
ಕಳೆದ ಶನಿವಾರ ನನ್ನ ಬಳಿ ಎರಡು ಆಯ್ಕೆಗಳಿದ್ದವು.
ಒಂದು : ಸ್ನೇಹಿತರ ಜೊತೆ ಉಪೇಂದ್ರನ ’ಬುದ್ಧಿವಂತ’ ಕ್ಕೆ ಹೋಗೋದು .
ಎರಡು : ಮೇ ಫ್ಲವರ್ ನ ’ಈ ಪುಸ್ತಕ ನಂಗಿಷ್ಟ ’ ಕಾರ್ಯಕ್ರಮಕ್ಕೆ ಹೋಗೋದು .
ನಾನು ’ಬುದ್ಧಿವಂತ’ಕ್ಕೆ ಹೋಗಿ ದಡ್ಡನಾಗದೆ ಮೇ ಫ್ಲವರ್ ಗೆ ಹೋಗಿ ಬುದ್ಧಿವಂತನಾದೆ!
’ಈ ಪುಸ್ತಕ ನಂಗಿಷ್ಟ’ ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು .ಸಾಹಿತ್ಯಿಕ ವಲಯಕ್ಕೆ ಸಂಬಂದ ಪಟ್ಟ ಬಹಳಷ್ಟು ಜನ ತಮಗೆ ಇಷ್ಟವಾದ ಪುಸ್ತಕದ ಬಗ್ಗೆ ಮಾತಾಡೋದಕ್ಕೆ ಅಂತ ’ಈ ಪುಸ್ತಕ ನಂಗಿಷ್ಟ ’ ಕಾರ್ಯಕ್ರಮ ಆಯೋಜಿಸಿತ್ತು ’ಮೇ ಫ್ಲವರ್’.
ಕಾರ್ಯಕ್ರಮ ಶುರುವಾಗೋದಕ್ಕೆ ಅರ್ಧ ಗಂಟೆ ಮೊದಲೇ ಹೋಗಿದ್ದೆ ನಾನು.ಹೇಗೂ ಗೊತ್ತಿತ್ತು ಮೇ ಫ್ಲವರ್ ನಲ್ಲಿ ಟೈಂ ಪಾಸ್ ಮಾಡೋದಂತೂ ಕಷ್ಟ ಏನಲ್ಲ .ಯಾಕಂದ್ರೆ ನಾನು ವರ್ಷ ಇಡೀ ಕೂತು ಓದಿದ್ರೂ ಮುಗಿಯದಷ್ಟು ಪುಸ್ತಕಗಳು ಅಲ್ಲಿವೆ .ಬಿಟ್ಟಿಯಾಗಿ ಯಾವುದನ್ನು ಬೇಕಾದ್ರೂ ಎತ್ತಿಕೊಂಡು ಓದಬಹುದು !
ಹೇಗೂ ಕಾರ್ಯಕ್ರಮ ಶುರು ಆಗೋದಕ್ಕೆ ಸಮಯ ಇತ್ತಲ್ವ ,ಅದಿಕ್ಕೆ ಅಲ್ಲೇ ಇಟ್ಟಿದ್ದ ವಿಜಯ ಕರ್ನಾಟಕ ದೀಪಾವಳಿ ವಿಶೇಷಾಂಕ ಎತ್ತಿಕೊಂಡೆ.ಬಹಳ ಚೆನ್ನಾಗಿತ್ತು ವಿಶೇಷಾಂಕ .ಅದರಲ್ಲಿ ನನ್ನ ನೆಚ್ಚಿನ
ಇಂದುಶ್ರೀ ಹಾಗೂ ಅವಳ ಮಾತನಾಡುವ ಗೊಂಬೆ ಡಿಂಕು ಬಗ್ಗೆ ಲೇಖನ ಪ್ರಕಟವಾಗಿತ್ತು .ಸುಧನ್ವಾ ದೇರಾಜೆ ಬರೆದಿದ್ರು ಅದನ್ನು.ಓದಿ ಪುಟ ತಿರುಗಿಸೋದರ ಒಳಗೆ ಸುಧನ್ವಾನೇ ಪ್ರತ್ಯಕ್ಷ ಆಗ್ಬೇಕಾ!
ಕಾರ್ಯಕ್ರಮದಲ್ಲಿ ಮೊದಲು ಮಾತನಾಡಿದವರು ಸುಬ್ಬು ಹೊಲೆಯಾರ್ .ಲಂಕೇಶ್ ರ್ ’ ಕಲ್ಲು ಕರಗುವ ಸಮಯ ’ ಅವರ ನೆಚ್ಚಿನ ಪುಸ್ತಕ.ಲಂಕೇಶರ ಜೊತೆಗಿದ್ದ ತಮ್ಮ ಒಡನಾಟ ,ತಮಗೆ ಯಾಕೆ ಈ ಪುಸ್ತಕ ಇಷ್ಟ ಅನ್ನೋದರ ಬಗ್ಗೆ ತುಂಬ ಸರಳವಾಗಿ,ಸುಂದರವಾಗಿ ಮಾತನಾಡಿದರು ಸುಬ್ಬು.
ನಂತರ ಮಂಜುನಾಥ ಸ್ವಾಮಿ ’ಬರ್ಕ್ವೈಟ್ ಕಂಡ ಭಾರತ ’ ಪುಸ್ತಕದ ಬಗ್ಗೆ ಮಾತನಾಡಿದ್ರು.
ಟೀನಾ ರವರ ನೆಚ್ಚಿನ ಪುಸ್ತಕ THE ADVENTURES OF DUNNO AND HIS FRIENDS ಇದೊಂದು ರಷ್ಯಾ ಮೂಲದ ಪುಸ್ತಕ . ಟೀನಾ ಇದರ ಬಗ್ಗೆ ಮಾಡಿದ ವರ್ಣನೆ ಕೇಳಿದ ನಂತರವಂತೂ ಈ ಪುಸ್ತಕದ ಬಗ್ಗೆ ತುಂಬಾ ಕುತೂಹಲ ಇತ್ತು ನಂಗೆ .ಅವರು ಹೇಳಿದ ಹಾಗೆ ಈ ಪುಸ್ತಕದಲ್ಲಿ illustrations ಗಳಂತೂ ಅದ್ಭುತವಾಗಿವೆ.
ಸುಧನ್ವಾ ದೇರಾಜೆ ಪುತ್ತೂರಿನ ಸಂಧ್ಯಾದೇವಿಯವರ ‘ಮಾತು ಚಿಟ್ಟೆ -ಬೆಂಕಿ ಬೆರಳು-ಮುರಿದ ಮುಳ್ಳಿನಂತೆ ಜ್ಞಾನ’ ಪುಸ್ತಕದ ಬಗ್ಗೆ ಮಾತಾಡಿದರು.
ಈ ಪುಸ್ತಕದ ಬಗ್ಗೆ ನನಗೂ ತುಂಬಾ ಪ್ರೀತಿ! ನಾನು ತೆಗೆದುಕೊಂಡ ಮೊದಲ ಕವನ ಸಂಕಲನ ಇದು.ನಾನು ಕಾವ್ಯಲೋಕದಿಂದ ತುಂಬಾ ದೂರ,ಆದರೂ ಪ್ರಜಾವಾಣಿಯಲ್ಲೋ ಯಾವುದರಲ್ಲೋ ಬಂದ ವಿಮರ್ಷೆ ನೋಡಿ ಅಂಕಿತ ಪುಸ್ತಕದ ಅಂಗಡಿಗೆ ಹೋಗಿ ತೆಗೆದುಕೊಂಡ ಪುಸ್ತಕ ಇದು.
ಸುಳ್ಯದ ಹರೀಶ್ ಕೇರ ’ಬೆಂಕಿಯ ನೆನಪು’ ಪುಸ್ತಕದ ಬಗ್ಗೆ ಬಹಳ ಸೊಗಸಾಗಿ ಮಾತನಾಡಿದರು.ಎಡುವರ್ಡೋ ಗೆಲಿಯಾನೋ ನ Memory of Fire ನ ಕನ್ನಡಾನುವಾದ ಇದು .ಬಹಳ ಚೆನ್ನಾಗಿ ಮಾತಾಡ್ತಾರೆ ಹರೀಶ್.
ವಿ ಆರ್ ಕಾರ್ಪೆಂಟರ್ ಅವರು ’ಟೀಕೆ -ಟಿಪ್ಪಣಿ’ ಪುಸ್ತಕದ ಬಗ್ಗೆ ಮಾತಾಡಿದ್ರು.
ಕೊನೆಯದಾಗಿ ವಿದ್ಯಾರಶ್ಮಿ ಪೆಲತಡ್ಕ ಅವರು ’ಗಾಂಧಿ ಬಂದಾಗ’ ( ಅದರ ಲೇಖಕಿಯ ಹೆಸರೂ ಮರೆತು ಹೋಯ್ತು ನಂಗೆ!) ಪುಸ್ತಕದ ಬಗ್ಗೆ ಮಾತಾಡಿದ್ರು. ನಂಗೆ ತುಂಬಾ ಇಷ್ಟ ಆಯ್ತು ಅವರ ವಿವರಣೆ.ಅದಕ್ಕೆ ಕಾರವೂ ಇದೆ! ’ಗಾಂಧಿ ಬಂದಾಗ’ ಪುಸ್ತಕ ಮಂಗಳೂರಿಗೆ ಸಂಬಂಧಪಟ್ಟ ಕಥೆ .ಈ ಪುಸ್ತಕದಲ್ಲಿ ತುಳುನಾಡಿನ ಸೊಗಡನ್ನು ಎಷ್ಟು ಚೆನ್ನಾಗಿ ಚಿತ್ರಿಸಿದ್ದಾರೋ ಅಷ್ಟೇ ಸೊಗಸಾಗಿ ಅದರ ಚಿತ್ರಣವನ್ನು ವಿದ್ಯಾರಶ್ಮಿ ಅಲ್ಲಿ ಕಟ್ಟಿಕೊಟ್ಟರು.
ಜೋಜಿಗ ಹಾಗೂ ದೀಪಿಕಾರ ಅನುಪಸ್ಥಿತಿ ಎದ್ದು ಕಾಣಿಸ್ತಾ ಇತ್ತು(ನನಗೆ ಮಾತ್ರ!) ಆದ್ರೆ ಅವರ ಗೆಳತಿ ಮಾತ್ರ ’ನೀವು ಬ್ಲಾಗ್ ನಲ್ಲಿ ಏನು ಬೇಕಾದ್ರೂ ಬರೆಯಿರಿ ಫೊಟೋ ತೆಗೆಯೋದು ಮಾತ್ರ ನನ್ನ ಜನ್ಮಸಿದ್ಧ ಹಕ್ಕು ’ ಅನ್ನೊ ಹಾಗೆ ಅವರ ’ಕರ್ತವ್ಯವನ್ನು ನಿರ್ವಹಿಸ್ತಾ ಇದ್ರು.
ಒಟ್ಟಿನಲ್ಲಿ ಬಹಳ ಸುಂದರ ಕಾರ್ಯಕ್ರಮ .ಥ್ಯಾಂಕ್ಸ್ ಮೇ ಪ್ಲವರ್ ಟೀಮ್ !
ಫೋಟೋ : ’ಅವಧಿ’ಯಿಂದ ಲಪಟಾಯಿಸಿದ್ದು.