Wednesday, March 31, 2010

ಪಿ. ಲಂಕೇಶ್ ಮತ್ತು ಲಿನಕ್ಸ್ !!!


ನೀವೆಲ್ಲಾ ಲಂಕೇಶ್ ರ ಪುಸ್ತಕಗಳನ್ನು ಓದೇ ಇರ್ತೀರ.ಆದರೆ ನೀವು ಓದದೇ ಇದ್ದ ಲಂಕೇಶರ ಪುಸ್ತಕ ಒಂದಿದೆ!

ಲಿನಕ್ಸ್ ಬಗ್ಗೆ ಪಿ.ಲಂಕೇಶ್ ಬರೆದ ಪುಸ್ತಕ !

ಚಿತ್ರ ನೋಡಿ.

Sunday, March 14, 2010

ಬದುಕು ಎತ್ತಿನ ಬಂಡಿ...

ಕನ್ನಡದ ಒಂದು ಪ್ರಸಿದ್ಧ ಟಿ.ವಿ ವಾಹಿನಿಯೊಂದಕ್ಕೆ ’ಬದುಕು ಎತ್ತಿನ ಬಂಡಿ’ ಅನ್ನೋ ರಿಯಾಲಿಟಿ ಶೋ ಒಂದನ್ನು ನಿರ್ಮಿಸುವ ಸಲುವಾಗಿ ಹಲವು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನಿರೂಪಕಿ:ಈ ಹುದ್ದೆ ಕೇವಲ ಮಹಿಳೆಯರಿಗೆ ಮೀಸಲು.ಪುರುಷರೇ ದಯವಿಟ್ಟು ಕ್ಷಮಿಸಿ.ನೀವು ಕೇವಲ ರಾಜಕಾಣಿಗಳ ಪಿತ್ತ ನೆತ್ತಿಗೇರೋ ಅಂಥ ಪ್ರಶ್ನೆಗಳನ್ನು ಕೇಳಿ ಕೇಳಿ ಜನರ ಪಿತ್ತವೂ ನೆತ್ತಿಗೇರೋ ಹಾಗೆ ಮಾಡಿದ್ದರಿಂದ ನಿಮ್ಮನ್ನು ಈ ಹುದ್ದೆಗೆ ಪರಿಗಣಿಸಲಾಗುವುದಿಲ್ಲ.ಇಲ್ಲಿ ಏನಿದ್ದರೂ ಭಾವನೆಗಳನ್ನು ಕೆದಕೋ ,ಕೆದಕಿ ಕೆದಕಿ ಕಣ್ಣೀರು ತರಿಸೋ ನಿಷ್ಣಾತರ ಅಗತ್ಯವಿದೆ.
ನಿರೂಪಕಿಯರು ಮಾಜಿ ಚಿತ್ರ ನಟಿಯರಾಗಿದ್ದಲ್ಲಿ ಆದ್ಯತೆ.ಗ್ಲಿಸರಿನ್ ಹಾಕದೆ ಅಳುವ ಸಾಮರ್ಥ್ಯವಿದ್ದಲ್ಲಿ ಅದು ಪ್ಲಸ್ ಪಾಯಿಂಟ್.ವೀಕ್ಷಕರನ್ನು ಅಳಿಸಲು ಗ್ಲಿಸರಿನ್ ಉಪಯೋಗಿಸಲು ಸಾಧ್ಯವಿಲ್ಲದೇ ಇದ್ದದ್ದರಿಂದ ಆ ಕೆಲಸವನ್ನು ನಿರೂಪಕಿಯರೇ ಮಾಡತಕ್ಕದ್ದು.

ಈ ಕಾರ್ಯಕ್ರಮದಲ್ಲಿ ಮಾಮೂಲಾಗಿ ಎರಡು ಕುಟುಂಬದವರನ್ನು ಕರೆಸಿ ಜಗಳ ಮಾಡಿಸಲಾಗೋದ್ರಿಂದ ತಮ್ಮ ರಕ್ಷಣೆ ತಾವೇ ಮಾಡಿಕೊಳ್ಳಲು ಗೊತ್ತಿರಬೇಕು.ಎರಡು ಕುಟುಂಬದ ಜಗಳಗಂಟಿ ಹೆಂಗಸರು ಪರಸ್ಪರ ಜಡೆ ಎಳೆದು ಜಗಳವಾಡೋ ಸಮಯದಲ್ಲಿ ನಿಧಾನಕ್ಕೆ ಯಾರಿಗೂ ಕಾಣದೆ ಎಸ್ಕೇಪ್ ಆಗೋ ಕಲೆ ತಮಗೆ ಗೊತ್ತಿದ್ರೆ ಅದು ಪ್ಲಸ್ ಪಾಯಿಂಟ್.ಗೊತ್ತಿಲ್ಲದೇ ಇದ್ದರೂ ಪರ್ವಾಗಿಲ್ಲ ಆ ಬಗ್ಗೆ ತರಬೇತಿ ನೀಡಲಾಗುವುದು.

ಸ್ಕ್ರಿಪ್ಟ್ ಲೇಖಕರು
: ಕೌಟುಂಬಿಕ ಕಲಹದ ಬಗ್ಗೆ ಕಥೆ,ಕಾದಂಬರಿ ಬರೆದಿದ್ದರೆ ಆದ್ಯತೆ.ಎರಡೂ ಕುಟುಂಬದ ಇಡೀ ಕಥೆಯನ್ನು ನಿಮಗೆ ವಿವರಿಸಲಾಗುವುದು.ಆ ಮಾರುದ್ದ ಕಥೆಯಲ್ಲಿ ಸ್ಟೂಡಿಯೋದಲ್ಲಿ ಜಗಳ ಮಾಡಿಸಬಲ್ಲ ಅಂಶಗಳನ್ನು ನೋಟ್ ಮಾಡಿ,ಅಂಥ ಪ್ರಶ್ನೆಗಳನ್ನು ಮಾತ್ರ ನಿರೂಪಕಿಯರು ಕೇಳೋ ಹಾಗೆ ಸ್ಕ್ರಿಪ್ಟ್ ಬರೆಯಬೇಕಾಗಿರೋದು ನಿಮ್ಮ ಕೆಲಸ.ಈ ಕೆಲಸ ತುಂಬಾ ಚ್ಯಾಲೆಂಜಿಂಗ್!ಒಂದು ವೇಳೆ "ಪರ್ವಾಗಿಲ್ವೆ ಇವರ ಸಂಸಾರ ಚೆನ್ನಾಗಿದೆ " ಅನ್ನೋ ಭಾವನೆ ಬರೋ ಅಂಥ ಅಂಶಗಳೇನಾದ್ರೂ ಇದ್ರೆ ಅದನ್ನು ಹುಷಾರಾಗಿ ಸ್ಕ್ರಿಪ್ಟ್ ನಿಂದ ತೆಗೆದು ಹಾಕಬೇಕಾಗುತ್ತದೆ.ನೀವೇನಾದ್ರೂ ’ಬಾಬಾ ಬಾಂಡು ’ ಅಥವ ’ಚಿಲ್ಲಿ ಚಲ್ಲಿ’ ಅಂಥ ಸೀರಿಯಲ್ ಗಳಿಗೇನಾದ್ರೂ ಕೆಲಸ ಮಾಡಿದ್ದಲ್ಲಿ ದಯವಿಟ್ಟು ಅರ್ಜಿ ಗುಜರಾಯಿಸದಿರಿ.ಇಲ್ಲಿ ನಗಿಸುವವರಿಗೆ ಕೆಲಸವಿಲ್ಲ.

ಕ್ಯಾಮರಾಮ್ಯಾನ್(ವುಮನ್):ಇದು ಕಾರ್ಯಕ್ರಮದ ಅತ್ಯಂತ ಜವಾಬ್ದಾರಿಯುತ ಕೆಲಸ.ಇಡೀ ಕಾರ್ಯಕ್ರಮದ ಯಶಸ್ಸು ನಿಮ್ಮ ಕೈಯಲ್ಲಿರುತ್ತದೆ.ಇಡೀ ಕಾರ್ಯಕ್ರಮದಲ್ಲಿ ನಿರೂಪಕಿಯ ಕಣ್ಣಿರನ್ನು ಮಾತ್ರವಲ್ಲದೇ ಅಲ್ಲಿಗೆ ಬಂದ ವೀಕ್ಷಕರ ಕಣ್ಣೀರನ್ನೂ ಸೆರೆ ಹಿಡಿಯಬೇಕಾಗುತ್ತದೆ.ಜಗಳಗಂಟಿ ಹೆಂಗಸರು ಜಡೆ ಎಳೆಯೋ ದೃಶ್ಯವನ್ನು ಮಾತ್ರ ಅತ್ಯಂತ ನೈಜವಾಗಿ ಚಿತ್ರಿಸಬೆಕಾಗುತ್ತದೆ.ಅಕಸ್ಮಾತ್ ಯಾರಾದ್ರೂ ಪಿತ್ತ ನೆತ್ತಿಗೇರಿ ನಿರೂಪಕಿಯರಿಗೇನಾದ್ರೂ ಹೊಡೆಯಲು ಹೋದ್ರೆ ಅದನ್ನು ಚಿತ್ರಿಸತಕ್ಕದ್ದಲ್ಲ.ಕೆಲವು ಗಂಡಸರು ಸ್ಪೂರ್ಥಿಗಾಗಿ ಎರಡು(ಅಂದಾಜು) ಪೆಗ್ ಏರಿಸಿ ಬಂದಿದ್ರೆ ಅವರಿಂದ ಹುಷಾರಾಗಿರತಕ್ಕದ್ದು.ಅವರು ಮುನಿದು ನಿಮ್ಮ ಕ್ಯಾಮೆರಾ ಮೆಲೇರಿ ಬಂದರೆ ,ಕ್ಯಾಮೆರಾ ಹಾನಿಗೊಳಗಾದೇ ಅದನ್ನು ರಕ್ಷಿಸೋ ಜವಾಬ್ದಾರಿ ನಿಮ್ಮದೇ!

ಹಿನ್ನೆಲೆ ಸಂಗೀತ ನಿರ್ದೇಶಕರು:ನಮ್ಮ ಅನುಭವಿ ನಿರೂಪಕಿಯರು ಎಷ್ಟೇ ಕಷ್ಟ ಪಟ್ಟು ತಮ್ಮ ಕೆಲಸ ನಿರ್ವಹಿಸಿದರೂ ,ವೀಕ್ಷಕರ ಕಣ್ಣಲ್ಲಿ ಕಣ್ಣಿರು ಬರಿಸಲು ಹಿನ್ನೆಲೆ ಸಂಗೀತದ ಮಹತ್ವ ಬಹಳ.ಕಣ್ಣೀರು ಹಾಕುವಾಗ ಪಿಟೀಲಿನ ಧ್ವನಿಯನ್ನು ಬಳಸೋದು ಈಗಾಗಲೇ ಬಹಳಷ್ಟು ಯಶಸ್ಸು ಕಂಡಿರೋದ್ರಿಂದ ಸಂಗೀತ ನಿರ್ದೇಶಕರಿಗೆ ಪಿಟೀಲನ್ನು ಅತ್ಯಂತ ಸಮರ್ಪಕವಾಗಿ ಬಳಸಲು ಗೊತ್ತಿರಬೇಕು.ಬರೀ ಪೀಟೀಲಲ್ಲದೆ ಕೊಳಲು,ವೀಣೆ ಇನ್ನಿತರ ಪರಿಕರಗಳಿಂದಲೂ ಕಣ್ಣೀರು ತರಿಸುವ ಪ್ರತಿಭೆ ಇದ್ದಲ್ಲಿ ನಿಮ್ಮ ಆಯ್ಕೆ ಗ್ಯಾರಂಟಿ!

ಆಸಕ್ತರು badukuettinabandi@ettinabandi.com ಗೆ ಅರ್ಜಿ ಸಲ್ಲಿಸುವುದು.

Monday, March 1, 2010

ಬಡವನ ಗುಡಿಸಲಲಿ...

ಒಬ್ಬ ಕನ್ನಡದ ದೈತ್ಯ ಬರಹಗಾರರರು! ಅವರ ಬರಹಗಳನ್ನು ನಾನು ಬಹಳಷ್ಟು ಮೆಚ್ಚಿ ಓದ್ತಾ ಇದ್ದೆ.ಲೇಖಕರು ಹಿಂದೆ ಪಟ್ಟಿದ್ದ ಪಾಡು,ಬಡತನದಲ್ಲಿ ಬೆಂದು ಮೇಲೆ ಬಂದ ಬಗೆ ಇದೆಲ್ಲಾ ತುಂಬ ಹೃದಯಸ್ಪರ್ಶಿ,ಆಪ್ಯಾಯಮಾನವಾಗಿತ್ತು ಆಗ ನನಗೆ.ಬಹಳಷ್ಟು ಸಲ ಪ್ರೇರಣಾ ಶಕ್ತಿಯೂ ಆಗಿತ್ತು.

ಆದ್ರೆ ಈಗೀಗ ಹಿಡಿಸ್ತಾ ಇಲ್ಲ!ಕಾರಣ ಗೊತ್ತಿಲ್ಲ.

ನಾವು ಬಹುಷಃ ಬಡತನವನ್ನು ಇಷ್ಟಪಡದಿದ್ದರೂ ಬಡತನದ ಬಗ್ಗೆ ಕಥೆ,ಕವನಗಳನ್ನ ತುಂಬಾ ಇಷ್ಟ ಪಡ್ತೀವೇನೋ ಅನ್ಸುತ್ತೆ.ಒಬ್ಬ ಲೇಖಕ ತಾನು ಕೊಂಡ ದುಬಾರಿ ಕಾರಿನ ಬಗ್ಗೆ ಏನಾದ್ರೂ ಬರೆದ್ರೆ ನಮಗೆ ಬಹುಷಃ ಹಿಡಿಸದೆ ಹೋದೀತೇನೋ.ಆದ್ರೆ ಅದೇ ಲೇಖಕ ತಾನು ಹೊಟ್ಟೆಗಿಲ್ಲದೆ,ಕೆಲಸ ಇಲ್ಲದೆ, ಪಟ್ಟ ಪಾಡೇನಾದ್ರೂ ಬರೆದ್ರೆ ತುಂಬಾ ಇಷ್ಟ ಪಟ್ಟು ಓದ್ತೀವಿ.

ನಾವು ಬಡವರಾಗಿರಲು ಖಂಡಿತ ಇಷ್ಟಪಡದಿದ್ದರೂ ’ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು ’ ಕವಿತೆ ಇಷ್ಟ ಪಡ್ತೀವಿ( ಕವಿತೆಯ ಆಶಯ ಅದಲ್ಲ ಅಂತ ಬಯ್ಯಬೇಡಿ ದಯವಿಟ್ಟು!)

ಲೇಖಕ ಊಟಕ್ಕೆ ಕಾಸಿಲ್ಲದೆ ಇದ್ದಾಗ ಕಮ್ಮಿ ಖರ್ಚಿಗೆ ಜಾಸ್ತಿ ತಿನ್ನೋಕೆ ಸಿಗುತ್ತೆ ಅನ್ನೋ ಕಾರಣಕ್ಕೆ ಶಿವಾಜಿನಗರಕ್ಕೆ ಹೋಗಿ ದನದ ಮಾಂಸ ತಿಂದ ಘಟನೆಯನ್ನು ಬರೆದಾಗ ಓದೋ ಖುಷಿ(ಖುಷಿ ಅಂದ್ರೆ ಬಹುಷಃ ಸರಿ ಆಗಲ್ಲ!) ’ನನ್ನ ಅಳಿಯ ಒಂದು ಕೋಟಿ ಖರ್ಚಿ ಮಾಡಿ ಜಿಮ್ ಮಾಡಿದ್ದಾನೆ ’ ಅನ್ನೋದನ್ನು ಬರೆದಾಗ ಯಾಕೆ ಆಗಲ್ಲ ?

ಹೊಸ ಫ್ರಾಕ್ ಕೊಡಿಸಲು ಅಪ್ಪನ ಬಳಿ ಕಾಸಿಲ್ಲದೇ ಇದ್ದಾಗ ಮಗಳು ಹಳೇ ಫ್ರಾಕ್ ಹಾಕ್ಕೊಂಡು ಹೋಗ್ತೀನಿ ಅಂತ ಹೇಳಿದ್ದನ್ನು ಬರೆದಾಗ ಓದಿದಷ್ಟು ಇಂಟೆನ್ಸ್ ಆಗಿ ’ಮಗಳಿಗೆ ಈಗ ಐದಂಕಿ ಸಂಬಳ ’ ಅಂತ ಲೇಖಕ ಹೆಮ್ಮೆಯಿಂದ ಬರೆದಾಗ ಯಾಕೆ ಓದಿಸಿಕೊಂಡು ಹೋಗಲ್ಲ?

ಕಾಸಿಲ್ಲದೆ ಇದ್ದದ್ದಕ್ಕೆ ಸಣ್ಣ ಸಣ್ಣ ಪುಸ್ತಕಗಳನ್ನು ಅಂಗಡಿಯಲ್ಲೇ ಓದ್ತಿದ್ದೆ ಅನ್ನೋದನ್ನು ಲೇಖಕ ಬರೆದಾಗ ಆಗೋ ಖುಷಿ ’ನಾನು ಕಾದಂಬರಿಗಳನ್ನು ಅಮೆಝಾನ್ ಕಿಂಡಲ್ ನಲ್ಲೇ ಓದೋದು ’ ಅಂತ ಹೇಳಿದಾಗ ಯಾಕೆ ಆಗಲ್ಲ?

’ಮುಕ್ತ ಮುಕ್ತ ’ದ ಪೆದ್ದು ಪೆದ್ದಾಗಿ ಮಾತಾಡೋ ಶಾರದತ್ತೆ ಇಷ್ಟ ಆದಷ್ಟು ’ಕ್ಯೋಂಕಿ ಸಾಸ್ ಭಿ ’ ಸೀರಿಯಲ್ ನ ಜರತಾರಿ ಸೀರೆಯ ಆಂಟಿಯರು ಯಾಕೆ ಇಷ್ಟ ಆಗಲ್ಲ?

ಎಲ್ಲೋ ನಮಗೆ ಶ್ರೀಮಂತರು ಅಂದ್ರೆ ಸರಿ ಇಲ್ಲ,ಅವರಿಗೆ ಸಂವೇದನೆಗಳೇ ಇಲ್ಲ ಅನ್ನೋ ಭಾವನೆ ಮೂಡಿದೆ ಅನ್ಸುತ್ತೆ.ಅಥವಾ ನಮಗೆ ಬೆರೆಯವರ ಉನ್ನತಿ,ಶ್ರೀಮಂತಿಕೆ ಮೆಚ್ಚೋದಕ್ಕೆ ಆಗಲ್ವೇನೋ!

ನಾನೂ ಶ್ರೀಮಂತ,ಅವಳೂ ಶ್ರೀಮಂತೆ , ಮರ್ಸಿಡಿಸ್ ನಲ್ಲೇ ನಮ್ಮ ಓಡಾಟ ಅನ್ನೋ ಥರ ಕವಿತೆಗಳು ನಮಗೆ ಇಷ್ಟವಾಗೋದೇ ಇಲ್ವೇನೋ?

ಗುಲಾಬಿ ಟಾಕೀಸ್ ನ ಗುಲಾಬಿ ಒಂದು ವೇಳೆ ಶ್ರೀಮಂತೆ ಆಗಿದ್ರೆ ನಾವು ಅವಳನ್ನು ಈಗ ಇಷ್ಟ ಪಟ್ಟಷ್ಟೇ ಇಷ್ಟ ಪಡ್ತಿದ್ವಾ?ಬಡತನದಲ್ಲಿ ಬೆಂದದ್ದಕ್ಕೇ ಉಮಾಶ್ರೀಯವರಿಗೆ ಅಂಥ ಮನೋಜ್ಞ ಅಭಿನಯ ನೀಡೋದಕ್ಕೆ ಸಾಧ್ಯ ಆಯ್ತಾ?

ಇದು ಹ್ಯೂಮನ್ ಸೈಕಾಲಜಿ ಗೆ ಸಂಬಂಧ ಪಟ್ಟಿದ್ದಾ?