Wednesday, April 20, 2011

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ -ಭಾಗ ೩

’ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರೂಪಾಯಿ’ ಅಂತ ಕೆ.ಎಸ್.ನ ಬರೆದಿದ್ದರು. ಆದರೆ ಬಹಳಷ್ಟು ಜನರಿಗೆ ಹೆಂಡತಿ ಮನೆಯೊಳಗಿದ್ದರಷ್ಟೇ ಕೋಟಿ ರೂಪಾಯಿ. ಹೆಂಡತಿ ತನಗೆ ಸರಿ ಸಮನಾಗಿ, ಕೆಲವೊಮ್ಮೆ ತನಗಿಂತ ಹೆಚ್ಚು ಬುದ್ಧಿವಂತಳಾಗಿರೋದು, ಸಂಪಾದಿಸೋದು ಬಹಳಷ್ಟು ಜನರಿಗೆ ಭಯ ಹುಟ್ಟಿಸೋ ವಿಷಯ! ಖಂಡಿತಾ ಇದು ಮೇಲ್ ಈಗೋ ವಿಷಯ. ಅಂದರೆ ಫೀಮೇಲ್ ಮೇಲ್ ಗಿಂತ ಮೇಲಾಗೋ ಭಯ ಮೇಲ್ ಗೆ ಹುಟ್ಟೋ ವಿಷಯ! ಇಂಥ ಸಮಾಜದಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಹೆಂಡತಿಯನ್ನು ಹುರಿದುಂಬಿಸುವವರು, ಹೆಂಡತಿಯ ಬುದ್ಧಿಮತ್ತೆಯನ್ನು ಮನಸಾರೆ ಹೊಗಳುವವರೂ ಸಿಗುತ್ತಾರೆ. ಮೊನ್ನೆ ಅಮೆರಿಕಾದ ಪ್ರಥಮ ಪ್ರಜೆ ಬರಾಕ್ ಒಬಾಮ ಹೆಂಡತಿ ಮಿಶೆಲ್ ಳನ್ನು ಮನಸಾರೆ ಹೊಗಳಿದ್ದನ್ನೂ ಇಲ್ಲಿ ಸ್ಮರಿಸಬಹುದು. ಆದರೆ ಒಬಾಮ ಹೆಂಡತಿಗೆ ಹೆದರಿಯೇ ಹೊಗಳಿದ್ದು ಅನ್ನೋ ವಾದವನ್ನೂ ಮಾಡುವವರಿದ್ದಾರೆ.

ತನಗಿಂತ ಬುದ್ಧಿವಂತ ಬೇರೊಬ್ಬರು ಇದ್ದಾರೆ ಅನ್ನೋದನ್ನು ಒಪ್ಪಿಕೊಳ್ಳೋದೆ ಮನುಷ್ಯನಿಗೆ ಅತ್ಯಂತ ಕಷ್ಟದ ಕೆಲಸ. ಅದರಲ್ಲೂ ಆ ’ಬೇರೆಯವರು’ ಹೆಂಡತಿ ಆಗಿದ್ದರಂತೂ ಕೇಳೋದೇ ಬೇಡ. ಹೆಂಡತಿ ಅನ್ನೋ ಶಬ್ದ ಕೇಳಿದ ತಕ್ಷಣವೆ ಕೆಲವರಿಗೆ ಹಿನ್ನೆಲೆಯಲ್ಲಿ ’ಕಾರ್ಯೇಶು ದಾಸಿ, ಶಯನೇಶು ರಂಭಾ ’ ಅನ್ನೋದು ರಾಗವಾಗಿ ಕೇಳತೊಡಗುತ್ತದೆ. ಇದರಲ್ಲೂ ಕಾರ್ಯೇಶು ಮೊದಲೋ ಶಯನೇಷು ಮೊದಲೊ ಅನ್ನೋದು ಅವರವರ preference ಮೇಲೆ ಬದಲಾಗುತ್ತಿರುತ್ತದೆ! ಗಂಡ ಬಹುಷಃ ಮನಸಾರೆ ಹೊಗಳೋದು ಹೆಂಡತಿಯ ಅಡುಗೆಯನ್ನು ಮಾತ್ರ.

ಹೆಂಡತಿಯ ಆಯ್ಕೆಯ ವಿಷಯ ಬಂದಾಗಲೂ ಹುಡುಗಿಯ ವಯಸ್ಸು ತನಗಿಂತ ಕಡಿಮೆ ಇರಬೇಕು, ವಿದ್ಯಾರ್ಹತೆ ಕಡಿಮೆ ಇರಬೇಕು, ಎತ್ತರ ಕಡಿಮೆ ಇರಬೇಕು ಅನ್ನೋದು ಅಘೋಶಿತ ನಿಯಮವೇ ಆಗಿ ಬಿಟ್ಟಿದೆ. ಇಷ್ಟೆಲ್ಲಾ ವಿಷಯಗಳು ಕಡಿಮೆ ಇರುವಾಗ ಬುದ್ಧಿವಂತಿಕೆಯೂ ತನಗಿಂತ ಕಮ್ಮಿ ಇದ್ದೇ ಇರುತ್ತೆ ಅನ್ನೋದು ಹುಡುಗನ ಲೆಕ್ಕಾಚಾರ! ಕಾಲ ಬದಲಾದಂತೆ ಎಲ್ಲವೂ ಬದಲಾಗಿದೆ. ಹೆಂಗಸರಂತೂ ಎಲ್ಲಾ ಕ್ಷೇತ್ರದಲ್ಲೂ ಮಿಂಚಿದ್ದಾರೆ. ಇನ್ನು ಏನಿದ್ದರೂ ’ಕಾರ್ಯೇಶು CEO ' ಅನ್ನಬೆಕಷ್ಟೆ!

***********************************************************************************
’ಹೆಂಡತಿಯೊಬ್ಬಳು ಮನೆಯೊಳಗಿದ್ದರೆ -ಭಾಗ ೩ ’ ಅಂತ ಯಾಕೆ ಹೆಸರಿಟ್ಟೆ ಅಂತ ನಿಮಗೆಲ್ಲ ಅನಿಸಿರಬೇಕು. ನಿಜ, ಭಾಗ ಒಂದು ಅಥವಾ ಎರಡು ನಾನು ಬರೆದಿಲ್ಲ !

ನಾನು ಈ ಲೇಖನವನ್ನು ತುಂಬಾ ಹಿಂದೆ ಪತ್ರಿಕೆಯೊಂದಕ್ಕೆ ಬರೆದಿದ್ದೆ. As usual ಅಲ್ಲಿ ಪ್ರಕಟ ಆಗಿರಲಿಲ್ಲ! ಬ್ಲಾಗ್ ಗೆ ಹಾಕೋದಿಕ್ಕೆ ಮರೆತಿದ್ದೆ! ಈಗ ಅನು ಅನ್ನೋರ ಬ್ಲಾಗ್ ಲೇಖನ ನೋಡಿ ನೆನಪಾಯ್ತು. ಅವರು ಸಿಂಹ ಅನ್ನೋರ ಬ್ಲಾಗ್ ನೋಡಿ ಅದಕ್ಕೆ ಉತ್ತರವಾಗಿ ಬರೆದದ್ದಂತೆ!

Saturday, April 16, 2011

ನೀವೇನೇ ಹೇಳಿ......

ಇಂಥದ್ದೊಂದು ಆಟವನ್ನೂ ಬಹುತೇಕ ಜನರು ತಮ್ಮ ಬಾಲ್ಯದಲ್ಲಿ ಆಡಿರ್ತಾರೆ. ನಾವು ಚಿಕ್ಕಂದಿನಲ್ಲಿ ಕಲ್ಲುಗಳನ್ನು ಜೋಡಿಸಿ ಬೆಂಕಿ ಹೊತ್ತಿಸಿ ಅದರ ಮೇಲೊಂದು ತೆಂಗಿನ ಕರಟವನ್ನಿಟ್ಟು ಅದರಲ್ಲಿ ನೀರು ಹಾಕಿ ಚಹಾ,ಕಾಫಿ ಮಾಡೋ ಅಂಥ ಆಟವೊಂದನ್ನು ಆಡ್ತಾ ಇದ್ವಿ. ಎಷ್ಟೋ ಸಲ ಮನೆ ಒಳಗಿಂದ ಚಹಾ ಪುಡಿ,ಹಾಲು,ಸಕ್ಕರೆ ತಂದು ನಿಜಕ್ಕೂ ಚಹಾ ಮಾಡೋದೂ ಇತ್ತು. ಆದರೆ ಅಮ್ಮನ ಕೈಯಲ್ಲಿ ಬಯ್ಯಿಸಿ ಕೊಳ್ಳೋದೂ ಇತ್ತು. ಅದೂ ಸಾಲದೆಂಬಂತೆ ಜೋಪಡಿ ಥರ ಮನೆಯನ್ನು ಕಟ್ಟುವ ಆಟ ಬೇರೆ ಆಡ್ತಾ ಇದ್ವಿ. ಇರೋದಿಕ್ಕೆ ಇಷ್ಟು ಒಳ್ಳೆ ಮನೆ ಇದ್ರೂ ಅದೇನು ಜೋಪಡಿ ಕಟ್ಟೋ ಆಟ ನಿಮ್ಮದು ಅಂತ ಮನೆಯವರು ಬಯ್ಯೋದೂ ಇತ್ತು!

ನಾವು ಈ ರೀತಿ ಜೊಪಡಿ ಕಟ್ಟಿ ಆಟ ಆಡೋ ಸಮಯದಲ್ಲೇ ನಿಜವಾಗಲೂ ಜೋಪಡಿಯಲ್ಲಿ ವಾಸಿಸುತ್ತಿದ್ದ ಮಕ್ಕಳು ನಮ್ಮ ಥರ ಟೆರೇಸ್ ಮನೆಯಲ್ಲಿ ವಾಸ ಮಾಡೋ ಕನಸು ಕಾಣ್ತಾ ಇದ್ರು !

ಬಹುಷಃ ಅದಕ್ಕೇ ಹೇಳಿರ್ಬೇಕು ಕವಿ - " ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ " ಅಂಥ !

ಹಿಂದೆ ಕಿಲೋ ಮೀಟರುಗಟ್ಟಲೆ ನಡೀತಾ ಇದ್ರು ನಮ್ಮ ಅಪ್ಪ,ಅಮ್ಮಂದಿರು. ಆಗ ಅವರಿಗೆ ಖಂಡಿತ ಅನ್ನಿಸ್ತಿತ್ತು ’ ಹಾಳಾದ್ದು ನಾವು ಆರಾಮಾಗಿ ಬೇಕಾದ ಕಡೆ ಹೋಗೋ ಅಂಥ ಗಾಡಿ ಒಂದಿದ್ದರೆ ಎಷ್ಟು ಚೆನ್ನಾಗಿರ್ತಿತ್ತು ’ ಅಂತ. ಆ ದೇವರೇ ತಥಾಸ್ತು ಅಂದ ಹಾಗ ಬಸ್ಸು ರೈಲು ವಿಮಾನಗಳು ಬಂದು ಬಿಟ್ಟವು. ಈಗ ’ನೀವು ಏನೇ ಹೇಳಿ ಈ ಟೆಕ್ನಾಲಜಿ ನಮ್ಮನ್ನು ಹಾಳು ಮಾಡೋದೇ ಆಯ್ತು ಕಣ್ರಿ . ಹಿಂದೇನೆ ಚೆನ್ನಾಗಿತ್ತು. ಕಿಲೋಮೀಟರುಗಟ್ಟಲೆ ನಡೀತಾ ಇದ್ವಿ ಗಟ್ಟಿ ಮುಟ್ಟಾಗಿದ್ವಿ ’ ಅಂತೀವಿ.

ಹಿಂದೆ ಒಂದು ಲೆಟರ್ ಹಾಕಿದ್ರೆ ಅದು ೧೦ ದಿನ ಆದ್ಮೇಲೆ ಬೇಕಾದವರಿಗೆ ತಲುಪಿ ಅವರು ಪೋಸ್ಟ್ ಆಫೀಸಿಗೆ ಹೋಗಿ ಇನ್ ಲ್ಯಾಂಡ್ ಲೆಟರ್ ತಗೊಂಡು ಅದರಲ್ಲಿ ಬರೆದು ಮತ್ತೆ ಪೋಸ್ಟ್ ಮಾಡಿ ನಮಗೆ ತಲುಪೋ ಅಷ್ಟರಲ್ಲಿ ತಿಂಗಳುಗಳೇ ಆಗ್ತಾ ಇತ್ತು. ಆಗಲೂ ನಮಗೆ ಅನ್ನಿಸ್ತಿತ್ತು ’ಹಾಳಾದ್ದು ಈ ಕಾಗದ ಒಂದೇ ದಿನದಲ್ಲಿ ತಲುಪೋ ಥರ ಇದ್ದಿದ್ರೆ ಎಷ್ಟು ಚೆನ್ನಾಗಿರ್ತಿತ್ತು ’ ಅಂತ. ಅದಕ್ಕೂ ಪರಿಹಾರ ಸಿಕ್ಕೇ ಬಿಡ್ತು , ಈ ಕಡೆ ಮೇಯ್ಲ್ ಹಾಕಿದ ತಕ್ಷಣ ಆ ಕಡೆಯಿಂದ ರಿಪ್ಲೈ ಬರೋ ಥರ ಟೆಕ್ನಾಲಜಿನೂ ಬಂತೂ. ಆದ್ರೂ ’ನೀವೇನೇ ಹೇಳಿ ಆ ಲೆಟರ್ ಗೋಸ್ಕರ ಪೋಸ್ಟ್ ಮ್ಯಾನ್ ಗೆ ಕಾಯೋದ್ರಲ್ಲಿ ಇರೋ ಸುಖ ಈ e-mail ಗಳಲ್ಲಿಲ್ಲ ಕಣ್ರಿ ’ ಅಂತೀವಿ ನಾವೆಲ್ಲಾ!

ಹಿಂದೆ ಒಂದು ಟೆಲಿಫೋನ್ ಕಾಲ್ ಮಾಡಬೇಕಾದಲ್ಲಿ ಟ್ರಂಕ್ ಕಾಲ್ ಮಾಡಿ ಗಂಟೆ ಗಟ್ಟಲೆ ಕಾಯ್ತಾ ಇರ್ಬೇಕಾದ್ರೆ ಎಲ್ರಿಗೂ ಖಂಡಿತಾ ಅನ್ನಿಸ್ತಿತ್ತು ’ಛೆ ಒಂದು ಟೆಲಿಫೋನ್ ಕಾಲ್ ಮಾಡೋಕೂ ಇಷ್ಟು ಕಷ್ಟ ನಾ? ನಮಗೆ ಬೇಕಾದ ಹಾಗೆ ಕಾಲ್ ಮಾಡೋಕಾದ್ರೆ ಎಷ್ಟು ಚೆನ್ನಾಗಿರ್ತಿತ್ತು ’ ಅಂತ. ಈಗ ಆ ಟ್ರಂಕ್ ಕಾಲ್ ನೆನೆಸಿನೇ ಖುಷಿ ಪಡ್ತೀವಿ ನಾವು !

ಹಿಂದೆ ರುಬ್ಬೋ ಕಲ್ಲಿನಲ್ಲಿ ರುಬ್ಬಿ ರುಬ್ಬಿ ಸುಸ್ತಾಗಿ ಹೆಂಗಸರೆಲ್ಲಾ ’ ಅಯ್ಯೋ ಚೆನ್ನಾಗಿ ರುಬ್ಬೋಕೆ ಯಾವುದಾದರೂ ಒಂದು ಮೆಶಿನ್ ಇದ್ದಿದ್ರೆ ಎಷ್ಟು ಚೆನ್ನಾಗಿರ್ತಿತ್ತು ’ ಅಂತ ಅಂದುಕೋತಾ ಇದ್ರು. ಆದ್ರೆ ಈಗ ’ನೀವೇನೆ ಹೇಳಿ ಆ ರುಬ್ಬೋ ಕಲ್ಲಿನಲ್ಲಿ ರುಬ್ಬಿ ಮಾಡಿದ ಅಡುಗೆ ರುಚಿ ಈ ಮಿಕ್ಸಿ,ಗ್ರೈಂಡರ್ ನಲ್ಲಿ ಇರಲ್ಲ ಕಣ್ರಿ ’ ಅಂತೀವಿ.

ಈ ಮೊಬೈಲ್ ಫೋನ್,ಈ-ಮೇಲ್,ಟೆಲಿಫೋನ್.ಮಿಕ್ಸಿ,ಟಿ.ವಿ,ರೇಡಿಯೋ,ವಾಶಿಂಗ್ ಮೆಶಿನ್, ಏನೇ ಬರಲಿ ಅದನ್ನು ಬಳಸುತ್ತಲೇ , ಅದಿಲ್ಲದೇ ನಮ್ಮ ಬದುಕೇ ಸಾಗದು ಅನ್ನೋ ಪರಿಸ್ಥಿತಿ ಇದ್ದಾಗಲೆ ನಮ್ಮ ಮನಸ್ಸಲ್ಲಿ ಬರೋದು ’ನೀವೇನೆ ಹೇಳಿ ಹಿಂದೇನೇ ಚೆನ್ನಾಗಿತ್ತು .....’


ನೀವೇನೇ ಹೇಳಿ -

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ............

Monday, April 11, 2011

ಬಸ್ ಡೇ ...

’ ಬಸ್ ಡೇ ’ ಆಚರಿಸುವ ಉತ್ಸಾಹದಲ್ಲಿ ಐಟಿ ಬಿಟಿ ಜನರೆಲ್ಲಾ ಬಸ್ ಏರಿದರು.

ಬಸ್ ತುಂಬಿ ತುಳುಕಿದ್ದರಿಂದ ಬಸ್ ಡ್ರೈವರ್ ಮಹದೇವಪ್ಪ ಪೀಣ್ಯ ಸೆಕಂಡ್ ಸ್ಟೇಜ್ ನಲ್ಲಿ ಬಸ್ ನಿಲ್ಲಿಸಲೇ ಇಲ್ಲ.

ದಿನಾ ಬಸ್ ನಲ್ಲೇ ಹೋಗುತ್ತಿದ್ದ ಕೇಶವ ರಾಯರು ಆ ದಿನ ನೂರು ರೂ ಕೊಟ್ಟು ಆಟೋದಲ್ಲಿ ಹೋಗಬೇಕಾಯಿತು.

Friday, April 1, 2011

ಏರ್ ಟೆಲ್ ಸೂಪರ್ ಸಿಂಗರ್...

ಏರ್ ಟೆಲ್ ಸೂಪರ್ ಸಿಂಗರ್ ಸಂಗೀತ ಕಾರ್ಯಕ್ರಮ ಇನ್ನು ಮುಂದೆ ಐಡಿಯಾ ಸೂಪರ್ ಸಿಂಗರ್ ಅಂತ ಆಗುತ್ತೆ ......


ಮೊಬೈಲ್ ನಂಬರ್ ಪೋರ್ಟೇಬಿಲಿಟಿ ಬಂದಿದೆ Get Idea Sir Ji !!