Sunday, August 30, 2009

ರೇಡಿಯೋ ಮೋಡಿ..

ಬೆಂಗಳೂರಿಗೆ ಬಂದ ಹೊಸದರಲ್ಲಿ ನಾನು ತೆಗೆದುಕೊಂಡ ಮೊದಲ ವಸ್ತು ಅಂದ್ರೆ FM Radio.ಮೈಸೂರು ಬ್ಯಾಂಕ್ ಸಿಗ್ನಲ್ ನಲ್ಲಿ ಗೋಡೆಗೆ ನೇತು ಹಾಕಿರುತ್ತಿದ್ದ ಉದ್ಯೋಗ ಜಾಹೀರಾತುಗಳನ್ನು ನೋಡುತ್ತಾ ಇರ್ಬೇಕಾದ್ರೆ ಅಲ್ಲೇ ಒಬ್ಬ ರೇಡಿಯೋ ಮಾರ್ತಾ ಇದ್ದ.ಚಿಕ್ಕದಾಗಿ ಪೆನ್ ಟಾರ್ಚ್ ಥರ ಇದ್ದ ರೇಡಿಯೋ ಇಯರ್ ಫೋನ್ ನ ಅವನು ನನ್ನ ಕಿವಿಗೆ ಬಲವಂತವಾಗಿ ತುರುಕಿರದೇ ಇದ್ದರೆ ಬಹುಷ ನಾನು ಆ ದಿನ ಅದನ್ನು ತಗೊಳ್ತಾ ಇರ್ಲಿಲ್ಲ.ನನಗೆ ಎಫ್.ಎಮ್ ರೇಡಿಯೋ ಸಿಗ್ನಲ್ ಕ್ವಾಲಿಟಿ ಅಷ್ಟೊಂದು ಚೆನ್ನಾಗಿರುತ್ತೆ ಅಂತ ಅದೇ ಮೊದಲ ಸಲ ಗೊತ್ತಾಗಿದ್ದು.ಊರಲ್ಲಿದ್ದಾಗ ಮನೆಯಲ್ಲಿ ಟು ಇನ್ ಒನ್ ಟೇಪ್ ರೆಕಾರ್ಡರ್ ಇದ್ದರೂ ಅಷ್ಟಾಗಿ ರೇಡಿಯೋ ಕೇಳ್ತಾ ಇರ್ಲಿಲ್ಲ.ಅದರಲ್ಲೂ ರೇಡಿಯೋ ಅನ್ನು ಎಫ್.ಎಮ್ ಮೋಡ್ ಗೆ ಹಾಕಿದಾಗಲಂತೂ ಬರೀ ಪುಸ್ ಅಂತ ಗಾಳಿಯ ಶಬ್ದವಷ್ಟೇ ಕೇಳಿ ಬರ್ತಾ ಇತ್ತು. ಆಮೇಲೆ ಒಂದು ದಿನ ಯಾರೋ ಹೇಳಿದ್ರು ಎಫ್.ಎಮ್ ಟ್ರಾನ್ಸ್ಮಿಶನ್ ಮಂಗಳೂರಿನಲ್ಲಿಲ್ಲ ಅದಿಕ್ಕೇ ಏನೂ ಕೇಳ್ಸಲ್ಲ ಅಂತ!

ಮೈಸೂರು ಬ್ಯಾಂಕ್ ಸಿಗ್ನಲ್ ನ ಆ ವ್ಯಾಪಾರಿ ನೂರು ರೂ ಕೇಳಿದ್ದ ಆ ರೇಡಿಯೋ ಗೆ.ಆದ್ರೆ ಬೆಂಗಳೂರಿನಲ್ಲಿ ಯಾವ ವಸ್ತುವನ್ನೂ ಚೌಕಾಶಿ ಮಾಡದೇ ತಗೋಬೇಡ ಅನ್ನೋ ಹಿತವಚನ ಬಹಳಷ್ಟು ಜನ ನೀಡಿದ್ದರಿಂದ ಅವನ ಬಳಿ ’ಬೆಲೆ ಕಡಿಮೆ ಮಾಡು’ ಅಂತ ವಾದಕ್ಕೆ ನಿಂತಿದ್ದೆ.ಕೊನೆಗೆ ಐವತ್ತು ರೂಗೆ ಡೀಲ್ ಕುದುರಿಸಿ ಅದಕ್ಕೆ ಚೈನಾ ಸೆಲ್ ಹಾಕಿ ಹಾಡು ಕೇಳಿದಾಗಲಂತೂ ಸಕ್ಕತ್ ಖುಷಿಯಾಗಿತ್ತು.

ಅಂದಿನಿಂದ ರೇಡಿಯೋ ಜೊತೆ ಲವ್ ಶುರು ಆಯ್ತು.

ಆಗ (೨೦೦೨) ಇದ್ದಿದ್ದೇ ಎರಡು ಎಫ್.ಎಂ ಸ್ಟೇಶನ್ .ಒಂದು ರೇಡಿಯೋ ಸಿಟಿ ಇನ್ನೊಂದು ಎಫ್.ಎಮ್ ರೇನ್ಬೋ.ಎಫ್.ಎಮ್ ರೇನ್ಬೋ ದ RJ ಗಳು ಹಳೇ ಶೈಲಿಯಲ್ಲೇ ಮಾತಾಡ್ತಾ ಇದ್ದಿದ್ದರಿಂದ ಅಷ್ಟೊಂದು ಇಷ್ಟವಾಗಿರಲಿಲ್ಲ.ಬದಲಾಗಿ ಚಟಪಟನೆ ಮಾತಾಡೋ ರೇಡಿಯೋ ಸಿಟಿ ತುಂಬಾನೇ ಇಷ್ಟ ಆಗಿತ್ತು.ಅದರಲ್ಲಿ ಬರೋ ಜಾಹೀರಾತುಗಳೂ ತುಂಬಾ ವಿಭಿನ್ನವಾಗಿದ್ದರಿಂದ ಸಂಪೂರ್ಣವಾಗಿ ಮನಸೋತು ಹೋಗಿದ್ದೆ ರೇಡಿಯೋ ಸಿಟಿಗೆ.ರಘು ದೀಕ್ಷಿತ್ ರ ಸ್ಪೈಸ್ ಟೆಲಿಕಾಮ್ ನ ’ಲೈಫಿನಲ್ಲಿ ಆಪರ್ಚುನಿಟಿ’ ಮುಂತಾದ ಜಾಹಿರಾತುಗಳು ಕೇಳಿ ರೇಡಿಯೋದಲ್ಲಿ ಕೂಡ ಇಷ್ಟೊಂದು ಕ್ರಿಯೇಟಿವಿಟಿ ಬಳಸಬಹುದು ಅನ್ನೋದು ಗೊತ್ತಾಗಿ ಬೆರಗಾಗಿತ್ತು.

ನನಗೆ ಇಷ್ಟವಾಗ್ತಾ ಇದ್ದಿದ್ದು ಚೈತನ್ಯಾ ಹೆಗ್ಡೆಯ ’ಚೌ ಚೌ ಬಾತ್’ ಕಾರ್ಯಕ್ರಮ.ಭಾನುವಾರ ಹನ್ನೊಂದು ಘಂಟೆಗೆ ಮುಂಚೆ ಯಾವತ್ತೂ ಏಳದ ನಾನು ಅವನ ಧ್ವನಿ ಕೇಳಲೆಂದೇ ಬೇಗ ಏಳ್ತಾ ಇದ್ದೆ.(ಕಿವಿಗೆ ರೇಡಿಯೋ ಇಯರ್ ಫೋನ್ ಸಿಕ್ಕಿಸಿ ಮತ್ತೆ ಬಿದ್ದುಕೋತಾ ಇದ್ದೆ ಆ ವಿಷಯ ಬೇರೆ!).ಒಂಥರಾ ಮಾಂತ್ರಿಕ ಶಕ್ತಿ ಇತ್ತು ಚೈತನ್ಯಾ ಹೆಗ್ಡೆಯ ಮಾತಿಗೆ.ಗಡುಸಾದರೂ ಮಾತಿನ ಮಧ್ಯೆ ಚೆಂದನೆಯ ನಗು, ಸಕ್ಕತ್ ಹಾಸ್ಯ ಪ್ರಜ್ಜ್ಞೆ,ಕನ್ನಡ ಇಂಗ್ಲೀಷ್ ಎರಡೂ ಮಿಕ್ಸ್ ಮಾಡಿ ಮಾತಾಡೋ ಅವನ ಭಾಷೆ ತುಂಬಾನೇ ಇಷ್ಟ ಆಗಿತ್ತು.ರೇಡಿಯೋದಲ್ಲಿ ಬರೀ ಧ್ವನಿ ಮಾತ್ರ ಕೇಳಿಸೋದ್ರಿಂದ ಚೈತನ್ಯಾ ಹೆಗ್ಡೆ ಅನಿಲ್ ಕುಂಬ್ಳೆ ಥರ ದಪ್ಪ ಮೀಸೆ ಇಟ್ಕೊಂಡಿರ್ತಾನೆ,ಹೀಗಿರ್ತಾನೆ ಹಾಗಿರ್ತಾನೆ ಅಂತೆಲ್ಲ ಮನಸಲ್ಲೇ ಕಲ್ಪಿಸಿಕೊಂಡಿದ್ದೆ.ಚೈತನ್ಯಾ ಹೆಗ್ಡೆ ರೇಡಿಯೋ ಸಿಟಿ ಬಿಟ್ಟು ಹೋದ ಮೇಲಂತೂ ರೇಡಿಯೋ ಕೇಳೋದೇ ಬಿಟ್ಟಿದ್ದೆ ನಾನು.

ಮತ್ತೆ ರೇಡಿಯೋ ಕೇಳೋಕೆ ಶುರು ಮಾಡಿದಾಗ ವಾಸಂತಿ ಇಷ್ಟವಾಗತೊಡಗಿದಳು.ತುಂಬಾ ಸ್ಪಷ್ಟವಾದ ಧ್ವನಿ,ಎನರ್ಜೆಟಿಕ್ ಆಗಿ ಮಾತಾಡೋ ವಿಭಿನ್ನ ಶೈಲಿ ಇಷ್ಟವಾಗಿತ್ತು.ಯಥಾಪ್ರಕಾರ ವಾಸಂತಿ ರೇಡಿಯೋ ಸಿಟಿ ಬಿಟ್ಟಾಗ ಮತ್ತೆ ರೇಡಿಯೋ ಕೇಳೋದು ಬಿಟ್ಟು ಬಿಟ್ಟೆ.

ತೀರಾ ಈಚೆಗೆ ಮತ್ತೆ ರೇಡಿಯೊ ಕೇಳೋಕೆ ಶುರು ಮಾಡಿದ ಮೇಲೆ ಬಿಗ್ ಎಫ್ ನ ’ದೀಪು -ನಾನು ನಿಮ್ಮ ಟೈಪು ’ತುಂಬಾ ಇಷ್ಟವಾಗಿದ್ದ.ಸಕ್ಕತ್ ತರಲೆ ಮಾಡೋ ಅವನು ಶೋ ನಲ್ಲಿ ಕಾಂಟೆಸ್ಟ್ ಕೂಡಾ ಇಡ್ತಾ ಇದ್ದ.ಒಂದು ದಿನ ’ಯಾವುದಾದರೂ ತರಕಾರಿ ಇಟ್ಕೊಂಡು ಯವುದಾದರೂ ಹುಡುಗೀನ ಪ್ರಪೋಸ್ ಮಾಡೋದಾದ್ರೆ ಹೇಗೆ ಪ್ರಪೋಸ್ ಮಾಡ್ತೀರಾ? ’ ಅಂತ ಕೇಳಿದ್ದ.ಅದಕ್ಕೆ ನಾನು ಬದನೆಕಾಯಿ ಇಟ್ಕೊಂಡು ಉಪೇಂದ್ರ ಶೈಲಿಯಲ್ಲಿ ಪ್ರಪೋಸ್ ಮಾಡ್ತೀನಿ ಅಂತ ದೊಡ್ಡ SMS ಕಂಪೋಸ್ ಮಾಡಿ ಕಳಿಸಿದ್ದೆ.

ಹೀಗಿತ್ತು ಆ SMS :- " ಚಾಂದಿನಿ ನೋಡು ಈ ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ ಅಂತ ಯಾರೋ ತಲೆ ಕೆಟ್ಟೋನು ಹೇಳಿದ್ದಾನೆ.ಅವನ ಮಾತು ಕೇಳ್ಬೇಡ ನೀನು.ಆ ರೀತಿ ಹೇಳೋರೆಲ್ಲಾ ’ಹೇಳೋದು ಶಾಸ್ತ್ರ ತಿನ್ನೋದು ಬದನೆಕಾಯಿ’ ಅನ್ನೋ ರೀತಿಯ ಜನ.ನೀನು ಚೆನ್ನಾಗಿರ್ಬೇಕು ಆಗ್ಲೇ ನಾನು ನಿನ್ನನ್ನು ಪ್ರೀತಿಸೋಕಾಗೊದು.ಮನೆಗೆ ಹೋಗಿ ಈ ಬದನೆಕಾಯಿ ಸಾಂಬಾರ್ ಮಾಡಿ ಊಟ ಮಾಡು. ಚಾಂದಿನಿ ನೀನು ಚೆನ್ನಾಗಿರ್ಬೆಕು,ನೀನು ಚೆನ್ನಾಗಿದ್ರೇನೇ ನಾನೂ ಚೆನ್ನಾಗಿರೋದು " ಅಂತ ಉಪೇಂದ್ರನಿಗೇ ಡೋಸ್ ಇಟ್ಟು ಬರೆದಿದ್ದೆ.

ಯಾಕೋ ದೀಪು ಗೆ ಈ ಉತ್ತರ ಸಕ್ಕತ್ ಇಷ್ಟ ಆಗಿ ನನಗೆ ಕಾಲ್ ಮಾಡಿ ನನ್ನನ್ನು On Air ಹಾಕಿಬಿಟ್ಟ.ಯಾಕೋ ಇಡೀ ಬೆಂಗಳೂರು ಕೇಳಿಸ್ಕೊಳ್ಳುತ್ತೆ ಅನ್ನೋದು ಗೊತ್ತಾಗಿ ತುಂಬಾ ನರ್ವಸ್ ಆಗಿ ಸರಿಯಾಗಿ ಮಾತಾಡೋಕೇ ಆಗಿರ್ಲಿಲ್ಲ ನಂಗೆ.ಆದರೆ ಆ ದಿನ ದೀಪು ನನಗೆ ಸಾವರಿಯಾ ಸಿ.ಡಿ ಬಹುಮಾನವಾಗಿ ಕೊಟ್ಟಿದ್ದ .
ಇನ್ನೊಂದು ದಿನ ದೀಪು ಗೋಲ್ ಅನ್ನೊ ಶಬ್ದಕ್ಕೆ ಕನ್ನಡ ಶಬ್ದ ನೀಡಿ ಅಂತ ಕೇಳಿದ್ದ.ಎಲ್ಲರೂ ಧ್ಯೇಯ ,ಗುರಿ ಅಂತೆಲ್ಲಾ ಮೆಸೇಜ್ ಮಾಡಿದ್ರು.ಆದ್ರೆ ಅವನು ಕೇಳಿದ್ದು ಫುಟ್ಬಾಲ್ ಗೋಲ್ ಬಗ್ಗೆ!
ನಾನು ಅದಕ್ಕೆ ’ಚೆಂಡ್ಜಾಲ ಪ್ರವೇಶ’ ಅಂತ ಉತ್ತರ ಕಳಿಸಿದ್ದಕ್ಕೆ ’ಗೋಲ್’ ಸಿನೆಮಾದ ಕಪಲ್ ಪಾಸ್ ಕೊಟ್ಟಿದ್ದ.ನಾನು ಕಪಲ್ ಆಗಿರದೇ ಇದ್ದಿದ್ರಿಂದ(ನಿಜ ಹೇಳ್ಬೇಕೂಂದ್ರೆ ಸಿನೆಮಾ ಪಿ.ವಿ.ಆರ್ ನಲ್ಲಿ ರಾತ್ರಿ ಏಳಕ್ಕೆ ಇದ್ದದ್ದರಿಂದ!)ಸಿನೆಮಾಗೆ ಹೋಗೋಕೆ ಆಗಿರ್ಲಿಲ್ಲ ನನಗೆ.

ದೀಪು ಬಿಗ್ ಎಫ್ ಎಮ್ ಬಿಟ್ಟ ಮೇಲೆ ನಾನು ಮತ್ತೆ ರೇಡಿಯೋ ಕೇಳೋದು ಬಿಟ್ಟು ಬಿಟ್ಟೆ.

Sunday, August 2, 2009

ಕಲ್ಪವೃಕ್ಷದ ನೆನಪಿನ ಸುತ್ತ....

ಬೆಂಗಳೂರಿನಲ್ಲಿ ಬಹಳ ದಿನದಿಂದ ತಣ್ಣನೆಯ ವಾತಾವರಣ.ಈ ತಂಪಾದ ವಾತಾವರಣದಲ್ಲೂ ಕೆಲ ಜನರು ಎಳನೀರು ಹೀರುತ್ತಿದ್ದಿದ್ದು ನೋಡಿ ವಿಚಿತ್ರ ಅನ್ನಿಸಿತ್ತು.ಆದರೆ ಆಮೇಲೆ ಗೊತ್ತಾಯ್ತು ,ಬೆಂಗಳೂರಿನಲ್ಲಿ ಜನರು ಎಳನೀರು ಕುಡಿಯೋದು ಆರೋಗ್ಯಕ್ಕಾಗಿ ಅಂತ!ಹಾಗೆ ನೋಡಿದ್ರೆ ನಾನು ಕೂಡ ಅಪರೂಪಕ್ಕೊಮ್ಮೆ ಎಳನೀರು ಕುಡಿಯೋದು ಆರೋಗ್ಯದ ದೃಷ್ಟಿಯಿಂದಲೇ.

ಪ್ರತಿ ಸಲ ಎಳನೀರು ಕುಡಿಯುವಾಗಲೂ ಊರಿನ ನೆನಪು ಕಿತ್ತು ತಿನ್ನುವಂತೆ ಕಾಡುತ್ತದೆ.ಎಳನೀರು ಕೀಳಲೆಂದೇ ನಾನು ತೆಂಗಿನ ಮರ ಹತ್ತಲು ಕಲಿತಿದ್ದು ನೆನಪಾಗುತ್ತದೆ.ಮಂಗಳೂರಿನಲ್ಲಿದ್ದಷ್ಟು ದಿನ ಒಂದು ದಿನವೂ ಕಾಸು ಕೊಟ್ಟು ಎಳನೀರು ಕುಡಿದದ್ದು ನನಗೆ ನೆನಪಿಲ್ಲ.ಹಾಗಂತ ಬಿಟ್ಟಿ ಕುಡಿದೆ ಅಂದುಕೋಬೇಡಿ.ನಾನು ಯಾವತ್ತೂ ಕುಡೀತಾ ಇದ್ದಿದ್ದು ನಮ್ಮದೇ ತೋಟದ ,ನಾನೇ ಕಿತ್ತ ಹಚ್ಚ ಹಸುರು ಬಣ್ಣದ ತಂಪನೆಯ ಎಳನೀರು.

ನಮ್ಮ ತೋಟದಲ್ಲಿರೋ ತೆಂಗಿನ ಮರದಿಂದ ತೆಂಗಿನಕಾಯಿಗಳನ್ನು ಕೀಳಲು ಕರಿಯ ಅನ್ನೋನು ಬರ್ತಿದ್ದ. ’ದುನಿಯಾ’ ಸಿನೆಮಾಗೂ ಅವನಿಗೂ ಏನೂ ಸಂಬಂದವಿಲ್ಲ ಬಿಡಿ .ಇದು ಹನ್ನೆರಡು ವರ್ಷ ಹಿಂದಿನ ಕಥೆ!ಆಗೆಲ್ಲ ನಮಗೆ ಅವನೇ ಜೀವಂತ ಸೂಪರ್ ಮ್ಯಾನ್ .ಕೈಗೊಂದು ಹಗ್ಗ,ಕಾಲಿಗೊಂದು ಹಗ್ಗ ಕಟ್ಟಿ ಕುಪ್ಪಳಿಸುತ್ತ ಮರ ಹತ್ತುತ್ತಿದ್ದರೆ ಅದನ್ನು ನೋಡೋದೆ ದೊಡ್ಡ ಬೆರಗು ನಮಗೆ.ಆದ್ರೆ ಅವನು ತೋಟದ ಎಲ್ಲಾ ಮರಗಳಿಂದ ಕಾಯಿಗಳನ್ನು ಕಿತ್ತಾದ ಮೇಲೆ ಮಾತ್ರ ಅವನ ಮೇಲೆ ಅವನ ಪ್ರಾಣ ತೆಗ್ಯೋ ಅಷ್ಟು ಸಿಟ್ಟು ಬರ್ತಿತ್ತು ನನಗೆ.
ನಮ್ಮ ತೋಟದ ಕಂಪೌಂಡ್ ಸುತ್ತಲೂ ಹೆಂಚಿನ ಮನೆಗಳಿದ್ದವು.ಈ ಪಾಪಿ ಕರಿಯ.ಪ್ರತಿ ಮನೆಯ ಮೇಲೂ ಕನಿಷ್ಟ ಎರಡು ತೆಂಗಿನ ಕಾಯಿ ಬೀಳಿಸದೆ ಕೆಳಗೆ ಇಳೀತಿರಲಿಲ್ಲ.

ಹೀಗಾಗು ಕಾಯಿ ಕೀಳಲು ಕರಿಯ ಬಂದ ದಿನ ಸುತ್ತ ಮುತ್ತಲಿರುವ ಅಷ್ಟೂ ಮನೆಯವರಿಗೆ ’ಎಚ್ಚರಿಕೆ’ ನೀಡಿ ಬರ್ಬೇಕಿತ್ತು ನಾನು.ಅದಕ್ಕಿಂತ ದೊಡ್ಡ ತಲೆನೋವಿನ ಕೆಲಸ ಅಂದ್ರೆ ಅವರ ಮನೆಯ ಎಷ್ಟು ಹಂಚುಗಳು ಮುರಿದಿದೆ ಅನ್ನೋ ಲೆಕ್ಕ ಹಾಕಿ ಹಣ ಪಾವತಿ ಮಾಡೋ ಕೆಲಸ.ಹಲವು ಸಲ ಈ ಕರಿಯ ಬೇಕೂಂತ್ಲೇ ಆ ಮನೆಗಳ ಮೇಲೆ ಕಾಯಿ ಬೀಳಿಸ್ತಿದ್ದ ಅನ್ನೋ ಅನುಮಾನ ನನಗಿತ್ತು.ಯಾಕಂದ್ರೆ ಎಲ್ಲಾ ಮನೆಯವರೂ ಹಂಚಿನ ಮೂಲ ಬೆಲೆಗಿಂತ ಜಾಸ್ತಿ ಹಣ ಕೀಳುತ್ತಿದ್ದರು ನಮ್ಮಿಂದ!ಈ ಕರಿಯ ಆ ಮನೆಯವರ ಜೊತೆ ಸೇರಿ ’ಹಂಚು ಫಿಕ್ಸಿಂಗ್’ ಏನಾದ್ರೂ ಮಾಡಿರಬಹುದಾ ಅನ್ನೋ ಅನುಮಾನ ಯಾವಾಗ್ಲೂ ಕಾಡ್ತಾ ಇತ್ತು ನನಗೆ .

ಅವನು ತೋಟವಿಡೀ ಕಿತ್ತು ಬಿಸಾಕಿದ ಕಾಯಿಗಳನ್ನೆಲ್ಲ ಒಟ್ಟುಗೂಡಿಸಿ ಒಂದು ಕಡೆ ರಾಶಿ ಹಾಕೋ ಅಷ್ಟರಲ್ಲಿ ಪ್ರಾಣ ಹೋಗ್ತಿತ್ತು.ಆದರೆ ಎಲ್ಲಾ ಕೆಲಸ ಆದ ಮೇಲೆ ನಮಗೆಂದೇ ಕಿತ್ತ ಎಳನೀರು ಕುಡಿಯುವಾಗ ಮಾತ್ರ ಹೋದ ಪ್ರಾಣ ವಾಪಾಸ್ ಬರ್ತಿತ್ತು.

ಎಳನೀರಿನ ಅದ್ಭುತ ರುಚಿ ಸಿಕ್ಕಿದ ನನಗೆ ಕರಿಯನಿಗೋಸ್ಕರ ತಿಂಗಳು ಕಾಯೋದು ದೊಡ್ಡ ತಲೆ ನೋವಾಗಿತ್ತು.ಅದಕ್ಕಾಗೆ ತೆಂಗಿನ ಮರ ಹತ್ತಲು ಕಲಿಯೋದು ನನಗೆ ಅನಿವಾರ್ಯವಾಗಿತ್ತು .ತೆಂಗಿನ ಮರ ಹತ್ತಲು ಕಲಿಸುವ ಯಾವ ಕೋರ್ಸೂ ಇರದ ಕಾರಣ ನಾವೇ ಸ್ವಥ ಕಲೀಬೇಕಾಗಿತ್ತು ಅದನ್ನು.ಕರಿಯನ ಹಾಗೆ ಚಕ ಚಕನೆ ಹತ್ತಲು ಕಲಿಯಬೇಕು ಅನ್ನೋದು ನನ್ನ ಓರಗೆಯ ಹುಡುಗರ ದೊಡ್ಡ ಆಸೆಯಾಗಿತ್ತು ಆ ಕಾಲದಲ್ಲಿ!
ಆದರೆ ಎಷ್ಟು ಪ್ರಯತ್ನಿಸಿದರೂ ಅವನ ಕಲೆ ನಮಗೆ ಸಿದ್ಧಿಸಲೇ ಇಲ್ಲ!

ಅವನ ಆ ಚಾತುರ್ಯಕ್ಕೆ ಕಾರಣ ೭ ರೂಪಾಯಿಯ ಸಾರಾಯಿ ಪಾಕೀಟು(ನನಗೆ ರೇಟ್ ಹೇಗೆ ಗೊತ್ತು ಅಂತ ಆಶ್ಚರ್ಯ ಪಡಬೇಡಿ ಅದು ಜನರಲ್ ನಾಲೆಡ್ಜ್!) ಅಂತ ನಾವೆಲ್ಲಾ ಬಲವಾಗಿ ನಂಬಿದ್ವಿ!ಅದು ಒಂದು ರೀತಿಯಲ್ಲಿ ನಿಜವೂ ಆಗಿತ್ತು.

ದೂರದಲ್ಲಿ ನಿಂತು ನೋಡೋರಿಗೆ ತೆಂಗಿನ ಮರ ಹತ್ತೋದು ಒಂದು ಸುಲಭದ ಕೆಲಸ.ಆದರೆ ಬಲ್ಲವನೇ ಬಲ್ಲ ತೆಂಗಿನ ಮರ ಹತ್ತೋ ಕಷ್ಟವನ್ನು!
ತೆಂಗಿನ ಮರ ಹತ್ತೋದಕ್ಕೆ ಸಿಕ್ಕಾಪಟ್ಟೆ ಸ್ಟ್ಯಾಮಿನಾ ಬೇಕು.ಅದಕ್ಕಾಗೇ ಪಾಪ ಕರಿಯ ಎನರ್ಜಿ ಡ್ರಿಂಕ್ ಕುಡಿದೇ ಕೆಲಸ ಶುರು ಮಾಡ್ತಿದ್ದಿದ್ದು.

ಒಂದು ದಿನ ಅದು ಹೇಗೋ ಕಷ್ಟ ಪಟ್ಟು ಮರವನ್ನು ಅಪ್ಪಿ ಹಿಡಿದು ಒಂದೋಂದೇ ಇಂಚು ಹತ್ತಿ ಹತ್ತಿ ಅರ್ಧದಷ್ಟು ಹೋಗಿದ್ದೆ ನಾನು.ಅರ್ಧ ಮರ ಹತ್ತಿದ ಮೇಲೆ ಸುಸ್ತಾಗಿ ಹೋಗಿತ್ತು.ಸುಸ್ತಾಗಿದೆ ಅಂತ ಕೂರಲು ಸೀಟ್ ಬೇರೆ ಇರಲ್ವಲ್ಲ ಮರದಲ್ಲಿ! ಹಾಗೇ ಸುಧಾರಿಸಿ ಮುಂದುವರಿಸೋಣ ಅಂದುಕೊಂಡು ಹಾಗೇ ಮರವನ್ನು ಅಪ್ಪಿಕೊಂಡೇ ಸ್ವಲ್ಪ ಸಮಯ ಕಳೆದೆ.

ದುರಾದೃಷ್ಟವಶಾತ್ ಸುಸ್ತು ಕಡಿಮೆ ಆಗೋ ಬದಲು ಜಾಸ್ತಿ ಆಗ್ತಿತ್ತು.ಒಂದು ಹಂತದಲ್ಲಂತೂ ಕೈ ಬಿಟ್ಟೇ ಬಿಡೋಣ ಅಂತ ಕೂಡಾ ಅನ್ನಿಸಿತ್ತು !

ಕೈ ಬಿಟ್ಟಿದ್ದೆನಾ ಅಂತ ಕೇಳಬೇಡಿ.ಬಿಟ್ಟಿದ್ರೆ ನಾನೆಲ್ಲಿ ಇರ್ತಾ ಇದ್ದೆ ಈ ಬ್ಲಾಗ್ ಬರೆಯಲು !ಪ್ರಾಣ ಭಯದಿಂದ ಹಾಗೆ ಒಂದೊಂದೆ ಇಂಚು ಜಾರುತ್ತಾ ಜಾರುತ್ತಾ ನೆಲದ ಮೇಲೆ ಲ್ಯಾಂಡ್ ಆಗಿದ್ದೆ ಆ ದಿನ.ಆದರೂ ತೆಂಗಿನ ಮರ ಹತ್ತೋದನ್ನು ಕಲಿಯಲೇ ಬೇಕು ಅನ್ನೋ ಛಲ ಮೂಡಿತ್ತು ನನಗೆ.

ಅದು ಹೇಗೋ ಸತತ ಪ್ರಯತ್ನದಿಂದ ಆ ಕಲೆ ನನಗೂ ಸಿದ್ಧಿಸಿತು!(ಪಾಕೀಟಿನ ಸಹಾಯ ಇಲ್ಲದೆ!)

ಪ್ರೊಫೆಶನಲ್ ಆಗಿ ತೆಂಗಿನ ಮರ ಹತ್ತೋರು ಮರದ ತುದಿಯ ತನಕ ಹೋಗಲ್ಲ.ಮರದಲ್ಲೇ ಉದ್ದುದ್ದಕ್ಕೆ ನಿಂತು ಕಾಯಿಗಳನ್ನೆಲ್ಲಾ ಕತ್ತಿಯಿಂದ ಕಡಿದು ಕಡಿದು ಬೀಳಿಸುತ್ತಾರೆ.ಆದರೆ ನಮಗೆ ಪಾಕೀಟು ಇಲ್ಲದೇ ಇದ್ದದ್ದರಿಂದ -ಕ್ಷಮಿಸಿ ಅಷ್ಟೊಂದು ಸ್ಟ್ಯಾಮಿನಾ ಇಲ್ಲದೆ ಇದ್ದುದರಿಂದ ನಾವು ಮರದ ತುದಿ ತಲುಪಿದ ತಕ್ಷಣ ಮರದ ತುತ್ತ ತುದಿಗೆ ಹೋಗಿ ರೆಸ್ಟ್ ತಗೋತಾ ಇದ್ವಿ.ಸುಸ್ತೆಲ್ಲಾ ಕಡಿಮೆ ಆದ ಮೇಲೆ ಎಳನೀರನ್ನು ಕಿತ್ತು ಹುಷಾರಾಗಿ ನೆಲಕ್ಕೆಸೀಬೇಕು.ಸ್ವಲ್ಪ ಎಡವಟ್ಟಾದ್ರೂ ಎಳನೀರು ಒಡೆದು ಹೋಗ್ತಾ ಇತ್ತು.

ಮರ ಹತ್ತೋದೇ ದೊಡ್ಡ ಸಮಸ್ಯೆ ಅಂತ ಭಾವಿಸಿದ್ದ ನನಗೆ ಮರ ಹತ್ತಿದ ಮೇಲೆ ಒಳ್ಳೆಯ ಎಳನೀರನ್ನು ಗುರುತಿಸೋದೂ ಕಲೆ ಅಂತ ಗೊತ್ತಾಗಿದ್ದು ನಾನೂ ಮರ ಹತ್ತಲು ಕಲಿತ ಮೇಲೆ.ಕರಿಯ ಮಾತ್ರ ಕಾಯಿಗೆ ಬೆರಳಿನಿಂದ ಬಡಿದೇ ಯಾವುದು ಚೆನ್ನಾಗಿರೋ ಕಾಯಿ ಅಂತ ಗುರುತಿಸ್ತಾ ಇದ್ದ.ಅದನ್ನು ಗುರುತಿಸೋ ರಹಸ್ಯ ಹೇಳಿಕೊಡು ಅಂತ ಕೇಳಿದ್ರೆ ’ದಣಿ ಡಬ್ ಡಬ್ ಶಬ್ದ ಬಂದ್ರೆ ಚೆನ್ನಾಗಿರುತ್ತೆ ಟಕ್ ಟಕ್ ಅಂತ ಶಬ್ದ ಬಂದ್ರೆ ಅದು ಆಲ್ ಮೋಸ್ಟ್ ತೆಂಗಿನಕಾಯಿ ಅಂತ ಅರ್ಥ’ ಅಂತ ಹೇಳಿದ್ದ ಕರಿಯ.ಅದೆಷ್ಟು ಬಡಿದರೂ ನಮಗೆ ಏನೋ ಒಂದು ಶಬ್ದ ಕೇಳಿಸುತ್ತಿತ್ತೇ ವಿನಹ ಅದು ಡಬ್ ಡಬ್ ಆ ಅಥವ ಟಕ್ ಟಕ್ ಆ ಅನ್ನೋದು ಗೊತ್ತಾಗ್ತಾ ಇರ್ಲಿಲ್ಲ !ನಾನು ಹಾಗೇ ಸುಮ್ಮನೆ ನೋಡೋದಕ್ಕೆ ಗುಂಡಗಿರೋ ,ಹಸಿರಾಗಿರೋ ಎಳನೀರನ್ನು ಕಿತ್ತು ಬಿಸಾಕಿ ವಾಪಾಸ್ ಇಳಿದು ಬರ್ತಾ ಇದ್ದೆ.ಅದನ್ನು ಕುಡಿದು ನೋಡಿದ ಮೇಲೇನೇ ಗೊತ್ತಾಗೋದು ಅದು ಚೆನ್ನಾಗಿದೆಯೋ ಇಲ್ವೋ ಅನ್ನೋದು.

ಈ ತೆಂಗಿನ ಮರ ಹತ್ತೋ ವಿದ್ಯೆ ಕಲಿತ ಮೇಲೆ ನನಗೆ ಅದು ಬಹುತೇಕ ಉಪಯೋಗ ಬಿದ್ದಿದ್ದು ಪರೀಕ್ಷೆಯ ಸಮಯದಲ್ಲಿ.ಪರೀಕ್ಷೆಗೆ ಓದಲೆಂದು ಹುಡುಗರು ಕೆರೆ ದಡಕ್ಕೆ ,ಮರದ ಕೆಳಕ್ಕೆ ಅಂತ ಹೋಗ್ತಿದ್ರೆ ನಾನು ಮಾತ್ರ ಸೀದಾ ತೆಂಗಿನ ಮರ ಹತ್ತಿ ಅಲ್ಲೇ ಕೂತು ಓದ್ತಾ ಇದ್ದೆ.ಐದನೆಯ ತರಗತಿಯ ಎಲ್ಲಾ ಪರೀಕ್ಷೆಗೆ ಬಹುಷಃ ಅಲ್ಲೇ ಕೂತು ತಯಾರಿ ನಡೆಸಿದ್ದೆ.

ಬೆಂಗಳೂರಿನಲ್ಲಿ ತೆಂಗಿನ ಮರಗಳೇ ಅಪರೂಪ.ಅದೃಷ್ಟವಶಾತ್ ನಾವಿರುವ ರೂಮ್ ಹಿಂದೆ ಎರಡು ತೆಂಗಿನ ಮರಗಳಿವೆ.ಒಂದು ಮಧ್ಯರಾತ್ರಿ ಈ ಮರದ ತೆಂಗಿನಗರಿ ಕರೆಂಟ್ ವೈರ್ ಮೇಲೆ ಬಿದ್ದು ಸುಮಾರು ಎರಡು ನಿಮಿಷ ಟಪ್ ಟಪ್ ಅನ್ನೋ ಶಬ್ದ ಬಂದಿತ್ತು.ನಾವು ಎಲ್ಲೋ ಬಾಂಬ್ ಸ್ಫೋಟ ಆಗಿರ್ಬೇಕೇನೋ ಅನ್ನೋ ಆತಂಕದಿಂದ ಹೊರಗೆ ಬಂದು ನೋಡಿದಾಗಲೇ ಗೊತ್ತಾಗಿದ್ದು ನಮಗೆ ನಮ್ಮ ಕಂಪೌಂಡ್ ನಲ್ಲೇ ತೆಂಗಿನ ಮರ ಇದೆ ಅನ್ನೋದು!

ಈ ತೆಂಗಿನ ಮರ ಹತ್ತೋದಕ್ಕೆ ಮಾತ್ರ ಟ್ರೈ ಮಾಡಿಲ್ಲ ನಾನು !ಈಗ ಅಷ್ಟೊಂದು ಸ್ಟ್ಯಾಮಿನಾ ಇಲ್ಲ!(ಸರಕಾರದವರು ಮಾಡಿರೋ ಪಾಕೀಟು ಸಾರಾಯಿ ನಿಶೇಧಕ್ಕೂ ಸ್ಟ್ಯಾಮಿನಾಗೂ ಯಾವುದೇ ಸಂಬಂಧ ಕಲ್ಪಿಸಬೇಡಿ ಪ್ಲೀಸ್!)