ್ಟು ಜನ ಒತ್ತಾಯಕ್ಕೆ ಇಂಜಿನಿಯರ್ ಗಳಾಗಿಲ್ಲ? ಸೆಕೆಂಡ್ ಪಿ.ಯು.ಸಿ ಆದ ತಕ್ಷಣ ಬಿ.ಎಸ್.ಸಿ ಸೇರ್ತೀನಿ ಅನ್ನೋ ಮಗಳನ್ನು ಗದರಿಸಿ ಎಷ್ಟು ಜನ ಇಂಜಿನಿಯರಿಂಗ್ ಗೆ ಸೇರಿಸಿಲ್ಲ?ಅದೆಷ್ಟು ಜನ ಹುಡುಗರು ಪ್ರತಾಪ್ ಸಿಂಹ ಥರ ಪತ್ರಕರ್ತರಾಗಬೇಕು ಅನ್ನೋ ಆಸೆಯನ್ನು ಭಸ್ಮ ಮಾಡಿ ಸೈನ್ಸ್ ಸೇರಿಲ್ಲ.ಅದೆಷ್ಟು ಜನ ಹುಡುಗಿಯರು ಡ್ಯಾನ್ಸರ್ ಆಗಬೇಕೆಂಬ ಆಸೆ ಹತ್ತಿಕ್ಕಿ ಇಂಜಿನಿಯರ್ ಆಗಿಲ್ಲ?

ನಮಗೆ ಬೇಕಾದದ್ದನ್ನು ಪಡೆಯುವ ,ನಮಗೆ ಬೇಕಾದ ಹಾಗೆ ಬದುಕುವ ಸ್ವಾತಂತ್ರ್ಯ ಇದೆಯಾ ಭಾರತದಲ್ಲಿ?

ಅಮೆರಿಕಾಗೆ M.S ಮಾಡಲು ಹೋಗುವ ಇಂಜಿನಿಯರ್ ಅಲ್ಲಿ ಓದುವ ಜೊತೆಗೆ ಪೆಟ್ರೋಲ್ ಬಂಕ್ ನಲ್ಲೋ ,ಪಿಜಾ ಅಂಗಡಿಯಲ್ಲೋ ಕೆಲಸ ಮಾಡಿ ಓದುವ ಸುಂದರವಾದ ವಾತಾವರಣ ಇದೆ . ಭಾರತದಲ್ಲಿದೆಯ?

ಅಮೆರಿಕಾದಲ್ಲಿ ಕಾಲೇಜ್ ಡ್ರಾಪ್ ಔಟ್ ಒಬ್ಬ ಬಿಲ್ ಗೇಟ್ಸ್ ಆಗಬಲ್ಲ .ಆದ್ರೆ ಭಾರತದಲ್ಲಿ ಕಾಲೇಜ್ ಡ್ರಾಪ್ ಔಟ್ ಒಬ್ಬ ಮನೆಯ ಗೇಟ್ ದಾಟಿ ಹೊರ ಬರುವಷ್ಟೂ ಧೈರ್ಯ ,ಆತ್ಮಸ್ಥೈರ್ಯ ಬೆಳೆಸಿಕೊಂಡಿರಲ್ಲ -ಇನ್ನು ಹೇಗೆ ಸ್ವಾಮಿ ಬಿಲ್ ಗೇಟ್ಸ್ ಆಗೋದು?

ಇನ್ನು ಶಿಕ್ಷಣಕ್ಕೆ ಬರೋಣ.ನನಗೆ ಕಂಪ್ಯೂಟರ್ ಮುಟ್ಟುವ ಸೌಭಾಗ್ಯ ಸಿಕ್ಕಿದ್ದೇ ಕಾಲೇಜು ಮೆಟ್ಟಿಲೇರಿದ ಮೇಲೆ.ಅದೂ ಬ್ಲ್ಯಾಕ್ ಅಂಡ್ ವೈಟ್ ,MS DOS ಇದ್ದ ಕಂಪ್ಯೂಟರ್ .ಕಂಪ್ಯೂಟರ್ ಲ್ಯಾಬ್ ಒಳಗೆ ಹೋಕ್ಬೇದಾರೆ ಚಪ್ಪಲಿ ಹೊರಗೆ ಇಟ್ಟು ಹೋಗ್ಬೇಕಾಗಿತ್ತು.ಅಕಸ್ಮಾತ್ ಹವಾನಿಯಂತ್ರಕ ಸರಿ ಇಲ್ಲ ಅಂದ್ರೆ ಆ ದಿನ ಲ್ಯಾಬ್ ಇಲ್ಲ ! ಯಾಕಂದ್ರೆ ಹವಾ ನಿಯಂತ್ರಕ ಇಲ್ಲಾಂದ್ರೆ ಕಂಪ್ಯೂಟರ್ ಹಾಳಾಗುತ್ತೆ ಅನ್ನೋ ಭಯ ಟೀಚರ್ಗಳಿಗಿತ್ತು .ಆದ್ರೆ ನಾವು ಹವಾನಿಯಂತ್ರಕಗಳಿಲ್ಲದೆ ಕಂಪ್ಯೂಟರ್ ಗಳು ಕೆಲಸ ಮಾಡಲ್ಲ ಅನ್ನೋ ಮೂಢನಂಬಿಕೆ ಹೊಂದಿದ್ವಿ.

ಒಂದು ದಿನ ಲ್ಯಾಬ್ ನಲ್ಲಿ ಯಶವಂತ್ ಕಾನಿಟ್ಕರ್ ನ ಪುಸ್ತಕದಲ್ಲಿದ್ದ ಒಂದು ಗೇಮ್ ಪ್ರೋಗ್ರಾಮ್ ಬರೆದು ಅದನ್ನು execute ಮಾಡಲು ನೋಡ್ತಾ ಇದ್ದಾಗ ಮ್ಯಾಡಂ ಬಂದು ನೋಡಿ " ರೀ ಹೇಳಿದಷ್ಟು ಮಾಡ್ರಿ .ನಾನು To add N numbers program ಬರೀರಿ ಅಂದ್ರೆ ನೀವು ಗೇಮ್ ಪ್ರೋಗ್ರಾಮ್ ಮಾಡ್ತಾ ಇದ್ದೀರ get out I say " ಅಂದಿದ್ದು ಇಂದಿಗೂ ನೆನಪಿದೆ.
ಆಮೇಲೆ ಸಾರಿ ಕೇಳಿದ್ದಕೆ ಒಳಗೆ ಬಿಟ್ಟೂ " ರೀ ಇದೆಲ್ಲ ನೀವು ಮನೆಯಲ್ಲಿ ಮಾಡ್ಬೇಕು ಆಯ್ತಾ " ಅಂತ ಸಂತೈಸಿದ್ರು ಮ್ಯಾಡಮ್. ಮನೆಯಲ್ಲಿ ಕ್ಯಾಲ್ಕುಲೇಟರ್ ತೆಗೆಸಿಕೊಡೋದಕ್ಕೆ ಒದ್ದಾಡುವ ಕಾಲದಲ್ಲಿ ಕಂಪ್ಯೂಟರ್ ತಗೊಳ್ಳೋದು ಸಾಧ್ಯನಾ ? ಅಂತ ಕೇಳೋದಕ್ಕೆ ನನಗೆ ಧೈರ್ಯ ಸಾಲಲಿಲ್ಲ.
ಭಾರತದ ಯಾವ ಕಾಲೇಜಿನಲ್ಲಿ ಸ್ವ-ಉದ್ಯೋಗಕ್ಕೆ ಪ್ರೇರಣೆ ನೀಡಲಾಗುತ್ತೆ? ಇತ್ತೀಚೆಗೆ ಸ್ವ-ಉದ್ಯೋಗಕ್ಕೆಂದೇ ಕೆಲವು ಕಾಲೇಜುಗಳು ಶುರು ಆಗ್ತಾ ಇವೆ ಅದು ಒಳ್ಳೆಯ ಬೆಳವಣಿಗೆ .ಆಮೆರಿಕಾದಲ್ಲಿ ಸಾಫ್ಟ್ವೇರ್ ಗೆ ಇದ್ದಷ್ಟು ಬೇಡಿಕೆ ಭಾರತದಲ್ಲಿಲ್ಲ .ಅದಕ್ಕೆ ಬಹಳಷ್ಟು ಕಂಪನಿಗಳು ಭಾರತೀಯ ಮಾರುಕಟ್ಟೆಯನ್ನು ದೃಷ್ಟಿಯಲ್ಲಟ್ಟುಕೊಂಡು ಬಿಸ್ನೆಸ್ ಮಾಡ್ತಾ ಇಲ್ಲ.
ನೀವು ಭಾರತದ ಯಾವ ಮೂಲೆಗ ಹೋಗಿ ಮೆಡಿಕಲ್ ಸ್ಟೋರ್ ನವನಿಗೆ ಔಷಧಿ ಪಟ್ಟೀ ನೀಡಿ ,ಅವನು ಕರಾರುವಕ್ಕಾಗಿ ಅದೇ ಔಷಧಿಯನ್ನು ಹುಡುಕಿ ತಂದು ನಿಮಗೆ ಕೊಡ್ತಾನೆ.ಆದ್ರೆ ಅಮೆರಿಕಾದಲ್ಲಿ ಆ ಮೆಡಿಕಲ್ ಅಂಗಡಿಯವನಿಗೆ ಅದಕ್ಕೊಂದು ಸಾಫ್ಟ್ವೇರ್ ಬೇಕು! ಯಾವ ಔಷಧಿ ಎಲ್ಲಿದೆ ಅನ್ನೋದು ಅವನಿಗೆ ಹೇಳೋದೂ ಸಾಫ್ಟ್ವೇರ್ ,ಕೊನೆಗೆ ಬಿಲ್ ಪ್ರಿಂಟ್ ಮಾಡಿ ಕೊಡೋದೂ ಸಾಫ್ಟ್ವೇರ್ .
ಭಾರತದಲ್ಲಿ ಈ ಪರಿಯ ಅವಶ್ಯಕತೆ ಕಂಡು ಬಂದಿಲ್ಲದ್ದರಿಂದ ಭಾರತೀಯ ಮಾರುಕಟ್ಟೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಯಾವುದೇ ಪ್ರಾಡಕ್ಟ್ ತರೋದು ಅಷ್ಟೊಂದು ಲಾಭದಾಯಕವಲ್ಲ.ಭಾರತೀಯ ಕಂಪೆನಿಗಳಿಗೆ ತಮ್ಮದೇ ಆದ ಪ್ರಾಡಕ್ಟ್ ಗಳಿದ್ರೆ ಎಲ್ಲಾ ಸಮಸ್ಯೆಗೂ ಪರಿಹಾರ ಸಿಕ್ತಾ ಇತ್ತು ಅನ್ನೋ ನಂಬಿಕೆ ಪ್ರತಾಪ್ ರಲ್ಲಿದೆ .ನಮ್ಮ ನಾರಾಯಣ ಮೂರ್ತಿ ,ಅಜೀಮ್ ಪ್ರೇಮ್ ಜಿಯವರು R & D ಗಳಲ್ಲಿ ಸ್ವಲ್ಪ ಆಸಕ್ತಿ ತೋರಿಸಿದ್ರೆ ’ಈ ಪರಿಸ್ಥಿತಿ ’ ಬರ್ತಾ ಇರ್ಲಿಲ್ಲ ಅನ್ನೋದು ಪ್ರತಾಪ್ ಅನಿಸಿಕೆ.

ಆದ್ರೆ ಇನ್ಫೋಸಿಸ್ ,ವಿಪ್ರೋಗಳ ಬಳಿ ತಮ್ಮದೇ ಆದ ಪ್ರಾಡಕ್ಟ್ ಗಳಿದ್ರೂ ಅದಕ್ಕೆ ಮಾರುಕಟ್ಟೆ ಇಲ್ಲದ ಮೇಲೆ ಅವರದಾದರೂ ಏನ್ ಮಾಡ್ತಾರೆ ಅಲ್ವ? R & D ಏನಿದ್ರೂ ಆನೆಯನ್ನು ಸಾಕಿದ ಹಾಗೆ.ಆರ್ಥಿಕ ಹಿಂಜರಿತದ ಸಮಯದಲ್ಲಿ ಎಲ್ಲಾ ಕಂಪನಿಗಳೂ ಕತ್ತರಿ ಹಾಕೋದು ಮೊದಲು R&D ವಿಭಾಗಕ್ಕೆ .ವಿಪ್ರೋ,ಇನ್ಫೋಸಿಸ್ ಗಳ ಬಳಿ ತಮ್ಮದೇ ಆದ ಪ್ರಾಡಕ್ಟ್ ಗಳಿದ್ರೂ ಅದನ್ನು ಕಾಸು ಕೊಟ್ಟೂ ತಗೊಳ್ಳುವ ಮನಸ್ಥಿತಿ ನಮ್ಮಲ್ಲಿದೆಯೇ ?

ಯಾವ ಮನೆಯಲ್ಲಿ ಒರಿಜಿನಲ್ ವಿಂಡೋಸ್ ಇದೆ ಹೇಳಿ ನೋಡೋಣ ? ಪೈರೇಟೇಡ್ ಸಾಫ್ಟ್ವೇರ್ ಗಳನ್ನೇ ಬಳಸಿ ಅಭ್ಯಾಸವಾಗಿರುವ ನಮಗೆ ವಿಪ್ರೋ ,ಇನ್ಫೋಸಿಸ್ ಗಳ ಪ್ರಾಡಕ್ಟ್ ಗಳನ್ನು ಹಣ ಕೊಟ್ಟೂ ತಗೊಳ್ಳುವ ಮನಸ್ಸಿದೆಯೇ ?ನಾವೇನಿದ್ರೂ ಫ್ರೀ ಆಗಿರೋ ಯಾಹೂ ,ಜೀ ಮೇಲ್ ಬಳಸೋರು ! ಫ್ರೀ ಆಗಿ ಬ್ಲಾಗ್ ಸ್ಪಾಟ್ ನಲ್ಲಿ ಬ್ಲಾಗ್ ಬರಿಯೋರು .ಕಾಸು ಕೊಟ್ಟೂ ಪ್ರಾಡಕ್ಟ್ ತಗೊಳ್ಳಿ ಅಂದ್ರೆ ಯಾರು ತಗೋತಾರೆ ಸ್ವಾಮಿ ?

ನಾನು ಚಿಕ್ಕವನಿರ್ಬೇಕಾದ್ರೆ ಮುಂಗಾರು ಹಾಗೂ ಉದಯವಾಣಿ ಅಂತ ಎರಡು ಪೇಪರ್ ಗಳು ಬರ್ತಾ ಇದ್ದವು ಮನೆಗೆ. ಎರಡೂ ಕಪ್ಪು-ಬಿಳುಪಿನವು . ಇಪ್ಪತ್ತೈದು ವರ್ಷಗಳ ಮೇಲಾಯ್ತು ಕಪ್ಪು-ಬಿಳುಪು ಹೋಗಿ ಕಲರ್ ಮಾಡಿದ್ದು ಬಿಟ್ರೆ ಈ ಪತ್ರಿಕೆಗಳು ಏನು R&D ಮಾಡಿವೆ ? ಏನು ಮಹತ್ತರ ಬದಲಾವಣೆಯನ್ನು ತಂದಿವೆ?ಅದರಲ್ಲೂ ಪಾಪ ಮುಂಗಾರು ಅನ್ನೋ ಪೇಪರೇ ಇಲ್ಲ ಈಗ!

ಸಂಪಾದಕರು ಬದಲಾದರು ,ಬಣ್ಣ ಬದಲಾಯಿತು ಅಷ್ಟೇ ಮತ್ತೆನೂ ಬದಲಾಗಿಲ್ಲ.ಯಾಕಂದ್ರೆ ಪೇಪರ್ ನವರಿಗೆ R&D ಅನ್ನೋದು ನಮಗೆ ಸಂಬಂಧಪಟ್ಟದ್ದಲ್ಲ ಅನ್ನೋ ಭಾವನೆ ಬಂದಿರಬೇಕು.

India ಅಂದ್ರೆ Cost advantage ಅಷ್ಟೆ ಅಲ್ಲ lesser cost with better quality ಅನ್ನೋದು ಯಾರಿಗೂ ಮನದಟ್ಟಾಗ್ತಾನೇ ಇಲ್ಲ !

ಇಸ್ರೋ ಗೆ ಮೊನ್ನೆ ಎಂಟು ಉಪಗ್ರಹ ಉಡಾವಣೆ ಮಾಡೋ ಅವಕಾಶ ಸಿಕ್ಕಿತು.ಅಲ್ಲೂ ಕೆಲಸ ಮಾಡಿದ್ದು cost advantage ! ಆ ಉಪಗ್ರಹಗಳ ಮಾಲಕರು ’ಭಾರತದ ಕಮ್ಮಿ ಖರ್ಚಿಗೆ ಅತ್ತ್ಯುತ್ತಮ ಉಡಾವಣಾ ಸಾಮರ್ಥ್ಯದ ಮೇಲೆ ವಿಶ್ವಾಸವಿದ್ದದ್ದಕ್ಕೇ ಇಸ್ರೋ ಗೆ ಆ ಕೆಲಸ ವಹಿಸಿದ್ದು ಅನ್ನೋದು ನಮಗೆ ಅನಿಸಲ್ಲ.ಚಂದ್ರಯಾನ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಪಡೆದದ್ದು ಭಾರತೀಯ ವಿಜ್ಞಾನಿಗಳ ಸಾಮರ್ಥ್ಯದ ಜೊತೆ ಜೊತೆಗೆ ,ಅಮೆರಿಕಾ ಮಾಡೋ ಖರ್ಚಿನ ಅರ್ಧಕ್ಕಿಂತ ಕಡಿಮೆ ಖರ್ಚಿನಲ್ಲಿ ಉಡಾವಣೆ ನಡೆಸಿದ್ದು !

ಸುಹಾಸ್ ಗೋಪಿನಾಥ್ ತಮ್ಮ ಹದಿನಾಲ್ಕನೇ ವಯಸ್ಸಿಗೆ ಕಂಪೆನಿಯೊಂದರ CEO ಆಗಿ ಪ್ರಪಂಚದ ಅತ್ಯಂತ ಕಿರಿಯ CEO ಅನ್ನೋ ಖ್ಯಾತಿ ಪಡೆದವರು.ಅವರ ಕಂಪೆನಿ ಇರೋದು ಮತ್ತಿಕೆರೆಯಲ್ಲಿ ,ಆದ್ರೆ ಪಾಪ ಅವರು ಕಂಪೆನಿ ಮೊದಲಿಗೆ ಸ್ಥಾಪಿಸಿದ್ದು ಅಮೆರಿಕಾದಲ್ಲಿ! ಭಾರತ ಕಾನೂನಿನ ಕಟ್ಟುಪಾಡುಗಳು ಅವರಿಗೆ ಕಂಪೆನಿ ಸ್ಥಾಪಿಸಲು ಅವಕಾಶ ಮಾಡಿ ಕೊಟ್ಟಿಲ್ಲ.ಅದಕ್ಕೇ ಅವರು ಅಮೆರಿಕಾದಲ್ಲಿ ಅದರ ಮುಖ್ಯ ಕಚೇರಿಯನ್ನು ಸ್ಥಾಪಿಸಿದರು.ಈಗ ಹೇಳಿ ಅವರನ್ನು ಬಿಲ್ ಗೇಟ್ಸ್ ಆಗಲು ತಡೆದದ್ದು ಯಾರು?
ಇಂಜಿನಿಯರಿಂಗ್ ಮುಗಿಸಿ ಬೇಗ ಕೆಲಸ ಸಿಕ್ಕಿದ್ರೆ ಸೈ .ಇಲ್ಲಾಂದ್ರೆ ಮನೆಯವರೇ ನಮ್ಮ ನಾಮರ್ಥ್ಯದ ಬಗ್ಗೆ ಅನುಮಾನಿಸ್ತಾರೆ.ಅಂಥ ಸನ್ನಿವೇಶಗಳಲ್ಲಿ ಒಬ್ಬ ಹೇಗೆ ಬಿಲ್ ಗೇಟ್ಸ್ ಆಗುವ ಕನಸು ಕಾಣಬಲ್ಲ?

ಬೆಂಗಳೂರಿನಲ್ಲಿ ಸಾವಿರಾರು ಪತ್ರಕರ್ತರಿದ್ದಾರೆ.ಆದ್ರೆ ಅವರ್ಯಾಕೆ ತಮ್ಮ ತಮ್ಮ ಕೆಲಸಗಳಲ್ಲಿ ಸಂತುಷ್ಟರಾಗಿದ್ದಾರೆ.ಯಾಕೆ ಯಾರೊಬ್ಬನೂ ರವಿ ಬೆಳಗೆರೆಯ ಹಾಗೆ ಸ್ವತಂತ್ರವಾದ ಪತ್ರಿಕೆ ಹೊರ ತರಲು ಮುಂದಾಗಲ್ಲ?ಯಾವ ಭಯ ಅವರನ್ನು ಕಾಡುತ್ತೆ?ಬಿಲ್ ಗೇಟ್ಸ್ ಬರೀ ಸಾಫ್ಟ್ವೇರ್ ಕ್ಷೇತ್ರದಲ್ಲಷ್ಟೆ ಅಲ್ಲ ಪತ್ರಿಕೋದ್ಯಮದಲ್ಲೂ ಆಗಬಹುದಲ್ಲವೇ ?

ಅಷ್ಟಕ್ಕೂ ನಾರಾಯಣ ಮೂರ್ತಿಗಳು ಪಾಟ್ನಿ ಕಂಪ್ಯೂಟರ್ಸ್ ನ ಕೆಲಸ ಬಿಡುವ ಧೈರ್ಯ ಮಾಡಿ ಇನ್ಫೋಸಿಸ್ ಸ್ಥಾಪಿಸಿದ್ದಕ್ಕೆ ಅವರು ಭಾರತದ ಬಿಲ್ ಗೇಟ್ಸ್ ಆಗಿದ್ದು .ಇಲ್ಲಾಂದ್ರೆ ಪಾಟ್ನಿಯಲ್ಲೆ ಜೀವನ ಪರ್ಯಂತ ದುಡಿದು ನಿವೃತ್ತಾರಾಗ್ತಾ ಇದ್ರೇನೋ .ನಾರಾಯಣ ಮೂರ್ತಿಗಳು ಕಂಪೆನಿ ಸ್ಥಾಪಿಸಲು ತನು-ಮನ-ಧನ ಸಹಕಾರ ನೀಡಿದ್ದು ಸುಧಾ ಮೂರ್ತಿಯವರು.

ಬಿಲ್ ಗೇಟ್ಸ್ ಆಗೋ ಧೈರ್ಯ ,ಸಾಮರ್ಥ್ಯವನ್ನು ನೀಡುವವರು ಭಾರತದಲ್ಲಿ ತುಂಬಾ ಕಮ್ಮಿ.ಸ್ವ ಉದ್ಯೊಗಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡ್ರೆ , " ನಾನು ಮೊದಲೇ ಹೇಳಿದ್ದೆ ವಿಪ್ರೋ ನೋ ,ಇನ್ಫೋಸಿಸ್ ಸೇರ್ಕೊ ಅಂತ ಕೇಳಿಲ್ಲ .ಬಿಲ್ ಗೇಟ್ಸ್ ಆಗ್ತೀನಿ ಅಂದ .ಈಗ ನೋಡಿ ಬಿಲ್ ಗೇಟ್ಸ್ ಬಿಡಿ ಗೇಟ್ ಮುಂದೆ ಇಷ್ಟೊಂದು ಬಿಲ್ ಗಳು ಬಿದ್ದಿವೆ ಒಂದನ್ನೂ ಕಟ್ಟೋ ಯೋಗ್ಯತೆ ಇಲ್ಲ ....." ಅಂತ ಚುಚ್ಚು ಮಾತಾಡ್ತಾರೆ.

ಎಲ್ಲರಿಗೂ ಸುಧಾಮೂರ್ತಿಯವರ ಹಾಗೆ ಒಳ್ಳೆಯ ಹೆಂಡತಿ ಸಿಗಲ್ವಲ್ಲ !

ಜಗಲಿ ಹಾರದವನು ಆಕಾಶಕ್ಕೆ ಹಾರಿಯಾನೇ ಅನ್ನೋ ಮಾತಿದೆ.ಜಗಲಿ ಹಾರಿಯಾಗಿದೆ ಇನ್ನು ಆಕಾಶಕ್ಕೆ ಏಣಿ ಇಡೋದಷ್ಟೇ ಬಾಕಿ.

34 comments:

  1. Nice observation...Keep writing..good !!!!! keep it up...

    ReplyDelete
  2. ಪ್ರತಾಪ್‍ನ ಕಾಲಂ ಓದಿ ಈಗಷ್ಟೇ ನಿಮ್ಮ ಬ್ಲಾಗ್ ಓದಿದೆ. ಅಪರೂಪಕ್ಕೆ ಒಳ್ಳೆಯದಾಗಿ ಪ್ರತಾಪ್ ಬರೆದಿದ್ದ ಎಂದು ಯೋಚಿಸಿದ್ದೆ. ನೀವೂ ಅವನಿಗಿಂತ ಚೆನ್ನಾಗಿ ಬರೆದು ಒಳ್ಳೆಯ ಉತ್ತರ ಕೊಟ್ಟಿದ್ದೀರಿ ಮಾರಾಯರೆ.
    ಕನ್ನಡದ ಪತ್ರಕರ್ತರು ಬೆಂಗಳೂರು ಬಿಟ್ಟು ಅಥವಾ ತಮ್ಮ ಮನೆಬಿಟ್ಟು ಎಲ್ಲಿಗೂ ಹೋಗಲು ಇಷ್ಟ ಪಡುವುದಿಲ್ಲ. ಚೆನ್ನೈ ಯಲ್ಲಿ, ಕಲ್ಕತ್ತಾದಲ್ಲಿ ಎಷ್ಟು ಕನ್ನಡಿಗ ಪತ್ರಿಕೆಗಳ ಪತ್ರಕರ್ತರಿದ್ದಾರೆ ಸ್ವಾಮಿ? ತುಂಬಾ ಪ್ರಶ್ನೆಗಳಿವೆ.
    ಅಭಿನಂದನೆಗಳು.
    ಒಲವಿನಿಂದ
    ಬಾನಾಡಿ

    ReplyDelete
  3. ನೀವು ಹೇಳಿದಂತೆ ಪ್ರತಾಪರ ಕಳೆದ ವಾರದ ಲೇಖನಕ್ಕಿಂತ ಈ ಬಾರಿಯ ಲೇಖನ ಸುಧಾರಿಸಿದೆ.. ನಿಮ್ಮ ಆಲೋಚನೆಗಳಿಗೆ ನನ್ನ ಸಹಮತವಿದೆ, R&D ಕೇವಲ ಸಾಫ್ಟ್-ವೇರಿಗೆ ಏಕೆ ಸೀಮಿತವಾಗಿರಬೇಕು. ಅದರಲ್ಲೂ ಇಲ್ಲೇ ಕುಳಿತು ಪ್ರಪಂಚದ ಮೂಲೆ ಮೂಲೆಯಲ್ಲಿನ ಸುದ್ದಿ ಕೊಡುವ ಪತ್ರಕರ್ತರ ಬಗ್ಗೆ ಸರಿಯಾಗಿಯೇ ಹೇಳಿದ್ದೀರಿ.

    ReplyDelete
  4. ಎಲ್ಲರೂ ಹೀರೋ ಆಗೋದಿಲ್ಲ..:) ಚೆನ್ನಾಗಿದೆ, ಉತ್ತಮ ಹಾಗೂ ಆರೋಗ್ಯಕರ ಪೈಪೋಟಿಯ ಬ್ಲಾಗಿ೦ಗ್ ಸರ್..

    ಅ೦ದ ಹಾಗೆ ನಮ್ಮ ಭಾರತದಿ೦ದ ಏನೇನೋ ಐಟಿ ಇನ್ನೋವೇಶನ್ ಆಗಿಲ್ಲ ಅ೦ತಾ ಹೇಳೋವವರಿಗೆ ಕೆಳಗಿವೆ ಕೆಲ ಲಿ೦ಕು ತುಣುಕುಗಳು..:)
    http://www.readwriteweb.com/archives/india_top_web_apps.php

    http://www.readwriteweb.com/archives/india_innovation.php

    http://www.readwriteweb.com/archives/state_of_innovation_in_india_2009.php

    http://www.hotteststartups.in/

    ನಮ್ಮ ಭಾರತ ಏನು ಅ೦ತಾ ಜಗತ್ತಿಗೆ ತೋರಿಸೋ ದಿನಗಳು ದೂರವಿಲ್ಲ....

    ReplyDelete
  5. sandeep,
    this is a very good write up!

    what you have written seems to be like counterpoints but these are the basic questions we need to ask ourselves, right?

    thank you.

    ReplyDelete
  6. ಚೆನ್ನಾಗಿ ಬರೆದ ವಿಶ್ಲೇಷಣೆ. ಇವತ್ತು ರಿಸೆಶನ್ ಅಂತ ಎಲ್ಲಾರೂ ತಲೆ ಮೇಲೆ ಕೈ ಹೊತ್ತಿ ಕೂತವ್ರೇ. ಬೇರೆಯವ್ರಿಗೆ ಕೆಲ್ಸ ಮಾಡ್ದ್ರೆ ಮಾತ್ರ ಕೆಲ್ಸ ಅನ್ನೋದು ನಮ್ಮ ಸಮಾಜದಲ್ಲಿ ಕೂತುಬಿಟ್ಟಿದೆ. ಬರೀ ಇನ್ನೊಬ್ರಿಗೆ ಕೆಲ್ಸ ಮಾಡಿ ಬಿಲ್ ಗೇಟ್ಸ್ ಆಗೊದಕ್ಕಾಗಲ್ಲ.

    ReplyDelete
  7. ನಮಸ್ಕಾರ ಸಂದೀಪ್,

    ಚೆನ್ನಾಗಿ ಬರಿತೀರಾ.
    ಎರಡೂ ಲೇಖನಗಳಲ್ಲಿ ಒಳ್ಳೆಯ Law Pointಗಳನ್ನು ಕೊಟ್ಟಿದ್ದೀರಾ.

    ReplyDelete
  8. ಖಂಡಿತ ನಾವು ಯಾರೂ ಒರಿಜಿನಲ್ ವಿಂಡೋಸ್, ವಿಸ್ಟಾವ ನ್ನು ಉಪಯೋಗಿಸಲ್ಲ. ಯಾಕಂದ್ರೆ ಒರಿಜಿನಲ್ ಗಿಂತ ಪೈರೆಟೆಡ್ ಚೀಪ್ ಆಗಿ ಸಿಗೋವಾಗ ಯಾಕೆ ರಾಶಿ ದುಡ್ಡು ಖರ್ಚು ಮಾಡೋದು ಹೇಳಿ? ಒರಿಜಿನಲ್ ಹಾಕಿದರೂ ವೈರಸ್ ಬಂದ್ರೆ ಅದರ ಕೆಲಸವೂ ನಿಲ್ ಅಷ್ಟೇ. 100 ರೂ ಗೆ ಪೈರೆಟೆಡ್ ತಂದು ಪದೇ ಪದೇ ಇನ್ಸ್ಟಾಲ್ ಮಾಡೋದೇ ಸುಲಭ ಅಲ್ವಾ?
    ಒರಿಜಿನಲ್ ನ್ನು ಪೈರೆಟೆಡ್ ನಷ್ಟು ಅಲ್ಲದಿದ್ದರೂ ಸ್ವಲ್ಪ ದರ ಕಡಿಮೆಯಲ್ಲಿ ಗ್ರಾಹಕರಿಗೆ ಸಿಗೋವಂತೆ ಮಾಡಿದರೆ ಗ್ರಾಹಕರು ಸ್ವೀಕರಿಸಲ್ಲ ಅಂತೀರಾ?
    ಬರಹ ಚೆನ್ನಾಗಿದೆ.

    ReplyDelete
  9. Sandeep
    You are right. pratap had written very well this time.
    But You have done an excellent job dear Sandeep. i clapped after reading this.
    Every point has been well argued.
    i wish they would put this up in the newspaper. you would make a better columnist da.
    Take care
    :-)
    malathi S

    ReplyDelete
  10. Sandeep ravarE,

    Pratap Simharavaru IT udyamada samagra adhyayana maadade thamage thochuva haage barediddaare. Adakke prathiyaagi thamma vaadagaLu chennagi oppuththave.

    Raveesha

    ReplyDelete
  11. ಆ ಕಾಲದಲ್ಲಿ ಭಾರತಕ್ಕೆ ಕಂಪನಿಗಳು ಬಂದಿದ್ದು ಬರೀ ಕಾಸ್ಟ ಅಡವಾಂಟೇಜಗಾಗಿ ನಂತರ ಇಲ್ಲಿನ ಜನರ ಬುಧ್ಧಿಮತ್ತೆಯನ್ನು ಅವರು ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ... ಭಾರತದಲ್ಲಿ ಸರ್ವೀಸ ಇಂಡಸ್ಟ್ರಿ ಬೆಳೆಯಿತೆ ಹೊರತು ಸಂಶೋಧನೆ ಬೆಳೆಯಲಿಲ್ಲ. ಭಾರತದಲ್ಲಿ ಉದ್ಯೋಗ ಬಹುದೊಡ್ಡ ಮಾನದಂಡ, ಸ್ವಥಃ ಏನೊ ಮಾಡಲು ಹೊರಟರೆ ಪ್ರೊತ್ಸಾಹ ಕಮ್ಮಿ ಹಾಗಾಗಿ ಇಲ್ಲಿ ಬಿಲ್ ಗೇಟ್ಸ ಯಾರೂ ಆಗಿಲ್ಲವೆನ್ನಬಹುದಷ್ಟೆ... ಈಗ ಆಗಿದ್ದಕ್ಕೆಲ್ಲ ನಾವೇ ಹೊಣೆ ಹಾಗೆ ಅದನ್ನ ಸರಿ ಮಾಡುವುದೂ ಕೂಡ.. ಬಹಳ ಚೆನ್ನಾಗಿ ಬರೆದಿದ್ದೀರಿ, ನಿಷ್ಪಕ್ಷಪಾತ ನಿರೂಪಣೆ ಇಷ್ಟವಾಯಿತು..

    ReplyDelete
  12. V.Bhattaru sikkida kaarana prataap columist aada.. alladiddare?

    - Booba

    ReplyDelete
  13. ಪ್ರತಾಪ್ ರ ಮೊದಲನೆ ಲೇಖನದಲ್ಲಿ ಖಂದನಾರ್ಹ ಅಂಶಗಳಿದ್ದವು, ಅದನ್ನು ಖಂಡಿಸಿ ಬರೆದದ್ದು ಸರಿಯೆ. ಆದರೆ ಎರಡನೆ ಬರಹ ಆ ರೀತಿಯದಾಗಿರಲಿಲ್ಲ, ನಮ್ಮನ್ನು ಪ್ರಶ್ನಿಸಿ ಕೊಳ್ಳುವ ತುಂಬಾ ಅಂಶಗಳಿದ್ದುವು ಅಲ್ಲಿ. ಲೇಖನ ಯಾವ ಸಮಸ್ಯೆಯತ್ತ ಬೆರಳು ಮಾಡುತ್ತಿದೆ ಎಂಬುದನ್ನು ಅರಿಯದೆ ಖಂಡಿಸಲೋಸ್ಕರವೆ ಬರೆಯೋದು ಅಷ್ಟು ಸಮಂಜಸವಲ್ಲ. ಇಸ್ರೋದಂತಹ ಸಂಸ್ಥೆಗಳು ಅನುಭವಿಸುತ್ತಿರುವ ಸಮಸ್ಯೆಗಳ ಹೊರತಾಗಿ ಸಹ ಅವರು ಮಾಡಿರುವಂತಹ ಸಾಧನೆ ಎಲ್ಲರು ಮೆಚ್ಚುವಂತಹುದೆ, ನಮ್ಮನ್ನು ಸಮರ್ಥಿಸಲೋಸ್ಕರ ಅದರಲ್ಲು ಹುಳುಕು ಹುಡುಕೋದು ಅಷ್ಟು ಸರಿಯಲ್ಲ. ಪ್ರತಾಪ್ ರ ಬರಹವನ್ನು ಪೂರ್ಣವಾಗಿ ಓದಿದ ನನಗನಿಸಿದ್ದು ಇಷ್ಟೆ, ನಾವು ನಮ್ಮ ದೂರದ ಭವಿಶ್ಯದತ್ತ ನೋಡುತ್ತಿಲ್ಲ ಅನ್ನೊದು. ಅದಕ್ಕೆ ಸಮಸ್ಯೆಗಳಿರೋದು ನಿಜ, ಆದರೆ ನಮ್ಮ ತರಹವೆ ಸಮಸ್ಯೆಗಳ ಪಟ್ಟಿ ಮಾಡುತ್ತ ಕೂತಿದ್ದರೆ ಇಂದು ನಮಗೆ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ, ಇಸ್ರೋದವರು ಉಪಗ್ರಹ ಹಾರಿಸುತ್ತಿರಲಿಲ್ಲ. ನಾವು ಅವರೆಣಿಸಿದ ಮಟ್ಟಕ್ಕೆ ತಲುಪಿರಬೇಕನ್ನುತಿಲ್ಲ, ಆದರೆ ಅವರು ಹೇಳುವುದರಲ್ಲಿ ಸತ್ಯವಿದೆ ಎಂಬ ಅರಿವಾದರೂ ನಮಗೆ ಇರಬೇಕು.

    ReplyDelete
  14. ಕಾಮತ್ರೆ, ಚೆನ್ನಾಗಿ ಬರೆದಿದ್ದೀರಿ. ಆದರೆ ಇವೆಲ್ಲವೂ ಪ್ರತಾಪ ಸಿಂಹರ ಬರಹಕ್ಕೆ counter ವಾದ ಎನ್ನುವುದಕ್ಕಿಂತ ಹೆಚ್ಚಾಗಿ ನಮ್ಮನ್ನು ನಾವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು. ಅಲ್ವಾ?

    ReplyDelete
  15. prataap simha ee baari kooDa bahaLashTu asMbhaddhagaLannu tuMbiddaare. upagrahakkoo mattu naavu baLasuva maobile phone goo illa sallada link srusHTi sibiTTiddaare, vaada gellOdakke.. nimmadu fitting reply, channaagide.

    ReplyDelete
  16. ಮೆಚ್ಚಿಕೊಂಡ ಹಾಗೂ ಮೆಚ್ಚಿಕೊಳ್ಳದ ಎಲ್ಲರಿಗೂ ಧನ್ಯವಾದಗಳು!

    ರೂಪಾ,ಬಾನಾಡಿ,ಪಾಲ,ಪ್ರಮೋದ್,ಹೇಮಶ್ರೀ,ಕ್ರಿಯೇಟೀಮ್,ಶಿವಾನಂದ,ರವೀಶ್,ಪ್ರಭುರಾಜ್, ಧನ್ಯವಾದಗಳು!

    ಮಾಲತಿ ನೀವು ನನ್ನಲ್ಲಿಟ್ಟಿರೋ ವಿಶ್ವಾಸಕ್ಕೆ ಧನ್ಯವಾದಗಳು.

    ಬೂಬ ನೀವು ಹೇಳಿದ್ದು ನಿಜ ಈ ಬಗ್ಗೆ ದೊಂಬಯ್ಯ ಮೇಸ್ತ್ರಿಗಳ ಬಳಿ ಕಂಪ್ಲೇಂಟ್ ಕೊಡೋಣ:)

    ಸಿಂಧು ,
    ನೀವು ಹೇಳಿದ್ದು ಸ್ವಲ್ಪ ಮಟ್ಟಿಗೆ ನಿಜ.ಆದ್ರೆ ಒಂದು ಮಾತು : ನೀವು ನೂರು ರುಪಾಯಿಯ ಪೈರೇಟೇಡ್ ಸಾಫ್ಟ್ವೇರ್ ಬಗ್ಗೆ ಮಾತಾಡಿದ್ರಿ ! ಆದ್ರೆ ನಾನೇನಾದ್ರೂ ನೂರು ರುಪಾಯಿ ಕೊಟ್ಟು ಪೈರೇಟೇಡ್ ಸಾಫ್ಟ್ವೇರ್ ತಗೊಂಡ್ರೆ ನನ್ನ ಸ್ನೇಹಿತರು ನನಗೆ ಎಕ್ಕಡ ತಗೊಂಡೂ ಬಾರಿಸ್ತಾರೆ.

    "ಮಗನೇ ನನ್ ಹತ್ರ ಕೇಳಿದ್ರೆ ಫ್ರೀ ಆಗಿ ಸಿ.ಡಿ ಕೊಡ್ತಿದ್ನಲ್ಲೋ ಯಾಕೋ ನೂರು ರುಪಾಯಿ ಖರ್ಚು ಮಾಡಿದೆ " ಅಂತ!
    ಕ್ಯಾಸ್ಪರ್ ಸ್ಕೀ ಅಂತ Anti Virus software ಇದೆ .ಅದರ ಬೆಲೆ ಕೇವಲ ೭೦೦ ರೂಪಾಯಿ ! ಆದ್ರೂ ಜನ ಅದರ ಪೈರೇಟೇಡ್ ವರ್ಷನ್ ಬಳಸ್ತಾರೆ ಏನ್ ಮಾಡೋಣ?

    ಅಮೆರಿಕಾದಲ್ಲಿ ಕಾನೂನು ಬಲವಾಗಿದೆ ಅದಕ್ಕೆ ಅಲ್ಲಿ ಸ್ವಲ್ಪ ಪೈರೆಸಿ ಕಮ್ಮಿ(ನನಗೆ ಗೊತ್ತಿಲ್ಲ ಅಮೆರಿಕಾದಲ್ಲಿದ್ದವ್ರೇ ಹೇಳ್ಬೇಕು!)

    ಸತೀಶ್ ,

    ನೀವು ಲೇಖನದ ಆಶಯವನ್ನು ತಪ್ಪಾಗಿ ಅರ್ಥೈಸಿದ್ದೀರಾ.
    ಮೊದಲನೆಯದು ನನಗೂ ಪ್ರತಾಪ್ ರ ಲೇಖನ ಇಷ್ಟ ಆಗಿದೆ.
    ಎರಡನೆಯದು ನಾನು ಒಂದು ವರ್ಷ ಇಸ್ರೋದಲ್ಲಿ ಅಪ್ರೆಂಟಿಸ್ ಆಗಿ ಅಲ್ಲಿನ ಘಟಾನುಘಟಿ ವಿಜ್ಞಾನಿಗಳ ಜೊತೆ ಕೆಲಸ ಮಾಡಿದ್ದೀನಿ.ನನಗೆ ಆ ಬಗ್ಗೆ ಹೆಮ್ಮೆ ,ಗೌರವ ಎರಡೂ ಇದೆ.
    ಆದರೂ ತಿಳಿಯದೆ ಅವರಿಗೆ ನೋವಾಗುವ ಹಾಗೆ ಬರೆದಿದ್ರೆ unconditional Sorry!

    ನೋಡಿ ಇಸ್ರೋದ ಟ್ರಾನ್ಸ್ಪಾಂಡರ್ ಗಳು ಮಾರಾಟಕ್ಕಿರೋದು.ಅದನ್ನು ಭಾರತೀಯರೂ ಸೇರಿದಂತೆ ಯಾರು ಬೇಕಾದ್ರೂ ಬಾಡಿಗೆಗೆ ತಗೋಬಹುದು .ಅದರ ಕಾಸ್ಟ್ ಅಡ್ವಾಂಟೇಜ್ ಬಗ್ಗೆಯಷ್ಟೆ ಹೇಳಿರೋದು ನಾನು.

    ReplyDelete
  17. ವಿಕಾಸ್ ,

    ಖಂಡಿತ ಇದು ನಮ್ಮನ್ನು ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ .ಅದಕ್ಕೆ ನಾನು ಪ್ರತಾಪ್ ಸಿಂಹ ಈ ಸಲವೂ ಕೆಲವು ತಪ್ಪುಗಳನ್ನು ಮಾಡಿದ್ದರೂ ಅದರ ಬಗ್ಗೆ ಪ್ರಸ್ತಾವ ಮಾಡಿಲ್ಲ.



    ನನಗೆ ಬಿಲ್ ಗೇಟ್ಸ್ ಅಂದ್ರೆ ನೆನಪಾಗೋದು ಹಣ .
    ಆದ್ರೆ ನಾರಾಯಣ ಮೂರ್ತಿ ,ಪ್ರೇಮ್ ಜಿ ಅಂದ್ರೆ ನೆನಪಾಗೋದು ಅಪಾರವಾದ ಉದ್ಯೋಗ ಸೃಷ್ಟಿ..
    ವಿಜಯ್ ಮಲ್ಯ ಅಂದ್ರೆ ನೆನಪಾಗೋದು..... ಬಿಡಿ ಬಹಳಷ್ಟು ನೆನಪಾಗುತ್ತೆ!

    ನಾರಯಣ ಮೂರ್ತಿಗಳ ಬಗ್ಗೆ ಲಘುವಾಗಿ ಮಾತಾಡಿದ್ದು ನಂಗೆ ಖಂಡಿತ ಇಷ್ಟ ಆಗಿಲ್ಲ.
    ಐಟಿಯವರ ಕೆಲಸ ಹೋದ್ರೆ ನಾರಾಯಣ ಮೂರ್ತಿಗಳ ತಪ್ಪೇನು?ಐಟಿಯವರ ಕೆಲಸ ಹೋದ್ರೆ ಅದಕ್ಕೆ ಪರ್ಯಾಯವಾದ ಉದ್ಯೋಗ ಕಲ್ಪಿಸಿಕೊಡೋದು ಅಸಂಭವ!

    NGEF ಮುಚ್ಚಿ ಹೋಯ್ತು ಯಾರು ಏನ್ ಮಾಡಿದ್ರು? ITI ರೋಗಗ್ರಸ್ತವಾಗಿವೆ ಸರಕಾರ ಏನ್ ಮಾಡಿದೆ?

    ಬಿಸ್ ನೆಸ್ ಮೆನ್ ಗಳ ಕೆಲಸ ಹಣ ಮಾಡೋದು.ಅದನ್ನು ಅವರು ಮಾಡ್ತಾರೆ ಅವರನ್ನು ದೂಷಿಸಿ ಉಪಯೋಗವಿಲ್ಲ.

    ಮೊನ್ನೆ ವಿಜಯ ಕರ್ನಾಟಕ ದ ಮುಖಪುಟ ಸಂತೂರ್ ಆಂಟಿ ತುಂಬಿದ್ಲು.
    ಕೊನೆ ಪುಟವೂ ಅವಳೇ.... ಇದು ಬಿಸ್ನೆಸ್ ಅಲ್ವ? ಆಗ ಪತ್ರಿಕಾಧರ್ಮ ಎಲ್ಲಿ ಬಚ್ಚಿತ್ತು?
    ಬೇರೆಯವರ ಬಿಸ್ ನೆಸ್ strategy ಬಗ್ಗೆ ಮಾತಾಡೋದು ಸುಲಭ ..

    ನನ್ನ ಸ್ನೇಹಿತ ಯಾವಾಗ್ಲೂ ಹೇಳ್ತಾ ಇರ್ತಾನೆ "ಬೇರೆಯವರ ಕೈ ಕೆಳಗೆ ಕೆಲಸ ಮಾಡಿ ಮಾಡಿ ಸಾಕಾಯ್ತು.ಇನ್ನು ನಾನೇ ಏನಾದ್ರೂ ಮಾಡ್ಬೇಕು " ಅಂತ ...
    ಆಗ ನಮ್ಮ ಬಾಸ್ ನಾವೇ ಆಗಬಹುದಂತೆ!
    What about customer? customer ಮುಂದೆ ಯಾವ ಮಾಲೀಕನಾದ್ರೂ ತಗ್ಗಿ ಬಗ್ಗಿ ನಡೆಯಲೇಬೇಕು..

    ಇನ್ನೊಂದು ವಿಚಾರ ಬಿಲ್ ಗೇಟ್ಸ್ ಅಂದ್ರೆ ಯಾರು ಅಂತ ಅವನು ಬಿಲ್ ಗೇಟ್ಸ್ ಆದ ಮೇಲೆ ಗೊತ್ತಾಗಿದ್ದು.
    ಭಾರತದಲ್ಲಿ ಬಹಳಷ್ಟು ಬಿಲ್ ಗೇಟ್ಸ್ ಗಳು ಮುಂದೆ ಕಾಣ್ತಾರೆ .ಅವರನ್ನು ಈಗಲೇ ಗುರುತಿಸೋದು ಕಷ್ಟ...

    ReplyDelete
  18. ಕ್ಯಾಸ್ಪರಸ್ಕಿ ಗೆ ರೂ. ೧೦೦೦/- ಕೊಟ್ರೆ ೩ ಲೈಸೆನ್ಸ್ ಕೊಡ್ತಾರೆ. ೩ ಜನ ಹಂಚಿಕೊಳ್ಳಬಹುದು. ಆಗ ತಲೆಗೆ ರೂ. ೩೩೩/- ಬೀಳೊತ್ತೆ ಅಷ್ಟೆ.

    ReplyDelete
  19. Good one Sandeep. The write up puts the reader to self introspection.
    As in any other country (this is true for US too), the funds for research is very low even in our country. But we don’t have to lose hope. The Indian Govt. is doing great job to attract young talents towards research careers. Check this out: http://www.iisc.ernet.in/kvpy/

    ReplyDelete
  20. "ಕಂಪ್ಯೂಟರ್ ಲ್ಯಾಬ್ ಒಳಗೆ ಹೋಕ್ಬೇದಾರೆ ಚಪ್ಪಲಿ ಹೊರಗೆ ಇಟ್ಟು ಹೋಗ್ಬೇಕಾಗಿತ್ತು.ಅಕಸ್ಮಾತ್ ಹವಾನಿಯಂತ್ರಕ ಸರಿ ಇಲ್ಲ ಅಂದ್ರೆ ಆ ದಿನ ಲ್ಯಾಬ್ ಇಲ್ಲ ! ಯಾಕಂದ್ರೆ ಹವಾ ನಿಯಂತ್ರಕ ಇಲ್ಲಾಂದ್ರೆ ಕಂಪ್ಯೂಟರ್ ಹಾಳಾಗುತ್ತೆ ಅನ್ನೋ ಭಯ ಟೀಚರ್ಗಳಿಗಿತ್ತು .ಆದ್ರೆ ನಾವು ಹವಾನಿಯಂತ್ರಕಗಳಿಲ್ಲದೆ ಕಂಪ್ಯೂಟರ್ ಗಳು ಕೆಲಸ ಮಾಡಲ್ಲ ಅನ್ನೋ ಮೂಢನಂಬಿಕೆ ಹೊಂದಿದ್ವಿ." ಇದು ಸತ್ಯ ಸಂದೀಪ್ ... ಇನ್ನುಳಿದಂತೆಯೂ ನೀವು ಹೇಳಿದ್ದಕ್ಕೆ ನನ್ನ ವೋಟ್ ಇದೆ. ಸುಂದರವಾಗಿ ಬರೆದಿದ್ದೀರಿ.
    - ಶಮ, ನಂದಿಬೆಟ್ಟ

    ಹಾಂ ... ನಿಮಗಿನ್ನೂ ಮದುವೆ ಆಗದೆ ಇದ್ದಲ್ಲಿ ಸುಧಾ ಮೂರ್ತಿಗಿಂತ ಒಳ್ಳೆಯ ಹೆಂಡತಿ ಸಿಗಲಿ...

    %%%%%%%%%%%%%%%%%%

    ನಮಸ್ತೆ.. .. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ... ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.

    ಶುಭವಾಗಲಿ,
    - ಶಮ, ನಂದಿಬೆಟ್ಟ

    ReplyDelete
  21. "ಕಂಪ್ಯೂಟರ್ ಲ್ಯಾಬ್ ಒಳಗೆ ಹೋಕ್ಬೇದಾರೆ ಚಪ್ಪಲಿ ಹೊರಗೆ ಇಟ್ಟು ಹೋಗ್ಬೇಕಾಗಿತ್ತು.ಅಕಸ್ಮಾತ್ ಹವಾನಿಯಂತ್ರಕ ಸರಿ ಇಲ್ಲ ಅಂದ್ರೆ ಆ ದಿನ ಲ್ಯಾಬ್ ಇಲ್ಲ ! ಯಾಕಂದ್ರೆ ಹವಾ ನಿಯಂತ್ರಕ ಇಲ್ಲಾಂದ್ರೆ ಕಂಪ್ಯೂಟರ್ ಹಾಳಾಗುತ್ತೆ ಅನ್ನೋ ಭಯ ಟೀಚರ್ಗಳಿಗಿತ್ತು .ಆದ್ರೆ ನಾವು ಹವಾನಿಯಂತ್ರಕಗಳಿಲ್ಲದೆ ಕಂಪ್ಯೂಟರ್ ಗಳು ಕೆಲಸ ಮಾಡಲ್ಲ ಅನ್ನೋ ಮೂಢನಂಬಿಕೆ ಹೊಂದಿದ್ವಿ." ಇದು ಸತ್ಯ ಸಂದೀಪ್ ... ಇನ್ನುಳಿದಂತೆಯೂ ನೀವು ಹೇಳಿದ್ದಕ್ಕೆ ನನ್ನ ವೋಟ್ ಇದೆ. ಸುಂದರವಾಗಿ ಬರೆದಿದ್ದೀರಿ.
    - ಶಮ, ನಂದಿಬೆಟ್ಟ

    ಹಾಂ ... ನಿಮಗಿನ್ನೂ ಮದುವೆ ಆಗದೆ ಇದ್ದಲ್ಲಿ ಸುಧಾ ಮೂರ್ತಿಗಿಂತ ಒಳ್ಳೆಯ ಹೆಂಡತಿ ಸಿಗಲಿ...

    %%%%%%%%%%%%%%%%%%

    ನಮಸ್ತೆ.. .. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ... ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.

    ಶುಭವಾಗಲಿ,
    - ಶಮ, ನಂದಿಬೆಟ್ಟ

    ReplyDelete
  22. ರಾಧಿಕಾ ,
    Thanks for the info!

    ಶಮ,
    ನನಗಿನ್ನೂ ಮದುವೆ ಆಗಿಲ್ಲ! ಸುಧಾಮೂರ್ತಿಯವರಿಗಿಂತ ಒಳ್ಳೆಯ ಹೆಂಡತಿ ಸಿಕ್ಕಿದ್ರೆ ನಾನೂ ಒಂದು ಇನ್ಫೋಸಿಸ್ ಕಟ್ತೀನಿ:)..

    ReplyDelete
  23. http://amerikadimdaravi.blogspot.com/2008/03/blog-post_20.html

    ReplyDelete
  24. Super Article Sandeep, Thanks.. Keep up the great work...one thing we all forget is innovation is a process and it has get inculcated in the education system..for most of us its matter of pride to get the marks rather than getting the understanding of the subject. Till the time we belive an educational degree is to earn a job, we will keep failing as it requires a different set of thought processes. As you have rightly pointe out, the ability question is also a driver for innovation and the fear of failure quashes the drive for innovation.

    ReplyDelete
  25. ಈ ವಾರ ಏನು ಬರೆಯುತ್ತಾರೋ ಕಾದು ನೋಡಬೇಕಿದೆ...

    ReplyDelete
  26. ಪತ್ರಿಕಾ ಉದ್ಯಮವೇನು ಹಿ೦ಜರಿತದಿ೦ದ ಮುಕ್ತವಾಗಿಲ್ಲ. ಇ೦ದು ಒ೦ದೂವರೆ- ಎರಡು ರುಪಾಯಿಗೆ ಮಾರಾಟವಾಗುವ ಪತ್ರಿಕೆ ಮುದ್ರಿಸಲು ಏನಿಲ್ಲವೆ೦ದರು ೧೫-೨೦ ರೂ ಖರ್ಚಾಗುತ್ತದೆ. ಆದರೆ ಲಕ್ಷಾ೦ತರ ರೂ ವಿವಿಧ ಕ೦ಪೆನಿಗಳ ಜಾಹೀರಾತಿನಿ೦ದ ಹರಿದು ಬರುವುದರಿ೦ದ ದಿನಪತ್ರಿಕೆಯನ್ನು ಕಡಿಮೆ ಬೆಲೆಗೆ ಮಾರಲು ಸಾಧ್ಯವಾಗಿದೆ. ಆರ್ಥಿಕ ಹಿ೦ಜರಿತದಿ೦ದ ಜಾಹೀರಾತುಗಳು ಕಡಿಮೆಯಾದ೦ತೆ ಪತ್ರಿಕೆಯ ವೆಚ್ಚ ತಗ್ಗಿಸಲು ಪುಟಗಳನ್ನು ಕಡಿತಗೋಳಿಸುವುದು, ಬೆಲೆ ಹೆಚ್ಚಿಸುವುದು, ಬರಹಗಾರರ ಸ೦ಬಳ/ಸ೦ಭಾವನೆ ಕಡಿತಗೊಳಿಸುವುದು ಮಾಡಬೇಕಾಗುತ್ತದೆ...

    ReplyDelete
  27. ಜಗಲಿ ಹಾರದವನು ಆಕಾಶಕ್ಕೆ ಹಾರಿಯಾನೇ ಅನ್ನೋ ಮಾತಿದೆ.ಜಗಲಿ ಹಾರಿಯಾಗಿದೆ ಇನ್ನು ಆಕಾಶಕ್ಕೆ ಏಣಿ ಇಡೋದಷ್ಟೇ ಬಾಕಿ.

    Kamatre,
    eno jagali gigali antella ideeri. en samaachaara?

    ReplyDelete
  28. ಜಗಲಿ ಭಾಗವತರ ಆಶೀರ್ವಾದ ಇದ್ರೆ ಆಕಾಶಕ್ಕೆ ಏಣಿ ಇಡಬಹುದು ಅಂದಿದ್ದೆ .
    ಪ್ರಿಂಟ್ ಆಗ್ಬೇಕಾದ್ರೆ ಎಡವಟ್ಟಾಯ್ತು ಭಾಗವತರೇ ಕ್ಷಮಿಸಿ !

    ReplyDelete
  29. Tumba chennnagide.. Ishta aayitu :)

    ReplyDelete
  30. I am a Pratap Simha fan but after reading ur articles, I feel u have written better than him !
    Keep going Sandeep !

    ReplyDelete
  31. ನಮಸ್ಕಾರ,
    ತುಂಬಾ ಸಮಂಜಸ ವಾದ ಪ್ರಶ್ನೆಗಳನ್ನ ಹಾಕಿದ್ದೀರ... ಹಾಗೆ ಉತ್ತರಿಸಿದ್ದೀರ... ಪ್ರತಾಪರು ಎತ್ತನಿಂದ ಎತ್ತ... ಎಲ್ಲೆಲ್ಲೊ ತಮ್ಮ ಲೇಖನವನ್ನು ಎಳೆದು ಹೊಯ್ದು ಕೋಸರಾಡಿದ್ದಾರೆ... ಅವರೊಳಗೆ ಏನೋ ಒಂದು ಕಾಳಜಿ ಇದೆ, ಆದ್ರೆ ಚಪ್ಪಾಳೆ ಕೇಳಿಸಿಕೊಳ್ಳುವ ಭರದಲ್ಲಿ ಕಾಳಜಿಗಳು ಗಾಳಿಗೆ ತೂರಿವೆ...

    ನಿಮ್ಮ ಬರಹಕ್ಕೆ ಧನ್ಯವಾದಗಳು

    ReplyDelete
  32. ನಮಸ್ಕಾರ ಸ೦ದೀಪ್. ನಿಮ್ಮ ಬ್ಲಾಗ್ ಓದಿ ಆದ ಖುಷಿ ಅಷ್ಟಿಷ್ಟಲ್ಲ. ನಾನು ನಿಮ್ಮ೦ತೆಯೇ ಐಟಿ ನೌಕರ. ಮ೦ಗಳೂರಿನಲ್ಲಿ ಉದ್ಯೋಗ... ಪ್ರತಾಪ್ ರ ಲೇಖನಗಳನ್ನು ಒ೦ದೂ ಬಿಡದೆ ಓದುವ ನಾನು ಇನ್ನು ನಿಮ್ಮ ಬ್ಲಾಗ್ ಅನ್ನು ಕೂಡ miss ಮಾಡದೇ ಓದ್ತೀನಿ...ನೀವು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದರೆ ಎಷ್ಟೋ ಚೆನ್ನಾಗಿರೋದು..ಆ ದಿನ ಬೇಗ ಬರಲಿ ಅ೦ತ ಆಶಿಸ್ತೇನೆ.

    ReplyDelete
  33. you are correct.....

    ReplyDelete