Saturday, October 31, 2009

ಇದು ಎಂಥ ಮಾರಾಯ್ರೇ...



ಜನ ಯಾರನ್ನಾದರೂ ಹೇಗೆ ನೆನಪಿಟ್ಟುಕೋತಾರೆ?ನನಗೆ ಗೊತ್ತಿರೋ ಪ್ರಕಾರ ಜನರು ಯಾರದಾದರೂ ಮುಖವನ್ನು ನೋಡಿ ನೆನಪಿಟ್ಟುಕೋತಾರೆ.ಹಾಗಾಗಿ ’ನನಗೆ ಅವರ ಮುಖ ಪರಿಚಯವಿದೆ’ ಅನ್ನೋ ಮಾತು ಬಂದಿದೆ.

ಇತ್ತೀಚೆಗೆ ರಾತ್ರಿ ಟಿ.ವಿ ನೋಡುತ್ತಿದ್ದಾಗ ಒಂದು ಕಾರ್ಯಕ್ರಮ ನೋಡಿದೆ.ಅದು ಸೆಲೆಬ್ರಿಟಿಯೊಬ್ಬರನ್ನು ಗುರುತಿಸುವ ಸ್ಪರ್ಧೆ.ಮಾಮೂಲಿಯಾಗಿ ಇಂಥ ಸ್ಪರ್ಧೆಗಳಲ್ಲಿ ಅಮಿತಾಬ್ ಬಚ್ಚನ್ ,ಅಕ್ಷಯ್ ಕುಮಾರ್ ಇಂಥ ಖ್ಯಾತ ನಾಮರ ಮುಖವನ್ನು ಮಬ್ಬುಗೊಳಿಸಿ -’ಗುರುತಿಸಿ ಹಣ ಗೆಲ್ಲಿ ’ ಅನ್ನೋದು ಮಾಮೂಲಿಯಾಗಿ ಬರ್ತಾ ಇತ್ತು.

ಆದರೆ ಇತ್ತೀಚೆಗೆ ಟ್ರೆಂಡ್ ಬದಲಾಗಿದೆ!

ಮೇಲಿನ ಚಿತ್ರ ನೋಡಿ.ಇಂಥ ಕಾರ್ಯಕ್ರಮ ಪ್ರಸಾರ ಮಾಡುತ್ತಿರೋರ ’ಎದೆ’ಗಾರಿಕೆ ಮೆಚ್ಚಬೇಕಾದದ್ದೇ!

ಏನೋ ಪಮೇಲಾ ಅಂಡರ್ಸನ್,ಶಕೀಲಾ ಅಂಥವರನ್ನು ತೋರಿಸಿದ್ರೆ ಗುರುತು ಹಿಡಿಯಬಹುದು .ಎಲ್ಲರನ್ನೂ ಗುರುತಿಸೋ ಬಗೆ ಏನೋ??

ಈ ಸೆಲೆಬ್ರಿಟಿಯ ಗುರುತು ಸಿಕ್ಕಿದರೆ ನನಗೂ ತಿಳಿಸಿ ಪ್ಲೀಸ್(ಯಾವುದೇ ಬಹುಮಾನವಿರುವುದಿಲ್ಲ!)

Friday, September 18, 2009

ಸೀಟ್ ಬೇಕಾ ಸೀಟ್....?

ಬೆಂಗಳೂರಿನ ಜನರಿಗೆ ಯಾವಾಗ ತುಂಬಾ ಖುಷಿಯಾಗುತ್ತೆ ಅಂತ ಒಮ್ಮೆ ಕೇಳಿ ನೋಡಿ.ಎಲ್ಲರ ಉತ್ತರ ಒಂದೇ ಆಗಿರುತ್ತೆ.’ ಬಿ.ಎಂ.ಟಿ.ಸಿ ಬಸ್ ನಲ್ಲಿ ಸೀಟ್ ಸಿಕ್ಕಾಗ !’ ನೀವು ಮಂಗಳೂರಿನವರೋ ಅಥವ ಗದಗದವರೋ ಆಗಿದ್ರೆ ಈ ಮಾತು ಕೇಳಿ ಒಮ್ಮೆ ಪುಸಕ್ಕನೆ ನಕ್ಕರೂ ನಗಬಹುದು.ಆದರೆ ಬೆಂಗಳೂರಿನ ಬಸ್ ಗಳಲ್ಲಿ ಪ್ರಯಾಣಿಸಿ ಅಭ್ಯಾಸ ಇದ್ದರೆ ನೀವು ನಗೋದು ಸಾಧ್ಯವೇ ಇಲ್ಲ ಅಂತ ನನಗೆ ಗೊತ್ತು.

ಬಹುಷ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಸೀಟ್ ಸಿಕ್ಕಿದಾಗ ಕೂಡಾ ಅಷ್ಟು ಖುಷಿಯಾಗಿರಲ್ಲ,ಅಷ್ಟು ಖುಷಿ ಬಿ.ಎಮ್.ಟಿ.ಸಿ ಬಸ್ ನಲ್ಲಿ ಸೀಟ್ ಸಿಕ್ಕಾಗ ಆಗುತ್ತೆ.ನೀವು ಧಡೂತಿ ವ್ಯಕ್ತಿ ಆಗಿದ್ದಲ್ಲಿ ಬಹುಷ ಮೀಸೆ ಅಡಿಯಲ್ಲಿ ನಗುತ್ತಿರಬಹುದು ,’ನನ್ನಂಥ ಧಡೂತಿ ವ್ಯಕ್ತಿಗೆ ಸೀಟ್ ಸಿಗೋದು ಏನ್ ಮಹಾ ಕಷ್ಟ .ನಾಲ್ಕು ಜನರನ್ನು ಒಂದೇ ಕೈಯಲ್ಲಿ ಎತ್ತಿ ಬಿಸಾಕಿ ಸೀಟ್ ಪಡ್ಕೊಳ್ತೀನಿ ’ ಅಂತ.ಆದ್ರೆ ತಮಾಷೆ ಇರೋದು ಅಲ್ಲೇ ಸ್ವಾಮಿ ! ಜನ ನಿಮ್ಮ ಕೈಗೆ ಸಿಕ್ಕಿದ್ರೆ ತಾನೇ ಬಿಸಾಕೋದು ?ಅವರು ಪುಸಕ್ಕನೆ ನಿಮ್ಮ ಕಾಲ ಕೆಳಗಿಂದ ತೂರಿ ಸೀಟ್ ಪಡೆದಿಲ್ಲ ಅಂದ್ರೆ ಆಮೇಲೆ ಹೇಳಿ.

ಸುಮಾರು ಏಳು ವರ್ಷಗಳಿಂದ ಬೆಂಗಳೂರಿನಲ್ಲಿ ಸೀಟ್ ಗಾಗಿ(ಬಸ್ ನಲ್ಲಿ!) ಯಡಿಯೂರಪ್ಪನವರಷ್ಟೇ ಕಷ್ಟ ಪಟ್ಟಿರೋದ್ರಿಂದ ಬಹುಷ ನನ್ನ ಅನುಭವ ಹಂಚಿಕೊಂಡರೆ ನಿಮಗೆ ಸಹಾಯವಾಗಬಹುದೇನೋ?ಆದರೆ ಒಂದೇ ಒಂದು ಕಂಡೀಶನ್ ! ಬಸ್ ನಲ್ಲಿ ನಾನೇನಾದ್ರೊ ನಿಮಗೆ ಸಿಕ್ಕರೆ ನನಗೆ ಸೀಟು ಬಿಟ್ಟುಕೊಡಬೇಕು.ನನ್ನ ಮೇಲೆ ನನ್ನ ತಂತ್ರಗಳನ್ನು ಪ್ರಯೋಗಿಸಬಾರದು!

ಮೊದಲೇ ಹೇಳಿದ ಹಾಗೆ ತೆಳ್ಳಗಿದ್ದರೆ ಮಾತ್ರ ಇಲ್ಲಿರುವ ತಂತ್ರಗಳನ್ನು ಉಪಯೋಗಿಸಬಹುದು.ಹಾಗಾಗಿ ನೀವೇನಾದ್ರೂ ಸ್ಥೂಲಕಾಯಿಯಾಗಿದ್ದಲ್ಲಿ ದಯವಿಟ್ಟು ಈ ಲೇಖನದ ಬದಲು ’ತೆಳ್ಳಗಾಗೋದು ಹೇಗೆ ?’ ಅನ್ನೋ ಲೇಖನವನ್ನು ಮೊದಲು ಓದಿ.ಸೀಟ್ ನಲ್ಲಿ ಆರಾಮಾಗಿ ಕುಳಿತು ಪ್ರಯಾಣ ಮಾಡಬೇಕೆಂದರೆ ತುಸು ತಯಾರಿ ಬೇಕಾಗುತ್ತೆ.ಬಸ್ ಸ್ಟ್ಯಾಂಡ್ ನಲ್ಲಿ ಕಲ್ಲುಬೆಂಚು ಹಾಕಿದ್ದಾರೆ ಅಂತ ನೀವೇನಾದ್ರೂ ಅದರಲ್ಲಿ ಕುಳಿತು ಹೋಗೋ ಬರೋ ಹುಡುಗಿಯರ ಅಂದ ಸವೀತಾ ಇದ್ರೆ ರಾತ್ರಿ ಇಡೀ ಬಸ್ ಸ್ಟ್ಯಾಂಡ್ ನಲ್ಲೇ ಕೂತಿರ್ಬೇಕಾದೀತು ಹುಷಾರ್ !

ನಿಮ್ಮ ಬಸ್ಸು 22ನೇ ಪ್ಲ್ಯಾಟ್ ಫಾರ್ಮ್ ಬರೋದಾದ್ರೆ ನೀವು ಅದಕ್ಕಿಂತ ಎರಡು ಪ್ಲ್ಯಾಟ್ ಫಾರ್ಮ್ ಮುಂಚೆ ನಿಂತಿರ್ಬೇಕು.ಬಸ್ ಮೆಜೆಸ್ಟಿಕ್ ಆ ಪ್ಲ್ಯಾಟ್ ಫಾರ್ಮ್ ಮುಂದೆ ಬಂದ ತಕ್ಷಣ ನಿಮ್ಮ ದೃಷ್ಟಿ ಕೇವಲ ಬಾಗಿಲಿನ ಮೇಲಿಟ್ಟು ಅದರ ಹಿಂದೆಯೇ ಓಡೋಡಿ ಬನ್ನಿ.ಬಸ್ ನೋಡುವ ಅಗತ್ಯವೇ ಇಲ್ಲ.ಯಾಕಂದ್ರೆ ಬಾಗಿಲಿನ ಜೊತೆ ಬಸ್ ಬಂದೇ ಬರುತ್ತೆ ಅಲ್ವೇ? ಬಸ್ ಸಂಪೂರ್ಣ ನಿಂತ ತಕ್ಷಣ ಥಟ್ ಅಂತ ಹತ್ತೋಕೆ ಹೋಗಬೇಡಿ.ಮೊದಲು ಇಳಿಯುವವರಿಗೆ ಜಾಗ ಮಾಡಿ ಕೊಡಿ.ಇಳಿಯುವವರ ಶಾಪ ಏನಾದ್ರೂ ತಗುಲಿ ಬಿಟ್ರೆ ನೀವು ಜೀವನ ಪರ್ಯಂತ ಬಸ್ ನಲ್ಲಿ ನಿಂತುಕೊಂಡೇ ಹೋಗುವ ಪರಿಸ್ಥಿತಿ ಬರಬಹುದು!ಹಾಗಂತ ಆರಾಮಾಗಿದ್ದಲ್ಲಿ ನಿಮ್ಮನ್ನೂ ಅವರು ಎಳೆದುಕೊಂಡು ಹೋಗುವ ಸಂಭವವಿದೆ.ಯಾವ ಕಾರಣಕ್ಕೂ ಬಾಗಿಲ ಕಂಬಿ ಬಿಡಕೂಡದು.ಎಲ್ಲರೂ ಇಳಿದ ತಕ್ಷಣ ಚಕ್ ಅಂತ ಹತ್ತಿ ಓಡಿ ಹೋಗಿ ಸೀಟ್ ಹಿಡಿದುಕೊಳ್ಳಿ.ನಾನೇ ಮೊದಲಿರುವುದರಿಂದ ಸೀಟ್ ಸಿಕ್ಕೇ ಸಿಗುತ್ತೆ ಅನ್ನೋ ಅಹಂ ಬೇಡ.ಹೆಂಗಸರ ಹಾಗೇ ಕಾಣಿಸುವ ಕೆಲವು ಗಂಡಸರು ಹೆಂಗಸರಿಗಾಗಿ ಮೀಸಲಿರುವ ಮುಂಬಾಗಿಲಿನಿಂದ ಹತ್ತಿ ನಿಮಗಿಂತ ಮುಂಚೆ ಸೀಟ್ ಆಕ್ರಮಿಸುವ ಸಾಧ್ಯತೆಗಳೂ ಇವೆ.ಹಾಗಾಗಿ ಮೊದಲು ನೀವೇ ಹತ್ತಿದರೂ ಸೀಟ್ ಸಿಗುವ ತನಕ ವಿರಮಿಸಬೇಡಿ.ಕೆಲವರಿಗೆ ಖಾಲಿ ಸೀಟ್ ನೋಡಿದ ತಕ್ಷಣ ತಮ್ಮನ್ನು ತಾವು ನಂಬಲೇ ಆಗದೇ ,ತಮ್ಮ ಕೈಯನ್ನು ಚಿವುಟಿ ನೋಡಿ,ಆನಂದಭಾಷ್ಪ ಸುರಿಸುವಷ್ಟರಲ್ಲಿ ಸೀಟ್ ಬೇರೊಬ್ಬರ ಪಾಲಾಗಿರುವ ನಿದರ್ಶನಗಳೂ ಇವೆ!

ಖಾಲಿ ಸೀಟ್ ನೋಡಿ ಖುಶಿಯಾದರೂ ಸ್ಥಿತಪ್ರಜ್ಞರಾಗಿದ್ದರೆ ಸ್ವಲ್ಪ ಒಳ್ಳೆಯದು.

ಇಷ್ಟೆಲ್ಲಾ ಸರ್ಕಸ್ ಮಾಡಿದರೂ ಕೆಲವೊಮ್ಮೆ ಸೀಟ್ ತಪ್ಪೋದುಂಟು.ಕಾರಣ - ಈ ಉತ್ತರಭಾರತದ ಕೆಲವು ಕಾರ್ಮಿಕರು ನಮಗಿಂತ ತೆಳ್ಳಗಿರೋದ್ರಿಂದ ಮಾಮೂಲಿ ಬಾಗಿಲು ಬಿಟ್ಟು ಬಸ್ ನ ಕಿಟಕಿಯಿಂದಲೇ ತೂರಿ ಸೀಟ್ ಹಿಡಿಯೋದುಂಟು.ಆದರೆ ನೀವು ಈ ರೀತಿ ಮಾಡೋದು ಬೇಡ.ಕರ್ನಾಟಕದ ಘನತೆ ಗೌರವ ಕಾಪಾಡೋದು ನಮ್ಮ ಆದ್ಯ ಕರ್ತವ್ಯ.ಈ ರೀತಿ ಏನಾದ್ರೂ ಆಗಿ ಸೀಟ್ ಮಿಸ್ ಆದ್ರೆ ನೀವು ಕೊರಗೋದೇನೂ ಬೇಡ.ಇನ್ನೊಂದು ಉಪಾಯ ಇದೆ,ಅದೇನಂದ್ರೆ ಬಸ್ ನಲ್ಲಿ ಮುಂದಿನ ಒಂದೆರಡು ಸ್ಟಾಪ್ ನಲ್ಲಿ ಇಳಿಯುವವರನ್ನು ಗುರುತಿಸೋದು!ಒಂದೆರಡು ವಾರ ಗಮನಿಸಿದರೆ ಇಂಥ ಪ್ರಯಾಣಿಕರನ್ನು ಗುರುತಿಸುವುದು ಕಷ್ಟ ಏನಲ್ಲ.ಬಸ್ ಒಳಗೆ ಒಂದು ಸಲ ಕಣ್ಣು ಹಾಯಿಸಿ ನೋಡಿ.ಯಾವಾನಾದ್ರೂ ತನ್ನ ಕಿಸೆಯಿಂದ ಏನನ್ನಾದ್ರೂ ಹುಡುಕ್ತಾ ಇದ್ದಾನೆ ಅಂದ್ರೆ ಅವನ ಬಳಿ ನಿಲ್ಲಲೇ ಬೇಡಿ.ಭಯ ಪಡಬೇಡಿ ಅವನೇನೂ ಬಾಂಬ್ ಹುಡುಕ್ತಾ ಇಲ್ಲ,ಅವನು ಇಯರ್ ಫೋನ್ ಹುಡುಕ್ತಾ ಇರ್ತಾನೆ ಅಷ್ಟೆ.ಅದನ್ನು ಒಮ್ಮೆ ಕಿವಿಗೆ ಹಾಕಿ ಮೊಬೈಲ್ ನಲ್ಲಿ ಎಫ್.ಎಮ್ ರೇಡಿಯೋ ಕೇಳ್ತಾ ಕೂತರೆ ಸ್ಟಾಪ್ ಬಂದ ಮೇಲಷ್ಟೇ ತೆಗೆಯೋದು ಅವನು.ಇದು ದೂ.ಪ್ರ(ದೂರ ಪ್ರಯಾಣಿಕ)ರ ಲಕ್ಷಣ.

ಹೀಗೆ ಬಸ್ ಒಳಗಡೆ ಕಣ್ಣು ಹಾಯಿಸ್ಬೇಕಾದ್ರೆ ಯಾರಾದ್ರೂ ಹಾಯ್ ಬೆಂಗಳೂರು,ಲಂಕೇಶ್ ,ಗೃಹಶೋಭ(ಗಂಡಸರೂ ಓದ್ತಾರೆ!)ಥರ ಪತ್ರಿಕೆ ಏನಾದ್ರೂ ಬಿಚ್ಚತೊಡಗಿದರೆ ಅವರೂ ದೂ.ಪ್ರಗಳು ಅಂದುಕೋಬೇಕು.ಕೆಲವು ಸಾಹಿತ್ಯಾಭಿಮಾನಿಗಳು ಮುಂದಿನ ಸ್ಟಾಪ್ ನಲ್ಲಿ ಇಳಿಯುವುದಾದರೂ ಒಂದೇ ಒಂದು ಪುಟ ಓದಿ ಮುಗಿಸೋಣ ಅನ್ನಿಸಿ ಪತ್ರಿಕೆ ಓದೋದೂ ಉಂಟು! ಆದ್ರೆ ಅಂತವರ ಸಂತತಿ ಕಡಿಮೆ.

ಬಸ್ ನಲ್ಲಿ ಯಾರಾದ್ರೂ ಸೀಟ್ ನ ತುದಿಯಲ್ಲಿ ಕುಳಿತು ಪದೇ ಪದೇ ಕಿಟಕಿಯಿಂದ ಹೊರಗೆ ನೋಡ್ತಾ ಇದ್ರೆ ಅವರು ಮುಂದಿನ ಸ್ಟಾಪ್ ನಲ್ಲಿ ಇಳಿಯುವ ಸಾಧ್ಯತೆಗಳು ಹೆಚ್ಚು.ಅಂಥವರ ಪಕ್ಕ ನಿಂತುಕೊಂಡರೆ ನಿಮಗೆ ಸೀಟ್ ಸಿಗೋ ಅವಕಾಶಗಳು ಹೆಚ್ಚು.ಆದರೆ ಒಮ್ಮೆ ಏನಾಯ್ತು ಅಂದ್ರೆ ಒಬ್ಬ ಸೀಟ್ ತುದಿಯಲ್ಲಿ ಕೂತು ಪದೇ ಪದೇ ಕಿಟಕಿಯ ಹೊರಗೆ ನೋಡ್ತಾ ಇದ್ದ.ಅದೂ ಸಾಲದು ಅನ್ನೋ ಹಾಗೆ ಪದೇ ಪದೇ ನಿಂತುಕೊಳ್ತಾ ಇದ್ದ.ನಾನು ಇವನೇನೋ ಈಗ ಇಳಿತಾನೆ ಅಂದುಕೊಂಡು ಕಾದಿದ್ದೇ ಬಂತು.ಅವನು ಇಳಿದದ್ದು ನನ್ನದೇ ಸ್ಟಾಪ್ ನಲ್ಲಿ ಮುಕ್ಕಾಲು ಘಂಟೆ ಪ್ರಯಾಣದ ನಂತರ!.ನನಗೂ ತಲೆ ಕೆಟ್ಟು ಹೋಗಿ ಕೇಳೇ ಬಿಟ್ಟೆ ’ಏನ್ ಸಾರ್ ಪದೇ ಪದೇ ಸ್ಟಾಪ್ ಬಂತಾ ಅಂತ ನೋಡ್ತಾ ಇದ್ರಲ್ವ ಬೆಂಗಳೂರಿಗೆ ಹೊಸಬರಾ ?’ ಅಂತ.ಅದಕ್ಕೆ ಆಸಾಮಿ ’ಇಲ್ಲ ಸಾರ್ ಇಪ್ಪತ್ತು ವರ್ಷದಿಂದ ಇಲ್ಲೇ ಇದ್ದೀನಿ ನನಗೆ ಜಾಸ್ತಿ ಹೊತ್ತು ಕೂತ್ಕೊಳ್ಳೋಕೆ ಆಗಲ್ಲ ಸ್ವಲ್ಪ ಪರ್ಸನಲ್ ಪ್ರಾಬ್ಲೆಮ್ ಇದೆ ’ ಅನ್ನೋದಾ!

ಒಂದೆರಡು ಸಲ ಎಡವಟ್ಟಾದ್ರೂ ಬಹುತೇಕ ಸಂದರ್ಭಗಳಲ್ಲಿ ಸೀಟ್ ಸಿಗೋದು ಗ್ಯಾರಂಟಿ ಕಣ್ರಿ.ಆದ್ರೆ ಬಸ್ ಹಿಂದೆ ಓಡ್ಬೇಕಾದ್ರೆ ಸ್ವಲ್ಪ ಹುಶಾರಾಗಿ ಓಡಿ.ಚಕ್ರದ ಕೆಳಗೇನಾದ್ರೂ ಬಿದ್ದು ಗಿದ್ದು ಆಮೇಲೇ ಯಮಲೋಕದಲ್ಲಿ ಸೀಟ್ ಸಿಗೋ ಥರ ಆಗಬಾರದು ನೋಡಿ.

Tuesday, September 8, 2009

ರಿಯಾಲಿಟಿ ಷೋಗೆ ಟಿಪ್ಸ್ ಗಳು !

ಈಗ ಯಾವ ಚ್ಯಾನಲ್ ನೋಡಿದ್ರೂ ರಿಯಾಲಿಟಿ ಷೋಗಳು.ರಿಯಾಲಿಟಿ ಶೋ ಅಂದ ಮಾತ್ರಕ್ಕೆ ಇಲ್ಲಿ ತೋರಿಸೋದೆಲ್ಲಾ ರಿಯಲ್ ಅಂದುಕೊಂಡ್ರೆ ನಮ್ಮಂಥ ಮೂರ್ಖರು ಬೇರೊಬ್ಬರಿಲ್ಲ!

ಬಹಳಷ್ಟು ಜನರಿಗೆ ಇಂಥ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಬೇಕು ಅಂತ ಆಸೆ ,ಆದ್ರೆ ಹೇಗೆ ಅನ್ನೋದು ಗೊತ್ತಿಲ್ಲ.

ನನ್ನ ಬಳಿ ಕೆಲವು ಟಿಪ್ಸ್ ಗಳಿವೆ ! ನೋಡಿ ಉಪಯೋಗಕ್ಕೆ ಬಂದ್ರೂ ಬರಬಹುದು .ಯೋಚನೆ ಮಾಡ್ಬೇಡಿ ಕಾಸೇನೂ ಕೇಳಲ್ಲ ಇದಕ್ಕೆಲ್ಲ.

ರಿಯಾಲಿಟಿ ಶೋಗಳಲ್ಲಿ ಭಾಗವಸೋದಕ್ಕೆ ಮಿನಿಮಮ್ ಯೋಗ್ಯತೆ ಅಂದ್ರೆ ನಿಮಗೊಂದಿಷ್ಟು ಟ್ಯಾಲೆಂಟ್ ಇರ್ಬೇಕು.ಟ್ಯಾಲೆಂಟ್ ಇರದಿದ್ದೂ ನಡೆಯುತ್ತೆ ಅಂದುಕೊಂಡಿದ್ರೆ ತಪ್ಪು ಕಣ್ರಿ.ಆ ಮಟ್ಟಿಗೇನೂ ಇಳಿದಿಲ್ಲ ರಿಯಾಲಿಟಿ ಶೋಗಳ ಕ್ವಾಲಿಟಿ!

ನಿಮಗೆ ಹಾಡೋದು ಅಥವಾ ಕುಣಿಯೋದು ಗೊತ್ತಿದ್ರೆ ಒಳ್ಳೇದು.ಎರಡೂ ಗೊತ್ತು ಅಂದ್ರೆ ಇನ್ನೂ ಒಳ್ಳೇದು. ಎರಡೂ ಗೊತ್ತಿಲ್ಲ ಅಂದ್ರೆ ನಿಮಗೆ ಏನು ಗೊತ್ತಿದೆ ಹೇಳಿ ಆಮೇಲೆ ನಿರ್ಧಾರ ಮಾಡೋಣ ಯಾವುದರಲ್ಲಿ ಭಾಗವಹಿಸೋದು ಅಂತ.

ನಿಮಗೆ ಚೆನ್ನಾಗಿ ಹಾಡೋದಕ್ಕೆ ಗೊತ್ತಿದ್ದು ಚೆನ್ನಾಗಿರೋ ಮನೆಯಲ್ಲಿ ನೀವೇನಾದ್ರೂ ವಾಸವಾಗಿದ್ರೆ ನಿಮ್ಮ ಬ್ಯಾಡ್ ಲಕ್ ಕಣ್ರಿ.ಯಾಕಂದ್ರೆ ಟಿ.ವಿ ನವ್ರು ಕಾರ್ಯಕ್ರಮದ ಮಧ್ಯೆ ತೋರ್ಸೋದಕ್ಕೆ ಒಂದು ಹಳೆ ಮನೆ ,ಅದರಲ್ಲಿ ಒಲೆ ಹಚ್ಚುತ್ತಿರೋ ನಿಮ್ಮ ತಾಯಿ ,ನೀವು ಪಕ್ಕದ ಹಳ್ಳಿಯಿಂದ ಕೊಡದಲ್ಲಿ ನೀರು ತುಂಬಿಸಿ ತರೋ ದೃಶ್ಯ ಇವೆಲ್ಲಾ ಬೇಕು.ಹೀಗೆ ನಿಮ್ಮ ಬಡತನವನ್ನು ತೋರಿಸ್ತಾ ಇದ್ದಾಗ ಹಿನ್ನೆಲೆಯಲ್ಲಿ ಒಂದು ಪಿಟೀಲಿನ ಕುಂಯ್ ಕುಂಯ್ ಅನ್ನೋ ಟ್ಯೂನ್ ಹಾಕಿದ್ರಂತೂ SMS ಗಳ ಮಹಾಪೂರ ಗ್ಯಾರಂಟಿ.

ಬದಲಾಗಿ ಮಲ್ಲೇಶ್ವರಂ ನ ಚೆನ್ನಾಗಿರೋ ಅಪಾರ್ಟ್ಮೆಂಟ್ ನಲ್ಲಿ ನೀವು ಸಂಗೀತ ಅಭ್ಯಾಸ ಮಾಡ್ತಾ ಇರೋದು ,ನಿಮ್ಮ ತಾಯಿ ನಿಮಗೆ ಹಾರ್ಲಿಕ್ಸ್ ತಂದು ಕೊಡೋದು ಇದೆಲ್ಲಾ ತೋರ್ಸಿದ್ರೆ ನಿಮಗ್ಯಾರ್ರಿ SMS ಕಳಿಸ್ತಾರೆ?

ಇನ್ನು ನೀವು ಚೆನ್ನಾಗಿ ಡ್ಯಾನ್ಸ್ ಮಾಡೋರಾದ್ರೆ ಒಳ್ಳೇ ವಿಚಾರ.ಆದ್ರೆ ನೀವು ಮಾಮೂಲಿ ಸ್ಟೆಪ್ಸ್ ಜೊತೆ ಒಂದು ಎಕ್ಸ್ಟ್ರಾ ಸ್ಟೆಪ್ ಕಲೀಬೇಕಾಗುತ್ತೆ.ಅದೇನಂದ್ರೆ ಮೇಲಿಂದ ಹಾರಿ ಲ್ಯಾಂಡ್ ಆಗ್ಬೇಕಾದ್ರೆ ಎಡವಟ್ಟಾಗಿ ಬಿದ್ದು ಕಾಲು ತಿರುಚಿಕೊಳ್ಳೋದು!
ನೋಡಿ ಸರಿಯಾಗಿ ಅಭ್ಯಾಸ ಮಾಡ್ಬೇಕು ಈ ಸ್ಟೆಪ್ ನ.ಅಪ್ಪಿ ತಪ್ಪಿ ನಿಜವಾಗ್ಲೂ ಕಾಲು ತಿರುಚಿಕೊಂಡ್ರೆ ನನ್ನನ್ನ ಬಯ್ಬೇಡಿ ಮತ್ತೆ.ನೀವು ಕಾಲು ತಿರುಚಿ ಬಿದ್ದಾಗ ಬೇಜಾರಲ್ಲಿ ಸುಮ್ನೆ ಬಿದ್ದುಕೊಳ್ಳಿ.ಆ ದೃಶ್ಯವನ್ನು ಕಪ್ಪು ಬಿಳುಪಿನಲ್ಲಿ ಒಂದು ಸಲ ,ಸಿಡಿಲು ಬಡಿದ ಹಾಗೆ ಲೈಟ್ ಎಫೆಕ್ಟ್ ಹಾಕಿ ಒಂದು ಸಲ ತೋರ್ಸೋ ಕೆಲಸ ಟಿ.ವಿ ಯವರಿಗೆ ಬಿಟ್ಟು ಬಿಡಿ.ನೀವೇನೂ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ ಈ ಬಗ್ಗೆ.

ಸತ್ಯವಂತರಿಗಿದು ಕಾಲವಲ್ಲ ಅಂತ ದಾಸರು ತಪ್ಪಿ ಹೇಳಿರೋದು.ಅವರು ’ಸಚ್ ಕಾ ಸಾಮ್ನಾ’ ನೋಡಿಲ್ವಲ್ಲ ಪಾಪ.ಸತ್ಯವಂತರಿಗಿದು ದುಡ್ಡು ಮಾಡೋ ಕಾಲ.ಆದ್ರೆ ಈ ಶೋ ಗೆ ಎಂಟ್ರಿ ಸಿಗೋದು ಸ್ವಲ್ಪ ಕಷ್ಟ.ನಿಮಗೆ ಒಂದೆರಡು ಅನೈತಿಕ ಸಂಬಂಧಗಳಿದ್ರೆ ಆರಾಮಾಗಿ ಭಾಗವಹಿಸಬಹುದು.ಎರಡಕ್ಕಿಂತ ಜಾಸ್ತಿ ಇದ್ರೆ ನಿಮ್ಮನ್ನು ಮನೆಗೆ ಬಂದು ಕರ್ಕೊಂಡು ಹೋಗ್ತಾರೆ ಬಿಡಿ ಚ್ಯಾನೆಲ್ ನವರು!ಯಾವುದಕ್ಕೂ ನೀವು ಯಾರ್ಯಾರ ಜೊತೆ ಮಲಗಿದ್ರಿ ,ಎಷ್ಟು ಜನ ವೇಶ್ಯೆಯವರ ಜೊತೆ ಮಜಾ ಉಡಾಯಿಸಿದ್ರಿ ಇದೆಲ್ಲ ಒಂದು ಪುಟ್ಟ ಡೈರಿಯಲ್ಲಿ ಬರೆದಿಟ್ಟು ಆಗಾಗ ನೆನಪು ಮಾಡಿಕೊಳ್ತಾ ಇದ್ರೆ ಜಾಸ್ತಿ ಹಣ ಬಹುಮಾನವಾಗಿ ಗೆಲ್ಲಲು ಸಹಕಾರಿಯಾಗುತ್ತೆ .

ನಿಮ್ಮದು ತೀರಾ ಸಪ್ಪೆ ಜೀವನವಾದ್ರೆ ಏನೂ ಮಾಡೋದಕ್ಕಾಗಲ್ಲ ಸಾರಿ.ನಿಮಗೆ ಅಲ್ಲಿ ಪ್ರವೇಶವಿಲ್ಲ :(

ನಿಮಗೆ ಇಂಗ್ಲೀಶ್ ಅಥವ ಹಿಂದಿ ಬೈಗುಳ ಚೆನ್ನಾಗಿ ಗೊತ್ತಿದ್ರೆ ನೀವು ಎಂ.ಟಿ.ವಿ ರೋಡೀಸ್ ಥರದ ಶೋಗಳಿಗೆ ಪ್ರಯತ್ನಿಸಬಹುದು ನೋಡಿ.ಬರೀ ಕನ್ನಡ ಬೈಗುಳ ಗೊತ್ತಿದ್ರೆ once again sorry! ಕನ್ನಡದಲ್ಲಿ ’ಇನ್ನೂ’ ಆ ಥರದ ಶೋ ಶುರು ಆಗಿಲ್ಲ!

ಇನ್ನು ಜಾಸ್ತಿ ಜಾಸ್ತಿ SMS ಗಳನ್ನು ಬಾಚಿಕೊಳ್ಳೋದು ಅನ್ನೋದರ ರಹಸ್ಯ ಗೊತ್ತಾಗ್ಬೇಕಾ ನಿಮಗೆ ? !

ತುಂಬಾ ಸಿಂಪಲ್ ! ನೀವು ಕರ್ನಾಟಕದಲ್ಲೇ ಹುಟ್ಟಿ ಬೆಳೆದರೂ , ’ನಾನು ಹುಟ್ಟಿದ್ದು ದೆಹಲಿಯಲ್ಲಿ,ನಮ್ಮ ಅಪ್ಪ ಕರ್ನಾಟಕದವರು,ಅಮ್ಮ ತಮಿಳುನಾಡಿನವರು ಆದ್ರೆ ಈಗ ನಾವು ರಾಜಸ್ತಾನದಲ್ಲಿ ಮನೆ ಮಾಡಿಕೊಂದಿದ್ದೀವಿ ’ ಅನ್ನಿ !

ಕರ್ನಾಟಕ ,ದೆಹಲಿ,ತಮಿಳುನಾಡು,ರಾಜಸ್ತಾನದವರೆಲ್ಲರೂ ’ಇಂವ ನಮ್ಮವ ಇಂವ ನಮ್ಮವ ’ ಅಂದುಕೊಂಡು SMS ಮಾಡೇ ಮಾಡ್ತಾರೆ!

Sunday, August 30, 2009

ರೇಡಿಯೋ ಮೋಡಿ..

ಬೆಂಗಳೂರಿಗೆ ಬಂದ ಹೊಸದರಲ್ಲಿ ನಾನು ತೆಗೆದುಕೊಂಡ ಮೊದಲ ವಸ್ತು ಅಂದ್ರೆ FM Radio.ಮೈಸೂರು ಬ್ಯಾಂಕ್ ಸಿಗ್ನಲ್ ನಲ್ಲಿ ಗೋಡೆಗೆ ನೇತು ಹಾಕಿರುತ್ತಿದ್ದ ಉದ್ಯೋಗ ಜಾಹೀರಾತುಗಳನ್ನು ನೋಡುತ್ತಾ ಇರ್ಬೇಕಾದ್ರೆ ಅಲ್ಲೇ ಒಬ್ಬ ರೇಡಿಯೋ ಮಾರ್ತಾ ಇದ್ದ.ಚಿಕ್ಕದಾಗಿ ಪೆನ್ ಟಾರ್ಚ್ ಥರ ಇದ್ದ ರೇಡಿಯೋ ಇಯರ್ ಫೋನ್ ನ ಅವನು ನನ್ನ ಕಿವಿಗೆ ಬಲವಂತವಾಗಿ ತುರುಕಿರದೇ ಇದ್ದರೆ ಬಹುಷ ನಾನು ಆ ದಿನ ಅದನ್ನು ತಗೊಳ್ತಾ ಇರ್ಲಿಲ್ಲ.ನನಗೆ ಎಫ್.ಎಮ್ ರೇಡಿಯೋ ಸಿಗ್ನಲ್ ಕ್ವಾಲಿಟಿ ಅಷ್ಟೊಂದು ಚೆನ್ನಾಗಿರುತ್ತೆ ಅಂತ ಅದೇ ಮೊದಲ ಸಲ ಗೊತ್ತಾಗಿದ್ದು.ಊರಲ್ಲಿದ್ದಾಗ ಮನೆಯಲ್ಲಿ ಟು ಇನ್ ಒನ್ ಟೇಪ್ ರೆಕಾರ್ಡರ್ ಇದ್ದರೂ ಅಷ್ಟಾಗಿ ರೇಡಿಯೋ ಕೇಳ್ತಾ ಇರ್ಲಿಲ್ಲ.ಅದರಲ್ಲೂ ರೇಡಿಯೋ ಅನ್ನು ಎಫ್.ಎಮ್ ಮೋಡ್ ಗೆ ಹಾಕಿದಾಗಲಂತೂ ಬರೀ ಪುಸ್ ಅಂತ ಗಾಳಿಯ ಶಬ್ದವಷ್ಟೇ ಕೇಳಿ ಬರ್ತಾ ಇತ್ತು. ಆಮೇಲೆ ಒಂದು ದಿನ ಯಾರೋ ಹೇಳಿದ್ರು ಎಫ್.ಎಮ್ ಟ್ರಾನ್ಸ್ಮಿಶನ್ ಮಂಗಳೂರಿನಲ್ಲಿಲ್ಲ ಅದಿಕ್ಕೇ ಏನೂ ಕೇಳ್ಸಲ್ಲ ಅಂತ!

ಮೈಸೂರು ಬ್ಯಾಂಕ್ ಸಿಗ್ನಲ್ ನ ಆ ವ್ಯಾಪಾರಿ ನೂರು ರೂ ಕೇಳಿದ್ದ ಆ ರೇಡಿಯೋ ಗೆ.ಆದ್ರೆ ಬೆಂಗಳೂರಿನಲ್ಲಿ ಯಾವ ವಸ್ತುವನ್ನೂ ಚೌಕಾಶಿ ಮಾಡದೇ ತಗೋಬೇಡ ಅನ್ನೋ ಹಿತವಚನ ಬಹಳಷ್ಟು ಜನ ನೀಡಿದ್ದರಿಂದ ಅವನ ಬಳಿ ’ಬೆಲೆ ಕಡಿಮೆ ಮಾಡು’ ಅಂತ ವಾದಕ್ಕೆ ನಿಂತಿದ್ದೆ.ಕೊನೆಗೆ ಐವತ್ತು ರೂಗೆ ಡೀಲ್ ಕುದುರಿಸಿ ಅದಕ್ಕೆ ಚೈನಾ ಸೆಲ್ ಹಾಕಿ ಹಾಡು ಕೇಳಿದಾಗಲಂತೂ ಸಕ್ಕತ್ ಖುಷಿಯಾಗಿತ್ತು.

ಅಂದಿನಿಂದ ರೇಡಿಯೋ ಜೊತೆ ಲವ್ ಶುರು ಆಯ್ತು.

ಆಗ (೨೦೦೨) ಇದ್ದಿದ್ದೇ ಎರಡು ಎಫ್.ಎಂ ಸ್ಟೇಶನ್ .ಒಂದು ರೇಡಿಯೋ ಸಿಟಿ ಇನ್ನೊಂದು ಎಫ್.ಎಮ್ ರೇನ್ಬೋ.ಎಫ್.ಎಮ್ ರೇನ್ಬೋ ದ RJ ಗಳು ಹಳೇ ಶೈಲಿಯಲ್ಲೇ ಮಾತಾಡ್ತಾ ಇದ್ದಿದ್ದರಿಂದ ಅಷ್ಟೊಂದು ಇಷ್ಟವಾಗಿರಲಿಲ್ಲ.ಬದಲಾಗಿ ಚಟಪಟನೆ ಮಾತಾಡೋ ರೇಡಿಯೋ ಸಿಟಿ ತುಂಬಾನೇ ಇಷ್ಟ ಆಗಿತ್ತು.ಅದರಲ್ಲಿ ಬರೋ ಜಾಹೀರಾತುಗಳೂ ತುಂಬಾ ವಿಭಿನ್ನವಾಗಿದ್ದರಿಂದ ಸಂಪೂರ್ಣವಾಗಿ ಮನಸೋತು ಹೋಗಿದ್ದೆ ರೇಡಿಯೋ ಸಿಟಿಗೆ.ರಘು ದೀಕ್ಷಿತ್ ರ ಸ್ಪೈಸ್ ಟೆಲಿಕಾಮ್ ನ ’ಲೈಫಿನಲ್ಲಿ ಆಪರ್ಚುನಿಟಿ’ ಮುಂತಾದ ಜಾಹಿರಾತುಗಳು ಕೇಳಿ ರೇಡಿಯೋದಲ್ಲಿ ಕೂಡ ಇಷ್ಟೊಂದು ಕ್ರಿಯೇಟಿವಿಟಿ ಬಳಸಬಹುದು ಅನ್ನೋದು ಗೊತ್ತಾಗಿ ಬೆರಗಾಗಿತ್ತು.

ನನಗೆ ಇಷ್ಟವಾಗ್ತಾ ಇದ್ದಿದ್ದು ಚೈತನ್ಯಾ ಹೆಗ್ಡೆಯ ’ಚೌ ಚೌ ಬಾತ್’ ಕಾರ್ಯಕ್ರಮ.ಭಾನುವಾರ ಹನ್ನೊಂದು ಘಂಟೆಗೆ ಮುಂಚೆ ಯಾವತ್ತೂ ಏಳದ ನಾನು ಅವನ ಧ್ವನಿ ಕೇಳಲೆಂದೇ ಬೇಗ ಏಳ್ತಾ ಇದ್ದೆ.(ಕಿವಿಗೆ ರೇಡಿಯೋ ಇಯರ್ ಫೋನ್ ಸಿಕ್ಕಿಸಿ ಮತ್ತೆ ಬಿದ್ದುಕೋತಾ ಇದ್ದೆ ಆ ವಿಷಯ ಬೇರೆ!).ಒಂಥರಾ ಮಾಂತ್ರಿಕ ಶಕ್ತಿ ಇತ್ತು ಚೈತನ್ಯಾ ಹೆಗ್ಡೆಯ ಮಾತಿಗೆ.ಗಡುಸಾದರೂ ಮಾತಿನ ಮಧ್ಯೆ ಚೆಂದನೆಯ ನಗು, ಸಕ್ಕತ್ ಹಾಸ್ಯ ಪ್ರಜ್ಜ್ಞೆ,ಕನ್ನಡ ಇಂಗ್ಲೀಷ್ ಎರಡೂ ಮಿಕ್ಸ್ ಮಾಡಿ ಮಾತಾಡೋ ಅವನ ಭಾಷೆ ತುಂಬಾನೇ ಇಷ್ಟ ಆಗಿತ್ತು.ರೇಡಿಯೋದಲ್ಲಿ ಬರೀ ಧ್ವನಿ ಮಾತ್ರ ಕೇಳಿಸೋದ್ರಿಂದ ಚೈತನ್ಯಾ ಹೆಗ್ಡೆ ಅನಿಲ್ ಕುಂಬ್ಳೆ ಥರ ದಪ್ಪ ಮೀಸೆ ಇಟ್ಕೊಂಡಿರ್ತಾನೆ,ಹೀಗಿರ್ತಾನೆ ಹಾಗಿರ್ತಾನೆ ಅಂತೆಲ್ಲ ಮನಸಲ್ಲೇ ಕಲ್ಪಿಸಿಕೊಂಡಿದ್ದೆ.ಚೈತನ್ಯಾ ಹೆಗ್ಡೆ ರೇಡಿಯೋ ಸಿಟಿ ಬಿಟ್ಟು ಹೋದ ಮೇಲಂತೂ ರೇಡಿಯೋ ಕೇಳೋದೇ ಬಿಟ್ಟಿದ್ದೆ ನಾನು.

ಮತ್ತೆ ರೇಡಿಯೋ ಕೇಳೋಕೆ ಶುರು ಮಾಡಿದಾಗ ವಾಸಂತಿ ಇಷ್ಟವಾಗತೊಡಗಿದಳು.ತುಂಬಾ ಸ್ಪಷ್ಟವಾದ ಧ್ವನಿ,ಎನರ್ಜೆಟಿಕ್ ಆಗಿ ಮಾತಾಡೋ ವಿಭಿನ್ನ ಶೈಲಿ ಇಷ್ಟವಾಗಿತ್ತು.ಯಥಾಪ್ರಕಾರ ವಾಸಂತಿ ರೇಡಿಯೋ ಸಿಟಿ ಬಿಟ್ಟಾಗ ಮತ್ತೆ ರೇಡಿಯೋ ಕೇಳೋದು ಬಿಟ್ಟು ಬಿಟ್ಟೆ.

ತೀರಾ ಈಚೆಗೆ ಮತ್ತೆ ರೇಡಿಯೊ ಕೇಳೋಕೆ ಶುರು ಮಾಡಿದ ಮೇಲೆ ಬಿಗ್ ಎಫ್ ನ ’ದೀಪು -ನಾನು ನಿಮ್ಮ ಟೈಪು ’ತುಂಬಾ ಇಷ್ಟವಾಗಿದ್ದ.ಸಕ್ಕತ್ ತರಲೆ ಮಾಡೋ ಅವನು ಶೋ ನಲ್ಲಿ ಕಾಂಟೆಸ್ಟ್ ಕೂಡಾ ಇಡ್ತಾ ಇದ್ದ.ಒಂದು ದಿನ ’ಯಾವುದಾದರೂ ತರಕಾರಿ ಇಟ್ಕೊಂಡು ಯವುದಾದರೂ ಹುಡುಗೀನ ಪ್ರಪೋಸ್ ಮಾಡೋದಾದ್ರೆ ಹೇಗೆ ಪ್ರಪೋಸ್ ಮಾಡ್ತೀರಾ? ’ ಅಂತ ಕೇಳಿದ್ದ.ಅದಕ್ಕೆ ನಾನು ಬದನೆಕಾಯಿ ಇಟ್ಕೊಂಡು ಉಪೇಂದ್ರ ಶೈಲಿಯಲ್ಲಿ ಪ್ರಪೋಸ್ ಮಾಡ್ತೀನಿ ಅಂತ ದೊಡ್ಡ SMS ಕಂಪೋಸ್ ಮಾಡಿ ಕಳಿಸಿದ್ದೆ.

ಹೀಗಿತ್ತು ಆ SMS :- " ಚಾಂದಿನಿ ನೋಡು ಈ ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ ಅಂತ ಯಾರೋ ತಲೆ ಕೆಟ್ಟೋನು ಹೇಳಿದ್ದಾನೆ.ಅವನ ಮಾತು ಕೇಳ್ಬೇಡ ನೀನು.ಆ ರೀತಿ ಹೇಳೋರೆಲ್ಲಾ ’ಹೇಳೋದು ಶಾಸ್ತ್ರ ತಿನ್ನೋದು ಬದನೆಕಾಯಿ’ ಅನ್ನೋ ರೀತಿಯ ಜನ.ನೀನು ಚೆನ್ನಾಗಿರ್ಬೇಕು ಆಗ್ಲೇ ನಾನು ನಿನ್ನನ್ನು ಪ್ರೀತಿಸೋಕಾಗೊದು.ಮನೆಗೆ ಹೋಗಿ ಈ ಬದನೆಕಾಯಿ ಸಾಂಬಾರ್ ಮಾಡಿ ಊಟ ಮಾಡು. ಚಾಂದಿನಿ ನೀನು ಚೆನ್ನಾಗಿರ್ಬೆಕು,ನೀನು ಚೆನ್ನಾಗಿದ್ರೇನೇ ನಾನೂ ಚೆನ್ನಾಗಿರೋದು " ಅಂತ ಉಪೇಂದ್ರನಿಗೇ ಡೋಸ್ ಇಟ್ಟು ಬರೆದಿದ್ದೆ.

ಯಾಕೋ ದೀಪು ಗೆ ಈ ಉತ್ತರ ಸಕ್ಕತ್ ಇಷ್ಟ ಆಗಿ ನನಗೆ ಕಾಲ್ ಮಾಡಿ ನನ್ನನ್ನು On Air ಹಾಕಿಬಿಟ್ಟ.ಯಾಕೋ ಇಡೀ ಬೆಂಗಳೂರು ಕೇಳಿಸ್ಕೊಳ್ಳುತ್ತೆ ಅನ್ನೋದು ಗೊತ್ತಾಗಿ ತುಂಬಾ ನರ್ವಸ್ ಆಗಿ ಸರಿಯಾಗಿ ಮಾತಾಡೋಕೇ ಆಗಿರ್ಲಿಲ್ಲ ನಂಗೆ.ಆದರೆ ಆ ದಿನ ದೀಪು ನನಗೆ ಸಾವರಿಯಾ ಸಿ.ಡಿ ಬಹುಮಾನವಾಗಿ ಕೊಟ್ಟಿದ್ದ .
ಇನ್ನೊಂದು ದಿನ ದೀಪು ಗೋಲ್ ಅನ್ನೊ ಶಬ್ದಕ್ಕೆ ಕನ್ನಡ ಶಬ್ದ ನೀಡಿ ಅಂತ ಕೇಳಿದ್ದ.ಎಲ್ಲರೂ ಧ್ಯೇಯ ,ಗುರಿ ಅಂತೆಲ್ಲಾ ಮೆಸೇಜ್ ಮಾಡಿದ್ರು.ಆದ್ರೆ ಅವನು ಕೇಳಿದ್ದು ಫುಟ್ಬಾಲ್ ಗೋಲ್ ಬಗ್ಗೆ!
ನಾನು ಅದಕ್ಕೆ ’ಚೆಂಡ್ಜಾಲ ಪ್ರವೇಶ’ ಅಂತ ಉತ್ತರ ಕಳಿಸಿದ್ದಕ್ಕೆ ’ಗೋಲ್’ ಸಿನೆಮಾದ ಕಪಲ್ ಪಾಸ್ ಕೊಟ್ಟಿದ್ದ.ನಾನು ಕಪಲ್ ಆಗಿರದೇ ಇದ್ದಿದ್ರಿಂದ(ನಿಜ ಹೇಳ್ಬೇಕೂಂದ್ರೆ ಸಿನೆಮಾ ಪಿ.ವಿ.ಆರ್ ನಲ್ಲಿ ರಾತ್ರಿ ಏಳಕ್ಕೆ ಇದ್ದದ್ದರಿಂದ!)ಸಿನೆಮಾಗೆ ಹೋಗೋಕೆ ಆಗಿರ್ಲಿಲ್ಲ ನನಗೆ.

ದೀಪು ಬಿಗ್ ಎಫ್ ಎಮ್ ಬಿಟ್ಟ ಮೇಲೆ ನಾನು ಮತ್ತೆ ರೇಡಿಯೋ ಕೇಳೋದು ಬಿಟ್ಟು ಬಿಟ್ಟೆ.

Sunday, August 2, 2009

ಕಲ್ಪವೃಕ್ಷದ ನೆನಪಿನ ಸುತ್ತ....

ಬೆಂಗಳೂರಿನಲ್ಲಿ ಬಹಳ ದಿನದಿಂದ ತಣ್ಣನೆಯ ವಾತಾವರಣ.ಈ ತಂಪಾದ ವಾತಾವರಣದಲ್ಲೂ ಕೆಲ ಜನರು ಎಳನೀರು ಹೀರುತ್ತಿದ್ದಿದ್ದು ನೋಡಿ ವಿಚಿತ್ರ ಅನ್ನಿಸಿತ್ತು.ಆದರೆ ಆಮೇಲೆ ಗೊತ್ತಾಯ್ತು ,ಬೆಂಗಳೂರಿನಲ್ಲಿ ಜನರು ಎಳನೀರು ಕುಡಿಯೋದು ಆರೋಗ್ಯಕ್ಕಾಗಿ ಅಂತ!ಹಾಗೆ ನೋಡಿದ್ರೆ ನಾನು ಕೂಡ ಅಪರೂಪಕ್ಕೊಮ್ಮೆ ಎಳನೀರು ಕುಡಿಯೋದು ಆರೋಗ್ಯದ ದೃಷ್ಟಿಯಿಂದಲೇ.

ಪ್ರತಿ ಸಲ ಎಳನೀರು ಕುಡಿಯುವಾಗಲೂ ಊರಿನ ನೆನಪು ಕಿತ್ತು ತಿನ್ನುವಂತೆ ಕಾಡುತ್ತದೆ.ಎಳನೀರು ಕೀಳಲೆಂದೇ ನಾನು ತೆಂಗಿನ ಮರ ಹತ್ತಲು ಕಲಿತಿದ್ದು ನೆನಪಾಗುತ್ತದೆ.ಮಂಗಳೂರಿನಲ್ಲಿದ್ದಷ್ಟು ದಿನ ಒಂದು ದಿನವೂ ಕಾಸು ಕೊಟ್ಟು ಎಳನೀರು ಕುಡಿದದ್ದು ನನಗೆ ನೆನಪಿಲ್ಲ.ಹಾಗಂತ ಬಿಟ್ಟಿ ಕುಡಿದೆ ಅಂದುಕೋಬೇಡಿ.ನಾನು ಯಾವತ್ತೂ ಕುಡೀತಾ ಇದ್ದಿದ್ದು ನಮ್ಮದೇ ತೋಟದ ,ನಾನೇ ಕಿತ್ತ ಹಚ್ಚ ಹಸುರು ಬಣ್ಣದ ತಂಪನೆಯ ಎಳನೀರು.

ನಮ್ಮ ತೋಟದಲ್ಲಿರೋ ತೆಂಗಿನ ಮರದಿಂದ ತೆಂಗಿನಕಾಯಿಗಳನ್ನು ಕೀಳಲು ಕರಿಯ ಅನ್ನೋನು ಬರ್ತಿದ್ದ. ’ದುನಿಯಾ’ ಸಿನೆಮಾಗೂ ಅವನಿಗೂ ಏನೂ ಸಂಬಂದವಿಲ್ಲ ಬಿಡಿ .ಇದು ಹನ್ನೆರಡು ವರ್ಷ ಹಿಂದಿನ ಕಥೆ!ಆಗೆಲ್ಲ ನಮಗೆ ಅವನೇ ಜೀವಂತ ಸೂಪರ್ ಮ್ಯಾನ್ .ಕೈಗೊಂದು ಹಗ್ಗ,ಕಾಲಿಗೊಂದು ಹಗ್ಗ ಕಟ್ಟಿ ಕುಪ್ಪಳಿಸುತ್ತ ಮರ ಹತ್ತುತ್ತಿದ್ದರೆ ಅದನ್ನು ನೋಡೋದೆ ದೊಡ್ಡ ಬೆರಗು ನಮಗೆ.ಆದ್ರೆ ಅವನು ತೋಟದ ಎಲ್ಲಾ ಮರಗಳಿಂದ ಕಾಯಿಗಳನ್ನು ಕಿತ್ತಾದ ಮೇಲೆ ಮಾತ್ರ ಅವನ ಮೇಲೆ ಅವನ ಪ್ರಾಣ ತೆಗ್ಯೋ ಅಷ್ಟು ಸಿಟ್ಟು ಬರ್ತಿತ್ತು ನನಗೆ.
ನಮ್ಮ ತೋಟದ ಕಂಪೌಂಡ್ ಸುತ್ತಲೂ ಹೆಂಚಿನ ಮನೆಗಳಿದ್ದವು.ಈ ಪಾಪಿ ಕರಿಯ.ಪ್ರತಿ ಮನೆಯ ಮೇಲೂ ಕನಿಷ್ಟ ಎರಡು ತೆಂಗಿನ ಕಾಯಿ ಬೀಳಿಸದೆ ಕೆಳಗೆ ಇಳೀತಿರಲಿಲ್ಲ.

ಹೀಗಾಗು ಕಾಯಿ ಕೀಳಲು ಕರಿಯ ಬಂದ ದಿನ ಸುತ್ತ ಮುತ್ತಲಿರುವ ಅಷ್ಟೂ ಮನೆಯವರಿಗೆ ’ಎಚ್ಚರಿಕೆ’ ನೀಡಿ ಬರ್ಬೇಕಿತ್ತು ನಾನು.ಅದಕ್ಕಿಂತ ದೊಡ್ಡ ತಲೆನೋವಿನ ಕೆಲಸ ಅಂದ್ರೆ ಅವರ ಮನೆಯ ಎಷ್ಟು ಹಂಚುಗಳು ಮುರಿದಿದೆ ಅನ್ನೋ ಲೆಕ್ಕ ಹಾಕಿ ಹಣ ಪಾವತಿ ಮಾಡೋ ಕೆಲಸ.ಹಲವು ಸಲ ಈ ಕರಿಯ ಬೇಕೂಂತ್ಲೇ ಆ ಮನೆಗಳ ಮೇಲೆ ಕಾಯಿ ಬೀಳಿಸ್ತಿದ್ದ ಅನ್ನೋ ಅನುಮಾನ ನನಗಿತ್ತು.ಯಾಕಂದ್ರೆ ಎಲ್ಲಾ ಮನೆಯವರೂ ಹಂಚಿನ ಮೂಲ ಬೆಲೆಗಿಂತ ಜಾಸ್ತಿ ಹಣ ಕೀಳುತ್ತಿದ್ದರು ನಮ್ಮಿಂದ!ಈ ಕರಿಯ ಆ ಮನೆಯವರ ಜೊತೆ ಸೇರಿ ’ಹಂಚು ಫಿಕ್ಸಿಂಗ್’ ಏನಾದ್ರೂ ಮಾಡಿರಬಹುದಾ ಅನ್ನೋ ಅನುಮಾನ ಯಾವಾಗ್ಲೂ ಕಾಡ್ತಾ ಇತ್ತು ನನಗೆ .

ಅವನು ತೋಟವಿಡೀ ಕಿತ್ತು ಬಿಸಾಕಿದ ಕಾಯಿಗಳನ್ನೆಲ್ಲ ಒಟ್ಟುಗೂಡಿಸಿ ಒಂದು ಕಡೆ ರಾಶಿ ಹಾಕೋ ಅಷ್ಟರಲ್ಲಿ ಪ್ರಾಣ ಹೋಗ್ತಿತ್ತು.ಆದರೆ ಎಲ್ಲಾ ಕೆಲಸ ಆದ ಮೇಲೆ ನಮಗೆಂದೇ ಕಿತ್ತ ಎಳನೀರು ಕುಡಿಯುವಾಗ ಮಾತ್ರ ಹೋದ ಪ್ರಾಣ ವಾಪಾಸ್ ಬರ್ತಿತ್ತು.

ಎಳನೀರಿನ ಅದ್ಭುತ ರುಚಿ ಸಿಕ್ಕಿದ ನನಗೆ ಕರಿಯನಿಗೋಸ್ಕರ ತಿಂಗಳು ಕಾಯೋದು ದೊಡ್ಡ ತಲೆ ನೋವಾಗಿತ್ತು.ಅದಕ್ಕಾಗೆ ತೆಂಗಿನ ಮರ ಹತ್ತಲು ಕಲಿಯೋದು ನನಗೆ ಅನಿವಾರ್ಯವಾಗಿತ್ತು .ತೆಂಗಿನ ಮರ ಹತ್ತಲು ಕಲಿಸುವ ಯಾವ ಕೋರ್ಸೂ ಇರದ ಕಾರಣ ನಾವೇ ಸ್ವಥ ಕಲೀಬೇಕಾಗಿತ್ತು ಅದನ್ನು.ಕರಿಯನ ಹಾಗೆ ಚಕ ಚಕನೆ ಹತ್ತಲು ಕಲಿಯಬೇಕು ಅನ್ನೋದು ನನ್ನ ಓರಗೆಯ ಹುಡುಗರ ದೊಡ್ಡ ಆಸೆಯಾಗಿತ್ತು ಆ ಕಾಲದಲ್ಲಿ!
ಆದರೆ ಎಷ್ಟು ಪ್ರಯತ್ನಿಸಿದರೂ ಅವನ ಕಲೆ ನಮಗೆ ಸಿದ್ಧಿಸಲೇ ಇಲ್ಲ!

ಅವನ ಆ ಚಾತುರ್ಯಕ್ಕೆ ಕಾರಣ ೭ ರೂಪಾಯಿಯ ಸಾರಾಯಿ ಪಾಕೀಟು(ನನಗೆ ರೇಟ್ ಹೇಗೆ ಗೊತ್ತು ಅಂತ ಆಶ್ಚರ್ಯ ಪಡಬೇಡಿ ಅದು ಜನರಲ್ ನಾಲೆಡ್ಜ್!) ಅಂತ ನಾವೆಲ್ಲಾ ಬಲವಾಗಿ ನಂಬಿದ್ವಿ!ಅದು ಒಂದು ರೀತಿಯಲ್ಲಿ ನಿಜವೂ ಆಗಿತ್ತು.

ದೂರದಲ್ಲಿ ನಿಂತು ನೋಡೋರಿಗೆ ತೆಂಗಿನ ಮರ ಹತ್ತೋದು ಒಂದು ಸುಲಭದ ಕೆಲಸ.ಆದರೆ ಬಲ್ಲವನೇ ಬಲ್ಲ ತೆಂಗಿನ ಮರ ಹತ್ತೋ ಕಷ್ಟವನ್ನು!
ತೆಂಗಿನ ಮರ ಹತ್ತೋದಕ್ಕೆ ಸಿಕ್ಕಾಪಟ್ಟೆ ಸ್ಟ್ಯಾಮಿನಾ ಬೇಕು.ಅದಕ್ಕಾಗೇ ಪಾಪ ಕರಿಯ ಎನರ್ಜಿ ಡ್ರಿಂಕ್ ಕುಡಿದೇ ಕೆಲಸ ಶುರು ಮಾಡ್ತಿದ್ದಿದ್ದು.

ಒಂದು ದಿನ ಅದು ಹೇಗೋ ಕಷ್ಟ ಪಟ್ಟು ಮರವನ್ನು ಅಪ್ಪಿ ಹಿಡಿದು ಒಂದೋಂದೇ ಇಂಚು ಹತ್ತಿ ಹತ್ತಿ ಅರ್ಧದಷ್ಟು ಹೋಗಿದ್ದೆ ನಾನು.ಅರ್ಧ ಮರ ಹತ್ತಿದ ಮೇಲೆ ಸುಸ್ತಾಗಿ ಹೋಗಿತ್ತು.ಸುಸ್ತಾಗಿದೆ ಅಂತ ಕೂರಲು ಸೀಟ್ ಬೇರೆ ಇರಲ್ವಲ್ಲ ಮರದಲ್ಲಿ! ಹಾಗೇ ಸುಧಾರಿಸಿ ಮುಂದುವರಿಸೋಣ ಅಂದುಕೊಂಡು ಹಾಗೇ ಮರವನ್ನು ಅಪ್ಪಿಕೊಂಡೇ ಸ್ವಲ್ಪ ಸಮಯ ಕಳೆದೆ.

ದುರಾದೃಷ್ಟವಶಾತ್ ಸುಸ್ತು ಕಡಿಮೆ ಆಗೋ ಬದಲು ಜಾಸ್ತಿ ಆಗ್ತಿತ್ತು.ಒಂದು ಹಂತದಲ್ಲಂತೂ ಕೈ ಬಿಟ್ಟೇ ಬಿಡೋಣ ಅಂತ ಕೂಡಾ ಅನ್ನಿಸಿತ್ತು !

ಕೈ ಬಿಟ್ಟಿದ್ದೆನಾ ಅಂತ ಕೇಳಬೇಡಿ.ಬಿಟ್ಟಿದ್ರೆ ನಾನೆಲ್ಲಿ ಇರ್ತಾ ಇದ್ದೆ ಈ ಬ್ಲಾಗ್ ಬರೆಯಲು !ಪ್ರಾಣ ಭಯದಿಂದ ಹಾಗೆ ಒಂದೊಂದೆ ಇಂಚು ಜಾರುತ್ತಾ ಜಾರುತ್ತಾ ನೆಲದ ಮೇಲೆ ಲ್ಯಾಂಡ್ ಆಗಿದ್ದೆ ಆ ದಿನ.ಆದರೂ ತೆಂಗಿನ ಮರ ಹತ್ತೋದನ್ನು ಕಲಿಯಲೇ ಬೇಕು ಅನ್ನೋ ಛಲ ಮೂಡಿತ್ತು ನನಗೆ.

ಅದು ಹೇಗೋ ಸತತ ಪ್ರಯತ್ನದಿಂದ ಆ ಕಲೆ ನನಗೂ ಸಿದ್ಧಿಸಿತು!(ಪಾಕೀಟಿನ ಸಹಾಯ ಇಲ್ಲದೆ!)

ಪ್ರೊಫೆಶನಲ್ ಆಗಿ ತೆಂಗಿನ ಮರ ಹತ್ತೋರು ಮರದ ತುದಿಯ ತನಕ ಹೋಗಲ್ಲ.ಮರದಲ್ಲೇ ಉದ್ದುದ್ದಕ್ಕೆ ನಿಂತು ಕಾಯಿಗಳನ್ನೆಲ್ಲಾ ಕತ್ತಿಯಿಂದ ಕಡಿದು ಕಡಿದು ಬೀಳಿಸುತ್ತಾರೆ.ಆದರೆ ನಮಗೆ ಪಾಕೀಟು ಇಲ್ಲದೇ ಇದ್ದದ್ದರಿಂದ -ಕ್ಷಮಿಸಿ ಅಷ್ಟೊಂದು ಸ್ಟ್ಯಾಮಿನಾ ಇಲ್ಲದೆ ಇದ್ದುದರಿಂದ ನಾವು ಮರದ ತುದಿ ತಲುಪಿದ ತಕ್ಷಣ ಮರದ ತುತ್ತ ತುದಿಗೆ ಹೋಗಿ ರೆಸ್ಟ್ ತಗೋತಾ ಇದ್ವಿ.ಸುಸ್ತೆಲ್ಲಾ ಕಡಿಮೆ ಆದ ಮೇಲೆ ಎಳನೀರನ್ನು ಕಿತ್ತು ಹುಷಾರಾಗಿ ನೆಲಕ್ಕೆಸೀಬೇಕು.ಸ್ವಲ್ಪ ಎಡವಟ್ಟಾದ್ರೂ ಎಳನೀರು ಒಡೆದು ಹೋಗ್ತಾ ಇತ್ತು.

ಮರ ಹತ್ತೋದೇ ದೊಡ್ಡ ಸಮಸ್ಯೆ ಅಂತ ಭಾವಿಸಿದ್ದ ನನಗೆ ಮರ ಹತ್ತಿದ ಮೇಲೆ ಒಳ್ಳೆಯ ಎಳನೀರನ್ನು ಗುರುತಿಸೋದೂ ಕಲೆ ಅಂತ ಗೊತ್ತಾಗಿದ್ದು ನಾನೂ ಮರ ಹತ್ತಲು ಕಲಿತ ಮೇಲೆ.ಕರಿಯ ಮಾತ್ರ ಕಾಯಿಗೆ ಬೆರಳಿನಿಂದ ಬಡಿದೇ ಯಾವುದು ಚೆನ್ನಾಗಿರೋ ಕಾಯಿ ಅಂತ ಗುರುತಿಸ್ತಾ ಇದ್ದ.ಅದನ್ನು ಗುರುತಿಸೋ ರಹಸ್ಯ ಹೇಳಿಕೊಡು ಅಂತ ಕೇಳಿದ್ರೆ ’ದಣಿ ಡಬ್ ಡಬ್ ಶಬ್ದ ಬಂದ್ರೆ ಚೆನ್ನಾಗಿರುತ್ತೆ ಟಕ್ ಟಕ್ ಅಂತ ಶಬ್ದ ಬಂದ್ರೆ ಅದು ಆಲ್ ಮೋಸ್ಟ್ ತೆಂಗಿನಕಾಯಿ ಅಂತ ಅರ್ಥ’ ಅಂತ ಹೇಳಿದ್ದ ಕರಿಯ.ಅದೆಷ್ಟು ಬಡಿದರೂ ನಮಗೆ ಏನೋ ಒಂದು ಶಬ್ದ ಕೇಳಿಸುತ್ತಿತ್ತೇ ವಿನಹ ಅದು ಡಬ್ ಡಬ್ ಆ ಅಥವ ಟಕ್ ಟಕ್ ಆ ಅನ್ನೋದು ಗೊತ್ತಾಗ್ತಾ ಇರ್ಲಿಲ್ಲ !ನಾನು ಹಾಗೇ ಸುಮ್ಮನೆ ನೋಡೋದಕ್ಕೆ ಗುಂಡಗಿರೋ ,ಹಸಿರಾಗಿರೋ ಎಳನೀರನ್ನು ಕಿತ್ತು ಬಿಸಾಕಿ ವಾಪಾಸ್ ಇಳಿದು ಬರ್ತಾ ಇದ್ದೆ.ಅದನ್ನು ಕುಡಿದು ನೋಡಿದ ಮೇಲೇನೇ ಗೊತ್ತಾಗೋದು ಅದು ಚೆನ್ನಾಗಿದೆಯೋ ಇಲ್ವೋ ಅನ್ನೋದು.

ಈ ತೆಂಗಿನ ಮರ ಹತ್ತೋ ವಿದ್ಯೆ ಕಲಿತ ಮೇಲೆ ನನಗೆ ಅದು ಬಹುತೇಕ ಉಪಯೋಗ ಬಿದ್ದಿದ್ದು ಪರೀಕ್ಷೆಯ ಸಮಯದಲ್ಲಿ.ಪರೀಕ್ಷೆಗೆ ಓದಲೆಂದು ಹುಡುಗರು ಕೆರೆ ದಡಕ್ಕೆ ,ಮರದ ಕೆಳಕ್ಕೆ ಅಂತ ಹೋಗ್ತಿದ್ರೆ ನಾನು ಮಾತ್ರ ಸೀದಾ ತೆಂಗಿನ ಮರ ಹತ್ತಿ ಅಲ್ಲೇ ಕೂತು ಓದ್ತಾ ಇದ್ದೆ.ಐದನೆಯ ತರಗತಿಯ ಎಲ್ಲಾ ಪರೀಕ್ಷೆಗೆ ಬಹುಷಃ ಅಲ್ಲೇ ಕೂತು ತಯಾರಿ ನಡೆಸಿದ್ದೆ.

ಬೆಂಗಳೂರಿನಲ್ಲಿ ತೆಂಗಿನ ಮರಗಳೇ ಅಪರೂಪ.ಅದೃಷ್ಟವಶಾತ್ ನಾವಿರುವ ರೂಮ್ ಹಿಂದೆ ಎರಡು ತೆಂಗಿನ ಮರಗಳಿವೆ.ಒಂದು ಮಧ್ಯರಾತ್ರಿ ಈ ಮರದ ತೆಂಗಿನಗರಿ ಕರೆಂಟ್ ವೈರ್ ಮೇಲೆ ಬಿದ್ದು ಸುಮಾರು ಎರಡು ನಿಮಿಷ ಟಪ್ ಟಪ್ ಅನ್ನೋ ಶಬ್ದ ಬಂದಿತ್ತು.ನಾವು ಎಲ್ಲೋ ಬಾಂಬ್ ಸ್ಫೋಟ ಆಗಿರ್ಬೇಕೇನೋ ಅನ್ನೋ ಆತಂಕದಿಂದ ಹೊರಗೆ ಬಂದು ನೋಡಿದಾಗಲೇ ಗೊತ್ತಾಗಿದ್ದು ನಮಗೆ ನಮ್ಮ ಕಂಪೌಂಡ್ ನಲ್ಲೇ ತೆಂಗಿನ ಮರ ಇದೆ ಅನ್ನೋದು!

ಈ ತೆಂಗಿನ ಮರ ಹತ್ತೋದಕ್ಕೆ ಮಾತ್ರ ಟ್ರೈ ಮಾಡಿಲ್ಲ ನಾನು !ಈಗ ಅಷ್ಟೊಂದು ಸ್ಟ್ಯಾಮಿನಾ ಇಲ್ಲ!(ಸರಕಾರದವರು ಮಾಡಿರೋ ಪಾಕೀಟು ಸಾರಾಯಿ ನಿಶೇಧಕ್ಕೂ ಸ್ಟ್ಯಾಮಿನಾಗೂ ಯಾವುದೇ ಸಂಬಂಧ ಕಲ್ಪಿಸಬೇಡಿ ಪ್ಲೀಸ್!)

Sunday, July 26, 2009

ಇನ್ನಾದರೂ ಎದ್ದೇಳಿ!

’ಎದ್ದೇಳು ಮಂಜುನಾಥ’ ಚಿತ್ರ ನೋಡಿದೆ.ಚಿತ್ರದ ವಿಮರ್ಶೆ ಬರೆಯಲು ನನಗೆ ಬರಲ್ಲ.ಬರಲ್ಲ ಅನ್ನೋದಕ್ಕಿಂತ ಬರೆಯಲು ಮನಸ್ಸಿಲ್ಲ ಅನ್ನೋದೇ ಸೂಕ್ತ.
ನಾನು ಚಿತ್ರ ಚೆನ್ನಾಗಿದೆ ಅನ್ನೋದು ಅದಕ್ಕೆ ಇನ್ನೊಬ್ಬ(ಳು) ’ಥೂ ನಿನ್ನ ಏನ್ ಕಚಡಾ ಟೇಸ್ಟ್ ನಿನ್ನದು’ ಅನ್ನೋದು.ನಾನೂ ಸೋಲೊಪ್ಪಲಾರದೆ ಸಮರ್ಥನೆ ನೀಡೋದು ,ಇಂಥ ಕಿರಿಕ್ ಗಳು ಬಹಳಷ್ಟು ಸಲ ಆಗಿವೆ.ಅದಿಕ್ಕೆ ಚಿತ್ರ ನೋಡಿ ಅಂತ ಹೇಳೋದು ತುಂಬಾ ಕಡಿಮೆ.

’ಎದ್ದೇಳು ಮಂಜುನಾಥ’ ಕೂಡಾ ನೋಡಿ ಅಂತ ಯಾರಿಗೂ ಹೇಳಲ್ಲ ನಾನು.ನಿಮ್ ದುಡ್ಡು ನೀವು ಅದನ್ನು ಯಾವ ರೀತಿ ಬೇಕಾದ್ರೂ ಖರ್ಚು ಮಾಡಿ ಸ್ವಾಮಿ ,ನಾನ್ಯಾರು ಸಲಹೆ ಕೊಡೋಕೆ ಅಲ್ವ?

ಅಷ್ಟಕ್ಕೂ ನನಗೆ ಈ ಚಿತ್ರದ ಬಗ್ಗೆ ಬರೀಬೇಕು ಅನಿಸಿದ್ದು ಯಾಕಂದ್ರೆ ಇದೊಂದು ವಿಭಿನ್ನ ರೀತಿಯ ಸಿನೆಮಾ. ಕಡಿಮೆ ಬಜೆಟ್ ನ(ಎಷ್ಟು ಅಂತ ಗೊತ್ತಿಲ್ಲ!) ಬರೀ ಸಂಭಾಷಣೆ ಮತ್ತು ಜಗ್ಗೇಶ್ ಅಭಿನಯವನ್ನು ನಂಬಿಕೊಂಡು ಮಾಡಿದ ಒಂದು ಚಿತ್ರ.ಬರೀ ಸಂಭಾಷಣೆಯಿಂದಲೂ ಚಿತ್ರ ಗೆಲ್ಲಿಸಬಹುದು ಅಂತ ನಿರೂಪಿಸಿದ ಚಿತ್ರ.

ಚಿತ್ರ ಬರೀ ಒಂದು ಲಾಡ್ಜ್ ರೂಮ್ ,ಅಥವಾ ಒಂದು ಪುಟ್ಟ ಮನೆಯಲ್ಲಿ ಮುಗಿದು ಬಿಡುತ್ತೆ.ಅದ್ಯಾಕೆ ಕೆಲವು ನಿರ್ದೇಶಕರಿಗೆ ಬ್ಯಾಂಕಾಕ್ ,ಸ್ವಿಟ್ಜರ್ಲ್ಯಾಂಡ್ ನಂಥ ಊರಿನ ಮೇಲೆ ’ಪ್ರೇಮ್’ ವೋ ಗೊತ್ತಿಲ್ಲ.ಅನಾವಶ್ಯಕ ಕೋಟಿಗಟ್ಟಲೆ ಖರ್ಚು ಮಾಡ್ತಾರೆ.ಕೇಳಿದ್ರೆ ’ ತಮಿಳು ,ತೆಲುಗಿನವರು ಮಾಡ್ತಾರೆ ಅದಕ್ಕೆ ನಾವೇನ್ ಕಮ್ಮಿ ’ ಅಂತಾರೆ.

ಅಲ್ಲಾ ನಮ್ ಶಿವಣ್ಣ ಹಳ್ಳಿಯಲ್ಲಿ ಹಾಕೋ ಅಂಥ ಪಟ್ಟಾಪಟ್ಟಿ ಚಡ್ಡಿ ಹಾಕ್ಕೊಂಡು ವಿದೇಶದಲ್ಲಿ ಹೋಗಿ ಕುಣೀತಾರೆ.ಇದರಿಂದ ಅದೇನು ಸಾಧಿಸ್ತಾರೋ ದೇವರಿಗೆ ಗೊತ್ತು.ಪಟ್ಟಾಪಟ್ಟಿ ಚಡ್ಡಿ ಡ್ಯಾನ್ಸ್ ಮಾಡ್ಲೇ ಬೇಕೂಂದ್ರೆ ಇಲ್ಲೆ ಕೆ.ಆರ್ ಮಾರ್ಕೆಟ್ ನಲ್ಲೂ ಮಾಡಬಹುದಲ್ಲ.ಅದಕ್ಕ್ಯಾಕೆ ವಿದೇಶಕ್ಕೆ ಹೋಗ್ಬೇಕು.

ಹೀಗೇನಾದ್ರೂ ಕೇಳಿದ್ರೆ ’ನಿಂಗೇನಪ್ಪ ಗೊತ್ತು ಸಿನೆಮಾ ಬಗ್ಗೆ ’ ಅಂತಾರೆ.ನಂಗೆ ಗೊತ್ತಾಗೋದೂ ಬೇಡ ಬಿಡಿ.

ಸಿದ್ಧಸೂತ್ರಗಳನ್ನು ಬಳಸದೆ ತಯಾರಿಸಿದ್ದಕ್ಕೆ ನನಗೆ ’ಎದ್ದೇಳು ’ ಇಷ್ಟ ಆಗಿದ್ದು.ಸಿನೆಮಾ ಅಂದ್ರೆ ಐದು ಸಾಂಗ್,ನಾಲ್ಕು ಫೈಟ್ ಎರಡು ರೇಪ್ ಅನ್ನೋ ಅಂಥ ರೆಡಿಮೇಡ್ ಫಾರ್ಮುಲಾಗಳನ್ನು ಬಿಟ್ಟು ರಿಸ್ಕ್ ತಗೊಂಡಿದ್ದಕ್ಕೆ ಗುರುಪ್ರಸಾದ್ ಗೆ ಅಭಿನಂದನೆಗಳು.

ನನ್ನ ಗೆಳೆಯನೊಬ್ಬನ ಬಳಿ ’ನಾನು ಜಬ್ ವಿ ಮೆಟ್ ನೋಡಿದೆ ’ ಅಂದಿದ್ದಕ್ಕೆ ’ಥೂ ನಿನ್ನಂಥವರಿರೋದ್ರಿಂದಾ ಕಣೋ ಕನ್ನಡ ಚಿತ್ರರಂಗ ಬೆಳೀತಾ ಇಲ್ಲ.ಯಾವಾಗ ನೊಡಿದ್ರೂ ಹಿಂದಿ,ತಮಿಳು ಹೀಗೇ ಬೇರೆ ಭಾಷೆಯ ಚಿತ್ರ ನೋಡ್ತೀರಾ ’ ಅಂತ ಉದ್ದುದ್ದ ಲೆಕ್ಚರ್ ಕೊಟ್ಟಿದ್ದ.

ಅವನು ಹೇಳಿದ್ದೆಲ್ಲಾ ಕೇಳಿಸ್ಕೊಂಡೆ.

ಆಮೇಲೆ ಅವನ ಹತ್ತಿರ ’ನಿನಗೆ ಪರಾಮರ್ಶಿಸು ಅನ್ನೋ ಶಬ್ದದ ಅರ್ಥ ಗೊತ್ತಾ?’ ಕೇಳಿದೆ. ’ಇಲ್ಲ ’ ಅಂದ .ಇರಲಿ ಅವಲೋಕನ ಅಂದ್ರೆ ಗೊತ್ತಾ ಅಂದೆ ’ಗೊತ್ತಿಲ್ಲ ’ ಅಂದ.

ನೋಡು ನಿನಗೆ ಕನ್ನಡದ ಎರಡೇ ಎರಡು ಶಬ್ದದ ಬಗ್ಗೆ ಕೇಳೀದೆ.ಅದನ್ನು ನೀನು ಕೇಳಿಯೇ ಇಲ್ಲ. ನಾನು ನಿನ್ನಷ್ಟು ಕನ್ನಡ ಸಿನೆಮಾ ನೋಡಿಲ್ಲ ಆದ್ರೂ ನನ್ನ ಕನ್ನಡ ಚೆನ್ನಾಗೆ ಇದೆ ’ನಿನ್ನ ಕನ್ನಡ ಪ್ರೇಮಕ್ಕೆ ನನ್ನ ಅಭಿನಂದನೆ ’ ಅಂದೆ.

ಕನ್ನಡ ಸಿನಿಮಾ ನೋಡೋದ್ರಿಂದ ಕನ್ನಡದ ಸೇವೆ ಮಾಡ್ತೀನಿ ಅಂತ ನನಗೆ ಯಾವತ್ತೂ ಅನಿಸಿಲ್ಲ.ಸಿನಿಮಾ ಗೆದ್ರೆ ಅದರಿಂದ ಆ ಸಿನೆಮಾದ ನಿರ್ದೇಶಕ ,ನಿರ್ಮಾಪಕರು ಹಣ ಮಾಡ್ತಾರಷ್ಟೇ.ಅವರು ಕನ್ನಡಕ್ಕೆ ಯಾವುದೇ ರೀತಿಯ ಕಾಣಿಕೆ ನೀಡೋದು ಸಂಶಯವೇ.ಕಾಣಿಕೆ ನೀಡಿಲ್ಲ ಅಂದ್ರೂ ಪರ್ವಾಗಿಲ್ಲ.ಅದು ಬಿಟ್ಟು ಕನ್ನಡದ ಆಸ್ತಿ ಮಾಸ್ತಿಯ ಹೆಸರಿನಲ್ಲಿ ರೌಡಿಯೊಬ್ಬನ ಸಿನೆಮಾ ತೆಗೆಯೋದಕ್ಕೆ ಹೊರಡ್ತಾರೆ.

ಬೇರೆ ಭಾಷೆಯ ಸರಕನ್ನು ಕದ್ದು ತರೋರಿಗಿಂತ ಇಲ್ಲೇ ಇದ್ದು ವಿಭಿನ್ನವಾಗಿ ಯೋಚಿಸಿ ಸಿನೆಮಾ ತೆಗೆಯೋ ಗುರುಪ್ರಸಾದ್ ಜಾಸ್ತಿ ಇಷ್ಟ ಆಗ್ತಾರೆ ನನಗೆ.

ಪತ್ರಿಕೆಗಳಲ್ಲಿ ಕೆಲವೊಮ್ಮೆ ಬರೋ ಹಾಗೆ ’ಮನೆಮಂದಿಯೆಲ್ಲಾ ಕೂತು ನೋಡೋ ಚಿತ್ರ’ ಅನ್ನೋ ಮಾತಿನ ಬಗ್ಗೆ ನನಗೆ ಅಷ್ಟೊಂದು ವಿಶ್ವಾಸವಿಲ್ಲ.ಅಂತ ಚಿತ್ರಗಳು ಹಿಂದೆ ದೂರದರ್ಶನದಲ್ಲಷ್ಟೆ ಬರ್ತಾ ಇತ್ತು.ಹಿಂದೆ ಅಂತ ಯಾಕೆ ಹೇಳಿದೆ ಗೊತ್ತಾ? ಹಿಂದೆ ಇದ್ದಿದ್ದೇ ದೂರದರ್ಶನ ಒಂದೇ.ಮನೆಮಂದಿಯೆಲ್ಲ ಇಷ್ಟ ಇಲ್ಲ ಅಂದ್ರೂ ಆ ಸಿನೆಮಾನ ಜೊತೆಯಲ್ಲಿ ಕೂತು ನೋಡಲೇ ಬೇಕಾದ ಅನಿವಾರ್ಯತೆ ಇತ್ತು.
ಚಿತ್ರದಲ್ಲಿ ರೇಪ್ ಸೀನ್ ಬಂದ್ರೂ ಪಾಪ ಮನೆಮಂದಿಯೆಲ್ಲಾ ಮುಜುಗರದಿಂದಲೇ ಅದನ್ನು ಸಹಿಸಿಕೊಳ್ಳಬೇಕಿತ್ತು.ಹಾಗಾಗಿ ಆ ಚಿತ್ರ ಹೇಗೇ ಇದ್ರೂ ಅದು ’ಮನೆಮಂದಿ ಎಲ್ಲಾ ಜೊತೆಯಾಗಿ ಕೂತು ನೋಡೋ ಚಿತ್ರ’ !

ಆದ್ರೆ ಇವತ್ತು ಅಮ್ಮ ಉದಯದಲ್ಲಿ ’ಶಾಂತಿನಿವಾಸ ’ ನೋಡ್ತಾ ಇದ್ರೆ ಮಗ ರಿಮೋಟ್ ಕಿತ್ಕೊಂಡು ’ಕಸ್ತೂರಿ’ ಯಲ್ಲಿ ಬರೋ ’ಹೊಂಗನಸು’ ನೋಡ್ತಾನೆ.

ಕನ್ನಡದ ಬಗ್ಗೆ ಅಷ್ಟೊಂದು ಅಭಿಮಾನ ಇರೋ ನಿರ್ದೇಶಕರು ಸಿನೆಮಾಗಳಿಗೆ ಹಾಡಲು ಮಾತ್ರ ಅದ್ಯಾಕೆ ಹಿಂದಿ ಗಾಯಕರನ್ನೇ ಹಾಕ್ತಾರೆ ಅನ್ನೋದು ಇನ್ನೂ ಅರ್ಥ ಆಗದ ವಿಷಯ.ಬಹುಷ ಕನ್ನಡೇತರ ಗಾಯಕರಿಗೆ ಕನ್ನಡ ಕಲಿಸುವಂಥ ’ಪುಣ್ಯ’ದ ಕೆಲಸವನ್ನು ಮಾಡ್ತಾ ಇದ್ದಾರೇನೋ ಅವರು.ಪಾಪ ನಾನೇ ಅವರನ್ನು ತಪ್ಪು ತಿಳಿದಿದ್ದೇನೆ ಅನ್ಸುತ್ತೆ!

ಕನ್ನಡದ ನಿರ್ದೇಶಕರೇ ಇನ್ನಾದರೂ ಎದ್ದೇಳಿ!

Thursday, June 18, 2009

ಈ ಸಾಫ್ಟ್ ವೇರ್ ಅಂದ್ರೆ ಏನಣ್ಣಾ ...?

ಬಹಳಷ್ಟು ಜನರಿಗೆ ’ಆಗಾಗ’ ಕಾಡುವ ಪ್ರಶ್ನೆ ಅಂದ್ರೆ ಈ ಸಾಫ್ಟ್ವೇರ್ ಇಂಜಿನಿಯರ್ ಗಳು ಏನ್ ಕೆಲಸ ಮಾಡ್ತಾರೆ ? ಅನ್ನೋದು.ನಿಜವಾಗಿ ನೋಡೋದಕ್ಕೆ ಹೋದ್ರೆ ಅವರಿಗೆಲ್ಲಾ ಕಾಡೋದು ’ಅಷ್ಟೊಂದು ಜಾಸ್ತಿ ಸಂಬಳ ಕೊಡೋ ಅಂಥ ಘನಂದಾರಿ ಕೆಲಸ ಏನ್ ಮಾಡ್ತಾರೆ? ’ ಅಂತ ! ಆದ್ರೆ ಕೆಲವರು ಸ್ವಲ್ಪ ಜಾಣತನ ಉಪಯೋಗಿಸಿ ಮೊದಲನೇ ಪ್ರಶ್ನೆ ಕೇಳಿ ಬಿಡ್ತಾರೆ !

ಎರಡನೇ ಪ್ರಶ್ನೆಗೆ ಉತ್ತರ ಸ್ವಲ್ಪ ಸರಳವಾಗಿದೆ.ಚಿಕ್ಕ ದರ್ಶಿನಿ ಹೋಟೇಲಿನಲ್ಲಿ ತಟ್ಟೆ ಎತ್ತೋನಿಗೆ ತಿಂಗಳಿಗೆ ಎರಡು ಸಾವಿರ ಕೊಡ್ತಾರೆ ಅದೇ ಪಂಚತಾರಾ ಹೋಟೇಲಿನಲ್ಲಿ ತಟ್ಟೆ ಎತ್ತಿದ್ರೆ ’ಸ್ವಲ್ಪ’ ಜಾಸ್ತಿ ಸಂಬಳ ಕೊಡಲ್ವ ಹಾಗೇ ಇದು .ಅದರ ಬಗ್ಗೆ ಜಾಸ್ತಿ ತಲೆ ಕೆಡಿಸ್ಕೊಳ್ಳಬೇಡಿ ನೀವು.

ಅಲ್ಪ ಸ್ವಲ್ಪ ಸಾಫ್ಟ್ವೇರ್ ಬಗ್ಗೆ ತಿಳ್ಕೊಂಡಿದ್ರೆ ಎಲ್ಲರಿಗೂ ಉಪಯೋಗವಾಗುತ್ತೆ ಅನ್ನೋ ಕಾರಣಕ್ಕೆ ಈ ಲೇಖನ(ಬರೆಯೋಕೆ ನನಗೆ ಬೇರೆ ವಿಷಯ ಸಿಕ್ಕಿಲ್ಲ ಅಂತ ನೀವು ತಪ್ಪು ತಿಳ್ಕೊಂಡ್ರೆ ನಾನೇನೂ ಮಾಡೋಕಾಗಲ್ಲ ಬಿಡಿ!) ಬರೀತಾ ಇದ್ದೀನಿ.

ಇಂಥ ಲೇಖನವನ್ನು ಗೆಳೆಯ ವಿಜಯ್ ರಾಜ್ ಕನ್ನಂತರವರು ಈಗಾಗಲೇ ಬರೆದಿದ್ದಾರೆ.ಅದನ್ನು ಓದದೆ ಇರೋರು,ಓದಿದ್ದರೂ ಮರೆತು ಹೋದವರು ಮತ್ತೊಮ್ಮೆ ಓದಲಿ ಅಂತ ಅಷ್ಟೆ .

ನಾನು ಸಾಫ್ಟ್ವೇರ್ ಇಂಜಿನಿಯರ್ ಅಲ್ಲ ! ನಾನು ಹಾರ್ಡ್ವೇರ್ ಇಂಜಿನಿಯರ್ ,ನಾವುಗಳು ತಯಾರಿಸಿದ ಹಾರ್ಡ್ವೇರ್ ನಲ್ಲಿ ನಮ್ಮ ಗೆಳೆಯ/ಗೆಳತಿಯರು ಬರೆದ ಸಾಫ್ಟ್ವೇರ್ ಕೆಲಸ ಮಾಡೋದು .ಇದರಿಂದ ತಿಳಿಯೋದೇನೆಂದರೆ ಹಾರ್ಡ್ವೇರ್ ಇಲ್ಲದೆ ಸಾಫ್ಟ್ವೇರ್ ಕೆಲಸ ನಡೆಯಲ್ಲ ಅಂತ.ಹಾರ್ಡ್ವೇರ್ ಅಂದ ತಕ್ಷಣ ಬಹಳಷ್ಟು ಜನರಿಗೆ ತಲೆಗೆ ಹೊಳೆಯೋದು ನಟ್ಟು ಬೋಲ್ಟು ,ಪೇಂಯ್ಟು!

ಆ ಹಾರ್ಡ್ವೇರ್ ಬೇರೆ ಸ್ವಾಮಿ .ಒಬ್ಬ ಇಂಜಿನಿಯರ್ ಗೆ ಹಾರ್ಡ್ವೇರ್ ಅಂದರೆ ಕಂಪ್ಯೂಟರ್ ಮದರ್ ಬೋರ್ಡ್ ಥರದ್ದು.ಹಾಗೆ ನೋಡೋದಕ್ಕೆ ಹೋದರೆ ಬಹಳಷ್ಟು ವಸ್ತುಗಳು ಕಂಪ್ಯೂಟರ್ ಗಳೆ.ಕಂಪ್ಯೂಟರ್ ಅನ್ನು ನಮಗೆ ಬೇಕಾದ ಕೆಲಸಕ್ಕೆ ಬಹಳ ಸುಲಭವಾಗಿ ಬಗ್ಗಿಸಬಹುದು.ಅಂದರೆ ಹಾಡು ಕೇಳಬಹುದು ಅಥವಾ ಅದೇ ಕಂಪ್ಯೂಟರ್ ನಲ್ಲಿ ಕಡತಗಳನ್ನು ಟೈಪಿಸಿ ಮುದ್ರಿಸಲೂ ಬಹುದು.

ಅದೇ ಒಂದು MP3 Player ಆದ್ರೆ ಬರೀ ಹಾಡನ್ನಷ್ಟೇ ಕೇಳಬಹುದು.ಅದರಲ್ಲೂ ಕಂಪ್ಯೂಟರ್ನಲ್ಲಿರೋ ಅಂಥದ್ದೇ ಒಂದು ಶಕ್ತಿಶಾಲಿ ಪ್ರಾಸೆಸರ್ ಇದೆ.ಆದರೆ ಅದಕ್ಕೆ ಬರೀ ಹಾಡು ಹಾಡಿಸೋದಷ್ಟೆ ಗೊತ್ತು!ಅದು ಬರೀ ಒಂದು ರೀತಿಯ ಕೆಲಸವನ್ನು ಮಾತ್ರ ಮಾಡೋದರಿಂದ ಅದರಲ್ಲಿ ಉಪಯೋಗಿಸೋ ಪ್ರಾಸೆಸರ್ ಬೆಲೆ ತುಂಬಾ ಕಮ್ಮಿ ಇರುತ್ತೆ.ಹಾಗಾಗಿ MP3 Player ಬೆಲೆ ಕಡಿಮೆ.ಕಂಪ್ಯೂಟರ್ ಬೆಲೆ ತೀರಾ ಜಾಸ್ತಿ.

ಅದೇ ರೀತಿ ವಾಷಿಂಗ್ ಮೆಶಿನ್ ನಲ್ಲೂ ಒಂದು ಪ್ರಾಸೆಸರ್ ಇದೆ.ಆದರೆ ಪಾಪ ಅದಕ್ಕೆ ಬಟ್ಟೆ ಒಗೆಯೊದು ಬಿಟ್ಟು ಬೇರೇನೂ ಗೊತ್ತಿಲ್ಲ! ಈಗೀಗ ಅದರ ಬುದ್ಧಿ ಸ್ವಲ್ಪ ಬೆಳೆದಿದೆ ಅನ್ನಿ.ಬಟ್ಟೆ ಒಗೆಯೋದಲ್ಲದೆ ಒಣಗಿಸಿಯೂ ಕೊಡುತ್ತೆ.ಟಿ.ವಿ ಯಲ್ಲೂ ಪ್ರಾಸೆಸರ್ ಇದೆ ಆದರೆ ಅದಕ್ಕೆ ವಿಡೀಯೋ ತೋರಿಸೋದು ಬಿಟ್ಟರೆ ಬೇರೇನೂ ಗೊತ್ತಿಲ್ಲ.

ಸಾರಾಂಶ ಇಷ್ಟೇ .ಈ ಎಲ್ಲಾ ವಸ್ತುಗಳೂ ಒಂದು ಮಿನಿ ಕಂಪ್ಯೂಟರ್ ಇದ್ದ ಹಾಗೆ .ಹಾಗಾಗಿ ಈ ಎಲ್ಲಾ ವಸ್ತುಗಳಲ್ಲೂ ಸಾಫ್ಟ್ವೆರ್ ಇದ್ದೇ ಇದೆ.ಕಂಪ್ಯೂಟರ್ ನಲ್ಲಿರೋ ಹಾಗೇನೇ ಈ ಟಿ.ವಿ ,ವಾಷಿಂಗ್ ಮೆಶಿನ್,ಸೆಟ್ ಟಾಪ್ ಬಾಕ್ಸ್ ,ಶೇವಿಂಗ್ ಮೆಶಿನ್,ಮಿಕ್ಸಿ ಎಲ್ಲಾದರಲ್ಲೂ ಪ್ರಾಸೆಸರ್ ,ಸಾಫ್ಟ್ವೇರ್ ಎರಡೂ ಇದ್ದೇ ಇರುತ್ತೆ .

ನಮಗೆ ಗೊತ್ತಿಲ್ಲ ಅಷ್ಟೇ !

ಮನುಷ್ಯನ ಉದಾಹರಣೆ ತಗೊಳ್ಳೋದಾದ್ರೆ ಕೈ ಒಂದು ಹಾರ್ಡ್ವೇರ್ ಅದೇ ಮೆದುಳು ಪ್ರಾಸೆಸರ್. ನಿಮಗೆ ಯಾರಿಗಾದರೂ ಹೊಡೆಯಬೇಕೆಂದರೆ.....ಬೇಡ ಬಿಡಿ ನೆಗೆಟಿವ್ ಥಿಂಕಿಂಗ್ ಬೇಡ! ನಿಮಗೆ ಯಾರನ್ನಾದರೂ ಮುಟ್ಟಬೇಕೆನಿಸಿದ ತಕ್ಷಣ ಏನಾಗುತ್ತೆ ಅಂದರೆ ಪ್ರಾಸೆಸರ್ ಆದ ಮೆದುಳಿಗೆ ಸಂಕೇತಗಳು ಹೋಗಿ ನಿಮ್ಮ ಕೈ ಯಾರನ್ನು ಮುಟ್ಟಬೇಕೋ ಅವರನ್ನು ಮುಟ್ಟುತ್ತೆ.ಇಲ್ಲಿ ಕೈ ಹಾರ್ಡ್ವೇರ್, ಮೆದುಳು ಪ್ರಾಸೆಸರ್ ,ಆದರೆ ಯಾರನ್ನು ಮುಟ್ಟಬೇಕು ,ಹೇಗೆ ಮುಟ್ಟಬೇಕು ,ಎಲ್ಲಿ ಮುಟ್ಟಬೇಕು ಅನ್ನೋ ಸಂಕೇತಗಳು ಕೊಡೋದಕ್ಕೆ ಒಂದು ಸಾಫ್ಟ್ವೇರ್ ಇದೆ.ದುರ್ದೈವವಶಾತ್ ಮಾಮೂಲಿನಂತೆ ಇಲ್ಲೂ ಸಾಫ್ಟ್ವೇರ್ ಕಣ್ಣಿಗೆ ಕಾಣಿಸಲ್ಲ!ಇಂಥ ಒಂದು ಅದ್ಭುತ ಸಾಫ್ಟ್ವೇರ್ ಬರೆದ ಇಂಜಿನಿಯರ್ ಹೆಸರು ’ದೇವರು’!

ಯಾರ್ಯಾರನ್ನೋ ಮುಟ್ಟೋದಕ್ಕೆ ನಿಮಗೆ ನಿಮ್ಮ ಪ್ರಾಸೆಸರ್ ಹೇಳಿದ್ರೆ ನಿಮ್ಮ ಸಾಫ್ಟ್ವೇರ್ ಹಾಳಾಗಿದೆ ಅಂತ ಅರ್ಥ!

ವಾಶಿಂಗ್ ಮೆಶಿನ್ ಉದಾಹರಣೆ ತಗೊಂಡ್ರೆ ಮೋಟರ್ ಎಷ್ಟು ಹೊತ್ತು ತಿರುಗಬೇಕು ,ಯಾವಾಗ ತಿರುಗೋದನ್ನು ನಿಲ್ಲಿಸಬೇಕು,ಯಾವಾಗ ಬಿಸಿಗಾಳಿ ಊದಬೇಕು ಎಲ್ಲಾದನ್ನು ನಿರ್ಧರಿಸೋದು ಸಾಫ್ಟ್ಟ್ವೇರ್ ಕೆಲಸ.

ಅದೇ ರೀತಿ ಟಿ.ವಿ ಯಲ್ಲಿ ರಿಮೋಟ್ ನಲ್ಲಿ ಬಟನ್ ಒತ್ತಿದ ತಕ್ಷಣ ಯಾವ ಚಾನೆಲ್ ಬದಲಾಯಿಸಬೇಕು ಅನ್ನೋದನ್ನು ನಿರ್ಧರಿಸೋದು ಸಾಫ್ಟ್ವೇರ್ .ಬದಲಾಯಿಸೋದು ಮಾತ್ರ ಪ್ರಾಸೆಸರ್ !ಈ ಹಾರ್ಡ್ವೇರ್ ಒಂಥರಾ ಗುಲಾಮ ಕಣ್ರಿ ಅದಕ್ಕೆ ಸಾಫ್ಟ್ವೇರ್ ಇಂಜಿನಿಯರ್ಗಳಿಗೆ ಸ್ವಲ್ಪ ಕೊಬ್ಬು ಜಾಸ್ತಿ,ಎಲ್ಲಾ ನಮ್ಮಿಂದಲೇ ಅಂತ .ಏನ್ ಮಾಡೋದು ಎಲ್ಲ ಪಡೆದು ಬಂದಿರಬೇಕು.

ಇನ್ನೊಂದು ಉದಾಹರಣೆ ತಗೊಳ್ಳೋಣ ATM ದು .ಹಣದ ವಿಚಾರ ಬಂದಾಗ ಎಲ್ಲರ ಕಿವಿಯೂ ನಿಮಿರುತ್ತೆ .ಇದು ಬರೀ ಉದಾಹರಣೆ ಮಾತ್ರ ಜಾಸ್ತಿ excite ಆಗ್ಬೇಡಿ.

ATM ನಿಂದ ನಿಮಗೆ ಒಂದು ಲಕ್ಷ ರೂಪಾಯಿ ಡ್ರಾ ಮಾಡಬೇಕು ಅಂದುಕೊಳ್ಳಿ (ಅದಕ್ಕೆ ಮೊದಲೇ ಹೇಳಿದ್ದು ಉದಾಹರಣೆ ಅಂತ)! ನೀವು ಕಾರ್ಡ್ ತುರುಕಿಸಿದ ತಕ್ಷಣ ನಿಮ್ಮ ಕಾರ್ಡ್ ನಲ್ಲಿರೋ ಮಾಹಿತಿಯನ್ನು ಓದೋದು ಹಾರ್ಡ್ವೇರ್ .ಮಾಹಿತಿ ಯನ್ನು ಹಾರ್ಡ್ವೇರ್ ಸಹಾಯದಿಂದ ಪಡೆದ ನಂತರ ಸಾಫ್ಟ್ವೇರ್ ಏನೇನೋ ಲೆಕ್ಕಾಚಾರ ಮಾಡಿ ದೂರದಲ್ಲೆಲ್ಲೋ ಇರೋ ಬ್ಯಾಂಕ್ ನ ಸರ್ವರ್ ಗೆ ಇಂಟರ್ನೆಟ್ ಮೂಲಕ ಸಂಪರ್ಕಿಸಿ ನಿಮ್ಮ ಖಾತೆಯಲ್ಲಿ ಎಷ್ಟು ಹಣ ಇದೆ,ನಿಮಗೆ ಒಂದು ಲಕ್ಷ ನೀಡಬಹುದೋ(ನಿಮ್ಮದೇ ಹಣ ಆಗಿದ್ರೂ!)ಅಂತ ನಿರ್ಧರಿಸೋದು ,ಕೊಡೋ ಹಣದಲ್ಲಿ ಸಾವಿರದ ನೋಟು ಎಷ್ಟಿರ್ಬೇಕು,ಐನೂರರ ನೋಟು ಎಷ್ಟಿರಬೇಕು ಅಂತೆಲ್ಲಾ ಲೆಕ್ಕಾಚಾರ ಮಾಡೋದು ಸಾಫ್ಟ್ವೇರ್ .ಎಲ್ಲಾ ಲೆಕ್ಕಾಚಾರ ಮಾಡಿದ ನಂತರ ಒಂದೊಂದೇ ನೋಟನ್ನು ಒಳಗಿರೋ ಒಂದು ಡಬ್ಬಿಯಿಂದ ಎತ್ತಿ ಎತ್ತಿ ಹೊರಗೆ ತಳ್ಳೋದು ಹಾರ್ಡ್ವೇರ್.

ಕಂಪ್ಯೂಟರ್ ಮೌಸ್ ಉದಾಹರಣೆ ತೊಗೊಂಡ್ರೆ ಆ ಪುಟ್ಟ ಮೌಸ್ ಒಳಗೂ ಒಂದು ಪುಟ್ಟ ಪ್ರಾಸೆಸರ್ ಇದೆ.ನೀವು ಎಡಗಡೆ ಬಟನ್ ಒತ್ತಿದ್ದೋ ಬಲಗಡೆ ಬಟನ್ ಒತ್ತಿದ್ದೋ ಅನ್ನೋದನ್ನು ಈ ಪ್ರಾಸೆಸರ್ ಗೊತ್ತು ಮಾಡಿಕೊಳ್ಳುತ್ತೆ ಮೊದಲು(ಎರಡೂ ಬಟನ್ ಒಮ್ಮೆಗೆ ಒತ್ತಿ ಪ್ರಾಸೆಸರ್ ತಲೆ ಕೆಡಿಸಬೇಡಿ ಪ್ಲೀಸ್),ಗೊತ್ತು ಮಾಡಿದ ನಂತರ ’ಈ ವ್ಯಕ್ತಿ ಎಡಗಡೆ ಮೌಸ್ ಒತ್ತಿದ್ದಾನೆ ’ ಅಂತ ಮಾಹಿತಿಯನ್ನು ಸಾಫ್ಟ್ವೇರ್ ಗೆ ವರ್ಗಾಯಿಸುತ್ತದೆ.ಯಾವ ಬಟನ್ ಒತ್ತಿದ್ದಾನೆ ಅಂತ ಗೊತ್ತಾದ ಮೇಲೆ ಸಾಫ್ಟ್ವೇರ್ ಏನೇನೋ ಲೆಕ್ಕಾಚಾರ ಹಾಕಿ ಮುಂದಿನ ಕಾರ್ಯಾಚಾರಣೆಯನ್ನು ನಿರೂಪಿಸುತ್ತದೆ.ನೀವಂದುಕೊಂಡಷ್ಟು ಸುಲಭ ಇಲ್ಲ ಬಿಡಿ ಲೆಕ್ಕಾಚಾರ! ಬ್ಲಾಗ್ ಬರೆಯುವಾಗಲೆ ನೋಡಿ ನೀವು ಎಡಗಡೆ ಬಟನ್ ಒತ್ತುತ್ತೀರ,ಆದರೆ ಆಗ ಮೌಸ್ ಪಾಯಿಂಟರ್ Publish Post ಮೇಲಿತ್ತಾ ಅಥವಾ Save Now ಮೇಲಿತ್ತಾ ಅನ್ನೋದನ್ನು ನಿರ್ಧರಿಸೋದಕ್ಕೆ ಸಾಫ್ಟ್ವೇರ್ ಸ್ವಲ್ಪ ತಲೆ ಕೆಡಿಸ್ಕೋಬೇಕಾಗುತ್ತೆ .

ಅಂದ ಹಾಗೆ ಟಾಯ್ಲೆಟ್ನಲ್ಲೂ ಈ ಹಾರ್ಡ್ವೇರ್ ಸಾಫ್ಟ್ವೇರ್ ಬಳಕೆಯಾಗುತ್ತೆ .ಟಾಯ್ಲೆಟ್ ಬೇಸಿನ್ ಮುಂದೆ ನಿಂತ ತಕ್ಷಣ ಅದರಲ್ಲಿ ಅಳವಡಿಸಿರೋ ಸೆನ್ಸರ್ ಸಾಫ್ಟ್ವೇರ್ ಗೆ ತಿಳಿಸುತ್ತೆ ’ಯಾರೋ ಟಾಯ್ಲೆಟ್ ಗಲೀಜು ಮಾಡಲು ಬಂದಿದ್ದಾನೆ ’ ಅಂತ ! ಹಾಗೆಯೇ ನೀವು ಹೋದ ತಕ್ಷಣ ’ಪಾಪಿ ನೀರು ಹಾಕದೆ ಹೋಗ್ತಿದ್ದಾನೆ ನೀರು ಹಾಕು ’ ಅಂತ ಹಾರ್ಡ್ವೇರ್ ಗೆ ತಿಳಿಸುತ್ತೆ .ಆಗ ಹಾರ್ಡ್ವೇರ್ ಸ್ವಿಚ್ ರಿಲೀಸ್ ಮಾಡಿ ನೀರು ಹೊರ ಹಾಕುತ್ತೆ.ಆದರೆ ’ಟಾಯ್ಲೆಟ್ ನಲ್ಲಿ ಉಚ್ಚೆ ಹೊಯ್ದ ಮೇಲೆ ನೀರು ಹಾಕೋ ಅಂಥ ಸಾಫ್ಟ್ವೇರ್ ಬರೆದಿದ್ದೀನಿ ನಾನು ’ ಅಂತ ಯಾವ ಸಾಫ್ಟ್ವೇರ್ ಇಂಜಿನಿಯರೂ ಹೇಳದ ಕಾರಣ ಬಹಳಷ್ಟು ಜನರಿಗೆ ಇಲ್ಲೂ ಸಾಫ್ಟ್ವೇರ್ ಬಳಕೆಯಾಗುತ್ತೆ ಅನ್ನೋ ಸತ್ಯ ಗೊತ್ತಿರಲ್ಲ !

ಇಸ್ರೋ ಉಪಗ್ರಹ ಉಡಾವಣೆ ಮಾಡೋ ಸಂದರ್ಭದಲ್ಲಂತೂ ಬಹಳಷ್ಟು ಕೆಲಸವನ್ನು ಮಾಡೋದು ಸಾಫ್ಟ್ವೇರ್.ಉಡಾವಣೆಯ ಒಂದೊಂದೇ ಹಂತವನ್ನು ಪರಿಶೀಲಿಸಿ ಎಲ್ಲಾ ಸರಿ ಇದ್ರೆ ರಾಕೆಟ್ ಬುಡಕ್ಕೆ ಬೆಂಕಿ ಹಚ್ಚುತ್ತೆ ಇಲ್ಲದಿದ್ದಲ್ಲಿ ಅಲ್ಲೆ STOP ಅನ್ನುತ್ತೆ.

ಈ ಪ್ರಾಸೆಸರ್ ಗಳಿಗೆ ಕನ್ನಡ ಅರ್ಥ ಆಗಲ್ಲ(ಇಂಗ್ಲೀಷೂ ಅರ್ಥ ಆಗಲ್ಲ ಬಿಡಿ)! ಅದರಿಂದಲೇ ಬಹಳಷ್ಟು ಜನ ಸಾಫ್ಟ್ವೇರ್ ಇಂಜಿನಿಯರ್ ಗಳು ತಮ್ಮ ಹೊಟ್ಟೆಪಾಡನ್ನು ನೋಡ್ಕೋತಾ ಇದ್ದಾರೆ! ಪ್ರಾಸೆಸರ್ ಅರ್ಥ ಆಗೋ ಭಾಷೆಯಲ್ಲಿ ಅದಕ್ಕೆ ಕೆಲಸ ಮಾಡಲು ಅಪ್ಪಣೆ ನೀಡೋದೇ ಸಾಫ್ಟ್ವೇರ್ ಕೆಲಸ.ಅಂಥ ಭಾಷೆಗಳೇ ಈ C ,C++,Java ಗಳು.ಈ ಭಾಷೆಯನ್ನು ಸಮರ್ಪಕವಾಗಿ ಬಳಸಬಲ್ಲವನೇ ಸಾಫ್ಟ್ವೇರ್ ಇಂಜಿನಿಯರ್.


ನಮಗೆಲ್ಲರಿಗೂ ಕನ್ನಡ ಬರುತ್ತೆ ಆದರೆ ಎಲ್ಲರೂ ಕನ್ನಡ ಪಂಡಿತರಾಗಲು ಸಾಧ್ಯ ಇಲ್ಲ ಅಲ್ಲವೇ? ಹಾಗೆಯೇ ಇದೂ !