
ಆರಡಿ ಮೂರಡಿ ಅಳತೆಯ ಮನೆ ನಮ್ಮೆಲ್ಲರ ಮನೆ
ಆಸೆ ನಿರಾಸೆ ಅನುಭವಿಸುತ್ತಾ ಬದುಕಿರುವೆವು ನಾವು ಸುಮ್ಮನೆ
ಹುಟ್ಟುವುದು ಆಕಸ್ಮಿಕ ಸಾಯುವುದು ನಿಶ್ಚಿತ
ದ್ವೇಷ ,ಜಗಳ,ಅಸೂಯೆ, ಮೀರಿ ಬದುಕಿದರೆ ಸಾಕು ನಗು ನಗುತಾ ....
ಈ ಹಾಡಿನಿಂದ ಆ ಸಾಕ್ಷ್ಯಚಿತ್ರ ಮುಕ್ತಾಯವಾಗುತ್ತದೆ ! ಸಾವು - ಬದುಕಿನ ನಡುವೆ ಒಂದು ಪ್ರಪಂಚವಿದೆ ಅನ್ನೋದನ್ನು ತೋರಿಸುತ್ತದೆ ಈ ಸಾಕ್ಷ್ಯಚಿತ್ರ.
ಅದರ ಹೆಸರೇ 6 X 3
ಮೇ ಫ್ಲವರ್ ಗೆ ಹೋದಾಗ ತಗೊಂಡಿದ್ದೆ (ಕಾಸು ಕೊಟ್ಟು!) ಅದರ ಡಿವಿಡಿ .
ಕನ್ನಡಿ ಕ್ರಿಯೇಶನ್ಸ್ ರವ್ರು ನಿರ್ಮಿಸಿರುವ ಈ ಸಾಕ್ಷ್ಯಚಿತ್ರ ಬಾಹ್ಯ ಜಗತ್ತಿನಿಂದ ದೂರವಾಗಿ ಸ್ಮಶಾನದಲ್ಲೇ ಬದುಕನ್ನು ಕಂಡಿರುವ ಶಕುಂತಲಮ್ಮನ ಕಥೆ.ಶಕುಂತಲಮ್ಮ ಸ್ಮಶಾನಕ್ಕೆ ಬರುವ ಹೆಣಗಳನ್ನು ಹೂಳುವವಳು.
ಒಬ್ಬನ ನಷ್ಟ ಇನ್ನೊಬ್ಬನ ಲಾಭ ಅನ್ನುವ ಹಾಗೆ ಒಬ್ಬರು ಸತ್ತರಷ್ಟೇ ಇವಳು ಬದುಕಲು ಸಾಧ್ಯವಾಗೋದು ! ಶಕುಂತಲಮ್ಮನ ಕಥೆಯನ್ನು ಬಹಳ ಚೆನ್ನಾಗಿ ಚಿತ್ರಿಸಿದ್ದಾರೆ ’ಕನ್ನಡಿ’ಯ ರಾಘವೇಂದ್ರ ,ಸುಬ್ರಮಣಿಯವರು .
ನನಗೆ ಆರಡಿ ಮೂರಡಿ ಜಾಗದ ಬಗ್ಗೆ ಅಷ್ಟೊಂದು ವ್ಯಾಮೋಹವಿಲ್ಲ! ಯಾಕಂದ್ರೆ ನಮ್ಮ ಪದ್ದತಿಯಲ್ಲಿ ಹೆಣಗಳನ್ನು ಸುಡುತ್ತಾರೆ .ಆರಡಿ-ಮೂರಡಿ ಜಾಗ ಬರೀ ಹದಿನೆಂಟು ನಿಮಿಷಗಳಷ್ಟೇ ಸಾಕು ನನಗೆ -ಸುಟ್ಟು ಬೂದಿಯಾಗೋದಕ್ಕೆ :) ಆದರೆ ಬಹುತೇಕ ಜನರಿಗೆ ಈ ಆರಡಿ-ಮೂರಡಿ ಜಾಗದ ಮಹತ್ವ ತುಂಬಾನೇ!
ಹೆಣಗಳನ್ನು ಹೂಳುವ ಕೆಲಸ ಮಾಡಿ ಬಾಹ್ಯ ಜಗತ್ತಿನ ಸಂಪರ್ಕವೇ ಇಲ್ಲದೆ ಬದುಕುವ ಶಕುಂತಲಮ್ಮ ತನ್ನ ಮಕ್ಕಳನ್ನು ಬಹಳ ಚೆನ್ನಾಗಿ ಸಾಕಿ ,ಒಳ್ಳೆಯ ಕಡೆ ಮದುವೆ ಮಾಡಿ ಕೊಟ್ಟಿದ್ದಾರೆ.ಆ ಮಹಿಳೆಗೊಂದು ಅಭಿನಂದನೆ.
ಸಾಕ್ಷ್ಯಚಿತ್ರ ಚೆನ್ನಾಗಿದೆ.ಆದರೆ ಸಂಗೀತ ಇನ್ನೂ ಚೆನ್ನಾಗಿರಬಹುದಿತ್ತು ಅನ್ನಿಸಿತು ನನಗೆ.ಕೆಲವೊಂದು ಕಡೆ ಸಂಗೀತ ಅಷ್ಟೊಂದು ಪ್ರಭಾವ ಬೀರಿಲ್ಲ.
ಜಯಪ್ರಕಾಶ್ ಉಪ್ಪಳರ(ನನ್ನ ಊಹೆ,ಅವರ ಹೆಸರು ಎಲ್ಲೂ ನಮೂದಾಗಿಲ್ಲ) ಧ್ವನಿ ಬಹಳ ಪ್ರಭಾವಿಯಾಗಿದೆ .
ಆದರೆ ವ್ಯಾವಹಾರಿಕವಾಗಿ ನೋಡಿದ್ರೆ ಈ ಸಾಕ್ಷ್ಯಚಿತ್ರ ದುಬಾರಿ ಅನ್ನಿಸುತ್ತೆ .ಹತ್ತು ನಿಮಿಷದ ಸಾಕ್ಷ್ಯಚಿತ್ರಕ್ಕೆ ನೂರು ರೂಪಾಯಿ ತೆರುವುದು ಎಲ್ಲರಿಗೂ ಸಾಧ್ಯವಿಲ್ಲದ ಮಾತು.ಆದರೆ Support Price: Rs1೦೦ ಅಂತ ಹಾಕಿರೋದ್ರಿಂದ ಸಪೋರ್ಟ್ ಮಾಡಲೇ ಬೇಕು ಅಲ್ವಾ?
3 comments:
ನಿಮಿಷಕ್ಕೆ ಹತ್ತು ರೂಪಾಯಿ.. ಹ್ಮ್..
ವಿಕಾಸ್
’ದುನಿಯಾ’ ತುಂಬಾ ಕಾಸ್ಟ್ ಲಿ!!
This was great to read thank you.
Post a Comment